ಹೊಯಿಸಳ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅರಗ ಲಕ್ಷ್ಮಣರಾವ್
ಜನನಮೇ ೭, ೧೮೯೩
ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ
ಮರಣಅಕ್ಟೋಬರ್ ೧೦, ೧೯೫೯
ವೃತ್ತಿಮಕ್ಕಳ ಸಾಹಿತಿ, ಅಧ್ಯಾಪನ
ವಿಷಯಕನ್ನಡ ಸಾಹಿತ್ಯ

ಹೊಯಿಸಳ ಆರಗ ಲಕ್ಷ್ಮಣರಾವ್ ಅವರ ಕಾವ್ಯನಾಮ. ಕನ್ನಡಿಗರ ನೆನಪಿನಂಗಳದಿಂದ ಬಹುಪಾಲು ಮಾಸಿಹೋಗಿರುವ ಮಹನೀಯರಲ್ಲಿ ಆರಗ ಲಕ್ಷ್ಮಣರಾವ್ ಅವರೂ ಒಬ್ಬರು. ಎಳೆಯರಿಗೆ ಪುಸ್ತಕ ಬೊಧಿಸುವ ಹೊಯಿಸಳರ ಕವಿತೆ ಮಕ್ಕಳ ಸಾಹಿತ್ಯಕ್ಕೆ ಹೊಸ ಮೆರಗು ಹೊಸ ತಿರುವು ಕೊಟ್ಟ ಶಕಪುರುಷರು.

"ಸಣ್ಣ ಚಿಣ್ಣ ಹೊನ್ನ ಹಸುಳೆ ನಮ್ಮ ನಾಡದೇವರು, ಇಂದಿನವರು ಮುಂದೆಬೆಳೆದು ಹಣ್ಣು ಕೊಡುವ ಸಸಿಗಳು....ಹೀಗೆಂದು ಮಕ್ಕಳನ್ನು ದೇವರಿಗೆ ಸಮೀಕರಿಸಿ, ಅವರ ಮಾನಸಿಕ ವಿಕಾಸಕ್ಕೆ ಬದುಕಿನ್ನುದ್ದಕ್ಕೂ ಶ್ರಮಿಸಿದವರು. ಕನ್ನಡದ ಮಕ್ಕಳಿಗಾಗಿ ಅನೇಕ ಕವಿತೆಗಳನ್ನು,, ಸಣ್ಣ ಕಥೆಗಳನ್ನು, ಮತ್ತು ಸ್ವಾರಸ್ಯಪೂರ್ಣ ನಾಟಕಗಳನ್ನು ಬರೆದಿದ್ದಾರೆ. "ಸಂತಮ್ಮಣ್ಣ" ನನ್ನು ಮರೆಯಲಾದೀತೆ?. ಗಾಂಧೀಜಿಯನ್ನು ಶಿಶುಭಾಶೆಯಲ್ಲಿ ಕೀರ್ತಿಸುವ "ತಟ್ಟು ಚಪ್ಪಾಳೆ ಪುಟ್ಟ ಮಗು..." ಎಂಬ ಕವಿತೆ ಯಾರಿಗೆ ಗೊತ್ತಿಲ್ಲ? ಅವರ ಕಥೆಗಳಲ್ಲಿ ಬಂದಂತಹ 'ಅಭ್ಯಂಕು', 'ಪುಟ್ಟರಸು', 'ವೀರಕುಮಾರ' .....ಇಂತ ನೂರಾರು ಪಾತ್ರಗಳು ಕಳೆದ ಶತಮಾನದ ಪೂರ್ವಾರ್ಧದಲ್ಲಿ ಕನ್ನಡನಾಡಿನ ಮಕ್ಕಳನ್ನು ಸೂರೆಗೊಂಡಿದ್ದವು.

ಜೀವನ[ಬದಲಾಯಿಸಿ]

‘ಹೊಯಿಸಳ’ ಎಂಬ ಕಾವ್ಯನಾಮದಿಂದ ಮಕ್ಕಳ ಸಾಹಿತಿ ಎಂದೇ ಪ್ರಖ್ಯಾತರಾಗಿದ್ದ ಅರಗ ಲಕ್ಷ್ಮಣರಾಯರು ಮೇ 7, 1893ರಂದು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರದಲ್ಲಿ ಜನಿಸಿದರು. ಅವರ ತಂದೆ ಸುಬ್ಬಣ್ಣನವರು ಮತ್ತು ತಾಯಿ ಸುಬ್ಬಮ್ಮನವರು. ಖ್ಯಾತಲೇಖಕಿ ಎಂ. ಕೆ. ಇಂದಿರ, ಇವರ ಸೋದರ ಸಂಬಂಧಿ. ಖ್ಯಾತ ಕನ್ನಡ ಚಲನಚಿತ್ರ ಸಾಹಿತಿ, ನಿರ್ಮಾಪಕ, ನಿರ್ದೇಶಕ, ನಟ-ನಾಟಕಕಾರರಾದ ಸಿ.ವಿ.ಶಿವಶಂಕರ್ ಅವರು ಲಕ್ಷ್ಮಣರಾಯರ ಅಳಿಯ

ಲಕ್ಷ್ಮಣರಾಯರ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾಭ್ಯಾಸ ನರಸಿಂಹರಾಜಪುರದಲ್ಲಿ ನೆರವೇರಿತು. ಅವರ ಪ್ರೌಢಶಾಲಾ ವ್ಯಾಸಂಗ ಮೈಸೂರಿನಲ್ಲಿ ನಡೆಯಿತು. ಅನಿಬೆಸೆಂಟರು ಮದನಪಲ್ಲಿಯಲ್ಲಿ ಸ್ಥಾಪಿಸಿದ್ದ ನ್ಯಾಷನಲ್‌ ಕಾಲೇಜಿನಿಂದ ಅವರು ಬಿ. ಎ. ಪದವಿ ಪಡೆದರು. ಕಾಲೇಜಿನಲ್ಲಿದ್ದಾಗಲೇ ಅನಿಬೆಸೆಂಟ್‌, ಸಿ.ಎಫ್‌. ಆಂಡ್ರೂಸ್, ಮತ್ತು ಕಸಿನ್ಸ್ ಅವರುಗಳ ಪ್ರಭಾವಕ್ಕೊಳಗಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದ್ದರಿಂದ ವಿದ್ಯಾಭ್ಯಾಸಕ್ಕೆ ತಡೆಯುಂಟಾಯಿತು. ೧೯೧೯ರಲ್ಲಿ ಶಾಂತಿನಿಕೇತನಕ್ಕೆ ತೆರಳಿ ಸುಮಾರು ೨ ವರ್ಷಗಳ ಕಾಲವಿದ್ದು ಬಂದನಂತರ ಇವರ ಬದುಕಿನ ರೀತಿಯೇ ಬದಲಾಯಿತು.

೧೯೨೨ರಲ್ಲಿ ಚನ್ನಪಟ್ಟಣದ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ನೇಮಕಗೊಂಡು ವಿವಿದೆಡೆಗಳಲ್ಲಿ ನಿವೃತ್ತರಾಗುವವರೆವಿಗೂ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಲಕ್ಷ್ಮಣರಾಯರಿಗೆ ಅಧ್ಯಾಪಕ ವೃತ್ತಿ ಬಹಳ ತೃಪ್ತಿ ತಂದುಕೊಟ್ಟ ವೃತ್ತಿಯಾಗಿತ್ತು. ನಿವೃತ್ತಿಯ ನಂತರ ಬೆಂಗಳೂರು ಆಕಾಶವಾಣಿಯಲ್ಲಿ ಮಕ್ಕಳ ಕಾರ್ಯಕ್ರಮ ನಿರ್ವಾಹಕರಾಗಿ ಕೆಲಕಾಲ ಕಾರ್ಯನಿರ್ವಹಿಸಿದ ಅವರು, ಪ್ರಜಾವಾಣಿ ಪತ್ರಿಕೆಯ ‘ಬಾಲಭಾರತಿ’ ಮಕ್ಕಳ ವಿಭಾಗವನ್ನು ಕೆಲಕಾಲ ನಡೆಸಿ ಮಕ್ಕಳ ಪ್ರೀತಿಯ 'ಅಣ್ಣಾಜಿ'ಯಾದರು.

ಸಾಹಿತ್ಯ[ಬದಲಾಯಿಸಿ]

ಮಕ್ಕಳು ಹಾಡಿ ನಲಿಯುವಂತಹ ಅನೇಕ ಪದ್ಯಗಳನ್ನು ರಚಿಸಿದ ಲಕ್ಷಣರಾಯರು ಪ್ರಧಾನವಾಗಿ ‘ಮಕ್ಕಳ ಕವಿ’ ಎನಿಸಿಕೊಂಡವರು. ಹೊಯಿಸಳರ ಮಕ್ಕಳ ಕವಿತೆಗಳ ಭಾಷೆ ತುಂಬಾ ಸರಳ. ಮಕ್ಕಳನ್ನು ಆಕರ್ಷಿಸುವ ಲಯವೈವಿಧ್ಯ, ವಸ್ತುವೈವಿಧ್ಯಗಳಿವೆ. ಅನೇಕ ಕವಿತೆಗಳಲ್ಲಿ ನವಿರಾದ ಹಾಸ್ಯಲೇಪವಿದೆ. ಆದ್ದರಿಂದ ಹೊಯಿಸಳರ ಪದ್ಯಗಳು ಈಗಲೂ ಮುದ್ದು ಪುಟಾಣಿಗಳಿಗೆ ಖುಶಿಕೊಡುವಂತಿದೆ. ಹೊಯಿಸಳರ ಕನ್ನಡ ಪ್ರೇಮವನ್ನು ತಮ್ಮದೇ ರೀತಿಯಲ್ಲಿ ಮುಂದುವರೆಸುವಲ್ಲಿ ಯಶಸ್ವಿಯಾದವರು

ಮಕ್ಕಳಿಗಾಗಿಯೇ ನೂರಾರು ಪದ್ಯಗಳು, ಸುಮಾರು ೩೫ ಕಥೆಗಳು ಮತ್ತು ೫ ನಾಟಕಗಳನ್ನು ಅವರು ರಚಿಸಿದರು. ‘ತಿರುಗಮುರುಗ’ ಎಂಬ ಇವರ ಚೊಚ್ಚಲ ಪದ್ಯ ಪ್ರಬುದ್ಧ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಗೊಂಡಿತು. ‘ಏಳುವ ಹೊತ್ತು’ ಇವರ ಪ್ರಥಮ ಕವನ ಸಂಕಲನ. ನಂತರ ಬಂದದ್ದು ‘ಕಂಕಣ’. ಇವರ ಆಯ್ದ ಪದ್ಯಗಳ ಸಂಕಲನ ‘ಬಂದ ಬಂದ ಸಂತಂಮಣ್ಣ’. ‘ಕಂಕಣ’ ಸಂಕಲನದಲ್ಲಿರುವ ಕಾಂಪೌಂಡ್‌ ಬಂಗ್ಲಿ ಕಂಕಮ್ಮಂಗೆ’ ಮೂಛೆ ಬಂದಿತ್ತು ಇವರ ಪ್ರಸಿದ್ಧ ಕಥನ ಕವನ. ಇದನ್ನು ಇವರು ಹಲವಾರು ಕಾರ್ಯಕ್ರಮಗಳ ನಡುವಿನ ಬಿಡುವಿನ ಸಮಯಗಳಲ್ಲಿ ಅಭಿನಯಪೂರ್ವಕವಾಗಿ ಹಾಡಿ ಪ್ರೇಕ್ಷಕರನ್ನು ರಂಜಿಸುತ್ತಿದ್ದರು. ಮಗುವಿನ ಕೂಗು, ಚಂದಮಾಮ, ಕೋಲುಕುದುರೆ, ಕೋಗಿಲೆ ಮುಂತಾದವು ಅವರ ಇತರ ಕವನ ಸಂಕಲನಗಳು.

ಸಂತಂಮಣ್ಣ, ಚಂದುಮಾಮ, ಒಂದು ಎರಡು ಮೂರು, ಕೋಲು ಕುದುರೆ, ತಟ್ಟುಚಪ್ಪಾಳೆ ಪುಟ್ಟ ಮಗು, ನಂಗೊತ್ತಿಲ್ಲಪ್ಪಾ ಮುಂತಾದವು ಹೊಯಿಸಳರ ಜನಪ್ರಿಯ ಮಕ್ಕಳ ಪದ್ಯಗಳು. ತಾವು ರಚಿಸಿದ್ದಷ್ಟೇ ಅಲ್ಲದೆ ಇತರ ಉತ್ತಮ ಶಿಶು ಸಾಹಿತ್ಯವನ್ನೂ ಆರಿಸಿ ಮಕ್ಕಳಿಗಾಗಿ ಒದಗಿಸಿದ್ದರು.

ಹೊಯಿಸಳರು ರಚಿಸಿದ ಮಕ್ಕಳ ಕಥೆಗಳು ಹೂವಿನ ಹಾಸಿಗೆ, ಪುಟ್ಟರಸು, ಪಠಾಕಿ, ಅನ್ಬು-ಬಾಟ, ಅದಕ್ಕೆ ಆ ಹೆಸರು, ಆನೆ ಇರುವೆ, ಗಂಟೆಗೋಪುರ, ಖೈದಿಗಳ ಕಷ್ಟ, ಪುಟ್ಟ ತಮ್ಮ ಯಾರು, ಪೋರಿ, ಬದುಕುವ ಮಂತ್ರ, ನಿಶ್ಚಲದಾಸ, ಅಭ್ಯಂಕು, ವೀರಕುಮಾರ, ಮಸೀದಿಯನ್ನು ಎಲ್ಲಿ ಕಟ್ಟಿದರು, ಶುಭಾಂಗ, ಬೋರನೆಟ್ಟ ಮೂಲಂಗಿ, ರಾಜನ ಬುದ್ಧಿವಂತಿಕೆ ಮುಂತಾದವುಗಳು. ಆ ಕಾಲದಲ್ಲಿ ಹೊಯಿಸಳರ ಮಕ್ಕಳ ಕತೆಗಳಿಗಾಗಿ ಮಕ್ಕಳಲ್ಲದೆ ದೊಡ್ಡವರೂ ಕಾಯುತ್ತಿದ್ದುದು ವಿಶೇಷ. ಹೊಯಿಸಳರು ದೊಡ್ಡವರಿಗಾಗಿ ಬರೆದ ಕೃತಿಗಳೆಂದರೆ ಕಂಚಿನ ಕನ್ನಡಿ, ಕಂಕಣ, ದಿನಾರಿ, ಹಾಡಿನ ಚಿಲುಮೆ, ಪರಿಷತ್ತಿನ ಲಾವಣ, ಗೆಲುವು-ಗುರಾಣಿ ಮುಂತಾದವುಗಳು

ಹೊಯಿಸಳರು ಮಗು, ಪ್ರಸಾದ, ವಾತಾಪಿ, ಚಂದ್ರಹಾಸ, ಅಗಲಿದ ಮಗಳು, ಮಳ್ಳ ಎಂಬ ೫ ನಾಟಕಗಳನ್ನೂ ಮಕ್ಕಳಿಗಾಗಿ ರಚಿಸಿದ್ದಾರೆ.

ಜಗತ್ತಿನ ಮೊದಲಕತೆ ಈಜಪ್ತಿನ ‘ಅನ್ಬು-ಬಾಟ’, ಠಾಕೂರರ ‘ವಸಂತ’, ನೆಹರೂರವರ ‘ಮಗಳಿಗೆ ತಂದೆಯ ಓಲೆಗಳು’ ಮುಂತಾದವು ಇವರ ಮುಖ್ಯ ಅನುವಾದಗಳು.

ಹೊಯಿಸಳರು ಮಕ್ಕಳಿಗಾಗಿಯೇ ‘ಕನಕ’ ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರಾದರೂ ಸಾಕಷ್ಟು ಚಂದದಾರರು ದೊರೆಯದೆ ಹಣಕಾಸಿನ ತೊಂದರೆಯಿಂದಾಗಿ ಪ್ರಕಟಣೆಯನ್ನು ನಿಲ್ಲಿಸಬೇಕಾಯಿತು.

ಇವರ ಕೃತಿಗಳನ್ನೆಲ್ಲಾ ಪ್ರಕಟಿಸಿದ ಹೆಗ್ಗಳಿಕೆ ಮೈಸೂರಿನ ಕಾವ್ಯಾಲಯ ಪ್ರಕಾಶನಕ್ಕಿದೆ.

ವಿದಾಯ[ಬದಲಾಯಿಸಿ]

ಮಕ್ಕಳ ಸಾಹಿತ್ಯಕ್ಕೆ ಒಂದು ಹೊಸ ಆಯಾಮವನ್ನು ತಂದುಕೊಟ್ಟ ಅಗ್ಗಳಿಕೆಯ ಹೊಯಿಸಳರು ಹೆಸರಿಗಾಗಿ ಹಂಬಲಿಸಿದವರೇ ಅಲ್ಲ. ಜೀವಿತಾವಧಿಯಲ್ಲಿ ಬಹಳಷ್ಟು ಬರೆದು ಹಿರಿಕಿರಿಯರ ಅಪಾರ ಮೆಚ್ಚುಗೆಗೆ ಪಾತ್ರರಾಗಿದ್ದ ಅರಗ ಲಕ್ಷ್ಮಣರಾಯರು ೧೯೫೯ರ ಅಕ್ಟೋಬರ್ ೧೦ರಂದು ಈ ಲೋಕವನ್ನಗಲಿದರು.

ಹೊಯಿಸಳರ ಕವಿತೆ[ಬದಲಾಯಿಸಿ]

ಪುಸ್ತಕ[ಬದಲಾಯಿಸಿ]

 ಪುಸ್ತಕ ಮಾತನು ಹೇಳುತಿದೆ

ಚಿತ್ತವ ಹತ್ತಿಸಿ ಕೇಳು

ಒಳ್ಳೆಯ ಕಡೆಯಲಿ ಇಡು ನನ್ನ

ಬೀರೂ ಪೆಟ್ಟಿಗೆ ಬಲು ಚೆನ್ನ

ಬೀಳದೆ ಧೂಳು ಇಹಪರಿ ಮೇಲೆ

ಬೇರೊಂದಟ್ಟೆಯ ಹೊಂದಿಸು, ಮಗು

ಜನಗಳ ಕಾಲಡಿ ಹಾಕದಿರು

ಕಿವಿಗಳ ನಿತ್ಯ ಮಡಿಸದಿರು

ಹಾಳೆಯ ಮಡಿಸಿ ಬೋರಲು ಇರಿಸಿ

ಕಷ್ಟಕೆ ಸಿಕ್ಕಿಸಬೇಡ, ಮಗು


ನನ್ನಯ ತಿರುಳು ಕಾಡಿನದು

ನನ್ನಯ ಅರಿವು ನಾಡಿನದು

ಬೆಂಕಿಲಿ ಬೆಂದು ನೀರಲಿ ನೆಂದು

ಯಂತ್ರವ ಹೊಕ್ಕು ಬಂದೆ, ಮಗು

ಏನೊಂದಾದರು ಕೇಳು, ಮಗು

ಯಾವಾಗೆಂದರೆ ಹೇಳುವೆನು

ಬೇಸರವಿಲ್ಲದೆ ಸೇವಿಪೆನಲ್ಲವೆ

ನನ್ನೇಕಿನ್ನೂ ನೋಯಿಸುವೆ?


ತೂಕಡಿಸುತ್ತಾ ಮುಟ್ಟದಿರು

ಅರೆಗಣ್ಣಾಗಿರೆ ತೆರೆಯದಿರು

ಕಡ್ಡಿಯ ಸಿಕ್ಕಿ ತಲೆಯಡಿ ಅಡಕಿ

ಗೊರಕೆಯ ಹೊಡೆಯದೆ ಇರು ಮಗುವೆ


ಮೇಜಿನ ಮೇಲೆ ಚೌಕವಿದೆ

ಮೊಗಮೇಲಾಗಿಡು, ಹೂವು ಇಡು

ಕೈಗಳ ತೊಳೆದು ಚೌಕದಿ ತೊಡೆದು

ಆಮೇಲೆನ್ನನು ಓದು ಮಗು

(ಚಂದಮಾಮ ಸಂಕಲನದಿಂದ)

ಮಾಹಿತಿ ಕೃಪೆ[ಬದಲಾಯಿಸಿ]

ಕಣಜ Archived 2016-05-20 ವೇಬ್ಯಾಕ್ ಮೆಷಿನ್ ನಲ್ಲಿ. ಮತ್ತು ಮೋಹನ್ ವೆರ್ಣೇಕರ್ ಅವರ 'ಶತಸಾಹಿತ್ಯ ಪ್ರತಿಭೆ'

ಹೊರಗಿನ ಕೊಂಡಿ[ಬದಲಾಯಿಸಿ]

"https://kn.wikipedia.org/w/index.php?title=ಹೊಯಿಸಳ&oldid=1052518" ಇಂದ ಪಡೆಯಲ್ಪಟ್ಟಿದೆ