ಎಮ್.ರಾಮಮೂರ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎಮ್.ರಾಮಮೂರ್ತಿಯವರು ವೀರಕೇಸರಿ ಸೀತಾರಾಮಶಾಸ್ತ್ರಿ‍ಗಳ ಹಿರಿಯ ಮಗ(ಜನನ: 11 ಮಾರ್ಚ್‌ 1918, ನಂಜನಗೂಡು). ೧೯೫೦ರ ದಶಕದಲ್ಲಿ ಬರೆಯುತ್ತಿದ್ದ ಇವರು ಕನ್ನಡದ ಪತ್ತೇದಾರಿ ಕಾದಂಬರಿಗಳಿಗೆ ಹೊಸ ಮೆರಗು ತಂದ ಲೇಖಕರು.ಕನ್ನಡ ಚಳುವಳಿಗಳಲ್ಲಿ ಅ.ನ.ಕೃಷ್ಣರಾಯರಿಗೆ ಯಾವಾಗಲೂ ಜೊತೆ ಜೊತೆಯಾಗಿ ನಿಂತು ಹೋರಾಡಿದವರು. ದಿ.1967ರ ಡಿಸೆಂಬರ್ 25ರಂದುತಮ್ಮ ಮನೆಯ ಮುಂದೆ ನಡೆಯುತ್ತಿದ್ದ ನಿರ್ಮಾಣ ಕಾರ್ಯದಲ್ಲಿ ಮಣ್ಣುಗುಡ್ಡೆಯಲ್ಲಿ ಸಿಲುಕಿಕೊಂಡು ದುರಂತ ಸಾವಿಗೀಡಾದರು.[೧]

'ಕನ್ನಡ ಪಕ್ಷ' ಸ್ಥಾಪಕ[ಬದಲಾಯಿಸಿ]

  • ಕನ್ನಡದ ಸ್ವಾಭಿಮಾನದ ಸಂಕೇತವಾದ ಹಳದಿ-ಕೆಂಪು ಬಾವುಟವನ್ನು ರೂಪಿಸಿದವರು ರಾಮಮೂರ್ತಿಯವರು. ಕನ್ನಡಿಗರ ಹಿತ ಕಾಯಲೆಂದು 'ಕನ್ನಡ ಪಕ್ಷ' ಕಟ್ಟಿದವರು, 1960-70ರಲ್ಲಿ ಕನ್ನಡಿಗರ ಪರ ಧ್ವನಿ ಎತ್ತಲು 'ಕರ್ನಾಟಕ ಸಂಯುಕ್ತ ರಂಗ' ಸಂಘಟನೆ ಅಸ್ತಿತ್ವಕ್ಕೆ ಬಂದಿತ್ತು. ರಾಮಮೂರ್ತಿ ಇದರ ಪ್ರಧಾನ ಕಾರ್ಯದರ್ಶಿಯಾಗಿ ಇಡೀ ಬೆಂಗಳೂರಿನಲ್ಲಿ ಕನ್ನಡದಅಭಿಮಾನವನ್ನು ಬಡಿದೆಬ್ಬಿಸಿದರು. ಬಳಿಕ ಅವರು 'ಕನ್ನಡ ಯುವಜನ' ಪತ್ರಿಕೆ ಸ್ಥಾಪಿಸಿ, ಕನ್ನಡದ ಬಗೆಗೆ ಜಾಗೃತಿಗೆ ಮೂಡಿಸಿದರು.

ರಾಜ್ಯೋತ್ಸವ ಆಚರಣೆಯ ಜನಕ[ಬದಲಾಯಿಸಿ]

  • ಅವರು ರಾಜ್ಯೋತ್ಸವವನ್ನು 1963ರಲ್ಲೇ ಮೊಟ್ಟಮೊದಲ ಬಾರಿಗೆ ಬೆಂಗಳೂರಿನಲ್ಲಿ ಅತ್ಯಂತ ವಿಜೃಂಭಣೆಯಿಂದ ಸಾರ್ವಜನಿಕವಾಗಿ ಆಚರಿಸಿದವರು. ಇಂದು ಜನಜನಿತವಾಗಿರುವ ಕನ್ನಡ ರಾಜ್ಯೋತ್ಸವ ಆಚರಣೆಯ ಮೂಲಪುರುಷ ಮ.ರಾಮಮೂರ್ತಿ. ತಿಲಕರು ಗಣೇಶೋತ್ಸವವನ್ನು ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಬಳಸಿಕೊಂಡಂತೆಯೇ ರಾಜ್ಯೋತ್ಸವವನ್ನು ಕನ್ನಡಿಗರು ತಮ್ಮ ಸ್ವಾಭಿಮಾನದ ಹೆಗ್ಗುರುತಾಗಿ ಬೆಳೆಸಿಕೊಳ್ಳಬೇಕು ಎಂದು ಅವರು 1963ರ ನ.1ರಿಂದ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ವಿಜೃಂಭಣೆಯಿಂದ ಸಾರ್ವಜನಿಕ ರಾಜ್ಯೋತ್ಸವ ಆಚರಣೆಗೆ ನಾಂದಿ ಹಾಡಿದರು. ಆ ರಾಜ್ಯೋತ್ಸವದಲ್ಲಿ 128 ಕನ್ನಡಪರ ಸಂಘಟನೆಗಳು ಮತ್ತು 10 ಸಾವಿರಕ್ಕಿಂತ ಹೆಚ್ಚು ಜನರು ಭಾಗವಹಿಸಿದ್ದರು.
  • ರಾಜ್ಯೋತ್ಸವಕ್ಕೆ ಸರಕಾರಿ ರಜೆ ಕೊಡದೇ ಇರುವುದನ್ನು ಪ್ರತಿಭಟಿಸಿದರು. ಮೂರ್ತಿಯವರು ಸರಕಾರಿ ಕಚೇರಿಗಳಲ್ಲಿ ಇರುವವರು ರಾಜ್ಯೋತ್ಸವಕ್ಕೆ ತಾವೇ ಸಾಮೂಹಿಕವಾಗಿ ರಜೆ ಹಾಕಿ, ಆಚರಿಸಿ, ಸರಕಾರದ ವಿರುದ್ಧ ಪ್ರತಿಭಟಿಸಬೇಕು ಎಂದು ಕರೆ ನೀಡಿದರು. ಇದರ ಫಲವಾಗಿ ಸರಕಾರವು 1967ರಿಂದ ಸರಕಾರ ರಾಜ್ಯೋತ್ಸವಕ್ಕೂ ರಜೆ ನೀಡತೊಡಗಿತು. ಆ ನಂತರ ಸರಕಾರವೇ ಅಧಿಕೃತವಾಗಿ ರಾಜ್ಯೋತ್ಸವವನ್ನು ನವೆಂಬರ್ ೧ ರಂದು ಆಚರಿಸಲೂ ಮುಂದಾಯಿತು.

ಕನ್ನಡಿಗರ ಕ್ಷಮೆ ಕೋರಿದ ಎಂಜಿಆರ್‌[ಬದಲಾಯಿಸಿ]

  • 1963ರಲ್ಲಿ ನ.1ರಂದು ತಮಿಳಿನ 'ಕಾಂಚಿ ತಲೈವನ್‌' ಚಲನಚಿತ್ರವು ಬೆಂಗಳೂರಿನಲ್ಲಿ ಬಿಡುಗಡೆಯಾಯಿತು. ಅದರಲ್ಲಿ ಪಲ್ಲವರ ದೊರೆ ನರಸಿಂಹ ವರ್ಮನು ಕನ್ನಡಿಗರ ದೊರೆ ಇಮ್ಮಡಿ ಪುಲಿಕೇಶಿಯನ್ನು ಸೋಲಿಸಿ, ಕನ್ನಡದ ಧ್ವಜವನ್ನು ತುಳಿಯುವ ದೃಶ್ಯವಿತ್ತು. ರಾಮಮೂರ್ತಿಯವರು ಇದು ಕನ್ನಡಿಗರಿಗೆ ಆದ ಅವಮಾನವೆಂದು ಭಾವಿಸಿ, ಅದನ್ನು ಸ್ವಾಭಿಮಾನದ ಪ್ರಶ್ನೆಯಾಗಿ ಪ್ರಬಲವಾಗಿ ವಿರೋಧಿಸಿದರು. ಅದನ್ನು ಸ್ವಾಬಿಮಾನದ ಹೋರಾಟವಾಗಿ ಪರಿವರ್ತಿಸಿದವರು . ಬಳಿಕ, ನರಸಿಂಹವರ್ಮನ ಪಾತ್ರ ಮಾಡಿದ್ದ ಎಂ ಜಿ ರಾಮಚಂದ್ರನ್‌ ಬಹಿರಂಗವಾಗಿ ಕನ್ನಡಿಗರ ಕ್ಷಮೆ ಯಾಚಿಸಿದರು. ಈ ಘಟನೆಯ ಮೂಲಕ ರಾಮಮೂರ್ತಿ ಕನ್ನಡ ಚಳವಳಿಯು ಬೆಂಗಳೂರಿನ ಆಚೆಗೂ ರಾಜ್ಯಾದ್ಯಂತ ಕನ್ನಡ ಅಭಿಮಾನದ ಹೋರಾಟವನ್ನು ಹರಡಿದರು.

'ಕನ್ನಡದ ವೀರಸೇನಾನಿ'[ಬದಲಾಯಿಸಿ]

  • ಭದ್ರಾವತಿ, ಹಿರಿಯೂರು ಮುಂತಾದ ಅನೇಕ ಸ್ಥಳಗಳಲ್ಲಿ ಐದು ದಶಕಗಳ ಹಿಂದೆ ತಮಿಳರ ಪ್ರಾಬಲ್ಯ ಅತಿಯಾಗಿತ್ತು. ಅದರಲ್ಲೂ ಹಿರಿಯೂರಿನಲ್ಲಿ ತಮಿಳು ಧ್ವಜವೇ ರಾರಾಜಿಸುತ್ತಿತ್ತು. ವಾಣಿವಿಲಾಸ ಸಾಗರ ಕಟ್ಟುವಾಗ ಕಾರ್ಮಿಕರಾಗಿ ಬಂದಿದ್ದ ತಮಿಳರು ಅಲ್ಲೇ ನೆಲೆಸಿ, ಕನ್ನಡಿಗರನ್ನು ಮೂಲೆಗುಂಪು ಮಾಡಿದ್ದರು. 1966ರಲ್ಲಿ ರಾಮಮೂರ್ತಿಯವರು ಹಿರಿಯೂರಿಗೆ ಹೋದಾಗ, ಯಾವುದೇ ಸಭೆ ನಡೆಸದಂತೆ ನಿಷೇಧಾಜ್ಞೆಯನ್ನೂ ಹೇರಲಾಗಿತ್ತು. ಇದಕ್ಕೆ ಹೆದರದ ಇವರು, ಸಭೆ ನಡೆಸಿ, ಈ ಸಭೆ ಮುಗಿಯುವುದರೊಳಗೆ ತಮಿಳು ಧ್ವಜ ಕೆಳಗಿಳಿಯಬೇಕು. ಇಲ್ಲದಿದ್ದರೆ ನಾನೇ ಆ ಕೆಲಸ ಮಾಡಿ ತೋರಿಸುತ್ತೇನೆ! ಎಂದು ಗರ್ಜಿಸಿದರು. ಕೊನೆಗೆ ಅವರು ಅದರಂತೆಯೇ ಮಾಡಿಯೂ ತೋರಿಸಿದರು. ಅದೇ ಸಂದರ್ಭದಲ್ಲಿ ರಾಮಮೂರ್ತಿಯವರಿಗೆ ಸಾರ್ವಜನಿಕರಿಂದ 'ಕನ್ನಡಿಗರ ವೀರಸೇನಾನಿ' ಎನ್ನುವ ಬಿರುದು ಪ್ರದಾನವಾಗಿದ್ದು.
  • ಕನ್ನಡ ಚಳವಳಿಗೆ ಕೆಚ್ಚು ತಂದುಕೊಟ್ಟು, ಪ್ರಾಮಾಣಿಕತೆಯಿಂದ ಹೋರಾಡಿದ ರಾಮಮೂರ್ತಿಯವರ ನೆನಪಿನೊಂದಿಗೆ ರಾಜ್ಯೋತ್ಸವವನ್ನು ಸರಕಾರ ಅರ್ಥಪೂರ್ಣ ಕಾರ್ಯಕ್ರಮಗಳನ್ನು ರೂಪಿಸಿದರೆ ಅದೇ ಕನ್ನಡನಾಡು ಅವರಿಗೆ ಸಲ್ಲಿಸಬೇಕಾದ ಗೌರವ ಸಲ್ಲಿಸಿದಂತಾಗುವುದು ಎಂಬುದು ಅನೇಕರ ಅನಿಸಿಕೆ.[೨][೩]

ನಿಧನ[ಬದಲಾಯಿಸಿ]

  • ಶ್ರೀಧರ ಮೂರ್ತಿ ಅವರು ಫೇಸ್ ಬುಕ್ ನಲ್ಲಿ ಹೀಗೆ ಬರೆದುಕೊಂಡಿದ್ದಾರೆ: "ಇಂದಿಗೆ ಐವತ್ತು ವರಷಗಳ ಹಿಂದೆ ಅಂದರೆ 1967ರ ಡಿಸೆಂಬರ್ 25ರಂದು ಇಡೀ ಜಗತ್ತು ಕ್ರಿಸ್‍ಮಸ್ ಸಂಭ್ರಮದಲ್ಲಿ ಮುಳುಗಿದ್ದಾಗ. ಕನ್ನಡ ಹೋರಾಟಗಾರ ಪತ್ರಕರ್ತ ಮತ್ತು ಖ್ಯಾತ ಪತ್ತೇದಾರಿ ಕಾದಂಬರಿಕಾರ ಮ.ರಾಮಮೂರ್ತಿ ಆಗ ಬೆಂಗಳೂರಿನ ಹೊರ ವಲಯದಲ್ಲಿದ್ದ ತಲಘಟ್ಟಪುರದಲ್ಲಿ ಬೆಳೆಸಿದ್ದ ತಮ್ಮ ತೋಟಕ್ಕೆ ಇಬ್ಬರು ಮಕ್ಕಳಾದ ಮಂಜುನಾಥ್ ಮತ್ತು ದಿನಕರರನ್ನು ಕರೆದು ಕೊಂಡು ಹೋದರು. ಅಲ್ಲಿ ಟೊಮೋಟೋ ಬೆಳೆಯುವ ಕನಸು ಕಂಡಿದ್ದ ಅವರು ಅದಕ್ಕಾಗಿ ಹೊಸ ಬಾವಿ ತೋಡಿಸಿದ್ದರು. ಇನ್ನೂ ಆವರಣ ರೂಪಿಸಿದ ಅದರ ಅಡಿ ಕುಳಿತು ಹೆಂಡತಿ ಕಟ್ಟಿ ಕೊಟ್ಟದ್ದ ಅಕ್ಕಿರೊಟ್ಟಿ ತಿನ್ನಲು ಆರಂಭಿಸಿದರು. ಆಗ ಮಣ್ಣು ಉದರುತ್ತಿದೆ. ಎಂದು ಮಗ ಹೇಳಿದೆ 'ಏನು ಆಗುವುದಿಲ್ಲ' ಎಂದು ರಾಮಮೂರ್ತಿ ಮಾತನ್ನು ಮುಗಿಸುವ ಮೊದಲೇ ಭೂ ಕುಸಿತ ಸಂಭವಿಸಿ ಮೂವರೂ ಮಣ್ಣಿನ ಕೆಳಗೆ ಸಿಲುಕಿ ಸಾವನ್ನಪ್ಪಿದ್ದರು. ಶವಗಳನ್ನು ತೆಗೆಯಲು ಮೂರು ದಿನ ಬೇಕಾಯಿತು. ರಾಮ ಮೂರ್ತಿಯವರ ಸಾವು ಕನ್ನಡ ಚಳುವಳಿಗೂ ದೊಡ್ಡ ಆಘಾತವನ್ನು ನೀಡಿ ಮುಂದೆ ಅದರ ದಿಕ್ಕು ಬದಲಾಯಿತು."[೧][೪][೫]

ಇವರ ಕೆಲವು ಕೃತಿಗಳು:[ಬದಲಾಯಿಸಿ]

  • ಮಂಜಿನ ಗೊಂಬೆ
  • ಅದೃಷ್ಟದ ಮಚ್ಚೆ
  • ರಾಜದಂಡ
  • ಪುನರಾಗಮನ
  • ಬಯಕೆ ಈಡೇರಲಿಲ್ಲ
  • ಅವನ ಪ್ರೇಯಸಿ
  • ರಕ್ತ ಚುಂಬನ
  • ಸಾಗರಿ
  • ಪ್ರೇಮ ಮಂದಿರ
  • ಕಾಲುವೆ ಮನೆ
  • ಯಾರವನು?
  • ಜುಲೇಖಾ
  • ವಿಷಕನ್ಯೆ
  • ಮುತ್ತಿನ ಬಳೆಯವಳು
  • ಐದು ದಿನಗಳು
  • ಮಾಟಗಾತಿ
  • ಏಕಾಕಿನಿ
  • ಅವಳ ಡೈರಿ
  • ನೀಲ ಕಮಲ
  • ಆ ಸುಂದರಿಯರು
  • ಪತ್ತೆ ಮಾಡಬೇಡಿ
  • ಎರಡು ಹೆಣಗಳು

ಉಲ್ಲೇಖ[ಬದಲಾಯಿಸಿ]

  1. By Mahesh, ಕ್ರಿಸ್ಮಸ್ - ವೀರಸೇನಾನಿ ರಾಮಮೂರ್ತಿ ದುರಂತ ಕಥೆ
  2. ಬಿ.ಎಸ್‌.ಜಯಪ್ರಕಾಶ್‌ ನಾರಾಯಣ; ಕನ್ನಡದ ವೀರಸೇನಾನಿಯನ್ನೇ ಮರೆತ ಸರಕಾರ!;ವಿಕ ಸುದ್ದಿಲೋಕ;d:Mar 25, 2017
  3. Yuva Brigade@yuva_brigade;Nov 1, 2019
  4. [೧]
  5. Ma.Ramamurthy, the Creator of Kannada flag