ಗುಡಗುಂಟಿ ಪಾಳೆಯಗಾರರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನಲ್ಲಿ ಲಿಂಗಸುಗೂರಿಗೆ 19ಕಿಮೀ ದೂರದಲ್ಲಿರುವ (ಸು.3 ಶತಮಾನಗಳ ಕಾಲ ಆಳಿದ) ಗುಡಗುಂಟಿಯ ಒಂದು ಸ್ಥಳೀಯ ಅರಸು ಮನೆತನ. ಇವರು ಗೋಸಲ ವಂಶದವರು.

ಇತಿಹಾಸ[ಬದಲಾಯಿಸಿ]

ಜಕ್ಕಪ್ಪದೇಸಾಯಿ ಹಿರಿಯ ಮಗ. ಗಡ್ಡಿಲಿಂಗನಾಯಕ ಈ ಮನೆತನದ ಸ್ಥಾಪಕ. ಈ ಸಂದರ್ಭದಲ್ಲಿ ಕಕ್ಕೇರಿ ಪ್ರದೇಶ ಬಿಜಾಪುರಆದಿಲ್ಶಾಹಿಗಳ ಸಾಮ್ರಾಜ್ಯದ ವ್ಯಾಪ್ತಿಗೆ ಒಳಪಟ್ಟಿದ್ದರಿಂದ ಗಡ್ಡಿಲಿಂಗನಾಯಕ ಗುಡಗುಂಟಿ ಪರಗಣದ ಸರದೇಸಾಯಿಯಾಗಿ ಬಡ್ತಿ ಹೊಂದಿ ಆಳಿಕೆ ಪ್ರಾರಂಭಿಸಿದ. ಇವನು ಬಿಜಾಪುರದ ಆದಿಲ್ಶಾಹಿಗಳ ಜೊತೆ ಹೋದಾಗ ಷೇಖ್ಮಿನಹಾಜ ಸರದಾರನಿಂದ ಕೊಲ್ಲಲ್ಪಟ್ಟ. ಅನಂತರ ಪಾಮನಾಯಕ, ಲಿಂಗನಾಯಕ, ಜಡಿಸೋಮಪ್ಪನಾಯಕ ಅನುಕ್ರಮವಾಗಿ ಆಡಳಿತ ನಡೆಸಿದರು. ಜಡಿಸೋಮಪ್ಪನಾಯಕ ಬಿಜಾಪುರದಲ್ಲಿ ತನ್ನ ಶೌರ್ಯ ಸಾಹಸಗಳನ್ನು ಪ್ರದರ್ಶಿಸಿದ್ದಕ್ಕಾಗಿ ಸರ್ಜಾಬಹಾದ್ದೂರ್ ಎಂಬ ಬಿರುದು ಪಡೆದ. ಈತನಿಗೆ 1669ರಲ್ಲಿ 2ನೆಯ ಅಲಿ ಆದಿಲ್ಷಾನಿಂದ ಒಂದು ಫಾರಸಿ ಸನ್ನದು ದೊರಕಿತ್ತು. ಅನಂತರ 2ನೆಯ ಲಿಂಗನಾಯಕ, ಸೋಮಪ್ಪನಾಯಕ, ಸೋಮಲಿಂಗನಾಯಕ, ರಾಣಿ ಕಾಟಮ್ಮ ಆಳಿಕೆ ಮಾಡಿದರು. ಕೊನೆಯ ಅರಸ ಜಡಿಸೋಮಪ್ಪನಾಯಕ (1901-48). ಇವನಿಗೆ ತಿಪ್ಪರಾಜಾ ಸರ್ಜಾಬಹುದ್ದೂರ್ ಎಂಬ ಬಿರುದಿತ್ತು.

ಆಡಳಿತ[ಬದಲಾಯಿಸಿ]

ಆಡಳಿತದ ಅನುಕೂಲಕ್ಕಾಗಿ ಮೌಲ್, ಫೌಜದಾರಿ, ದಿವಾನಿ, ಪೊಲೀಸ್ ಎಂಬ ನಾಲ್ಕು ವಿಭಾಗಗಳಿದ್ದವು. ಪ್ರಜೆಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದ ಇವರು ಸರ್ವಧರ್ಮ ಸಹಿಷ್ಣುಗಳಾಗಿದ್ದರು. ಇವರು ಎಲ್ಲಾ ಧರ್ಮದವರನ್ನು ಸಮಾನ ದೃಷ್ಟಿಯಿಂದ ಕಾಣುತ್ತಿದ್ದರು.

ಕೊಡುಗೆ[ಬದಲಾಯಿಸಿ]

ಕಕ್ಕೇರಿಯ ಸೋಮನಾಥ ಇವರ ಕುಲದೈವ. ಗುಡಗುಂಟಿಯ ಅಮರೇಶ್ವರ ಆರಾಧ್ಯ ದೈವ. ಪ್ರತಿವರ್ಷ ನಡೆಯುವ ಅಮರೇಶ್ವರನ ರಥೋತ್ಸವದಲ್ಲಿ ಈ ಮನೆತನದ ಪ್ರಭುಗಳು ಫಲಪುಷ್ಪಗಳನ್ನು ಅರ್ಪಿಸಿದ ಬಳಿಕವೇ ರಥ ಸಾಗುತ್ತಿತ್ತು. ಇದು ಇಂದಿಗೂ ಮುಂದುವರೆದಿದೆ. ಇವರು ಕಲೆ, ವಾಸ್ತುಶಿಲ್ಪಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ. ಅನೇಕ ದೇವಾಲಯ, ಮಸೀದಿ, ಕೋಟೆ, ಕೆರೆ, ಬಾವಿಗಳನ್ನು ನಿರ್ಮಿಸಿದ್ದಾರೆ. ಇವರು ನಿರ್ಮಿಸಿದ ಅರಮನೆ ಇಂದಿಗೂ ಸುಸಜ್ಜಿತವಾಗಿದೆ. ಇಲ್ಲಿಯ ರಂಗಮಹಲ್ ಮತ್ತು ದರ್ಬಾರ್ ಹಾಲ್ಗಳು ಸೊಗಸಾಗಿವೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: