ಭಾರತದ ಸಂವಿಧಾನದ ೩೭೦ನೇ ವಿಧಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾರತೀಯ ಸಂವಿಧಾನದ ೩೭೦ನೇ ವಿಧಿಯು ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ಸ್ವಾಯತ್ತ ಸ್ಥಾನಮಾನವನ್ನು ನೀಡುವ ವಿಧಿಯಾಗಿದೆ.[೧] ಈ ವಿಧಿಯನ್ನು ಸಂವಿಧಾನದ ಭಾಗ XXI ರಲ್ಲಿ ರಚಿಸಲಾಗಿದೆ: ತಾತ್ಕಾಲಿಕ, ಪರಿವರ್ತನಾ ಮತ್ತು ವಿಶೇಷ ನಿಬಂಧನೆಗಳು.[೨] ಜಮ್ಮು ಮತ್ತು ಕಾಶ್ಮೀರದ ಸಂವಿಧಾನ ಸಭೆಯು ಸ್ಥಾಪನೆಯಾದ ನಂತರ, ಭಾರತೀಯ ಸಂವಿಧಾನದ ವಿಧಿಗಳನ್ನು ರಾಜ್ಯಕ್ಕೆ ಅನ್ವಯಿಸಲು ಅಥವಾ ೩೭೦ನೇ ವಿಧಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಲು ಶಿಫಾರಸು ಮಾಡಲು, ಅದಕ್ಕೆ ಅಧಿಕಾರ ನೀಡಲಾಯಿತು. ನಂತರ ಜಮ್ಮು ಕಾಶ್ಮೀರ ಸಂವಿಧಾನ ಸಭೆಯ, ರಾಜ್ಯದ ಸಂವಿಧಾನವನ್ನು ರಚಿಸಿ ೩೭೦ನೇ ವಿಧಿಯನ್ನು ರದ್ದುಗೊಳಿಸುವಂತೆ ಶಿಫಾರಸು ಮಾಡದೆ ಇರುವುದರಿಂದ, ಈ ವಿಧಿಯನ್ನು ಭಾರತೀಯ ಸಂವಿಧಾನದ ಶಾಶ್ವತ ಲಕ್ಷಣವಾಗಿ ಎಂದು ಪರಿಗಣಿಸಲಾಗಿದೆ[೩]

ಉದ್ದೇಶ[ಬದಲಾಯಿಸಿ]

ಜಮ್ಮು ಮತ್ತು ಕಾಶ್ಮೀರದ ಮೂಲ ಪ್ರವೇಶವು, ಇತರ ಎಲ್ಲ ರಾಜಪ್ರಭುತ್ವಗಳಂತೆ ರಕ್ಷಣಾ, ವಿದೇಶಾಂಗ ವ್ಯವಹಾರ ಮತ್ತು ಸಂವಹನ ಎಂಬ ಮೂರು ವಿಷಯಗಳಲ್ಲಿತ್ತು. ಇಡೀ ಭಾರತಕ್ಕಾಗಿ ಸಂವಿಧಾನವನ್ನು ರೂಪಿಸುತ್ತಿದ್ದ ಭಾರತದ ಸಂವಿಧಾನ ಸಭೆಗೆ ಪ್ರತಿನಿಧಿಗಳನ್ನು ಕಳುಹಿಸಲು ಎಲ್ಲಾ ರಾಜಪ್ರಭುತ್ವಗಳನ್ನು ಆಹ್ವಾನಿಸಲಾಯಿತು. ತಮ್ಮದೇ ರಾಜ್ಯಗಳಿಗೆ ವಿಧಾನ ಸಭೆಗಳನ್ನು ಸ್ಥಾಪಿಸಲು ಅವರನ್ನು ಪ್ರೋತ್ಸಾಹಿಸಲಾಯಿತು. ಹೆಚ್ಚಿನ ರಾಜ್ಯಗಳು ಸಮಯಕ್ಕೆ ಸರಿಯಾಗಿ ಸಭೆಗಳನ್ನು ಸ್ಥಾಪಿಸಲು ಸಾಧ್ಯವಾಗಲಿಲ್ಲ. ಆದರೆ ಕೆಲವು ರಾಜ್ಯಗಳು ಸ್ಥಾಪನೆ ಮಾಡಿದವು: ನಿರ್ದಿಷ್ಟವಾಗಿ ಸೌರಾಷ್ಟ್ರ ಯೂನಿಯನ್, ತಿರುವಾಂಕೂರು-ಕೊಚ್ಚಿನ್ ಮತ್ತು ಮೈಸೂರುಗಳನ್ನು. ಬಳಿಕ ಎಲ್ಲಾ ರಾಜ್ಯ ಇಲಾಖೆಯು ತಮ್ಮ ತಮ್ಮ ರಾಜ್ಯಗಳಿಗೆ ಮಾದರಿ ಸಂವಿಧಾನವನ್ನು ಅಭಿವೃದ್ಧಿಪಡಿಸಿದರೂ, ಮೇ ೧೯೪೯ರಲ್ಲಿ ಎಲ್ಲಾ ರಾಜ್ಯಗಳ ಆಡಳಿತಗಾರರು ಮತ್ತು ಮುಖ್ಯಮಂತ್ರಿಗಳು ಭೇಟಿಯಾಗಿ ರಾಜ್ಯಗಳಿಗೆ ಪ್ರತ್ಯೇಕ ಸಂವಿಧಾನದ ಅಗತ್ಯವಿಲ್ಲ ಎಂದು ಒಪ್ಪಿಕೊಂಡರು. ಅವರು ಭಾರತದ ಸಂವಿಧಾನವನ್ನೇ ತಮ್ಮ ಸಂವಿಧಾನವೆಂದು ಒಪ್ಪಿಕೊಂಡರು. ವಿಧಾನಸಭೆಗಳನ್ನು ಮಾಡಿದ ರಾಜ್ಯಗಳು ಕೆಲವು ತಿದ್ದುಪಡಿಗಳನ್ನು ಸೂಚಿಸಿದವು. ಎಲ್ಲಾ ರಾಜ್ಯಗಳ (ಅಥವಾ ರಾಜ್ಯಗಳ ಒಕ್ಕೂಟಗಳ) ಸ್ಥಾನವು ಸಾಮಾನ್ಯ ಭಾರತೀಯ ಪ್ರಾಂತ್ಯಗಳಿಗೆ ಸಮಾನವಾಯಿತು.[೪]

ಜಮ್ಮು ಮತ್ತು ಕಾಶ್ಮೀರದ ವಿಷಯದಲ್ಲಿ, ಭಾರತದ ಸಂವಿಧಾನ ಸಭೆಯ ಪ್ರತಿನಿಧಿಗಳು ಭಾರತೀಯ ಸಂವಿಧಾನದ ನಿಬಂಧನೆಗಳನ್ನು ಮೂಲ ಪ್ರವೇಶ ಸಾಧನಕ್ಕೆ ಅನುಗುಣವಾದ ರಾಜ್ಯಗಳಿಗೆ ಮಾತ್ರ ಅನ್ವಯಿಸಬೇಕು ಎಂದು ವಿನಂತಿಸಿದರು. "ಆ ಸಮಯದಲ್ಲಿ ಅಸ್ತಿತ್ವದಲ್ಲಿದ್ದ ಪರಿಸ್ಥಿತಿಯನ್ನು ಅನುಸರಿಸಿ ಈ ಭರವಸೆಯನ್ನು ಮಾಡಲಾಯಿತು. ಅದನ್ನು ಈಗಿನ ಪರಿಸ್ಥಿತಿಯನ್ನು ಅವಲಂಬಿಸಿ ಯಾವುದೇ ಟೀಕೆ ಮಾಡುವುದು ಸಾಧುವಲ್ಲ [೫][೬] ಅದರಂತೆ, ೩೭೦ನೇ ವಿಧಿಯನ್ನು ಭಾರತೀಯ ಸಂವಿಧಾನದಲ್ಲಿ ಸೇರಿಸಲಾಯಿತು. ಇದು ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡುವ ಸಂವಿಧಾನದ ಇತರ ವಿಧಿಗಳನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ವಯಿಸಲಾಗುವುದು ಎಂದು ಷರತ್ತು ವಿಧಿಸಲಾಯಿತು. ಇದು "ತಾತ್ಕಾಲಿಕ ನಿಬಂಧನೆ"ಯಾಗಿದ್ದು, ಇದರ ಅನ್ವಯಿಕತೆಯು ರಾಜ್ಯದ ಸಂವಿಧಾನವನ್ನು ರೂಪಿಸಿ ಅಳವಡಿಸಿಕೊಳ್ಳುವವರೆಗೆ ಮಾತ್ರ ಉಳಿಸಲು ಉದ್ದೇಶಿಸಲಾಗಿತ್ತು. ಹಾಗಿದ್ದರೂ, ೩೭೦ನೇ ವಿಧಿಯನ್ನು ರದ್ದುಗೊಳಿಸಲು ಅಥವಾ ತಿದ್ದುಪಡಿ ಮಾಡಲು ಶಿಫಾರಸು ಮಾಡದೆ ೧೯೫೭ರ ಜನವರಿ ೨೫ ರಂದು ರಾಜ್ಯದ ವಿಧಾನಸಭೆಯು ವಿಲೀನಗೊಂಡಿತು . ಹೀಗಾಗಿ ಈ ವಿಧಿಯು ಭಾರತೀಯ ಸಂವಿಧಾನದ ಶಾಶ್ವತ ಲಕ್ಷಣವಾಗಿ ಮಾರ್ಪಟ್ಟಿದೆ.[೭][೮]

ಜಮ್ಮು ಮತ್ತು ಕಾಶ್ಮೀರದ ಸ್ವಾಯತ್ತತೆ: ರಚನೆ ಮತ್ತು ಮಿತಿಗಳು[ಬದಲಾಯಿಸಿ]

ಭಾರತದ ಸಂವಿಧಾನವು ಒಂದು ಸಂಯುಕ್ತ ರಾಷ್ಟ್ರದ ರಚನೆಯಾಗಿದೆ. ಶಾಸನದ ವಿಷಯಗಳನ್ನು 'ಯೂನಿಯನ್ ಪಟ್ಟಿ', 'ರಾಜ್ಯ ಪಟ್ಟಿ' ಮತ್ತು 'ಏಕಕಾಲೀನ ಪಟ್ಟಿ' ಎಂದು ವಿಂಗಡಿಸಲಾಗಿದೆ. ಕೇಂದ್ರ ಸರ್ಕಾರವು ಪ್ರತ್ಯೇಕವಾಗಿ ವಿಷಯಗಳನ್ನು ಶಾಸನಬದ್ಧಗೊಳಿಸಲು ರಕ್ಷಣಾ, ಮಿಲಿಟರಿ ಮತ್ತು ವಿದೇಶಾಂಗ ವ್ಯವಹಾರಗಳು, ಪ್ರಮುಖ ಸಾರಿಗೆ ವ್ಯವಸ್ಥೆಗಳು, ಬ್ಯಾಂಕಿಂಗ್, ಷೇರು ವಿನಿಮಯ ಕೇಂದ್ರಗಳು ಮತ್ತು ತೆರಿಗೆಗಳಂತಹ ವಾಣಿಜ್ಯ ವಿಷಯಗಳು ಸೇರಿದಂತೆ ೧೦೦ ವಿಷಯಗಳು ಕೇಂದ್ರ ಪಟ್ಟಿಯಲ್ಲಿ ಒದಗಿಸಲಾಗಿದೆ. ರಾಜ್ಯಗಳಿಗೆ ಶಾಸನ ಮಾಡಲು ಕಾರಾಗೃಹಗಳು, ಕೃಷಿ, ಹೆಚ್ಚಿನ ಕೈಗಾರಿಕೆಗಳು ಮತ್ತು ಕೆಲವು ತೆರಿಗೆಗಳನ್ನು ಒಳಗೊಂಡ ೬೧ ವಸ್ತುಗಳು ರಾಜ್ಯ ಪಟ್ಟಿಯಲ್ಲಿ ಲಭ್ಯವಿದೆ. ಕೇಂದ್ರ ಮತ್ತು ರಾಜ್ಯಗಳು ಶಾಸನಬದ್ಧಗೊಳಿಸಬಹುದಾದ ಏಕಕಾಲೀನ ಪಟ್ಟಿಯಲ್ಲಿ ಅಪರಾಧ ಕಾನೂನು, ಮದುವೆ, ದಿವಾಳಿತನ, ಕಾರ್ಮಿಕ ಸಂಘಗಳು, ವೃತ್ತಿಗಳು ಮತ್ತು ಬೆಲೆ ನಿಯಂತ್ರಣ ಇತ್ಯಾದಿ ವಿಷಯಗಳು ಸೇರಿವೆ. ಸಂಘರ್ಷದ ಸಂದರ್ಭದಲ್ಲಿ, ಯೂನಿಯನ್ ಶಾಸನವು ಮೊದಲ ಆದ್ಯತೆಯನ್ನು ಪಡೆಯುತ್ತದೆ. ಸಂವಿಧಾನದಲ್ಲಿ ನಿರ್ದಿಷ್ಟಪಡಿಸದ ವಿಷಯಗಳ ಬಗ್ಗೆ ಕಾನೂನುಗಳನ್ನು ರೂಪಿಸಲು ಅಧಿಕಾರವು ಕೇಂದ್ರದ ಒಕ್ಕೂಟದಲ್ಲಿದೆ. ಕೇಂದ್ರವು ಕೆಲವು ಕೈಗಾರಿಕೆಗಳನ್ನು, ಜಲಮಾರ್ಗಗಳನ್ನು, ಬಂದರು ಇತ್ಯಾದಿಗಳನ್ನು 'ರಾಷ್ಟ್ರೀಯ' ಎಂದು ನಿರ್ದಿಷ್ಟಪಡಿಸಬಹುದು. ಈ ಸಂದರ್ಭದಲ್ಲಿ ಅವು ಕೇಂದ್ರದ ಶಾಸನದಲ್ಲಿ ಸೇರಲ್ಪಡುತ್ತದೆ.[೯]

ಜಮ್ಮು ಮತ್ತು ಕಾಶ್ಮೀರದ ವಿಷಯದಲ್ಲಿ, ಪ್ರವೇಶ ಕೇಂದ್ರದಲ್ಲಿ ನೀಡಲಾದ 'ಯೂನಿಯನ್ ಪಟ್ಟಿ' ಮತ್ತು 'ಏಕಕಾಲೀನ ಪಟ್ಟಿ' ಯನ್ನು ಮೊದಲಿಗೆ ಮೊಟಕುಗೊಳಿಸಲಾಗಿತ್ತು. ಆದರೆ ನಂತರ ಅವುಗಳನ್ನು ರಾಜ್ಯ ಸರ್ಕಾರದ ಒಪ್ಪಿಗೆಯೊಂದಿಗೆ ವಿಸ್ತರಿಸಲಾಯಿತು. ನಿರ್ದಿಷ್ಟಪಡಿಸದ ವಿಷಯಗಳು ಕೇಂದ್ರಕ್ಕಿಂತ ಹೆಚ್ಚಾಗಿ ರಾಜ್ಯ ಶಾಸನದಲ್ಲಿ ಸ್ಥಾನ ಪಡೆದಿದೆ. ರಾಜ್ಯ ಸ್ವಾಯತ್ತ ಸಮಿತಿಯ ಪ್ರಕಾರ, ಪ್ರಸ್ತುತ ಕೇಂದ್ರ ಪಟ್ಟಿಯಲ್ಲಿರುವ ೧೦೦ ವಸ್ತುಗಳ ಪೈಕಿ ೯೪ ವಸ್ತುಗಳು ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ವಯಿಸುತ್ತವೆ. ಗುಪ್ತಚರ ಕೇಂದ್ರ ಬ್ಯೂರೋ ತನಿಖೆ ಮತ್ತು ತಡೆಗಟ್ಟುವ ಬಂಧನದ ನಿಬಂಧನೆಗಳು ಅನ್ವಯಿಸುವುದಿಲ್ಲ. 'ಏಕಕಾಲೀನ ಪಟ್ಟಿ'ಯಲ್ಲಿ, ೪೭ ವಸ್ತುಗಳ ಪೈಕಿ ೨೬ ವಸ್ತುಗಳು ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ವಯಿಸುತ್ತವೆ. ಮದುವೆ ಮತ್ತು ವಿಚ್ಛೇದನ, ಶಿಶುಗಳು ಮತ್ತು ಅಪ್ರಾಪ್ತ ವಯಸ್ಕರು, ಕೃಷಿ ಭೂಮಿಯನ್ನು ಹೊರತುಪಡಿಸಿ ಆಸ್ತಿ ವರ್ಗಾವಣೆ, ಒಪ್ಪಂದಗಳು, ದಿವಾಳಿತನ, ಟ್ರಸ್ಟ್‌ಗಳು, ನ್ಯಾಯಾಲಯಗಳು, ಕುಟುಂಬ ಯೋಜನೆ ಮತ್ತು ದತ್ತಿಗಳನ್ನು ಕೈಬಿಡಲಾಗಿದೆ. ಅಂದರೆ, ಆ ವಿಷಯಗಳ ಬಗ್ಗೆ ಕಾನೂನು ರೂಪಿಸಲು ರಾಜ್ಯಕ್ಕೆ ಪ್ರತ್ಯೇಕ ಹಕ್ಕಿದೆ. ರಾಜ್ಯ ಸಂಸ್ಥೆಗಳಿಗೆ ಚುನಾವಣೆಗಳನ್ನು ಶಾಸನ ಮಾಡುವ ಹಕ್ಕು ರಾಜ್ಯದ ಮೇಲಿದೆ.[೧೦]

ಜಮ್ಮು ಮತ್ತು ಕಾಶ್ಮೀರಕ್ಕೆ ಅನ್ವಯಿಸುವ ಭಾರತೀಯ ಕಾನೂನುಗಳು[ಬದಲಾಯಿಸಿ]

ಭಾರತೀಯ ಸಂಸತ್ತು ಅಂಗೀಕರಿಸಿದ ಕಾಯಿದೆಗಳನ್ನು ಜಮ್ಮು ಮತ್ತು ಕಾಶ್ಮೀರಕ್ಕೆ ಕಾಲಾಂತರದಲ್ಲಿ ವಿಸ್ತರಿಸಲಾಗಿದೆ.

  • ಅಖಿಲ ಭಾರತ ಸೇವೆಗಳ ಕಾಯ್ದೆ
  • ನೆಗೋಶಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್
  • ಕೇಂದ್ರ ವಿಜಿಲೆನ್ಸ್ ಆಯೋಗ ಕಾಯ್ದೆ
  • ಅಗತ್ಯ ಸರಕುಗಳ ಕಾಯಿದೆ[೧೨]
  • ಹಜ್ ಸಮಿತಿ ಕಾಯ್ದೆ
  • ಆದಾಯ ತೆರಿಗೆ ಕಾಯ್ದೆ[೧೩]
  • ಕೇಂದ್ರ ಕಾನೂನುಗಳು (ಜಮ್ಮು ಮತ್ತು ಕಾಶ್ಮೀರಕ್ಕೆ ವಿಸ್ತರಣೆ) ಕಾಯ್ದೆ, ೧೯೫೬
  • ಕೇಂದ್ರ ಕಾನೂನುಗಳು (ಜಮ್ಮು ಮತ್ತು ಕಾಶ್ಮೀರಕ್ಕೆ ವಿಸ್ತರಣೆ) ಕಾಯ್ದೆ, ೧೯೬೮

೩೭೦ನೇ ವಿಧಿಗೆ ಸಹಾಯ ಮಾಡುವ ಮೂಲಕ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ಕಾಯ್ದೆಯ ಅನ್ವಯಿಸದಿರುವಿಕೆಯನ್ನು ೨೦೧೦ರಲ್ಲಿ ನಿಗದಿಪಡಿಸಲಾಗಿದೆ.[೧೪][೧೫]

ವಿಧಿಯ ರದ್ದತಿ[ಬದಲಾಯಿಸಿ]

೩೭೦ ನೇ ವಿಧಿಯನ್ನು ರದ್ದುಪಡಿಸುವ ವಿಧೇಯಕವನ್ನು ಆಗಸ್ಟ್ ೫, ೨೦೧೯ (ಆಗಸ್ಟ್ 5, 2019) ರಂದು ಕೇಂದ್ರ ಗೃಹಸಚಿವ ಅಮಿತ್ ಶಾ ಮಂಡಿಸಿದರು. ವಿಧೇಯಕಕ್ಕೆ ರಾಜ್ಯಸಭೆಯಲ್ಲಿ ಅಂಗೀಕಾರ ದೊರಕಿತು.[೧೬] ಜಮ್ಮುಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿಯೂ, ಲಡಾಖ್ ಪ್ರದೇಶವನ್ನು ಮತ್ತೊಂದು ಕೇಂದ್ರಾಡಳಿತಪ್ರದೇಶವನ್ನಾಗಿಯೂ ಪರಿಗಣಿಸುವ ವಿಧಿಯೂ ಅಂಗೀಕೃತವಾಯಿತು.[೧೭] ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿ, 35ಎ ವಿಧಿಯನ್ನು ರದ್ದುಪಡಿಸುವ ಶಿಫಾರಸಿಗೆ ಸುಗ್ರೀವಾಜ್ಞೆ ಮೂಲಕ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಅಂಕಿತ ಹಾಕುವ ರದ್ದುಪಡಿಸಿದರು. ಇದು ದಿ ೬ ಆಗಸ್ಟ್ ೨೦೧೯ ಲೋಕಸಭೆ ಅಂಗೀಕರಿಸುವ ಮೂಲಕ ಅಂತಿಮ ಅಂಕಿತ ಪಡೆಯಿತು. ಹೀಗೆ ಜಾರಿಯಾದ ಅಧಿಸೂಚನೆಯ ನಿಯಮ ಖಾಯಂ ಆದಂತೆ ಆಯಿತು.[೧೮][೧೯] ಅದರೆ ರದ್ದತಿಗೆ ಕೊಟ್ಟ ಕಾರಣಗಳ ಬಗೆಗೆ ವಿವಾದ ಇದೆ.[೨೦]

ಜಮ್ಮು ಮತ್ತು ಕಾಶ್ಮಿರ ಕೇಂದ್ರಾಡಳಿತ ಪ್ರದೇಶವಾಗಿ ಪುನಾರಚನೆ[ಬದಲಾಯಿಸಿ]

  • ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರವನ್ನು ಕೇಂದ್ರ ಸರ್ಕಾರವು ಅಧಿಸೂಚನೆ ಮೂಲಕ ವಿಭಾಗಿಸಿ, ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಕ್‍ಗಳನ್ನು ಎರಡು ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಿದೆ. ಇದರಿಂದ ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ ಹೆಚ್ಚಿದೆ. ವಿಸ್ತೀರ್ಣದ ವಿಚಾರದಲ್ಲಿ ಕಾಶ್ಮೀರ ಈಗ ಅತಿದೊಡ್ಡ ಕೇಂದ್ರಾಡಳಿತ ಪ್ರದೇಶವಾಗಿದೆ. ಇದರ ಬಳಿಕ ಲಡಾಕ್ ದೊಡ್ಡ ಕೇಂದ್ರಾಡಳಿತ ಪ್ರದೇಶವಾಗಿದೆ. ಇದರಿಂದ ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ದೆಹಲಿ, ಪುದುಚೇರಿ, ದಿಯು ಮತ್ತು ದಮನ್, ದಾದ್ರಾ ಮತ್ತು ನಗರ ಹವೇಲಿ, ಚಂಡಿಗಡ, ಲಕ್ಷದ್ವೀಪ ಹಾಗೂ ಅಂಡಮಾನ್–ನಿಕೋಬಾರ್ ದ್ವೀಪ ಸಮೂಹಗಳು ಸದ್ಯ ಕೇಂದ್ರಾಡಳಿತಕ್ಕೆ ಒಳಪಟ್ಟಿವೆ. ದೆಹಲಿ ಹಾಗೂ ಪುದುಚೆರಿಯ ಜೊತೆಗೆ ಜಮ್ಮು–ಕಾಶ್ಮೀರ ವಿಧಾನಸಭೆ ಇರುವ ಕೇಂದ್ರಾಡಳಿತ ಪ್ರದೇಶವಾಗಿ ಸೇರ್ಪಡೆಯಾಗಿದೆ. ಮೊದಲಿನಂತೆ ವಿಧಾನಸಭೆ ಇರುವ ಕೇಂದ್ರಾಡಳಿತ ಪ್ರದೇಶಗಳಲ್ಲಿ ಲೆಫ್ಟಿನೆಂಟ್ ಗವರ್ನರ್ ಇರುತ್ತಾರೆ. ಈ ನಿಯಮ ರದ್ದಾದ ನಂತರ ಕಾಶ್ಮೀರದ ಪ್ರಜೆಗಳೂ ಭಾರತದ ಇತರ ರಾಜ್ಯಗಳ ಪ್ರಜೆಗಳಂತೆಯೇ ಹಕ್ಕು ಪಡೆಯುತ್ತಾರೆ. ವಿಶೇಷ ಹಕ್ಕುಗಳು ಇರುವುದಿಲ್ಲ. ಹಾಗೆಯೇ ಇತರ ರಾಜ್ಯಗಳ ಜನರಿಗೂ ಅಲ್ಲಿ ಎಲ್ಲಾ ಬಗೆಯ ಹಕ್ಕು ಇರುವುದು.[೨೧][೨೨][೨೩]
  • ಪೂರ್ವಾನ್ವಯವಾಗಿ ದಿ. 2019 ಅಕ್ಟೋಬರ್‌ 31ರಿಂದ ಜಾರಿಯಾಗುವಂತೆ ಜಮ್ಮು ಕಾಶ್ಮೀರ ಹಾಗೂ ಲಡಾಖ್‌ ಕೇಂದ್ರಾಡಳಿತ ಪ್ರದೇಶಗಳು ಅಸ್ತಿತ್ವಕ್ಕೆ ಬರುವಂತೆ ಜಮ್ಮು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸುವ ಮಸೂದೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು 9-8-2019 ಶುಕ್ರವಾರ ಸಹಿ ಮಾಡಿದ್ದಾರೆ.
  • ಈ ಆಜ್ಞೆಯಂತೆ ಜಮ್ಮು ಮತ್ತು ಕಾಶ್ಮೀರವು ಶಾಸನ ಸಭೆ ಸಹಿತವಾಗಿರುವ ಕೇಂದ್ರಾಡಳಿತ ಪ್ರದೇಶವಾಗಲಿದೆ. 'ಲಡಾಖ್‌' ಪ್ರದೇಶ ಚಂದಿಗಡದಂತೆ ಶಾಸನಸಭೆ ರಹಿತವಾದ ಕೇಂದ್ರಾಡಳಿತ ಪ್ರದೇಶವಾಗುವುದು. ಈಗ ಜಮ್ಮು ಕಾಶ್ಮೀರದ ಶಾಸನಸಭೆಯು ಗರಿಷ್ಠ 107 ಸದಸ್ಯರನ್ನು ಹೊಂದಿರುತ್ತದೆ. ಕ್ಷೇತ್ರ ಮರು ವಿಂಗಡಣೆಯ ಬಳಿಕ ಆ ಸಂಖ್ಯೆಯನ್ನು 114ಕ್ಕೆ ಹೆಚ್ಚಿಸಲು ಯೋಜಿಸಿದೆ. ಇಲ್ಲಿನ 24 ಕ್ಷೇತ್ರಗಳು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಭಾಗದಲ್ಲಿ ಬರುವುದರಿಂದ ಅವು ಖಾಲಿ ಉಳಿಯುತ್ತವೆ. ಕಾರ್ಗಿಲ್‌ ಮತ್ತು ಲೇಹ್‌ ಜಿಲ್ಲೆಗಳನ್ನು ಲಡಾಖ್‌ ಪ್ರದೇಶ ಒಳಗೊಂಡಿರುತ್ತದೆ. ಇನ್ನು ಲೋಕಸಭೆಯಲ್ಲಿ ಜಮ್ಮು ಕಾಶ್ಮೀರದ ಐವರು ಸದಸ್ಯರು ಹಾಗೂ ಲಡಾಖ್‌ನ ಒಬ್ಬ ಪ್ರತಿನಿಧಿ ಇರುತ್ತಾರೆ[೨೪]

ನೋಡಿ[ಬದಲಾಯಿಸಿ]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. en:Article 370 of the Constitution of India
  2. "ಆರ್ಕೈವ್ ನಕಲು". Archived from the original on 2019-07-08. Retrieved 2019-07-09.
  3. "Dilution of article 370: A sift through the C.O.272 & 273". itstheliar. 16 March 2020. Retrieved 17 March 2020.
  4. https://hidf1.files.wordpress.com/2011/02/the-story-of-the-integration-of-the-indian-states-by-v-p-menon.pdf
  5. https://www.deccanherald.com/content/440377/bjp-quiet-explained-article-370.html BJP is quiet since I explained Article 370 to Modi: Jethmalani Srinagar, Nov 8, 2014, (PTI), NOV 08 2014
  6. http://www.oxfordscholarship.com/view/10.1093/acprof:oso/9780198074083.001.0001/acprof-9780198074083
  7. http://economictimes.indiatimes.com/news/politics-and-nation/article-370-granting-special-status-to-the-state-is-permanent-jammu-and-kashmir-high-court/articleshow/49310080.cms
  8. http://www.deccanherald.com/content/440377/bjp-quiet-explained-article-370.html BJP is quiet since I explained Article 370 to Modi: Jethmalani Srinagar, Nov 8, 2014, (PTI), NOV 08 2014
  9. en:Article 370 of the Constitution of India#CITEREFCottrell, Kashmir: The vanishing autonomy2013
  10. https://books.google.com/books?id=rY9fAAAAQBAJ&pg=PT259
  11. en:Border Security Force
  12. en:Essential Commodities Act
  13. en:The Income-tax Act, 1961
  14. "ಆರ್ಕೈವ್ ನಕಲು". Archived from the original on 2015-12-03. Retrieved 2019-07-09.
  15. Mistake of Past Which is Ruining The present and will Hurt the Future;NOVEMBER 1, 2017 / DEEPAK DOGNEY-article 35A of our constitution which derives from article 370 in 1954.
  16. DelhiAugust 5, India Today Web Desk New; August 5, 2019UPDATED:; Ist, 2019 11:37. "No Article 370 for Jammu & Kashmir, historic move by Modi govt". India Today (in ಇಂಗ್ಲಿಷ್). Retrieved 2019-08-05. {{cite web}}: |first3= has numeric name (help)CS1 maint: extra punctuation (link) CS1 maint: numeric names: authors list (link)
  17. DelhiAugust5. "Jammu and Kashmir Live News: Article 370 to be revoked, J&K to be reorganised".{{cite web}}: CS1 maint: numeric names: authors list (link)
  18. https://www.udayavani.com/news-section/national-news/jammu-and-kashmir-to-be-union-territory-with-legislature-ladakh-to-be-ut-without-legislature ಸುಗ್ರೀವಾಜ್ಞೆ ಮೂಲಕ ಅಂಗೀಕಾರ; <---ನಾಗೇಂದ್ರ ತ್ರಾಸಿ, Aug 5, 2019,---!]
  19. ಜಾರಿಯಾದಾಗ ಪರಿಣಾಮಗಳು
  20. 370ನೇ ವಿಧಿ ರದ್ದುತಿ ನಂತರ ಮೋದಿ ಭಾಷಣ: ಆ ಮಾತುಗಳು ಪೂರ್ತಿ ಸತ್ಯವಲ್ಲ;; ಪ್ರಜಾವಾಣಿ;d: 10 ಸೆಪ್ಟೆಂಬರ್ 2019,
  21. https://www.prajavani.net/stories/national/jk-be-largest-ut-656140.html ಕಾಶ್ಮೀರ ಇನ್ನುಮುಂದೆ ಅತಿದೊಡ್ಡ ಕೇಂದ್ರಾಡಳಿತ ಪ್ರದೇಶ;ಪಿಟಿಐ; d: 06 ಆಗಸ್ಟ್ 2019,
  22. https://www.prajavani.net/stories/national/jammu-and-kashmir-divided-two-656084.html ಜಮ್ಮು ಕಾಶ್ಮೀರ ಎರಡು ಭಾಗವಾಯಿತು: ಏನು ಇದರ ಅರ್ಥ?;ಪ್ರಜಾವಾಣಿ ;d: 05 ಆಗಸ್ಟ್ 2019,
  23. https://www.prajavani.net/stories/national/jammu-and-kashmir-special-655958.html ಜಮ್ಮು ಮತ್ತು ಕಾಶ್ಮೀರ ವಿಶೇಷ ಸ್ಥಾನಮಾನ ರದ್ದತಿ ಪರಿಣಾಮಗಳೇನು?ಪ್ರಜಾವಾಣಿ ; d: 05 ಆಗಸ್ಟ್ 2019;
  24. https://www.prajavani.net/stories/national/president-approves-kashmir-657060.html ಕಾಶ್ಮೀರ ವಿಭಜನೆಗೆ ರಾಷ್ಟ್ರಪತಿ ಅನುಮೋದನೆ;ಪಿಟಿಐ;d: 10 ಆಗಸ್ಟ್ 2019,