ಮುಚುಕುಂದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮುಚುಕುಂದನು ರಾಜ ಮಾಂಧಾತನ ಮಗ ಮತ್ತು ಭಕ್ತ ಅಂಬರೀಷನ ತಮ್ಮ. ಇಕ್ಶ್ವಾಕು ವಂಶದ ಪ್ರಮುಖ ರಾಜ. ಮಹಾಭಾರತದಲ್ಲಿ ಮತ್ತು ಭಾಗವತ ಪುರಾಣದಲ್ಲಿ ಉಲ್ಲೇಖವಿರುವ ಪುರಾಣಪುರುಷ.

ಹುಟ್ಟು[ಬದಲಾಯಿಸಿ]

ಮುಚುಕುಂದನು ರಾಜ ಮಾಂಧಾತನ ಮಗ. ಕೃತಯುಗದಲ್ಲಿ ರಾಜ್ಯಭಾರ ಮಾಡಿದ ದೊರೆ.

ದೇವಸೇನೆಯ ನಾಯಕತ್ವ[ಬದಲಾಯಿಸಿ]

ದೇವಲೋಕದಲ್ಲಿ ಒಮ್ಮೆ ಯುದ್ಧವೊಂದರಲ್ಲಿ ಅಸುರರು ದೇವತೆಗಳನ್ನು ಸೋಲಿಸಿದರು. ಭಯಗೊಂಡ ದೇವತೆಗಳು ಮಹಾವೀರ ಮುಚುಕುಂದನ ಸಹಾಯ ಬೇಡಿದರು. ಮುಚುಕುಂದನು ದೇವತೆಗಳ ಸೇನೆಯ ನಾಯಕತ್ವ ವಹಿಸಿ ಬಹುಕಾಲ ಹೋರಾಡಿದನು. ಶಿವನ ಪುತ್ರ ಷಣ್ಮುಗಸ್ವಾಮಿಯು ಜನಿಸಿ ತಾರಕಾಸುರನನ್ನು ಕೊಂದು, ದೇವಸೇನೆಯ ನಾಯಕತ್ವ ವಹಿಸಿಕೊಂಡನು. ಅದಾಗ ಮುಚುಕುಂದನು ದೇವತೆಗಳ ಸೇನೆಯ ನಾಯಕತ್ವದಿಂದ ನಿವೃತ್ತಿ ಪಡೆದನು. ಮುಚುಕುಂದನನ್ನು ಬೀಳ್ಕೊಡುವಾಗ ದೇವಲೋಕದ ರಾಜ ಇಂದ್ರನು, ತನ್ನ ಮನದ ಇಚ್ಛೆಯನ್ನು ತಿಳಿಸುವಂತೆ ಮುಚುಕುಂದನಿಗೆ ಕೇಳುತ್ತಾನೆ. ಹರಿಯ ಭಕ್ತ ಮುಚುಕುಂದ ಮುಕ್ತಿಯನ್ನು ಬೇಡುತ್ತಾನೆ. ಮುಕ್ತಿಯನ್ನು ಶ್ರೀಮನ್ನಾರಾಯಮಣ ಮಾತ್ರ ಕರುಣಿಸುವನು ಎಂದು ತಿಳಿಸಿ, ಮುಕ್ತಿಯೊಂದನ್ನು ಬಿಟ್ಟು ಬೇರೆ ಯಾವುದೇ ವರ ಬೇಡುವಂತೆ ಮುಚುಕುಂದನಿಗೆ ಅನುಗ್ರಹಿಸಿದನು. ದೇವಲೋಕದ ಒಂದು ವರುಷ, ಭೂಲೋಕದಲ್ಲಿ ೩೬೦ ವರುಷಗಳಿಗೆ ಸಮ. ಹೀಗಾಗಿ, ಮುಚುಕುಂದನ ಸಹವರ್ತಿಗಳು ಕಾಲವಾಗಿರುತ್ತಾರೆ. ಬಹುಕಾಲ ಯುದ್ಧಗೈದು ಒಂದಿನಿತೂ ನಿದ್ದೆಯಿಲ್ಲದ ಮುಚುಕುಂದ ತಾನು ನಿದ್ರಿಸಬೇಕೆಂದೂ, ತನ್ನ ನಿದ್ರೆಗೆ ಭಂಗ ಮಾಡಿದವರು ಸುಟ್ಟು ಭಸ್ಮವಾಗಲಿ ಎಂದು ವರ ಬೇಡುತ್ತಾನೆ. ದೇವತೆಗಳು ಅವನ ಬೇಡಿಕೆಗೆ ತಥಾಸ್ತು ಎಂದು ಅದರಂತೆ ವರ ನೀಡುತ್ತಾರೆ.

ಭೂಮಿಗೆ ತೆರಳಿ, ಬೆಟ್ಟದ ಅಡಿಯಲ್ಲಿ ಇರುವ ಗುಹೆಯೊಂದರಲ್ಲಿ (ಐತಿಹ್ಯದ ಪ್ರಕಾರ ಇಂದಿನ ಗಿರ್ನಾರ್ ಬೆಟ್ಟ) ಮುಚುಕುಂದನು ಮಲಗುತ್ತಾನೆ.

ಕಾಲಯವನನ ಸಾವು[ಬದಲಾಯಿಸಿ]

ಮುಚುಕುಂದನು ತ್ರೇತಾಯುಗಕ್ಕಿಂತಲೂ ಮುಂಚಿನ ಕಾಲದವನು. ಸತ್ಯಯುಗ, ತ್ರೇತಾಯುಗ, ದ್ವಾಪರಯುಗಗಳನ್ನು ಪೂರ ಮುಚುಕುಂದನು ನಿದ್ರೆಯಲ್ಲಿಯೇ ಕಳೆಯುತ್ತಾನೆ. ಸಮಯದ ಅರಿವು ಮುಚುಕುಂದನಿಗೆ ಇರುವುದಿಲ್ಲ. ತ್ರೇತಾಯುಗದಲ್ಲಿ ಶ್ರೀರಾಮನೂ ಅವತಾರಗೈದು, ದ್ವಾಪರದಲ್ಲಿ ಶ್ರೀಕೃಷ್ಣನು ಅವತಾರಗೈದರೂ ಮುಚುಕುಂದನು ಇನ್ನೂ ನಿದ್ರೆಯಲ್ಲಿಯೇ ಇರುತ್ತಾನೆ.

ಮಹಾಭಾರತದ ಸಮಯದಲ್ಲಿ ಯವನ (ಮಗಧ ಎಂದು ಕೂಡ ಕರೆಯಲಾಗುವ) ದೇಶದಲ್ಲಿ ಯವಸೇನ ಎಂಬ ರಾಜನಿಗೆ ಕಾಲಯವನ ಎಂಬ ಮಗನು ಜನಿಸುತ್ತಾನೆ. ಕಾಲಯವನ ತನಗೆ ಯುದ್ಧದಲ್ಲಿ ಯಾರಿಂದಲೂ ಸೋಲಾಗಕೂಡದು ಎಂಬ ವರ ಪಡೆದು ಜನಮಾನಸಕ್ಕೆ ತೊಂದರೆ ನೀಡುತ್ತಾ ಇರುತ್ತಾನೆ.

ಜರಾಸಂಧನು ಶ್ರೀಕೃಷ್ಣನ ಮೇಲೆ ಸೇಡು ತೀರಿಸಿಕೊಳ್ಳಲು ಬಹಳ ಸಾರಿ ಮಥುರೆಗೆ ದಾಳಿಯಿಟ್ಟರೂ, ಶ್ರೀಕೃಷ್ಣನ ಮತ್ತು ಬಲರಾಮನ ಪೌರುಷದಿಂದ ಮಥುರಾ ನಗರಿ ಅಜೇಯವಾಗಿ ನಿಲ್ಲುತ್ತದೆ. ಜರಾಸಂಧನು ಕಾಲಯವನನ ಸಹಾಯ ಬೇಡುತ್ತಾನೆ. ಕಾಲಯವನ ಶ್ರೀಕೃಷ್ಣನ ಮೇಲೆ ಯುದ್ಧ ಮಾಡಲು ಮಥುರೆಗೆ ದಾಳಿ ಮಾಡುತ್ತಾನೆ.

ಶ್ರೀಕೃಷ್ಣನು ಕಾಲಯವನ ತನ್ನ ಮೇಲೆ ಆಕ್ರಮಣ ಮಾಡಬಂದಾಗ, ರಥದಿಂದ ಇಳಿದು ಬಹುದೂರ ನಡೆದುಹೋಗುತ್ತಾನೆ. ಯುದ್ಧವನ್ನು ಬಿಟ್ಟು, ಶ್ರೀಕೃಷ್ಣ ಒಬ್ಬನನ್ನು ಸದೆಬಡಿಯಲು ಕಾಲಯವನ, ಶ್ರೀಕೃಷ್ಣನನ್ನು ಬೆಂಬತ್ತುತ್ತಾನೆ. ಮುಚುಕುಂದನ ಗುಹೆಯಲ್ಲಿ ಕೃಷ್ಣನು ಮರೆಯಾಗಲು, ಕಾಲಯವನ ಅರಿಯದೆ ಮುಚುಕುಂದನ ನಿದ್ರೆಗೆ ಭಂಗ ಮಾಡುತ್ತಾನೆ. ಇಂದ್ರನ ವರದಂತೆ ಕಾಲಯವನ ಸುಟ್ಟು ಭಸ್ಮವಾಗುತ್ತಾನೆ.

ಶ್ರೀಕೃಷ್ಣನಿಂದ ಕಾಲದ ಅರಿವನ್ನು ಪಡೆವ ಮುಚುಕುಂದ, ಮೋಕ್ಷಪ್ರಾಪ್ತಿಗೆ ಮತ್ತು ಕಾಲಯವನನನ್ನು ಕೊಂದ ಪಾಪದ ಪರಿಹಾರಕ್ಕಾಗಿ ತಪಸ್ಸನ್ನು ಆಚರಿಸುತ್ತಾನೆ. ಮೊದಲು ಗಂಧಮಾದನ ಪರ್ವತಕ್ಕೆ, ನಂತರ ಬದರಿಕಾ ಆಶ್ರಮಕ್ಕೆ ತೆರಳಿ ಘೋರ ತಪಸ್ಸು ಮಾಡಿ, ಮೋಕ್ಷ ಪಡೆಯುತ್ತಾನೆ.

ಮುಚಿಕುಂದ ನದಿ[ಬದಲಾಯಿಸಿ]

ಒಂದು ಐತಿಹ್ಯದ ಪ್ರಕಾರ ಇಂದಿನ ತೆಲಂಗಾಣ ರಾಜ್ಯದ ರಂಗಾರೆಡ್ಡಿ ಜಿಲ್ಲೆಯಲ್ಲಿ ಇರುವ ಅನಂತಗಿರಿ ಬೆಟ್ಟದ ಬಳಿಯೇ ಮುಚುಕುಂದನು ನಿದ್ರೆ ಮಾಡಿದ್ದು. ಅನಂತಗಿರಿ ಬೆಟ್ಟದಲ್ಲಿ ಉದ್ಭವವಾಗುವ ನದಿಗೆ ಮುಚಿಕುಂದ ನದಿಯೆಂದೇ ಹೆಸರು, ಕಾಲಕ್ರಮೇಣ, ಮುಚಿಕುಂದ ನದಿಯ ಹೆಸರು ಮೂಸಿ ಎಂಬುದು ಪ್ರತೀತಿ.

ಹೊರಗಿನ ಕೊಂಡಿಗಳು[ಬದಲಾಯಿಸಿ]