ನಾಗಚಂದ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಾಗಚಂದ್ರ
Born11th century CE
Died12th century CE
Occupationಕವಿ
WorksMallinatha-Purana, Rama-Chandra-Charita-Purana
Titleಅಬಿನವ ಪಂಪ
ಹೊಯ್ಸಳ ಸಾಮ್ರಾಜ್ಯದ ಕನ್ನಡ ಕವಿಗಳು ಮತ್ತು ಬರಹಗಾರರು
(1100-1343 CE)
ನಾಗಚಂದ್ರ 1105
ಕಾಂತಿ 1108
ರಾಜಾದಿತ್ಯ 12th. c
ಹರಿಹರ 1160–1200
ಉದಯಾದಿತ್ಯ 1150
ವೃತ್ತ ವಿಲಾಸ 1160
ಕೆರೆಯ ಪದ್ಮರಸ 1165
ನೇಮಿಚಂದ್ರ 1170
ಸುಮನೋಬನ 1175
ರುದ್ರಭಟ್ಟ 1180
ಅಗ್ಗಳ 1189
ಪಾಲ್ಕುರಿಕಿ ಸೋಮನಾಥ 1195
ಬೊಪ್ಪಣ 1180
ಕವಿ ಕಾಮ 12th c.
ದೇವಕವಿ 1200
ರಾಘವಾಂಕ 1200–1225
ಭಂದುವರ್ಮ 1200
ಬಾಲಚಂದ್ರ ಕವಿ 1204
ಪಾರ್ಶ ಪಂಡಿತ 1205
ಮಹಾನಂದಿ ಆಚಾರ್ಯ 1209
ಜನ್ನ 1209–1230
ಪುಲಿಗೆರೆ ಸೋಮನಾಥ 13th c.
ಹಸ್ತಿಮಲ್ಲ 13th c.
ಚಂದ್ರಮ 13th c.
ಸೋಮರಾಜ 1222
ಗುಣವರ್ಮ II 1235
ಪೊಳಲ್ವದಂತನಾಥ 1224
ಆಂಡಯ್ಯ 1217–1235
ಸಿಸುಮಯಣ 1232
ಮಲ್ಲಿಕಾರ್ಜುನ 1245
ನರಹರಿತೀರ್ಥ 1281
ಕುಮಾರ ಪದ್ಮರಸ 13th c.
ಮಹಾಬಲ ಕವಿ 1254
ಕೇಶಿರಾಜ 1260
ಕುಮುದೇಂದು 1275
ನಾಚಿರಾಜ 1300
ರಟ್ಟ ಕವಿ 1300
ನಾಗರಾಜ 1331
ಸೇವುಣ ಯಾದವ ಆಳ್ವಿಕೆಯಲ್ಲಿ ಪ್ರಸಿದ್ಧ ಕನ್ನಡ ಕವಿಗಳು ಮತ್ತು ಬರಹಗಾರರು
ಕಮಲಭವ 1180
ಅಚ್ಚಣ್ಣ 1198
ಅಮುಗಿದೇವ 1220
ಚಾವುಂಡರಸ 1300

ನಾಗಚಂದ್ರನು ಕ್ರಿ.ಶ.೧೧೦೦ರಲ್ಲಿ ಇದ್ದಿರಬಹುದಾದ ಪ್ರಸಿದ್ಧ ಕವಿ. ಇವನಿಗೆ ಅಭಿನವ ಪಂಪ ಎಂಬ ಬಿರುದು ಇದೆ. ಇವನು ರಾಮಚಂದ್ರ ಚರಿತ ಪುರಾಣ ಮತ್ತು ಮಲ್ಲಿನಾಥ ಪುರಾಣ ಎಂಬ ಎರಡು ಚಂಪೂ ಕಾವ್ಯಗಳನ್ನು ರಚಿಸಿದ್ದಾನೆ. ರಾಮಚಂದ್ರ ಪುರಾಣಕ್ಕೆ ಪಂಪರಾಮಾಯಣವೆಂದೂ ಕರೆಯುತ್ತಾರೆ.ಹೊಯ್ಸಳರ ೧ನೇಯ ಬಲ್ಲಾಳನ ಆಸ್ಧಾನದಲ್ಲಿ ಇದನು.

ಕ್ರಿ ಶ ೧೧ ನೆಯ ಶತಮಾನದ ಕೊನೆ ಮತ್ತು ೧೨ ನೆಯ ಶತಮಾನದ ಆದಿಯಲ್ಲಿ ಜೀವಿಸಿದ್ದ ನಾಗಚಂದ್ರ ವಿಜಯಪುರ(ಈಗಿನ ಬಿಜಾಪುರ) ಪ್ರಾಂತ್ಯದಲ್ಲಿ ಬದುಕಿದನೆಂದು ಊಹೆ. ಜೈನ ಮತದ ನಿಷ್ಠ ಅನುಯಾಯಿಯಾಗಿದ್ದ ಈತನ ಗುರುಪರಂಪರೆಯಲ್ಲಿ ಮುಖ್ಯರು ಬಾಲಚಂದ್ರ ಮೇಘಚಂದ್ರಯತಿಗಳು. ಪಂಪ, ಪೊನ್ನ, ರನ್ನರಂತೆಯೇ ಈತನು ಎರಡು ಮಹಾಕಾವ್ಯಗಳನ್ನು ರಚಿಸಿದ್ದಾನೆ. ಪಂಪನ ಮೇಲಿನ ಅಭಿಮಾನದಿಂದ ತನ್ನನ್ನು ಅಭಿನವ ಪಂಪ ಎಂದು ಕರೆದುಕೊಂಡ ಈ ಕವಿಯು ಮುಖ್ಯವಾಗಿ ಭಕ್ತಿ ವೈರಾಗ್ಯಗಳನ್ನು ಕೇಂದ್ರೀಕರಿಸಿ ಕಾವ್ಯಗಳನ್ನು ರಚಿಸಿದ್ದಾನೆ.'ಭಾರತಿ ಕರ್ಣಪೂರ', 'ಕವಿತಾ ಮನೋಹರ', 'ಸಾಹಿತ್ಯ ವಿದ್ಯಾಧರ','ಜನಸ್ಥಾನರತ್ನಪ್ರದೀಪ','ಸೂಕ್ತಿ ಮುಕ್ತಾ ವಸಂತ' ಮೊದಲಾದ ಬಿರುದುಗಳು ಈತನಿಗಿದ್ದವು. ಜಿನಮುನಿತನಯ, ಜಿನಾಕ್ಷರಮಾಲೆ ಎಂಬ ಗೃಂಥಗಳನ್ನೂ ಈತ ರಚಿಸಿದ್ದನೆಂಬ ಉಲ್ಲೇಖವಿದೆ.

ಕಾಲ[ಬದಲಾಯಿಸಿ]

ನಾಗಚಂದ್ರ ಹನ್ನೆರಡನೆಯ ಶತಮಾನ. ಪ್ರಸಿದ್ಧ ಜೈನಕವಿ. ಅಭಿನವ ಪಂಪ ಎಂಬುದು ಈತನ ಬಿರುದು. ತನ್ನ ಗುರುಪರಂಪರೆಯ ವಿನಾ ಈತ ಮತ್ತಾವುದೇ ವೈಯಕ್ತಿಕ ವಿಷಯವನ್ನು ಹೇಳಿಕೊಂಡಿಲ್ಲ. ಆದ್ದರಿಂದ ಈತನ ಕಾಲ, ಊರು ಮುಂತಾದುವನ್ನು ಖಚಿತವಾಗಿ ನಿರ್ಧರಿಸುವುದು ಕಷ್ಟ. ವಿಜಯಪುರದಲ್ಲಿ ಮಲ್ಲಿಜಿನನ ಭವನವೊಂದನ್ನು ತಾನು ಕಟ್ಟಿಸಿದುದಾಗಿ ಹೇಳಿಕೊಂಡಿದ್ದಾನೆ. ಈತ ರಾಜಾಶ್ರಯದಲ್ಲಿದ್ದಂತೆ ತೋರುವುದಿಲ್ಲ. ಧರ್ಮಾಸಕ್ತಿ, ಜಿನಭಕ್ತಿಗಳು ಪ್ರಧಾನವಾಗಿರುವ ವ್ಯಕ್ತಿತ್ವವೊಂದು ಈತನ ಕೃತಿಗಳಲ್ಲಿ ಎದ್ದುಕಾಣುತ್ತದೆ. ಈತ ಮಲ್ಲಿನಾಥಪುರಾಣ ಮತ್ತು ರಾಮಚಂದ್ರಚರಿತಪುರಾಣ (ಪಂಪರಾಮಾಯಣ) ಎಂಬ ಎರಡು ಜೈನ ಧಾರ್ಮಿಕ ಕಾವ್ಯಗಳನ್ನು ರಚಿಸಿದ್ದಾನೆ.

ಕಾವ್ಯ[ಬದಲಾಯಿಸಿ]

ಮಲ್ಲಿನಾಥಪುರಾಣ 19ನೆಯ ತೀರ್ಥಂಕರನಾದ ಮಲ್ಲಿನಾಥನ ಕಥೆಯನ್ನು ನಿರೂಪಿಸುವ 14 ಆಶ್ವಾಸಗಳ ಕೃತಿ. ಇದರಲ್ಲಿ ಜೀವಕ್ಕೆ ಶರಣ್ಯವೊಂದೇ ನಿರ್ಮಳಧರ್ಮಂ ಎಂಬ ಸಂದೇಶವನ್ನು ಮೊಳಗಿಸುವುದು ಕವಿಯ ಉದ್ದೇಶ. ಈ ಕಾವ್ಯಕ್ಕೆ ಮೂಲ ಗುಣಭದ್ರಾಚಾರ್ಯರ ಉತ್ತರಪುರಾಣ. ಮಲ್ಲಿನಾಥನ ಕತೆ ವಾಸ್ತವವಾಗಿ ಕಿರಿದು; ನಾಗಚಂದ್ರ ಅದನ್ನು ಬಹಳ ಹಿಗ್ಗಲಿಸಿದ್ದಾನೆ. ವರ್ಣನೆಗಳೆಲ್ಲ ಕೃತಿಯನ್ನು ತುಂಬಿವೆ. ಕವಿಯ ಪ್ರಥಮ ರಚನೆಯಾದುದರಿಂದ ಇದು ಬಹುಮಟ್ಟಿಗೆ ಪುರಾಣವಾಗಿ, ಸಾಂಪ್ರದಾಯಿಕ ಬರೆವಣಿಗೆಯಾಗಿ ಪರಿಣಮಿಸಿದೆ. ಆದರೆ ಕವಿಯ ಪ್ರತಿಭೆಯನ್ನು ಬಿಂಬಿಸುವ ಸುಂದರವಾದ ಭಾವಗೀತಾತ್ಮಕ ಭಾಗಗಳಿಗೆ ಕಾವ್ಯದಲ್ಲಿ ಕೊರತೆಯಿಲ್ಲ. ಈ ಕವಿಯ ಕೀರ್ತಿ ನಿಂತಿರುವುದು ಮುಖ್ಯವಾಗಿ ರಾಮಚಂದ್ರಚರಿತಪುರಾಣದ ಮೇಲೆ. ಇದು 16 ಆಶ್ವಾಸಗಳನ್ನುಳ್ಳ, ಉದಾತ್ತರಾಘವನ ಆಖ್ಯಾನ. ಇದು ವಾಲ್ಮೀಕಿ ಪರಂಪರೆಯ ರಾಮಾಯಣವಲ್ಲ. ಜೈನಪರಂಪರೆಯ ರಾಮಾಯಣ. ಇದರಲ್ಲಿ ಬರುವ ಪಾತ್ರಗಳೆಲ್ಲ ಜೈನರು; ಇಡೀ ಕೃತಿಯಲ್ಲಿ ಜೈನವಾತಾವರಣ ಹರಡಿದೆ. ಇಲ್ಲಿ ರಾಮಲಕ್ಷ್ಮಣ ರಾವಣರು ಜೈನ ಶಲಾಕಪುರುಷರು; ಆದ್ದರಿಂದ ಇದು ಅಪೂರ್ವವಾದ ರಾಮಕಥೆ. ಆದರೆ ಇದು ಕವಿಯ ಸ್ವತಂತ್ರ ಸೃಷ್ಟಿಯಲ್ಲ; ವಿಮಲ ಸೂರಿ ಎಂಬ ಕವಿ ಪ್ರಾಕೃತದಲ್ಲಿ ಬರೆದ ಪಉಮಚರಿಯಕ್ಕೆ ಕವಿ ಋಣಿ.

ವಾಲ್ಮೀಕಿರಾಮಾಯಣಕ್ಕೂ ಈ ಜೈನರಾಮಾಯಣಕ್ಕೂ ಹಲವಾರು ವ್ಯತ್ಯಾಸಗಳಿವೆ. ಇಲ್ಲಿ ಲಕ್ಷ್ಮಣನಿಗೆ ಪ್ರಾಧಾನ್ಯ; ಕಡೆಗೆ ರಾವಣನನ್ನು ಕೊಲ್ಲುವವನು ಅವನೇ. ದಶರಥನಿಗೆ ನಾಲ್ವರು ರಾಣಿಯರು; ರಾಮಲಕ್ಷ್ಮಣರು ಏಕಪತ್ನೀವ್ರತಸ್ಥರಲ್ಲ ; ಆಂಜನೇಯ ಕೂಡ ವಿವಾಹಿತನಾಗಿದ್ದಾನೆ; ಮಾರೀಚ ಮಂಥರೆಯರ, ಸೇತುಬಂಧದ ಪ್ರಸಂಗಗಳು ಇಲ್ಲಿಲ್ಲ. ಇಂಥ ಅಸಂಖ್ಯಾತ ಮಾರ್ಪಾಟುಗಳಲ್ಲಿ ಬಹುಮುಖ್ಯವಾದದು ರಾವಣನ ಪಾತ್ರದಲ್ಲಿನದು. ಜೈನರಾಮಾಯಣದ ಈ ರಾವಣ ಸಾಹಿತ್ಯಕ್ಕೊಂದು ಅಮೂಲ್ಯ ಕೊಡುಗೆ.

ಇಲ್ಲಿಯ ರಾವಣ ಸದ್ಗುಣ ಸಂಪನ್ನನಾದ ಮಹಾಪುರುಷ; ಆದರೆ ವಿಧಿಯ ಕೈವಾಡದಿಂದ ಆಕಸ್ಮಿಕವಾಗಿ ಅಲ್ಪದೌರ್ಬಲ್ಯಕ್ಕೆ ವಶವಾಗಿ ಪತನಹೊಂದುತ್ತಾನೆ. ಈತ ಸೀತೆಯನ್ನು ಅಪಹರಿಸಿದರೂ ಕಡೆಗೆ ಪಶ್ಚಾತ್ತಾಪದಿಂದ ಪರಿವರ್ತಿತನಾಗಿ ಪೂತನಾಗುತ್ತಾನೆ. ಸೀತೆಯನ್ನು ರಾಮನಿಗೊಪ್ಪಿಸಬೇಕೆಂದು ಬಗೆದು ಯುದ್ಧದಲ್ಲಿ ರಾಮಲಕ್ಷ್ಮಣರನ್ನು ಸೆರೆಹಿಡಿದು ತರಲು ಹೋಗಿ ಹತನಾಗುವ ಈತನ ದುರಂತ ಅನುಕಂಪ ಹುಟ್ಟಿಸುತ್ತದೆ. ಸೀತಾಪಹರಣದ ಸನ್ನಿವೇಶ, ರಾಮನ ಶೋಕಪ್ರಕರಣ ಇವು ಪಂಪರಾಮಾಯಣದ ರಸಸ್ಥಾನಗಳು.

ಶೈಲಿ[ಬದಲಾಯಿಸಿ]

ನಾಗಚಂದ್ರನ ಶೈಲಿ ವಿಶಿಷ್ಟವಾದುದು; ಸರಳತೆ, ಮಾಧುರ್ಯ, ಗೇಯತೆ ಅದರ ಲಕ್ಷಣಗಳು. ಪಾಂಡಿತ್ಯಪ್ರದರ್ಶನಚಾಪಲ್ಯ ಈತನಲ್ಲಿಲ್ಲ. ಕಾವ್ಯ ಎಲ್ಲರಿಗೂ ಅರ್ಥವಾಗಬೇಕು, ಅದರಿಂದ ಬದುಕಿಗೆ ಒಳಿತಾಗಬೇಕು ಎಂಬ ನಿಲವು, ಜನತಾಂತರ್ದೃಷ್ಟಿ ಈತನದು. ಈ ದೃಷ್ಟಿಯಿಂದ ಚಂಪೂಕವಿಗಳಲ್ಲಿ ನಾಗಚಂದ್ರನಿಗೆ ವಿಶಿಷ್ಟ ಸ್ಥಾನವಿದೆ.

ಈತ ಮಹಾಕವಿಯಲ್ಲ: ಆದರೆ ಕವಿಗಳ ದ್ವಿತೀಯ ಶ್ರೇಣಿಯಲ್ಲಿ ಎಲ್ಲರಿಗಿಂತ ಮುಂದೆ ನಿಲ್ಲುವ ಯೋಗ್ಯತೆ ಈತನಿಗುಂಟು

ನೋಡಿ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: