ಸತ್ಯದೊಂದಿಗೆ ನನ್ನ ಪ್ರಯೋಗಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪುಸ್ತಕದ ಮುಖಪುಟ.

ಸತ್ಯದೊಂದಿಗೆ ನನ್ನ ಪ್ರಯೋಗಗಳು ಮಹಾತ್ಮ ಗಾಂಧಿಯವರ ಆತ್ಮ ಚರಿತ್ರೆ. ಅವರ ಬಾಲ್ಯದಿಂದ ೧೯೨೦ರ ತನಕ ಗಾಂಧೀಜಿಯವರ ಆತ್ಮಕಥೆಯನ್ನು ಹೇಳುವ ಈ ಪುಸ್ತಕ ಬಹು ಜನಪ್ರಿಯ ಹಾಗೂ ಪ್ರಭಾವಕಾರಿಯಾಗಿದೆ. ಸ್ವಾಮಿ ಆನಂದ ಮತ್ತಿತರ ಸಹಾನುಯಾಯಿಗಳ ಕೋರಿಕೆಯ ಮೇರೆಗೆ, ಗಾಂಧೀಜಿಯವರು ತಮ್ಮ ಮಾತೃಭಾಷೆಯಾದ ಗುಜರಾತಿಯಲ್ಲಿ ಈ ಪುಸ್ತಕವನ್ನು ರಚಿಸಿದರು. ಈ ಪುಸ್ತಕದ ಗುಜರಾತಿ ಹೆಸರು સત્યના પ્રયોગો અથવા આત્મકથા (ಸತ್ಯಾನಾ ಪ್ರಯೋಗೊ ಅಥ್ವಾ ಆತ್ಮಕಥಾ) - ಅಂದರೆ 'ಸತ್ಯದೊಂದಿಗೆ ಪ್ರಯೋಗಗಳು ಅಥವಾ ನನ್ನ ಆತ್ಮಕಥೆ - ಎಂದಾಗಿದೆ.

ಮಹಾತ್ಮಾ ಗಾಂಧಿಯವರು ಒಬ್ಬ ವರ್ಚಸ್ವೀ ನಾಯಕರಾಗಿದ್ದು ಭಾರತದ ಸ್ವಾತಂತ್ರ್ಯ ಹೋರಾಟವನ್ನು ಪ್ರಪಂಚದ ಗಮನಕ್ಕೆ ತಂದವರು. ಅವರ ಅಹಿಂಸೆಯ ತತ್ವವಾದ ಸತ್ಯಾಗ್ರಹ ಇಂದಿಗೂ ಅಹಿಂಸಾತ್ಮಕ ಚಳುವಳಿಗಳಿಗೆ ಪ್ರೇರಣೆಯಾಗಿದೆ.


ನಿಷ್ಪತ್ತಿ[ಬದಲಾಯಿಸಿ]

ಗಾಂಧೀಜಿಯವರ ಅಭಿಪ್ರಾಯದಲ್ಲಿ ಸತ್ಯವೇ ಪರಮ ತತ್ವವಾಗಿತ್ತು. ಹಲವು ಧಾರ್ಮಿಕ ತತ್ವಗಳನ್ನು ಮತ್ತು ವಿಚಾರಗಳನ್ನು ಸತ್ಯವು ಒಳಗೊಂಡಿದೆಯೆಂದು ಅವರ ವಿಚಾರವಾಗಿತ್ತು.

"... ಆತ್ಮಚರಿತ್ರೆ ಬರೆಯುವುದು ನನ್ನ ಉದ್ದೇಶವಲ್ಲ. ಸತ್ಯದೊಂದಿಗಿನ ನನ್ನ ಪ್ರಯೋಗಗಳ ಕಥೆಯನ್ನು ಹೇಳಬೇಕೆಂದಿದ್ದೇನೆ ಅಷ್ಟೆ. ನನ್ನ ಜೀವನ ಸತ್ಯದ ಪ್ರಯೋಗಗಳಿಂದಲೇ ತುಂಬಿ ಹೋಗಿರುವುದರಿಂದ ಈ ಕಥೆಯು ನನ್ನ ಜೀವನಚರಿತ್ರೆಯ ರೂಪ ಪಡೆದುಕೊಳ್ಳುತ್ತದೆ...", ಎಂದು ಪೀಠಿಕೆಯಲ್ಲಿ ಹೇಳಿದ್ದಾರೆ. ಈ ಕಾರಣದಿಂದಾಗಿಯೇ ಶೀರ್ಷಿಕೆ ಸತ್ಯದೊಂದಿಗೆ ನನ್ನ ಪ್ರಯೋಗಗಳು ಎಂದಾಗಿದೆ. ಮುಂದೆ "... ಅಹಿಂಸೆ, ಬ್ರಹ್ಮಚರ್ಯ ಮತ್ತು ಇತರ ಆಚಾರಗಳ ಜೊತೆ ನಡೆಸಿದ ಪ್ರಯೋಗಗಳೂ ಈ ಕಥೆಯಲ್ಲಿ ಸೇರಿವೆ." ಎಂದೂ ತಿಳಿಸುತ್ತಾರೆ.

ಈ ಆತ್ಮಚರಿತ್ರೆಯಲ್ಲಿ ಗಾಂಧೀಜಿಯವರು ಜನ್ಮ (೧೮೬೯)ದಿಂದ ೧೯೨೧ರ ವರೆಗೆ ತಮ್ಮ ಕಥೆಯನ್ನು ಹೇಳಿಕೊಂಡಿದ್ದಾರೆ. ಕೊನೆಯ ಅಧ್ಯಾಯದಲ್ಲಿ, "ಈ ಸಮಯದ ಮುಂದಿನ ನನ್ನ ಜೀವನವು ಸಾರ್ವಜನಿಕವಾಗಿದೆ, ಆದ್ದರಿಂದ ಅದರ ಬಗ್ಗೆ ಬರೆಯುವುದಕ್ಕೆ ಏನೂ ಉಳಿದಿಲ್ಲ..." ಎಂದು ಬರೆದಿದ್ದಾರೆ.


ಪಕ್ಷಿನೋಟ[ಬದಲಾಯಿಸಿ]

ಮಹಾತ್ಮ ಗಾಂಧಿಯವರ ಸತ್ಯದೊಂದಿಗೆ ನನ್ನ ಪ್ರಯೋಗಗಳು ಪುಸ್ತಕದ ಗುಜರಾತಿ ಭಾಷೆಯಲ್ಲಿನ ಮೂಲಪ್ರತಿಯ ಒಂದು ಪುಟ

ಆಧ್ಯಾತ್ಮಿಕ ಕೋನ[ಬದಲಾಯಿಸಿ]

ಮಹಾತ್ಮ ಗಾಂಧಿಯವರು ತಮ್ಮ ಮಾತುಗಳಲ್ಲಿಯೇ ತಮ್ಮ ಜೀವನದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಪುಸ್ತಕದ ಪ್ರತಿ ಅಧ್ಯಾಯವೂ ಅವರ ಜೀವನದ ಪ್ರಮುಖ ಪಾಠಗಳಾಗಿವೆ.ಪೀಠಿಕೆಯಲ್ಲಿ ಕಣ್ಣು ಹಾಯಿಸಿದಾಗ ಮುಂದಿನ ಅಧ್ಯಾಯಗಳಲ್ಲಿ ಬರುವ ವಿಷಯಗಳನ್ನು ಊಹಿಸಬಹುದು.

ಆಧ್ಯಾತ್ಮಿಕ ಕೋನವು ಈ ಮಾತುಗಳಿಂದ ಸ್ಪಷ್ಟವಾಗಿದೆ. "...ನಾನು ಸಾಧಿಸಬೇಕಾಗಿರುವುದೇನೆಂದರೆ - ನಾನು ಇಷ್ಟು ವರ್ಷಗಳ ಕಾಲ ಅಷ್ಟೊಂದು ಕಷ್ಟ-ನೋವುಗಳನ್ನು ಸಹಿಸಿರುವುದೇಕೆಂದರೆ - ಆತ್ಮಸಾಧನೆಗೆ, ಭಗವಂತನನ್ನು ಎದುರುಗೊಳ್ಳುವುದಕ್ಕೆ, ಮೋಕ್ಷವನ್ನು ಪಡೆಯುವುದಕ್ಕೆ. ನಾನು ಜೀವಿಸುವುದು, ನಡೆಯುವುದು, ಅಸ್ತಿತ್ವದಲ್ಲಿರುವುದು ಈ ಉದ್ದೇಶಕ್ಕಾಗಿಯೇ."

ಗಾಂಧೀಜಿಯವರ ಮುಖ್ಯ ನಂಬಿಕೆಯೆಂದರೆ ಅಹಿಂಸೆಯನ್ನು ದಬ್ಬಾಳಿಕೆಯ ವಿರುದ್ಧ ಪ್ರಮುಖ ಅಸ್ತ್ರವನ್ನಾಗಿ ಉಪಯೋಗಿಸುವುದು ಹಾಗೂ ನ್ಯಾಯ ದೊರಕಲು ಅಂತಾರಾಷ್ಟ್ರೀಯ ಕಾನೂನನ್ನು ಉಪಯೋಗಿಸುವುದು. ಗಾಂಧೀಜಿಯವರು ಹೇಳಿದ ಹಾಗೆ:

ಹಿಂಸೆಗೆ ಪ್ರತಿಕಾರವಾಗಿ ಹಿಂಸೆಯನ್ನು ಉಪಯೋಗಿಸಿದರೆ ಇಡೀ ಪ್ರಪಂಚವೇ ಅಂಧಕಾರದಲ್ಲಿ ಮುಳುಗುವುದು.
ಅನೇಕ ಉದ್ದೇಶಗಳಿಗೆ ನಾನು ಜೀವತ್ಯಾಗ ಮಾಡಲು ಸಿದ್ಧ, ಆದರೆ ಎಂತಹುದೇ ಉದ್ದೇಶಕ್ಕಾಗಿ ನಾನು ಜೀವತೆಗೆಯಲು ಸಿದ್ಧನಲ್ಲ.

ಅಹಿಂಸೆಯನ್ನು ಅಪ್ಪಿಕೊಳ್ಳಲು ಅವರ ಸತ್ಯಾನ್ವೇಷಣೆಯ ಧ್ಯೇಯವೇ ಕಾರಣ. ತಮ್ಮ ತಪ್ಪುಗಳನ್ನು ಅರಿಯುವುದರಿಂದ ಹಾಗೂ ತಾವಾಗಿ ತಮ್ಮಮೇಲೆ ನಡೆಸಿದ ಪ್ರಯೋಗಗಳಿಂದ ಈ ಧ್ಯೇಯವನ್ನು ಸಾಧಿಸಲು ಅವರು ಪ್ರಯತ್ನಿಸಿದರು. ಅವರು ಕಂಡುಕೊಂಡದ್ದೇನೆಂದರೆ, ಸತ್ಯವನ್ನು ಹೊರತರುವುದು ಕೆಲವೊಮ್ಮೆ ಜನಪ್ರಿಯವಲ್ಲ - ಏಕೆಂದರೆ ಬಹಳಷ್ಟು ಜನ ಬದಲಾವಣೆಗೆ ವಿರೋಧ ವ್ಯಕ್ತಪಡಿಸುತ್ತಾರೆ. ಇದಕ್ಕೆ ಕಾರಣ ಜನರು ತಮ್ಮಷ್ಟಕ್ಕೆ ತಾವು ಇದ್ದು, ತಮ್ಮಲ್ಲಿರುವ ಹುಸಿನಂಬಿಕೆಗಳಲ್ಲಿ ಮತ್ತು ಸ್ವಾರ್ಥಗಳಲ್ಲಿಯೇ ಜೀವಿಸುವುದಕ್ಕೆ ಇಷ್ಟಪಡುತ್ತಾರೆ. ಹಾಗಿದ್ದಲ್ಲೂ, ಒಮ್ಮೆ ಸತ್ಯದ ಪ್ರಭಾವ ಹೆಚ್ಚಾದಲ್ಲಿ, ಇದನ್ನು ತಡೆಯಲು ಯಾವುದರಿಂದಲೂ ಸಾಧ್ಯವಿಲ್ಲವೆಂದೂ ಕಂಡುಕೊಂಡರು. ಈ ಸ್ಥಿತಿ ಹೊರಬರಲು ಸಮಯ ಬೇಕಷ್ಟೆ. ಅವರೇ ಹೇಳಿದ ಹಾಗೆ:

ಸತ್ಯವು ಯಾವುದೇ ಸಾಮೂಹಿಕ ನಿರ್ನಾಮದ ಅಸ್ತ್ರಕ್ಕಿಂತ ಶಕ್ತಿಶಾಲಿಯಾಗಿದೆ.

ಬದುಕಿನಲ್ಲಿ ಅತಿ ಮುಖ್ಯ ಯುದ್ಧವೆಂದರೆ ತನ್ನೊಳಗಿನ ಭಯ ಮತ್ತು ಅಭದ್ರತೆಗಳನ್ನು ಓಡಿಸುವುದಾಗಿದೆ. ಪರರನ್ನು, ಸರ್ಕಾರವನ್ನು, ಅಥವಾ ವಿರೋಧಿಗಳನ್ನು ದೋಷಿಗಳನ್ನಾಗಿ ಮಾಡುವುದು ಬಹಳ ಸುಲಭ. ಬಹಳಷ್ಟು ಸಮಸ್ಯೆಗಳಿಗಿರುವ ಮದ್ದೆಂದರೆ ಕನ್ನಡಿಯಲ್ಲಿ ತನ್ನನ್ನೇ ನೋಡಿಕೊಳ್ಳುವುದು.

ಗಾಂಧೀಜಿಯವರು ಧಾರ್ಮಿಕ ಆಚಾರಗಳನ್ನು ಸಂಪ್ರದಾಯ-ನಂಬಿಕೆಗಳ ಹೊರತಾಗಿಯೂ ಟೀಕಿಸುತ್ತಿದ್ದರು. ಕ್ರೈಸ್ತ ಧರ್ಮದ ಬಗ್ಗೆ ಅವರು ಹೇಳಿದ್ದು:

ಭೂಮಿಯಲ್ಲಿ ಕ್ರೈಸ್ತನ ಬೋಧನೆಗಳನ್ನು ಅಹಿಂಸಾತ್ಮಕವಾಗಿ ನೋಡದೇ ಇರುವ ಜನರೆಂದರೆ ಕ್ರೈಸ್ತ ಧರ್ಮೀಯರು ಮಾತ್ರ.
ಮುಂಬಯಿಯ ಬಿರ್ಲಾ ಮಂದಿರದಲ್ಲಿ ಗಾಂಧೀಜಿಯವರು ಬರೆಯುತ್ತಿರುವುದು ೧೯೪೨ರ ಚಿತ್ರ

ಗಾಂಧಿಯವರು ಸ್ವಯಂ ಹಿಂದೂ ಆಗಿದ್ದರೂ ಕೂಡ ಹಿಂದೂ ಧರ್ಮವನ್ನು ಟೀಕಿಸಿದ್ದಾರೆ:

ಈ ಕಾರಣಗಳಿಂದ ಕ್ರೈಸ್ತಧರ್ಮವನ್ನು ಪರಿಪೂರ್ಣವೆಂದು ನಾನು ನಂಬುವುದಿಲ್ಲ; ಹಿಂದೂ ಧರ್ಮವನ್ನೂ ಸಹ. ಇದರಲ್ಲಿನ ನ್ಯೂನತೆಗಳು ನನ್ನ ಕಣ್ಣಿಗೆ ರಾಚುತ್ತವೆ. ಅಸ್ಪೃಶ್ಯತೆಯು ಹಿಂದೂ ಧರ್ಮದ ಭಾಗವೆಂದರೆ, ಅದು ಒಂದು ಕೊಳೆತುಹೋದ ಅಂಗ. ಇಷ್ಟೊಂದು ಜಾತಿ, ಪಂಥಗಳಿರಲು ಕಾರಣವೇನೆಂದು ನನಗೆ ತಿಳಿದಿಲ್ಲ.
ನೈತಿಕ ಮೌಲ್ಯಗಳನ್ನು ಕಳೆದುಕೊಂಡ ಕ್ಷಣವೇ ನಮ್ಮ ಧರ್ಮವನ್ನು ಕಳೆದುಕೊಳ್ಳುತ್ತೇವೆ. ಧರ್ಮವು ನಮಗೆ ಅನೈತಿಕತೆಯನ್ನು ಹೇಳಿಕೊಡುವುದಿಲ್ಲ. ಮನುಷ್ಯನು ಅಸತ್ಯ ಹಾಗೂ ಕ್ರೂರತನಗಳನ್ನು ಹೊಂದಿ ಭಗವಂತನ ಬಳಿ ಸೇರಲು ಸಾಧ್ಯವಿಲ್ಲ.
ನನಗೆ ತಿಳಿದಿರುವ ಹಿಂದೂ ಧರ್ಮ ನನ್ನನ್ನು ಸಂತೃಪ್ತಿಗೊಳಿಸುತ್ತದೆ, ಸಂಪೂರ್ಣನನ್ನಾಗಿ ಮಾಡುತ್ತದೆ. ನನ್ನನ್ನು ಶಂಕೆ ಕಾಡಿದಾಗ, ನಿರಾಸೆಯಾದಾಗ, ಹಾಗೂ ಯಾವುದೇ ಆಸರೆ ಸಿಗದಿರುವಾಗ ನಾನು ಭಗವದ್ಗೀತೆಯ ಮೊರೆಹೋಗುತ್ತೇನೆ. ಆಗ ಸುತ್ತಲೂ ಶೋಕವಿರುವಾಗ ನಾನು ಮಂದಸ್ಮಿತನಾಗುತ್ತೇನೆ. ನನ್ನ ಬದುಕಿನಲ್ಲಿ ಅದೆಷ್ಟೋ ದುರ್ಘಟನೆಗಳು ನಡೆದು ಹೋಗಿವೆ. ನಾನು ಅವುಗಳಿಂದ ವಿಚಲಿತನಾಗದೇ ಇರುವುದಕ್ಕೆ ಭಗವದ್ಗೀತೆಯೇ ಕಾರಣ.

ಬಹು ಕಾಲದ ನಂತರ ತಾವು ಹಿಂದೂವೇ ಎಂದು ಯಾರೋ ಕೇಳಿದಾಗ, ಹೌದು, ನಾನೊಬ್ಬ ಹಿಂದೂ. ನಾನು ಕ್ರಿಶ್ಚಿಯನ್, ಮುಸಲ್ಮಾನ, ಬೌದ್ಧ್ಹಧರ್ಮೀಯ ಮತ್ತು ಯಹೂದಿಯೂ ಹೌದು. ಎಂದು ಉತ್ತರಿಸಿದರು.

ರಾಜಕೀಯ ಮತ್ತು ವೈಜ್ನಾನಿಕ ಕೋನ[ಬದಲಾಯಿಸಿ]

ರಾಜಕಾರಣ ಮತ್ತು ಆಧ್ಯಾತ್ಮಿಕತೆಯನ್ನು ಸೇರಿಸುವ ಅವರ ಇರಾದೆಯನ್ನು ಈ ಹೇಳಿಕೆಯಲ್ಲಿ ಕಾಣಬಹುದು. "... ರಾಜಕೀಯ ರಂಗದಲ್ಲಿ ನನ್ನ ಪ್ರಯೋಗಗಳು ಭಾರತದಲ್ಲಿ ಅಲ್ಲದೇ, ತಕ್ಕ ಮಟ್ಟಿಗೆ 'ನಾಗರಿಕ' ಪ್ರಪಂಚದಲ್ಲಿಯೂ ಪ್ರಸಿದ್ಧವಾಗಿವೆ."

"ವಿಜ್ನಾನಿಯು ಲೆಕ್ಕಾಚಾರ ಹಾಕಿ, ಬಹಳಷ್ಟು ಯೋಚಿಸಿ ತನ್ನ ಪ್ರಯೋಗಗಳನ್ನು ನಿರ್ಣಯ ಮಾಡುವಂತೆ ನಾನು ಪ್ರಯೋಗಗಳನ್ನು ಮಾಡುತ್ತೇನೆ. ಅದರ ನಿರ್ಣಯಗಳು ಏನೇ ಇದ್ದರೂ, ಈಗ ಅದು ನನಗೆ ಸತ್ಯವಾಗಿಯೇ ಕಾಣುತ್ತದೆ."

ಹೀಗಿದ್ದರೂ ಕೂಡ ಗಾಂಧಿಯವರು ತಮ್ಮ ಪ್ರಯೋಗಗಳನ್ನು ಕೇವಲ ಉದಾಹರಣೆಗಳೆಂದು ಭಾವಿಸಿ ಜನರು ತಮ್ಮದೇ ಪ್ರಯೋಗಗಳನ್ನು ಮಾಡಲು ಉತ್ತೇಜಿಸಿದ್ದಾರೆ.

ಪುಸ್ತಕದ ವಿಮರ್ಶೆಗಳು[ಬದಲಾಯಿಸಿ]

ಕೆಲವು ವಿಮರ್ಶಕರ ಪ್ರಕಾರ ಗಾಂಧೀಜಿಯವರು ೧೯ನೇ ಶತಮಾನದ ಕೊನೆಯ ಮತ್ತು ೨೦ನೇ ಶತಮಾನದ ಪ್ರಾರಂಭದ ಭಾರತಾದ ಸಾಮಾಜಿಕ ಮತ್ತು ರಾಜಕೀಯ ಸ್ಥಿತಿಯನ್ನು ಓದುಗನಿಗೆ ಮುಂಚೆಯೇ ತಿಳಿದಿದೆಯೆಂದು ಭಾವಿಸುತ್ತಾರೆ. ಈ ಪುಸ್ತಕದ ಜೊತೆಗೆ ಯೋಗೇಶ ಚಡ್ಡಾರವರ ಗಾಂಧಿ: ಒಂದು ಜೀವನ ಎಂಬ ಪುಸ್ತಕವನ್ನು ಓದಿದರೆ ಮೇಲಿನ ಹಿನ್ನೆಲೆಯನ್ನು ತಿಳಿಯಲು ಉಪಯುಕ್ತವಾಗುವುದು.

ಉಲ್ಲೇಖಗಳು[ಬದಲಾಯಿಸಿ]

ಮುದ್ರಿಕೆಯಲ್ಲಿ[ಬದಲಾಯಿಸಿ]

  • ಭಾರತ - ISBN 81-7229-008-X
  • ಅಮೆರಿಕ-ಅಧಿಕೃತ ಆವೃತ್ತಿ, ಸಿಸೇಲಾ ಬಾಕ್ ರಿಂದ ಮುನ್ನುಡಿ, ಬೀಕನ್ ಮುದ್ರಣಾಲಯ ೧೯೯೩ reprint: ISBN 0-8070-5909-9
  • ಡೋವರ್ ಪ್ರಕಾಶನ 1983 reprint of 1948 Public Affairs Press edition: ISBN 0-486-24593-4

ಅಂತರ್ಜಾಲ ಆವೃತ್ತಿಗಳು[ಬದಲಾಯಿಸಿ]

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:

ಇತರ ಹೊರಗಿನ ಸಂಪರ್ಕಗಳು[ಬದಲಾಯಿಸಿ]

ಇದನ್ನೂ ನೋಡಿ[ಬದಲಾಯಿಸಿ]