ಹೆಚ್.ಆರ್.ನಾಗೇಶರಾವ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹೆಚ್.ಆರ್.ನಾಗೇಶರಾವ್
ಜನನ೨೦ ಅಕ್ಟೋಬರ್ ೧೯೨೭
ಮಧುಗಿರಿ,ತುಮಕೂರು ಜಿಲ್ಲೆ
ಮರಣ೦೩ ಆಗಸ್ಟ್ ೨೦೦೩
ಬೆಂಗಳೂರು
ವೃತ್ತಿಪತ್ರಕರ್ತರು ಹಾಗೂ ಕನ್ನಡ ಸಾಹಿತಿಗಳು
ರಾಷ್ಟ್ರೀಯತೆಭಾರತೀಯ
ಪ್ರಕಾರ/ಶೈಲಿನಗೆಲೇಖನ, ನಾಟಕ, ಪತ್ತೇದಾರಿ ಕಾದಂಬರಿ
ಬಿಳಿಕೆರೆ ಶಾನುಭೋಗ್ ಎಸ್.ಶಾಮಣ್ಣನವರ ಮಗಳು ಪದ್ಮಾವತಿ (ಪ್ರೇಮಾ) ಒಂದಿಗೆ ಮದುವೆ. 1958ರ ಚಿತ್ರ
ಅಮ್ಮನ ತೋಳತೆಕ್ಕೆಯಲ್ಲಿ ಚಿಕ್ಕ ಮಗ ಆನಂದ ತೀರ್ಥ, ಮಧ್ಯದಲ್ಲಿರುವ ಹಾಲ್ದೊಡ್ಡೇರಿ ಸುಧೀಂದ್ರನ ಪಕ್ಕದಲ್ಲಿ ನಿಂತಿರುವ ಮಗು ಅವನ ಅಕ್ಕ ವಿಜಯಲಕ್ಷ್ಮಿ. 1965ರ ಚಿತ್ರ


ನಾಲ್ಕು ದಶಕಗಳ ಕನ್ನಡ ಪತ್ರಿಕಾರಂಗಕ್ಕೆ ಅನುಪಮ ಸೇವೆ ಸಲ್ಲಿಸಿದ ಹೆಚ್.ಆರ್.ನಾಗೇಶರಾವ್, ತುಮಕೂರು ಜಿಲ್ಲೆಯ ಸಿರಾ ತಾಲ್ಲೂಕಿನ ಹಾಲ್ದೊಡ್ಡೇರಿ ಗ್ರಾಮದ ಕೃಷಿಕ ರಂಗಣ್ಣ ಹಾಗೂ ಕಿಟ್ಟಮ್ಮ (ಕೃಷ್ಣವೇಣಿ) ದಂಪತಿಗಳ ಎರಡನೆಯ ಮಗ. ಮಕ್ಕಳಿಗೆ ಓದಲು ಅನುಕೂಲವಾಗಲೆಂದು ಹಳ್ಳಿ ಬಿಟ್ಟು ತುಮಕೂರಿನಲ್ಲಿ ಸಣ್ಣ ಮನೆಯೊಂದನ್ನು ಬಾಡಿಗೆಗೆ ಹಿಡಿದು ಮಕ್ಕಳನ್ನು ಓದಿಸಲು ನಿರ್ಧರಿಸಿದರು, ಅಮ್ಮ.

  • ಇದಕ್ಕೆ ಪ್ರೇರಣೆ ಅಮ್ಮ ಐದನೇ ತರಗತಿಯವರೆಗೆ ಮೈಸೂರು ನಗರದಲ್ಲಿ ಓದು ಬರಹ ಕಲಿತಿದ್ದರು. ಜೊತೆಗೆ ಅವರ ತಂಗಿ ಸುಬ್ಬಲಕ್ಷಮ್ಮ (ಪುಟ್ಟು) ಸರ್ಕಾರಿ ಶಾಲೆಯ ಅಧ್ಯಾಪಕಿಯಾಗಿದ್ದರು. ಅಪ್ಪ ರಂಗಣ್ಣ ಹಳ್ಳಿಯಲ್ಲೇ ಉಳಿದು ತೋಟ-ಗದ್ದೆ ನೋಡಿಕೊಳ್ಳುತ್ತಿದ್ದರು.

ವಿದ್ಯಾರ್ಥಿ ಜೀವನ[ಬದಲಾಯಿಸಿ]

15 ವರ್ಷದ ಬಾಲಕ ನಾಗೇಶರಾವ್ ಸಂಪಾದಿಸುತ್ತಿದ್ದ ಕೈಬರಹ ಪತ್ರಿಕೆಯ ಮೊದಲ ಸಂಚಿಕೆ
12 ವರ್ಷದ ಬಾಲಕ
  • ೧೯೪೦ರ ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದ ತುಮಕೂರಿನ ವಿದ್ಯಾರ್ಥಿವೃಂದದಲ್ಲಿ ಹೆಚ್.ಆರ್.ನಾಗೇಶರಾವ್ ಅವರದು ಪ್ರಧಾನ ಪಾತ್ರ. ಇಂಟರ್‌ಮೀಡಿಯಟ್ ಕಲಿಯುತ್ತಿದ್ದಾಗಲೇ ಹೆಚ್.ಆರ್.ನಾಗೇಶರಾವ್ ಕೈಬರಹದ ಪತ್ರಿಕೆಗಳನ್ನು ಹೊರಡಿಸುತ್ತಿದ್ದರು. ಹೋರಾಟದ ರೋಮಾಂಚಕ ವರದಿಗಳನ್ನು ಸಂಕಲಿಸಿ, ನಕಲು ಮಾದಿ, ಹಸ್ತಪ್ರತಿಗಳನ್ನು ಸುತ್ತ ಮುತ್ತ ಹಂಚುವ ಹವ್ಯಾಸ ಅವರಿಗಿತ್ತು. ಅಂದಿನ ದಿನಗಳಲ್ಲಿ ತುಮಕೂರಿನ ಕೆಲ ವರ್ತಕರು ಈ ನಿಟ್ಟಿನಲ್ಲಿ ಸಹಕಾರ ನೀಡುತ್ತಿದ್ದರು.
  • ತಮ್ಮ ಅಂಗಡಿಯ ಬಾಗಿಲ ಮೇಲೆ ಕರಪತ್ರಗಳನ್ನು ಅಂಟಿಸಲು ಅನುವು ಮಾಡಿಕೊಡುತ್ತಿದ್ದರು. ಹಾಗೆಯೇ ಸ್ವಯಂಪ್ರೇರಿತ ವಿದ್ಯಾರ್ಥಿಗಳು ತಮಗೆ ಸಿಕ್ಕ ಕರಪತ್ರಗಳ ಮತ್ತಷ್ಟು ಪ್ರತಿಗಳನ್ನು ಮಾಡಿ, ಹಳ್ಳಿಯ ಮಂದಿ ಹೆಚ್ಚು ಸೇರುತ್ತಿದ್ದ ಸಂತೆ, ಜಾತ್ರೆಗಳಲ್ಲಿ ಹಂಚಿ ಜಾಗೃತಿ ಮೂಡಿಸುತ್ತಿದ್ದರು. ನಾಗೇಶರಾವ್ ಅವರ ತಂಗಿ ಜಾನಕಿ (ಹೆಚ್.ಆರ್.ಜಾನಕಮ್ಮ) ಅಣ್ಣನ ಬಗ್ಗೆ ನೆನಪಿಸಿಕೊಂಡಿರುವುದು ಹೀಗೆ. " ನನ್ನಣ್ಣ ಹೈಸ್ಕೂಲಿನಲ್ಲಿದಾಗಿಂದಲೂ ಸಾಹಿತ್ಯ ಚಟುವಟಿಕೆಗಳಲ್ಲಿ ಆಸಕ್ತರಾಗಿದ್ದರು.
  • ಜತೆಗೆ ಆಗ ತುಮಕೂರಿನ ವಿದ್ಯಾರ್ಥಿಗಳು ನಡೆಸುತ್ತಿದ್ದ ಸ್ವಾತಂತ್ರ್ಯ ಚಳುವಳಿಗಳಲ್ಲೂ ಭಾಗವಹಿಸಿದ್ದರು. 1942ನೇ ಇಸವಿಯಲ್ಲಿ ಒಂದು ದಿನ ತುಮಕೂರಿನಲ್ಲಿ ‘ಬಿಟಿಷರೇ ಭಾರತ ಬಿಟ್ಟು ತೊಲಗಿ’, ‘ಭಾರತ್ ಮಾತಾ ಕೀ ಜೈ’ ಎಂದು ಘೋಷಣೆ ಕೂಗುತ್ತಾ ವಿದ್ಯಾರ್ಥಿಗಳೆಲ್ಲ ಶಾಲೆಗಳನ್ನು ತೊರೆದು ಚಿಕ್ಕಪೇಟೆಯ ಕಡೆ ಮೆರವಣಿಗೆ ಹೊರಟರು. ಸುತ್ತಲೂ ಪೊಲೀಸರು ಕೈಯ್ಯಲ್ಲಿ ಲಾಠಿ ಮತ್ತು ಟಿಯರ್‌ಗ್ಯಾಸ್ ಶೆಲ್ ಹಿಡಿದು ವಿದ್ಯಾರ್ಥಿಗಳನ್ನು ಅಟ್ಟುತ್ತಿದ್ದರು. ಮನೆ ಬಾಗಿಲಲ್ಲಿ ನಿಂತು ‘ಗಲಾಟೆ ಏನು ನಡೆಯುತ್ತಿದೆ’ ಎಂದು ನೋಡಿದೊಡನೆ ಗಾಭರಿಯಾಯಿತು. *ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದ ನನ್ನಣ್ಣ ಅವರ ಸ್ನೇಹಿತರೊಂದಿಗೆ ಆ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು. ಏನು ನಡೆಯುತ್ತಿದೆಯೆಂದು ತಿಳಿಯದೆ ಭಯದಿಂದ ನನ್ನಣ್ಣನ ಹತ್ತಿರ ಹೋಗಿ, ಅವರ ಷರಟನ್ನು ಎಳೆದು ಮನೆಗೆ ಬರುವಂತೆ ಒತ್ತಾಯಿಸತೊಡಗಿದೆ. ‘ಮನೆಗೆ ಹೋಗು, ಮನೆಗೆ ಹೋಗು’ಎಂದು ಬಲವಂತದಿಂದ ನನ್ನನ್ನು ಮನೆಗೆ ಕಳುಹಿಸಿದರು. ನಾನು ಅಳುತ್ತಾ ಮನೆಗೆ ಹೋಗಿ ಅಮ್ಮನಿಗೆ ವಿಷಯ ತಿಳಿಸಿದೆ. ಅವರೊಂದಿಗೆ ನಾನು ರಸ್ತೆಗೆ ಬರುವಷ್ಟರಲ್ಲಿ ಪೊಲೀಸರು ಲಾಠಿಯನ್ನು ಬೀಸುತ್ತಾ, ಟಿಯರ್‌ಗ್ಯಾಸ್ ಶೆಲ್ ಸಿಡಿಸುತ್ತಾ ಮೆರವಣಿಗೆಯನ್ನು ಚೆದುರಿಸುತ್ತಿದ್ದರು.
  • ಅಂಗಡಿ ಮಾಲಿಕರು ತಮ್ಮಲ್ಲಿದ್ದ ಚೀಲಗಳಿಂದ ಈರುಳ್ಳಿಯನ್ನು ಹೊರಗೆರಚುತ್ತಿದ್ದರು. ವಿದ್ಯಾರ್ಥಿಗಳು ಟಿಯರ್‌ಗ್ಯಾಸ್‍ನ ಹೊಗೆಯಿಂದಾಗುವ ಕಣ್ಣುರಿಯನ್ನು ತಪ್ಪಿಸಿಕೊಳ್ಳಲು ಈರುಳ್ಳಿಯನ್ನು ರಸ್ತೆಯಿಂದ ಬಾಚಿಕೊಳ್ಳುತ್ತಿದ್ದರು. ಸಂಜೆ ಮನೆಗೆ ಬಂದ ಅಣ್ಣನನ್ನು ಈ ಚಳುವಳಿಗಳೆಲ್ಲಾ ಏಕೆ? ಎಂದು ಕೇಳಿದೆ. ತಾವೆಲ್ಲಾ ಈ ಸಂಪು ಮಾಡುತ್ತಿರುವುದೇಕೆಂದು ವಿವರಿಸಿ ಹೇಳಿದರು. ಇಂಥ ಚಳುವಳಿಗಳು ತುಮಕೂರಿನಲ್ಲಿ ಅನೇಕ ದಿನಗಳ ಕಾಲ ನಡೆದವು.
  • 1944ರ ಆಗಸ್ಟ್ ನಲ್ಲಿ ದೇಶವಿಭಜನೆಯ ವಿರುದ್ಧ ತುಮಕೂರಿನಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದರು. ನಾಗರೀಕರ ಸಹಿ ಹೊತ್ತ ಪತ್ರದ ಪ್ರತಿಗಳನ್ನು ಗಾಂಧೀಜಿ, ಹಿಂದೂ ಹಾಗೂ ಮರಾಠಾ ಪತ್ರಿಕೆಗಳಿಗೆ ಕಳುಹಿಸಿದ್ದಕ್ಕೆ ದಾಖಲಾತಿ]]ಇಂಥ ಚಳುವಳಿಗಳಲ್ಲಿ ಆಗ ಭಾಗವಹಿಸುತ್ತಿದ್ದವರಲ್ಲಿ ಮಧ್ಯಮ ವರ್ಗದವರೇ ಹೆಚ್ಚು ಮಂದಿ. ಆ ಕಾಲದಲ್ಲಿ ದಿನಪತ್ರಿಕೆಗಳನ್ನು ಮನೆಗೆ ತರಿಸುವುದು ಅಪರೂಪವಾಗಿತ್ತು. ನನ್ನಣ್ಣ ಬೆಳಿಗ್ಗೆ ಬೇಗ ಎದ್ದು ಪಬ್ಲಿಕ್ ಲೈಬ್ರರಿಗೆ ಹೋಗಿ ಪತ್ರಿಕೆಗಳನ್ನು ಓದಿ, ಬೇಕಾದ ವಿಷಯಗಳನ್ನು ಗುರುತು ಹಾಕಿಕೊಂಡು ಬರುತ್ತಿದ್ದರು.
  • ಆ ಲೈಬ್ರರಿ ನಮ್ಮ ಮನೆಯಿಂದ ತುಂಬಾ ದೂರವಿತ್ತು, ಆದರೆ ಒಂದು ದಿನವೂ ತಪ್ಪದೆ ಹೋಗುತ್ತಿದ್ದರು. ಅವರು ಯಾವಾಗಲೂ ಏನಾದರೊಂದು ಓದುವುದು, ಬರೆಯುವುದು ಮಾಡುತ್ತಿದ್ದರು, ಶಾಲೆಯಲ್ಲಿನ ಎಲ್ಲ ಚಟುವಟಿಕೆಗಳಲ್ಲೂ ಮುಂದಿದ್ದರು. ಮುಂದೆ ಇಂಟರ್‌ಮೀಡಿಯಟ್ ಪಾಸಾಗಿ, ಬೆಂಗಳೂರಿನತ್ತ ಹೊರಟರು. ಅಲ್ಲಿಯ ತನಕವೂ ಸಾಹಿತ್ಯ ಮತ್ತು ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ಎಲ್ಲ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು.
  • ಮೆಡಿಕಲ್ ಓದುವ ಆಸೆಯಿಟ್ಟುಕೊಂಡಿದ್ದ ಅವರು, ಅದಕ್ಕೂ ಮುನ್ನ ಬಿ.ಎಸ್‍ಸಿ. ಸೇರುವ ಉದ್ದಿಶ್ಯದಿಂದ ಬೆಂಗಳೂರಿಗೆ ಹೋದರು". ಪ್ರಜಾವಾಣಿ ದಿನಪತ್ರಿಕೆಯ ನಿವೃತ್ತ ಸಹಾಯಕ ಸಂಪಾದಕ ಎಂ.ಗೋಪಾಲಕಣ್ಣನ್ ತುಮಕೂರಿನಲ್ಲಿ ನಾಗೇಶರಾವ್ ಅವರ ಸಹಪಾಠಿ. ತಾವು ಕಳೆದ ಶಾಲಾ ದಿನಗಳನ್ನು ಅವರು ನೆನೆಸಿಕೊಳ್ಳುವುದು ಹೀಗೆ. "1940-42ರ ಸಮಯ. ತುಮಕೂರು ಹೈಸ್ಕೂಲಿನಲ್ಲಿ ವ್ಯಾಸಂಗ. ನಾನು, ನಾಗೇಶರಾವ್ ಒಂದೇ ತರಗತಿಯ ಒಂದೇ ಬೆಂಚಿನ ವಿದ್ಯಾರ್ಥಿಗಳು. ಹೈಸ್ಕೂಲ್ ಹಂತಕ್ಕೆ ಬಂದಿದ್ದರೂ ಇನ್ನೂ ಜುಟ್ಟು ಉಳಿಸಿ ಕೊಂಡಿದ್ದ ಕೆಲವೇ ವಿದ್ಯಾರ್ಥಿಗಳಲ್ಲಿ ನಾಗೇಶರಾವ್ ಒಬ್ಬರು.

ಸನ್ಮಿತ್ರ ಸಂಘ[ಬದಲಾಯಿಸಿ]

  • ೧೯೪೧ರಲ್ಲಿ ಆರಂಭವಾದ ತುಮಕೂರಿನ ಸನ್ಮಿತ್ರ ಸಂಘವು ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದರ ಜತೆಗೆ ಅವರನ್ನು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲು ಪ್ರೇರೇಪಿಸುತ್ತಿತ್ತು. ಸಂಘದ ಸಕ್ರಿಯ ಸದಸ್ಯರಾಗಿದ್ದ ನಾಗೇಶರಾವ್ ಕೆಲಕಾಲ ಸಂಘದ ಗ್ರಂಥಪಾಲಕರೂ ಆಗಿದ್ದರು. ೧೯೪೨ರ ಆಗಸ್ಟ್‌ನಲ್ಲಿ ದೇಶದ ಎಲ್ಲ ವಿದ್ಯಾರ್ಥಿಗಳಂತೆ ತುಮಕೂರಿನ ವಿದ್ಯಾರ್ಥಿಗಳೂ ಚಳವಳಿ-ಬಹಿಷ್ಕಾರ-ಮುಷ್ಕರಗಳಲ್ಲಿ ಭಾಗಿಯಾಗಿದ್ದರು.
  • ಶಾಲೆಗಳ ಬಾಗಿಲು ತೆಗೆದಿದ್ದರೂ ಸನ್ಮಿತ್ರ ಸಂಘದ ಸದಸ್ಯರಿಗೆ ಅವು ಮುಚ್ಚಿದ್ದಂತೆ ಭಾಸವಾಗಿತ್ತು. ಮೂರು ತಿಂಗಳ ಈ ಕಠೋರವ್ರತವನ್ನು ಮಿತ್ರರೊಂದಿಗೆ ಅಚಲ ಶ್ರದ್ಧೆಯೊಂದಿಗೆ ನಾಗೇಶರಾವ್ ಆಚರಿಸಿದರು.ಮೈಸೂರು ರಾಜ್ಯ ಪತ್ರಕರ್ತರ ಸಮ್ಮೇಳನ ೧೯೪೪ರಲ್ಲಿ ತುಮಕೂರಿನಲ್ಲಿ ನಡೆದಾಗ ಹೆಚ್.ಆರ್.ನಾಗೇಶರಾವ್ ವಿದ್ಯಾರ್ಥಿ ಸ್ವಯಂಸೇವಕ. ೧೯೪೫ರಲ್ಲಿ ಇಂಟರ್‌ಮೀಡಿಯಟ್ ಕಾಲೇಜು ವಿದ್ಯಾರ್ಥಿ ಸಂಘದ ವಾರ್ಷಿಕ ಸಾಹಿತ್ಯ ಸ್ಫರ್ಧೆಯಲ್ಲಿ ನಾಗೇಶರಾವ್ ಅವರ ಪ್ರಬಂಧಕ್ಕೆ ಮೊದಲ ಬಹುಮಾನ.
  • ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ಅಗತ್ಯವಾಗಿ ಬೇಕಿರುವ ಹಿಂದೂ-ಮುಸ್ಲಿಂ ಐಕ್ಯತೆಯ ಬಗ್ಗೆ ಪ್ರಸ್ತಾಪಿಸುತ್ತಾ ಕೆಲವೊಂದು ಸಲಹೆಗಳನ್ನು ಈ ಪ್ರಬಂಧದಲ್ಲಿ ಸೂಚಿಸಿದ್ದಾರೆ. ಮುಂದೆ ಇದು ೨೬-೧೦-೧೯೪೫ವಾಹಿನಿ ಪತ್ರಿಕೆಯಲ್ಲಿ ಪ್ರಕಟಣೆಯಾಗುತ್ತದೆ. ೧೯೪೫ ರ ಜುಲೈನಲ್ಲಿ ನಡೆದ ಸಂಘದ ನಾಲ್ಕನೆಯ ವಾರ್ಷಿಕೋತ್ಸವಕ್ಕೆ ಮೈಸೂರು ಕಾಂಗ್ರೆಸ್ನ ಮಾಜಿ ಅಧ್ಯಕ್ಷ ತಾಳಕೆರೆ ಸುಬ್ರಹ್ಮಣ್ಯ ಮುಖ್ಯ ಅತಿಥಿಗಳಾಗಿರುತ್ತಾರೆ.
  • ಆಗಸ್ಟ್ ಐದರ ಭಾಷಣಮಾಲೆಗೆ ಬೆಂಗಳೂರಿನ ಸುಪ್ರಸಿದ್ಧ ಪತ್ರಿಕೋದ್ಯೋಗಿಗಳಾದ ತಾಯಿನಾಡು ಕನ್ನಡ ದೈನಿಕದ ಸ್ಥಾಪಕ ಹಾಗೂ ಡೈಲಿ ನ್ಯೂಸ್ ಇಂಗ್ಲಿಷ್ ದೈನಿಕದ ಸಂಪಾದಕ ಪಿ.ಆರ್.ರಾಮಯ್ಯ, ಫೆಡರಲ್ ಇಂಡಿಯಾ ಅಂಡ್ ಇಂಡಿಯನ್ ಸ್ಟೇಟ್ಸ್ ಪತ್ರಿಕೆಯ ಸಂಪಾದಕ ಹೆಚ್.ಶ್ರೀಕಂಠಯ್ಯ, ನಗುವನಂದ ಹಾಸ್ಯ ಪತ್ರಿಕೆಯ ಸಂಪಾದಕ ಕೆ.ಜೀವಣ್ಣರಾವ್ ಮತ್ತು ದೇಶಬಂಧು ದೈನಿಕದ ಸಂಪಾದಕ ಎನ್.ಎಸ್.ವೆಂಕೋಬರಾವ್ ಆಗಮಿಸಿರುತ್ತಾರೆ.
  • ಈ ಎಲ್ಲ ಧೀಮಂತ ಪತ್ರಕರ್ತರ ಮಾತುಗಳನ್ನು ಕೇಳಿ ನಾಗೇಶರಾವ್ ತಾವೂ ಒಬ್ಬ ಪತ್ರಿಕೋದ್ಯೋಗಿಯಾಗಬೇಕೆಂದು ನಿರ್ಧರಿಸುತ್ತಾರೆ. ಆಗಸ್ಟ್ ೧೯ರಂದು ನಡೆದ ಸಂಘದ ಐದನೆಯ ವರ್ಷದ ಆರಂಭೋತ್ಸವಕ್ಕೆ ಪ್ರೊಫೆಸರ್ ತೀ.ನಂ.ಶ್ರೀಕಂಠಯ್ಯ ಅತಿಥಿ ಭಾಷಣ ಮಾಡುತ್ತಾರೆ. ಇಂಟರ್‌ಮೀಡಿಯಟ್ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗ ಜಿ.ಪಿ.ರಾಜರತ್ನಂ ಅವರ ನೇತೃತ್ವದಲ್ಲಿ ನಡೆದ ಎಲ್ಲ ಕನ್ನಡ ಸ್ಫರ್ಧೆಗಳಲ್ಲಿ ಭಾಗಿಯಾಗಿದ ನಾಗೇಶರಾವ್ ಮೊದಲ ಬಹುಮಾನಗಳನ್ನು ಪಡೆದರು.
  • ಅವರ ಚೊಚ್ಚಲ ಲೇಖನಗಳು ವಿದ್ಯಾರ್ಥಿ ವಿಚಾರ ವಿಲಾಸ ಪುಸ್ತಕದಲ್ಲಿ ಪ್ರಕಟವಾದವು. ತುಮಕೂರಿನಿಂದ ವಿಜ್ಞಾನ ವಿಷಯದಲ್ಲಿ ಇಂಟರ್‌ಮೀಡಿಯಟ್ ಪರೀಕ್ಷೆ ಮುಗಿಸಿ ಬೆಂಗಳೂರು ನಗರಕ್ಕೆ ೧೯೪೫ರಲ್ಲಿ ಬಂದದ್ದು, ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎಸ್‍ಸಿ. ಪದವಿ ಕೋರ್ಸ್‌ಗೆ ಸೇರ್ಪಡೆಯಾಗಲು.

ಸಾಹಿತ್ಯ ಕೃತಿಗಳು[ಬದಲಾಯಿಸಿ]

ಮೊದಲ ಪುಸ್ತಕಕ್ಕೆ ಮುಖಪುಟವನ್ನೂ ನಾಗೇಶರಾವ್ ರೂಪಿಸಿದ್ದರು
  1. ನಗೆನಾಣ್ಯ (ನಗೆ ಹನಿಗಳ ಸಂಗ್ರಹ)- ಮೇ, 1955
  2. ಸೂತ್ರಧಾರಿ (ಪತ್ತೇದಾರಿ ಕಾದಂಬರಿ) - ಅಕ್ಟೋಬರ್, 1955
  3. ಅದೃಷ್ಟ ಚಕ್ರ (ಅದೃಷ್ಟ ಪುಸ್ತಕ) - ಜನವರಿ, 1956
  4. ರಕ್ತದ ಮಡುವಿನಲ್ಲಿ (ಪತ್ತೇದಾರಿ ಕಾದಂಬರಿ) - ಜುಲೈ, 1956
  5. ಭಯಪಿಶಾಚಿ (ಪತ್ತೇದಾರಿ ಕಾದಂಬರಿ) - ಸೆಪ್ಟೆಂಬರ್, 1956
  6. ಹಿತಶತ್ರು (ಪತ್ತೇದಾರಿ ಕಾದಂಬರಿ) - ಡಿಸೆಂಬರ್, 1956
  7. ನಗೆ ಬಾಂಬು (ಹಾಸ್ಯ ಲೇಖನಗಳ ಸಂಗ್ರಹ) - ಡಿಸೆಂಬರ್, 1956
  8. ನಾರೀಲೋಕದಲ್ಲಿ ನಾರದರು (ಹಾಸ್ಯ ಪ್ರಹಸನ) - ಅಕ್ಟೋಬರ್, 1958
  9. ಕಂಕಣದ ಸಂಕಲ್ಪ (ಸಾಮಾಜಿಕ ನಾಟಕ) - ಫೆಬ್ರವರಿ, 1961

ಹಾಸ್ಯ ಸಾಹಿತ್ಯ[ಬದಲಾಯಿಸಿ]

`ಎನ್‌ಎ' ಕಾವ್ಯನಾಮದಲ್ಲಿ ವಿನೋದ ಹಾಸ್ಯ ಮಾಸಪತ್ರಿಕೆಗೆ ಮೂವತ್ತು ವರ್ಷಗಳಿಗೂ ಹೆಚ್ಚು ಕಾಲ ನಗೆಲೇಖನ/ಅಣಕವಾಡುಗಳ ರಚನೆ. ಆನಂದ ಜ್ಯೋತಿ ಮಾಸಪತ್ರಿಕೆಯಲ್ಲಿ ರಾಜಕೀಯ ಮುಖಂಡರುಗಳ ಕಾಲ್ಪನಿಕ ಭೇಟಿಗಳು, ಚಿತ್ರಗುಪ್ತ ಸಾಪ್ತಾಹಿಕ, ರಾಮರಾಜ್ಯ ಪಾಕ್ಷಿಕ, ವಿಶ್ವಬಂಧು ಸಾಪ್ತಾಹಿಕ, ವಿಜಯಮಾಲಾ ಮಾಸಿಕ ಹಾಗೂ ಕತೆಗಾರ ಮಾಸಿಕಗಳಲ್ಲಿ ಇದೇ ಕಾವ್ಯನಾಮದ ಮೂಲಕ ಲಘು ಹಾಗೂ ವೈಜಾರಿಕ ಬರಹಗಳು ಮತ್ತು ವಾರ್ತಾವಲೋಕನಗಳನ್ನು ಮಾಡಿದ್ದಾರೆ.

ಪತ್ರಿಕೋದ್ಯಮ[ಬದಲಾಯಿಸಿ]

[[ಚಿತ್ರ:PostAck.jpg|thumb|ಹೆಚ್.ಆರ್.ನಾಗೇಶರಾವ್

ಕೈಬರಹ ಪತ್ರಿಕೆಗಳು[ಬದಲಾಯಿಸಿ]

* `The First Attempt' - ೧೯೪೦: ಕನ್ನಡ ಕವಿಪುಂಗವರನೇಕರ ಕಾವ್ಯ ರಚನಾರಂಭ ಇಂಗ್ಲಿಷಿನಲ್ಲೇ ಆಯಿತಂತೆ. ಆ ಪರಂಪರೆಯನ್ನು ಪಾಲಿಸಲೆಂಬಂತೆ ನಾಗೇಶರಾಯರು ತಮ್ಮ ಹನ್ನೆರಡು-ಹದಿಮೂರರ ಹರಯದಲ್ಲೇ ಪ್ರಥಮವಾಗಿ ಇಂಗ್ಲಿಷ್ ಸ್ವ-ಕವನ ಸಂಚಿಕೆ `The First Attempt' ಅನ್ನು ಕೈಬರಹದಲ್ಲಿ ಪ್ರಕಟಿಸಿದರು. ಮುದ್ದಾದ ಬರಹ, ತಿದ್ದಿ ತೀಡಿದ ತಲೆಬರಹ, ಪುಟ ವಿನ್ಯಾಸ, ಮುಖಪುಟಾಲಂಕರಣ, ಒಳ ಹೂರಣ ಎಲ್ಲವೂ ಅವರದೇ.

  • `Some lines like those of poems which sprang from my brains' ಎಂಬ ವಿನೀತ ವರ್ಗೀಕರಣ ಬೇರೆ! ಕವನದ ವಸ್ತು-ವಿಷಯಗಳಲ್ಲೂ ಸಾಕಷ್ಟು ವೈವಿಧ್ಯ. ಪುಸ್ತಕವೊಂದರ ಎಲ್ಲ ಅಂಗ-ಅಂಶಗಳ ಸ್ಪಷ್ಟ ಪರಿಕಲ್ಪನೆ - ಪರಿಚಯ, ಹೈಸ್ಕೂಲ್ ಎರಡನೇ ತರಗತಿಯ ಹಳ್ಳಿ ಹೈದನಿಗೆ ಹೇಗಾಯಿತೆಂಬುದೇ ವಿಸ್ಮಯದ ವಿಷಯ! ಈ ಸಂಚಿಕೆ ನೋಡಲು ಸಿಕ್ಕಿದೆ. ಇಂಗ್ಲಿಷ್ ಬಿಟ್ಟರೂ ಕನ್ನಡದಲ್ಲಿ ‘ಅಣಕವಾಡು’ಗಳನ್ನು ರಚಿಸುವ ಸ್ಫೂರ್ಥಿ ಮುಂದೆ ಬಂತು.
  • ಬಾಲ್ಯದ ಗೆಳೆಯ ಟಿ.ಕೆ. ರಾಮಲಿಂಗ ಸೆಟ್ಟಿ (ಮಂಡ್ಯ ನ್ಯಾಷನಲ್ ನ್ಯೂಸ್‍ಪೇಪರ್ ಮಿಲ್ಸ್‍ನ ನಿವೃತ್ತ ವ್ಯವಸ್ಥಾಪಕ ನಿರ್ದೇಶಕರು) ಅವರು ನೆನಪಿಸಿಕೊಳ್ಳುವಂತೆ ನಾಗೇಶರಾಯರು ‘ಎಂಡ್ಕುಡುಕ ರತ್ನ’ನನ್ನು ಅನುಕರಿಸಿ ‘ಕಾಫೀ ಕುಡ್ಕ ನಾಗೇಶ’ನ ಪದಗಳನ್ನು ರಚಿಸಿ, ಗೆಳೆಯರ ಮುಂದೆ ವಾಚಿಸುತ್ತಿದ್ದರಂತೆ. ಒಂದು ವಿಷಯವಂತೂ ಸಾಬೀತಾದಂತಾಯಿತು, ಕಾಫೀ ಅವರಿಗೆ ಅಂದಿನಿಂದಲೂ ಚಟ ಹಚ್ಚಿಸಿತ್ತು. ಅವರ ಕಾವ್ಯ ಪ್ರತಿಭೆ ಮುಂದೆ ‘ವಿನೋದ’ ಮಾಸ ಪತ್ರಿಕೆಗೆ ಅಣಕವಾಡುಗಳನ್ನು ರಚಿಸುವದಕ್ಕಷ್ಟೇ ಸೀಮಿತವಾಯಿತು.
  • ‘ಹಣೆ ಬರಹ’ - ೧೯೪೧: ಸಹಪಾಠಿಗಳ-ಸ್ನೇಹಿತರ ಮನೋವಿಕಾಸ-ರಂಜನೆಗೆಂದು ‘ಹಣೆಬರಹ’ ಹೊರತಂದರು, ಕೈಬರಹದಲ್ಲೇ. ‘ವಿ’ಚಿತ್ರ ಇಂಗ್ಲಿಷ್ ಮಾಸಪತ್ರಿಕೆಯೆಂಬ ಅಭಿದಾನ - ಐದು ಭಾಷೆಗಳಲ್ಲಿ ನಾಮಲಿಖಿತ. ಅದರ ‘ನಾರದ’ ಎನ್ನುವಲ್ಲಿ ಆತ ಜಗದ ಮೊತ್ತಮೊದಲ ಅಧಿಕೃತ ಸುದ್ದಿಗ್ರಾಹಿ - ವಿತರಕನೇನೋ ಎಂಬ ಅದ್ಭುತ ಕಲ್ಪನೆ ಅರ್ಥಾತ್ ಅಪೂರ್ವ ಸಂಶೋಧನೆ!
  • ಮುಂದೆ ಇದು ಹಿರಿಯ ಪತ್ರಿಕೆ ‘ತಾಯಿನಾಡು’ವಿನಲ್ಲೂ ‘ನಾರದ ಉವಾಚ’ ಟೀಕಾಂಕಣದ ಮೂಲಕ ಚಾಟೂಕ್ತಿ - ಚುಟುಕಗಳ ಮೂಲಕ ಸುದ್ದಿಗೆ ಗುದ್ದುಕೊಡುವುದಕ್ಕೆ ಪೂರಕವೂ, ಪ್ರೇರಣೆಯೂ ಆಯಿತೇನೋ? ನಂತರದಲ್ಲಿ ಕನ್ನಡದ ಧೀಮಂತ ನಾಟಕಕಾರ, ಆಗಿನ ಅಕಾಶವಾಣಿ ನಾಟಕ ನಿರ್ದೇಶಕ ಶ್ರೀರಂಗರ ಪ್ರೇರಣೆಯಂತೆ ‘ನಾರೀಲೋಕದಲ್ಲಿ ನಾರದರು’ ಬಾನುಲಿ ನಗೆನಾಟಕ ರಚನೆಗೂ ಅಂದೇ ಅಂಕುರಾರ್ಪಣವಾಗಿತ್ತೇನೋ? ನಾರದ, ನಾಗೇಶರಾಯರ ಪಾಲಿಗೆ ಮಾದರಿ ವರದಿಗಾರ - ಚಿರಂಜೀವಿ ಸುದ್ದಿ ಪುರುಷ!
  • ‘ಹಣೆಬರಹ’ದಲ್ಲಿ, ಪತ್ರಿಕೆಯೊಂದರ ‘ಎಲ್ಲೆಲ್ಲಿ - ಏನೇನು’ ಎಂಬ ದೃಷ್ಟಿ, ಚಿತ್ರ - ಚಿತ್ತಾರಗಳ ಸೃಷ್ಟಿ, ‘ಒಳಗೇನಿದೆ’ ಎಂಬಂಥ ಆಡುಮಾತಿನ, ಕೌತುಕದ ನುಡಿ ಕಟ್ಟಣೆ, ಮಿಂಚಿದ ಹಾಸ್ಯ, ಮಿನುಗಿದ ವ್ಯಂಗ್ಯ, ವಿಷಯ ವೈವಿಧ್ಯಗಳನ್ನು ಕಾಣಬಹುದು. ಮಾದರಿಗೆಂಬಂತೆ ಒಂದೆರಡು ಸಂಚಿಕೆಗಳು ದೊರೆತಿವೆ.
  • ‘ಸೋಮಾರಿ’ - ೧೯೪೧-೪೨: ಲಘು ಬರಹಗಳ ಕೈಬರಹ ವಾರಪತ್ರಿಕೆಯಾದರೂ ಗಂಭೀರ ಲೇಕ, ಭಗವದ್ಗೀತೆ-ರುಬಾಯಿತು-ಕನ್ನಡ ಕವನಗಳಿಂದ ಉಲ್ಲೇಖ, ‘ಸ್ವಾತಂತ್ರ್ಯ ಘೋಷ -ಸ್ವಾತಂತ್ರ್ಯ ವೀರರ ಪರಿಚಯ’, ಸ್ಥಿರ ಅಂಕಣಗಳು, ಚಿತ್ತಾರದ ತಲೆಬರಹ, ‘ಕೊಲಾಜ್’ ತಂತ್ರ ಪ್ರಯೋಗವನ್ನೂ ಸ್ಯಾಂಪಲ್ ಸಂಚಿಕೆಗಳಲ್ಲಿ ಕಾಣಬಹುದು.
  • ‘ಚಿತ್ರಗುಪ್ತ’ - ೧೯೪೧-೪೨: ರಾಯರಲ್ಲಿ ಸುಪ್ತವೂ, ಗುಪ್ತವೂ ಆಗಿದ್ದ ಪ್ರತಿಭೆ - ಪತ್ರಿಕಾ ಪ್ರೇಮಗಳು ‘ಚಿತ್ರಗುಪ್ತ’ದ ಮೂಲಕ ವ್ಯಕ್ತಗೊಂಡಿತು. ಅವರು ‘ಚಿತ್ರ’, ‘ಗುಪ್ತ’ನಾಗಿ ಸಹ ಸಂಪಾದಕ ಟಿ.ಎಸ್.ಕೃಷ್ಣಮೂರ್ತಿ. (ಚಿತ್ರಗುಪ್ತರು ಆದ್ಯ ವರದಿಗಾರ ಜೋಡಿ ಎಂಬ ಧ್ವನಿ ಈ ಹೆಸರಿನಲ್ಲಿ ಪ್ರತಿಧ್ವನಿತ). ಮೊದಲಿಗೆ ದಿನದ, ನಂತರ ವಾರಪತ್ರಿಕೆ. ಪ್ರಾರ್ಥನೆಯಿಂದ ಪ್ರಾರಂಭವಾಗಿ ವಿವಿಧ ವಿಷಯಗಳಿಗೆ ಸ್ಥಾನ - ‘ನಗೆ ಮಲ್ಲಿಗೆ’ಯೂ ಸೇರಿ. ಒಂದೆರಡು ಸಂಚಿಕೆಗಳು ಲಭ್ಯ.
  • ಮುಂದೆ ೧೯೫೨ರಲ್ಲಿ ‘ತಾಯಿನಾಡು’ವಿನ ಸೋದರನಂತೆ ಮರುಹುಟ್ಟು ಪಡೆದ ಸಚಿತ್ರ-ಸುಂದರ-ಸಾಪ್ತಾಹಿಕ ‘ಚಿತ್ರಗುಪ್ತ’ದಲ್ಲಿ ‘ವಿನೋದ ವಿಹಾರ’ ಅಂಕಣವನ್ನು ನಡೆಸಿಕೊಂಡು ಬಂದವರು ಇಂದಿನ ಹೆಸರಾಂತ ವ್ಯಂಗ್ಯಚಿತ್ರಕಾರ ಎಸ್.ಕೆ.ನಾಡಿಗ್ ಜತೆಗೆ ‘ಎನ್‍ಎ’ ಕಾವ್ಯನಾಮದ ನಾಗೇಶರಾಯರು. ‘ಚಿತ್ರಗುಪ್ತ’ದ ಸಾಂಗತ್ಯದಲ್ಲಿ ಸಂಪಾದಕ ಎಂ.ಎಸ್.ಭಾರದ್ವಾಜ್, ನಿರಂಜನ, ಶೇಷನಾರಾಯಣ, ಕೋ.ಚೆನ್ನಬಸಪ್ಪ, ಎಂ.ಬಿ.ಸಿಂಗ್, ವೆಂಕಟರಾಜ ಪಾನಸೆ.
  • ಕುಮಾರ ವೆಂಕಣ್ಣ ಮುಂತಾದವರೊಂದಿಗೆ ಒಡನಾಟ, ‘ಪುಸ್ತಕ ಪ್ರಿಯ’ ಹೆಸರಿನಲ್ಲಿ ಗ್ರಂಥ ವಿಮರ್ಶೆ. ‘ಕನ್ನಡ ಕೆಚ್ಚು’ - ೧೯೪೧-೪೨: ಈ ಕೈಬರಹ ಪತ್ರಿಕೆಯ ಸಂಪುಟ - ಸಂಚಿಕೆಗಳು ‘ಉರಿ’ ಹಾಗೂ ‘ಕಿಡಿ!! ಮುಂದೆ ಪಿ.ಶೇಷಪ್ಪನವರ ‘ಕಿಡಿ’ ವಾರಪತ್ರಿಕೆ ಬೆಂಗಳೂರಿನಿಂದ ಹೊರಟು ಸರ್ಕಾರ-ಸಚಿವರು-ಅಧಿಕಾರಿಗಳಿಗೆ ಸಾಕಷ್ಟು ಬಿಸಿ ಮುಟ್ಟಿಸುತ್ತಿತ್ತು. ‘ಕಿಡಿ’ ಸಿಡಿಯಲು, ‘ಉರಿ’ ಕಾರಲು ನಾಗೇಶರಾಯರೂ ಸಾಕಷ್ಟು, ಬೇಕಷ್ಟು ಮದ್ದು-ಗುಂಡು ಸುರಿಸುತ್ತಿದ್ದರು.
  • ಅಷ್ಟೇ ಅಲ್ಲ, ಮುಂದೆ ಹೆಚ್.ರಾಮಸ್ವಾಮಿಯವರ ಸಂಪಾದಕತ್ವದಲ್ಲಿ ಆರಂಭವಾದ ‘ಜ್ವಾಲಾಮುಖಿ’ ಪತ್ರಿಕೆಗೆ ಮೊದಲ ಸಂಪಾದಕೀಯದಿಂದ ಹಿಡಿದು ಲೇಖನಗಳ ಲಾವಾರಸವನ್ನು ಹರಿಸುತ್ತಿದ್ದರು. ‘ಕನ್ನಡ ಕೆಚ್ಚು’ ಸಂಪಾದಕ - ಹಾ.ರಂ. ನಾಗೇಶರಾವ್ - ‘ಕನ್ನಡ ಕಂದ’! ‘ಕನ್ನಡದ ಬಗ್ಗೆ ವಾತ್ಸಲ್ಯಪೂರಿತರಾಗಿ’ ಎಂಬುದೇ ಅವರಿಗಿದ್ದ ಆಶಯ. ‘ಕನ್ನಡಿಗರಲ್ಲಿ’ - ಸಂವಾದರೂಪದ ಸಂಪಾದಕೀಯ; ‘ಕನ್ನಡದ ಚೆಲುವು’ - ಹಳೆಗನ್ನಡ ಪದ್ಯದ ಮೂಲಕ ನಾಡ ಪರಿಚಯ, ‘ನಾವು-ನೀವು’ - ಓದುಗರ ಸಂದೇಹಕ್ಕೆ ಸಂಆಧಾನ;
  • ‘ಕನ್ನಡ ಕಂದರು’ - ಕನ್ನಡ ಸಂಸ್ಥೆಗಳ ಕಲಾಪ ಸುದ್ದಿ - ವರದಿ; ‘ಕನ್ನಡ ಸಾಹಿತ್ಯದ ಮೈಲಿಗಲ್ಲುಗಳು’ ಅಲ್ಲದೆ ನೊಂದ-ನುಡಿ, ಬಿನ್ನಹಗಳಂಥ ಅಂತರಂಗ ಬರಹಗಳು. ಇವೆಲ್ಲವೂ ‘ಕನ್ನಡ ಕೆಚ್ಚು’ವಿನಲ್ಲಿದೆ. ‘ಇನ್ನೇನು?’ - ೧೯೪೨: ಆಗ ಸ್ವಾತಂತ್ರ್ಯ ಚಳುವಳಿಯ ಬಿಸಿ. ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಆಂದೋಲನ. ರಾಯರೀಗ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ. ಕುಡಿಮೀಸೆ ಚಿಗುರೊಡೆಯುತ್ತಿದ್ದ, ಕುದಿ ಹೃದಯದ ಹುಡುಗ. ದೇಶಕ್ಕಾಗಿ ತನ್ನ ಸೇವೆಯೂ ಸಲ್ಲಲಿ ಎಂಬ ತವಕ. ‘ಸ್ಟುಡೆಂಟ್ಸ್ ಫೆಡರೇಶನ್’ ಮೂಲಕ ನಾಲ್ವರು ಗೆಳೆಯರೊಡಗೂಡಿ ‘ಇನ್ನೇನು’ ಹಸ್ತ ಪತ್ರಿಕಾ ಪ್ರಕಟಣೆ. ಪೊಲೀಸ್ ನಿಗಾ, ಗುಮಾನಿ, ತನಿಖೆಗಳಾರಂಭವಾದಾಗ ಇದು ಸ್ಥಗಿತ. ಚದುರಿದ ಕಾರ್ಯಕರ್ತರು.
  • ‘ಕರವಾಳ’ - ೧೯೪೨: ‘ಇನ್ನೇನು’ ಇನ್ನೊಂದು ಅವತಾರವೆತ್ತಿತು - ಬೇರೆ ಐವರ ನೆರವಿನಿಂದ. ಮಿತ್ರ ಗೋಪಾಲಕಣ್ಣನ್ ಅವರ ಸಹಾಯ - ಸಹಕಾರ ಸಿಕ್ಕಿತು. ಕಣ್ಣನ್ ಅವರಿಗೂ ಆಗಿನಿಂದಲೇ ಪತ್ರಿಕೋದ್ಯಂಅದ ಗೀಳು. ಮುಂದೆ ‘ಪ್ರಜಾವಾಣಿ’ ಸೇರಿ ವಿವಿಧ ಹುದ್ದೆಗಳನ್ನಲಂಕರಿಸಿ, ಸುದೀರ್ಘ ಸೇವೆಯ ನಂತರ ೧೯೮೬ರಲ್ಲಿ ‘ಪ್ರಜಾವಾಣಿ’ಯ ಸಹಾಯಕ ಸಂಪಾದಕರಾಗಿ ನಿವೃತ್ತಿ.
  • ಅತ್ತ ನಾಗೇಶರಾಯರು ‘ತಾಯಿನಾಡು’ ಮತ್ತು ‘ಸಂಯುಕ್ತ ಕರ್ನಾಟಕ’ ಪತ್ರಿಕೆಗಳಲ್ಲಿ ಸಂಪಾದಕೀಯ ಬರೆಯುತ್ತಿದ್ದರೆ ಇತ್ತ ಗೋಪಾಲಕಣ್ಣನ್ ಅವರು ‘ಪ್ರಜಾವಾಣಿ’ಯ ಸಂಪಾದಕೀಯಗಳ ಬರೆಯುತ್ತಿದ್ದರು. ಈ ಇಬ್ಬರೂ ಬಾಲ್ಯದ ಗೆಳೆಯರಿಗೆ ಒಂದೇ ವರ್ಷದ (೧೯೯೮) ‘ಪತ್ರಿಕಾ ಅಕ್ಯಾಡೆಮಿ ಪ್ರಶಸ್ತಿ’ ದೊರೆತುದು ಯೋಗಾಯೋಗ!
  • ಸಮಾನ ಅಭಿರುಚಿಯನ್ನು ಎಳವೆಯಿಂದ ಬೆಳೆಸಿಕೊಂಡಿದ್ದಕ್ಕೆ, ಮುಂದೆ ಸಾಹಸ-ಸಾಧನೆ-ಸಿದ್ಧಿ ತೋರಿದುದಕ್ಕೆ ಸಾಂಕೇತಿಕ ಸಾಕ್ಷಿ. ‘ಇನ್ನೇನು’, ‘ಕರವಾಳ’ ಸಂಚಿಕೆಗಳು ಅಲಭ್ಯ. ಆದರೂ ನಾಗೇಶರಯರು ಈ ಕುರಿತಂತೆ ಹಾಗೂ ‘ಕರವಾಳ’ದ ಕೆಲ ಸಂಚಿಕೆಗಳನ್ನು ಕಳಿಸಿಕೊಡುತ್ತಾ, ‘ಸಂಕ’ದ ಸಾರಥಿ ರಂಗನಾಥ ದಿವಾಕರರಿಗೆ ಬರೆದ ಪತ್ರದಿಂದ ವಿಷಯ ವಿವರಗಳು ಲಭ್ಯ.

ತಾಯಿನಾಡು[ಬದಲಾಯಿಸಿ]

  • ಆ ವರ್ಷದ ಅಡ್ಮಿಶನ್ ಮುಗಿದಿದ್ದರಿಂದ ಮುಂದಿನ ಅಕ್ಯಾಡೆಮಿಕ್ ವರ್ಷದ ತನಕ ಸುಮ್ಮನೆ ಇರುವ ಬದಲು ವೈಟ್‌ಫೀಲ್ಡ್ನಲ್ಲಿದ್ದ ಮಿಲಿಟರಿ ಆರ್ಡ್‌ನೆನ್ಸ್ ಡಿಪೋದಲ್ಲಿ ಲೆಕ್ಕಪತ್ರ ನೋಡಿಕೊಳ್ಳುವ ತಿಂಗಳಿಗೆ ೭೦ ರುಪಾಯಿ ಸಂಬಳದ ಕೆಲಸಕ್ಕೆ ಸೇರಿದರು (11-05-1945). ಈ ಬಗ್ಗೆ ತಿಳಿದಿದ್ದ ತುಮಕೂರಿನ ಪ್ರೌಢಶಾಲೆಯ ಉಪಾಧ್ಯಾಯ ಏ.ಟಿ.ಶಾಮಾಚಾರ್ ಹೀಗೊಂದು ದಿನ ಬೆಂಗಳೂರಿನಲ್ಲಿ ನಾಗೇಶರಾವ್ ಅವರನ್ನು ಭೇಟಿ ಮಾಡಿದರು.
  • ಕನ್ನಡ ಪತ್ರಿಕೋದ್ಯಮ ಹಾಗೂ ಕನ್ನಡ ಸಾಹಿತ್ಯದಲ್ಲಿ ಅಪಾರ ಆಸಕ್ತಿಯಿದ್ದ ಯುವಕ ಗುಮಾಸ್ತಗಿರಿಯಲ್ಲಿ ಕಳೆದುಹೋಗಬಹುದೆಂಬ ಆತಂಕ ಅವರಿಗಿತ್ತು. ತಮಗೆ ಪರಿಚಯವಿದ್ದ ತಾಯಿನಾಡು ಪತ್ರಿಕೆಯ ಸಂಪಾದಕರಾಗಿದ್ದ ಪಿ.ಬಿ.ಶ್ರೀನಿವಾಸನ್ ಅವರಿಗೆ ಪತ್ರವೊಂದನ್ನು ಬರೆದು ನಾಗೇಶರಾವ್ ಅವರ ಕೈಗಿತ್ತರು. ಆರ್ಡ್‌ನೆನ್ಸ್ ಡಿಪೋ ಕೆಲಸಕ್ಕೆ ರಾಜೀನಾಮೆ ನೀಡಿದರು (05-12-1945).
  • ತಾಯಿನಾಡು ಪತ್ರಿಕೆಯ ಕಚೇರಿಯನ್ನು ಪ್ರವೇಶಿಸಿದ ನಾಗೇಶರಾವ್, ಜನವರಿ ೪, ೧೯೪೬ರಂದು ಸಂಪಾದಕರನ್ನು ಭೇಟಿಯಾಗಿ ಉಪಸಂಪಾದಕರಾಗಿ ನೇಮಕಗೊಂಡರು. ಮಧ್ಯಾಹ್ನ ಭೆಟ್ಟಿಯಾದ ಪತ್ರಿಕೆಯ ಮಾಲಿಕ ಪಿ.ಆರ್.ರಾಮಯ್ಯ ೩೫ ರುಪಾಯಿ ಸಂಬಳದ ನೇಮಕಾತಿ ಪತ್ರವನ್ನು ನೀಡಿದರು. ಹಿಂದೆ ಸಂಪಾದಿಸುತ್ತಿದ್ದಕ್ಕಿಂತ ಅರ್ಧ ಸಂಬಳ. ಆಗಲೇ ಹಿರಿಯ ಉಪಸಂಪಾದಕರಾಗಿ ಕೆಲಸ ಮಾಡುತ್ತಿದ್ದ ಕೆ.ಅನಂತಸುಬ್ಬರಾವ್ ಅವರ ಮಾರ್ಗದರ್ಶನದಲ್ಲಿ ನಾಗೇಶರಾವ್ ಅತಿ ಶೀಘ್ರದಲ್ಲೇ ಸಂಪಾದಕರ ಮೆಚ್ಚುಗೆ ಗಳಿಸಿದರು. *ಸಂಪಾದಕೀಯ ಪುಟದ ಉಸ್ತುವಾರಿಯ ಜತೆಗೆ ನಿತ್ಯವೂ ಸಂಪಾದಕೀಯ ಹಾಗೂ ಟೀಕಾಂಕಣ `ನಾರದ ಉವಾಚ' ಬರೆಯುವ ಹೊಣೆಗಾರಿಕೆ ನಾಗೇಶರಾವ್ ಅವರದಾಯಿತು. ಕಾಲಕ್ರಮೇಣ ಸಂಪಾದಕರ ನಂತರದ ಸ್ಥಾನದಲ್ಲಿ ಇಡೀ ಪತ್ರಿಕೆಯನ್ನು ರೂಪಿಸುವ ಜವಾಬ್ದಾರಿ ನಾಗೇಶರಾವ್ ಹೊತ್ತುಕೊಂಡರು. ನಾರದ ಉವಾಚ ಅಂದಿನ ಮೈಸೂರು ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯನವರನ್ನೂ ತಟ್ಟುತ್ತಿತ್ತು.
  • ಒಮ್ಮೆ ನಾರದ ಉವಾಚದ ಬರಹಗಾರರು ಯಾರೆಂದು ತಿಳಿಯಲು ತಾಯಿನಾಡು ಕಚೇರಿಗೆ ಆಗಮಿಸಿ ನಾಗೇಶರಾವ್ ಅವರ ಆಗಮನಕ್ಕೆ ಕಾದು ಕುಳಿತಿದ್ದ ಪ್ರಸಂಗವೂ ನಡೆಯಿತು. ತಾಯಿನಾಡು ಪತ್ರಿಕೆಯಲ್ಲಿ ಅಂದು ಕಾರ್ಯನಿರ್ವಹಿಸುತ್ತಿದ್ದ ಪತ್ರಕರ್ತರಲ್ಲಿ ಹೆಸರುವಾಸಿಯಾದವರು ಎಸ್.ಆರ್.ಕೃಷ್ಣಮೂರ್ತಿ, ಕೆ.ಸತ್ಯನಾರಾಯಣ, ನಾಗಮಣಿ ಎಸ್.ರಾವ್, ಡಚ್ಚ ಎಂದೇ ಹೆಸರಾಗಿದ್ದ ಡಿ.ಎಚ್.ಶ್ರೀನಿವಾಸ, ಕುಲಮರ್ವ ಬಾಲಕೃಷ್ಣ ಮುಂತಾದವರು.
  • ಸುದ್ದಿ ಪ್ರಸಾರದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿದ್ದ ತಾಯಿನಾಡು ಆರ್ಥಿಕವಾಗಿ ಪ್ರಜಾವಾಣಿಯ ಪೈಪೋಟಿಯನ್ನು ಎದುರಿಸಲು ಸಾಧ್ಯವಾಗಲಿಲ್ಲ. ಬೃಹತ್ ನೀರಾವರಿ ಯೋಜನೆಗಳ ನಿರ್ಮಾಣದಲ್ಲಿ ಭಾಗಿಯಾಗಿದ್ದ ಎಂ.ಎಸ್.ರಾಮಯ್ಯ ಅವರಿಗೆ ಪತ್ರಿಕೆಯ ಮಾಲಿಕತ್ವ ಹಸ್ತಾಂತರವಾಯಿತು. ಜನಪ್ರಗತಿಯ ಮಾಲಿಕ ಬಿ.ಎನ್.ಗುಪ್ತ ಅವರ ಮಾರ್ಗದರ್ಶನ, ಕಲಾವಿದ ರುಮಾಲೆ ಚೆನ್ನಬಸವಯ್ಯ ಅವರ ಸಂಪಾದಕತ್ವದಲ್ಲಿ ಪತ್ರಿಕೆಗೆ ಹೊಸ ಸ್ವರೂಪ ನೀಡುವ ಪ್ರಯತ್ನಗಳು ನಡೆದವು.
  • ಹಾಸ್ಯ ಸಾಹಿತಿ ನಾಡಿಗೇರ ಕೃಷ್ಣರಾಯ ಸಂಪಾದಕ ಮಂಡಲಿ ಸೇರಿದರು. ತಿ.ಸಿದ್ದಪ್ಪ ಅವರ ಸಂಪಾದಕತ್ವದಲ್ಲಿ ಪತ್ರಿಕೆಯ ರೂಪುರೇಷೆ ಹೆಚ್ಚಿನ ಬದಲಾವಣೆಗಳನ್ನು ಕಂಡಿತು. ಬದಲಾದ ಸಂಪಾದಕೀಯ ಹಾಗೂ ಮಾಲಿಕತ್ವದ ಧೋರಣೆಗಳು ಸರಿ ಹೊಂದದೆ ಹೆಚ್.ಆರ್.ನಾಗೇಶರಾವ್ ಪತ್ರಿಕೆಯಿಂದ ಹೊರಗಡೆ ಬಂದರು (೨೦ನೇ ಆಗಸ್ಟ್ ೧೯೫೮).

ಸಂಯುಕ್ತ ಕರ್ನಾಟಕ[ಬದಲಾಯಿಸಿ]

ಸುದ್ದಿ ಸಂಪಾದಕರ ಕುರ್ಚಿಯಲ್ಲಿ

ದಿನಚರಿ ನಿರ್ವಹಣೆ[ಬದಲಾಯಿಸಿ]

[[ಚಿತ್ರ:Diary 1965-1 001.jpg|thumb|ತಾಯಿನಾಡು ಹಾಗೂ ಸಂಯುಕ್ತ ಕರ್ನಾಟಕ ದಿನಗಳಿಂದಲೂ ಹೆಚ್.ಆರ್.ನಾಗೇಶರಾವ್ ತಮ್ಮ ದಿನಚರಿಯನ್ನು ತಪ್ಪದೇ ಬರೆಯುತ್ತಿದ್ದರು]] ಪತ್ರಿಕಾಲಯದಲ್ಲಿ ಕೆಲಸ ಮಾಡುವವರಿಗೆ ನಿತ್ಯವೂ ಸುದ್ದಿಯ ಸುರಿಮಳೆ. ಶಾಲಾ ದಿನಗಳಿಂದಲೂ ದಿನಚರಿ ಬರೆಯುವ ಹವ್ಯಾಸವನ್ನು ತಪ್ಪದೇ ನಡೆಸಿಕೊಂಡು ಬರುತ್ತಿದ್ದ ಹೆಚ್.ಆರ್.ನಾಗೇಶರಾವ್ ಅವೆಲ್ಲವನ್ನೂ ಆರು ದಶಕಗಳ ಕಾಲ ಕಾಪಾಡಿಕೊಂಡು ಬಂದಿದ್ದಾರೆ. ಪ್ರಧಾನ ಮಂತ್ರಿಯಾಗಿದ್ದ ಲಾಲ್ ಬಹಾದೂರ್ ಶಾಸ್ತ್ರಿ ಬೆಂಗಳೂರಿಗೆ ಬಂದ ಸಂದರ್ಭವನ್ನು ಅವರು ದಿನಚರಿಯ ಪುಟದಲ್ಲಿ ದಾಖಲಿಸಿರುವುದು ಹೀಗೆ.

ಪತ್ರಿಕಾ ಬರಹ[ಬದಲಾಯಿಸಿ]

‘ಕೊರವಂಜಿ’ಯ ‘ಕುಹಕಿಡಿ’ಗಳು ಅಂಕಣಕ್ಕೆ 1947ರಲ್ಲೇ ನಾಗೇಶರಾವ್ ಬರೆಯುತ್ತಿದ್ದರು
  • ಕೊರವಂಜಿ ಪತ್ರಿಕೆಯ ‘ಕುಹಕಿಡಿಗಳು’ ಅಂಕಣಕ್ಕೆ ಕೆಲಕಾಲ ನಾಗೇಶರಾವ್ ಬರೆಯುತ್ತಿದ್ದರು. ಆ ಕಾಲದ ನಿರ್ಭೀತ ಪತ್ರಿಕೆ ಪಿ.ಶೇಷಪ್ಪ ನವರ ಕಿಡಿ ಸಾಪ್ತಾಹಿಕ. ಆಳರಸರನ್ನು ಬೆಚ್ಚಿ ಬೀಳಿಸುತ್ತಿದ್ದ ಈ ಪತ್ರಿಕೆಗೆ ನಾಗೇಶರಾವ್ ಗುಟ್ಟಾಗಿ ರಾಜಕೀಯ ವಿಶ್ಲೇಷಣೆಯ ಲೇಖನಗಳನ್ನು ಬರೆದುಕೊಡುತ್ತಿದ್ದರು. ಇದೇ ಮಾದರಿಯಲ್ಲಿ ಜ್ವಾಲಾ ಮುಖಿ ಪತ್ರಿಕೆ ಆರಂಭವಾದಾಗ, ಮೊದಲ ಸಂಚಿಕೆಯ ಸಂಪಾದಕೀಯ ನಾಗೇಶರಾವ್ ಅವರದ್ದು.
  • ಇವೆರಡೂ ವಾರಪತ್ರಿಕೆಗಳಿಗೆ ಅಂದಿನ ರಾಜ್ಯ ರಾಜಕೀಯ ಬೆಳವಣಿಗೆಗಳ ಬಗ್ಗೆ ಕಟು ವಿಮರ್ಶಾ ಲೇಖನಗಳನ್ನು ಅವರು ಬರೆಯುತ್ತಿದ್ದರು. ಆನಂದ ಜ್ಯೋತಿ ಮಾಸಪತ್ರಿಕೆಗೆ ರಾಜಕೀಯ ಮುಖಂಡರ ಕಾಲ್ಪನಿಕ ಭೇಟಿಗಳು, ರಾಮರಾಜ್ಯ ಪಾಕ್ಷಿಕ, ವಿಶ್ವಬಂಧು ಸಾಪ್ತಾಹಿಕ, ವಿಜಯಮಾಲಾ ಮಾಸಿಕ, ಕತೆಗಾರ ಮಾಸಿಕಗಳಿಗೆ ಲಘು ಬರಹ, ವೈಚಾರಿಕ ಲೇಖನ, ವಾರ್ತಾವಲೋಕನಗಳನ್ನು ಬರೆಯುತ್ತಿದ್ದರು. ತುಮಕೂರಿನ ವಿಜಯವಾಣಿ ದಿನಪತ್ರಿಕೆಗೆ ವಾರಕ್ಕೊಮ್ಮೆ `ಬಾರುಗೋಲು' ಎಂಬ ಟೀಕಾಂಕಣ ಬರೆದುಕೊಡುತ್ತಿದ್ದರು. *ವಿನೋದ ಪತ್ರಿಕೆಗೆ ತಪ್ಪದೇ ಹಾಸ್ಯ ಲೇಖನಗಳನ್ನು ಬರೆಯುತ್ತಿದ್ದರು. ಆ ಕಾಲದಲ್ಲಿ ಪ್ರಕಟವಾಗುತ್ತಿದ್ದ ಅನೇಕ ಪತ್ರಿಕೆಗಳಿಗೆ ಎನ್‍ಎ ಹೆಸರಿನಲ್ಲಿ ರಾಜಕೀಯ ವಿಶ್ಲೇಷಣೆ, ನಗೆಲೇಖನ, ಅಣಕವಾಡು, ‘ಕುಹಕಿಡಿಗಳು’ ಅಂಥ ಟೀಕಾಂಕಣಗಳನ್ನು ಅವರು ಬರೆದುಕೊಡುತ್ತಿದ್ದರು. ವಿಶ್ವಬಂಧು ತಮ್ಮ ಗೆಳೆಯ ಹಾಗೂ ಮಾರ್ಗದರ್ಶಿ ಕೆ.ಅನಂತಸುಬ್ಬರಾವ್ ಅವರ ಜತೆ ಸೇರಿ ನಾಗೇಶರಾವ್ ಆರಂಭಿಸಿದ ವಾರಪತ್ರಿಕೆ. ಈ ಪತ್ರಿಕೆಗೆ ನಾಗೇಶರಾವ್ ವಿಜ್ಞಾನ ಸುದ್ದಿ ತುಣಕುಗಳ ಅಂಕಣ `ವಿಜ್ಞಾನ ವಿಶ್ವ' ನಿರ್ವಹಿಸುತ್ತಿದ್ದರು. ಅವರ ಸಾಮಾಜಿಕ ನಾಟಕ `ಕಂಕಣದ ಸಂಕಲ್ಪ' ಮೊದಲು `ವಿಶ್ವಬಂಧು'ವಿನಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿತ್ತು.

ಇತರೆ[ಬದಲಾಯಿಸಿ]

  • ವಿಜ್ಞಾನ, ಸಾಹಿತ್ಯ, ಪ್ರಚಲಿತ ರಾಜಕೀಯಗಳಿಗೆ ಸಂಬಂಧಿಸಿದ ಇಂಗ್ಲಿಷ್ ಹಾಗೂ ಕನ್ನಡ ಪುಸ್ತಕಗಳ ಅಪಾರ ಸಂಗ್ರಹ ನಾಗೇಶರಾವ್ ಅವರದು. ನಿವೃತ್ತಿಯ ನಂತರದ ಹದಿನೆಂಟು ವರ್ಷಗಳನ್ನು ಅವರು ಪುಸ್ತಕಗಳನ್ನು ಓದುವುದರಲ್ಲಿ ಕಳೆದರು. ನಡುವೆ ನಿಯಮಿತವಾಗಿ ತಮಗೆ ಪ್ರಿಯವಾದ ಹಾಸ್ಯ ಲೇಖನಗಳ ರಚನೆಯಲ್ಲಿ ತೊಡಗಿಕೊಂಡರು.
  • ಬೆಂಗಳೂರಿನಲ್ಲಿ ಲಭ್ಯವಿದ್ದ ಎಲ್ಲ ಇಂಗ್ಲಿಷ್ ಹಾಗೂ ಕನ್ನಡ ಪತ್ರಿಕೆಗಳನ್ನು ನಿರಂತರವಾಗಿ ಓದುತ್ತಿದ್ದರು. ಆಪ್ತ ಮಿತ್ರರು ಹಾಗೂ ಹಿಂದಿನ ಸಹೋದ್ಯೋಗಿಗಳೊಂದಿಗೆ ಪತ್ರಿಕೋದ್ಯಮದ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದರು. ೩ನೇ ಆಗಸ್ಟ್ ೨೦೦೩ರಂದು ಬೆಂಗಳೂರಿನ ತಮ್ಮ ಸ್ವಗೃಹದಲ್ಲಿ ನಿಧನರಾದರು.

‘ಸುದ್ದಿಜೀವಿ’[ಬದಲಾಯಿಸಿ]

‘ಸುದ್ದಿಜೀವಿ’ ಪುಸ್ತಕವನ್ನು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಬಿಡುಗಡೆ ಮಾಡಿದರು
  • ಇದು ಸ್ವಾರಸ್ಯ, ಸೋಜಿಗದ ಸಂಬೋಧನೆಯೇನೋ ಸರಿ. ನಾಗೇಶರಾಯರ ಮಟ್ಟಿಗೆ ಮಾತ್ರ ಇದು ಸಹಜವೂ, ಸತ್ಯವೂ, ಸಾದೃಶವೂ, ಸಾರ್ಥಕವೂ ಆದ ‘ಸ್ವಯಂ-ನಾಮಕರಣ’ದ ಸುಂದರ ಉದ್ಯೋಗನಾಮ. ಸುದ್ದಿಯೇ ನಾಗೇಶರಾಯರ ಜೀವದುಸಿರು, ಜೀವದುಣಿಸು, ಜೀವನದಾಸೆ, ಜೀವನ ಧ್ಯೇಯ, ಜೀವನ ವ್ರತ. ಸುದ್ದಿಮನೆಯ ಕಾಯಕಕ್ಕೆ ಅವರದು ಕಾಯಾ-ವಾಚಾ-ಮನಸಾ ಸಮರ್ಪಣೆ. ಅದೇ ಅವರ ಪಾಲಿಗೆ ಸಾರಸರ್ವಸ, ದೈವ ಸ್ವರೂಪ, ಅದನುಳಿದು ಅವರಿಗೆ ಅನ್ಯ ಜೀವನವಿಲ್ಲ!
  • ನಿಜ, ನಾಗೇಶರಾಯರು ಪತ್ರಿಕಾ ಅಥವಾ ಮಾಧ್ಯಮ ವಿಷಯದ ಶಿಸ್ತುಬದ್ಧ ಓದು, ಅಧ್ಯಯನ, ಅಭ್ಯಾಸ ನಡೆಸಿದ ‘ಅಕಾಡೆಮಿಕ್’ ವಿದ್ಯಾರ್ಥಿಯೇನಲ್ಲ. ಆ ಕಾಲಕ್ಕೆ ಅಂಥ ವಿದ್ಯಾಭ್ಯಾಸಕ್ಕೆ ಆಸ್ಪದ, ಅವಕಾಶ, ಅನುಕೂಲಗಳೂ ಇರಲಿಲ್ಲ. ಹೀಗಾಗಿ ಸುದ್ದಿಶಾಸ್ತ್ರದ ಯಾವ ಡಿಪ್ಲೊಮಾ-ಡಿಗ್ರಿ-ಡಾಕ್ಟರೇಟ್ ಸಹಾ ಅವರ ಹೆಸರಿಗೆ ಅಂಟಿಕೊಳ್ಳುವ ಸಂಭವವಿರಲಿಲ್ಲ.
  • ಆದರೇನು? ಪತ್ರಿಕೋದ್ಯಮ ಪಂಡಿತರೂ ಅಚ್ಚರಿ-ಮೆಚ್ಚುಗೆ ಸೂಚಿಸುವಷ್ಟು ಪರಿಜ್ಞಾನ-ಪರಿಣತಿ, ಪರಿಪಕ್ವತೆಯನ್ನು ಈ ಪ್ರತಿಭಾನ್ವಿತ ಪತ್ರಕರ್ತ ಅಪಾರ ಪರಿಶ್ರಮದಿಂದ, ಅಪರಿಮಿತ ಶ್ರದ್ಧೆಯಿಂದ ಪಡೆದುಕೊಂಡರು, ತಮ್ಮ ಕೆಲಸದ ಮೂಲಕವೇ ಪ್ರದರ್ಶಿಸಿದರು. ಪತ್ರಿಕಾ ಧರ್ಮಕ್ಕೆ, ಪತ್ರಿಕಾ ವೃತ್ತಿಗೆ ಅವರದು ಅಚಲ ನಿಷ್ಠೆ, ಅವಿರತ ಸೇವೆ, ಅಕಳಂಕ ಸಾಧನೆ, ಅದೇ ಅವರ ಪಾಲಿಗೆ, ಪದವಿ-ಪದಕ-ಪ್ರಶಸ್ತಿ. ‘ಸುದ್ದಿಜೀವಿ’ ಅವರಿಗೆ ಅಕ್ಷರಶಃ ಹೆಸರಾಯಿತು. ಸುದ್ದಿಯೇ ಅವರ ಪ್ರಾಣದುಸಿರಾಯಿತು.
  • ಹುಟ್ಟು ಕವಿ-ಕಲಾವಿದ-ಕುಶಲಕರ್ಮಿ-ಕ್ರೀಡಾಪಟು ಎಂದೆಲ್ಲಾ ಅನ್ನುತ್ತೇವಲ್ಲ? ಹಾಗೆ ನಾಗೇಶರಾಯರು ಜನ್ಮತಃ ಪತ್ರಕರ್ತ! ಕೈಲಿ ಲೇಖನಿ, ಕತ್ತರಿ, ಭೂತಕನ್ನಡಿ ಹಿಡಿದೇ ಹುಟ್ಟಿದವರಂತಿತ್ತು ಅವರ ಪತ್ರಿಕಾ ಪ್ರತಿಭೆ. ಸುದ್ದಿ ಸಂಗ್ರಹ - ಸಂಪಾದನೆ, ವಿಶ್ಲೇಷಣೆ-ವಿಂಗಡನೆ, ವಿನ್ಯಾಸ-ವಿತರಣೆ ಈ ಕಲೆಗಳೆಲ್ಲಾ ತಮ್ಮ ರಕ್ತ-ಮಾಂಸಗಳಲ್ಲೇ ಬೆರೆತು ಬಂದುವೇನೋ, ಪತ್ರಕರ್ತತನ ಅವರ ಪಾಲಿಗೆ ಪೂರ್ವ ಜನ್ಮದ ಸಂಸ್ಕಾರ ಫಲ-ಬಲವೇನೋ!
  • ಹಾಗಿದ್ದವು ಅವರ ವಿದ್ಯಾರ್ಥಿ ಜೀವನ - ವೃತ್ತಿ ಜೀವನ, ರಾಯರು ಹತ್ತಿ ಬಂದ ಹಂತಹಂತವನ್ನು ಹತ್ತಿರದಿಂದ ಹಣಿಕಿಕ್ಕಿ ನೋಡಿದವರ ಹುಬ್ಬೇರುತ್ತದೆ, ಹೂಂಕಾರ ಹೊರಡುತ್ತದೆ. ಹಾಂ! ಇಂದು ಅಲಂಕಾರದ, ಅತಿಶಯದ ಮಾತಲ್ಲ, ಎಲ್ಲಕ್ಕೂ ಸಾಕ್ಷಿ ಉಂಟು, ಸಾಹಿತ್ಯ ಉಂಟು. ತಾವೇ ಎಂದೂ ಹೇಳಿಕೊಳ್ಳದೆ, ಬರೆಯದೇ ಹೋದರೂ, ಬಿಟ್ಟು ಹೋಗಿರುವ ಅಸಂಖ್ಯಾತ ದಾಖಲೆಗಳ ಸಂಗ್ರಹವೇ ಸತ್ಯ ಸಾಕ್ಷ್ಯ ಹೇಳುತ್ತವೆ. ಅವರ ಸೃಜನಶೀಲತೆ, ಸಾಧನೆ, ಸಾಹಸಗಳಿಗೆ ಕನ್ನಡಿ ಹಿಡಿಯುತ್ತವೆ.
  • ನಾಗೇಶರಾಯರು ಅಪ್ಪಟ, ಅನ್ವರ್ಥದ `ಸುದ್ದಿಜೀವಿ' ಎಂದು ಸ್ಫುಟವಾಗಿ, ಸ್ಪಷ್ಟವಾಗಿ, ಸಾದೃಶ್ಯವಾಗಿ ನಿರೂಪಿಸಬಹುದು. ಜಯರಾಮ ಅಡಿಗ ಹಾಗೂ ಹಾಲ್ದೊಡ್ಡೇರಿ ಸುಧೀಂದ್ರ ಅವರ ಸಂಪಾದಕತ್ವದಲ್ಲಿ ಬೆಂಗಳೂರು ಪ್ರೆಸ್ ಕ್ಲಬ್ `ಸುದ್ದಿಜೀವಿ - ನಾಗೇಶರಾವ್' ಎಂಬ ಪುಸ್ತಕವನ್ನು ೨೦೦೬ರಲ್ಲಿ ಪ್ರಕಟಿಸಿತು.
  • ನಾಗೇಶರಾಯರ ವೃತ್ತಿಜೀವನದ ಸಾಧನೆಗಳನ್ನು ಕುರಿತ ಮಾಹಿತಿಯೊಂದಿಗೆ ತಾಯಿನಾಡು ಹಾಗೂ ಸಂಯುಕ್ತ ಕರ್ನಾಟಕ ಪತ್ರಿಕೆಗಳಲ್ಲಿ ಅವರ ಸಹೋದ್ಯೋಗಿಗಳಾಗಿದ್ದ ಪತ್ರಕರ್ತರೇ ಒದಗಿಸಿದ ಲೇಖನಗಳು, ದಾಖಲೆಗಳು, ಚಿತ್ರಗಳು ಈ ಪುಸ್ತಕದಲ್ಲಿವೆ. ಈ ಪುಸ್ತಕದ `ಬ್ಲರ್ಬ್' ಬರೆದ ಜಿ.ಎಸ್.ಸದಾಶಿವ ಅವರು ಹೀಗೆ ಹೇಳುತ್ತಾರೆ. "ನನ್ನಂತೆ ಹಲವರಿಗೆ ಪತ್ರಿಕಾ ವ್ಯವಸಾಯದ ಓನಾಮ ಶುರುವಾದದ್ದು `ಸಂಯುಕ್ತ ಕರ್ನಾಟಕ'ದ ಬೆಂಗಳೂರು ಆವೃತ್ತಿಯಲ್ಲಿ.
  • ಒಂದು ರೀತಿಯಲ್ಲಿ `ಸಂಕ' ಹಲವು ಯುವ ಪತ್ರಕರ್ತರ ಪಾಲಿಗೆ ತರಬೇತಿ ಕೇಂದ್ರವಾಗಿ ಬಿಟ್ಟಿತ್ತು. `ಸಂಕ'ದಲ್ಲಿ ಎರಡು ಮೂರು ವರ್ಷ ಕೆಲಸ ಮಾಡಿದವರು `ಪ್ರಜಾವಾಣಿ', `ಕನ್ನಡಪ್ರಭ'ಕ್ಕೆ ವಲಸೆ ಹೋಗುತ್ತಿದ್ದುದೇ ಹೆಚ್ಚಾಗಿತ್ತು. ಹೀಗೆ ವಲಸೆ ಹೋಗುವವರಿಗೆ `ಸಂಕ' ಬರೀ ಚಿಮ್ಮುಹಲಗೆಯಷ್ಟೇ ಆಗಿರಲಿಲ್ಲ, ಅವರು ಪತ್ರಿಕೋದ್ಯಮದ ಒಂದು ಗಟ್ಟಿ ಅನುಭವವನ್ನು ಪಡೆದುಕೊಂಡೇ ಹೊರ ಬೀಳುತ್ತಿದ್ದರು. ಇಂಥ ಗಟ್ಟಿ ಅನುಭವ ದೊರಕುತ್ತಿದ್ದುದಕ್ಕೆ ಕಾರಣ ಆ ಕಾಲದಲ್ಲಿ `ಸಂಕ'ದಲ್ಲಿ ಸ್ಥಿರವಾಗಿ ಉಳಿದಿದ್ದ ಹಲವು ಹಿರಿಯ ಪತ್ರಕರ್ತರು.
  • ಅವರಲ್ಲಿ ಹೆಚ್.ಆರ್.ನಾಗೇಶರಾವ್ ಒಬ್ಬರು. ನಾಗೇಶರಾವ್ ಎಂದೂ `ಹೈ ಪ್ರೊಫೈಲ್' ಪತ್ರಕರ್ತರಾಗಿರಲಿಲ್ಲ. ಒಬ್ಬ ಕಿರಿಯ ಪತ್ರಕರ್ತನಾಗಿ ನಾನು ಅವರ ಜತೆ ಕೆಲಸ ಶುರು ಮಾಡುವ ಹೊತ್ತಿಗೆ ಅವರು ಹೆಚ್ಚು ಬರವಣಿಗೆಯನ್ನು ಮಾಡುತ್ತಿರಲಿಲ್ಲ. `ಸಂಕ'ದಲ್ಲಿ `ಚಿಟಿಕೆ ಚಪ್ಪರ' ಎಂಬೊಂದು ಕಾಲಂ ನಮ್ಮೆಲ್ಲರಿಗೆ ಮೆಚ್ಚಿಗೆಯ ಬರವಣಿಗೆಯಾಗಿತ್ತು. ಅದನ್ನು ಬಿಟ್ಟರೆ ಹೆಚ್ಚು ಬರವಣಿಗೆ ಇರಲಿಲ್ಲ. ಆದರೆ ಪತ್ರಿಕೆಯನ್ನು ಸಿದ್ಧಪಡಿಸುವುದರಲ್ಲಿ ಅವರು ತೋರುತ್ತಿದ್ದ `ಪ್ರೊಫೆಷನಲಿಸಂ' ಇಂದಿಗೂ ಯುವಕರಿಗೆ ಮೇಲ್ಪಂಕ್ತಿಯಾಗಬೇಕು.
  • ಅಂಥವರ ಬಗೆಗೂ ಪುಸ್ತಕಗಳು ಬರಬೇಕು. ಈಗ `ಸುದ್ದಿಜೀವಿ' ಎಂಬ ಹೆಸರಿನಲ್ಲಿ ಬಂದ ಅವರ ನಿಕಟ ಸಂಪರ್ಕದಲ್ಲಿದ್ದ ಪತ್ರಕರ್ತರು ಬರೆದ ಲೇಖನಗಳ ಸಂಗ್ರಹ ನಾಗೇಶರಾಯರಿಗೆ ಅವರ ಒಡನಾಡಿಗಳು ಅರ್ಪಿಸಿದ `ನುಡಿ ನಮನ'ವೇ ಆಗಿದೆ. ಒಬ್ಬರ ವ್ಯಕ್ತಿ ಚಿತ್ರ ಬರೆಯುವಾಗ ಅದರಲ್ಲಿ ಬರಹಗಾರನೇ ಹೆಚ್ಚಾಗಿ ಕಾಣಿಸಿಕೊಳ್ಳುವ ಅಪಾಯ ಇದೆ. ನಾಗೇಶರಾಯರ ಬಗ್ಗೆ ಬರೆದ ಹಲವು ಲೇಖನಗಳಲ್ಲಿ ಇದು ಕಾಣುತ್ತದೆ ಎಂಬುದು ನಿಜ. ಅದು ಸ್ವಲ್ಪ ಮಟ್ಟಿಗೆ ಅನಿವಾರ್ಯವೂ ಹೌದು.
  • ವೈಯಕ್ತಿಕ ಅನುಭವವನ್ನು ಬರೆಯುವಾಗ `ಅವನ' ಜತೆ `ನಾನು' ಇರಲೇಬೇಕಾಗುತ್ತದೆ. ಆದರೆ `ಅವನು' ಮುಖ್ಯವಾಗಬೇಕು. ಅದೃಷ್ಟಕ್ಕೆ `ಸುದ್ದಿಜೀವಿ'ಯಲ್ಲಿ ಅಂಥ ಹಲವು ಚಿತ್ರಣಗಳಿವೆ. ಎಲ್ಲ ಬರಹಗಳೂ ನಾಗೇಶರಾಯರ ವೃತ್ತಿ ಸಂಬಂಧದ ಮೂಲಭೂತ ಗುಣಗಳನ್ನು ಗುರುತಿಸು ವಲ್ಲಿ ಯಶಸ್ವಿಯಾಗಿವೆ. ಶ್ರದ್ಧೆ, ಅಚ್ಚುಕಟ್ಟುತನ, ಎಂಥ ಸನ್ನಿವೇಶದಲ್ಲೂ ಕಳೆದುಕೊಳ್ಳದ ಸಂಯಮ, ವೃತ್ತಿಪರತೆ, ಸಮಯ ಪಾಲನೆ ವಿಷಯವನ್ನು ಎಲ್ಲ ಬರಹಗಳೂ ಸರಿಯಾಗಿಯೇ ಗುರುತಿಸಿವೆ. ನನ್ನಂಥವರಿಗೆ ಪತ್ರಿಕಾ ರಂಗದಲ್ಲಿ ತಮ್ಮದೇ ಆದ ದಾರಿ ಕಂಡುಕೊಳ್ಳಲು ಅಗತ್ಯವಾದ ಆತ್ಮವಿಶ್ವಾಸವನ್ನು ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದಂಥ `ಪುಟ್ಟ ದೇಹದ ದೊಡ್ಡ ಮನಸ್ಸಿನ' ನಾಗೇಶರಾಯರ ಬಗೆಗಿನ `ಸುದ್ದಿಜೀವಿ'ಯ ಹಿಂದಿನ ಶ್ರಮ ಸಾರ್ಥಕವಾದುದು."

ಪತ್ರಿಕೋದ್ಯಮ[ಬದಲಾಯಿಸಿ]

ತಾನುಂಟೋ, ಪೇಪರುಂಟೋ!

  • ತಮ್ಮನ್ನು ‘ಸುದ್ದಿಜೀವಿ’ ಎಂದು ಕರೆದುಕೊಂಡ ದಿನಪತ್ರಿಕೆಯ ಸುದ್ದಿ ಸಂಪಾದಕರು, ವರದಿಗಾರರು ತಳೆಯುವ ‘ತಾನುಂಟೋ, ಪೇಪರುಂಟೋ’ ಧೋರಣೆಯ ಬಗ್ಗೆ ಪ್ರಸ್ತಾಪಿಸಿದ್ದಾರೆ. ಪೇಪರಿನಲ್ಲಿ ಹೆಗ್ಗಳಿಕೆ ವರದಿಗಾರನದೋ, ಇಲ್ಲವೇ ಉಪಸಂಪಾದಕನದೋ ಎಂಬ ಬಗೆಹರಿಸಲಾಗದ ಪ್ರೇಮ-ವಿವಾದವನ್ನು ಅವರು ಸ್ವಾರಸ್ಯಕರವಾಗಿ ಬಿಸಿ ಏರಿಸದೇ ಬಣ್ಣಿಸುತ್ತಾರೆ. ಅನುದಿನ ನಡೆಯುವ ಹೆಚ್ಚುಗಾರಿಕೆಯ ಜಗಳ ಎಡಿಷನ್ ಹೊರ ಬರುವವರೆಗೆ ಅಷ್ಟೇ! - ಎಂಬ ವಿವೇಚನೆ ಅವರದು.
  • ತಾನು ಮಾಡುವ ಕೆಲಸ, ಪರಿಸ್ಥಿತಿಗಳನ್ನು ಗಮನಿಸಿದಾಗ ವರದಿಗಾರ ತಳೆಯುವ ಧೋರಣೆಯನ್ನು ಮನ್ನಿಸಬಹುದು - ಸಂ. - ಬೆಂಗಳೂರು ವರದಿಗಾರರ ಕೂಟದ ಸ್ಮರಣ ಸಂಚಿಕೆ (1971) ಪತ್ರಿಕೋದ್ಯಮವಲ್ಲ, ನಮ್ಮದು ‘ಕತ್ರಿಕೋದ್ಯಮ’! ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘವು 1975ರಲ್ಲಿ ನಡೆಸಿದ ರಾಜ್ಯ ಸಮ್ಮೇಳನದ (ಮಂಡ್ಯ) ಸ್ಮರಣ ಸಂಚಿಕೆಗೆ ಅಂದು ‘ಸಂಯುಕ್ತ ಕರ್ನಾಟಕ’ ಪತ್ರಿಕೆಯ ಸುದ್ದಿ ಸಂಪಾದಕರಾಗಿದ್ದ ಹೆಚ್.ಆರ್.ನಾಗೇಶ ರಾವ್ ಬರೆದ ಲೇಖನ.

ಪುಸ್ತಕ ವಿಮರ್ಶೆ[ಬದಲಾಯಿಸಿ]

'ಪುಸ್ತಕ ಪ್ರಿಯ' ಹೆಸರಿನಲ್ಲಿ 'ತಾಯಿನಾಡು', 'ಚಿತ್ರಗುಪ್ತ' ವಾರಪತ್ರಿಕೆ ಹಾಗೂ 'ಸಂಯುಕ್ತ ಕರ್ನಾಟಕ'ದಲ್ಲಿ ಗ್ರಂಥ ವಿಮರ್ಶೆ.

ಪುಸ್ತಕ ಪ್ರಕಾಶನ[ಬದಲಾಯಿಸಿ]

ಪಾಕೆಟ್ ಬುಕ್‌ಗಳು ಜನಪ್ರಿಯವಾಗುತ್ತಿದ್ದ ಸಮಯದಲ್ಲಿ ಆರಂಭಿಸಿದ ಚಾತಕ ಪ್ರಕಾಶನದ ಮೂಲಕ ನಾಗೇಶರಾಯರು ಆರು ವರ್ಷಗಳ ಕಾಲ (1955-61) ಒಂಬತ್ತು ಸ್ವರಚಿತ ಕೃತಿಗಳನ್ನು ಪ್ರಕಟಿಸಿದ್ದರು. ಪತ್ತೇದಾರಿ ಕಾದಂಬರಿಗಳನ್ನು `ಮಧುಕರ', ಅದೃಷ್ಟ ಪುಸ್ತಕವನ್ನು `ಲಿಬ್ರಾ' ಮತ್ತು ಸಾಮಾಜಿಕ ನಾಟಕವನ್ನು `ಸೀತಾಪತಿ' ಎಂಬ ಹೆಸರಿನಲ್ಲಿ ಬರೆದಿದ್ದರು. ಮೊದಲ ಪುಸ್ತಕ `ನಗೆ-ನಾಣ್ಯ'ಕ್ಕೆ ರಕ್ಷಾಪುಟ ಮತ್ತು ಒಳಗಿನ ವ್ಯಂಗ್ಯಚಿತ್ರಗಳನ್ನು ಅವರೇ ರಚಿಸಿದ್ದರು. `ಅದೃಷ್ಟ ಚಕ್ರ'ಕ್ಕೆ ಕಲಾವಿದರೊಬ್ಬರು ಬಿಡಿಸಿದ್ದ ರಕ್ಷಾಚಿತ್ರದ ಹಿನ್ನೆಲೆಯಲ್ಲಿ `ಭಯ ಪಿಶಾಚಿ'ಗೂ ತಮ್ಮದೇ ರಕ್ಷಾಪುಟವನ್ನು ರೂಪಿಸಿದ್ದರು. ಕೊನೆಯ ಪುಸ್ತಕ `ಕಂಕಣದ ಸಂಕಲ್ಪ'ದ ರಕ್ಷಾಪುಟವನ್ನು ಅವರು ರಚಿಸಿದ್ದ ಚಿತ್ರ ಅಲಂಕರಿಸಿತ್ತು. ಆರಂಭದ ದಿನಗಳಲ್ಲಿ ತಮ್ಮ ಪ್ರಕಟನೆಗಳ ಬಗ್ಗೆ ಪತ್ರಿಕೆಗಳಲ್ಲಿ ಜಾಹೀರಾತುಗಳನ್ನೂ ನೀಡಿದ್ದರು. ನಾಗೇಶರಾಯರ ಪುಸ್ತಕಗಳ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟವಾದ ಆಯ್ದ ವಿಮರ್ಶೆಗಳೊಂದಿಗೆ ಸಾಹಿತಿ `ನಿರಂಜನ'ರ ಪತ್ರವನ್ನು ಇಲ್ಲಿ ನೀಡಲಾಗಿದೆ. ಒಟ್ಟಾರೆಯಾಗಿ ಪ್ರಕಾಶನ ಸಂಸ್ಥೆ `ಕೈ ಸುಟ್ಟುಕೊಳ್ಳುವ ಪ್ರಯತ್ನ'ವಾಗಿದ್ದರೂ ಅಂದಿನ ದಿನಗಳಲ್ಲೇ ಪತ್ತೇದಾರಿ ಕಾದಂಬರಿಗಳ ಸಾವಿರಗಟ್ಟಲೆ ಪ್ರತಿಗಳು ಖರ್ಚಾಗಿದ್ದವು. ಇದೇ ಪ್ರಕಾಶನದಡಿಯಲ್ಲಿ `ತಾಯಿನಾಡು'ವಿನಲ್ಲಿ ಸಹೋದ್ಯೋಗಿ ಮತ್ತು ಆತ್ಮೀಯ ಗೆಳೆಯರಾಗಿದ್ದ ಎಂ.ಎಸ್.ರಾಮಸ್ವಾಮಿ ಅಯ್ಯಂಗಾರ್ ಮತ್ತು ಎಸ್.ಆರ್.ಕೃಷ್ಣಮೂರ್ತಿಯವರೊಂದಿಗೆ ಇಂಗ್ಲಿಷ್-ಹಿಂದಿ-ಕನ್ನಡ `ಅನುವಾದ ಸೇವೆ'ಯನ್ನೂ ಕೆಲ ಕಾಲ ನಾಗೇಶರಾಯರು ನಡೆಸಿದ್ದರು. ಪತ್ತೇದಾರಿ ಕಾದಂಬರಿಯಲ್ಲಿರಬೇಕಾದ ಕುತೂಹಲಕಾರಿ, ರೋಮಾಂಚನಕಾರಿ ಸನ್ನಿವೇಶಗಳು ಇದರಲ್ಲಿ (`ಸೂತ್ರಧಾರಿ') ಸಾಕಷ್ಟು ಇವೆ. ಕಥನ ಶೈಲಿಯೂ ಸ್ರಳವೂ ಮನಸೆಳೆಯುವಂತಹದೂ ಆಗಿದೆ. ಆದರೆ ಕೆಲವು ಸನ್ನಿವೇಶಗಳು ಅಸಂಭವವೆನಿಸುವಂತಿವೆ.

- ಮ.ಗೋಪಾಲಕೃಷ್ಣ (ಎಂ.ಗೋಪಾಲಕೃಷ್ಣರಾವ್, ಸಂಪಾದಕರು) `ಸಾಹಿತ್ಯ ಪರಿಶೀಲನ' ಅಂಕಣ, `ಕಲಿಯುಗ' ಜನವರಿ, 1956

ಜ್ಯೋತಿಷ್ಯದಲ್ಲಿ, ಅದೃಷ್ಟ ಶಕುನಗಳಲ್ಲಿ, ನಂಬಿಕೆಯಿಲ್ಲದವರಿಗೆ ನಂಬಿಕೆ ಹುಟ್ಟಿಸ ಬಯಸುವ, ನಂಬುವವರಿಗೆ ಅನುಸರಿಸಿ ಅದೃಷ್ಟ ಹೆಚ್ಚಿಸಿಕೊಳ್ಳಲೊಂದು ಆಶಿಸುವ, ಲೇಖನಗಳು, ಶಕುನಗಳ ಫಲಾಫಲ, ರಾಶಿ ಭವಿಷ್ಯದ ಅದೃಷ್ಟದ ತಾರೀಖುಗಳು, ಅದೃಷ್ಟ ಸಂಖ್ಯೆಗಳು, ವಿವಾಹ ಡೈರಿ, ಹಲ ಆಕರ್ಷಕ ಅಂಶಗಳುಳ್ಳ ಪುಟ್ಟ ಪ್ರಮಾಣದ ಪುಸ್ತಕವಿದೊಂದು (`ಅದೃಷ್ಟ ಚಕ್ರ'). ಎಲ್ಲರನ್ನೂ ಕೆಲ ನಿಮಿಷಗಳಾದರೂ ಆಕರ್ಷಿಸಬಲ್ಲ ಶಕ್ತಿ ಈ ಹೊತ್ತಿಗೆಯಲ್ಲಿದೆ.

- ಸೂರಿ (ಎಚ್.ಎಸ್.ಸೂರ್ಯನಾರಾಯಣ್) `ಪ್ರಚಲಿತ ಸಾಹಿತ್ಯ' ಅಂಕಣ, `ಪ್ರಜಾವಾಣಿ' 5-2-1956

‘ಮಧುಕರ’ ಹೆಸರಿನಲ್ಲಿ ನಾಗೇಶರಾವ್ ಬರೆದು ಪ್ರಕಟಿಸಿದ ಪಾಕೆಟ್ ಪತ್ತೇದಾರಿ ಕಾದಂಬರಿಗಳು

THIS amateurist attempt at detective fiction presents Shyam, the police detective and Meena Kumari, his wife, who helps him occassionally in his work. An actress is found murdered in her bed and the chief suspect is a handsome young fan of hers. The discovery of the criminal is largely accidental depending on Meena Kumari's mistaking him for the youthful fan who is the thief suspect. There is less interest in the detection than in the description of the fan's infatuation. One is thankful to the writer from keeping the book free from the kind of vulgarity that is so often met with the books of this kind.

-K.N. (K. Narasimha Murthy) 'BOOKS REVIEWED' Column 'DECCAN HERALD' 13-10-1956

ದಾಮೋದರನೆಂಬ ಸ್ವಾರ್ಥಿಯೊಬ್ಬನು ಮಧುಸೂದನನೆಂಬ ಪ್ರಾಮಾಣಿಕ ಉದ್ಯಮಿಯನ್ನು ವಂಚಿಸಲು ಬಹುದೊಡ್ಡ ತಂತ್ರವನ್ನು ಹೂಡಿದರೂ ಪತ್ತೆದಾರ ಶ್ಯಾಮನು ಅದನ್ನು ವಿಫಲಗೊಳಿಸಿಬಿಡುವನು. ಈ ವಸ್ತುವನ್ನು ಆಧರಿಸಿ ಸುಂದರ ಶೈಲಿಯಲ್ಲಿ ಕುತೂಹಲವನ್ನು ಕೆರಳಿಸುತ್ತಾ ಸಾಗುವ ಈ ಕಾದಂಬರಿ (`ಹಿತಶತ್ರು') ವಾಚನೀಯವಾಗಿದೆ.

- ಬನ್ನಂಜೆ (ಬನ್ನಂಜೆ ಗೋವಿಂದಾಚಾರ್ಯ) `ಪುಸ್ತಕ ವಿಹಾರ' ಅಂಕಣ, `ಪ್ರಕಾಶಿನೀ' ಫೆಬ್ರವರಿ 1957

MADHUKARA'S detective tales bristle with sensational events and offer at least clean entertainment. His Holmes is a C.I.D. Inspector, Syam and this hero is first introduced in `Soothradhari'. The procedure followed is not so much rationalisation as violent intervention. There is no attempt at developing a convincing plot. The incidents are mostly fantastic and the detective and his wife, though at times in the worst predicament, manage finally to escape and bring the criminals to book. Our taste for romance never dies and the modern age seems to stomach old-fashioned romance only in the guise of detective fiction. In `Soothradhari' a respectable and wealthy man is found to be the brain behind a big gang of jewel lifters. `Bhaya pishachi' and `Hitha Shathru' deal with shady operations in the business world and murders committed to cover such activities. Madhukara can be depended on - though it is about the only thing he can be depended on - to hold the reader's attention to the end.

-'DECCAN HERALD' 10-3-1957

ಪತ್ರಕರ್ತ ವೈಯೆನ್ಕೆ ನಾಗೇಶರಾವ್ ಎಂದೊಡನೆ ನೆನಪಿಸಿಕೊಳ್ಳುತ್ತಿದ್ದದ್ದು ‘ನಗೆ ಬಾಂಬ್’

ನಿರಂಜನ

  • ಗೋಕುಲ ವಿಸ್ತರಣ
  • ವಾಣೀವಿಲಾಸ ಮೊಹಲ್ಲಾ
  • ಮೈಸೂರು

೨೯ - ೩ - ೫೭

ಆತ್ಮೀಯ ನಾಗೇಶರಾವ್,

`ನಗೆ ಬಾಂಬು' ನಮ್ಮ ಮೇಲೂ ಬಿದ್ದುದಾಯಿತು. ಇಬ್ಬರೂ ಓದಿ ಸಂತೋಷಪಟ್ಟೆವು. ಹೊಗಳಿಕೆಯ ನುಡಿ ಬರೆಯಲು ಸಂಕೋಚವೆನಿಸುತ್ತದೆ. ಇಂಥ ಬರವಣಿಗೆಯ ಸಾಮರ್ಥ್ಯ ವಿಶಿಷ್ಟವಾದದ್ದು, ಅಪೂರ್ವವಾದದ್ದು. ಗೌರೀಶಂಕರದ ಆರೋಹಣ ನಿಮಗೆ ಖಂಡಿತ ಕಷ್ಟದ್ದಲ್ಲ, ಆ ದಿನ ದೂರವೂ ಇಲ್ಲ.

ಶ್ರೀರಂಗರೊಡನೆ ನಿಮ್ಮ `ಹುಚ್ಚ ಶಿಕ್ಷಣ'ದ ವಿಷಯ ಒಮ್ಮೆ ಪ್ರಸ್ತಾಪಿಸಿದ್ದೆ. ಅವರಿಗೊಂದು ಪ್ರತಿ ಕಳುಹಿಸಿಕೊಡಿ. ಅವರು ಓದಿ ತಲೆದೂಗುವುದರಲ್ಲಿ ಸಂದೇಹವಿಲ್ಲ.

[ಆಗಸ್ಟ್ ೧ರಿಂದ ಸುಮಾರು ೨೫ರ ವರೆಗೆ ಅವರು ಬೆಂಗಳೂರಿನಲ್ಲಿರುವುದಿಲ್ಲ. ಸಾಧ್ಯವಾದರೆ ಆಗಸ್ಟ್ ೧ರಂದು ನಾಲ್ಕು ಗಂಟೆಯೊಳಗಾಗಿ ಶ್ರೀರಂಗರಿಗೆಂದು ಒಂದು ಪ್ರತಿಯನ್ನು `ಚಿತ್ರಗುಪ್ತ'ದಲ್ಲಿರಿಸಿ. ನಾನೇ ಒಯ್ದು ತಲುಪಿಸುತ್ತೇನೆ. ನನ್ನ ಪ್ರತಿಯನ್ನೇ ಅವರಿಗೆ ಕೊಡಬಹುದಿತ್ತು. ಆದರೆ ಕೊಡಲು ಇಷ್ಟವಿಲ್ಲ! ೧ರಂದು ರಾತ್ರೆ ನಾವಿಬ್ಬರೂ ದಿಲ್ಲಿಗೆ ಪ್ರಯಾಣ ಬೆಳೆಸುತ್ತೇವೆ. ಹೆದರಬೇಡಿ! ಯಾರಿಗೂ ಅಪಾಯವಿಲ್ಲ!]

`ಚಿತ್ರಗುಪ್ತ'ದಲ್ಲಿ `ನ-ಬಾ' ವಿಷಯ ಬರೆಯುವೆ - ಬೇಗನೆ?

ಎಂದು ಒಲವಿನೊಂದಿಗೆ

ನಿರಂಜನ

`ಚಿತ್ರಗುಪ್ತ'ದ ವಾಚಕರಿಗೆ `ಎನ್‍ಎ' ಎಂಬ ಹೆಸರು ಸುಪರಿಚಿತವಾದುದು. ಆ `ಎನ್‍ಎ'ಯವರೇ ಹೆಚ್.ಆರ್.ನಾಗೇಶರಾವ್. ಅವರ ಬರಹಗಳಲ್ಲಿ ನಾವು ಕಾಣುವುದು ಶುದ್ಧವಾದ ಲಘುಹಾಸ್ಯ. ಅದರೊಂದಿಗೆ ವಾಸ್ತವತೆಯ ವಿಡಂಬನೆಯನ್ನು ನೋಡಬಹುದು. ಆ ಹಾಸ್ಯದ ಹಿಂದೆ ಸತ್ಯದ ಚಿತ್ರಣವೂ ಇರಬಹುದು. `ರೆಡ್ ಟೇಪಿಸಂ ಗೆಲ್ಗೆ', `ಮುಂದಿನ ನೆಹ್ರೂ ನಾನೇ', `ಅಖಿಲ ಭಾರತ ಅಳಿಯಂದಿರ ಸಮ್ಮೇಳನ' ಇವುಗಳನ್ನು ತಕ್ಷಣವೇ ಇಲ್ಲಿ ಹೆಸರಿಸಬಹುದು. ಪುಟ್ಟ ಪುಸ್ತಕದ ಹೆಸರು `ನಗೆ-ಬಾಂಬು' ಎಂದಿದ್ದರೂ ಇಲ್ಲಿರುವುದು ಹುಚ್ಚು `ನಗೆ-ಬಾಂಬು' ಅಲ್ಲ. ಲೇಖನಗಳಿಗೊಂದು ಗಾಂಭೀರ್‍ಯವಿದೆ. ಕೆಲವು ಬಲು ಕ್ರೂರವಾದವು. ಅಂಥವಕ್ಕೆ `ನೀವೆಂಥ ಗಾಂಧಿ ಭಕ್ತರು?' ಎಂದು ನೋಡಬೇಕು. `ನಿಮ್ಮ ಹೆಂಡತಿಯೊಡನೆ ಜಗಳ ಆಡಿ!' ಒಂದು ಉತ್ತಮ ಲಘು ಹಾಸ್ಯದ ಬರಹ.

ಗಾಳಿ ಬಿಟ್ಟರೆ ತೂರಿಕೊಂಡು ಹೋಗುವಂತೆ ಲಘುವಾಗಿರುವ `ಎನ್‍ಎ' ತಾವೊಬ್ಬ ಉತ್ತಮ ಲಘು ಲೇಖಕರೆಂಬುದನ್ನೂ ಎಂದೋ ತೋರಿಸಿ ಕೊಟ್ಟಿದ್ದಾರೆ. ಅವರಿಂದ ನಮ್ಮ ಲಘು ಸಾಹಿತ್ಯಕ್ಕೆ ಇನ್ನು ಹೆಚ್ಚಿನ ಹಾಗೂ ಉತ್ತಮ ಮಟ್ಟದ ಸೇವೆ ಸಲ್ಲಬೇಕಾಗಿದೆ. ತಮ್ಮ ಪಾಲಿನ ಈ ಕಾರ್‍ಯವನ್ನು ಅವರು ಪೂರೈಸುತ್ತಾರೆಂದೂ ನಾವು ನಂಬಿದ್ದೇವೆ.

- ಎಂ.ಎಸ್.ಭಾರದ್ವಾಜ್ `ಪುಸ್ತಕ ಪ್ರಪಂಚ' ಅಂಕಣ, `ಚಿತ್ರಗುಪ್ತ'14-4-1957

ಆಕಾಶವಾಣಿಯ ಸ್ಫರ್ಧೆಯಲ್ಲಿ ಬಹುಮಾನ ಪಡೆದ ನಾಟಕ

ಹೊಸ ಹೊಸ ಹಕ್ಕು, ಕಾಯಿದೆಗಳಿಂದ ಭಾರತೀಯ ನಾರಿಯರಿಗೆ ದೊರೆತ ಸೌಕರ್ಯ, ಸೌಲಭ್ಯಗಳನ್ನು ಇಂದಿನ ಯುಗಧರ್ಮಾನುಸಾರ ನಡೆದಿರುವ ಮಹಿಳಾ ಪ್ರಗತಿಯ ಸ್ವರೂಪವನ್ನು ವಿನೋದಾತ್ಮಕವಾಗಿ ನಿರೂಪಿಸುವ ಕೃತಿ (`ನಾರೀಲೋಕದಲ್ಲಿ ನಾರದರು').

- ಎಂ.ಜಿ.ಪಾಲ್ (ಎಂ.ಗೋಪಾಲಕಣ್ಣನ್) `ನವ ಪ್ರಕಾಶನ' ಅಂಕಣ, `ಪ್ರಜಾವಾಣಿ' 26-10-1959

`ಬಾಲ ವಿವಾಹ'ದ ಹಳೆಯ ಪ್ರಶ್ನೆಯನ್ನು ಆಧಾರವಾಗಿಟ್ಟು, ಅದರಿಂದಾಗುವ ಹಾನಿಗಳನ್ನು ಸಮಾಜಕ್ಕೆ ತಿಳಿಸುವ ವಸ್ತು `ಕಂಕಣದ ಸಂಕಲ್ಪ'ದಲ್ಲಿ ಕಾಣುತ್ತದೆ. ಇದು `ಸಾಮಾಜಿಕ ನಾಟಕ'ವೆಂದು ಕರೆಯಲ್ಪಡಬಹುದಾದರೂ ಅಭಿನಯಕ್ಕೆ ನಿಲುಕುವುದು ಸಾಧ್ಯವಿಲ್ಲ. ಕೇವಲ ಶ್ರವಣೇಂದ್ರಿಯಕ್ಕೆ ಮಾತ್ರ ಹಿಡಿಸುವಂತಹುದು. `ನಾರಿಲೋಕದಲ್ಲಿ ನಾರದರು' ಎಂಬ ನಾಟಕದಲ್ಲಿ ಲೇಖಕರು ತೋರಿದ ಪಟುತ್ವ, ಚುಚ್ಚು ಮಾತುಗಳು ಇಲ್ಲಿ ಇಲ್ಲದೆ ನಮ್ಮನ್ನು ನಿರಾಶೆಗೊಳಿಸುತ್ತವೆ. ಅಲ್ಲಲ್ಲಿ ಕಾದಂಬರಿಯ, ಕಥೆಯ ಓಟವೂ ಸೇರಿಕೊಂಡಂತೆ ಭಾಸವಾಗುವುದರಿಂದ `ಇದು ನಾಟಕವೆ?' ಎಂಬ ಪ್ರಶ್ನೆ ನಮ್ಮಲ್ಲೇಳುವುದು. ಒಟ್ಟಿನಲ್ಲಿ, ವಸ್ತುವಿನ ದೃಷ್ಟಿಯಿಂದ ಸ್ವೀಕಾರಾರ್ಹ ಹೊತ್ತಗೆಯಿದು.

- ಗೋರಾ `ಪುಸ್ತಕ ವಿಮರ್ಶೆ' ಅಂಕಣ, `ನವಯುಗ' 22-6-1961

ಪತ್ರಕರ್ತರ ಸಂಘಟನೆ[ಬದಲಾಯಿಸಿ]

ಪ್ರಶಸ್ತಿ[ಬದಲಾಯಿಸಿ]

ಅಕ್ಯಾಡೆಮಿ ವತಿಯಿಂದ ಸನ್ಮಾನ ಮಾಡುತ್ತಿರುವವರು ಪತ್ರಕರ್ತ ಗರುಡನಗಿರಿ ನಾಗರಾಜ ಹಾಗೂ ಸಚಿವ ಬಿ.ಆರ್.ಪಾಟೀಲ್

ಬಾಹ್ಯ ಕೊಂಡಿಗಳು[ಬದಲಾಯಿಸಿ]

  • [೧][ಶಾಶ್ವತವಾಗಿ ಮಡಿದ ಕೊಂಡಿ]
  • [೨][ಶಾಶ್ವತವಾಗಿ ಮಡಿದ ಕೊಂಡಿ]