ಆರ್ಥಿಕ ತತ್ತ್ವಸಮೀಕ್ಷೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸರಳವಾಗಿದ್ದ ಬದುಕಿನ ಪ್ರಶ್ನೆ ಜಟಿಲವಾಗುತ್ತ ಬಂದಂತೆಲ್ಲ ಮಾನವನ ಸಾಮಾಜಿಕ ಮತ್ತು ಆರ್ಥಿಕ ಪ್ರಜ್ಞೆ ಹೇಗೆ ಬೆಳೆದುಬಂದಿತೆಂಬುದನ್ನು ಇಲ್ಲಿ ಚಾರಿತ್ರಿಕವಾಗಿ ಪರಿಶೀಲಿಸಲಾಗಿದೆ. ಆಹಾರಕ್ಕಾಗಿ ಬೇಟೆಯನ್ನೂ ಗೆಡ್ಡೆ ಗೆಣಸುಗಳ ಆಯ್ಕೆಯನ್ನೂ ನಂಬಿ ಅಲೆಮಾರಿಯಾಗಿದ್ದ ಮಾನವ ಬರಬರುತ್ತ ನೆಲೆನಿಂತು ಬೇಸಾಯ, ಪಶುಪಾಲನಾದಿ ವೃತ್ತಿಗಳನ್ನವಲಂಬಿಸಿದ. ಸಂಸಾರಿಯಾದ. ಮನೆ, ಹಳ್ಳಿಗಳು ಬೆಳೆದುವು. ಪದಾರ್ಥಗಳ ಉತ್ಪತ್ತಿ, ಸಂಗ್ರಹಣೆ, ವಿನಿಮಯಗಳಿಂದ ಆರ್ಥಿಕ ವ್ಯವಹಾರವನ್ನು ಕುದುರಿಸಿದ. ಚಣಿ, ಆಳು ಎಂಬ ಭಾವನೆ ಬೆಳೆಯಿತು. ಹೀಗೆ ಮಾನವನ ಜೀವನದಲ್ಲಿ ಬದಲಾವಣೆ ಉಂಟಾದ ಹಾಗೆಲ್ಲ, ಜನಾಂಗ ಬೆಳೆಯಿತು. ಆರ್ಥಿಕ ವಿಧಾನಗಳು ಒಂದೊಂದಾಗಿ ತಲೆದೋರುತ್ತ ಬಂದುವು. ಮಾನವ ಜೀವನಕ್ಕೂ ಆರ್ಥಿಕ ವಿಭಾಗಕ್ಕೂ ನಿಕಟ ಸಂಬಂಧ ಬೆಳೆದುಬಂದಿತು. ಜೀವನಶಾಸ್ತ್ರವೇ ಅರ್ಥಶಾಸ್ತ್ರದ ಮೂಲ. ಮಾನವನ ಆರ್ಥಿಕ ಚಲನವಲನಗಳು ಅರ್ಥಶಾಸ್ತ್ರದ ವಿಷಯ. ಇದೇ ಸಮಾಜಶಾಸ್ತ್ರದ ಒಂದು ಭಾಗವೂ ಆಗಿದೆ. ಆರ್ಥಿಕ ಚಟುವಟಿಕೆ ವೃದ್ಧಿಯಾದಂತೆಲ್ಲ, ಆರ್ಥಿಕ ಸಂಸ್ಥೆಗಳ ನಿರ್ಮಾಣ ಮೊದಲಾಯಿತು. ಆರ್ಥಿಕ ಸಂಸ್ಥೆಗಳನ್ನು ವೈಯಕ್ತಿಕ (ಪ್ಯಾಕ್ ಟೈಪ್), ಸಾಮಾಜಿಕ (ಹರ್ಡ್ ಟೈಪ್) ಎಂದು ವಿಭಾಗಿಸಲಾಗಿದೆ. ಕೇಂದ್ರೀಕೃತ ಅಧಿಕಾರ, ಕಠಿಣಶಿಸ್ತು, ಲಾಭದಾಶೆ ಮುಖ್ಯ ಲಕ್ಷಣಗಳು. ಸಂಪಾದನೆಯೇ ಈ ಸಂಸ್ಥೆಯ ಗುರಿ. ಈ ಕುರುಹುಗಳೆಲ್ಲ ಪಾಶ್ಚಾತ್ಯ ದೇಶಗಳ ಆರ್ಥಿಕ ಸಂಸ್ಥೆಗಳಲ್ಲಿ ಮುಖ್ಯವಾಗಿ ಕಂಡುಬರುತ್ತವೆ. ಸಾಮಾಜಿಕ ಆರ್ಥಿಕಸಂಸ್ಥೆಗಳಲ್ಲಿ ಪ್ರಜಾಸತ್ತಾತ್ಮಕ ಅಧಿಕಾರ ಬಡವರ ಬಲಹೀನರ ರಕ್ಷಣೆ, ಆದಾಯ ವಿಭಜನೆ, ವ್ಯಕ್ತಿಸ್ವಾತಂತ್ರ್ಯ ಇವೆಲ್ಲ ಇವೆ. ಇವು ಪ್ರತಿಯೊಂದೂ ಸಾಮಾಜಿಕ, ಆರ್ಥಿಕ ಜೀವನದ ಮೇಲೆ ತಮ್ಮ ಪ್ರಭಾವವನ್ನು ಬೀರುತ್ತವೆ. ಪಾಶ್ಚಾತ್ಯದೇಶಗಳು ವ್ಯವಸಾಯ ವೃತ್ತಿಯನ್ನು ಅಭಿವೃದ್ಧಿಪಡಿಸದೆ ಕೈಗಾರಿಕಾ ಸ್ಥಾಪನೆಯನ್ನು ಬಲಪಡಿಸಿ ವೃದ್ಧಿಪಡಿಸಿದುವು. ಇಂಥ ಆರ್ಥಿಕ ಚರಿತ್ರೆಯನ್ನು ಶಕ್ತಿಯುಗ, ಆರ್ಥಿಕಯುಗ ಮತ್ತು ಯಂತ್ರಯುಗ ಎಂದು ವಿಂಗಡಿಸಬಹುದು. ಒಂದಾನೊಂದು ಕಾಲದಲ್ಲಿ ಜಹಗೀರ್ದಾರರು, ಕೆಲಸಗಾರರನ್ನು ನಿರ್ಬಂಧಪಡಿಸಿ ಅವರ ಶಕ್ತಿಸಾಮರ್ಥ್ಯದ ಸಂಪಾದನೆಯನ್ನು ತಾವು ಉಪಯೋಗಿಸಿಕೊಂಡು ಶ್ರೀಮಂತರಾಗುತ್ತಿದ್ದರು. ಅನಂತರ ವಿದೇಶಗಳಿಗೆ ವ್ಯಾಪಾರಕ್ಕಾಗಿ ಹೋಗಿ ಅಪಾರ ಧನಸಂಪಾದನೆ ಮಾಡುತ್ತಿದ್ದರು. ಹೀಗೆ ಗಂಗಾನದಿ ತೀರದಿಂದ ಥೇಮ್ಸ್ ನದಿ ದಡದವರೆಗೆ ಹೊನ್ನಿನ ಹೊಳೆ ಹರಿಯಿತು. ಇತರ ದೇಶಗಳನ್ನು ಸೂರೆಮಾಡಿ ಸಂಪಾದಿಸಿದ ಹಣದಿಂದ ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸಿ, ಸಂಪಾದನೆಯನ್ನು ವೃದ್ಧಿಪಡಿಸಲಾಯಿತು. ಇಂಥ ಯಂತ್ರಯುಗದ ಫಲವಾಗಿ ವೈಯಕ್ತಿಕ ಆರ್ಥಿಕ ಸಂಸ್ಥೆಗಳು ಬೆಳೆಯುತ್ತ ಬಂದುವು. ಇವು ವೃದ್ಧಿಹೊಂದಿದಂತೆ ಮಾನವನ ಕ್ರಿಯಾತ್ಮಕ ಶಕ್ತಿ ಕುಗ್ಗಿತು. ಬಂಡವಾಳ ಪ್ರಭುತ್ವ ತಾನೇತಾನಾಗಿ ವೃದ್ಧಿಹೊಂದಿತು. ಕೇಂದ್ರೀಕೃತ ವಸ್ತುರಚನೆ ಆಯಿತು. ಪ್ರಪಂಚದಲ್ಲಿ ಇಂದು ಒಂದು ಕಡೆ ಅಪಾರ ವಸ್ತು ಉತ್ಪಾದನೆಯಾದರೆ, ಇನ್ನೊಂದು ಕಡೆ ಹಸಿವಿನ ಆತುರ ಕಂಡುಬರುತ್ತದೆ. ರಾಜಕೀಯದ ಲ್ಲಿರುವಂತೆ ಆರ್ಥಿಕ ವಿಚಾರದಲ್ಲೂ ಒಂದು ಬಗೆಯ ಸ್ವಾತಂತ್ರ್ಯ ಇದ್ದರೆ ಒಳ್ಳೆಯದು. ಆದರೆ ವೈಯಕ್ತಿಕ ಆರ್ಥಿಕಸಂಸ್ಥೆಗಳಲ್ಲಿ ಇಂಥ ಸ್ವಾತಂತ್ರ್ಯಕ್ಕೆ ಅವಕಾಶವಿಲ್ಲ. ಸಾಮಾಜಿಕ, ಆರ್ಥಿಕ ಸಂಸ್ಥೆಗಳಲ್ಲಿ ಸಾಮೂಹಿಕ ರಕ್ಷಣೆ ಸಂಯೋಜನಾಶಕ್ತಿಗಳಿವೆ. ಇದರ ಫಲವಾಗಿ, ಜಾತಿಭೇದ, ಅವಿಭಕ್ತಕುಟುಂಬ, ಲಾಭವಿಭಜನಾ ಸಂಸ್ಥೆ, ಗ್ರಾಮಸಭೆ ಮುಂತಾದುವು ಭದ್ರವಾಗಿ ತಳವೂರಿದವು. ಒಂದು ಸಂಸಾರದಲ್ಲಿ ಒಬ್ಬ ಸಂಪಾದಿಸಿದರೆ, ಇನ್ನೊಬ್ಬ ಅದರ ಭಾಗಕ್ಕೆ ಹಕ್ಕುದಾರನಾಗುತ್ತಾನೆ. ಹೆಚ್ಚು ಹಣ ಒಂದೇ ಕಡೆ ಸೇರುವುದಕ್ಕೆ ಅವಕಾಶವಿಲ್ಲ. ಒಂದೊಂದು ಜಾತಿಯೂ ಆಯಾ ಪಂಗಡದ ಯುವಕರ ಶಿಕ್ಷಣ, ವ್ಯಾಜ್ಯ ತೀರ್ಮಾನ, ಲಾಭವಿತರಣೆ ಮುಂತಾದುವನ್ನು ಅವೇ ನಿರ್ವಹಿಸುತ್ತಿದ್ದುವು. ಇಂಥ ಸಾಮಾಜಿಕ ಸಂಸ್ಥೆಗಳು ಪರಸ್ಪರ ಸಹಾಯವನ್ನು ವೃದ್ಧಿಪಡಿಸಿ, ಐಕ್ಯವನ್ನುಂಟುಮಾಡುತ್ತಿದ್ದುವು. ಆದರೆ ಪಾಶ್ಚಾತ್ಯ ಸಂಪರ್ಕ ಹೆಚ್ಚಿದಂತೆ, ಅಲ್ಲಿಯ ಆಡಳಿತಪದ್ಧತಿ ಆಚರಣೆಗೆ ಬಂದುದರ ಫಲವಾಗಿ, ಇಲ್ಲಿಯ ಹಿಂದಿನ ಕಟ್ಟುಪಾಡುಗಳು ಸಡಿಲವಾದುವು. ಕಸಬಿನ ಸ್ವಾತಂತ್ರ್ಯ ಕ್ಷೀಣವಾಯಿತು. ಪಾಶ್ಚಾತ್ಯ ಆರ್ಥಿಕ ಸಂಸ್ಥೆಗಳ ಪ್ರಭಾವ ಎಲ್ಲ ಕಡೆ ವಿಸ್ತರಿಸುತ್ತ ಬಂತು. ಇಂದು ಜಗತ್ತಿನ ಎಲ್ಲ ಭಾಗದಲ್ಲೂ ವೈಯಕ್ತಿಕ ಆರ್ಥಿಕ ಸಂಸ್ಥೆಯ ವಿಧಾನ ಹಬ್ಬಿದೆ. ಸಾಮಾಜಿಕ ಆರ್ಥಿಕ ಸಂಸ್ಥೆಗಳಿದ್ದ ದೇಶಗಳೂ ವೈಯಕ್ತಿಕ ಆರ್ಥಿಕ ತತ್ತ್ವವನ್ನೇ ಅಂಗೀಕರಿಸಿವೆ. ಅರ್ಥಶಾಸ್ತ್ರ ಎಂಬ ಪದ ೨೦ನೆಯ ಶತಮಾನದಲ್ಲಿ ಹೆಚ್ಚು ಬಳಕೆಗೆ ಬಂತು. ಅದಕ್ಕೆ ಮುಂಚೆ ರಾಜಕೀಯ ಅರ್ಥಶಾಸ್ತ್ರ ಎಂಬ ಪದ ರೂಢಿಯಲ್ಲಿತ್ತು. ಈ ಪದವೂ ಆಧುನಿಕವಾದುದೇ. ೧೭ನೆಯ ಶತಮಾನದಲ್ಲಿ ಈ ಪದ ರೂಢಿಗೆ ಬಂತು. ರಾಜ್ಯಗಳ ಆದಾಯ, ಮತ್ತು ಸಾಧನಸಂಪತ್ತು ಹೆಚ್ಚಿಸುವ ಅರ್ಥದಲ್ಲಿ ಈ ಪದವನ್ನು ಬಳಸಲಾಯಿತು. ಅರ್ಥಶಾಸ್ತ್ರ ವಿಕಸನದಲ್ಲಿ ಮುಖ್ಯವಾಗಿ ನಾಲ್ಕು ವಿಭಾಗಗಳಿವೆ-ಗ್ರೀಕರ ಕಾಲ, ಮಧ್ಯಯುಗದ ಕಾಲ, ಅನಂತರದ ಕಾಲ (೧೬-೧೮ ಶತಮಾನ) ಮತ್ತು ಆಧುನಿಕ ಕಾಲ. ಈ ವಿಭಾಗಗಳು ಯುರೋಪ್ ಖಂಡದ ಇತಿಹಾಸ ವಿಭಾಗಕ್ಕೆ ಸರಿಹೊಂದುವಂತಿವೆ. ಗ್ರೀಕರ ಕಾಲದ ಅರ್ಥಶಾಸ್ತ್ರ ಸಾಹಿತ್ಯವನ್ನು ಅಲ್ಲಿಯ ತತ್ತ್ವವೇತ್ತರು ಅಂದಿನ ನೈತಿಕ ದೃಷ್ಟಿಗನುಗುಣವಾಗಿ ರಚಿಸಿದರು. ಅರಿಸ್ಟಾಟಲ್, ಪ್ಲೇಟೊ ಮುಂತಾದ ಬರೆಹಗಾರರು ಕೂಲಿ ವಿಭಜನೆ, ಹಣದ ಉಪಯೋಗ ಮುಂತಾದ ಆರ್ಥಿಕ ವಿಷಯವಾಗಿ ಬರೆದಿದ್ದಾರೆ. ಮಧ್ಯಮಯುಗದ ಆರ್ಥಿಕ ಆಲೋಚನೆಗಳು ಅಂದಿನ ನೈತಿಕ ಭಾವನೆಗಳನ್ನೊಳ ಗೊಂಡಿದ್ದುವು. ಈ ಬಗೆಯ ಸಾಹಿತ್ಯವನ್ನು ಕ್ರೈಸ್ತಪಾದ್ರಿಗಳು ರಚಿಸಿದ್ದರು. ಅವರ ಬರೆಹಗಳಲ್ಲಿ ಆರ್ಥಿಕ ಜೀವನ ಮತ್ತು ಐಹಿಕ ಜೀವನಗಳ ಪರಾಮರ್ಶೆ ಬರುತ್ತದಾದರೂ ಎಲ್ಲ ಅಭಿಪ್ರಾಯಗಳೂ ಕ್ರೈಸ್ತಧರ್ಮದತ್ತ, ವೈರಾಗ್ಯದತ್ತ ವಾಲುತ್ತವೆ. ಮೂರನೆಯ ಯುಗ ಆರ್ಥಿಕ ರಾಷ್ಟ್ರೀಕರಣದ ಕಾಲ. ಇದನ್ನು ವ್ಯಾಪಾರೋದ್ಯಮದ ಕಾಲ ಎಂದೂ ಹೇಳಬಹುದು. ಈ ಕಾಲದಲ್ಲಿ ಮಧ್ಯಯುಗದ ಜಹಗೀರಿಯನ್ನು ಕಿತ್ತೊಗೆದು ರಾಷ್ಟ್ರೀಯಭಾವನೆಯಿಂದ ಕೂಡಿದ ಆರ್ಥಿಕತತ್ತ್ವವನ್ನು ಆಚರಣೆಗೆ ತರಲಾಯಿತು. ಇದರ ಫಲವಾಗಿ ಸಾಮಾಜಿಕ ಜೀವನದಲ್ಲಿ ಬದಲಾವಣೆಗಳುಂಟಾದುವು. ಇಟಲಿ ಮತ್ತು ಉತ್ತರ ಯುರೋಪ್ ರಾಜ್ಯಗಳಲ್ಲಿ ಸಂಸ್ಕೃತಿ, ಸಾಹಿತ್ಯ, ಕಲೆಯ ಪುನರುಜ್ಜೀವನವಾಯಿತು. ಔದ್ಯೋಗಿಕ ಪ್ರಗತಿ ಆಯಿತು. ಅಚ್ಚುಕೂಟ, ಪ್ರಕಟಣೆ, ವಿಜ್ಞಾನ, ವ್ಯಾಪಾರಗಳನ್ನು ಮುಖ್ಯವೆಂದು ಪರಿಗಣಿಸಲಾಯಿತು. ಈ ಯುಗವನ್ನು ವಾಣಿಜ್ಯದ ಕ್ರಾಂತಿಕಾಲ ಎಂದು ಹೇಳಬಹುದು. ವಾಣಿಜ್ಯ, ವ್ಯಾಪಾರ ೧೬ನೆಯ ಶತಮಾನದಿಂದ ೧೮ರವರೆಗೆ ಯುರೋಪಿನಲ್ಲಿ ಅಭಿವೃದ್ಧಿ ಹೊಂದಿತು. ಬಾಕಿರ್ಲ್, ಕ್ರಾಂವೆಲ್ ಮುಂತಾದ ರಾಜಕಾರಣಿಗಳು ಬರೆದ ಪುಸ್ತಕಗಳು ಈ ವಿಚಾರವನ್ನು ವಿಶದವಾಗಿ ತಿಳಿಸಿವೆ. ವಿದೇಶೀ ವ್ಯಾಪಾರದಲ್ಲಿ ಉಳಿತಾಯ ಮಾಡುವುದು ಆ ರಾಷ್ಟ್ರಗಳ ಉದ್ದೇಶವಾಗಿತ್ತು. ಹೊಸದೇಶದ ವ್ಯಾಪಾರದಿಂದ ತಮ್ಮ ದೇಶದೊಳಕ್ಕೆ ಹಣವನ್ನಾಗಲಿ, ಚಿನ್ನವನ್ನಾಗಲಿ ತರುವುದು, ಬಡ್ಡಿದರ ಕಡಿಮೆ ಮಾಡುವುದು, ಕಡಿಮೆ ಕೂಲಿ, ಜನಸಂಖ್ಯೆ ಹೆಚ್ಚಿಸುವುದಕ್ಕೆ ಉತ್ತೇಜನ, ವಸಾಹತು ನಿರ್ಮಾಣ ಇತ್ಯಾದಿ ಉದ್ದೇಶಗಳನ್ನು ಆ ರಾಷ್ಟ್ರಗಳು ಹೊಂದಿದ್ದುವು. ಆಧುನಿಕ ಅರ್ಥಶಾಸ್ತ್ರದ ವಿಕಸನ ಆಧುನಿಕ ಮಾನವನ ಆಲೋಚನೆಯ ಫಲಿತಾಂಶ. ಆರ್ಥಿಕ ರೀತಿಯಲ್ಲಿ ಈ ಯುಗವನ್ನು ಬಂಡವಾಳ, ಪೈಪೋಟಿ ಅಥವಾ ಸ್ವತಂತ್ರ ವ್ಯಾಪಾರದ ಪ್ರಯತ್ನ ಎಂದು ಹೇಳಬಹುದು. ರಾಜಕೀಯವಾಗಿ ಇದು ಪ್ರಜಾಪ್ರಭುತ್ವ ಕಾಲ. ನಾಲ್ಕನೆಯದಾದ ಈ ಆರ್ಥಿಕಯುಗವನ್ನು ಆರ್ಥಿಕ ಜ್ಞಾನೋದಯ ಕಾಲ ಅಥವಾ ವಿಮರ್ಶಾತ್ಮಕ ವಿಚಾರಕಾಲ ಎಂದು ಹೇಳಲಾಗಿದೆ, ಇಂಥ ಅಭಿವೃದ್ಧಿ ಕಾಲದಲ್ಲಿ ಆರ್ಥಿಕ ಮುಖಂಡತ್ವ ಮೆಡಿಟರೇನಿಯನ್ ಭಾಗದಿಂದ ಯುರೋಪ್ ಖಂಡದ ಉತ್ತರಭಾಗದಲ್ಲಿರುವ ಇಂಗ್ಲೆಂಡಿಗೆ ವರ್ಗವಾಯಿತು. ಅಲ್ಲಿಂದ ಉತ್ತರ ಅಮೆರಿಕ ವಸಾಹತುಗಳಿಗೆ ಹರಡಿತು. ಆಧುನಿಕ ಅರ್ಥಶಾಸ್ತ್ರವನ್ನು ಸ್ವತಂತ್ರ್ಯ ಉದ್ಯಮದ ವಿಜಯ ಎಂದು ಹೇಳಬಹುದು. ಹಣವೇ ಎಲ್ಲ ಬಗೆಯ ಅಭಿವೃದ್ಧಿಗೂ ಮೂಲ. ಹಣ ಸಂಪಾದನೆ ಮುಖ್ಯ. ಈ ವಿಚಾರವಾಗಿ ಅರ್ಥಶಾಸ್ತ್ರ ಸಾಹಿತ್ಯರಚನಕರಾದ ಜೇಮ್ಸ್ ಅಪ್ಲಿ, ಥಾಮಸ್ ಮ್ಯಾನ್ ಮುಂತಾದವರು, ವಿದೇಶೀ ಮತ್ತು ಸ್ವತಂತ್ರ ವ್ಯಾಪಾರಗಳ ವಿಷಯವಾಗಿ ಪುಸ್ತಕ ಬರೆದು ಹಂಚಿದರು. ಹಣ ಸಂಪಾದನೆಯೇ ಮುಖ್ಯ ಎಂಬ ಭಾವನೆ ಬೇರೂರಿದಂತೆ, ಆರ್ಥಿಕ ವಿಚಾರದಲ್ಲಿ ಸ್ವತಂತ್ರ ಪ್ರವೃತ್ತಿ ಹೆಚ್ಚಿತು. ನಿಯಂತ್ರಣ ಹೋಯಿತು. ಆ್ಯಡಂ ಸ್ಮಿತ್ ಮುಂತಾದ ಅರ್ಥಶಾಸ್ತ್ರಕಾರರ ಬರೆಹದ ಪ್ರಭಾವಕ್ಕೆ ಇಂಗ್ಲೆಂಡ್ ಒಳಗಾಯಿತು. ಇಂಗ್ಲೆಂಡಿನ ಕೈಗಾರಿಕಾಕ್ರಾಂತಿ, ಫ್ರಾನ್ಸ್ ನ ಮಹಾಕ್ರಾಂತಿ, ನೆಪೋಲಿಯನ್ನನ ಯುದ್ಧಗಳು ಇವೆಲ್ಲದರ ಫಲವಾಗಿ , ವ್ಯವಸಾಯ, ಕೈಗಾರಿಕೆ, ವ್ಯಾಪಾರ ಮುಂತಾದ ಆರ್ಥಿಕ ಉದ್ಯಮಗಳಿಗೆ ಹೆಚ್ಚು ಪ್ರೋತ್ಸಾಹ ದೊರೆಯಿತು. ಇಂಥ ಉತ್ತೇಜನ, ರಾಜಕೀಯ ಅರ್ಥಶಾಸ್ತ್ರ ಮತ್ತು ತೆರಿಗೆಯ ತತ್ತ್ವಗಳನ್ನು ಕುರಿತು ಪುಸ್ತಕ ಪ್ರಕಟಣೆಯಿಂದ ಪ್ರಾರಂಭವಾಯಿತು. ಜಾನ್ ಸ್ಟೂಯರ್್ಟ ಮಿಲ್ ೧೮೪೮ರಲ್ಲಿ ರಾಜಕೀಯ ಅರ್ಥಶಾಸ್ತ್ರ ತತ್ತ್ವ ಎಂಬ ಗ್ರಂಥವನ್ನು ಪ್ರಕಟಿಸಿದ. ಹೀಗೆಯೇ ಬಂಡವಾಳ, ಉತ್ಪನ್ನ, ಲಾಭ, ವಿತರಣೆ ಮುಂತಾದ ವಾಣಿಜ್ಯ, ವ್ಯಾಪಾರ ಲಾಭ ಸಂಪಾದನೆ ಮುಂತಾದ ಆರ್ಥಿಕ ಹವ್ಯಾಸಗಳು ಬಳಕೆಗೆ ಬಂದುವು. ಹಣಸಂಪಾದನೆ, ಬೆಲೆ, ಅಪೇಕ್ಷೆ, ಸರಬರಾಜು ಇತ್ಯಾದಿ ಅರ್ಥಶಾಸ್ತ್ರದ ವಿಷಯವಾಗಿ ವಿಪುಲಸಾಹಿತ್ಯ ಸೃಷ್ಟಿಯಾಯಿತು. ಇದರ ಫಲವಾಗಿ ಹೊಸಭಾವನೆ, ಹೊಸ ಪ್ರವೃತ್ತಿ, ಹೊಸ ಸಂಸ್ಥೆಗಳು ಹುಟ್ಟಿದುವು. ಪೇಟೆ, ಪೇಟೆಧಾರಣೆ, ಉತ್ಪಾದನೆ ಮತ್ತು ಅದರ ಅಂಗಗಳು, ವಿತರಣೆಯ ವಿಭಾಗ ಮುಂತಾದ ಆರ್ಥಿಕ ವಿಷಯಗಳು ಅರ್ಥಶಾಸ್ತ್ರಕಾರರ ಗಮನವನ್ನು ವಿಶೇಷವಾಗಿ ಆಕರ್ಷಿಸಿದುವು. ಇದರ ಪರಿಣಾಮವಾಗಿಯೊ ಎಂಬಂತೆ ಆಲ್ಫ್ರೆಡ್ ಮಾರ್ಷಲ್ನ ಉದ್ಗ್ರಂಥ ಪ್ರಕಟವಾಯಿತು. ಇಂಥ ಪ್ರಭಾವಯುತ ಪ್ರಚೋದನಾತ್ಮಕ ಅರ್ಥಶಾಸ್ತ್ರ ಕೃತಿಯನ್ನು ಎಲ್ಲರೂ ಆದರಿಂದ ಸ್ವಾಗತಿಸಿದರು. ಈ ಪುಸ್ತಕವನ್ನು ಅನೇಕ ಸಲ ಅಚ್ಚು ಹಾಕಿಸಿ ಹಂಚಬೇಕಾಯಿತು. ಅರ್ಥಶಾಸ್ತ್ರದ ತಾತ್ವಿಕ ವಿಭಾಗದಲ್ಲಿ ಸಾಹಿತ್ಯ ರಚನೆಯಾದಂತೆ, ಪ್ರಾಯೋಗಿಕ ವಿಭಾಗದಲ್ಲಿ ತಲೆದೋರಿದ ಸಮಸ್ಯೆಗಳನ್ನು ಬಗೆಹರಿಸಲಾಯಿತು. ಇಂಥ ಸಮಸ್ಯೆಗಳಲ್ಲಿ ಅತಿ ಮುಖ್ಯವಾದುವು ಎರಡು. ಒಂದು ಬೃಹತ್ ಕೈಗಾರಿಕೆಗಳ ಮತ್ತು ವ್ಯಾಪಾರ ಸಂಸ್ಥೆಗಳ ಸ್ಥಾಪನೆ. ಕೇಂದ್ರೀಕೃತ ಅಧಿಕಾರ ಉತ್ಪನ್ನ ವಸ್ತುವಿನ ಮಾರಾಟದ ಸಂಪುರ್ಣ ಅಧಿಕಾರ ಎಂದು ಇದನ್ನು ಹೇಳಬಹುದು. ಇನ್ನೊಂದು ಹಣಕಾಸು ಸಾಲ, ವಾಣಿಜ್ಯ, ಕೈಗಾರಿಕೆ ಮತ್ತು ವ್ಯಾಪಾರಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಮತ್ತು ಅವುಗಳ ಪರಿಹಾರ, ಸರ್ಕಾರದ ಪ್ರವೇಶ ಇವೇ ಮುಂತಾದುವು. ಈ ವಿಷಯಗಳನ್ನು ಅರ್ಥಶಾಸ್ತ್ರಜ್ಞರು ಕೂಲಂಕಷವಾಗಿ ವಿಮರ್ಶೆಮಾಡಿ, ಭವಿಷ್ಯಸೂಚಿಸಿ ಆ ಬಗ್ಗೆ ಪುಸ್ತಕಗಳನ್ನು ಬರೆದು ಪ್ರಕಟಿಸಿದ್ದಾರೆ. ಹಾಗೆಯೇ ಹಣದ ಉಬ್ಬರ, ಅದನ್ನು ನಿವಾರಿಸುವ ವಿಧಾನವನ್ನೂ ಅರ್ಥಶಾಸ್ತ್ರ ನಿಪುಣರು ವಿಚಾರ ಮಾಡದೇ ಇಲ್ಲ. ಜೆ.ಎಮ್. ಕೇನ್ಸ್ ಎಂಬ ಪ್ರಸಿದ್ಧ ಅರ್ಥಶಾಸ್ತ್ರಜ್ಞ ಉದ್ಯೋಗ, ಬಡ್ಡಿ, ಹಣಕಾಸಿನ ತತ್ತ್ವಗಳನ್ನು ಕುರಿತು ವಿಚಾರಾತ್ಮಕ ಅರ್ಥಶಾಸ್ತ್ರ ಪುಸ್ತಕವನ್ನು ೧೯೩೬ರಲ್ಲಿ ಪ್ರಕಟಿಸಿದ. ಇವನ ಅನುಯಾಯಿಗಳಾದ ಇತರ ಅರ್ಥಶಾಸ್ತ್ರನಿಪುಣರು ಇಂಥ ಸಾಹಿತ್ಯರಚನೆ ಮಾಡಿ ಅಂತಾರಾಷ್ಟ್ರೀಯ ಆರ್ಥಿಕ ಭಾವನೆ ಮತ್ತು ಸಮಸ್ಯೆಗಳ ವಿಚಾರವಾಗಿ ಅನೇಕ ಕೃತಿಗಳನ್ನು ಪ್ರಕಟಿಸಿದ್ದಾರೆ. ಇತ್ತೀಚೆಗೆ ಅರ್ಥಶಾಸ್ತ್ರದಲ್ಲಿ ಉದ್ಭವಿಸಿರುವ ಇಂದ್ರಿಯಗೋಚರವಾದ ವಿಷಯಗಳಲ್ಲಿ ಅತಿಮುಖ್ಯವಾದುದು ದುಡಿಮೆ. ಇದೊಂದು ದೊಡ್ಡ ಸಮಸ್ಯೆ. ಇದನ್ನು ಸಮರ್ಪಕವಾಗಿ ಬಗೆಹರಿಸದೆ ಯಾವ ಬಗೆಯ ಆರ್ಥಿಕ ಯೋಜನೆಯನ್ನೂ ಕಾರ್ಯಗತ ಮಾಡಲು ಸಾಧ್ಯವಿಲ್ಲ. ದುಡಿಮೆ, ಕೂಲಿ ಕೂಲಿಗಾರರ ಸಂಘ, ಕೂಲಿಯ ದರ, ಕೆಲಸದ ಕಾಲ, ಕಾರ್ಖಾನೆಯ ಕಾನೂನು, ಲಾಭದ ಹಂಚಿಕೆ, ಕೈಗಾರಿಕಾವ್ಯಾಜ್ಯ ತೀರ್ಮಾನ, ಮಧ್ಯಸ್ಥಗಾರರ ತೀರ್ಪು, ವಿಮೆ, ನಿರುದ್ಯೋಗ ಅದರ ಪರಿಹಾರ ಇತ್ಯಾದಿ ವಿಷಯಗಳೆಲ್ಲವೂ ಅರ್ಥಶಾಸ್ತ್ರದ ವ್ಯಾಪ್ತಿಗೆ ಬಂದು ಪರಿಶೀಲಿಸತಕ್ಕ ವಿಷಯಗಳಾಗಿರುವುದಲ್ಲದೆ ಪ್ರಾಯೋಗಿಕ ಪ್ರಶ್ನೆಗಳೂ ಆಗಿವೆ. ಇದರಿಂದ ಅರ್ಥಶಾಸ್ತ್ರದ ವೈಶಾಲ್ಯ ಎಷ್ಟು ಎಂಬುದು ಗೊತ್ತಾಗುವುದು. ಆಧುನಿಕ ಅರ್ಥಶಾಸ್ತ್ರದಲ್ಲಿ ಸಮೀಕ್ಷಿಸಬೇಕಾದ ಮುಖ್ಯ ವಿಷಯ ಅಂಕಿಅಂಶಗಳ ಸಂಗ್ರಹ. ಇತ್ತೀಚೆಗೆ ಇದಕ್ಕೆ ವಿಶೇಷ ಪ್ರಾಶಸ್ತ್ಯ ದೊರೆತಿದೆ. ಆರ್ಥಿಕ ಚಟುವಟಿಕೆಗಳ ಫಲಿತಾಂಶವಾದ ಅಂಕಿಅಂಶಗಳನ್ನು ಪ್ರಾಮಾಣಿಕವಾಗಿ ಸಂಗ್ರಹಿಸಿ ಪ್ರಕಟಿಸಲಾಗುತ್ತಿದೆ. ಸರ್ಕಾರಗಳೂ ಖಾಸಗಿ ವಾಣಿಜ್ಯಸಂಸ್ಥೆಗಳೂ ಈ ಬಗೆಯ ಕೆಲಸ ಕೈಗೊಂಡಿವೆ. ಮುಂಚಿನ ಅರ್ಥಶಾಸ್ತ್ರ ನಿಪುಣರು ಈ ವಿಷಯವನ್ನು ಅಷ್ಟಾಗಿ ಗಮನಿಸಿರಲಿಲ್ಲ. ಈ ಅಂಕಿಅಂಶಗಳು ಆರ್ಥಿಕ ಅನುಭವದ ಕುರುಹಾಗಿ, ಆರ್ಥಿಕ ಸಮಸ್ಯೆಗಳ ವ್ಯಾಸಂಗ, ವಿಭಜನೆ ಪರಿಹಾರಕ್ಕೆ ವಿಶೇಷವಾಗಿ ಸಹಾಯ ಮಾಡುತ್ತಿವೆ. ಹೀಗೆ ಆಧುನಿಕ ಅರ್ಥಶಾಸ್ತ್ರದ ಆಸಕ್ತಿ ವಿಶೇಷರೀತಿಯ ವೈವಿಧ್ಯ ವಾಸ್ತವಿಕತೆಯಿಂದ ಕೂಡಿದ್ದರೂ ಅದರ ಕಲ್ಪನೆಗಳು ಆರ್ಥಿಕ ಜೀವನದ ವಾಸ್ತವಾಂಶಗಳನ್ನು ವಿಮರ್ಶಿಸುವುದಕ್ಕೆ ಸಹಾಯ ಮಾಡಿದರೂ ಅರ್ಥಶಾಸ್ತ್ರ, ರಾಜಕೀಯ ಅಥವಾ ಸಾಮಾಜಿಕಶಾಸ್ತ್ರದ ಅಂಗವಾಗಿಯೇ ಉಳಿದಿದೆ. ಈ ದೃಷ್ಟಿಯಿಂದ ಇದು ತಾತ್ತ್ವಿಕದ ಮಾನಸಿಕಶಿಕ್ಷಣವಾಗಿದೆ. ನಿರ್ದಿಷ್ಟವಾದ ತೀರ್ಪುಗಳು ಅಥವಾ ಸಿದ್ಧಾಂತಗಳು ತಿರಸ್ಕೃತವಾಗಿರಬಹುದು ಅಥವಾ ಬದಲಾವಣೆ ಉಂಟಾಗಿರಬಹುದು. ಅಥವಾ ಪ್ರಧಾನವಾಗಿ ಪುನಾರಚಿತವಾಗಿರಬಹುದು. ಗಂಭೀರವಾದ ಅನುಬಂಧಗಳು ಸೇರಿಸಲ್ಪಟ್ಟಿರಬಹುದು. ಆದರೆ ಸಮಾಜದ ಆರ್ಥಿಕಜೀವನ ಕ್ರಮದ ಸಾಮಾನ್ಯಚಿತ್ರ ಯಾವಾಗಲೂ ವಿಭಜನೆ ಮತ್ತು ಭವಿಷ್ಯನಿರ್ಧಾರಕ್ಕೆ ಸಹಾಯ ವಾಗಿಯೇ ಉಳಿದಿರುತ್ತದೆ. ಅಭಿಪ್ರಾಯಭೇದ ಮಾರ್ಗಭೇದಗಳಿದ್ದರೂ, ಅರ್ಥಶಾಸ್ತ್ರ ಸದಾ ಮುಂದುವರಿಯುತ್ತಿರುವ, ಉತ್ಕೃಷ್ಟರೀತಿಯ ವಿಸ್ತಾರವಾದ ವ್ಯಾಸಂಗ ಎಂಬುದನ್ನು ಅರ್ಥಶಾಸ್ತ್ರ ಸಮೀಕ್ಷೆಯಿಂದ ಚೆನ್ನಾಗಿ ತಿಳಿಯಬಹುದು.