ಜಾನಪದ ವಿಶ್ವವಿದ್ಯಾಲಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಾನಪದ ವಿಶ್ವವಿದ್ಯಾಲಯ
"ಜಾನಪದ ವಿಶ್ವವಿದ್ಯಾಲಯ "
ಸ್ಥಾಪನೆ೨೦೧೧
ಪ್ರಕಾರವಿಶ್ವವಿದ್ಯಾಲಯ
ಕುಲಪತಿಗಳು--- ಪ್ರೊ.ಅಂಬಳಿಕೆ ಹಿರಿಯಣ್ಣ
ಸಿಬ್ಬಂದಿ೩೦ ಮಂದಿ
ವಿದ್ಯಾರ್ಥಿಗಳ ಸಂಖ್ಯೆ-೭೫
ಆವರಣ-- ಗೋಟಗೋಡಿ, ಹಾವೇರಿ ಜಿಲ್ಲೆ
ಜಾನಪದ ವಿಶ್ವವಿದ್ಯಾಲಯ


ಒಂದು ದೇಶದ ಸಾಂಸ್ಕೃತಿಕ ಶ್ರೀಮಂತಿಕೆಗೆ ಆ ದೇಶದ ಸಾಹಿತ್ಯ, ಸಂಸ್ಕೃತಿ, ಪರಂಪರೆ ಮತ್ತು ಅಲ್ಲಿಯ ಜನರ ಜೀವನ ವಿಧಾನ ಅಳತೆಗೋಲಾಗಿದೆ. ಕನ್ನಡನಾಡು ಶ್ರೀಮಂತ ಇತಿಹಾಸ ಮತ್ತು ಪರಂಪರೆ ಹೊಂದಿದೆ. ಈ ನಾಡಿನ ಕಲೆ, ಸಾಹಿತ್ಯ, ಸಂಸ್ಕೃತಿ ಮತ್ತು ಜೀವನಾದರ್ಶಗ ಳ ಸಂರಂಕ್ಷಣೆ ಹಾಗೂ ಸಂವರ್ಧನೆಯ ಉದ್ದೇಶದಿಂದ ರಾಜ್ಯ ಸರ್ಕಾರ ೨೦೧೧ ಜುಲೈ೨೨ರಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯವನ್ನು ಸ್ಥಾಪಿಸಿತು. ಸಂಪೂರ್ಣವಾಗಿ ಜಾನಪದಕ್ಕೆ ಮೀಸಲಾದ ಮೊಟ್ಟ ಮೊದಲ ವಿಶ್ವವಿದ್ಯಾಲಯ ಎಂಬ ಕೀರ್ತಿಗೆ ಇದು ಭಾಜನವಾಯಿತು.

ಇತಿವೃತ್ತ[ಬದಲಾಯಿಸಿ]

ರಾಜ್ಯದಲ್ಲಿ ವಿಶ್ವದ ಮೊಟ್ಟಮೊದಲ ಜಾನಪದ ವಿಶ್ವವಿದ್ಯಾನಿಲಯ ಸ್ಥಾಪನೆಗಾಗಿ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವ ಸಲ್ಲಿಸಿದ್ದರು.[೧][ಶಾಶ್ವತವಾಗಿ ಮಡಿದ ಕೊಂಡಿ]

  • ಅದರ ಪ್ರಕಾರ ಜಾನಪದ ವಿಶ್ವವಿದ್ಯಾನಿಲಯವು ೨೦೧೦ರಲ್ಲಿ ಹಾವೇರಿ ಜಿಲ್ಲೆಯ ಗೋಟಗೋಡಿಯಲ್ಲಿ ಅಂದು ಮುಖ್ಯಮಂತ್ರಿಯಾಗಿದ್ದ ಶ್ರೀ ಸದಾನಂದ ಗೌಡರಿಂದ ಉದ್ಘಾಟನೆ ಆಯಿತು. ಆ ಉದ್ಘಾಟನಾ ಸಮಾರಂಭಕ್ಕೆ, ಹಾವೇರಿ, ಶಿಗ್ಗಾವಿ, ಗೋಟಗೋಡಿ, ಹುಬ್ಬಳ್ಳಿ, ಧಾರವಾಡದ ಬಹು ಸಂಖ್ಯಾತ ಜನರು ಆಗಮಿಸಿದ್ದರು.
  • ಅವರೊಂದಿಗೆ ಗೊ.ರು.ಚನ್ನಬಸಪ್ಪ, ಜಾನಪದ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರು, ಶೈಕ್ಷಣಿಕ ಪರಿಷತ್ತಿನ ಸದಸ್ಯರು, ಕುಲಪತಿ ಮತ್ತು ಜಾನಪದ ವಿಶ್ವವಿದ್ಯಾಲಯದ ಸಿಬ್ಬಂದಿ ವರ್ಗದವರು ಹಾಜರಿದ್ದು, ಈ ಸಮಾರಂಭವನ್ನು ತಮ್ಮ ಕಣ್ಮನಗಳಲ್ಲಿ ತುಂಬಿಕೊಂಡರು. ಇದರ ಧ್ಯೇಯವಾಕ್ಯ "ಹೊನ್ನ ಬಿತ್ತೇವು ಹೊಲಕ್ಕೆಲ್ಲ" ಎಂಬುದಾಗಿದೆ. ಜಾನಪದ ವಿಶ್ವವಿದ್ಯಾಲಯದ ವತಿಯಿಂದ "ಹಣತೆ" ಎಂಬ ಮಾಸಿಕ ಪತ್ರಿಕೆಯನ್ನು ಹೊರತರಲಾಗುತ್ತಿದೆ. ಅದರಲ್ಲಿ ಜಾನಪದ ವಿಶ್ವವಿದ್ಯಾಲಯದ ಶೈಕ್ಷಣಿಕ ಸಾಧನೆಯ ವಿವರಗಳಿರುತ್ತವೆ.

ಒಳನೋಟ[ಬದಲಾಯಿಸಿ]

  • ಹಾವೇರಿ ಜಿಲ್ಲಾ ಕೇಂದ್ರದಿಂದ ೩೬ ಕಿ.ಮೀ ದೂರದಲ್ಲಿ ರಾಷ್ಟ್ರೀಯ ಹೆದ್ದಾರಿ ೪ರಲ್ಲಿ, ಶಿಗ್ಗಾಂವಿ ತಾಲ್ಲೋಕಿನ ಗೋಟಗೋಡಿ ಗ್ರಾಮದಲ್ಲಿ ಜಾನಪದ ವಿಶ್ವವಿದ್ಯಾಲಯ ತಲೆಯೆತ್ತಿ ನಿಂತಿದೆ. ಕರ್ನಾಟಕ ಜಾನಪದ ಸಾಹಿತ್ಯ, ಕಲೆ, ಸಂಗೀತ, ರಂಗಭೂಮಿ, ಕರಕುಶಲಕಲೆ, ಜನಪದ ವೈದ್ಯ ಪದ್ದತಿ, ಆಹಾರ ಪಾನೀಯ, ಗುಡಿಕೈಗಾರಿಕೆ ಮೊದಲಾದ ಇನ್ನಿತರ ವಿಷಯಗಳನ್ನು ಒಳಗೊಂಡ ಕ್ಷೇತ್ರಗಳಲ್ಲಿ ಉನ್ನತ ಶಕ್ಷಣ ಮತ್ತು ಸಂಶೋಧನೆಗೆ ಅವಕಾಶ ಕಲ್ಪಿಸಿ ಕೊಡುವುದು ಇದರ ಧ್ಯೇಯವಾಗಿದೆ.
  • ಕನ್ನಡ ಮತ್ತು ಇತರ ದ್ರಾವಿಡ ಭಾಷೆಗಳ ಜಾನಪದ ಸಾಹಿತ್ಯದ ತೌಲನಿಕ ಸಧ್ಯಯನ, ಕರ್ನಾಟಕದ ನಿರ್ಲಕ್ಷಿತ ಗ್ರಾಮೀಣ ಸಮುದಾಯಗಳ ಹಾಗೂ ಬುಡಕಟ್ಟುಗಳ ಅಭಿವೃದ್ದಿಗೆ ನೆರವಾಗುವುದು, ಜಾನಪದ ಸಾಮಾಗ್ರಿಯನ್ನು ವ್ಯವಸ್ಥಿತ ರೂಪದಲ್ಲಿ ಆಧುನಿಕ ತಂತ್ರಜ್ಞಾನ ಸೌಲಭ್ಯವನ್ನು ಬಳಸಿಕೊಂಡು ದಾಖಲಿಸುವುದು, ಸ್ವಾವಲಂಬಿ ಮತ್ತು ಸ್ವ ಉದ್ಯೋಗ ಕಲ್ಪಸುವ ಗುಡಿಕೈಗಾರಿಕೆ/ ವೃತ್ತಿಕೌಶಲಗಳ ಸಂವರ್ಧನೆಗೆ ಪ್ರಯತ್ನಿಸುವುದು ಮುಂತಾದ ಹಲವು ಯೋಜನೆಗಳನ್ನು ಇದು ಕೈಗೆತ್ತಿಕೊಂಡಿದೆ.

ಪದವಿಯ ವಿಷಯಗಳು[ಬದಲಾಯಿಸಿ]

ಜಾನಪದ ವಿಶ್ವವಿದ್ಯಾಲಯವು ೨೦೧೨-೧೩ನೆ ಸಾಲಿನಿಂದ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಎಂ.ಎ., ಎಂ.ಎಸ್ಸಿ., ಎಂ.ಬಿ.ಎ., ಪಿಹೆಚ್.ಡಿ., ಜೊತೆಗೆ ಐದು ವರ್ಷಗಳ ಸಂಯೋಜಿತ ಶಿಕ್ಷಣವನ್ನು ನೀಡಲು ಉದ್ದೇಶಿಸಿದೆ. ಜಾನಪದ ವಿಶ್ವವಿದ್ಯಾಲಯದಲ್ಲಿ ಈ ಕೆಳ ಕಂಡ ಕೋರ್ಸ್ ಗಳನ್ನು ನಡೆಸಲಾಗುತ್ತಿದೆ.

  1. ಎಂ.ಎ - ಗ್ರಾಮೀಣ ಹಾಗೂ ಬುಡಕಟ್ಟು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ, ಜಾನಪದ ವಿಜ್ಞಾನ, ಜಾನಪದ ಸಾಹಿತ್ಯ, ಜನಪದ ಕಲೆ, ಜನಪದ ಸಂವಹನ, ಹಾಗೂ ಜನಪದ ಪ್ರವಾಸೋದ್ಯಮ.
  2. ಎಂ.ಎಸ್ಸಿ - ಪಾರಂಪರಿಕ ವಿಜ್ಞಾನ ಮತ್ತು ತಂತ್ರಜ್ಞಾನ.
  3. ಎಂ.ಬಿ,ಎ - ಗ್ರಾಮೀಣ ಮತ್ತು ಬುಡಕಟ್ಟು ವ್ಯವಹಾರ ನಿರ್ವಹಣೆ.
  4. ಸ್ನಾತಕೋತ್ತರ ಡಿಪ್ಲೊಮೊ ಪದವಿಗಳು - ಜನಪದ ಮಹಾಕಾವ್ಯ, ಪಾರಂಪರಿಕ ಹೈನುಗಾರಿಕೆ ಮತ್ತು ಜನಪದ ಸಂಗೀತ ಉಪಕರಣಗಳು ಹಾಗೂ ಅವುಗಳ ನಿರ್ಮಾಣ ಮತ್ತು ಮಾರಾಟ.
  5. ಸರ್ಟಿಫೀಕೆಟ್ ಪದವಿಗಳು - ಸಮರ ಕಲೆ, ಗೀತ ಸಂಪ್ರದಾಯ, ಕಸೂತಿಕಲೆ, ಜನಪದ ವೈದ್ಯ, ಜನಪದ ಕ್ರೀಡೆ, ಬಿದರಿ ಕಲೆ, ಬೀಸು ಕಂಸಾಳೆ ಮತ್ತು ಡೊಳ್ಳು ಕುಣಿತ.

ಬೆಳವಣಿಗೆ, ವಿಶೇಷತೆಗಳು[ಬದಲಾಯಿಸಿ]

ಜಾನಪದ ವಿಶ್ವವಿದ್ಯಾಲಯ ಹಲವು ಉತ್ತಮ ಕಾರ್ಯಗಳನ್ನು ಅನುಷ್ಠಾನಗೊಳಿಸಿರುವುದು ಶ್ಲಾಘನೀಯ. ದಿನದಿಂದ ದಿನಕ್ಕೆ ಇಲ್ಲಿನ ಬೆಳೆವಣಿಗೆ ಹಲವು ವಿಶೇಷತೆಗಳಿಂದ ಕೂಡಿವೆ.

  1. ಹಾವೇರಿ ಜಿಲ್ಲೆ ಸುತ್ತಮುತ್ತಲಿನ ಜಾನಪದ ವಸ್ತು ವಿಶೇಷಗಳನ್ನು ಸಂಗ್ರಹಿಸಿ, ಜಾನಪದ ವಿಶ್ವವಿದ್ಯಾಲಯ ಆವರಣದಲ್ಲಿ ಅಪರೂಪದ ವಸ್ತುಸಂಗ್ರಹಾಲಯ ನಿರ್ಮಾಣಗೊಂಡಿದೆ.
  2. ಕರ್ನಾಟಕದ ಪ್ರತಿ ಗ್ರಾಮಗಳ ಸಾಂಸ್ಕೃತಿಕ ಇತಿಹಾಸವನ್ನು ದಾಖಲಿಸುವ "ಗ್ರಾಮ ಚರಿತಕೋಶ" ಯೋಜನೆ ಪ್ರಗತಿಯಲ್ಲಿದೆ.
  3. ಕಲಿಕೆ ಮತ್ತು ತರಬೇತಿ ಕಾರ್ಯಕ್ರಮಗಳೊಂದಿಗೆ, ಹಲವಾರು ವಿಚಾರ ಸಂಕಿರಣಗಳು, ಸಮ್ಮೇಳನಗಳು ಹಾಗೂ ಶಿಬಿರಗಳನ್ನು ಆಯೋಜಿಸಿದೆ.
  4. ವಿದ್ಯಾರ್ಥಿಗಳಿಗಾಗಿ ಗ್ರಂಥಾಲಯ, ವಿದ್ಯಾರ್ಥಿ ನಿಲಯ, ಉಪಹಾರ ಮಂದಿರ, ವಿದ್ಯಾರ್ಥಿ ವೇತನ, ಬಸ್ ಸೌಲಭ್ಯವನ್ನು ಕಲ್ಪಸಲಾಗಿದೆ.
  5. ಜಾನಪದ ವಿಶ್ವವಿದ್ಯಾಲಯದ ಪ್ರಸಾರಾಂಗದ ಮೂಲಕ ಗ್ರಂಥಗಳು, ವಾರ್ತಾಪತ್ರಗಳು ಹಾಗೂ ಸಂಶೋಧನಾ ಪತ್ರಿಕೆಗಳನ್ನು ಹೊರತರಲಾಗುತ್ತಿದೆ.
  6. ಜಾನಪದ ವಿಶ್ವವಿದ್ಯಾಲಯ ಪ್ರಸ್ತುತ ಸಾಮಾನ್ಯ ಜಾನಪದ, ಶಾಬ್ಧಿಕ ಜಾನಪದ, ಜನಪದಕಲೆಗಳ ಅಧ್ಯಯನ, ಪಾರಂಪರಿಕ ವಿಜ್ಞಾನ ಮತ್ತು ತಂತ್ರಜ್ಞಾನ, ಅಲಕ್ಷಿತ ಅಧ್ಯಯನಗಳು ಹಾಗೂ ಆನ್ವಯಿಕ ಜಾನಪದ ಎಂಬ ಆರು ನಿಕಾಯಗಳನ್ನು ಹೊಂದಿದೆ.
  7. ಪ್ರತಿ ತಿಂಗಳು ನಡೆಸುವ "ಪಟ್ಟಾಂಗ" ಎಂಬ ಕಾರ್ಯಕ್ರಮವು ವಿನೂತನ, ವಿಶಿಷ್ಟ ಕಾರ್ಯಕ್ರಮವಾಗಿದೆ. ನಾಡಿನ ವಿವಿಧ ಪ್ರಾಂತ್ಯಗಳಿಂದ ಜನಪದ ಕಲಾವಿದರನ್ನು ಕರೆಯಿಸಿ, ಅವರ ಜೀವನಾನುಭವಗಳನ್ನು ಮುಕ್ತವಾಗಿ ಹಂಚಿಕೊಳ್ಳುವಂತಹ ವ್ಯವಸ್ಥೆಯೊಂದಿಗೆ, ಅಲ್ಲೇ ಇರುವ ಪ್ರಾಧ್ಯಾಪಕರು, ಸಂಶೋಧಕರು, ವಿದ್ಯಾರ್ಥಿಗಳ ಬೌದ್ಧಿಕ ಬೆಳವಣಿಗೆ ದೃಷ್ಟಿಯಿಂದ ಮುಕ್ತ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗುತ್ತಿದೆ.

ಪ್ರಾದೇಶಿಕ ಕೇಂದ್ರಗಳು[ಬದಲಾಯಿಸಿ]

ರಾಜ್ಯದ ಬೇರೆ ಬೇರೆ ಪ್ರದೇಶದ ಸಾಹಿತ್ಯ, ಕಲೆ, ಸಂಸ್ಕೃತಿಯ ಸಂವರ್ಧನೆಗಾಗಿ ಮಲೆ ಮಹದೇಶ್ವರ ಬೆಟ್ಟದಲ್ಲಿ ಮತ್ತು ಬೀದರ್ ನಲ್ಲಿ ಪ್ರಾದೇಶಿಕ ಕೇಂದ್ರಗಳನ್ನು ತೆರೆಯಲಾಗಿದೆ. ಮಾತ್ರವಲ್ಲದೆ, ಜಾನಪದ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಂಸ್ಥೆಗಳಿಗೆ ಮನ್ನಣೆ ನೀಡಿ ಜಾನಪದ ಸರ್ಟಿಫೀ ಕೆಟ್ ಪದವಿಗಳನ್ನು ನಡೆಸಲು ಅನುಮತಿ ನೀಡಲಾಗುತ್ತಿದೆ.

ಉದ್ಯೋಗವಕಾಶಗಳು[ಬದಲಾಯಿಸಿ]

ಜಾನಪದ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದವರಿಗೆ, ಅಧ್ಯಾಪನ ವೃತ್ತಿಯ ಜೊತೆಗೆ ಸರ್ಕಾರದ ಗ್ರಾಮೀಣ ಅಭಿವೃದ್ದಿ, ಕಾರ್ಮಿಕ ಕಲ್ಯಾಣ, ಮಹಿಳೆ ಮತ್ತು ಮಕ್ಕಳ ಕಲ್ಯಾಣ, ಪ್ರವಾಸೋದ್ಯಮ, ಯುವ ಜನಸೇವೆ ಮತ್ತು ಕ್ರೀಡೆ, ಸಮಾಜ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಮುಂತಾದ ಇಲಾಖೆಗಳಲ್ಲಿ ಉದ್ಯೋಗವಕಾಶಗಳು ವಿಪುಲವಾಗಿವೆ. ನೂರಾರು ಜನ ಜಾನಪದ ವಿದ್ವಾಂಸರು ಮತ್ತು ಜಾನಪದ ಕಲಾವಿದರು ಇದರ ಉಪಯೋಗವನ್ನು ಪಡೆದಿದ್ದಾರೆ, ಪಡೆಯುತ್ತಿದ್ದಾರೆ.

ಇವನ್ನೂ ನೋಡಿ[ಬದಲಾಯಿಸಿ]

  • ಜಾನಪದ ವಿವಿ ಸ್ಥಾಪನೆಗೆ ಗೊರುಚ ಆಗ್ರಹ[೨][ಶಾಶ್ವತವಾಗಿ ಮಡಿದ ಕೊಂಡಿ]

ಲೇಖನ ನೆರವು[ಬದಲಾಯಿಸಿ]

  • ಸಾಂಸ್ಕೃತಿಕ ಅಧ್ಯಯನಕ್ಕೆ ಟೊಂಕಕಟ್ಟಿ ನಿಂತ ಜಾನಪದ ವಿಶ್ವವಿದ್ಯಾಲಯ - ಐ.ಸೇಸುನಾಥನ್- ಪ್ರಕಟಣೆ : ಜನಪದ ಮಾಸಪತ್ರಿಕೆ, ಸೆಪ್ಟೆಂಬರ್ ೨೦೧೪ರ ಸಂಚಿಕೆ.

ಉಲ್ಲೇಖಗಳು[ಬದಲಾಯಿಸಿ]

[೧][೨] [೩] [೪] [೫][೬] [೭][೮]

ಉಲ್ಲೇಖಗಳು[ಬದಲಾಯಿಸಿ]

  1. ಕರ್ನಾಟಕ ಜಾನಪದ ವಿಶ್ವವಿದ್ಯಾಲಯ
  2. https://kn.wikipedia.org/wiki/%E0%B2%95%E0%B2%B0%E0%B3%8D%E0%B2%A8%E0%B2%BE%E0%B2%9F%E0%B2%95_%E0%B2%9C%E0%B2%BE%E0%B2%A8%E0%B2%AA%E0%B2%A6_%E0%B2%B5%E0%B2%BF%E0%B2%B6%E0%B3%8D%E0%B2%B5%E0%B2%B5%E0%B2%BF%E0%B2%A6%E0%B3%8D%E0%B2%AF%E0%B2%BE%E0%B2%B2%E0%B2%AF
  3. "ಆರ್ಕೈವ್ ನಕಲು". Archived from the original on 2015-06-13. Retrieved 2015-06-20.
  4. "ಆರ್ಕೈವ್ ನಕಲು". Archived from the original on 2022-05-29. Retrieved 2015-06-20.
  5. ಜಾನಪದ ವಿಶ್ವವಿದ್ಯಾಲಯ ಅಗತ್ಯ ಏಕೆ?
  6. http://kannadajaanapada.blogspot.in/2011/02/blog-post_4675.html
  7. ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಜೂನ್ 16 ರಂದು ಉದ್ಘಾಟನೆ
  8. http://shantinayak.blogspot.in/2012/06/16.html

ಬಾಹ್ಯ ಕೊಂಡಿಗಳು[ಬದಲಾಯಿಸಿ]