ಉಪಾಕರ್ಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉಪಾಕರ್ಮ "ಆರಂಭ" ಬ್ರಾಹ್ಮಣ ವರ್ಣದ ಆಧುನಿಕ ಹಿಂದೂಗಳಿಂದ ಆಚರಿಸಲ್ಪಡುವ ಒಂದು ವೈದಿಕ ಕ್ರಿಯಾವಿಧಿ. ಈ ಕ್ರಿಯಾವಿಧಿಯನ್ನು ದೈನಂದಿನ ಸಂಧ್ಯಾವಂದನೆ ಮಾಡುವ ಆರ್ಯ ವೈಶ್ಯ ಸಮುದಾಯದವರೂ ಆಚರಿಸುತ್ತಾರೆ. ಉಪಾಕರ್ಮವನ್ನು ವರ್ಷಕ್ಕೆ ಒಂದು ಸಾರಿ ಶ್ರಾವಣ ಅಥವಾ ಧನಿಷ್ಠಾ ನಕ್ಷತ್ರದಲ್ಲಿ ನಡೆಸಲಾಗುತ್ತದೆ ಮತ್ತು ಇದರಲ್ಲಿ ಬ್ರಾಹ್ಮಣರು ಶಾಸ್ತ್ರೋಕ್ತವಾಗಿ ತಮ್ಮ ಉಪನಯನದ ದಾರವನ್ನು ಬದಲಿಸುತ್ತಾರೆ ಜೊತೆಗೆ ಸಂಬಂಧಿತ ಶ್ರೌತ ಕ್ರಿಯಾವಿಧಿಗಳು ಇರುತ್ತವೆ ಮತ್ತು ವೈದಿಕ ಶ್ಲೋಕಗಳನ್ನು ರಚಿಸಿದರು ಎಂದು ಹಿಂದೂಗಳು ನಂಬುವ ಋಷಿಗಳಿಗೆ ಶ್ರಾದ್ಧ ತರ್ಪಣಗಳನ್ನು ಕೊಡುತ್ತಾರೆ.

ಉಪಾಕರ್ಮ ವಿಧಿ[ಬದಲಾಯಿಸಿ]

ವಿಧಿವತ್ತಾಗಿ ವೇದವನ್ನು ಅಧ್ಯಯನ ಮಾಡಲು ಪ್ರಾರಂಭಿಸುವುದು. ವೇದಾಧಿಕಾರಿಗಳಾದ ಬ್ರಾಹ್ಮಣ ಕ್ಷತ್ರಿಯ ವೈಶ್ಯ ಈ ಮೂರು ವರ್ಣದವರಿಗೂ ವಿಹಿತವಾಗಿದೆ. ಉಪನಯನಾನಂತರದಲ್ಲಿ ಮೊಟ್ಟ ಮೊದಲು ವೇದಾಧ್ಯಯನಕ್ಕೆ ಪ್ರಾರಂಭಿಸುವುದು ಪ್ರಥಮೋಪಾಕರ್ಮ. ಅಧ್ಯಯನ ಮಾಡಲು ಪ್ರಾರಂಭಿಸುವುದಕ್ಕೆ ಮೊದಲು ಹೋಮಮಾಡಿ ಆ ಅಗ್ನಿ ಸನ್ನಿಧಿಯಲ್ಲಿ ವೇದಾಧ್ಯಯನಕ್ಕೆ ಉಪಕ್ರಮಿಸಬೇಕು. ಪ್ರತಿವರ್ಷದಲ್ಲೂ ಶ್ರಾವಣ ಮಾಸದ ಹುಣ್ಣಿಮೆಯಲ್ಲಿ ಯಜುರ್ವೇದಿಗಳೂ ಇದೇ ತಿಂಗಳಿನ ಶ್ರವಣನಕ್ಷತ್ರದಲ್ಲಿ ಋಗ್ವೇದಿಗಳೂ ಹುಣ್ಣಿಮೆಯಲ್ಲೇ ಅಥರ್ವಣವೇದಿಗಳೂ ಉಪಾಕರ್ಮ ಮಾಡಬೇಕೆಂದು ವಿಹಿತವಾಗಿದೆ. ಶ್ರಾವಣ ಹುಣ್ಣಿಮೆ ಅಥವಾ ಶ್ರವಣನಕ್ಷತ್ರದ ದಿವಸ ಚಂದ್ರಗ್ರಹಣ ಸಂಭವಿಸಿದರೆ ಅಥವಾ ಸಿಂಹ ಸಂಕ್ರಮಣವಾದರೆ ಆ ದಿವಸ ಗ್ರಹಣ ಅಥವಾ ಸಂಕ್ರಮಣ ದುಷ್ಟವಾಗುವುದರಿಂದ ಆ ಕಾಲವನ್ನು ಬಿಟ್ಟು ಆಷಾಢ ಶುಕ್ಲ ಪುರ್ಣಿಮಾ ಅಥವಾ ಭಾದ್ರಪದಶುಕ್ಲ ಪುರ್ಣಿಮಾ ದಿವಸ ಯಜುರ್ವೇದಿಗಳೂ ಶುಕ್ಲಪಂಚಮಿ ಅಥವಾ ಹಸ್ತನಕ್ಷತ್ರದಲ್ಲಿ ಋಗ್ವೇದಿಗಳೂ ಶ್ರಾವಣಮಾಸ ಅಧಿಕ ಬಂದರೆ ನಿಜಶ್ರಾವಣಮಾಸದಲ್ಲಿ ಮಾಡಬೇಕು. ಅಧಿಕ ಶ್ರಾವಣದಲ್ಲೇ ಮಾಡುವ ಪದ್ಧತಿ ಕೆಲವರಲ್ಲಿ ಮಾತ್ರ ಇದೆ. ಗುರು, ಶುಕ್ರರು ಅಸ್ತರಾಗಿದ್ದಾಗ ಪ್ರಥಮೋಪಾಕರ್ಮ ಕೂಡದು. ಉಪಾಕರ್ಮಾನಂತರ ಐದು ತಿಂಗಳಕಾಲ ಶುಕ್ಲಪಕ್ಷದ ದಿವಸಗಳಲ್ಲಿ ವೇದಾಧ್ಯಯನವನ್ನೂ ಕೃಷ್ಣಪಕ್ಷದ ದಿವಸಗಳಲ್ಲಿ ಶಾಸ್ತ್ರಾಧ್ಯಯನವನ್ನೂ ಮಾಡಬೇಕು. ಶ್ರಾವಣದಲ್ಲಿ ಪ್ರಾರಂಭಿಸುವ ವೇದಾಧ್ಯಯನವನ್ನು ಪುಷ್ಯಮಾಸ ಶುಕ್ಲಪಕ್ಷದಲ್ಲಿ ಮುಕ್ತಾಯ ಮಾಡಬೇಕು. ಈ ಮುಕ್ತಾಯಕ್ಕೆ ಉತ್ಸರ್ಜನ ಎಂದು ಹೆಸರು. ಉತ್ಸರ್ಜನಾನಂತರ ಮತ್ತೆ ಶ್ರಾವಣದಲ್ಲಿ ಅಧ್ಯಯನವನ್ನು ಪ್ರಾರಂಭಿಸುವುದು ನಿತ್ಯೋಪಾಕರ್ಮ. ಇದಕ್ಕೆ ಗುರು ಶುಕ್ರಾಸ್ತಾದಿದೋಷಗಳಿಲ್ಲ. ಈ ಸಮಾರಂಭವನ್ನು ಜನಿವಾರದ ಹಬ್ಬ ಎಂದು ಕರೆಯುವುದೂ ಕೆಲವರಲ್ಲಿ ರೂಢಿಯಲ್ಲಿದೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಉಪಾಕರ್ಮ&oldid=524383" ಇಂದ ಪಡೆಯಲ್ಪಟ್ಟಿದೆ