ಶೇಷಾದ್ರಿ ಗವಾಯಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪಂಡಿತ ಆರ್. ವಿ. ಶೇಷಾದ್ರಿ ಗವಾಯಿ
ಜನನಮಾರ್ಚ್ ೨೧, ೧೯೨೪
ದಾವಣಗೆರೆ
ಮರಣಮಾರ್ಚ್ ೧೯, ೨೦೦೩
ಉದ್ಯೋಗಸಂಗೀತಗಾರರು

ಪಂಡಿತ ಆರ್. ವಿ. ಶೇಷಾದ್ರಿ ಗವಾಯಿ (ಮಾರ್ಚ್ ೨೧, ೧೯೨೪-ಮಾರ್ಚ್ ೧೯, ೨೦೦೩) ಅವರು ಪ್ರಸಿದ್ಧ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತಗಾರರು.

ಜೀವನ[ಬದಲಾಯಿಸಿ]

ಸಂಗೀತ ಶಿಕ್ಷಕ, ಪ್ರಸಾರಕ, ಗಾಯಕ, ವಾಗ್ಗೇಯಕಾರರಾದ ಶೇಷಾದ್ರಿ ಗವಾಯಿಗಳು ದಾವಣಗೆರೆಯಲ್ಲಿ ಮಾರ್ಚ್ ೨೧, ೧೯೨೪ರಲ್ಲಿ ಜನಿಸಿದರು. ಅವರ ತಂದೆ ರಾಜಾಪುರ ವೆಂಕಟಸುಬ್ಬರಾವ್ ಮತ್ತು ತಾಯಿ ತಿಮ್ಮಮ್ಮನವರು.

ರಂಗಭೂಮಿಯಲ್ಲಿ[ಬದಲಾಯಿಸಿ]

ಶೇಷಾದ್ರಿ ಗವಾಯಿಗಳು ಒಂಬತ್ತರ ಬಾಲ್ಯದಿಂದಲೇ ರಂಗಭೂಮಿ ಬಾಲನಟನಾಗಿ, ಬಾಲಕೃಷ್ಣ, ಪ್ರಹ್ಲಾದನಾಗಿ, ವಾಮನರಾವ್ ಮಾಸ್ತರ ಕಂಪನಿ, ತಳಕಲ್ ವೆಂಕಟರೆಡ್ಡಿ ಕಂಪನಿ, ಹಂದಿಗನೂರು ಸಿದ್ಧರಾಮಪ್ಪ ಕಂಪನಿ, ಕಲ್ಕೋಟಿ ಚನ್ನಬಸವಯ್ಯನವರ ಅರವಿಂದ ನಾಟಕ ಕಂಪನಿಯ ನಟನಾಗಿ ಖ್ಯಾತಿ ಪಡೆದಿದ್ದರು.

ಸಂಗೀತ ಲೋಕದಲ್ಲಿ[ಬದಲಾಯಿಸಿ]

ಚನ್ನಬಸವಯ್ಯನವರಲ್ಲಿ ಹಾರ್ಮೋನಿಯಂ ವಾದನ ಕಲೆ ಕಲಿತ ಶೇಷಾದ್ರಿ ಗವಾಯಿಗಳು ಪಂಚಾಕ್ಷರಿ ಗವಾಯಿಗಳ ಬಳಿ ಹಿಂದೂಸ್ತಾನಿ ಸಂಗೀತವನ್ನು ಕಲಿತರು. ಅವರ ಕಾಲದ ಗಾಯಕರಾದ ಸವಾಯಿ ಗಂಧರ್ವ, ಮಲ್ಲಿಕಾರ್ಜುನ ಮನಸೂರ, ಬಸವರಾಜ ರಾಜಗುರು, ಭೀಮಸೇನ ಜೋಶಿ, ಗಂಗೂಬಾಯಿ ಹಾನಗಲ್ಲರು ಉತ್ತರ ಭಾರತದಲ್ಲಿ ಜಯಭೇರಿ ಬಾರಿಸಿದರೆ ಶೇಷಾದ್ರಿ ಗವಾಯಿಗಳು ಹಿಂದೂಸ್ತಾನಿ ಸಂಗೀತದ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದು ನಿಂತರು. ‘ಅರವಿಂದ ಸಂಗೀತ ವಿದ್ಯಾಲಯ’ವನ್ನು ಸ್ಥಾಪನೆ ಮಾಡಿ ನೂರಾರು ಶಿಷ್ಯರಿಗೆ ತರಬೇತಿ ನೀಡಿದರು. ಹೀಗಾಗಿ ಬೆಂಗಳೂರಿನಲ್ಲಿ ಹಿಂದೂಸ್ತಾನಿ ಸಂಗೀತಕ್ಕೆ ಭದ್ರ ಬುನಾದಿ ದೊರಕುವಂತಾಯಿತು.

ಶೇಷಾದ್ರಿ ಗವಾಯಿಗಳು ೫೦೦ಕ್ಕೂ ಹೆಚ್ಚು ಭಕ್ತಿ ಗೀತೆಗಳಿಗೆ ಸ್ವರ ಸಂಯೋಜಿಸಿದರು. ವಚನಗಳ ಗಾಯನದಲ್ಲಂತೂ ಅತ್ಯಂತ ಶ್ರದ್ಧೆ ವಹಿಸಿದ ಶೇಷಾದ್ರಿ ಗವಾಯಿಗಳು ವಚನ ಗಾಯನ ವಿಭೂಷಣರೆಂದೇ ಪ್ರಸಿದ್ಧಿ ಪಡೆದವರು. ಹೆಸರಾಂತ ಹಿಂದೂಸ್ತಾನಿ ಗಾಯಕರಾದ ಭೀಮಸೇನ ಜೋಶಿ, ಗಂಗೂಬಾಯಿ ಹಾನಗಲ್, ಬಸವರಾಜ ರಾಜಗುರು ಮುಂತಾದವರಿಗೆ ಅವರು ಹಾರ್ಮೋನಿಯಂ ವಾದನದಲ್ಲಿ ಜೊತೆ ನೀಡಿದ್ದರು. ಅವರು ಕರ್ನಾಟಕದಲ್ಲೇ ಅಲ್ಲದೆ ದೆಹಲಿ, ಕೋಲ್ಕತ್ತಾ, ಮುಂಬಯಿ, ನಾಗಪುರ, ಹೈದರಾಬಾದುಗಳಲ್ಲಿ ಕಾರ್ಯಕ್ರಮಗಳನ್ನು ನಡೆಸಿಕೊಟ್ಟು ಜನಪ್ರಿಯತೆ ಗಳಿಸಿದ್ದರು. ಅವರ ಕಾರ್ಯಕ್ರಮ ಲಂಡನ್ನಿನ ಭಾರತೀಯ ವಿದ್ಯಾಭವನದಲ್ಲಿ ಸಹಾ ನಡೆದಿತ್ತು.

ಬರವಣಿಗೆ ಮತ್ತು ಕೃತಿ ರಚನೆ[ಬದಲಾಯಿಸಿ]

ಸಂಗೀತ, ಕಲೆ, ಸಾಹಿತ್ಯ ಪ್ರಚಾರಕ್ಕಾಗಿ ಅವರು ‘ಗಾಯನ ಗಂಗಾ’ ಎಂಬ ಸಂಗೀತ ಮಾಸ ಪತ್ರಿಕೆಯನ್ನು ಪ್ರಾರಂಭಿಸಿದರು. ‘ಉರುಗಾಚಲ’ ಎಂಬ ಅಂಕಿತದಲ್ಲಿ ಅನೇಕ ಕೃತಿಗಳನ್ನು ರಚನೆ ಮಾಡಿದರು.

ಶೇಷಾದ್ರಿ ಗವಾಯಿಗಳು ರಚಿಸಿದ ‘ಸಂಗೀತ ಕಲಾರವಿಂದ’ ಭಾಗ 1 ಮತ್ತು ಭಾಗ 2 ಕೃತಿಗಳು ಕರ್ನಾಟಕ ಸರಕಾರದಿಂದ ಪುರಸ್ಕಾರ ಪಡೆದಿವೆ. ಅವರ ‘ತತ್ವಗಾನ ರತ್ನಾಕರ’ ಬಹುಜನಪ್ರಿಯ ಪುಸ್ತಕ.

ಆಡಳಿತ ನಿರ್ವಹಣೆ[ಬದಲಾಯಿಸಿ]

ಶೇಷಾದ್ರಿ ಗವಾಯಿಗಳು ರಾಜ್ಯ ಸಂಗೀತ, ನೃತ್ಯ ಅಕಾಡಮಿ ಅಧ್ಯಕ್ಷರ ಜವಾಬ್ದಾರಿಯನ್ನು ಕೂಡಾ ಶ್ರದ್ಧೆ ದಕ್ಷತೆಗಳಿಂದ ನಿರ್ವಹಿಸಿದವರು

ಗುರುಗಳ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪನೆ[ಬದಲಾಯಿಸಿ]

ಶೇಷಾದ್ರಿ ಗವಾಯಿಗಳು ತಮ್ಮ ಗುರುಗಳ ಮೇಲಣ ಭಕ್ತಿಯಿಂದ ಗಾನಯೋಗಿ ಪಂ. ಪಂಚಾಕ್ಷರಿ ಗವಾಯಿ ಪ್ರತಿಷ್ಠಾನ ಸ್ಥಾಪಿಸಿ ದೇಶದ ಪ್ರತಿಷ್ಠಿತ ಸಂಗೀತಗಾರರಿಗೆ ‘ಪಂಚಾಕ್ಷರಿ ಪ್ರಶಸ್ತಿ’ ನೀಡಿದ್ದು ಅವರ ಮತ್ತೊಂದು ಹೆಗ್ಗಳಿಕೆ.

ಪ್ರಶಸ್ತಿ ಗೌರವಗಳು[ಬದಲಾಯಿಸಿ]

ಸಂಗೀತ ಸಾಗರ, ಸಂಗೀತ ಕಲಾರತ್ನ, ಸಂಗೀತ ವಿಶಾರದ, ಸಂಗೀತ ಸುಧಾರ್ಣವ, ನಾದಶ್ರೀ ಬಿರುದುಗಳು; ರಾಜ್ಯ ಸಂಗೀತ ನೃತ್ಯ ಅಕಾಡಮಿ, ಚಂದ್ರಹಾಸ ಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಭಾರತೀಯ ಗಾಂಧರ್ವ ಮಹಾವಿದ್ಯಾಲಯದಿಂದ ಸಂಗೀತ ಮಹೋಪಾಧ್ಯಾಯ ಬಿರುದು ಮುಂತಾದುವುಗಳ ಜೊತೆಗೆ ಸಂಗೀತದ ಸಮ್ಮೇಳನಗಳ ಅಧ್ಯಕ್ಷತೆ ಹಾಗೂ ರಾಜ್ಯ ಸಂಗೀತ ನೃತ್ಯ ಅಕಾಡಮಿಯ ಅಧ್ಯಕ್ಷತೆಗಳಂತಹ ಅನೇಕ ಗೌರವಗಳು ಶೇಷಾದ್ರಿ ಗವಾಯಿಗಳನ್ನು ಅರಸಿಬಂದಿದ್ದವು.

ವಿದಾಯ[ಬದಲಾಯಿಸಿ]

ಈ ಮಹಾನ್ ಸಂಗೀತ ತಪಸ್ವಿಗಳು ಮಾರ್ಚ್ 19, 2003ರಲ್ಲಿ ತಮ್ಮ ಅಪಾರ ಶಿಷ್ಯವೃಂದ ಮತ್ತು ಕಲಾಭಿಮಾನಿಗಳನ್ನು ಅಗಲಿ ಈ ಲೋಕದಿಂದ ವಿಶ್ರಮಿಸಿದರು. ಅವರು ಕೊಟ್ಟ ಅನೇಕ ಕೊಡುಗೆಗಳು ಸಂಗೀತ ಲೋಕದಲ್ಲಿ, ಸಹೃದಯರ ಹೃದಯಗಳಲ್ಲಿ ನಿತ್ಯ ರಾರಾಜಿಸುತ್ತಿವೆ.

ಮಾಹಿತಿ ಕೃಪೆ[ಬದಲಾಯಿಸಿ]

ಕಣಜ Archived 2013-04-12 ವೇಬ್ಯಾಕ್ ಮೆಷಿನ್ ನಲ್ಲಿ.