ವಾಣಿ ಜಯರಾಂ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಾಣಿ ಜಯರಾಂ
ವಾಣಿ ಜಯರಾಂ
ಜನನನವೆಂಬರ್ ೩೦, ೧೯೪೫
ವೆಲ್ಲೂರಿನ ಇಡಂಗು ಗ್ರಾಮ
ಇದಕ್ಕೆ ಖ್ಯಾತರುಚಲನಚಿತ್ರ ಹಿನ್ನೆಲೆ ಗಾಯನ, ಭಕ್ತಿಸಂಗೀತ

ವಾಣಿ ಜಯರಾಂ (೩೦ ನವೆಂಬರ್ ೩೦ ೧೯೪೫ - ೦೪ ಫೆಬ್ರವರಿ ೨೦೨೩) ಚಲನಚಿತ್ರರಂಗದ ಪ್ರಸಿದ್ಧ ಹಿನ್ನೆಲೆ ಗಾಯಕಿ. ಇವರು ತಮಿಳು, ಕನ್ನಡ, ತೆಲುಗು, ತುಳು, ಹಿಂದಿ, ಮರಾಠಿ, ಮಲಯಾಳಂ, ಬಂಗಾಳಿ, ಒಡಿಯಾ ಸೇರಿದಂತೆ, ಒಟ್ಟು ೧೪ ಭಾಷೆಗಳಲ್ಲಿ ೮೦೦೦ಕ್ಕೂ ಅಧಿಕ ಗೀತೆಗಳನ್ನು ಹಾಡಿದ್ದಾರೆ.

ಜನನ[ಬದಲಾಯಿಸಿ]

ವಾಣಿಯವರು ತಮಿಳುನಾಡಿನ ಒಂದು ಅಯ್ಯಂಗಾರ್ ಪರಿವಾರದಲ್ಲಿ ವೆಲ್ಲೂರಿನ ಇಡಂಗು ಗ್ರಾಮದಲ್ಲಿ ೧೯೪೫ನವೆಂಬರ್ ೩೦ರಂದು ಜನಿಸಿದರು. ವಾಣಿಯವರ ತಾಯಿ ಪ್ರಸಿದ್ಧ ಸಂಗೀತ ವಿದ್ವಾಂಸ, ರಂಗ ರಾಮಾನುಜ ಅಯ್ಯಂಗಾರ್ ರ ಶಿಷ್ಯೆ.ಹೀಗಾಗಿ ಇವರಿಗೆ ಚಿಕ್ಕಂದಿನಿಂದಲೇ ಸಂಗೀತಾಸಕ್ತಿ ಇತ್ತು. ತಮ್ಮ ಐದನೇ ವಯಸ್ಸಿಗೆ ಕಡಲೂರು ಶ್ರೀನಿವಾಸ ಅಯ್ಯಂಗಾರರ ಬಳಿ ಸಂಗೀತಾಭ್ಯಾಸ ಶುರು ಮಾಡಿದರು. ಏಳನೇ ವಯಸ್ಸಿಗೆ ದೇಶಿಕಾಚಾರ್ ಕೃತಿಗಳನ್ನು ಸ್ಫುಟವಾಗಿ ,ಸರಾಗವಾಗಿ ಹಾಡುತ್ತಿದ್ದರು. ಎಂಟನೆಯ ವಯಸ್ಸಿನಲ್ಲೇ ಆಕಾಶವಾಣಿಯಲ್ಲಿ ಇವರ ದನಿ ಪ್ರಸರವಾಗಿತ್ತು. ತಿರುವನಂತಪುರದಲ್ಲಿ ೩ ಗಂಟೆಗಳ ಕಾಲ ಸಂಗೀತ ಕಚೇರಿ ನಡೆಸಿದಾಗ ಇವರಿಗೆ ಕೇವಲ ಹತ್ತು ವರ್ಷ. ವಾಣಿಯವರದು ಬಹುಮುಖ ಪ್ರತಿಭೆ.ಚಿತ್ರರಚನೆ ಜೊತೆಗೆ ಓದಿನಲ್ಲೂ ಮುಂದು. ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಚಿತ್ರರಂಗಕ್ಕೆ ಪ್ರವೇಶ[ಬದಲಾಯಿಸಿ]

ಇಂಡೋ-ಬೆಲ್ಜಿಯಂ ಛೇಂಬರ್ ಆಫ್ ಕಾಮರ್ಸ್‌ನಲ್ಲಿ ಉನ್ನತ ಹುದ್ದೆಯಲ್ಲಿದ್ದ ಜಯರಾಂ ಅವರೊಡನೆ ನಡೆದ ವಿವಾಹ ಇವರ ಜೀವನದಲ್ಲಿ ಮಹತ್ತರ ತಿರುವು ತಂದಿತು. ವಿವಾಹದ ನಂತರ ಅವರು ಮುಂಬೈನಲ್ಲೇ ನೆಲಸಿದರು. ಸ್ವತಃ ಸಿತಾರ್ ವಾದಕರಾಗಿದ್ದ ಜಯರಾಂ ಪತ್ನಿಯ ಪ್ರತಿಭೆಗೆ ನೀರೆರೆದರು.ಪಟಿಯಾಲಾ ಘರಾಣಾದ ಅಬ್ದುಲ್ ರೆಹಮಾನ್ ಬಳಿ ಹಿಂದೂಸ್ತಾನಿ ಸಂಗೀತ ಕಲಿಸಿದರು.ಇಲ್ಲಿ ಇವರ ಕಂಠಸಿರಿಗೆ ಮಾರುಹೋದ ಮರಾಠಿ ಚಿತ್ರ ನಿರ್ದೇಶಕ ವಸಂತ ದೇಸಾಯಿ ತಮ್ಮ ಚಿತ್ರ ’ಅಮ್ಮ ತಾಯಿ ಗೋಡೆ’ಯಲ್ಲಿ ಹಾಡುವ ಅವಕಾಶ ಕಲ್ಪಿಸಿಕೊಟ್ಟರು.ಈ ಚಿತ್ರದ ಗಾಯನವನ್ನು ಮೆಚ್ಚಿಕೊಂಡ ಹಿಂದಿ ಚಿತ್ರ ನಿರ್ದೇಶಕ ಹೃಷಿಕೇಶ್ ಮುಖರ್ಜಿ ತಮ್ಮ ’ಗುಡ್ಡಿ’ ಚಿತ್ರದಲ್ಲಿ ಹಾಡಿಸಿದರು.ಈ ಚಿತ್ರದ "ಬೋಲ್‌ರೇ ಪಪ್ಪಿ ಹರಾ.." ಹಾಡು ದೇಶಾದ್ಯಂತ ಸಂಚಲನೆಯನ್ನು ಉಂಟುಮಾಡಿ, ವಾಣಿ ಜಯರಾಂ ಅವರಿಗೆ ಅಪಾರ ಜನಪ್ರಿಯತೆಯನ್ನು ತಂದುಕೊಟ್ಟಿತು.

ಕನ್ನಡ ಚಿತ್ರರಂಗದಲ್ಲಿ[ಬದಲಾಯಿಸಿ]

ಕನ್ನಡ ಚಿತ್ರ ಸಂಗೀತಕ್ಕೆ ೧೯೭೩ರಲ್ಲಿ ಪದಾರ್ಪಣೆ ಮಾಡಿ ೯೦ರ ದಶಕದ ಆದಿಯವರೆಗೂ ಚಿತ್ರಗೀತೆಗಳನ್ನು ಹಾಡಿದ್ದಾರೆ.ಕನ್ನಡದಲ್ಲಿ ಮರೆಯಲಾಗದ ನೂರಾರು ಹಾಡುಗಳನ್ನು ಹಾಡಿದ್ದಾರೆ. ಕನ್ನಡದಲ್ಲಿ ಅವರು ಹಾಡಿದ ಮೊದಲ ಚಿತ್ರ ’ಛಲಗಾರ’ ತೆರೆ ಕಾಣಲಿಲ್ಲ.ಕೌಬಾಯ್ ಕುಳ್ಳ, ಕೆಸರಿನ ಕಮಲ, ಉಪಾಸನೆ, ಶುಭಮಂಗಳ, ದೀಪ, ಅಪರಿಚಿತ, ಕಸ್ತೂರಿ ವಿಜಯ, ಚಿರಂಜೀವಿ, ಬೆಸುಗೆ, ಬಿಳೀ ಹೆಂಡ್ತಿ ಮೊದಲಾದ ಚಿತ್ರಗಳಲ್ಲಿ ಹಾಡಿದ್ದಾರೆ. ತಮ್ಮನ್ನು ಪರಿಚಯಿಸಿದ ಸಂಗೀತ ನಿರ್ದೇಶಕ ವಿಜಯಭಾಸ್ಕರ್ ಸಂಗೀತ ನಿರ್ದೇಶನದ ಕಡೆಯ ಚಿತ್ರ ನೀಲಾ (೨೦೦೧), ಇವರು ಕನ್ನಡದಲ್ಲಿ ಇತ್ತೀಚಿನ ವರ್ಷಗಳಲ್ಲಿ ಹಾಡಿದ ಚಿತ್ರವಾಗಿರುತ್ತದೆ.ಕನ್ನಡದಲ್ಲಿ ಹಾಡಿರುವ ಸುಮಾರು ೮೫೦ ಗೀತೆಗಳನ್ನು ಸೇರಿಸಿ, ಒಟ್ಟಾರೆ ೧೨ ಭಾಷೆಗಳಲ್ಲಿ ೮೮೦೦ ಗೀತೆಗಳನ್ನು ಹಾಡಿದ್ದಾರೆ.

ಇವರು ಹಾಡಿರುವ ಕೆಲವು ಸುಮಧುರ ಗೀತೆಗಳು[ಬದಲಾಯಿಸಿ]

  • ನಗು ನೀ ನಗು...
  • ಭಾವವೆಂಬ ಹೂವು ಅರಳಿ...
  • ಹೋದೆಯಾ ದೂರ ಓ ಜೊತೆಗಾರ..ವಿರಹ ಗೀತೆ
  • ಏನೇನೊ ಆಸೆ.. ನೀ ತಂದ ಭಾಷೇ, (ಅಣ್ಣಾವರ ಜೊತೆ ಸೇರಿ ಹಾಡಿದ್ದು)
  • ಈ ಶತಮಾನದ ಮಾದರಿ ಹೆಣ್ಣು...
  • ದಾರಿ ಕಾಣದಾಗಿದೆ ರಾಘವೇಂದ್ರನೆ...
  • ಸವಿ ನೆನಪುಗಳು ಬೇಕು...
  • ಬಾನಲಿ ಮುಡಿದ ಭಾಸ್ಕರನು...
  • ಓ ತಂಗಾಳಿಯೇ...
  • ಲೈಫ್ ಈಸ್ ಎ ಮೆರ್ರಿ ಮೆಲಡಿ...- ಬೆಸುಗೆ ಚಿತ್ರದ ಪಾಶ್ಚಾತ್ಯಶೈಲಿಯ ಇಂಗ್ಲಿಷ್ ಹಾಡು.
  • ಹ್ಯಾಪಿಯಸ್ಟ್ ಮೊಮೆಂಟ್ಸ್...- ಬಿಳೀ ಹೆಂಡ್ತಿ ಚಿತ್ರದ ಪಾಶ್ಚಾತ್ಯಶೈಲಿಯ ಇಂಗ್ಲಿಷ್ ಹಾಡು.

ಇತರ ಆಸಕ್ತಿಗಳು[ಬದಲಾಯಿಸಿ]

ವಾಣಿ ಜಯರಾಂ ಗಝಲ್, ಭಜನ್, ಭಕ್ತಿಗೀತೆಗಳ ಗಾಯನದಲ್ಲೂ ಮುಂಚೂಣಿಯಲ್ಲಿದ್ದಾರೆ. ಮಲಯಾಳಂ, ತಮಿಳು, ಹಿಂದಿ ಭಾಷೆಗಳಲ್ಲಿ ಅವರ ಕವನ ಸಂಕಲನಗಳು ಪ್ರಕಟವಾಗಿವೆ. 'ಪಂಡಿತ್ ಬ್ರಿಜ್ ಮಹಾರಾಜ್'‌ರೊಂದಿಗೆ ಸೇರಿ,ಗೀತ ಗೋವಿಂದವನ್ನು ಕಥಕ್‌ಗೆ ಅಳವಡಿಸಿರುವುದು ಅವರ ಗಮನಾರ್ಹ ಸಾಧನೆ. ಚೆನ್ನೈನಲ್ಲಿ ಇವರು ನಡೆಸುತ್ತಿರುವ 'ಸಂಗೀತ ಸಂಶೋಧನಾ ಕೇಂದ್ರ' ವರ್ಷವಿಡೀ 'ರಸಗ್ರಹಣ ಶಿಬಿರ' ಮತ್ತು 'ವಿಚಾರ ಸಂಕಿರಣ'ಗಳನ್ನು ಏರ್ಪಡಿಸುತ್ತದೆ. ಶಾಲಾ ಮಕ್ಕಳಿಗಾಗಿ ವಿಶೇಷ ಶಿಬಿರಗಳಿವೆ. ಪ್ರಸ್ತುತ ಸಂಗೀತದಿಂದ ಕ್ಯಾನ್ಸರ್ ರೋಗಿಗಳ ನೋವು ನಿವಾರಿಸುವ ಕುರಿತು ಶಿಬಿರ ನಡೆಸುತ್ತಿದ್ದಾರೆ.

ಪ್ರಶಸ್ತಿ ಪುರಸ್ಕಾರ ಗೌರವಗಳು[ಬದಲಾಯಿಸಿ]

  • ತಮಿಳು ಭಾಷೆಯ ಅಪೂರ್ವ ರಾಗಂಗಳ್ ಮತ್ತು ತೆಲುಗು ಭಾಷೆಯಶಂಕರಾಭರಣಂ, ಸ್ವಾತಿ ಕಿರಣಂ ಚಿತ್ರಗಳ ಹಿನ್ನೆಲೆ ಗಾಯನಕ್ಕಾಗಿ ಮೂರು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ.
  • ವಿವಿಧ ರಾಜ್ಯಗಳ ೨೭ ಶ್ರೇಷ್ಠ ಗಾಯಕಿ ಪ್ರಶಸ್ತಿ ಪಡೆದಿದ್ದಾರೆ.
  • ದಕ್ಷಿಣ ಭಾರತದ ಖ್ಯಾತ ಟಿ. ವಿ. ಮಾಧ್ಯಮಗಳ ಮ್ಯೂಸಿಕ್ ರಿಯಾಲಿಟಿ ಶೋಗಳಲಿ ಕಾಣಿಸಿಕೊಳ್ಳುತ್ತಿದ್ದಾರೆ.
  • 'ಗಾನಸುಧೆಯ ೪೦ ನೇ ವರ್ಷದ ಸೇವೆ'ಗಾಗಿ ಚೆನ್ನೈ ಹಾಗೂ ಹೈದರಾಬಾದ್ ನಗರಗಳಲ್ಲಿ ಸನ್ಮಾನಮಾಡಲಾಯಿತು.


ಉಲ್ಲೇಖಗಳು[ಬದಲಾಯಿಸಿ]

http://www.thehansindia.com/posts/index/Sunday-Hans/2018-04-01/A-timeless-voice-Vani-Jairam/370922

https://timesofindia.indiatimes.com/entertainment/tamil/music/I-do-not-abuse-my-voice-Vani-Jairam/articleshow/47456393.cms

https://timesofindia.indiatimes.com/tv/news/tamil/vani-jayaram-moved-to-tears-over-pleasant-surprise-in-sa-re-ga-ma-pa/articleshow/63242829.cms

ಹೊರಸಂಪರ್ಕ ಕೊಂಡಿಗಳು[ಬದಲಾಯಿಸಿ]

ಕನ್ನಡ ಚಿತ್ರರಂಗದ ಹಿನ್ನೆಲೆ ಗಾಯಕಿಯರು
ತ್ರಿಪುರಾಂಬ | ಕಮಲಾ ಬಾಯಿ | ಎಸ್.ಡಿ.ಸುಬ್ಬುಲಕ್ಷ್ಮಿ | ಲಕ್ಷ್ಮಿ ಬಾಯಿ | ಎಂ.ವಿ.ರಾಜಮ್ಮ | ಅಮೀರ್‍ಬಾಯಿ ಕರ್ನಾಟಕಿ | ಬಿ.ಜಯಮ್ಮ | ಪಿ. ಲೀಲಾ | ಪಿ.ಸುಶೀಲ | ಎಸ್.ಜಾನಕಿ | ಪ್ರಿಯದರ್ಶಿನಿ | ಎಲ್.ಆರ್. ಈಶ್ವರಿ | ಬಿ.ಕೆ.ಸುಮಿತ್ರಾ | ವಾಣಿ ಜಯರಾಂ | ಕಸ್ತೂರಿ ಶಂಕರ್ | ಬೆಂಗಳೂರು ಲತಾ | ಸುಲೋಚನ | ಎಸ್.ಪಿ.ಶೈಲಜಾ | ಬಿ.ಆರ್. ಛಾಯಾ | ರತ್ನಮಾಲ ಪ್ರಕಾಶ್ | ಮಂಜುಳಾ ಗುರುರಾಜ್ | ಸುಜಾತ ದತ್ | ಕವಿತಾ ಕೃಷ್ಣಮೂರ್ತಿ | ಚಿತ್ರಾ | ಚಂದ್ರಿಕಾ ಗುರುರಾಜ್ | ಲತಾ ಹಂಸಲೇಖ | ಸೌಮ್ಯ ರಾವ್ | ಅನುರಾಧ ಶ್ರೀರಾಮ್ | ನಂದಿತಾ | ಪಲ್ಲವಿ ಎಂ.ಡಿ | ಶಮಿತಾ ಮಲ್ನಾಡ್ | ಚೈತ್ರ | ಸುಮಾ ಶಾಸ್ತ್ರಿ | ಸುಪ್ರಿಯ ಆಚಾರ್ಯ | ಭವತಾರಿಣಿ