ಅಣುಶಕ್ತಿವಿಭಾಗ, ಭಾರತದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಾಷ್ಟ್ರದ ಕಲ್ಯಾಣಕ್ಕಾಗಿ ಪರಮಾಣು (ಅಟಾಮಿಕ್) ಶಕ್ತಿಯನ್ನು ವೈಜ್ಞಾನಿಕವಾಗಿ ಬಳಸಿಕೊಳ್ಳುವ ಸಲುವಾಗಿ 1948ರಲ್ಲಿ ಭಾರತದ ಅಣುಶಕ್ತಿಮಂಡಲಿ (ವಾಸ್ತವದಲ್ಲಿ ಇದು ಪರಮಾಣು ಶಕ್ತಿ ಮಂಡಲಿ. ಹೆಚ್ಚು ಬಳಕೆಯಲ್ಲಿರುವುದು ಅಣುಶಕ್ತಿ ಎಂಬ ಪದ. ಹೀಗಾಗಿ ಪರಮಾಣು ಶಬ್ದ ಬಳಸಬೇಕಾದಲ್ಲೆಲ್ಲ ಅಣು ಎಂದು ಬಳಸಲಾಗಿದೆ) ರಚಿತವಾಯಿತು. ಪರಮಾಣುಶಕ್ತಿಯನ್ನು ವ್ಯವಸಾಯಕ್ಷೇತ್ರದಲ್ಲಿ, ಜೀವಶಾಸ್ತ್ರದ ಕ್ಷೇತ್ರದಲ್ಲಿ, ಕೈಗಾರಿಕಾ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಬಳಸಿಕೊಳ್ಳಲು ಐಸೊಟೋಪ್‍ಗಳೆಂಬ ಉಪವಸ್ತುಗಳ ತಯಾರಿಕೆ ಹಾಗೂ ಅವುಗಳನ್ನು ಬಳಸುವ ವಿಧಾನಗಳಿಗೆ ಸಂಬಂಧಿಸಿದ ಯೋಜನೆಗಳನ್ನು ಈ ಮಂಡಳಿ ರೂಪಿಸುತ್ತದೆ. ಎಲ್ಲ ಯೋಜನೆಗಳೂ ಅಣುಶಕ್ತಿ ವಿಭಾಗದ ವತಿಯಲ್ಲಿ ನಡೆಯುತ್ತವೆ.[೧]

ಇತಿಹಾಸ[ಬದಲಾಯಿಸಿ]

ಅಣುಶಕ್ತಿವಿಭಾಗವನ್ನು 1954 ರ ಆಗಸ್ಟ್‍ನಲ್ಲಿ ಸ್ಥಾಪಿಸಲಾಯಿತು. ಈ ವಿಭಾಗದ ಅಂಗವಾದ ಅಣುಶಕ್ತಿಮಂಡಲಿ 1955ರಲ್ಲಿ ಮುಂಬಯಿ ಹತ್ತಿರವಿರುವ ಟ್ರಾಂಬೆ ಎಂಬಲ್ಲಿ ಈಜುಕೊಳದ ಆಕಾರದಲ್ಲಿರುವ ಪರಮಾಣುರಿಯಾಕ್ಟರ್ ಒಂದನ್ನು ಸ್ಥಾಪಿಸಲು ತೀರ್ಮಾನ ಕೈಗೊಂಡಿತು. 1956ರಲ್ಲಿ ಭಾರತದ ಪ್ರಪ್ರಥಮ ಅಪ್ಸರಾ ಎಂಬ ಅಣುರಿಯಾಕ್ಟರ್ ಕೆಲಸಮಾಡಲು ಪ್ರಾರಂಭಿಸಿತು. 35ಲಕ್ಷ ರೂ. ಬೆಲೆ ಬಾಳುವ ಈ ರಿಯಾಕ್ಟರ್ ವ್ಯವಸಾಯದಲ್ಲಿ, ವೈದ್ಯಕೀಯ ಕ್ಷೇತ್ರದಲ್ಲಿ, ಕೈಗಾರಿಕೆಯಲ್ಲಿ ಹಾಗೂ ವಿಶ್ವವಿದ್ಯಾನಿಲಯಗಳು ನಡೆಸುವ ಸಂಶೋಧನೆಯಲ್ಲಿ ಅಗತ್ಯವಿರುವ ರೇಡಿಯೋ ಐಸೊಟೋಪ್‍ಗಳನ್ನು ತಯಾರಿಸುತ್ತಿದೆ. ಇದರ ಜೊತೆಗೆ ಅಲ್ಪಪ್ರಮಾಣದ ವಿದ್ಯುಚ್ಛಕ್ತಿಯನ್ನೂ ಒದಗಿಸುತ್ತಿದೆ. ಅಣುಶಕ್ತಿವಿಭಾಗ ಸ್ಥಾಪಿಸಿದ ಈ ರಿಯಾಕ್ಟರಿನಿಂದ ರಿಯಾಕ್ಟರ್‍ತಂತ್ರಶಾಸ್ತ್ರದಲ್ಲಿ ಅಲ್ಲಿನ ಸಿಬ್ಬಂದಿಗೆ ತರಬೇತಿಯನ್ನೂ ಪ್ರತಿಭಾವಂತ ಯುವಕರಿಗೆ ಭೌತವಿಜ್ಞಾನ, ಎಂಜಿನಿಯರಿಂಗ್ ಹಾಗೂ ಜೀವವಿಜ್ಞಾನದಲ್ಲಿ ಮೂಲಭೂತ ಸಂಶೋಧನೆಯನ್ನು ನಡೆಸಲು ಅನೇಕ ಉತ್ತಮ ಅವಕಾಶಗಳನ್ನೂ ಒದಗಿಸಿಕೊಡುತ್ತಿದೆ. ಅಣುಶಕ್ತಿವಿಭಾಗದ ವೈಜ್ಞಾನಿಕ ಹಾಗೂ ತಾಂತ್ರಿಕ ಕೆಲಸಕಾರ್ಯಗಳು ಅಟಾಮಿಕ್ ಎನರ್ಜಿ ಎಷ್ಟಾಬ್ಲಿಷ್‍ಮೆಂಟ್ಸ್ ಎಂಬ ಸಂಸ್ಥೆಯಲ್ಲಿ ವೈಜ್ಞಾನಿಕ ವಿಷಯಗಳ ಬಗ್ಗೆ ಮೂಲಭೂತ ಸಂಶೋಧನೆಗಳನ್ನೊಳಗೊಂಡಂತೆ ನಡೆಯುತ್ತಿವೆ. ಈ ಸಂಸ್ಥೆಯ ಹೆಸರನ್ನು 1966ರ ಮೇ ತಿಂಗಳಿನಿಂದ ಭಾಭಾ ಅಟಾಮಿಕ್ ರೀಸರ್ಚ್ ಸೆಂಟರ್ ಎಂದು ಅದರ ನಿರ್ದೇಶಕರಾಗಿದ್ದ ಹೋಮಿ ಜೆ ಭಾಭಾರವರ ಜ್ಞಾಪಕಾರ್ಥ ನಾಮಕರಣಮಾಡಲಾಯಿತು. ಜೊತೆಗೆ ಟ್ರಾಂಬೆ ಪರಮಾಣುಶಕ್ತಿ ಖನಿಜಗಳ ವಿಭಾಗವೂ ಈಚೆಗೆ ಕೆಲಸಮಾಡುತ್ತಿದೆ. ಅಣುಶಕ್ತಿ ವಿಭಾಗದ ಕಾರ್ಯಚಟುವಟಿಕೆಗಳು ಇಂಡಿಯನ್ ಅತ್ರ್ಸ್ ಲಿಮಿಟೆಡ್ ಮತ್ತು ಟ್ರಾವೆಂಕೂರ್ ಮಿನರಲ್ಸ್ ಲಿಮಿಟೆಡ್ ಎಂಬ ಸಂಸ್ಥೆಗಳ ಮೂಲಕ ನಡೆಯುತ್ತದೆ.[೨]

ಅಣುಶಕ್ತಿಮಂಡಲಿಯ ಆದೇಶದ ಮೇಲೆ ಭಾರತದ ಅಣುಶಕ್ತಿವಿಭಾಗ ಕೈಕೊಂಡಿರುವ ಇತರ ಪ್ರಗತಿಪರ ಕಾರ್ಯಕ್ರಮಗಳನ್ನು ಈ ಕೆಳಕಂಡಂತೆ ವಿಭಾಗಿಸಲಾಗಿದೆ[ಬದಲಾಯಿಸಿ]

1.ಪರಮಾಣು ಇಂಧನ ತಯಾರಿಕೆ : ವಿಕಿರಣಪಟು ವಸ್ತುಗಳಾದ ಯುರೇನಿಯಮ್ ಮತ್ತು ಥೋರಿಯಮ್ ವಸ್ತುಗಳ ತಯಾರಿಕೆ ಇದರ ಉದ್ದೇಶ. 2.ಪರಮಾಣು ವಿಕಿರಣಗಳ ಅಧ್ಯಯನಕ್ಕೆ ಬೇಕಾದ ಸಲಕರಣೆಗಳ ತಯಾರಿಕೆ. 3.ರೇಡಿಯೋ ಐಸೊಟೋಪ್‍ಗಳು : ಪರಮಾಣುಯುಗದ ಅತ್ಯಂತ ಉಪಯೋಗಕಾರಿಗಳಾದ ಈ ವಸ್ತುಗಳನ್ನು ಟ್ರಾಂಬೆಯಲ್ಲಿ ತಯಾರಿಸುತ್ತಿದ್ದಾರೆ. 4.ವಿಕಿರಣ ವೈದ್ಯಕೀಯ ಸಂಸ್ಥೆ : ಮುಂಬಯಿಯಲ್ಲಿದೆ. ಕಾಯಿಲೆಗಳನ್ನು ಪತ್ತೆ ಹಚ್ಚುವುದು ಹಾಗೂ ಅವುಗಳಿಗೆ ರೇಡಿಯೋ ಐಸೊಟೋಪ್‍ಗಳನ್ನು ಉಪಯೋಗಿಸಿ ಚಿಕಿತ್ಸೆ ನಡೆಸುವುದು-ಇತ್ಯಾದಿ ಈ ಸಂಸ್ಥೆಯ ಕೆಲಸಗಳು. 5.ಇಂಡಿಯನ್ ರೇರ್ ಅತ್ರ್ಸ್ ಲಿಮಿಟೆಡ್ ಮತ್ತು ಟ್ರಾವೆಂಕೂರ್ ಮಿನರಲ್ಸ್ ಲಿಮಿಟೆಡ್. 6.ಪರಮಾಣುವಿದ್ಯುತ್‍ಕೇಂದ್ರಗಳು : ಮುಂಬಯಿಗೆ 60 ಮೈಲಿ ದೂರದಲ್ಲಿರುವ ತಾರಾಪೂರ್ ಪರಮಾಣು ವಿದ್ಯತ್‍ಕೇಂದ್ರ 400 ಮೆಗಾ ವಾಟ್ ಶಕ್ತಿಯ ಉತ್ಪಾದನಾಸಾಮಥ್ರ್ಯವುಳ್ಳ ಉತ್ಪಾದನಾ ಸಾಮಗ್ರಿಯನ್ನು ಹೊಂದಿದೆ. ಮತ್ತೊಂದು ಪರಮಾಣುವಿದ್ಯುತ್‍ಕೇಂದ್ರ ರಾಜಾಸ್ಥಾನದ ಕೋಟಾಜಿಲ್ಲೆಯ ರಾಣಾಪ್ರತಾಪ್‍ಸಾಗರ್ ಎಂಬ ಸ್ಥಳದಲ್ಲಿದೆ. ಮತ್ತೊಂದು ಪರಮಾಣುವಿದ್ಯುತ್‍ಕೇಂದ್ರವನ್ನು ಮದ್ರಾಸ್ ರಾಜ್ಯದ ಮಹಾಬಲಿಪುರಂ ಹತ್ತಿರವಿರುವ ಕಲ್ಪಾಕಂ ಎಂಬಲ್ಲಿ ಸ್ಥಾಪಿಸಲಾಗಿದೆ.

7.ಆಂತರಿಕ್ಷ ಸಂಶೋಧನೆ[ಬದಲಾಯಿಸಿ]

ಆಂತರಿಕ್ಷ ಸಂಶೋಧನೆಯಲ್ಲಿ ಭಾರತವೂ ಕೆಲಸ ನಡೆಸಿ ಗಮನಾರ್ಹ ಪ್ರಗತಿ ಸಾಧಿಸಿದೆ. ರಾಕೆಟ್ಟುಗಳನ್ನು ವಾತಾವರಣದ ಬಹು ಎತ್ತರಕ್ಕೆ ಕಳುಹಿಸಿ ಅಲ್ಲಿನ ವಿದ್ಯಮಾನಗಳನ್ನು ಅಧ್ಯಯನ ಮಾಡುವ ಸಲುವಾಗಿ ಇಂಡಿಯನ್ ನ್ಯಾಷನಲ್ ಕಮಿಟಿ ಆನ್ ಸ್ಪೇಸ್ ರೀಸರ್ಚ್ ಎಂಬ ಒಂದು ಮಂಡಲಿಯನ್ನು ಅಣುಶಕ್ತಿವಿಭಾಗ ಸ್ಥಾಪಿಸಿದೆ. 1963ರ ನವೆಂಬರ್ 21ರಿಂದ ಕೇರಳದ ತುಂಬಾ ಈಕ್ವಿಡೋರಿಯಲ್ ರಾಕೆಟ್ ಸೆಂಟರ್ ಎಂಬ ಸ್ಥಳದಿಂದ ಪರೀಕ್ಷಾರ್ಥ ರಾಕೆಟ್‍ಗಳನ್ನು ಹಾರಿಸಲಾಗುತ್ತಿದೆ. ಅಂತರಿಕ್ಷದ ಅಧ್ಯಯನದಲ್ಲಿ ಈ ಮಂಡಲಿ ಇತ್ತೀಚೆಗೆ ಸಾಧಿಸಿರುವ ಪ್ರಗತಿ ಗಮನಾರ್ಹವಾಗಿದ್ದು ಬಾಹ್ಯಾಕಾಶ ಸಂಶೋಧನೆಯ ಸಲುವಾಗಿ ಭಾರತ ತನ್ನದೇ ಆದ ಕೃತಕ ಭೂ ಉಪಗ್ರಹಗಳನ್ನು ಹಾರಿಸುವ ಪ್ರಯತ್ನ ನಡೆಸುತ್ತಿದೆ.

8.ಸಂಶೋಧನಾವೇತನ ಹಾಗೂ ಆರ್ಥಿಕ ನೆರವು[ಬದಲಾಯಿಸಿ]

ಪರಮಾಣುವಿಜ್ಞಾನದ ವಿಭಾಗದಲ್ಲಿ ಸಾಕಷ್ಟು ಸಂಶೋಧನೆಗಳು ನಡೆಯುವಂತೆ ದೇಶದ ಪ್ರತಿಭಾವಂತ ಯುವಕರನ್ನು ಬಳಸಿಕೊಂಡು ಅಗತ್ಯವಾದ ತರಬೇತಿಯನ್ನು ನೀಡಲು ಅಣುಶಕ್ತಿ ವಿಭಾಗ ಒಂದು ವ್ಯವಸ್ಥೆಯನ್ನು ಮಾಡಿದೆ. ಮುಂಬಯಿಯಲ್ಲಿರುವ ಟಾಟಾ ಇಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರೀಸರ್ಚ್ ಸಂಸ್ಥೆಯಲ್ಲಿ ಈ ಯೋಜನೆ ಕಾರ್ಯಗತವಾಗಿದೆ. ಇಲ್ಲಿ ಭೌತವಿಜ್ಞಾನ, ಗಣಿತವಿಜ್ಞಾನ, ರಸಾಯನವಿಜ್ಞಾನ, ಜೀವವಿಜ್ಞಾನ ಮೊದಲಾದ ವಿಷಯಗಳಿಗೆ ಸಂಬಂಧಿಸಿದಂತೆ ಪ್ರತಿಭಾವಂತರು ಕೈಗೊಳ್ಳುವ ಸಂಶೋಧನೆಗಳಿಗೆ ವಿದ್ಯಾರ್ಥಿವೇತನಗಳನ್ನು ಕಲ್ಪಿಸಲಾಗಿದೆ. ಇದಲ್ಲದೆ ಆರ್ಥಿಕ ನೆರವನ್ನು ಪಡೆದು ಅಣುಶಕ್ತಿಯ ಬಗ್ಗೆ ಅಧ್ಯಯನ ಸಂಶೋಧನೆಗಳನ್ನು ನಡೆಸುತ್ತಿರುವ ಇತರ ಸಂಸ್ಥೆಗಳೆಂದರೆ ಕಲ್ಕತ್ತೆಯಲ್ಲಿರುವ ಸಹಾ ಇನ್‍ಸ್ಟಿಟ್ಯೂಟ್ ಆಫ್ ನ್ಯೂಕ್ಲಿಯರ್ ಫಿಸಿಕ್ಸ್ ಮತ್ತು ಅಹಮದಾಬಾದಿನಲ್ಲಿರುವ ಫೆಸಿಕಲ್ ರೀಸರ್ಚ್ ಲ್ಯಾಬೊರೇಟರಿ. ಇವಲ್ಲದೆ ಕಾಶ್ಮೀರದಲ್ಲಿ ಚೆನ್ನೈನಲ್ಲಿ ಇತರ ಸಂಶೋಧನೆ ಮತ್ತು ಅಧ್ಯಯನ ಕೇಂದ್ರಗಳು ವಿಭಾಗದ ನೆರವಿನಿಂದ ಸ್ಥಾಪಿತವಾಗಿವೆ ಹಾಗೂ ಸ್ಥಾಪಿತವಾಗಲಿವೆ.

9. ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಭಾರತದ ಶಾಂತಿಯುತ ಪರಮಾಣು ಸ್ಫೋಟನೆ 1974ರ ಮೇ 18ರಂದು ರಾಜಾಸ್ತಾನದ ಥಾರ್ ಮರುಭೂಮಿಯಲ್ಲಿನ ಪೋಖ್ರಾನ್‍ನಲ್ಲಿ ಜರುಗಿತು. ಸುಮಾರು ಹನ್ನೆರಡರಿಂದ ಹದಿನೈದು ಸಾವಿರ ಕಿಲೋಗ್ರಾಂ ತೂಕದ ಟ್ರೈನೈಟ್ರೊ ಟಾಲೀನ್ ಎಂಬ ದಕ್ಷ ರಾಸಾಯನಿಕ ಸ್ಫೋಟಿಕ ವಸ್ತುವನ್ನು ಆಸ್ಫೋಟಿಸುವುದರಿಂದ ಉತ್ಪನ್ನವಾಗುವಷ್ಟೇ ಸ್ಫೋಟಕ ಶಕ್ತಿಯು ಒಂದು ದೊಡ್ಡ ಉಂಡೆಯಷ್ಟಿದ್ದ ಪ್ಲೂಟೋನಿಯಮ್ ವಿದಲನದಿಂದ ಹೊರಹೊಮ್ಮಿತು.

ಉಲ್ಲೇಖಗಳು[ಬದಲಾಯಿಸಿ]

  1. http://www.indiamart.com/proddetail/siemens-process-protection-instruments-8432032312.html[ಶಾಶ್ವತವಾಗಿ ಮಡಿದ ಕೊಂಡಿ]
  2. "ಆರ್ಕೈವ್ ನಕಲು". Archived from the original on 2016-10-25. Retrieved 2016-10-26.