ಶ್ರೀ ಪದ್ಮನಾಭ ತೀರ್ಥರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶ್ರೀ ಮಧ್ವಾಚಾರ್ಯರ ಶಿಷ್ಯರಲ್ಲಿ ಪ್ರಮುಖರು ಶ್ರೀ ಪದ್ಮನಾಭತೀರ್ಥರು. ಇವರ ಪೂರ್ವಾಶ್ರಮ ಹೆಸರು ಶೋಭನ ಭಟ್ಟ. ಸ್ಥಳ ಗೋದಾವರಿ ನದಿ ತೀರ ಪೈಠಣ ಗ್ರಾಮ



ಶ್ರೀ ಪದ್ಮನಾಭತೀರ್ಥರು

ಶ್ರೀ ಶ್ರೀಪದ್ಮನಾಭತೀರ್ಥರು ಪೂರ್ವಾಶ್ರಮದಲ್ಲಿ ಗೋದಾವರಿ ತೀರದ ಹೆಸರಾಂತ ಪಾಂಡುರಂಗಿ ಮನೆತನದ ಬ್ರಾಹ್ಮಣರು ಶೋಭನಭಟ್ಟರು ಎಂದು ಪ್ರಸಿದ್ಧರಾಗಿದ್ದರು. ಇವರನ್ನು ನಾರಾಯಣಪಂಡಿತಾಚಾರ್ಯರು ಮಧ್ವಾಚಾರ್ಯರ ಜೀವನ ಚರಿತ್ರೆ ಗ್ರಂಥ ಶ್ರೀಸುಮಧ್ವವಿಜಯದಲ್ಲಿ "ವಿದ್ವತ್ತಿಮಿಂಗಿಲ" ಎಂದು ಹೊಗಳಿದ್ದಾರೆ. ಭರತಖಂಡದ ಮಧ್ಯಭಾಗ ಗೋದಾವರಿ ನದಿ ತೀರದ ಒಂದು ನಗರ, ಪ್ರತಿವರ್ಷದಂತೆ ಅಲ್ಲಿ ಭಾರತೀಯ ಸಮಸ್ತ ತತ್ವಜ್ಞಾನಗಳ ಸಮ್ಮೇಳನ, ಎಲ್ಲ ಮತಗಳ ಪಂಡಿತರು ತಮ್ಮ ತಮ್ಮ ಮತಗಳನ್ನು ಅಲ್ಲಿ ಮಂಡಿಸಿ, ವಾಕ್ಯಾರ್ಥ ಮಾಡಬೇಕು, ಗೆದ್ದವರಿಗೆ ಅಭೂತಪೂರ್ವ ಸನ್ಮಾನ. ಇಂತಹ ಸಭೆಯ ಆಯೋಜಕರು ಶ್ರೀ ಶೋಭನ ಭಟ್ಟರು ವಿದ್ವಾಂಸರು, ಪ್ರಕಾಂಡ ಪಂಡಿತರು, ಶ್ರೀ ಮಧ್ವಾಚಾರ್ಯರು ತಮ್ಮ ಬದ್ರಿ ಯಾತ್ರೆ ಮುಗಿಸಿಕೊಂಡು ಸಭೆಗೆ ಆಮಂತ್ರಣವಿರುವ ನಿಮಿತ್ತ ಸರಿಯಾದ ಸಮಯಕ್ಕೆ ಆ ನಗರಕ್ಕೆ ಪ್ರವೇಶ ಮಾಡಿದರು. ಅವರೊಂದಿಗೆ ಶೋಭನ ಭಟ್ಟರದು ಸುಮಾರು ದಿನಗಳವರೆಗೆ ವಾದ ನಡೆಯಿತು. ಕಡೆಗೆ ಮಧ್ವ ಮತಕ್ಕೆ ಶರಣಾಗಿ ಮಧ್ವಾಚಾರ್ಯರ ಶಿಷ್ಯರಾದರು, ಶೋಭನ ಭಟ್ಟರು ಅವರಿಂದಲೇ ಸನ್ಯಾಸ ಸ್ವೀಕರಿಸಿ ಶ್ರೀಪದ್ಮನಾಭತೀರ್ಥರಾದರು. ಶ್ರೀಮಧ್ವಾಚಾರ್ಯರ ಬ್ರಹ್ಮಸೂತ್ರಭಾಷ್ಯಕ್ಕೆ ಸತ್ತರ್ಕದೀಪಾವಲಿ, ಅನುವ್ಯಾಖ್ಯಾನಕ್ಕೆ ಸನ್ಯಾಯರತ್ನಾವಲಿ, ಖಂಡನತ್ರಯಗಳಿಗೆ ಟೀಕೆ, ಗೀತಾಭಾಷ್ಯ ಹಾಗೂ ಗೀತಾತಾತ್ಪರ್ಯಗಳಿಗೆ ಟೀಕೆ, ತತ್ವದ್ಯೋತ ತತ್ವನಿರ್ಣಯ ತತ್ವಸಂಖ್ಯಾನ ಕರ್ಮನಿರ್ಣಯಗಳಿಗೆ ಟೀಕೆ, ಹೀಗೆ ಶ್ರೀಮಧ್ವಾಚಾರ್ಯರ ಅನೇಕ ಗ್ರಂಥಗಳಿಗೆ ಟೀಕೆಯನ್ನು ಬರೆದ ಮಹಾನುಭಾವರು ಶ್ರೀ ಪದ್ಮನಾಭತೀರ್ಥರು. ಶ್ರೀಮಧ್ವಾಚಾರ್ಯರ ದ್ವೈತ ಸಿದ್ಧಾಂತದಲ್ಲಿ ಮೋಕ್ಷಾದಿ ಪುರುಷಾರ್ಥಗಳು ಎಂದು ಗಟ್ಟಿಯಾಗಿ ನಂಬಿದರು ಇವರು. ಸ್ವಯಂ ಶ್ರೀಮಧ್ವಾಚಾರ್ಯರಿಂದ ನೇರವಾಗಿ ಸರ್ವ ಶಾಸ್ತ್ರಗಳನ್ನು ಓದುವ ಸೌಭಾಗ್ಯ ಪಡೆದರು. ಶ್ರೀಮಧ್ವಾಚಾರ್ಯರು ಎಂಭತ್ತು ವರ್ಷಗಳ ಕಾಲ ನಿರಂತರ ಪೂಜಿಸಿದ ಶ್ರೀ ದಿಗ್ವಿಜಯರಾಮ ದೇವರನ್ನು ದೊಡ್ಡ ಸೌಭಾಗ್ಯವನ್ನು ಪಡೆದವರು ಶ್ರೀ ಪದ್ಮನಾಭತೀರ್ಥರು.


ಕೊನೆಗೆ 1324 ನೆಯ ಇಸ್ವಿಯ ಕಾರ್ತೀಕ ಮಾಸದ ಅಮಾವಾಸ್ಯೆಯ ದಿನದಂದು, ತುಂಗಭದ್ರೆಯ ನುಡುಗಡ್ಡೆಯಲ್ಲಿ ವೃಂದಾವನಸ್ಥರಾದರು.

ಪೂರ್ಣಪ್ರಜ್ಞಕೃತಂ ಭಾಷ್ಯಂ ಆದೌ ತದ್ಭಾವಪೂರ್ವಕಂ ! ಯೋ ವ್ಯಾಕರೋನ್ನಮಸ್ತಸ್ಮೈ ಪದ್ಮನಾಭಾಖ್ಯಯೋಗಿನೆ !!

ಅರ್ಥ : - ಪೂರ್ಣಪ್ರಜ್ಞಾಚಾರ್ಯರ ಭಾಷ್ಯವನ್ನು (ಗ್ರಂಥಗಳನ್ನು) ಮೊಟ್ಟಮೊದಲಿಗೆ ಪೂರ್ಣಪ್ರಜ್ಞಾಚಾರ್ಯರ ಅಭಿಪ್ರಾಯಕ್ಕೆ ತಕ್ಕಂತೆ ಯಾರು ವ್ಯಾಖ್ಯಾನ ಮಾಡಿದ್ದಾರೋ ಅಂಥ ಪದ್ಮನಾಭತೀರ್ಥರನ್ನು ನಮಸ್ಕರಿಸುತ್ತೇನೆ.

ಮೊಟ್ಟಮೊದಲ ಬಾರಿಗೆ ಮಧ್ವಾಚಾರ್ಯರ ಗ್ರಂಥಗಳಿಗೆ ಟಿಪ್ಪಣಿ ಬರೆದವರು ಪದ್ಮನಾಭತೀರ್ಥರು

ಶ್ರೀ ಪದ್ಮನಾಭ ತೀರ್ಥವಿರಚಿತ ಗ್ರಂಥಗಳು :

  1. ಮಾಯಾವಾದ ಖಂಡನಾ ಟೀಕಾ
  2. ಉಪಾಧಿ ಖಂಡನಾ ಟೀಕಾ (ನ್ಯಾಯಾವಳಿ)
  3. ಪ್ರಪಂಚ ಮಿಥ್ಯಾತ್ವನುಮಾನ ಖಂಡನಾ ಟೀಕಾ
  4. ಕಥಾ ಲಕ್ಷಣ ಟೀಕಾ
  5. ಗೀತಾ ಭಾಷ್ಯ ಟೀಕಾ ( ಭಾವ ಪ್ರದೀಪಿಕಾ)
  6. ಗೀತಾ ತಾತ್ಪರ್ಯ ನಿರ್ಣಯ ಟೀಕಾ (ಪ್ರಕಾಶಿಕಾ)
  7. ಸತ್ತಾರ್ಕ ದೀಪಾವಳಿ (ಶ್ರೀಬ್ರಹ್ಮಸೂತ್ರ ಭಾಷ್ಯ ಟೀಕಾ)
  8. ಸನ್ಯ್ಯಾಯ ರತ್ನಾವಳಿ (ಅಣುವ್ಯಾಖ್ಯಾನ ಟೀಕಾ)
  9. ತತ್ವೋದ್ಯೋತ ಟೀಕಾ
  10. ಪ್ರಮಾಣ ಲಕ್ಷಣಾ ಟೀಕಾ
  11. ವಿಷ್ಣುತತ್ವ ನಿರ್ಣಯಾ ಟೀಕಾ
  12. ವಾಯುಲೀಲಾ ವಿಸ್ತರಣಾ
  13. ತತ್ವವಿವೇಕ ಟೀಕಾ
  14. ಕರ್ಮನಿರ್ಣಯ ಟೀಕಾ
  15. ತತ್ವಸಂಖ್ಯಾನ ಟೀಕಾ