ಸೂರಿ ವೆಂಕಟರಮಣ ಶಾಸ್ತ್ರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸೂರಿ ವೆಂಕಟರಮಣ ಶಾಸ್ತ್ರಿಗಳು ೧೮೫೫ರಲ್ಲಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿರುವ ಕರ್ಕಿ ಎನ್ನುವ ಗ್ರಾಮದಲ್ಲಿ ಜನಿಸಿದರು. ಇವರ ತಂದೆ ವಿಘ್ನೇಶ್ವರ ಶಾಸ್ತ್ರಿಗಳು.


ಶಿಕ್ಷಣ[ಬದಲಾಯಿಸಿ]

ಸೂರಿಯವರು ಕರ್ಕಿಯಲ್ಲಿಯೆ ತಮ್ಮ ಪ್ರಾಥಮಿಕ ಶಿಕ್ಷಣ ಪೂರೈಸಿದರು. ತಂದೆಯಿಂದ ಸಂಸ್ಕೃತ ಭಾಷೆ ಹಾಗು ವೈದಿಕ ವಿದ್ಯೆ ಕಲಿತ ನಂತರ , ತಮ್ಮ ಗುರುಪೀಠವಾದ ಸಾಗರ ತಾಲೂಕಿನ ರಾಮಚಂದ್ರಾಪುರ ಮಠದಲ್ಲಿ ಕಾವ್ಯ, ವ್ಯಾಕರಣ, ಅಲಂಕಾರ ಹಾಗೂ ವೇದಾಂತಗಳನ್ನು ಅಭ್ಯಸಿಸಿದರು.


ನೌಕರಿ[ಬದಲಾಯಿಸಿ]

ಶಿಕ್ಷಣದ ನಂತರ ರಾಮಚಂದ್ರಾಪುರ ಮಠದಲ್ಲಿಯೆ ಪಾರುಪತ್ಯಗಾರರಾಗಿ ಸೂರಿಯವರು ಕೆಲಸ ಮಾಡಿದರು. ಆಬಳಿಕ ಇಂಗ್ಲಿಷ್ ಅಭ್ಯಾಸ ಮಾಡಿ, ಮೈಸೂರು ಸಂಸ್ಥಾನದಲ್ಲಿ ಫೌಜದಾರರಾಗಿ ಕೆಲಸ ಮಾಡಿದರು ಎಂದು ಹೇಳಲಾಗುತ್ತಿದೆ.


ಪತ್ರಿಕೋದ್ಯಮ[ಬದಲಾಯಿಸಿ]

ಈ ನೌಕರಿಗಳಲ್ಲಿ ಆತ್ಮತೃಪ್ತಿಯಿಲ್ಲದ ಸೂರಿ ವೆಂಕಟರಮಣ ಶಾಸ್ತ್ರಿಗಳು ಮುಂಬಯಿಗೆ ತೆರಳಿ ‘ಕರ್ಕಿ ವೆಂಕಟರಮಣ ಶಾಸ್ತ್ರಿ ಎಂಡ್ ಕಂಪನಿ’ ಎನ್ನುವ ಸಂಸ್ಥೆಯನ್ನು ಸ್ಥಾಪಿಸಿ ೧೮೮೫ರಲ್ಲಿ “ ಹವ್ಯಕ ಸುಬೋಧ” ಎನ್ನುವ ರಾಷ್ಟ್ರೀಯ ಧೋರಣೆಯ ವಾರಪತ್ರಿಕೆ ಪ್ರಾರಂಭಿಸಿದರು. ೧೮೮೮ರಲ್ಲಿ ಕನ್ನಡ ಹುಡುಗರಿಗಾಗಿ “ ಹಿತೋಪದೇಶ” ಎನ್ನುವ ಮಾಸಪತ್ರಿಕೆಯನ್ನು ಆರಂಬಿಸಿದರು. ಈ ಪತ್ರಿಕೆಯಲ್ಲಿ ಶಾಸ್ತ್ರಿಗಳು ವ್ಯಂಗ್ಯ ಚಿತ್ರಗಳನ್ನು ಉಪಯೋಗಿಸಿದ್ದು,ಇದು ಕನ್ನಡದಲ್ಲಿ ಬಹುಶಃ ವ್ಯಂಗ್ಯಚಿತ್ರಗಳ ಬಳಕೆ ಮಾಡಿದ ಮೊದಲ ಪತ್ರಿಕೆ ಎಂದು ಶ್ರೀನಿವಾಸ ಹಾವನೂರ ಅಭಿಪ್ರಾಯ ಪಡುತ್ತಾರೆ. ಮುಂದುವರಿದು, “..ಭಾರತೀಯರ ಸಮಸ್ಯೆಗಳು,ಬ್ರಿಟಿಷರ ಕುಟಿಲ ನೀತಿ ಹಾಗು ದಬ್ಬಾಳಿಕೆ, ಕೆನರಾ ಜಿಲ್ಲೆಯ ಸಂಕಷ್ಟಗಳು, ವಿಶೇಷತ: ಅಧಿಕಾರಿಗಳ ದುರ್ವರ್ತನೆ ಇವನ್ನು ನಿರೂಪಿಸುವಲ್ಲಿ ಅವನು ತನ್ನ ಲೇಖನಿಯನ್ನು ಖಡ್ಗಕ್ಕಿಂತಲೂ ಹರಿತವಾಗಿ ಮಸೆದನು…..ರಾಜಕೀಯ ಕಾರಣಕ್ಕಾಗಿ ಶಿಕ್ಷೆಗೊಳಗಾದ ಕನ್ನಡ ಲೇಖಕರಲ್ಲಿ ವೆಂಕಟರಮಣ ಶಾಸ್ತ್ರಿಯೇ ಮೊದಲಿಗನು…” ಎಂದು ಶ್ರೀನಿವಾಸ ಹಾವನೂರ ಹೇಳಿದ್ದಾರೆ.


ಸಾಹಿತ್ಯ[ಬದಲಾಯಿಸಿ]

ಪತ್ರಕರ್ತರಲ್ಲದೆ, ಸೂರಿ ವೆಂಕಟರಮಣ ಶಾಸ್ತ್ರಿಗಳು ಗ್ರಂಥಕರ್ತರಾಗಿಯೂ ಮಹತ್ವ ಪಡೆದಿದ್ದಾರೆ. ಅವರು ಬರೆದ ನಾಟಕ “ಇಗ್ಗಪ್ಪ ಹೆಗ್ಗಡೆಯ ವಿವಾಹ ಪ್ರಹಸನ೧೮೮೭ರಲ್ಲಿ ಪ್ರಕಟವಾಯಿತು. ಇದು ಬಹುಶಃ ಹೊಸಗನ್ನಡದ ಮೊದಲ ಸಾಮಾಜಿಕ ನಾಟಕವೆನ್ನಲಾಗಿದೆ.


ನಾಟಕ[ಬದಲಾಯಿಸಿ]

  • ಇಗ್ಗಪ್ಪ ಹೆಗ್ಗಡೆಯ ವಿವಾಹ ಪ್ರಹಸನ (೧೮೮೭)

ಪ್ರವಾಸ ಸಾಹಿತ್ಯ[ಬದಲಾಯಿಸಿ]

  • ದಕ್ಷಿಣ ಯಾತ್ರಾ ಚರಿತ್ರೆ (೧೮೮೫)

ಸಂಶೋಧನೆ[ಬದಲಾಯಿಸಿ]

  • ಹವೀಕ ದ್ರವಿಡ ಬ್ರಾಹ್ಮಣರ ಉತ್ಪತ್ತಿಯ ಇತಿಹಾಸವು (೧೮೮೮)
  • ಅನಾರ್ಯರ ವಿವರ (೧೮೮೯)

ಗ್ರಂಥ ಪರಿಷ್ಕರಣ[ಬದಲಾಯಿಸಿ]

  • ಕೃಷ್ಣ ಸಂಧಾನ ಮತ್ತು ಭೀಷ್ಮ ಪರ್ವ (೧೮೮೬)
  • ರತಿ ಕಲ್ಯಾಣ ಕೌಂಡಲಕ ವಧೆಯು (೧೮೮೬)
  • ಘಟೋದ್ಗಜನ ಕಾಳಗವು ( ೧೮೮೯)
  • ಬಿಲ್ಲ ಹಬ್ಬ ಅಥವಾ ಕಂಸ ವಧೆಯು

ಸಂಪಾದನೆ[ಬದಲಾಯಿಸಿ]

  • ಮಹಾಕವಿ ಪರಮದೇವಾಂಕ ವಿರಚಿತ “ತುರಂಗ ಭಾರತ”


ಸೂರಿ ವೆಂಕಟರಮಣ ಶಾಸ್ತ್ರಿಗಳು ೧೯೨೫ರಲ್ಲಿ ನಿಧನರಾದರು.