ಸೂರಪ್ಪ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜೆಸ್ವಿತ್ ಪತ್ರಗಳುದಾಖಲಿಸಿರುವ ಶೂರಪ್ಪ > ಸೂರಪ್ಪ > ಸವರಿಯಪ್ಪ ಎಂದು ಕರೆಯಲಾದ ಸೂರಪ್ಪನ ಬಗ್ಗೆ ಕ್ರಿಸ್ತಶಕ ೧೭೮೫ರಲ್ಲಿ ಫ್ರಾನ್ಸಿಸ್ಕನ್ ಸಭೆಯ ಸ್ವಾಮಿ ರಿಬಮಾರೋ ಅವರು ರೋಮಿನ ಕ್ರೈಸ್ತಧಾರ್ಮಿಕ ವರಿಷ್ಠರಿಗೆ ನೀಡಿದ ವರದಿಯಲ್ಲಿ ವಿಸ್ತೃತ ವಿವರವಿದೆ. ಆ ವರದಿಯ ಪ್ರಕಾರ ಸೂರಪ್ಪ ಎಂಬ ಕ್ರೈಸ್ತನು ಹೈದರನ ಸೇನೆ ಸೇರಿ ಉನ್ನತ ಸ್ಥಾನಕ್ಕೇರಿದ್ದ. ಅವನ ಕೈಕೆಳಗೆ ಕ್ರೈಸ್ತ ಸೈನಿಕರಿದ್ದರು. ಅವರ ನಿಯತ್ತಿನ ಕಾರಣದಿಂದ ರಾಜನ ಅಂಗರಕ್ಷಕ ಪಡೆಯು ಕ್ರೈಸ್ತರದೇ ಆಗಿತ್ತು.

ರಾಜನ ಅಂಗರಕ್ಷಕ[ಬದಲಾಯಿಸಿ]

  • ಟಿಪ್ಪುವಿನ ಕಾಲಕ್ಕೂ ಅದು ಮುಂದುವರಿದಿತ್ತಾದರೂ ಇಂಗ್ಲಿಷರೊಂದಿಗಿನ ಯುದ್ಧದ ನಂತರ ಟಿಪ್ಪು ಕ್ರೈಸ್ತರನ್ನು ದ್ವೇಷದಿಂದ ಕಾಣತೊಡಗಿದ. ಕ್ರೈಸ್ತರನ್ನು ತನ್ನ ಧರ್ಮಕ್ಕೆ ಪರಿವರ್ತನೆಗೊಳ್ಳುವಂತೆ ಹಾಗೂ ಕೋಟೆಯೊಳಗಿನ ಚರ್ಚನ್ನು ಕೆಡವುವಂತೆ ಅವನು ಬೆದರಿಸುತ್ತಾನಾದರೂ ಕ್ರೈಸ್ತರ ದೃಢಸಂಕಲ್ಪದೆದುರು ದನಿಯೆತ್ತದೆ ಸುಮ್ಮನಾಗುತ್ತಾನೆ.
  • ಬಿ.ಎಲ್.ರೈಸ್ ಅವರ ಗೆಜೆಟಿಯರ್ (೧೮೭೬) ನಲ್ಲೂ ಈ ಸಂಗತಿಯ ಪ್ರಸ್ತಾಪ ಹೀಗಿದೆ: "The Chapel, that in the fort of Srirangapattana was protected by the Native Christian troops under their commander Surappa" (ಶ್ರೀರಂಗಪಟ್ಟಣದ ಕೋಟೆಯೊಳಗಿನ ಕ್ರೈಸ್ತ ಪ್ರಾರ್ಥನಾಮಂದಿರವು ಸೂರಪ್ಪನ ನಾಯಕತ್ವದ ಸ್ಥಳೀಯ ಕ್ರೈಸ್ತ ಪಡೆಯ ಕಾವಲಿನಲ್ಲಿತ್ತು)
  • ಹಯವದನರಾಯರ ಗೆಜೆಟಿಯರ್ (೧೯೨೭)ನಲ್ಲೂ ಈ ಉಲ್ಲೇಖವನ್ನು ಪುರಸ್ಕರಿಸಲಾಗಿದೆ. ೧೯೩೧ರಲ್ಲಿ ಶ್ರೀರಂಗಪಟ್ಟಣದ ಬಗ್ಗೆ ಬರೆದ Constant E Parson ಎಂಬುವವರು ಕೋಟೆಯೊಳಗಿನ ಈ ಕ್ರೈಸ್ತ ದೇವಾಲಯದ ಕುರಿತು ಹೇಳುತ್ತಾ "It was in this Chapel that French Patriots met for High Mass before offering allegiance to the Sultan's Holy cause . . " ಎಂದು ವ್ಯಂಗ್ಯವಾಡಿದ್ದಾರೆ ಎಂದೆಲ್ಲ ಫಾದರ್ ಅಂತಪ್ಪನವರು ದಾಖಲಿಸುತ್ತಾರೆ.
  • ಇತ್ತೀಚೆಗೆ ಮೈಸೂರಿನ ಮ ನ ಜವರಯ್ಯನವರು ಬರೆದಿರುವ ಕಾದಂಬರಿಯ ನಾಯಕ ಇದೇ ಸೂರಪ್ಪನಾದರೂ ಅವನನ್ನು ಅವರು ಕ್ರಿಸ್ತಾನುಯಾಯಿ ಎಂಬಂತೆ ಚಿತ್ರಿಸಿಲ್ಲ. ಇನ್ನು ಡಾ. ವಿಷ್ಣುವರ್ಧನ್ಅವರು ನಟಿಸಿರುವ ಇದೇ ಹೆಸರಿನ ಚಲನಚಿತ್ರವು ೨೦೦೦ದ ವರ್ಷದಲ್ಲಿ ತೆರೆ ಕಂಡಿರುವುದಾದರೂ ಮೂಲ ಸೂರಪ್ಪನಿಗೂ ಈ ಕಥಾನಾಯಕನಿಗೂ ಯಾವುದೇ ಹೋಲಿಕೆಯಿಲ್ಲ.

"https://kn.wikipedia.org/w/index.php?title=ಸೂರಪ್ಪ&oldid=1182108" ಇಂದ ಪಡೆಯಲ್ಪಟ್ಟಿದೆ