ಹರಿಪ್ರಸಾದ್ ಚೌರಾಸಿಯಾ
Wikipedia ಇಂದ
| ಹರಿಪ್ರಸಾದ ಚೌರಾಸಿಯಾ | |
|---|---|
ಹರಿಪ್ರಸಾದ್ ಚೌರಾಸಿಯಾ
|
|
| ಹಿನ್ನೆಲೆ ಮಾಹಿತಿ | |
| ಹುಟ್ಟು | ಜುಲೈ ೧, ೧೯೩೮ |
| ಮೂಲ | ಅಲಹಾಬಾದ್, ಭಾರತ |
| ಸಂಗೀತದ ಪ್ರಕಾರ | ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ |
| ಉದ್ಯೋಗ | ಸಂಗೀತ ನಿರ್ದೇಶಕ, ಕೊಳಲು ವಾದಕ |
| ವಾದ್ಯ(ಗಳು) | ಕೊಳಲು |
| Website | www.hariprasadchaurasia.com |
| ಪ್ರಮುಖ ವಾದ್ಯ(ಗಳು) | |
| ಕೊಳಲು (ಬಾನ್ಸುರಿ) | |
ಪಂಡಿತ ಹರಿಪ್ರಸಾದ್ ಚೌರಾಸಿಯಾ(ಜನನ: ಜುಲೈ ೧, ೧೯೩೮, ಅಲಹಾಬಾದ್) ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ಪದ್ಢತಿಯ ಅಂತರ್ರಾಷ್ಟ್ರೀಯ ಖ್ಯಾತಿಯ ಬ್ಞಾಸುರಿ (ಕೊಳಲಿನ ಒಂದು ಪ್ರಕಾರ) ವಾದಕ. ಚೌರಸಿಯಾರವರು ಶಾಸ್ತ್ರೀಯ ಸಂಗೀತಗಾರರಾದರೂ ತಮ್ಮ ವಿಶಿಷ್ಟ ವಾದನ ಶೈಲಿಯಿಂದ ಬೇರೆ ಜನರನ್ನೂ ಮತ್ತು ವಿದೇಶಿಯರನ್ನೂ ಶಾಸ್ತ್ರೀಯ ಸಂಗಿತದೆಡೆಗೆ ಸೆಳೆದಿದ್ದಾರೆ.
ಪರಿವಿಡಿ |
[ಬದಲಾಯಿಸಿ] ಹಿನ್ನೆಲೆ
ಹರಿಪ್ರಸಾದ್ ಚೌರಾಸಿಯಾರ ಜನನವಾದದ್ದು ಕುಸ್ತಿ ಪೈಲವಾನರ ಮನೆತನದಲ್ಲಿ.ಇವರ ತಂದೆ ಕುಸ್ತಿಪಟುವಾಗಿದ್ದರು. ಚಿಕ್ಕಂದಿನಲ್ಲಿಯೇ ಇವರ ತಾಯಿ ಇವರನ್ನು ಬಿಟ್ಟಗಲಿದರು. ಇವರ ತಂದೆಗೆ ಹರಿಪ್ರಸಾದರು ತಮ್ಮಂತೆಯೆ ಕುಸ್ತಿಪಟುವಾಗಬೇಕೆಂಬ ಆಸೆ, ಆದರೆ ಇವರಿಗೆ ಸಂಗೀತ ಕಲಿಯುವ ಆಸೆ, ಹಾಗಾಗಿ ಗೌಪ್ಯವಾಗಿ ಸಂಗೀತ ಕಲಿಯಲು ಪ್ರಾರಂಭಿಸಿದರು. ಸಂಗೀತವನ್ನೂ ಕಲಿಯುತ್ತಿದ್ದರೂ ಪ್ರತಿದಿನವೂ ಗರಡಿ ಮನೆಗೆ ಹೋಗಿ ಕುಸ್ತಿ ಪಟ್ಟುಗಳನ್ನು ಅಭ್ಯಾಸ ಮಾಡುತ್ತಿದ್ದರು, ನಂತರ ಗೌಪ್ಯವಾಗಿ ಸಂಗೀತ ಕಲಿಕೆ ಮತ್ತು ಗೆಳೆಯನ ಮನೆಯಲ್ಲಿ ಸಂಗೀತದ ತಾಲೀಮು. ತಾವೇನೂ ಒಳ್ಳೆಯ ಕುಸ್ತಿಪಟುವಾಗಿದ್ದಿಲ್ಲ, ತಂದೆಯ ಖುಷಿಗೆ ಗರಡಿಗೆ ಹೋಗುತ್ತಿದ್ದೆ, ಆದರೆ ಆವಾಗ ಮಾಡಿದ ತಾಲೀಮಿನಿಂದಾಗಿ ಬಂದ ದೇಹಧಾರ್ಡ್ಯತೆ ಮತ್ತು ಶ್ವಾಸಕೋಸ ಬಲ ಇವತ್ತಿಗೂ ಬಹಳ ಹೊತ್ತಿನ ತನಕ ತಮಗೆ ಕೊಳಲು ಬಾರಿಸಲು ಸಹಾಯ ಮಾಡುತ್ತಿರುವದಾಗಿ ಚೌರಾಸಿಯರವರು ಹೇಳುತ್ತಾರೆ.
[ಬದಲಾಯಿಸಿ] ಶಿಕ್ಷಣ ಮತ್ತು ಮಾರ್ಗದರ್ಶನ
ಇವರು ತಮ್ಮ ೧೫ನೇಯ ವಯಸ್ಸಿನಲ್ಲಿ ತಮ್ಮ ನೆರೆಯಲ್ಲಿದ್ದ ಪಂ.ರಾಜಾರಾಮರ ಬಳಿ ಗಾಯನವನ್ನು ಕಲಿಯಲು ಪ್ರಾರಂಭಿಸಿದರು. ನಂತರ ವಾರಣಾಸಿಯ ಪಂ.ಭೋಲಾನಾಥರ ಬಳಿ ಕೊಳಲು ವಾದನವನ್ನು ಕಲಿಯಲು ಪ್ರಾರಂಭಿಸಿದರು. ಬಹಳ ವರ್ಷಗಳ ನಂತರ ಆಕಾಶವಾಣಿಯಲ್ಲಿ ಕೆಲಸ ಮಾಡುತ್ತಿದ್ದಾಗ ಅನ್ನಪೂರ್ಣಾ ದೇವಿ(ಬಾಬಾ ಅಲ್ಲಾವುದ್ದೀನ್ ಖಾನರ ಮಗಳು)ಯವರ ಬಳಿ ಹೆಚ್ಚಿನ ಮಾರ್ಗದರ್ಶನವನ್ನು ಪಡೆದರು.
ಹರಿಪ್ರಸಾದರು ತಮ್ಮ ೧೯ನೇಯ ವಯಸ್ಸಿನಲ್ಲಿ ಒರಿಸ್ಸಾದ ಕಟಕ್ ಆಕಾಶವಾಣಿಯಲ್ಲಿ ಕೊಳಲು ವಾದಕರಾಗಿ ಸೇರಿಕೊಂಡರು, ೫ ವರ್ಷಗಳ ನಂತರ ಇವರಿಗೆ ಮುಂಬಯಿ ಆಕಾಶವಾಣಿಗೆ ವರ್ಗವಾಯಿತು. ಭಾರತದ ಒಂದು ಒಳ್ಳೆಯ ಕಲಾನಗರಿಯೂ ಆಗಿರುವ ಮುಂಬಯಿಯಲ್ಲಿ ತಮ್ಮ ಕೊಳಲು ವಾದನದ ಪ್ರದರ್ಶನದ ಜೊತೆಗೆ ಅನ್ನಪೂರ್ಣಾದೇವಿಯವರ ಮಾರ್ಗದರ್ಶನವೂ ಸೇರಿ ಇವರಿಗೆ ಸಂಗೀತದ ಇನ್ನೊಂದು ಜಗತ್ತಿನ ಅನಾವರಣವಾಯಿತು.
[ಬದಲಾಯಿಸಿ] ಸಂಗೀತ ಶೈಲಿ
ಇಲ್ಲಿಯೇ ಇವರು ಸಂಪ್ರದಾಯದ ಅಡಿಪಾಯದ ಮೇಲೆ ತಮ್ಮ ಕಲ್ಪನೆಯನ್ನೂ ಸೇರಿಸಿ ತಮ್ಮದೇ ಆದ ಹೊಸ ಶೈಲಿಯನ್ನು ಪ್ರಾರಂಭಿಸಿದರು ಮತ್ತು ತಮ್ಮ ಸಂಗೀತ ಪ್ರತಿಭೆಯ ಉಚ್ಛ್ರಾಯ ಸ್ಥಿತಿಯನ್ನು ತಲುಪಿದರು. ಇವರು ತಮ್ಮ ಕೊಳಲು ವಾದನ ಶೈಲಿಯಲ್ಲಿ ಧ್ರುಪದ್ ಶೈಲಿಯ ಅಂಶಗಳನ್ನೂ ಅಳವಡಿಸಿಕೊಂಡಿದ್ದಾರೆ, ಆದ್ದರಿಂದ ಇವರ ಅಲಾಪ್ ದೀರ್ಘ, ಗಂಭೀರ ಮತ್ತು ತನ್ನದೇ ಆದ ಒಂದು ವಿಶಿಷ್ಟ ರೀತಿಯಲ್ಲಿ ಮೂಡಿಬರುತ್ತದೆ. ಜೀವಮಾನದಾದ್ಯಂತ ಜಗತ್ತಿನೆಲ್ಲೆಡೆಗೂ ತಮ್ಮ ಸಂಗೀತ ಕಚೇರಿಗಳನ್ನು ನಡೆಸಿರುವ ಇವರು ಭಾರತದ ಅಗ್ರಗಣ್ಯ ಶಾಸ್ತ್ರೀಯ ಸಂಗೀತಗಾರರಾಗಿದ್ದಾರೆ.ಇವರಿಗೆ ೨೦೦೦ ದಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಯಿತು.
[ಬದಲಾಯಿಸಿ] ಚಲನಚಿತ್ರ ಸಂಗೀತ
ಇವರು ಕೇವಲ ಸಾಂಪ್ರದಾಯಿಕ ಹಿಂದುಸ್ತಾನಿ ಸಂಗೀತಗಾರ ಮಾತ್ರವಲ್ಲದೇ ಹಿಂದಿ ಚಲನಚಿತ್ರರಂಗಕ್ಕೆ ಸಂಗೀತ ನಿರ್ದೇಶನವನ್ನು ಕೂಡ ಮಾಡಿದ್ದಾರೆ. ಪಂಡಿತ್ ಶಿವಕುಮಾರ್ ಶರ್ಮಾರ ಜೊತೆಗೆ ಸೇರಿ ಇವರು ಶಿವ-ಹರಿ ಎಂದು ಹಿಂದಿ ಚಲನಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಇವರ ಸಂಗೀತ ನಿರ್ದೇಶನದ ಕೆಲವು ಚಿತ್ರಗಳೆಂದರೆ: ಲಮ್ಹೆ, ಚಾಂದನಿ, ಸಿಲ್ಸಿಲಾ, ಡರ್, ಫಾಸಲೇ.
[ಬದಲಾಯಿಸಿ] ಜುಗಲ್ ಬಂದಿ ಮತ್ತು ಸಂಗೀತ ಸಹಯೋಗ
ಹರಿಪ್ರಸಾದರ ಕೊಳಲು ಮತ್ತು ಪಂಡಿತ್ ಶಿವಕುಮಾರ್ ಶರ್ಮಾರ ಸಂತೂರ್ನ ದ್ವಂದ್ವ ವಾದನವು ಸಂಗೀತ ರಸಿಕರ ಮನಸೂರೆಗೊಂಡಿದೆ. ಇವರಿರ್ವರ ಜೋಡಿಯು ಅನೇಕ ಸಂಗೀತ ಕಛೇರಿಗಳನ್ನು ನೀಡಿದ್ದಲ್ಲದೇ ಅನೇಕ ಢ್ವನಿಮುದ್ರಿಕೆಗಳನ್ನು ಕೂಡ ಹೊರತಂದಿದೆ.
--ಬಾಹ್ಯ ಸಂಪರ್ಕಗಳು--
- Official website
- Interview
- Hariprasad Chaurasia by Mohan Nadkarni