ಶಿಲಾತಪಸ್ವಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿಶ್ವಕಾವ್ಯದಸ್ಪಷ್ಟ ಪೂರ್ಣತೆಯಲ್ಲಿ, ಸ್ಪಷ್ಟವ್ಯಕ್ತಿತ್ವದಾಕಾಂಕ್ಷೆ

ಭೂತದ ಸಿಲೇಟು ಎಂದು ಕರೆಯಲ್ಪಡುತ್ತಿದ್ದ ದೊಡ್ಡ ಚಪ್ಪಟೆಯಾಕಾರದ ವಿಶಾಲ ಕಲ್ಲು, ಗುಡ್ಡದ ಓರೆಯಲ್ಲಿ ನೆಲಕ್ಕೆ ಹಾಸಿದಂತೆ ಸಣ್ಣ ಸಣ್ಣ ಚಪ್ಪಡಿಗಳು ಇದ್ದು ಕಲ್ಲುಗಳೇ ದಿಬ್ಬಣವಾಗಿ ಸಾಗುತ್ತಿರುವಂತೆ ಕಾಣುವ ದಿಬ್ಬಣದಕಲ್ಲು, ಹಾಗೂ ಆಳೆತ್ತರದ ಮನುಷ್ಯಾಕೃತಿ ಕಲ್ಲು, ಇವೆಲ್ಲಾ ಕವಿಶೈಲದ ಮೇಲೆ ನಿಮಗೆ ಕಾಣುವ ನೈಸರ್ಗಿಕ ದೃಶ್ಯಗಳು. ಈಗ ಇಲ್ಲದ ಬೂರುಗದ ಮರ ಕುವೆಂಪು ಸಾಹಿತ್ಯದಲ್ಲಿ ಹೊಸಹುಟ್ಟು ಪಡೆದುಕೊಂಡಿದೆ! ಇವುಗಳಲ್ಲಿ ಭೂತದ ಸಿಲೇಟು ಮತ್ತು ದಿಬ್ಬಣದ ಕಲ್ಲು ಎಂಬುವು ಹಳ್ಳಿಯ ಪ್ರತಿಭೆ ಗುರುತಿಸಿದ ಹೆಸರುಗಳಾಗಿದ್ದರೆ, ಕವಿಶೈಲ ಮತ್ತು ಶಿಲಾತಪಸ್ವಿ (ಆಳೆತ್ತರದ ಮನುಷ್ಯಾಕೃತಿ ಕಲ್ಲು) ಎಂಬುವು ಕವಿ ಕುವೆಂಪು ಆರೋಪಿಸಿದ ಹೆಸರುಗಳು. ಇಂದಿಗೂ ಅಲ್ಲಿಗೆ ಬರುವ ಪ್ರವಾಸಿಗರು, ಮಲೆನಾಡಿನ ಚಿತ್ರಗಳೂ ಕೃತಿಯನ್ನು ಓದಿದವರಾಗಿದ್ದರೆ, ಮೇಲಿನ ಎಲ್ಲಾ ಸ್ಥಳಗನ್ನು ಗುರುತಿಸಿ ಮಾತನಾಡುವುದನ್ನು ನಾನು ನೋಡಿದ್ದೇನೆ. ಕವಿಶೈಲದ ಮೇಲೆ ಗದ್ಯ ಪದ್ಯಗಳೆರಡರಲ್ಲೂ ಕುವೆಂಪು ಪ್ರತಿಭೆ ಲಾಸ್ಯವಾಡಿಬಿಟ್ಟಿದೆ. ಮನುಷ್ಯಾಕೃತಿಯ ಆಳೆತ್ತರದ ಕಲ್ಲು ಕವಿಗೆ 'ಶಿಲಾತಪಸ್ವಿ'ಯಾಗಿ ಕಂಡಿದೆ. ಶಿಲಾತಪಸ್ವಿ ಎಂಬ ಕವಿತೆ ೩.೩.೧೯೩೧ರ ರಚನೆಯಾಗಿದೆ. 28.2.1931 ರಿಂದ 7.3.1931ರವರೆಗೆ ಕವಿಯ ದಿನಚರಿ ದಾಖಲಾಗಿಲ್ಲ. ೨೮.೨.೧೯೩೧ರ ದಿನಚರಿಯ ಪ್ರಕಾರ ಕುಪ್ಪಳಿ ಮನೆ ಜಮೀನು ವಿಷಯದಲ್ಲಿ ಕಾನೂನು ಪ್ರಕಾರ ವ್ಯವಹರಿಸುವುದಕ್ಕೆ ಸಹೋದರ ವೆಂಕಟಯ್ಯನಿಗೆ ಪವರ್ ಆಫ್ ಅಟಾರ್ನಿ ಕಳುಹಿಸಿದ್ದನ್ನು ದಾಖಲಾಗಿದೆ. ೮.೩.೧೯೩೧ರ ದಿನಚರಿಯ ಪ್ರಕಾರ ಮೈಸೂರಿನಲ್ಲಿಯೇ ಕವಿ ಇದ್ದರು. ಬಹುಶಃ ಶಿಲಾತಪಸ್ವಿ ಕವಿತೆ ರಚನೆಯಾದಾಗ ಕವಿಶೈಲದ ಆಳೆತ್ತರದ ಮನುಷ್ಯಾಕೃತಿಯ ಕಲ್ಲು - ಶಿಲಾತಪಸ್ವಿ - ಕವಿಯ ಎದುರಿಗೆ ಇರಲಿಲ್ಲ ಅನ್ನಿಸುತ್ತದೆ. ಕುಪ್ಪಳಿಯಲ್ಲಿದ್ದ ದಿನಗಳಲ್ಲಿ ಬೆಳೆಗು ಬೈಗು ಕವಿಶೈಲದಲ್ಲಿ ಕಾಣುತ್ತಿದ್ದ ಆ ಕಲ್ಲು ಕವಿಯ ಮನೋಭಿತ್ತಿಯ ಮೇಲೆ ಏನೇನು ಪ್ರಭಾವ ಬೀರಿತ್ತೋ ಏನೋ? ಒಂದೇ ಬೀಸಿನಲ್ಲಿ ಸುಮಾರು ೧೫೫ ಸಾಲುಗಳ ದೀರ್ಘ ಕವಿತೆ ರಚಿತವಾಗಿದೆ. ಈ ಸೃಷ್ಟಿಯ ಉಗಮ ಮತ್ತು ವಿಕಾಸವನ್ನು ವಿಜ್ಞಾನ ಮತ್ತು ಉಪನಿಷತ್ತುಗಳ ಹಿನ್ನೆಲೆಯಿಂದ ವ್ಯಾಖ್ಯಾನಿಸುತ್ತದೆ–ಒಂದು ಕಥನ ರೂಪದಲ್ಲಿ.

ವ್ಯೋಮ ಮಂಡಿತ ಸಹ್ಯಶೈಲಾಗ್ರದಡವಿಯಲಿ
ಸಂಚರಿಸುತಿರೆ, ಸಂಜೆ ಪಶ್ಚಿಮ ದಿಗಂತದಲಿ
ಕೆನ್ನಗೆಯ ಬೀರಿತ್ತು. ರವಿ ಮುಳುಗುತಿರ‍್ದಂ;

ಎಂದು ಪ್ರಾರಂಭವಾಗುವ ಕವಿತೆಯ ಮೊದಲ ಭಾಗದಲ್ಲಿ ಸೂರ್ಯಾಸ್ತದ ವರ್ಣವೈಭವವನ್ನು ಕಾಣಬಹುದು. ಆಗ, ಧನ್ಯಂ ನಾನೆಂದು ತೇಲುತಿರೆ ಸೌಂದರ್ಯಪೂರದಲಿ ಕವಿಗೆ ಒಂದು ದನಿ ಕೇಳಿಸಿತ್ತದೆ. ಹಾಗೆಯೆ ಮೊರಡಾದ ಮನುಜನಾಕಾರದಲ್ಲಿ ಶಿಲೆಯೊಂದು ಕಾಣಿಸುತ್ತದೆ. ಆ ಶಿಲೆ ’ಓ ಕಬ್ಬಿಗನೆ’ ಎಂದು ಕವಿಯನ್ನು ಕರೆದು ಹೀಗೆ ಹೇಳುತ್ತದೆ.

ತನ್ನಂ
ಕಲ್ಲು ಕರೆಯಿತು ಎಂದು ಬೆಚ್ಚದಿರು. ಮುನ್ನಂ,
ನಾವಿರ‍್ವರೊಂದೆ ಬಸಿರಿಂ ಬಂದು ಲೀಲೆಯಲಿ
ಮುಳುಗಿದೆವು ಸಂಸಾರ ಮಾಯಾಗ್ನಿ ಜ್ವಾಲೆಯಲಿ.
ನೀನು ಮರೆತಿರಬಹುದು, ಚೇತನದ ಸುಖದೊಳಿಹೆ;
ನಾನು ಮರೆತಿಲ್ಲದನು, ಜಡತನದ ಸೆರೆಯೊಳೊಹೆ!

ಆ ಕಲ್ಲು ಹಾಗೂ ಕವಿ ಇಬ್ಬರೂ ಸಹ್ಯಾದ್ರಿಯ ಬಸಿರಿಂದುದಯಿಸಿದವರೆ! ಆ ಕಲ್ಲು ಕಿತ್ತಡಿಯ (ಸನ್ಯಾಸಿ, ತಪಸ್ವಿ) ನುಡಿಯನ್ನು ಕೇಳಿ ಕವಿ ಆಶ್ಚರ್ಯದಲ್ಲಿ ನಿಲ್ಲುತ್ತಾರೆ. ಹರಳುಗಂಬನಿಯುರುಳಿಸುತ್ತ ಜಗತ್ತಿನ ಸೃಷ್ಟಿಪೂರ್ವ ಸ್ಥಿತಿಯ ಬಗ್ಗೆ, ಮಹಾಸ್ಫೋಟದ ನಂತರದ ಸೃಷ್ಟಿಯ ಬಗ್ಗೆ ಬಂಡೆ ಮಾತನಾಡುತ್ತದೆ. ಹೊನಲು ಹರಿವಂದದಲಿ ಆಕಾಶವನ್ನು ತುಂಬಿದ ಆ ವಾಣಿಗೆ ಗಿರಿವನಶ್ರೇಣಿ, ಮರಗಿಡಗಳು ಎಲ್ಲವೂ ಅನುಕಂಪವನ್ನು ತೋರಿ ನಿಂತು ಆಲಿಸುತ್ತಿರುವಂತೆ ಕವಿಗೆ ಭಾಸವಾಗುತ್ತದೆ.

ಕಾಲವಲ್ಲಿರಲಿಲ್ಲ; ದೇಶವಲ್ಲಿರಲಿಲ್ಲ;
ಗ್ರಹಕೋಟಿ ಶಶಿಸೂರ್ಯ ತಾರಕೆಗಳಿರಲಿಲ್ಲ;
ಬೆಳಕು ಕತ್ತಲೆ ಎಂಬ ಭೇದವಿನಿತಿರಲಿಲ್ಲ.
ಮಮಕಾರ ಶೂನ್ಯದಲಿ ಮುಳುಗಿದ್ದುವೆಲ್ಲ.
ಮೂಡಿದುದು ಮೊದಲು ಮಮಕಾರವೆಂಬುವ ಮಾಯೆ;
ಬೆಂಕೊಂಡು ತೋರಿದುದು ಸೃಷ್ಟಿ ಎಂಬುವ ಛಾಯೆ.
ಕಾಲದೇಶದ ಕಡಲ ಕಡೆಹದಲಿ ಸಿಕ್ಕಿ
ಆದಿಮ ಲಯಾಗ್ನಿ ಹೊರಹೊಮ್ಮಿದುದು. ಉಕ್ಕಿ
ಸುತ್ತಿದುದು; ಚಿಮ್ಮಿದುದು ದೆಸೆದೆಸೆದೆಸೆಗೆ ಹಬ್ಬಿ
ಘೂರ್ಣಿಸುತೆ ವಿಶ್ವದ ಅನಂತತೆಯನೇ ತಬ್ಬಿ.

ಅಂದು ಮೊತ್ತಮೊದಲಬಾರಿಗೆ ಉಂಟಾದ ಮಹಾಸ್ಫೋಟದಿಂದ ಚಿಮ್ಮಿದ ಲಯಾಗ್ನಿಯ ಘನೀಕೃತ ರೂಪವೇ ಕಲ್ಲು! ಹಾಗೆ ಸೃಷ್ಟಿಯಾದ ಕಲ್ಲು

ಆ ವಿಶ್ವಕಾವ್ಯದಷ್ಪಷ್ಟ ಪೂರ್ಣತೆಯಲ್ಲಿ,
ಸ್ಪಷ್ಟವ್ಯಕ್ತಿತ್ವದಾಕಾಂಕ್ಷೆಯಿಂ, ನಿಂದಲ್ಲಿ
ನಿಲದೆ ಸಂಚರಿಸಿದೆವು ಆ ಅಗ್ನಿಜದಲ್ಲಿ:
ನೋಡಿನ್ನುಮಿಹುದಾ ಕಲೆ ನನ್ನ ಎದೆಯಲ್ಲಿ!
......................................................
ಆ ಸನಾತನ ಶೈಲತಪಸಿಯೆದೆಯಾಳದಲಿ
ಯುಗಯುಗಗಳಿನ್ನುಮವಿತಿಹವಲ್ಲಿ.

ಕವಿಗೆ ದಿಗ್ಭ್ರಾಂತಿಯಾಗುತ್ತದೆ. ಮುಂದೆ ನಡೆದುದ್ದು ಒಂದು ರೀತಿಯಲ್ಲಿ ಉಳಿವಿಗಾಗಿ ಹೋರಾಟ!

ಹರಿದು ಭೋರಿಡುವ ಆ ಅಗ್ನಿಪ್ರವಾಹಂ
ದಿಕ್ಕುದಿಕ್ಕಿಗೆ ಸಿಡಿದೊಡೆದು, ದೇಶದೇಹಂ
ಗ್ರಹಭೂಮಿ ಶಶಿಸೂರ್ಯ ತಾರಾಖಚಿತಮಾಯ್ತು!
ನನಗೆ ಈ ಭೂಗರ್ಭವೇ ಸೆರೆಯ ಮನೆಯಾಯ್ತು!
ಕಲ್ಪಕಲ್ಪಗಳಿಂದ ನಾನಿಲ್ಲಿ ಸೆರೆಯಾಗಿ
ನರಳಿದೆನು ಕತ್ತಲಲಿ. ಜ್ಯೋತಿದರ್ಶನಕಾಗಿ
ಮೊರೆಯಿಟ್ಟುಕೂಗುತಿರೆ, ಕಲ್ಲೆನಗೆ ಮೈಯಾಗಿ
ಕಡೆಗಿಲ್ಲಿ ನೆಲೆಸಿದೆನು.

ಮಹಾಸ್ಪೋಟದ ನಂತರ ಅಗಣಿತ ಆಕಾಶಕಾಯಗಳು ನಿರಂತರ ಸುತ್ತುತ್ತಲ್ಲೇ, ಕೆಲವು ಶಕ್ತಿಕೇಂದ್ರಗಳಾಗಿ, ಹಲವು ಶಕ್ತಿಕೇಂದ್ರಗಳ ಸುತ್ತ ಸುತ್ತುತ್ತಲೇ ತಮ್ಮ ತಮ್ಮ ಅಸ್ತಿತ್ವವನ್ನು ಸ್ಥಾಪಿಸತೊಡಗಿದ್ದನ್ನು ಹೇಳುತ್ತದೆ. ಮಹಾಸ್ಫೋಟದ ನಂತರ ಉಳಿವಿಗಾಗಿ ನಡೆದ ಹೋರಾಟದಲ್ಲಿ ಕಲ್ಲನಗೆ ಮೈಯಾಗಿ ಕಡೆಗಿಲ್ಲಿ ನೆಲೆಸಿದನು ಎಂದ ಈ ಶಿಲೆಗೆ ದೊರೆತ ಜಾಗ ಈ ಭೂಗರ್ಭ! ಕವಿತೆಯ ಈ ಭಾಗ ಕುವೆಂಪು ಅವರ ವಿಜ್ಞಾನನಿಷ್ಠೆಯನ್ನು ಎತ್ತಿ ತೋರಿಸುತ್ತದೆ. ಹೀಗಿರುವಾಗಲೇ ವಿಕಾಸವಾದ ಶುರುವಾಗಿಬಿಡುತ್ತದೆ! ಆ ಶಿಲೆಯ ಸೋದರರೆಲ್ಲ ಮರಗಿಡಗಳ ರೂಪದಲ್ಲಿ, ಪ್ರಾಣಿರೂಪದಲ್ಲಿ, ನರರಾಕೃತಿಯಲ್ಲಿ ಮೂಡುತ್ತಾರೆ. ಶಿಲೆಗೆ ಜೊತೆಯಾಗುತ್ತಾರೆ.

ನನ್ನ ಸೋದರರೆಲ್ಲ ಮರಗಿಡಗಳಂದದಲಿ
ಮೂಡಿದರು; ಉಸಿರೆಳೆದು ಬೆಳೆಬೆಳೆದು ಚಂದಲಿ
ನಲಿದಾಡಿದರು; ಕೆಲರು ಸ್ವಪ್ನವನು ಸೀಳಿ
ತಿರುಗಾಡಿದರು ಪ್ರಾಣಿರೂಪವನು ತಾಳಿ;
ಮೆಲ್ಲಮೆಲ್ಲನೆ ಕೆಲರು ನರರಾಕೃತಿಯ ತಳೆದು
ತಪ್ಪು ಹಾದಿಯೊಳೆನಿತೊ ಶತಮಾನಗಳ ಕಳೆದು

ನಾಗರಿಕರಾದರೈ ಬುದ್ಧಿ ಶಕ್ತಿಯ ತೋರಿ!

ಮನುಷ್ಯಾಕೃತಿಯ ಕಲ್ಲನ್ನು ನೋಡುತ್ತಲೇ ಕವಿಗೆ ಜಗತ್ಸೃಷ್ಟಿಯ ರಹಸ್ಯದ ಒಂದೆಳೆ, ನಾಗರಿಕತೆಯ ಉಗಮದ ಇನ್ನಂದೆಳೆ ಗೋಚರಿಸಿಬಿಡುತ್ತದೆ! ಆ ಆದಿಶಿಲೆಗೆ ಈ ಜೀವಚೈತನ್ಯದ ಭೂಮಿಯ ಬದುಕಿನ ಮುಂದೆ ವಿಶ್ವದ ಸರ್ವಸ್ವವೂ ಕೀಳಾಗಿ, ದಾಸ್ಯವೆಂಬಂತೆ ಕಾಣುತ್ತದೆ. ಕ್ರಿಮಿಯೊಂದರಲ್ಲಿರುವ ಚೇತನದ ಕಣವಿಲ್ಲದ ಗ್ರಹ ತಾರೆಗಳು. ನೇಸರ್ಗೆ ಕ್ರಿಮಿಗಿರದ ದಾಸ್ಯಂ! ಸೂರ್ಯನದ್ದೂ ದಾಸ್ಯವೇ? ಆದ್ದರಿಂದ ಯುಗಜೀವಿಯಾದರೂ ತನ್ನಿಚ್ಛೆ ಏನೆಂಬುದರಿಹದಿಹ ದಾಸ್ಯ ಸಾವಿಗಿಂತ ಮಿಗಿಲು. ಎಲ್ಲ ಜಡತೆಯ ಬಯಕೆ ಚೈತನ್ಯದ ಸಿದ್ಧಿಯೇ ಆಗಿರುತ್ತದೆ. ಅದನ್ನು ಮೊದಲು ಅರಿತವನೇ ಮಾನವ! ಜಡತನಕೆ ಬೇಸತ್ತು ಜೀವಚೈತನ್ಯವನ್ನು ಆಶಿಸಿಸುತ್ತಿದ್ದ ಶಿಲೆ ಕವಿಯನ್ನು ಸಹೋದರ ಎಂದು ಸಂಬೋಧಿಸಿ ಮುಂದುವರೆಯುತ್ತದೆ.

ಶಿಲ್ಪಿಯೊರ್ವನು ಇಲ್ಲಿ ತಿರುಗುತ್ತೆ
ಬಂದು, ಮರುಗುತ್ತೆ ನನಗೆ, ಬಂಡೆಯನು ಕಡೆದು
ಬಿಡಿಸಿದನು. ನಾನು ಈ ರೂಪವನು ಪಡೆದು
ಕಲೆಯ ಸಾನ್ನಿಧ್ಯದಲಿ ಒಂದಿನಿತು ಕಣ್ದೆರೆದು,
ಪೂರ್ವಬಂಧದ ಶಿಲಾಕ್ಲೇಶವನು ನಸುತೊರೆದು
ಚೇತನದ ಛಾಯೆಯನು ಸವಿಯತೊಡಗಿದೆನಂದು.
(ಕಲ್ಗೆ ಕಣ್ಣಿತ್ತ ಆ ಕಲೆಯೆನಗತುಲ ಬಂಧು!)
ಕಲೆಯ ಕಣ್ಣಿರದ ನರರಿಗೆ ನಾನು ಬರಿ ಕಲ್ಲು;
ಕವಿಯನುಳಿದಾರಿಗೂ ಕೇಳದೆನ್ನೀ ಸೊಲ್ಲು!

ಕಲೆಗಾರನಿಂದ ಸ್ವಲ್ಪಮಟ್ಟಿನ ಕಲಾರೂಪವನ್ನು ಪಡೆದು ಕಲ್ಲಿಗೆ ಸಂತಸ. ಬಹುಶಃ ಆ ಕಲೆಗಾರ ಪ್ರಕೃತಿಯೇ ಇರಬೇಕು! (ಶಿಲಾತಪಸ್ವಿ ಬಂಡೆಯ ಹತ್ತಿರ ತಿಮ್ಮಪ್ಪ ಅನ್ನುವ ಹೆಸರು ಮಸುಕು ಮಸುಕಾಗಿ ಕಾಣುತ್ತದೆ. ಕುವೆಂಪು ಅವರ ಎಳೆವೆಯ ಗೆಳೆಯ. ಮಲೆನಾಡಿನ ಚಿತ್ರಗಳು ಓದಿದವರಿಗೆ ಗೊತ್ತಲ್ಲ. - ಓ.ಎಲ್.ಎನ್.)ಕಲ್ಲು ಈಗ ಚಂದ್ರ-ಸೂರ್ಯೋದಯ ಚಂದ್ರ-ಸೂರ್ಯಾಸ್ತ ಹಕ್ಕಿಯ ದನಿ, ದುಂಬಿಯ ಝೇಂಕಾರ ಬೀಸುವ ತಂಗಾಳಿ ಎಲ್ಲವನ್ನು ಅನುಭವಿಸಬಲ್ಲದು, ಕಲೆಯ ಕಾರಣದಿಂದ! ಅಷ್ಟಕ್ಕೂ ತೃಪ್ತವಾಗದ ಆ ಶಿಲಾತಪಸ್ವಿಗೂ ಒಂದು ಕನಸಿದೆ. ಆ ಕನಸಿನೀಡೇರಿಕೆಗೆ ಕವಿಯ ನರವನ್ನು ಅದು ಯಾಚಿಸುತ್ತದೆ, ಹೀಗೆ:

ಒಂದಿಲ್ಲ
ಒಂದು ದಿನ ಮುಂದೆ ನಿನ್ನಂತೆ ತಿರುಗಾಡುವೆನು;
ಕವಿಯಾಗಿ ಕನ್ನಡದ ಕವನಗಳ ಮಾಡುವೆನು;
ಮಾಡಿ, ನಿನ್ನಂತೆಯೇ ಜನಗಳಿಗೆ ಹಾಡುವೆನು!
ಅದಕಾಗಿ, ಓ ಕವಿಯೆ, ನಿನ್ನ ನೆರವನು ಬೇಡಿ
ಕರೆದಿನಿಂದೀಯೆಡೆಗೆ; ನೀನಿಲ್ಲಿಗೈತಂದು
ನಿತ್ಯವೂ ನನಗಾಗಿ ನಿನ್ನ ರಚನೆಯಾ ಹಾಡಿ
ಕಲೆಯ ಸಾನ್ನಿಧ್ಯದಿಂದೆನಗೆ ನರತನ ಬಂದು,
ನಿನ್ನಂತೆಯೇ ನಾನು ಚೇತನದ ಮುಕ್ತಿಯಂ!
ಪಡೆದು ನಲಿವಂದದಲಿ ನೀಡೆನಗೆ ಶಕ್ತಿಯಂ!
ಓ ಕಬ್ಬಿಗನೆ, ನಿನ್ನೊಳಿಹ ಕಲೆಗೆ ಶಕ್ತಿಯಿದೆ,

ಜಡವ ಚೇತನಗೊಳಿಪ ದಿವ್ಯತರ ಮುಕ್ತಿಯಿದೆ.
ಮನುಜರಿಗೆ ಸೊಗಮೀವ ಕರ‍್ತವ್ಯವೊಂದೆ
ನಿನ್ನೆದೆಂದರಿಯದಿರು; ನಿನ್ನ ಕಲೆಯಿಂದೆ
ನೂರಾರು ಆತ್ಮಗಳು ಜಡತನದ ಬಲೆಯಿಂದೆ
ಬಿಡುಗಡೆಯ ಹೊಂದುವವು; ಏಕೆನೆ ಕವನದಿಂದೆ
ಕಲ್ಗಳೂ ವಾಲ್ಮೀಕಿಯಾಗಿಹವು ಹಿಂದೆ!

ಕವಿ ಮಾತಳಿಯಾಗುತ್ತಾನೆ! ಕೇವಲ ಕಲ್ಲನ್ನು ಕೈಯಿಂದ ಸ್ಪರ್ಶಿಸುತ್ತಾನೆ, ಸಾಂತ್ವಾನಗೈವುವನಂತೆ. ನಾಳೆಯಿಂದ ಕವಿಗೆ ನಿತ್ಯವೂ ಆ ಶಿಲಾತಪಸ್ವಿಯನ್ನು ಕಂಡು ಮಾತನಾಡುವ ಸಂಕಲ್ಪ ಮೂಡುತ್ತದೆ.

ಕಲ್ಲುಗೆಳೆಯ ಬಿಡದೆ
ಕಂಡು ಮಾತಾಡುವೆನು; ಕವನಗಳ ಹಾಡುವೆನು!
ಶಿಲೆಯು ಕಲೆಯಪ್ಪನ್ನೆವರಮಾನು ಹಾಡುವೆನು!

ಎಂದು ಕವಿತೆ ಮುಗಿಯುತ್ತದೆ. ಕಲೆಯ ಅಂತಿಮ ಗುರಿ ಜಡದಲ್ಲೂ ಚೇತನವನ್ನರಳುಸುವುದೇ ಅಲ್ಲವೇ? ಶ್ರೀ ಎಸ್.ವಿ.ಪಿ.ಯವರು ಈ ಕವಿತೆಯ ಬಗ್ಗೆ ಬರೆಯುತ್ತಾ ಹೀಗೆ ಹೇಳಿದ್ದಾರೆ: ಭೌತಶಾಸ್ತ್ರ, ಶಿಲಾಶಾಸ್ತ್ರ, ಜೀವಶಾಸ್ತ್ರಗಳ ಅಧ್ಯಯನದಿಂದ ಜ್ಞಾನ ಸಂಪನ್ನನಾದ ವಿಜ್ಞಾನಿ ಅಗ್ನಿಶಿಲೆ, ವರುಣಶಿಲೆ, ರೂಪಾಂತರಶಿಲೆಯ ವಿಷಯವಾಗಿ ಗ್ರಹಿಸುವ ಭಾವಗಳನ್ನೆಲ್ಲಾ ಕವಿ ಕುವೆಂಪು ಇಲ್ಲಿ ಹೃದ್ಯವಾಗಿ ಅನುಭವಸತ್ಯದ ರಸದರ್ಶನ ವಿಧಾನದಿಂದ ಕಂಡು ತಿಳಿಸಿದ್ದಾರೆ. ಈಗ ಸುಮಾರು ಇನ್ನೂರು ಕೋಟಿ ವರುಷಗಳ ಹಿಂದೆ ಇದ್ದ ನಮ್ಮ ಭೂಮಂಡಲದ ಸ್ಥಿತಿಯಿಂದ ಮೊನ್ನೆ ನಿನ್ನೆ ಇವತ್ತಿನ ಭೂಮಂಡಲದ ಸ್ಥಿತಿಯವರೆಗಿನ ಒಂದು ಚರಿತ್ರೆ ಇಲ್ಲಿ ಕಾಣಬರುತ್ತದೆ. ನಿರ್ಜೀವಕಲ್ಪದಿಂದ ಮಾನವಜೀವಕಲ್ಪದವರೆಗೆ ಬರುವ ಶಿಲೆಯ ಚರಿತ್ರೆ ಇಲ್ಲಿದೆ. ಇದೊಂದು ’ಋಷಿಕವಿಯ ರಸತಪಸ್ಸಿನ ಬಲದಿಂದ ಅನುಭವವೇದ್ಯವಾದ ವಿಜ್ಞಾನಸತ್ಯದ ಬೃಹತ್ಕಥೆ.’ ‘ಎಲ್ಲ ಜಡತೆಯ ಬಯಕೆಯೂ ಚೈತನ್ಯ ಸಿದ್ಧಿಯೇ’ ಎನ್ನುವ ಈ ಚಿಂತನಸ್ಫುರಣೆ ಕ್ರಮೇಣ, ಇರುವುದೆಲ್ಲವೂ ಚೈತನ್ಯವೇ–ಎನ್ನುವ ‘ದರ್ಶನ’ವಾಗಿ ಅವರ ಸಾಹಿತ್ಯದಲ್ಲಿ ಅಭಿವ್ಯಕ್ತವಾಗಿರುವುದನ್ನು ಗುರುತಿಸಬಹುದು. ಶ್ರೀರಾಮಾಯಣದರ್ಶನಂ ಮಹಾಕಾವ್ಯದಲ್ಲೂ ಅಹಲ್ಯೆಯನ್ನು ಶಿಲಾತಪಸ್ವಿನಿ ಎಂದು ಕವಿ ಕರೆದಿದ್ದಾರೆ. ರಾಮನಾಗಮನದಿಂದ ಆಕೆಯ ಶಿಲಾತಮ ಕಠೋರ ತಪಸ್ಸು ಕೊನೆಗೊಳ್ಳುತ್ತದೆ.

ದಿವ್ಯ ಮಾಯಾ ಶಿಲ್ಪಿ
ಕಲ್ಪನಾ ದೇವಿಯಂ ಕಲ್ಲಸೆರೆಯಿಂ ಬಿಡಿಸಿ
ಕೃತಿಸಿದನೆನಲ್, ರಘುತನೂಜನಡಿದಾವರೆಗೆ
ಹಣೆಮಣಿದು ನಿಂದುದೊರ್ವ ತಪಸ್ವಿನೀ ವಿಗ್ರಹಂ,
ಪಾಲ್ ಬಿಳಿಯ ನಾರುಡೆಯ, ರ್ಪಿರುಳ ಸೋರ‍್ಮುಡಿಯ,
ಪೊಳೆವ ನೋಂಪಿಯ ಮೊಗದ ಮಂಜು ಮಾಂಗಲ್ಯದಿಂ.
ಪೆತ್ತ ತಾಯಂ ಮತ್ತೆ ತಾನೆ ಪಡೆದಂತಾಗೆ
ನಮಿಸಿದನೊ ರಘುಜನುಂ ಗೌತಮ ಸತಿಯ ಪದಕೆ,
ತನ್ನ ಕಾವ್ಯಕೆ ತಾಂ ಮಹಾಕವಿ ಮಣಿಯುವಂತೆ!

ಕವಿಶೈಲದಲ್ಲಿ ಈಗ ಇಲ್ಲದ, ಆದರೆ ಹಿಂದೆ ಇದ್ದ ಬೂರುಗದ ಮರವೊಂದರ ಬಗ್ಗೆ ಕವಿಯ ಮಾತುಗಳನ್ನು ಶ್ರೀಮತಿ ತಾರಿಣಿಯವರು ದಾಖಲಿಸಿದ್ದಾರೆ. ತಂದೆಯೊಂದಿಗೆ ಕುಪ್ಪಳಿ ಪರಿಸರವನ್ನು ಸುತ್ತುವುದಕ್ಕೆ ಹೋದಾಗ ಕವಿ, ಶಿಲಾತಪಸ್ವಿ ಕವಿತೆಗೆ ಪ್ರಭಾವ ಬೀರಿದ ಮನುಷ್ಯಾಕೃತಿಯ ಆಳೆತ್ತರದ ಕಲ್ಲು ಮತ್ತು ಬೂರುಗದ ಮರವಿದ್ದ ಜಾಗವನ್ನು ತೋರಿಸುತ್ತಾರೆ. ಒಂದು ದಿನ ಬೂರುಗದ ಮರದ ಬಳಿ ತಾನು ಕಂಡ ದೃಶ್ಯವನ್ನು ಈ ರೀತಿ ವಿವರಿಸಿದ್ದಾರೆ: ಒಮ್ಮೆ ಬೇಸಗೆ ರಜಕ್ಕೆ ಬಂದಾಗ ಇಲ್ಲಿ ಕಾಳ್ಗಿಚ್ಚಿನಿಂದ ಸುಟ್ಟ ನೆಲ ಕರಿಯಾಗಿತ್ತು. ಬೂರುಗದ ಮರದಿಂದ ಕಾಯೊಡೆದು ಹತ್ತಿ ರಾಶಿ ರಾಶಿ ಕರಿಯ ನೆಲದ ಮೇಲೆ ಬಿಳಿಯಾಗಿ ಅರಳೆ ಚಲ್ಲಿತ್ತು. ಅದನ್ನೇ ನೋಡುತ್ತಾ ಅಲ್ಲಿಯೇ ಕಲ್ಲಿನ ಮೇಲೆ ಕುಳಿತಿದ್ದೆ. ಸ್ವಲ್ಪ ಹಒತ್ತಿಗೆ ಒಂದು ಸಣ್ಣ ಹಕ್ಕಿ ಬಂದು ಆ ಅರಳೆಯನ್ನು ಬಾಯಲ್ಲಿ ಕಚ್ಚಿಕೊಂಡು ಗೂಡುಕಟ್ಟಲು ಹಾರಿಹೋಯಿತು. ಈ ಎಲ್ಲ ಅನುಭವಗಳೇ ಶ್ರೀರಾಮಾಯಣದರ್ಶನಂನಲ್ಲಿ ಬಂದಿರುವುದು. ಹೀಗೆ ಹೇಳುತ್ತಲೇ ಕವಿಶೈಲದ ನೆತ್ತಿಯ ಹತ್ತಿರ ಬಂದಾಗ ಒಂದು ಕಡೆ ಕೈ ತೋರಿ ’ಇಲ್ಲಿಯೇ ಇದ್ದುದ್ದು ಒಂದು ದೊಡ್ಡ ಬೂರುಗದ ಮರ’ ಎಂದು, ರಾಮಾಯಣದರ್ಶನಂನಲ್ಲಿ ಬರು ಆ ಭಾಗವನ್ನು ಹೇಳುತ್ತಾರೆ. ಕಿಷ್ಕಿಂದಾ ಸಂಪುಟದ ಸಂಚಿಕೆ ೯ ಸುಗ್ರೀವಾಜ್ಞೆಯಲ್ಲಿ ಬಂದಿರುವ ಆ ಸಾಲುಗಳು ಹೀಗಿವೆ.

ಎಲೆಯುದುರಿ ಬರಲಾದ ಬೂರುಗದ ಮರದಲ್ಲಿ
ಬಲಿತ ಕಾಯ್ ಓಡೊಡೆದು, ಬಿಸಿಲ ಕಾಯ್ಪಿಗೆ ಸಿಡಿದು,
ಹೊಮ್ಮಿತ್ತು ಸೂಸಿತ್ತು ಚಿಮ್ಮಿತ್ತು ಚೆದುರಿತ್ತು
ಚೆಲ್ಲಿತ್ತರಳೆಬೆಳ್ಪು, ಮಸಿಯ ಚೆಲ್ಲಿರ್ದವೊಲ್
ಕಾಳ್ಗಿಚ್ಚು ಕರಿಕುವರಿಸಿದ ನೆಲದ ಕರ್ಪಿನೊಳ್
ಚಿತ್ರಿಸಿ ಶರನ್ನೀರದೋಲ್ಮೆಯಂ. ದಾಂಪತ್ಯ
ಸುಖದಿ ತೃಪ್ತಿಯನಾಂತು ಬಸಿರ ನೋಂಪಿಯ ಸಿರಿಗೆ
ಗೂಡುಕಟ್ಟುವ ಚಿಟ್ಟೆಹಕ್ಕಿ ತಾನಾ ಹತ್ತಿಯಂ
ಮೊಟ್ಟೆಮರಿಗಳೀಗೆ ಮೆತ್ತೆಯನೆಸಗೆ ಕೊಕ್ಕಿನೊಳ್
ಕೊಂಡೊಯ್ದುದಾಯ್ತು. ಮುಳ್ ಪೊದೆಯ ಬೆಳ್ಮಾರಲಂ
ಕಾಯ್ ತುಂಬಿ ಹಣ್ತನಕೆ ಹಾರೈಸುತಿರ್ದುದಾ
ಹೊಸಮಳೆ ಹರಕೆಗಾಗಿ. ಬೆನ್ನು ಹೊಟ್ಟೆಗೆ ಹತ್ತಿ,
ಬಿಸಿಲ ಬೇಗೆಗೆ ಬತ್ತಿ, ಬರದ ಗರ ಬಡಿದಿರ್ದ ಕಲ್
ಕೊರಕು ಕಂಕಾಲತೆಯ ಮಲೆಯ ತೊರೆ ತಾನಲ್ಲಲ್ಲಿ
ತುಂಡು ತುಂಡಾಗಿ ತಂಗಿದುದುಡುಗಿ ಚಲನೆಯಯಂ:
ಬೇಸಗೆಯ ಧಗೆಗೆ ಚಾದಗೆಯಾದುದಯ್ ವಿಪಿನಗಿರಿ
ಭೂಮಿ!