ಹೊಸ್ತೋಟ ಮಂಜುನಾಥ ಭಾಗವತ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಶ್ರೀ ಹೊಸ್ತೋಟ ಮಂಜುನಾಥ ಭಾಗವತರು ಉತ್ತರ ಕನ್ನಡ ಜಿಲ್ಲೆಯಕ್ಷಗಾನ ಪ್ರಕಾರದ ಖ್ಯಾತ ಭಾಗವತರು. ಪ್ರಸಂಗಕರ್ತರು ಹಾಗೂ ಯಕ್ಷಗಾನದ ಸ್ವರೂಪ, ವೈವಿದ್ಯತೆ ಗುಣಮಟ್ಟಗಳ ಬಗ್ಗೆ ನಿಖರವಾಗಿ ತಿಳಿದುಕೊಂಡಿರುವ ಶ್ರೇಷ್ಠ ಕಲಾವಿದರು. ಶಿರಸಿಯ ಹೊಸ್ತೋಟದ ಭಾಗವತರ ಮಗ ಮಂಜುನಾಥ - ಇವರಿಗೆ ಪ್ರಾಯ ೭೩. ಭಾಗವತಿಕೆಯನ್ನೇ ಉಸಿರಾಗಿಸಿಕೊಂಡದ್ದು ಕೆರೆಮನೆ ಶಿವರಾಮ ಹೆಗ್ಡೆಯವರ ಪ್ರಭಾವದಿಂದ. ಆರಂಭದಲ್ಲಿ ಕೊಡಗಿಪಾಲ ಶಿವರಾಮ ಹೆಗ್ಡೆ ಇವರನ್ನು ರಂಗಕ್ಕೆ ತಂದಾಗ ಉತ್ಸಾಹದಿಂದ ಹಾಡುಗಾರಿಕೆ ನಡೆಸಿ ಹೆಚ್ಚಿನ ಜಿಜ್ಞಾಸೆ ಬೆಳೆಸಿಕೊಂಡು ಬಾಳೆಹದ್ದು ಕೃಷ್ಣ ಭಾಗವತ ಹಾಗೂ ಕೆರಮನೆ ಮಹಾಬಲ ಹೆಗ್ಡೆ ಇವರ ಶಿಷ್ಯನಾಗಿ ಯಕ್ಷಗಾನದ ಕಲಿಕೆಯ ಪಂಚಾಂಗವನ್ನು ಇನ್ನಷ್ಟೂ ಗಟ್ಟಿಗೊಳಿಸಿಕೊಂಡರು. ಕ್ರಮೇಣ ನೃತ್ಯ, ಚಂಡೆ, ಮದ್ದಳೆ, ವೇಷಗಾರಿಕೆ ಮಾಡುತ್ತಾ ಬಯಲಾಟದ ಅನೇಕ ತಿರುಗಾಟಗಳನ್ನು ಮಾಡಿದ ಅನುಭವ ಇವರದು. ೧೯೬೬-ರಲ್ಲಿ ಒಂದು ದಿನ ಇದ್ದಕ್ಕಿದ್ದಂತೆ ಶ್ರೀ ರಾಮಕೃಷ್ಣ ಆಶ್ರಮಕ್ಕೆ ಸೇರಿ ಅಭಯ ಚೈತನ್ಯ ಬ್ರಹಚಾರಿ ಆದರು. ಇಂದಿಗೂ ಹೊಸ್ತೋಟ ಮಂಜುನಾಥ ಭಾಗವತರು ಎಲ್ಲಾ ಅರ್ಥಗಳಲ್ಲಿ ಪರಿವ್ರಾಜಕರಾಗಿ ತಮ್ಮ ಸಂಪೂರ್ಣ ಸೇವೆಯನ್ನು ಯಕ್ಷಗಾನಕ್ಕೆ ಮುಡಿಪಾಗಿರಿಸಿರುವರು. ಭಾಗವತಿಕೆಯ ಜೊತೆಯಲ್ಲಿ ಅರ್ಥಗಾರಿಕೆಯಲ್ಲೂ ಮೊದಲ ಪಂಕ್ತಿಗೆ ಅರ್ಹರಾದ ಇವರು ಸಂಶೋಧನತ್ಮಕ ನೆಲೆಯಲ್ಲಿ ಕಲೆಯನ್ನು ನೋಡುವ ಕಲಾ ಜಿಜ್ಞಾಸುಗಳಾಗಿರುವರು.

ಯಕ್ಷಗಾನದ ರಾಗ, ದಾಟಿ, ಮಟ್ಟು, ಛಂದಸ್ಸು, ನಿರೂಪಣೆ ಹಾಗೂ ಹಾಡುಗರಿಕೆಯಲ್ಲಿನ ಪಾತ್ರಗಳಿಗೆ ಅನುಗುಣವಾಗಿ ಹಾಡನ್ನು ಹಾಡುವ ಸಿದ್ಧಿಗಳಿಸಿರುವ ಶ್ರೇಷ್ಠತೆ ಇವರಲ್ಲಿದೆ. ಆಧುನಿಕ ಕಾಲದ ಪ್ರಸಂಗಕರ್ತರಲ್ಲಿ ಹೊಸ್ತೋಟ ಮಂಜುನಾಥ ಭಾಗವತರು ಯಕ್ಷಗಾನ ಸ್ವರೂಪದ ಸಾಹಿತ್ಯ ರಚಿಸಿರುವ ಪ್ರಸಂಗಕರ್ತರಲ್ಲಿ ಒಬ್ಬರು. ಚಿಕ್ಕ ಪ್ರಸಂಗ ಹಾಗೂ ದೊಡ ಪ್ರಸಂಗ ಒಟ್ಟಾಗಿ ಸುಮಾರು ೧೩೦ ಪ್ರಸಂಗಗಳನ್ನು ಶ್ರೀಯುತರು ರಚಿಸಿರುವರು. ಮುಖ್ಯವಾಗಿ ಇವರ ಬರಹಗಳು ಅಭ್ಯಾಸಿ ಮತ್ತು ಹವ್ಯಾಸಿ ಯಕ್ಷಗಾನ ತಂಡಕ್ಕಾಗಿ ರಚಿತವಾದಂತವು. ಸಾಂಪ್ರದಾಯಿಕ ಪ್ರಸಂಗಗಳಲ್ಲಿ ಕಥೆಯ ಸಾರಾಂಶವನ್ನು ನಾಟಕೀಯವಾಗಿ ಹೇಳುವುದು ಇವರ ಮುಖ್ಯ ತತ್ವ.

ಉತ್ತರ ಕನ್ನಡ ಮತ್ತು ಮಲೆನಾಡುಗಳಲ್ಲಿ ಯಕ್ಷಗಾನದ ಸರ್ವಾಂಗ ಶಿಕ್ಷಣದ ಗುರುವಾಗಿ, ಭಾಗವತರಾಗಿ ತಮ್ಮ ಕಾರ್ಯವನ್ನು ಒಂದು ಚಳುವಳಿ ರೂಪವಾಗಿ ಬೆಳೆಸಿರುವರು. ಇವರ ಇಪ್ಪತೈದು ವರ್ಷಗಳ ತಿರುಗಾಟದಲ್ಲಿ ಸುಮಾರು 30 ಭಾಗಗಳಲ್ಲಿ ಸಾವಿರಕ್ಕೂ ಮಿಕ್ಕಿದ ಶಿಷ್ಯರನ್ನು ತಯಾರಿಸಿದ ಕೀರ್ತಿ ಇವರದಾಗಿದೆ. ಯಕ್ಷಗಾನ ಪಾಠ, ತರಬೇತಿ ನೀಡಿರುವ ಇವರು ಏಕವ್ಯಕ್ತಿ ಗುರುಕುಲವೆಂಬ ಪ್ರಶಂಸೆಗೆ ಪಾತ್ರರಾಗಿರುವರು. ಇವರ ಮತ್ತೊಂದು ಸಾಧನೆಯೆಂದರೆ ಶಿವಮೊಗ್ಗದ ಅಂಧ ವಿಕಾಸ ಕೇಂದ್ರದ ಮಕ್ಕಳಿಗೆ ತರಬೇತಿ ನೀಡಿ ಯಕ್ಷಗಾನವನ್ನು ಪ್ರದರ್ಶಿಸಿರುವ ಆಟಗಳು ಒಂದು ಅಭೂತಪೂರ್ವ ಹಾಗೂ ಗಿನ್ನೆಸ್ ದಾಖಲೆಯಾಗುವಂತಹ ಸಾಧನೆ ಎನ್ನಬಹುದು. ಯಕ್ಷಗಾನದಲ್ಲಿ ಪ್ರಚಲಿತ ಶಿಕ್ಷಣ ಯೋಜನೆಗಿಂತ ಭಿನ್ನವಾಗಿ ಗಣಿತದ ಮೂಲಕ ತಾಳವನ್ನು ಹೇಳಿಕೊಡುವುದು, ಅದಕ್ಕೆ ಚಲನೆಯನ್ನು ಹೊಂದಿಸುವ ಇವರದೇ ಆದ ರಾಚನೀಕ ಸ್ವರೂಪ ಮತ್ತು ಪದ್ಯ ಮಟ್ಟುಗಳನ್ನು ಕಲಿಸುವುದು ಶಿಕ್ಷಣ ಕ್ಷೇತ್ರದಲ್ಲಿಯೇ ಒಂದು ಹೊಸ ದೃಷ್ಠಿಕೋನವೆಂದು ತಿಳಿಯಲಾಗಿದೆ. ಶ್ರೀಯುತರು ನಡೆಸಿಕೊಡುವ ತಾಳ, ಮಟ್ಟು, ಹಾಡುಗಾರಿಕೆಯ ವಿಧಾನದ ಅನೇಕ ಪ್ರಕಾರಗಳನ್ನು ಉಡುಪಿಯ ಪ್ರಾದೇಶಿಕ ಜಾನಪದ ರಂಗ ಕಲೆಗಳ ಅಧ್ಯಯನ ಕೇಂದ್ರವು ದಾಖಲೀಕರಣ ನಡೆಸಿದೆ.

ತನಗನಿಸಿದ್ದನ್ನು ನೇರವಾಗಿ ಹಾಗೂ ನಿರ್ಭಯವಾಗಿ ಹೇಳುವ ಹಾಗೂ ವಸ್ತುನಿಷ್ಠತೆಯನ್ನು ಸತತವಾಗಿ ಕಾಪಾಡಿಕೊಂಡಿರುವ ಹೋಲಿಕೆಯಿಲ್ಲದ ಈ ವ್ಯಕ್ತಿ ಯಕ್ಷಗಾನದ ಪರಿವ್ರಾಜಕ. ಇವರದೇ ಆದ ಆಸ್ತಿ, ತಾಣ, ಎಂಬುದಿಲ್ಲ. ಸದಾ ಒಂದು ಕೈ-ಚೀಲ ಹೊತ್ತು ಯಕ್ಷಗಾನದ ಭಾಗವತಿಕೆ, ಯಕ್ಷಗಾನದ ಪ್ರಯೋಗ ನಡೆಸುವ ಇವರಿಗೆ ಇದೀಗ ವಯಸ್ಸು ೭೩. ಅವರ ಮಾತಿನಲ್ಲೇ ಹೇಳುವುದಾದರೆ ನೀವು ನನಗೆ ಸಮ್ಮಾನ, ಸಭೆ, ಸಮಾರಂಭ ನಡೆಸಬೇಡಿ, ನನಗೆ ಮಾಡಲು ಕೆಲಸ ಕೊಡಿ, ಕ್ಷೇತ್ರ (ಯಕ್ಷಗಾನ ಕುರಿತು) ಕೊಡಿ, ಸಂತೋಷದಿಂದ ನಡೆಸುವೆ ಎನ್ನುವ ಇವರ ಮಾತು ಆದರ್ಶನೀಯ.

ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ