ಅಶ್ವತ್ಥ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜನನ : ಜೂನ್ ೧೮,೧೯೧೨
ಮರಣ: ಜನವರಿ ೧೬,೧೯೯೪

ಅಶ್ವತ್ಥ

ಅಶ್ವತ್ಥ ಅವರು ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ನವೋದಯ ಸಾಹಿತ್ಯದ ಪ್ರಮುಖ ಲೇಖಕರು. ಅನೇಕ ಕತೆ,ಕಾದಂಬರಿ, ಪ್ರಬಂಧಗಳನ್ನು ರಚಿಸಿದ್ದಾರೆ. ಚಲನಚಿತ್ರ ಲೋಕದಲ್ಲೂ ಇವರ ಕಾದಂಬರಿಗಳು ಜನಪ್ರಿಯವಾಗಿವೆ. ಮುನಿಯನ ಮಾದರಿ,ರಂಗನಾಯಕಿ,ಮರ್ಯಾದೆ ಮಹಲು ಕಾದಂಬರಿಗಳು ಚಲನಚಿತ್ರಗಳಾಗಿವೆ. ಪ್ರಚಾರಗಳಿಗೆ ಮಣಿಯದ ಕಾದಂಬರಿಕಾರ, ಕೂದುವಳ್ಳಿ ಅಶ್ವತ್ಥನಾರಾಯಣ ರಾವ್ ಅವರು, ೧೭೯ ಕಥೆಗಳನ್ನು ಬರೆದು ಪ್ರಕಟಿಸಿದ ಕಾದಂಬರಿಕಾರರು. ಆದರೆ ಸ್ವಲ್ಪವೂ ಪ್ರಚಾರದ ಬಗ್ಗೆ ಆಸಕ್ತಿಯಿಲ್ಲ. ತಮ್ಮ ಪಾಡಿಗೆ ತಾವು ಬದುಕುವ ಪ್ರವೃತ್ತಿ ಅವರದು.

" ಅಶ್ವತ್ಥರ ಬದುಕು-ಒಂದು ನೋಟ " ಪ್ರಕಟವಾಗಿದೆ.[ಬದಲಾಯಿಸಿ]

ಈಗ ಡಾ. ಹೆಚ್. ಎಸ್. ಸುಜಾತ ರವರು, ಅಶ್ವತ್ಥರ ಸಮಗ್ರ ಕಥೆಗಳನ್ನು ೩ ಸಂಪುಟ ಗಳಲ್ಲಿ ಸಂಗ್ರಹಿಸಿ, ಪ್ರಕಟಿಸಿದ್ದಾರೆ. ಅಶ್ವತ್ಥರು, ಡಾ. ಸುಜಾತರವರಿಗೆ ನೀಡಿದ ಪ್ರಪ್ರಥಮ ಹಾಗೂ ಅಂತಿಮ ಸಂದರ್ಶನದಿಂದ ಹಲವು ಮಾಹಿತಿಗಳು ಹೊರಗೆಬಂದಿವೆ. ಈ ವಿವರಗಳನ್ನು ೧೯೯೪ ರ ಏಪ್ರಿಲ್ ತಿಂಗಳ, ತುಷಾರ ಪತ್ರಿಕೆ ಯಲ್ಲಿ, ಪ್ರಕಟಿಸಲಾಯಿತು. ಇದೀಗ ಸುಜಾತಾ ರವರು, ಬರೆದು ಪ್ರಕಟಿಸಿದ ಪುಸ್ತಕ, " ಅಶ್ವತ್ಥರ ಬದುಕು-ಒಂದು ನೋಟ " ಪ್ರಕಟವಾಗಿದೆ. ಎಲ್ಲರಿಗೂ ಲಭ್ಯವಿದೆ.

ಹುಟ್ಟೂರು, ಬಾಲ್ಯ ಹಾಗೂ, ಜೀವನ :[ಬದಲಾಯಿಸಿ]

ಕೂದುವಳ್ಳಿ, ಚಿಕ್ಕಮಗಳೂರು ಜಿಲ್ಲೆಯ, ಪುಟ್ಟ ಗ್ರಾಮ. ಇದು ಅಶ್ವತ್ಥರ ಊರು. ಜನನ, ಚಾಮರಾಜನಗರದಲ್ಲಿ. ತಂದೆ ಸೋಮಯ್ಯ . ಚಿಕ್ಕವಯಸ್ಸಿನಲ್ಲೇ ತಾಯಿ ಶ್ರೀಮತಿ ಲಕ್ಷ್ಮಮ್ಮವನವರನ್ನು ಕಳೆದುಕೊಂಡರು. ದೊಡ್ಡಮ್ಮನವರ ಆಶ್ರಯದಲ್ಲಿ ತರೀಕೆರೆ, ಚಿತ್ರದುರ್ಗ, ಶಿವಮೊಗ್ಗ, ಮೈಸೂರು, ಬೆಂಗಳೂರುಗಳಲ್ಲಿ ವಿದ್ಯಾಭ್ಯಾಸ. ೧೯೩೪ ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಬಿ. ಇ. (ಸಿವಿಲ್) ಇಂಜಿನಿಯರಿಂಗ್ ಪದವಿಪಡೆದರು. ಮಾಸ್ತಿವೆಂಕಟೇಶ ಅಯ್ಯಂಗಾರರ, 'ಜೀವನ' ಮಾಸಪತ್ರಿಕೆಯಲ್ಲಿ ಅಶ್ವತ್ಥರ ಕತೆಗಳು ಪ್ರಕಟವಾದವು. (೧೯೩೫-೩೮ ರವರೆಗೆ ) ಕೆ. ವಿ ಆಚಾರ್ಯ ಅಂಡ್ ಕಂ. ಯಲ್ಲಿ ಕೆಲಸ. ೧೯೩೯-೧೯೪೨ ರವರೆಗೆ, ಚಿಕ್ಕಮಗಳೂರು ಲೋಕೋಪಯೋಗಿ ಇಲಾಖೆ, ಕಡೂರು ಶಾಖೆಯಲ್ಲಿ ಕೆಲಸಮಾಡಿದರು. ೧೯೪೨ ರಲ್ಲಿ ಗಾಂಧೀಜಿಯವರು, ಬ್ರಿಟಿಷರ ವಿರುದ್ಧ, ಬೊಂಬಾಯಿನಲ್ಲಿ " ಕ್ವಿಟ್ ಇಂಡಿಯ " ಚಳುವಳಿಯನ್ನು ಪ್ರಾರಂಭಿಸಿದರು. ಗಾಂಧಿವಾದಿಯಾಗಿದ್ದ, ಅಶ್ವತ್ಥರು, ಆಗ ತಮ್ಮ ಆ ಸರ್ಕಾರಿ ನೌಕರಿಗೆ ರಾಜೀನಾಮೆ ಸಲ್ಲಿಸಿದರು. ೧೯೪೨-೪೫ ರವರೆಗೆ ಬೊಂಬಾಯಿನ Hindustan construction co; ಯಲ್ಲಿ ಉದ್ಯೋಗಮಾಡಿದರು. ೧೯೪೫ ರಲ್ಲಿ ಪಂ. ಮದನ ಮೋಹನ ಮಾಳವೀಯಯರ ಆಹ್ವಾನದಮೇರೆಗೆ, "ಬನಾರಸ್ ಹಿಂದೂ ವಿಶ್ವವಿದ್ಯಾಲಯ" ದಲ್ಲಿ ಪ್ರಾಧ್ಯಾಪಕರಾಗಿ ಕೆಲಸಮಾಡಿದರು. ಕೆಲಕಾಲ ಸಿಮ್ಲಾದಲ್ಲಿ ಮಿಲಿಟರಿ ಎಂಜಿನಿಯರ್, ಆಗಿ ಸೇವೆ ಸಲ್ಲಿಸಿದ್ದರು. ಕಥೆಬರೆಯುವುದರಲ್ಲಿ ಅತ್ಯಂತ ಆಸಕ್ತರಾದ ಅಶ್ವತ್ಥರು, ೧೯೬೩ ರಲ್ಲಿ, ಪ್ರಾಧ್ಯಾಪಕವೃತ್ತಿಗೆ ರಾಜೀನಾಮೆ ನೀಡಿ, ನಂಜನಗೂಡಿಗೆ ಬಂದು ವಾಸಮಾಡಿದರು. ೧೯೬೫ ರಿಂದ ಮೈಸೂರಿನಲ್ಲಿ ಸ್ವಂತಮನೆ ಕಟ್ಟಿಸಿದರು. ಗಾಂಧಿವಾದಿಯಾದ ಅಶ್ವತ್ಥರು, ಅಲ್ಲಿ ಶಿಸ್ತು, ಸಂಯಮದ ಸರಳಜೀವನವನ್ನು ನಡೆಸುತ್ತಿದ್ದರು. ೧೬, ಜನವರಿ, ೧೯೯೪ ರಲ್ಲಿ ನಿಧನರಾದರು. ಅಶ್ವತ್ಥ-ಲಲಿತ ದಂಪತಿಗಳಿಗೆ ನರಸಿಂಹಮೂರ್ತಿ ಎಂಬ ಮಗನಿದ್ದಾರೆ. ಅವರು, ಭೂವಿಜ್ಞಾನಿಯಾಗಿ ಈಗ, ನಾಗಪುರದಲ್ಲಿದ್ದಾರೆ. ಅಶ್ವತ್ಥರು ಕರ್ನಾಟಕ ಸಾಹಿತ್ಯ ಅಕ್ಯಾಡಮಿ ಪ್ರಶಸ್ತಿದೊರೆತರೂ ಅದನ್ನು ಸ್ವೀಕರಿಸಲಿಲ್ಲ.

'ಅಜ್ಞಾತನ ನಂಜುಂಡಾಯಣ,' ಕಾದಂಬರಿಯಲ್ಲಿ ಅವರ ಅತ್ಮಕಥೆಯ ಎಳೆಗಳಿವೆ.[ಬದಲಾಯಿಸಿ]

ಅವರದಾಂಪತ್ಯಜೀವನಕ್ಕೆ ಸಂಬಂಧಿಸಿದ, ತಪ್ಪೊಪ್ಪಿಗೆಯ ಹೇಳಿಕೆ ಗಳಿವೆ. ಅಶ್ವತ್ಥರಿಗೆ ಮೂಢನಂಬಿಗಳಲ್ಲಿ ವಿಶ್ವಾಸವಿಲ್ಲ. ಅವರ ಬದುಕು ಗವಿಯಲ್ಲಿದ್ದಂತೆ, ಯಾರಕಣ್ಣಿಗೂ, ಬೀಳದೆ ತಮ್ಮಪಾಡಿಗೆ ಇದ್ದುಕೊಂಡು, ತಮ್ಮ ಕಥಾಸಂಕಲನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದರು. ಹೀಗೆ ನಿಗೂಢತೆಯಿಂದ ತಮ್ಮ ಜೀವನ ನಿರ್ವಹಣೆಯನ್ನು ಮಾಡಿದ ,ಅಶ್ವತ್ತರ ಜೀವನದ ಒಳಪುಟಗಳನ್ನು ಡಾ.ಸುಜಾತಾರವರು ಅನಾವರಣಗೊಳಿಸಿದ್ದಾರೆ. ಅಶ್ವತ್ಥರ ಕಥೆಗಳ ಸ್ಥೂಲಪರಿಚಯ ಮಾಡಿದ್ದಿದ್ದಿರೆ, ಇನ್ನೂ ಚೆನ್ನಾಗಿತ್ತು.

ಲಲಿತಾ-ಅಶ್ವತ್ಥರವರ ಟ್ರಸ್ಟ್ :[ಬದಲಾಯಿಸಿ]

ಮರಣಾನಂತರದ ಉಯಿಲಿನ ಪ್ರಕಾರ, ಲಲಿತಾ ಅಶ್ವತ್ಥ ಟ್ರಸ್ಟ್ ಫಂಡ್ ಸ್ಥಾಪನೆಯಾಗಿದೆ. ಅದರ ಬಡ್ಡಿಯ ಹಣ, ಕನ್ನಡ ಸಾಹಿತ್ಯ ಪರಿಷತ್ ಹಾಗೂ ಮೈಸೂರಿನ "ರಾಮಕೃಷ್ಣಾಶ್ರಮ ವಸತಿ ಶಾಲೆ" ಗೆ ಸಂದಾಯವಾಗುತ್ತಿದೆ.


ಕೃತಿಗಳು[ಬದಲಾಯಿಸಿ]

ಮಾಸ್ತಿಯವರ ಜೀವನ ಪತ್ರಿಕೆಯಲ್ಲಿ ಇವರ ಹಲವಾರು ಕಥೆಗಳು ಪ್ರಕಟಗೊಂಡಿದ್ದವು.

ಕಾದಂಬರಿಗಳು[ಬದಲಾಯಿಸಿ]

ಕಥಾ ಸಂಕಲನಗಳು[ಬದಲಾಯಿಸಿ]

  • ದೂರದ ಕಾಶಿಯಲ್ಲಿ
  • ಬಾಳೆ ಹೊಳೆ
  • ಅಗ್ನಿ ಸಾಕ್ಷಿ
  • ಜಯಂತಿ
  • ನೋವು-ನಲಿವು

ಪ್ರಬಂಧ ಸಂಕಲನ[ಬದಲಾಯಿಸಿ]

  • ಮೂಗಿನ ಮೇಲೆ
  • ಇಂದಿನ ಪತ್ರಿಕೆ ನೋಡಿದ್ದೀರಾ?
  • ಬನ್ನಿ ನನ್ನ ಉಪವನಕೆ
  • ನವ್ಯವಾಗಿ
  • ಬಡ ಮುತ್ತೈದೆ ಹಾರ್ಮೋನಿಯಂ
  • ಕ್ರಿಕೆಟ್ ಓದೋಣ
  • ಸಮಿತಿಮಯ ಜಗತ್
  • ರೋಗಿಷ್ಟರು

ಖಂಡ ಕಾವ್ಯ[ಬದಲಾಯಿಸಿ]

  • ಮಹಾಯುದ್ಧ

ನಾಟಕಗಳು[ಬದಲಾಯಿಸಿ]

ಹದಿನೆಂಟು ನಾಟಕಗಳನ್ನು ರಚಿಸಿದ್ದಾರೆ.

ಇತರ ವಿಷಯಗಳು[ಬದಲಾಯಿಸಿ]

ಅಶ್ವತ್ಥ ಅವರದು ಸರಳ ಬದುಕು, ನಂಬಿದ ತತ್ವಗಳಿಗೆ ಬದ್ಧವಾದ ಬದುಕು. ತಾವು ಗಳಿಸಿದ್ದನ್ನೆಲ್ಲ ಸಾರ್ವಜನಿಕರ ಉಪಯೋಗಕ್ಕೆ ಬಿಟ್ಟು ಹೋದ ತ್ಯಾಗ ಮನೋಭಾವ. ಪ್ರಶಸ್ತಿ, ಪುರಸ್ಕಾರ, ಸನ್ಮಾನಗಳಿಂದ ಸದಾ ದೂರವಿದ್ದರೆಂಬುದು ಇವರನ್ನು ಬಲ್ಲವರ ಅಭಿಪ್ರಾಯವಾಗಿದೆ.

"https://kn.wikipedia.org/w/index.php?title=ಅಶ್ವತ್ಥ&oldid=714659" ಇಂದ ಪಡೆಯಲ್ಪಟ್ಟಿದೆ