ಶಾಂತಕವಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶಾಂತಕವಿ
Born
ಸಕ್ಕರಿ ಬಾಳಾಚಾರ್ಯ

(೧೮೫೬-೦೧-೧೫)೧೫ ಜನವರಿ ೧೮೫೬
ಸಾತೇನಹಳ್ಳಿ, ಹಾವೇರಿ ಜಿಲ್ಲೆ
Died16 March 1920(1920-03-16) (aged 64)
Nationalityಭಾರತೀಯ
Occupation(s)ಕವಿ, ನಾಟಕಕಾರ, ಕನ್ನಡ ಹೋರಾಟಗಾರ, ಉಪಾಧ್ಯಾಯ
Notable workಉಷಾಹರಣ (೧೮೭೩)
Spouseರಂಗೂಬಾಯಿ
Awardsಆಧುನಿಕ ಕರ್ನಾಟಕ ನಾಟಕ ಪಿತಾಮಹ

ಆಧುನಿಕ ಕರ್ನಾಟಕ ನಾಟಕ ಪಿತಾಮಹ, ಕೀರ್ತನಕಾರರೆಂದು ಎಂದು ಪ್ರಸಿದ್ಧರಾದ ಶಾಂತಕವಿಗಳ ಪೂರ್ಣ ಹೆಸರು ಸಕ್ಕರಿ ಬಾಳಾಚಾರ್ಯ. ತಾವು ಹುಟ್ಟಿದ ಸ್ಥಳದ ಕುಲದೈವವಾದ ಹಾವೇರಿ ಜಿಲ್ಲೆಯ ಸಾತೇನಹಳ್ಳಿಯ ಶಾಂತೇಶನ ಹೆಸರನ್ನೇ ತಮ್ಮ ಕಾವ್ಯನಾಮವಾಗಿ ಇಟ್ಟುಕೊಂಡಿದ್ದರು. ಮರಾಠಿಗೆ ಮಾರುಹೋಗಿದ್ದ ಉತ್ತರ ಕರ್ನಾಟಕದಲ್ಲಿ ಕನ್ನಡದ ಅಲೆಗೆ ಶ್ರಮಿಸಿದರು. ಇವರ ಪ್ರಯತ್ನದಿಂದ ಉತ್ತರ ಕರ್ನಾಟಕದ ಪ್ರಪ್ರಥಮ ನಾಟಕ ಮಂಡಳಿ, ಶ್ರೀ ವೀರನಾರಾಯಣ ಪ್ರಸಾದಿಕ ಕೃತಪುರ ನಾಟಕ ಮಂಡಳಿಯು ೧೮೭೪ರಲ್ಲಿ ಗದಗದಲ್ಲಿ ಹುಟ್ಟುಕೊಂಡಿತು.[೧] ಇದೇ ಈ ಭಾಗದಲ್ಲಿ ಇನ್ನೂ ಹಲವು ನಾಟಕ ಮಂಡಳಿಗಳ ಉಗಮಕ್ಕೆ ಸ್ಫೂರ್ತಿಯಾಯಿತು.

ಶಾಂತಕವಿಗಳು ೧೮೫೬ ಜನೆವರಿ ೧೫ರಂದು, ಸಂಸ್ಕೃತ ವಿದ್ವಾಂಸರ ಮನೆತನದಲ್ಲಿ ಜನಿಸಿದರು. ಇವರ ತಂದೆ ಸಾತೇನಹಳ್ಳಿ ಗೋಪಾಲಾಚಾರ್ಯರು. ಈ ಮನೆತನದಲ್ಲಿಯ ಶ್ರೀನಿವಾಸಾಚಾರ್ಯರೆನ್ನುವವರು “ಶರ್ಕರಾ” (ಸಂಸ್ಕೃತದಲ್ಲಿ ಸಕ್ಕರೆ) ಎನ್ನುವ ಸಂಸ್ಕೃತ ಟೀಕೆಯನ್ನು ರಚಿಸಿದ್ದರಿಂದ ಇವರ ಮನೆತನಕ್ಕೆ “ಸಕ್ಕರಿ” ಎನ್ನುವ ಅಡ್ಡಹೆಸರು ರೂಢವಾಯಿತು.

೧೯೨೦ರಲ್ಲಿ ಶಾಂತಕವಿಗಳು ಹುಬ್ಬಳ್ಳಿಯಲ್ಲಿ ಶಾಂತರಾದರು.

ಶಿಕ್ಷಣ / ಉದ್ಯೋಗ[ಬದಲಾಯಿಸಿ]

ಮುಲ್ಕೀ ಪರೀಕ್ಷೆಯಲ್ಲಿ ತೇರ್ಗಡೆಯಾದ ಬಳಿಕ , ೧೮೭೨ರಲ್ಲಿ ರಾಣಿಬೆನ್ನೂರಿನಲ್ಲಿ ಕನ್ನಡ ಶಾಲೆಯ ಉಪಾಧ್ಯಾಯರಾದರು. ಹಾವೇರಿ, ಧಾರವಾಡ, ಗದಗ, ಬೆಳಗಾವಿ, ಗೋಪನಕೊಪ್ಪ ಮೊದಲಾದ ಊರುಗಳಲ್ಲಿ ಕೆಲಸ ಮಾಡಿದರು.

ಕನ್ನಡ ಸೇವೆ[ಬದಲಾಯಿಸಿ]

ಗದಗ ಜಿಲ್ಲೆಯ ಮುಳಗುಂದದಲ್ಲಿ ಬಾಳಾಚಾರ್ಯರು ಒಮ್ಮೆ ಕೀರ್ತನ ಕೇಳುತ್ತಿದ್ದರು. ಆ ಕೀರ್ತನ ಮರಾಠಿ ಮಿಶ್ರಿತ ಕನ್ನಡದಲ್ಲಿತ್ತು ; ಮರಾಠಿ ಹಾಡುಗಳಿಂದ ತುಂಬಿತ್ತು. ಬಾಳಾಚಾರ್ಯರು ಇದಕ್ಕೆ ಆಕ್ಷೇಪವೆತ್ತಿದಾಗ ಕನ್ನಡದಲ್ಲಿ ಕೀರ್ತನೆಗಳು ಎಲ್ಲಿವೆ ಎನ್ನುವ ಟೀಕೆಯನ್ನು ಎದುರಿಸಬೇಕಾಯಿತು. ಇದೇ ಒಂದು ಆಹ್ವಾನವಾಗಿ ಬಾಳಾಚಾರ್ಯರು ಕೆಲ ದಿನಗಳಲ್ಲಿಯೆ “ಮುಕುಂದ ನಾಮಾಮೃತ” ಎನ್ನುವ ಅಚ್ಚ ಕನ್ನಡ ಕೀರ್ತನೆಯನ್ನು ರಚಿಸಿ, ತಾವೇ ಆ ಕೀರ್ತನೆಯನ್ನು ಪ್ರದರ್ಶಿಸಿದರು. ‘ಶಾಂತೇಶ ವಿಠಲ’, ‘ಶಾಂತ ವಿಠಲ’ ಎನ್ನುವ ಅಂಕಿತದಲ್ಲಿ ದೇವರ ನಾಮಗಳನ್ನು ರಚಿಸಿದರು.

೧೮೭೩ರಲ್ಲಿ ಬಾಳಾಚಾರ್ಯರು ತಮ್ಮ ೧೭ನೆಯ ವಯಸ್ಸಿನಲ್ಲಿಯೇ "ಉಷಾಹರಣ" ಎನ್ನುವ ನಾಟಕ ರಚಿಸಿ ಪ್ರದರ್ಶನ ಮಾಡಿಸಿದರು.[೧] ಇದು ಅವರಿಗೆ ಆದ್ಯ ನಾಟಕಕಾರ ಎನ್ನುವ ಗೌರವ ತಂದುಕೊಟ್ಟಿತು. ಇದು ೧೮೭೭ ನವೆಂಬರ್ ೧೪ರಂದು ಪ್ರದರ್ಶನಗೊಂಡ ದಿನವನ್ನೇ ಕನ್ನಡದ ಪ್ರಥಮ ನಾಟಕೋದಯ ದಿನ ಎಂದು ಆಚರಿಸಲಾಗುತ್ತದೆ. ೧೮೭೪ರಲ್ಲಿ ಗದಗನಲ್ಲಿ ಕೃತುಪುರ ನಾಟಕ ಮಂಡಳಿ ಕಟ್ಟಿದರು. ಗದಗಿನಿಂದ ಹೊಂಬಳಕ್ಕೆ ಅಲ್ಲಿಂದ ಅಗಡಿಗೆ ವರ್ಗಾವಣೆಯ ಮೇಲೆ ಹೋದ ಬಾಳಾಚಾರ್ಯರು, ಹೋದಲ್ಲೆಲ್ಲ ಕನ್ನಡ ಕೀರ್ತನೆ, ಲಾವಣಿ ಹಾಗು ನಾಟಕಗಳ ಮೂಲಕ ಜನಜಾಗೃತಿಯನ್ನು ಮಾಡುತ್ತ ನಡೆದರು. ೧೯೧೨ರಲ್ಲಿ ನಿವೃತ್ತರಾದ ಬಾಳಾಚಾರ್ಯರು ಮುಂದೆ ಎರಡು ವರ್ಷಗಳಲ್ಲಿ ಪತ್ನಿಯನ್ನು ಕಳೆದುಕೊಂಡರು. ಆ ಬಳಿಕ ತಮ್ಮನ್ನು ರಾಷ್ಟ್ರಕಾರ್ಯಕ್ಕೆ ಪೂರ್ಣವಾಗಿ ಸಮರ್ಪಿಸಿಕೊಂಡರು.

೧೯೧೮ರಲ್ಲಿ ಧಾರವಾಡದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ, ‘ಬೇಡಲು ಬಂದಿಹೆ ದಾಸಯ್ಯ’ ಎನ್ನುತ್ತ ಮನೆಮನೆಗೆ ಹೋಗಿ ಹಣ ಸಂಗ್ರಹಿಸಿಕೊಟ್ಟರು.

ಕನ್ನಡ ದೇಶದೆ ದೊಡ್ಡವರಾದಿರಿ
ಕನ್ನಡವಿದ್ಯೆಯ ಗಳಿಸಿದಿರಿ
ಕನ್ನಡದಿಂದಲೆ ಸಿರಿವಂತರಾದಿರಿ
ಕನ್ನಡದೇಶದೆ ಹೆಸರಾದಿರಿ
ಅನ್ಯಭಾಷೆಗಳಂತೆ ಕನ್ನಡ ಭಾಷೆಗೆ
ಉನ್ನತಿಕೆಯ ತರಬೇಕೆಂದು
ಹೊನ್ನು ಕೂಡಿಸಲಿಕ್ಕೆ ಬಂದಿಹನಾತನು
ಮನ್ನಿಸಿ ಹಣವನ್ನು ಕೊಡಿರಮ್ಮಾ
ಕಾಸಿಗಲ್ಲವು ನಿಮ್ಮ ಸೋಸಿಗೆ ಬೆಲೆಯಿದೆ
ಕಾಸಲ್ಲವೆ ಕೋಟಿಯ ಮೂಲವು
ಈ ಶಾಸ್ತ್ರವ ಶಾಂತವಿಠ್ಠಲನೋಳ್ ಕಲಿತನು
ಸಾಸಿರವಿರದಂತೆ ತಂದಿಹನು.

ಮುಂಬೈ ಕರ್ನಾಟಕದ ನಾಡಗೀತೆಯಾಗಿ ಪ್ರಸಿದ್ಧಿ ಪಡೆದಿದ್ದ ರಕ್ಷಿಸು ಕರ್ಣಾಟಕ ದೇವಿ[೧] ಕವನದ ಕೆಲವು ಸಾಲುಗಳು:

ಕದಂಬಾದಿ ಸಂಪೂಜಿತ ಚರಣೆ
ಗಂಗಾರಾಧಿತ ಪದನಖ ಸರಣಿ
ಚಲುಕ್ಯರುತ್ತಮ ಕಾಂಚೀ ಕಿರಣೆ
ರಾಷ್ಟ್ರಕೂಟ ಮಣಿಕಂಠಾಭರಣೆ
ಚಾಲುಕ್ಯಾಂಕುಶ ಶೋಭಾವರಣೆ.

ಗೌರವ[ಬದಲಾಯಿಸಿ]

ಧಾರವಾಡದಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘದ ವಾಚನಾಲಯಕ್ಕೆ ಶಾಂತಕವಿಗಳ ಗೌರವದಲ್ಲಿ “ಶಾಂತೇಶ ವಾಚನಾಲಯ” ಎಂದು ಹೆಸರಿಸಲಾಗಿದೆ.

ಕೃತಿಗಳು[ಬದಲಾಯಿಸಿ]

ಶಾಂತಕವಿಗಳ ಒಟ್ಟೂ ಕೃತಿಗಳು ೭೦ ಕ್ಕೂ ಹೆಚ್ಚು. [೧]

ಶ್ರೀ ವಿದ್ಯಾರಣ್ಯ ಚರಿತ್ರೆ

ಕಾವ್ಯ[ಬದಲಾಯಿಸಿ]

  • ಆನಂದ ಲಹರಿ
  • ಋತುಸಂಹಾರ
  • ಪುಷ್ಪಬಾಣ ವಿಲಾಸ
  • ಮುಕುಂದ ದಾನಾಮೃತ
  • ಮೇಘದೂತ (೧೮೯೨)
  • ರಘುವಂಶ (ಎರಡನೆಯ ಸರ್ಗ)
  • ರಸಿಕಾರಸಿಕ ವಿಚಾರ
  • ವಿರಹತರಂಗ (೧೮೮೫)
  • ವಿಷಕಂಠ ಖಡ್ಗ

ಕೀರ್ತನ[ಬದಲಾಯಿಸಿ]

  • ಗಜೇಂದ್ರ ಮೋಕ್ಷ(೧೮೯೧)
  • ರಾವಣ ವೇದಾವತೀ
  • ಶ್ರೀಮತಿ ಸ್ವಯಂವರ
  • ಹರಿಮಿಶ್ರೋಪಾಖ್ಯಾನ
  • ಮುಕುಂದ ನಾಮಮೃತ
  • ವಿದ್ಯಾರಣ್ಯಚರಿತ್ರೆ- ಇದು archive.org ಯ ತಾಣದಲ್ಲಿ ಇಲ್ಲಿ ಲಭ್ಯವಿದೆ.

ಶಾಸ್ತ್ರ[ಬದಲಾಯಿಸಿ]

ನಾಟಕ[ಬದಲಾಯಿಸಿ]

  • ಅಂಜನೇಯ ವಿಜಯ
  • ಉಷಾಹರಣ (೧೮೭೩)
  • ಕವಿಕಂಠಕುಠಾರ
  • ಕಾಳಿದಾಸ
  • ಕೀಚಕವಧಾ (೧೮೯೧)
  • ಕೃಷ್ಣ ರಾಧಿಕಾ ವಿಲಾಸ
  • ಗಾಲವ ಚಿತ್ರಸೇನೆ
  • ಚಂದ್ರಾವಳಿ
  • ಜರಾಸಂಧ ವಧಾ
  • ನಾಗಾನಂದ
  • ನಾರದ ಕುಚೇಷ್ಟಾ
  • ಪಾರ್ವತೀ ಪರಿಣಯ (ಗಿರಿಜಾ ಕಲ್ಯಾಣ)
  • ಬೃಹಜ್ಜಂಬೂ ಚರಿತ್ರ
  • ಭುಜಂಗೋಪದೇಶ
  • ಮಯೂರಧ್ವಜ ಪ್ರತಾಪ
  • ರಾವಣ ವಧಾ
  • ವತ್ಸಲಾಹರಣ
  • ವಾಸಷ್ಟ ನಾಯಕರ ಫಾರ್ಸು
  • ವಿಶ್ವಾಮಿತ್ರ ತಪೋಭಂಗ ಅಥವಾ ಶಕುಂತಲಾ ಉತ್ಪತ್ತಿ
  • ವ್ಯಭಿಚಾರಣಾರ್ಥ ಸಿಂಧು
  • ಶ್ರೀಯಾಳ ಸತ್ವ ಪರೀಕ್ಷಾ
  • ಸೀತಾರಣ್ಯಪ್ರವೇಶ ನಾಟಕ (೧೮೮೬)
  • ಸೀತಾಸ್ವಯಂವರ
  • ಸುಂದೋಪಸುಂದ ವಧೆ
  • ಸುಧನ್ವ ವಧೆ
  • ಹರಗರ್ವಪರಿಹಾರ
  • ಹರಿಶ್ಚಂದ್ರ ಸತ್ವಪರೀಕ್ಷಾ (೧,೨)

ಇತರ[ಬದಲಾಯಿಸಿ]

  • ಅಡ್ಡ ಕಥೆಗಳ ಬುಕ್ಕು
  • ಅಲಾವಿ ಜಂಗು
  • ಬರಗಾಲರಸು
  • ವೇಶ್ಯಾವಾಟಿಕಾ ಸಂಚಾರ
  • ಶೃಂಗಾರ ವಚನ ಸಂಗ್ರಹ (೧,೨) (೧೮೯೧)
  • ಶೃಂಗಾರಸಾಗರ
  • ಶ್ರೀಕೃಷ್ಣ ಮೋಹಿನಿ ದುಂದುಮೆ
  • ಸತ್ವದರ್ಶನ

ಹೆಚ್ಚಿ ನೋದಿಗೆ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

  1. ೧.೦ ೧.೧ ೧.೨ ೧.೩ ಶಾಂತಕವಿ, ಕಣಜ ದಿನಮಣಿ[ಶಾಶ್ವತವಾಗಿ ಮಡಿದ ಕೊಂಡಿ]
"https://kn.wikipedia.org/w/index.php?title=ಶಾಂತಕವಿ&oldid=1145901" ಇಂದ ಪಡೆಯಲ್ಪಟ್ಟಿದೆ