ಕೊಂಡಜ್ಜಿ ಬಸಪ್ಪ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜೀವನಚರಿತ್ರೆ[ಬದಲಾಯಿಸಿ]

ಶ್ರೀ ಕೊಂಡಜ್ಜಿ ಬಸಪ್ಪನವರು (ಭಾರತ ಸಂಜಾತ (ಜನನ), ಕೊಂಡಜ್ಜಿ, 1915 ಡಿ. 11- ಮರಣ 1982 ನ. 14, ಬೆಂಗಳೂರು ಕರ್ನಾಟಕ, ಭಾರತ) ಇವರು ಕರ್ನಾಟಕದ ರಾಜಕಾರಣಿ ಮತ್ತು ಕರ್ನಾಟಕದ ಸ್ಕೌಟ್ಸ್ ಮತ್ತು ಗೈಡ್ಸ್ ಚಳುವಳಿ ನಾಯಕರಾಗಿದ್ದರು.
ಕೊಂಡಜ್ಜಿ. ಇದು ಹರಿಹರ- ದಾವಣಗೆರೆಗೆ ಸರಿಸಮಾನ ದೂರದ ಒಂದು ಸಾಧಾರಣ ಹಳ್ಳಿ. ಆದರೆ ಇದಕ್ಕೆ ಇಂದು ಅಂತರರಾಷ್ಟ್ರೀಯ ಸ್ಕೌಟ್ಸ್ ಮತ್ತು ಗೈಡ್ಸ್ ಸಂಘಟನೆಯ ಮಟ್ಟದಲ್ಲಿ ಹೆಸರು ಪಡೆದಿದ್ದು ‘ಅದರ ಕಾರಣಕರ್ತರು ಅದೇ ಗ್ರಾಮದವರಾದ ಕೊಂಡಜ್ಜಿ ಬಸಪ್ಪನವರು. ಅವರು ರಾಜಕಾರಣಿಯಾಗಿದ್ದರೂ ಅದನ್ನೂ ಮೀರಿ ಬೆಳೆದವರು
ಅವರು ಜನಿಸಿದ್ದು ಸಾಧಾರಣ ಕುಟುಂಬದಲ್ಲಿ. ಕಷ್ಟಪಟ್ಟು, ಅವರಿವರ ಸಹಾಯದಿಂದ ಓದಿ ಮುಂದೆ ಬಂದವರು ಅವರು. ಕೊಂಡಜ್ಜಿ ಬಸಪ್ಪ ಬೆಂಗಳೂರು ವಿಶ್ವವಿದ್ಯಾನಿಲಯದಿಂದ ವಿಜ್ಞಾನದ ಪದವೀಧರರು ಮತ್ತು ಪುಣೆ ವಿಶ್ವವಿದ್ಯಾಲಯದ ಲ್ಲಿ ಎಲ್.ಎಲ್.ಬಿ.ಕಾನೂನು ಪದವಿ ಪಡೆದು ವಕೀಲಿ ವೃತ್ತಿಗೆ ಕಾಲಿಟ್ಟರು. ಕರ್ನಾಟಕದಲ್ಲಿ ಸ್ಕೌಟ್ ಮತ್ತು ಗೈಡ್ ಚಳವಳಿಯ ಪ್ರಚಾರಕ್ಕಾಗಿ ಸಕ್ರಿಯ ಪಾತ್ರವನ್ನು ವಹಿಸಿದರು. 1962 ರಲ್ಲಿ ರಾಜಕೀಯ ಪ್ರವೇಶಿಸಿದರು ಆದರೆ ಎರಡೇ ವರ್ಷದಲ್ಲಿ ಬಹಳ ಜನಾನುರಾಗಿಯಾದರು ಎಂದರೆ ಜಿಲ್ಲಾ ಬೋರ್ಡ್ ಚುನಾವಣೆಗೆ ನಿಂತು ಸುಲಭದಲ್ಲಿ ಗೆದ್ದರು.


ಆರಂಭಿಕ ಸಾಧನೆಗಳು[ಬದಲಾಯಿಸಿ]

ಕೇವಲ 29ನೇ ವರ್ಷದಲ್ಲೇ (1944) ಚಿತ್ರದುರ್ಗ ಜಿಲ್ಲಾ ಬೋರ್ಡ್ ಅಧ್ಯಕ್ಷರಾದ ಹೆಗ್ಗಳಿಕೆ ಅವರದು. ಅಧಿಕಾರ ಎನ್ನುವುದು ಜನರ ಸೇವೆಗೊಂದು ಅವಕಾಶ ಎಂಬ ತತ್ವವನ್ನು ನಂಬಿ ಅದರಂತೆ ನಡೆದುಕೊಂಡರು. ಅವರ ಅಧಿಕಾರದ ಅವಧಿಯಲ್ಲೇ ಚಿತ್ರದುರ್ಗದ ಎಲ್ಲ ತಾಲ್ಲೂಕುಗಳಲ್ಲೂ ಪ್ರೌಢಶಾಲೆಗಳು, ಆಸ್ಪತ್ರೆಗಳು ಸ್ಥಾಪನೆಯಾದವು. ದಾವಣಗೆರೆ, ಚಿತ್ರದುರ್ಗಕ್ಕೆ ಕಾಲೇಜು ಬರುವಂತೆ ಮಾಡಿದರು.
ನಾಲ್ಕು ವರ್ಷಗಳ ನಂತರ ಮತ್ತೆ ವಕೀಲಿ ವೃತ್ತಿಗೆ ಮರಳಿದರು. 1962ರ ಸಾರ್ವತ್ರಿಕ ಚುನಾವಣೆಯಲ್ಲಿ ವಿಧಾನಸಭೆಗೆ ಚುನಾಯಿತರಾಗಿ ಎಸ್. ನಿಜಲಿಂಗಪ್ಪನವರ ಸಂಪುಟದಲ್ಲಿ ಅಬಕಾರಿ, ಸಹಕಾರ, ವಾರ್ತಾ ಖಾತೆಗಳ ಉಪ ಸಚಿವರಾದರು. ಕಾಂಗ್ರೆಸ್ ವಿಭಜನೆ ನಂತರ 1971ರಲ್ಲಿ ದಾವಣಗೆರೆ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಉಪ ಸಚಿವರಾದರು.ಅವರ ಕಾಲದಲ್ಲೇ ಕುಷ್ಠರೋಗ ನಿವಾರಣಾ ಕೇಂದ್ರ ಕರ್ನಾಟಕದಲ್ಲಿ ಆರಂಭವಾಯಿತು.
ಅವರು ಸ್ವಾರ್ಥವನ್ನು ದೂರ ಇಟ್ಟವರು ಕೊಂಡಜ್ಜಿ ಬಸಪ್ಪನವರು ನಿಜವಾದ ಅರ್ಥದಲ್ಲಿ ಅವರು ಗಾಂಧಿವಾದಿ, ಸಮಾಜವಾದಿ. ಕೇಂದ್ರದಲ್ಲಿ ಆರೋಗ್ಯ ಖಾತೆ ಉಪ ಮಂತ್ರಿಯಾಗಿದ್ದ 32 ತಿಂಗಳಲ್ಲಿ ನಾನಾ ಯೋಜನೆಗಳ ವಿದೇಶಗಳಲ್ಲಿ ಹೆಚ್ಚಿನ ವ್ಯಾಸಂಗಕ್ಕಾಗಿ ಕರ್ನಾಟಕದ 3೦ ಹೆಚ್ಚು ವೈದ್ಯರನ್ನು ಆಯ್ಕೆ ಮಾಡಿ ಕಳಿಸಿಕೊಟ್ಟಿದ್ದರು.
ಅವರನ್ನು ಹತ್ತಿರದಿಂದ ಕಂಡವರು ಹೇಳುವ ಪ್ರಕಾರ,ಅವರ ಏಕೈಕ ಮಗಳ ಮದುವೆಗೆ ಹಣ ಹೊಂದಿಸಲಾಗದೆ ಸಾಲ ಮಾಡಿದ್ದರು. 7 ಗಂಡು ಮಕ್ಕಳಿಗೂ ವಿದ್ಯೆ ಕೊಡಿಸಿದರೇ ಹೊರತು ಹಣ, ಆಸ್ತಿ ಕೂಡಿಡಲಿಲ್ಲ. ಸಂಸದರಾಗಿದ್ದಾಗ ಕಾರು ಕೊಳ್ಳಲು ಬ್ಯಾಂಕ್‌ನಿಂದ ಸಾಲ ಪಡೆದಿದ್ದರು. ಆದರೆ ಕಂತು ಕಟ್ಟಲು ಕಷ್ಟವಾಗಿ ಮರು ವರ್ಷವೇ ಕಾರು ಮಾರಿದ್ದರು.

ಸ್ಕೌಟ್ಸ್ ಮತ್ತು ಗೈಡ್ಸ್ ಸಂಘಟನೆ[ಬದಲಾಯಿಸಿ]

ರಾಜಕಾರಣಕ್ಕಿಂತಲೂ ಅವರಿಗೆ ಹೆಚ್ಚು ಪ್ರಿಯವಾಗಿದ್ದ ಕ್ಷೇತ್ರ ಸ್ಕೌಟ್ಸ್ ಮತ್ತು ಗೈಡ್ಸ್ ಸಂಘಟನೆ. ಶಾಲಾ ಮಕ್ಕಳಲ್ಲಿ ಸ್ವಯಂಸೇವೆ, ಶಿಸ್ತು, ಸಜ್ಜನಿಕೆ, ಉತ್ತಮ ನಡೆನುಡಿ, ಸೇವಾ ಮನೋಭಾವ, ಧೈರ್ಯ, ಸಾಹಸ ಪ್ರವೃತ್ತಿ ಮುಂತಾದ ಗುಣಗಳನ್ನು ಬೆಳೆಸಲು ವಿಶ್ವಮಟ್ಟದಲ್ಲಿ ಹುಟ್ಟಿಕೊಂಡ ಈ ಆಂದೋಲನದಲ್ಲಿ ಅವರು ತಮ್ಮನ್ನು ಪೂರ್ಣ ಮಟ್ಟದಲ್ಲಿ ತೊಡಗಿಸಿಕೊಂಡರು.
ಅದರಲ್ಲಿ ಎಷ್ಟರ ಮಟ್ಟಿಗೆ ತೊಡಗಿಸಿಕೊಂಡರು ಎಂದರೆ ತಾವೇ ಆರ್ಥಿಕವಾಗಿ ಕಷ್ಟದಲ್ಲಿದ್ದರೂ ತಮ್ಮ ಅಲ್ಪ ಸ್ವಲ್ಪ ದುಡಿಮೆಯನ್ನೂ ಸ್ಕೌಟ್ಸ್ ಮತ್ತು ಗೈಡ್ಸ್ ಸಂಘಟನೆಗೆ ಧಾರೆ ಎರೆದರು. ವಿದ್ಯಾರ್ಥಿ ದೆಸೆಯಿಂದಲೆ ಸ್ಕೌಟ್ ಸಂಪರ್ಕ ಹೊಂದಿದ್ದರು. ಓದು ಮುಗಿಸಿ ದಾವಣಗೆರೆಯಲ್ಲಿ ವಕೀಲಿ ವೃತ್ತಿಗೆ ಇಳಿದ ಬಸಪ್ಪ 1950ರಲ್ಲಿ ಅಲ್ಲಿಯೇ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಕಮೀಷನರ್ ಆದರು. 68 ರಿಂದ ಆರಂಭಿಸಿ 82ರಲ್ಲಿ ನಿಧನರಾಗುವವರೆಗೂ ರಾಜ್ಯದ ಸ್ಕೌಟ್ಸ್ ಮತ್ತು ಗೈಡ್ಸ್ ಪ್ರಧಾನ ಆಯುಕ್ತರಾಗಿದ್ದರು.
ಬದುಕಿನ ಕೊನೆಯ ಕ್ಷಣದವರೆಗೂ ಸ್ಕೌಟ್ಸ್ ಮತ್ತು ಗೈಡ್ಸ್ ಅವರ ಅನುದಿನದ ಉಸಿರಾಗಿತ್ತು. ಎಷ್ಟೋ ಸಲ ಸ್ಕೌಟ್ಸ್ ಕಚೇರಿಗೆ ಮಗನ ಸ್ಕೂಟರ್‌ನಲ್ಲಿಯೇ ಹೋಗಿ ಬರುತ್ತಿದ್ದರು. ಎಂದೂ ಪ್ರಯಾಣ ವೆಚ್ಚವಾಗಲಿ, ಮಾಸಿಕ ಗೌರವ ಧನವನ್ನಾಗಲೀ ಪಡೆದವರಲ್ಲ. ಸ್ಕೌಟ್ ಸಂಸ್ಥೆಗೆ ಸಲ್ಲಿಸಿದ ಸೇವೆಗಾಗಿ 1976ರಲ್ಲಿ ಅವರನ್ನು ಬೆಂಗಳೂರಿನಲ್ಲಿ ಸನ್ಮಾನಿಸಿ 1 ಲಕ್ಷ ರೂಪಾಯಿ ಹಮ್ಮಿಣಿ ಅರ್ಪಿಸಲಾಗಿತ್ತು. ಅದೆಲ್ಲವನ್ನೂ ಅದೇ ಸಮಾರಂಭದಲ್ಲಿ ಸ್ಕೌಟ್ಸ್‌ಗೇ ಬಳಸುವಂತೆ ಹೇಳಿ ದಾನ ಮಾಡಿದರು.

ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಶಿಕ್ಷಣ ಸಂಸ್ಥೆ[ಬದಲಾಯಿಸಿ]

ದೊಡ್ಡಬಳ್ಳಾಪುರದಲ್ಲಿನ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿ ಶಿಕ್ಷಣ ಸಂಸ್ಥೆ ಸರ್ವಸಜ್ಜಿತವಾಗಿ ಬೆಳೆಯುವಲ್ಲಿ ಕೊಂಡಜ್ಜಿಯವರ ಸೇವೆ ಅನುಪಮ. ಇಂಥದೇ ಅನುಕೂಲ ಉತ್ತರ ಕರ್ನಾಟಕದಲ್ಲೂ ಬೇಕು ಎಂದುಕೊಂಡು ತಮ್ಮ ಹುಟ್ಟೂರು ಕೊಂಡಜ್ಜಿಯನ್ನು ಆಯ್ಕೆ ಮಾಡಿದರು. ದಾನಿಗಳ ನೆರವಿನಿಂದ ಅಲ್ಲಿನ ಕೆರೆಯ ಸುತ್ತ ಅವರು ಬೆಳೆಸಿದ ಈ ಸುಸಜ್ಜಿತ ತರಬೇತಿ ಕೇಂದ್ರಕ್ಕೆ ಅವರದೇ ಹೆಸರಿಡಲಾಗಿದೆ. ಅವರ ಬದುಕು ಸೇವೆಗಳನ್ನು ಕುರಿತ ಅನೇಕ ಕೃತಿಗಳು ಬಂದಿವೆ.

ಗಣ್ಯರ ಮೆಚ್ಚುಗೆ[ಬದಲಾಯಿಸಿ]

ಗೊ.ರು.ಚನ್ನಬಸಪ್ಪ ಅವರ ಆತ್ಮೀಯವಾಗಿ ಅವರಿಗೆ ಒಂದು ಚತುಷ್ಪದಿಯಲ್ಲಿ ಅಭಿನಂದನೆಅಭಿನಂದನೆ ಸಲ್ಲಿಸಿದ್ದಾರೆ:
ಮರದ ತುದಿ ಎಷ್ಟಿದೆಯೊ ಅಷ್ಟೇ ಎತ್ತರ ಬೆಳೆದು
ನೆಲದ ಮೇಲೆಯೇ ನಿಂತು ತುದಿ ಮುಟ್ಟಿದಿರಿ ನೀವು!
ನಿಮ್ಮ ರೀತಿಯೇ ಬೇರೆ
ಗೆದ್ದ ಹಿಗ್ಗಿಲ್ಲ; ಸೋತ ಸಂಕಟವಿಲ್ಲ!

♠♠♠♠♠

ಎಸ್.ನಿಜಲಿಂಗಪ್ಪನವರ ಮಾತು ಕೊಂಡಜ್ಜಿ ಬಸಪ್ಪನವರ ಬದುಕನ್ನು ಕೆಲವೇ ಅಕ್ಷರಗಳಲ್ಲಿ ನಿರೂಪಿಸುತ್ತದೆ:
"ಸಾಮಾಜಿಕ ಹಾಗೂ ರಾಜಕೀಯ ಜೀವನದಲ್ಲಿ ಯಾರೂ ಎಲ್ಲರನ್ನೂ ಮೆಚ್ಚಿಸಲಾರರು. ಆದರೆ ಶ್ರೀ ಬಸಪ್ಪನವರ ವೈಯಕ್ತಿಕ ಜೀವನ ಶುದ್ಧವಾದದ್ದು, ಮೆಚ್ಚತಕ್ಕದ್ದು, ಎಲ್ಲರೂ ಒಪ್ಪತಕ್ಕದ್ದು." ಎಂದಿದ್ದಾರೆ. ಅಂದಿನ ಕರ್ನಾಟಕದ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪನವರು.

♠♠♠♠♠

ವೃತ್ತಿಜೀವನದ ಮುಖ್ಯಾಂಶಗಳು[ಬದಲಾಯಿಸಿ]

  • 1942: ಸಹಾಯಕ ಜಿಲ್ಲಾ ಆಯುಕ್ತ (ಸ್ಕೌಟ್ಸ್) ದಾವಣಗೆರೆ
  • 1946: ಅಧ್ಯಕ್ಷ, ಜಿಲ್ಲಾ ಬೋರ್ಡ್, ಚಿತ್ರದುರ್ಗ
  • 1948: ಮೈಸೂರು ಮಹಾರಾಜ ರಿಂದ ಸಾರ್ವಜನಿಕ ಸೇವೆಗಾಗಿ ಚಿನ್ನದ ಪದಕ ನೀಡಿ ಗೌರವಿಸಿದೆ
  • 1950-1960: ಸದಸ್ಯ, ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್,ಮತ್ತು ಜಿಲ್ಲಾಧಿಕಾರಿ (ಸ್ಕೌಟ್ಸ್), ಚಿತ್ರದುರ್ಗ;
  • 1951: ಬ್ಯಾಡ್ ಇಸ್ಚಿ (Ischl) ಮತ್ತು ಆಸ್ಟ್ರಿಯಾದ ವಿಶ್ವ ಸ್ಕೌಟ್ ಸಮ್ಮೇಳನದಲ್ಲಿ ಭಾರತೀಯ ಪ್ರತಿನಿಧಿ, 7 ನೇ ವಿಶ್ವ ಸ್ಕೌಟ್ ಜಾಂಬೂರಿ.;
  • 1955: ಸಹಾಯಕ ರಾಜ್ಯ ಆಯುಕ್ತ (ಸ್ಕೌಟ್ಸ್), ಚಿತ್ರದುರ್ಗ ವಿಭಾಗ;
  • 1962: ದಾವಣಗೆರೆಯಿಂದ ಮೈಸೂರು ಶಾಸನ ಸಭೆಗೆ ಆಯ್ಕೆ; ಸಹಕಾರ, ಮಾಹಿತಿ ಮತ್ತು ಅಬಕಾರಿ, ಮೈಸೂರು ಉಪ ಮಂತ್ರಿ;
  • 1962: ಕಛೇರಿ ಆಯುಕ್ತ ಸಾರ್ವಜನಿಕ ಸಂಬಂಧಗಳು, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಗೆ;
  • 1962-1967: ಅಧ್ಯಕ್ಷ, ರಾಜ್ಯ ಕೈಮಗ್ಗ ಸಲಹಾ ಮಂಡಳಿ, ರಾಜ್ಯ ಶೇಖರಣಾ ನಿಗಮ;
  • 1963: ರಾಜ್ಯ ಕಾರ್ಯದರ್ಶಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್;
  • 1964-1982: ರಾಜ್ಯ ಮುಖ್ಯ ಆಯುಕ್ತ, 1982 ಭಾರತದ ಸ್ಕೌಟ್ಸ್ ಮತ್ತು ಗೈಡ್ಸ್, ಕರ್ನಾಟಕ;
  • 1967: ದಾವಣಗೆರೆಯಿಂದ ಮೈಸೂರು ವಿಧಾನಸಭೆಗೆ ಮರು ಆಯ್ಕೆ;
  • 1968: ತನ್ನ ವಿಶಿಷ್ಟವಾದ ಸೇವೆಗಳಿಗಾಗಿ-ಗುರುತಿಸಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಚಳುವಳಿಯ ಸಿಲ್ವರ್ ಎಲಿಫೆಂಟ್ ಪ್ರಶಸ್ತಿ;
  • 1968-1971: ಸದಸ್ಯ, ಬೆಂಗಳೂರು ಕೃಷಿ ವಿಜ್ಞಾನ ಆಡಳಿತ ವಿಶ್ವವಿದ್ಯಾಲಯದ ಬೋರ್ಡ್;
  • 1969: ಕಾರ್ಯದರ್ಶಿ, ಮೈಸೂರು ಪ್ರದೇಶ ಕಾಂಗ್ರೆಸ್;
  • 1971: ಚಿತ್ರದುರ್ಗ ಕ್ಷೇತ್ರದಿಂದ ಸಂಸತ್ ಸದಸ್ಯರಾಗಿ (ಲೋಕಸಭಾ) ಆಯ್ಕೆಯಾಗಿದ್ದಾರೆ;
  • 1971: ಕೊಂಡಜ್ಜಿ ಗ್ರಾಮದ ಬಳಿ & ಸ್ಕೌಟ್ ಮತ್ತು ಗೈಡ್ ಕ್ಯಾಂಪಸ್ ಸ್ಥಾಪನೆ-ಅಭಿವೃದ್ಧಿ;
  • 1972-1974: ಆರೋಗ್ಯ ಮತ್ತು ಕುಟುಂಬ ಯೋಜನಾ ಕೇಂದ್ರ ಉಪ ಮಂತ್ರಿ;
  • 1973: ನೈರೋಬಿಯಲ್ಲಿ ವಿಶ್ವ ಸ್ಕೌಟ್ ಕಾನ್ಫರೆನ್ಸ್ ಭಾರತೀಯ ಪ್ರತಿನಿಧಿ;
  • 1974: ಮನಿಲಾ ಕುಟುಂಬ ಯೋಜನೆ ಇಂಟರ್ನ್ಯಾಷನಲ್ ಕಾನ್ಫರೆನ್ಸ್ ಆನ್ ಭಾರತೀಯ ತಂಡದ ನಾಯಕ, ಥೈಲ್ಯಾಂಡ್ ಮತ್ತು ಹಾಂಗ್ ಕಾಂಗ್ ಭೇಟಿ;
  • 1976: ಕರ್ನಾಟಕದಲ್ಲಿ ಸ್ಕೌಟ್ ಮತ್ತು ಗೈಡ್ ಚಳವಳಿಯ ಕಾರ್ಯಕ್ಕಾಗಿ ಬಂದ ಬಹುಮಾನದ ಹಣ ದಾನ-ಅದೇ ಸಂಸ್ಥೆಗೆ 1 ಲಕ್ಷ
  • 1976: "ಜಲದರ್ಶಿನಿ ಜನನಪೀಠ", "Jaladarshini jananapeeta" ವಸತಿ ವಿವಿಧೋದ್ದೇಶ ಶೈಕ್ಷಣಿಕ ಸಂಸ್ಥೆ, ಕೊಂಡಜ್ಜಿ ಗ್ರಾಮದಲ್ಲಿ-ಅದರ ಸ್ಥಾಪಕ ಅಧ್ಯಕ್ಷ.
  • 1977: ದಾವಣಗೆರೆಯಿಂದ ಸಂಸತ್ತಿಗೆ ಮರು ಆಯ್ಕೆ;
  • 1982: ಸ್ಕೌಟ್ಸ್ ಮತ್ತು ಗೈಡ್ಸ್ ಚಳವಳಿಗೆ ನೀಡಿದ ಶ್ಲಾಘನೀಯ ಸೇವೆಗಳಿಗೆ ರಾಜ್ಯೋತ್ಸವ ಪ್ರಶಸ್ತಿ ಗಳಿಕೆ
  • 1982: 14 ನವೆಂಬರ್ ರಂದು ಬೆಂಗಳೂರಿನಲ್ಲಿ ನಿಧನಹೊಂದಿದರು.

ನೋಡಿ[ಬದಲಾಯಿಸಿ]

ದಾವಣಗೆರೆ

ಉಲ್ಲೇಖ[ಬದಲಾಯಿಸಿ]

  • ಪ್ರಜಾವಾಣಿ-೧೩-೧೨-೨೦೧೪[೧][ಶಾಶ್ವತವಾಗಿ ಮಡಿದ ಕೊಂಡಿ]