ಎನ್.ಕೆ.ಜೋಗಳೇಕರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎನ್.ಕೆ.ಜೋಗಳೇಕರ ಅಂದರೆ ನಾಗನಾಥ ಕಲ್ಲೋಪಂತ ಜೋಗಳೇಕರ ಇವರು ೧೯೩೧ ಜೂನ್ ೧೦ರಂದು ಹಾವೇರಿ ಜಿಲ್ಲೆಯ ಹಾವೇರಿ ತಾಲೂಕಿನ ಭರಡಿ ಎನ್ನುವ ಗ್ರಾಮದಲ್ಲಿ ಜನಿಸಿದರು. ಇವರ ತಂದೆ ಶಾಲಾ ಮಾಸ್ತರರು. ಆರು ಜನ ಸೋದರರು ಹಾಗು ಮೂವರು ಸೋದರಿಯರ ಇವರ ಕುಟುಂಬದಲ್ಲಿ ಇವರು ಐದನೆಯವರು.

ಶಿಕ್ಷಣ[ಬದಲಾಯಿಸಿ]

ಬೆಳಗಿನ ಹೊತ್ತು ದಿನಪತ್ರಿಕೆ ಹಂಚುತ್ತಲೆ, ಶಿಕ್ಷಣ ಪಡೆದ ಜೋಗಳೇಕರರು ಮ್ಯಾಟ್ರಿಕ್ (ಎಸ್.ಎಸ್.ಎಲ್.ಸಿ.) ಮುಗಿಸಿದ ಬಳಿಕ ನಾಲ್ಕು ವರ್ಷಗಳ ಆಯುರ್ವೇದದ ಡಿಪ್ಲೋಮಾ ಕೋರ್ಸ ಅಭ್ಯಾಸ ಮಾಡಿದರು. ಆದರೆ ಕಾರಣಾಂತರಗಳಿಂದ ಪರೀಕ್ಷೆಗೆ ಕಟ್ಟಲಾಗಲಿಲ್ಲ.

ಉದ್ಯೋಗ[ಬದಲಾಯಿಸಿ]

೧೯೫೨ರಿಂದ ೧೯೫೭ರ ವರೆಗೆ ಲೋಕೋಪಯೋಗಿ ಇಲಾಖೆಯಲ್ಲಿ ಕಾರಕೂನ (ಮೇಸ್ತ್ರಿ) ಎಂದು ಕೆಲಸ ಮಾಡಿದ ಜೋಗಳೇಕರರು, ಕೆಲಸ ಬಿಟ್ಟು ಜ್ಯೋತಿಷ್ಯ ವೃತ್ತಿಯನ್ನು ಕೈಗೊಂಡರು. ೧೯೬೧ ನವಂಬರದಲ್ಲಿ ಜ್ಯೋತಿಷ್ಯ ಶಾಸ್ತ್ರಕ್ಕೆ ಮೀಸಲಾದ ಜ್ಯೋತಿರ್ವಾಣಿ ಎನ್ನುವ ಮಾಸಿಕ ಒಂದನ್ನು ಪ್ರಾರಂಭಿಸಿದರು ಹಾಗು ಉದ್ಯೋಗನಿರತ ಜ್ಯೋತಿಷಿಗಳಾದರು. ತಮ್ಮ ನಿಖರವಾದ ಭವಿಷ್ಯವಾಣಿಗಾಗಿ ಜೋಗಳೇಕರ ಅವರು ಕರ್ನಾಟಕದಲ್ಲೆಲ್ಲ ಪ್ರಸಿದ್ಧರಾಗಿದ್ದಾರೆ.

ಸಾರ್ವಜನಿಕ ಜೀವನ[ಬದಲಾಯಿಸಿ]

ಜ್ಯೋತಿಷ್ಯದಲ್ಲಿ ಪ್ರಸಿದ್ಧರಾದ ಜೋಗಳೇಕರರು ಸಾರ್ವಜನಿಕ ಚಟುವಟಿಕೆಗಳಲ್ಲಿಯೂ ಸಹ ಮುಂದು. “ಮಾಡೆಲ್ ಗರ್ಲ್ಸ್ ಹಾಯ್ಸ್ಕೂಲ” ಪ್ರಾರಂಭಿಸಿ, ಈ ಸಂಸ್ಥೆಯ ಚೇರಮನ್ನರಾಗಿ ದುಡಿದಿದ್ದಾರೆ. ಸಂಸ್ಕೃತ ಶಿಕ್ಷಣ ಪ್ರಚಾರ ಸಮಿತಿಯ ಸಹಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ರಾಜ್ಯ ಆಯುರ್ವೇದ (ಡಿ.ಎಸ್.ಏ.ಸಿ.) ಯೂನಿಯನ್ನಿನ ಸಹಕಾರ್ಯದರ್ಶಿಯೂ ಆಗಿದ್ದರು. ಇತ್ತೀಚೆಗೆ ಅಖಿಲ ಕರ್ನಾಟಕ ಜ್ಯೋತಿರ್ವಿಜ್ಞಾನ ಸಂಸ್ಥೆಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ೧೯೫೭ರಿಂದ ೧೯೬೯ರವರೆಗೆ ಧಾರವಾಡ ತಾಲೂಕಾ ಕಾಂಗ್ರೆಸ್ ಕಮಿಟಿಯ ಕಾರ್ಯದರ್ಶಿಯಾಗಿದ್ದ ಜೋಗಳೇಕರ ಅವರು ರಾಜಕೀಯದಲ್ಲೂ ಸಹ ಸೇವೆ ಸಲ್ಲಿಸಿದ್ದಾರೆ.

ಸಾಹಿತ್ಯ[ಬದಲಾಯಿಸಿ]

ಜೋಗಳೇಕರ ಅವರು ಬರೆದದ್ದೆಲ್ಲ ಜ್ಯೋತಿಷ್ಯ ಶಾಸ್ತ್ರದ ಬಗೆಗೆ. ಆದರೆ ಸಾಹಿತ್ಯದ ದೃಷ್ಟಿಯಿಂದಲೂ ಸಹ ಇವರದು ಅನನ್ಯವಾದ ಬರವಣಿಗೆ. .ದ.ರಾ. ಬೇಂದ್ರೆಯವರ ಗದ್ಯಶೈಲಿಯನ್ನು ಹೋಲುವ ಗದ್ಯ ಇವರದು ಎಂದು ವಿಮರ್ಶಕರ ಅಭಿಪ್ರಾಯ. ಇವರ ಕೃತಿಗಳು ಇಂತಿವೆ:

  • ವಧೂವರರ ಜ್ಯೋತಿಷ್ಯ
  • ಆಕಸ್ಮಿಕ ಧನಯೋಗ
  • ಸ್ತ್ರೀಜ್ಯೋತಿಷ್ಯ
  • ಅಜ್ಞಾತ ಜಾತಕ ದರ್ಶನ
  • ಸಾಡೇಸಾತಿ
  • ಉದ್ಯೋಗ ಜ್ಯೋತಿಷ್ಯ ಭಾಗ-೧
  • ಉದ್ಯೋಗ ಜ್ಯೋತಿಷ್ಯ ಭಾಗ-೨
  • ಅಧಿಕಾರ ಜ್ಯೋತಿಷ್ಯ
  • ಆರೋಗ್ಯ ಜ್ಯೋತಿಷ್ಯ
  • ಶಿಕ್ಷಣ ಜ್ಯೋತಿಷ್ಯ
  • ಶಕುನ ಜ್ಯೋತಿಷ್ಯ
  • ಚುನಾವಣೆಯ ಜ್ಯೋತಿಷ್ಯ
  • ಪಂಚಾಂಗ ಪ್ರದೀಪ
  • ವಿವಾಹದ ವಿಧಿ, ವಿಧಾನ, ರೀತಿ, ನೀತಿ
  • ಗ್ರಹಯೋಗ ಭಾಗ-೧
  • ಗ್ರಹಯೋಗ ಭಾಗ-೨
  • ಗ್ರಹಗತಿ
  • ಕುಂಡಲಿಯ ಗುಣ ನಿರ್ಣಯ
  • ಜೀವನ ಜ್ಯೋತಿಷ್ಯ
  • ಪರಿಹಾರ ಜ್ಯೋತಿಷ್ಯ
  • ಗೃಹನಿರ್ಮಾಣ ಜ್ಯೋತಿಷ್ಯ
  • ಪ್ರಶ್ನೋತ್ತರ ಜ್ಯೋತಿಷ್ಯ
  • ಧಾರ್ಮಿಕ ವ್ರತ ನಿಯಮಗಳ ಜ್ಯೋತಿಷ್ಯ
  • ಜ್ಯೋತಿಷಿಗಳಿಗೊಂದು ನೀತಿ ಸಂಹಿತೆ
  • ಗ್ರಹದರ್ಶನ
  • ಪರ್ಜನ್ಯ ಜ್ಯೋತಿಷ್ಯ

ಪತ್ರಕರ್ತ[ಬದಲಾಯಿಸಿ]

ಜೋಗಳೇಕರರು “ಜ್ಯೋತಿರ್ವಾಣಿ” ಎನ್ನುವ ಮಾಸಿಕವನ್ನು ಸ್ವತಃ ಹೊರಡಿಸುತ್ತಿದ್ದರು. ಅಲ್ಲದೆ ಕರ್ನಾಟಕದ ವಿವಿಧ ದೈನಿಕ, ಸಾಪ್ತಾಹಿಕ ಹಾಗೂ ಮಾಸಿಕಗಳಿಗೆ ಮತ್ತೂ ವಿಶೇಷಾಂಕಗಳಿಗೆ ಭವಿಷ್ಯ ಲೇಖನಗಳನ್ನು ಬರೆದುಕೊಟ್ಟಿದ್ದಾರೆ.

ಗೌರವ[ಬದಲಾಯಿಸಿ]

ಜೋಗಳೇಕರರಿಗೆ ಸಂದ ಪ್ರಶಸ್ತಿಗಳು ಅನೇಕ. ಅವುಗಳಲ್ಲಿ ಕೆಲವನ್ನು ಇಲ್ಲಿ ಕೊಡಲಾಗಿದೆ:

  • ೧೯೯೦ರಲ್ಲಿ ಭಾರತೀಯ ಜ್ಯೋತಿರ್ವಿಜ್ಞಾನ ಅಕಾಡೆಮಿಯಿಂದ ‘ಜ್ಯೋತಿಷ್ವಾಚಸ್ಪತಿ’ ಬಿರುದು
  • ೧೯೯೯ರಲ್ಲಿ Indian Council of Astrological Sciences ಇವರು ನೀಡಿದ ಸನ್ಮಾನ ಪತ್ರ
  • ೨೦೦೧ರಲ್ಲಿ ಉಡುಪಿಯಲ್ಲಿ ನಡೆದ ಅಖಿಲ ಭಾರತ ಜ್ಯೋತಿಷ್ಯ ಸಮ್ಮೇಳನದಲ್ಲಿ ‘ಹೋರಾಸಾಗರ’ ಬಿರುದು
  • ದಾವಣಗೆರೆಯಲ್ಲಿ ಭಾಸ್ಕರಾಚಾರ್ಯ ಜ್ಯೋತಿರ್ವಿದ್ಯಾ ಪ್ರತಿಷ್ಠಾನವು ನೀಡಿದ ‘ಜ್ಯೋತಿಷ್ಯ ಶಾಸ್ತ್ರ ಅಭಿನವ ಪಿತಾಮಹ’ ಬಿರುದು
  • ೨೦೦೩ರಲ್ಲಿ ಮೈಸೂರಿನಲ್ಲಿ ನಡೆದ ಮೂರನೆಯ ಅಖಿಲ ಕರ್ನಾಟಕ ಚಿತ್ಪಾವನ ಬ್ರಾಹ್ಮಣ ಸಮ್ಮೇಳನದಲ್ಲಿ ನೀಡಿದ ಮಾನಪತ್ರ