ವಿದುರಾಶ್ವತ್ಥ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿದುರಾಶ್ವತ್ಥ
ವಿದುರಾಶ್ವತ್ಥ
ನಗರ
ದೇಶ ಭಾರತ
ರಾಜ್ಯಕರ್ನಾಟಕ
ಜಿಲ್ಲಾಚಿಕ್ಕಬಳ್ಳಾಪುರ
ಭಾಷೆಗಳು
 • ಅಧಿಕಾರಕನ್ನಡ
ಸಮಯ ವಲಯಯುಟಿಸಿ+5:30 (IST)
ಪಿನ್ ಕೋಡ್
561208
ಜಾಲತಾಣhttp://vidurashawatha.org/

ಸ್ಥಳದ ಇತಿಹಾಸ[ಬದಲಾಯಿಸಿ]

ಗೌರಿಬಿದನೂರು ತಾಲ್ಲೂಕಿನ ಬಳಿಯಿರುವ,ಚಿಕ್ಕಬಳ್ಳಾಪುರ ಜಿಲ್ಲೆ ವಿದುರಾಶ್ವತ್ಥ ಕ್ಷೇತ್ರ, ಪುರಾತನ ಅಶ್ವತ್ಥನಾರಾಯಣಸ್ವಾಮಿಯ ದೇವಾಲಯ ಮತ್ತು ಸುಬ್ರಹ್ಮಣ್ಯಸ್ವಾಮಿಯ ಸನ್ನಿಧಾನವಿರುವ ಪವಿತ್ರಭೂಮಿ. ಗೌರಿಬಿದನೂರಿಗೆ ೬ ಕಿ.ಮೀ.ದೂರದಲ್ಲಿ ನಾಗಸಂದ್ರವಿದೆ. ಇದಕ್ಕೆ, ೩ ಕಿ.ಮೀ.ದೂರದಲ್ಲಿ ವಿದುರಾಶ್ವತ್ಥ ಪುಣ್ಯಕ್ಷೇತ್ರವಿದೆ. ಮಹಾಭಾರತಕಾಲದ ಧೃತರಾಷ್ಟ್ರನ ಆಪ್ತಸಲಹೆಗಾರ,ಮಂತ್ರಿಯಾಗಿದ್ದ, ವಿದುರನು ಇಲ್ಲಿ ಒಂದು ಅಶ್ವತ್ಥ ವೃಕ್ಷವನ್ನು ನೆಟ್ಟು ಬೆಳೆಸಿದನೆಂಬ ಪ್ರತೀತಿಯಿದೆ. ಮಕ್ಕಳಾಗದೆ ಇರುವ ದಂಪತಿಗಳಿಗೆ ಇದು ಅತ್ಯಂತ ಪ್ರಶಸ್ತವಾದ ಕ್ಷೇತ್ರಸ್ಥಾನ. ದೇವಸ್ಥಾನದ ಇಕ್ಕೆಲಗಳಲ್ಲಿ ಸಹಸ್ರಾರು ನಾಗಪ್ಪನ ಶಿಲಾಮೂರ್ತಿಗಳು ತುಂಬಿವೆ. ಒಂದುಕಾಲದಲ್ಲಿ ಈ ನಾಗಪ್ಪನ ಮೂರ್ತಿಗಳೆಲ್ಲಾ ವಿಶಾಲವಾದ ಅಶ್ವತ್ಥವೃಕ್ಷದ ಅಡಿಯಲ್ಲಿಯೇ ಪ್ರತಿಷ್ಠೆ ಮಾಡಲಾಗಿತ್ತು. ಆದರೆ, ೨೦೦೧ ರಲ್ಲಿ ದುರ್ದೈವದಿಂದ ಈ ವೃಕ್ಷ ನೆಲಕ್ಕೆ ಕುಸಿದು ಬಿದ್ದು ಅಲ್ಲಿನ ಹಲವಾರು, ನಾಗರಕಲ್ಲಿಗೆ ಕ್ಷತಿ ಒದಗಿದ ವಿಷಯ ನಿಜಕ್ಕೂ ದುರದೃಷ್ಟಕರ.

ವಿದುರಾಶ್ವತ್ಥ, ಭಾರತದ ಸತ್ಯಾಗ್ರಹೀ ಸ್ವಾತಂತ್ರ್ಯ ಹೋರಾಟಗಾರರ ನೆಲೆವೀಡು ಕೂಡ[ಬದಲಾಯಿಸಿ]

ವಿದುರಾಶ್ವತ್ಥ, ೧೯೩೮ ರಲ್ಲಿ ದೇಶದ ಸ್ವಾತಂತ್ರ್ಯ ಹೋರಾಟಗಾರರ ತಾಲ್ಲೂಕುಮಟ್ಟದ ಚಳುವಳಿಯ ಕೇಂದ್ರವಾಗಿತ್ತೆಂಬುದು ಚಾರಿತ್ರ್ಯಾರ್ಹ ಸಂಗತಿ. ಹಳೆ ಮೈಸೂರಿನ ಮದ್ದೂರು ತಾಲ್ಲೂಕಿನ ಶಿವಪುರದಲ್ಲಿ ೧೯೩೮ ರ ಏಪ್ರಿಲ್, ೧೧ ರಂದು ಸ್ವಾತಂತ್ರ್ಯ ಚಳುವಳಿಯನ್ನು ಪ್ರಾರಂಭಿಸಿ ಚಾಲನೆ ಕೊಟ್ಟ ಶ್ರೀ ಟಿ. ಸಿದ್ದಲಿಂಗಯ್ಯ, ಕೆ. ಹನುಮಂತಯ್ಯ, ಶ್ರೀ. ಕೆ. ಸಿ. ರೆಡ್ಡಿ, ಶ್ರೀ ಭೂಪಾಳಂ ಚಂದ್ರಶೇಖರಯ್ಯ, ಹಾಗೂ ಇನ್ನೂ ಹಲವಾರು ಗಣ್ಯರು, ೧೯೩೮ ರ ಏಪ್ರಿಲ್ ೧೧, ರಂದು ಶಿವಪುರದಲ್ಲಿ ಅಧಿವೇಶನ ಮಾಡಿ ಧ್ವಜ ಸತ್ಯಾಗ್ರಹಕ್ಕೆ ಕರೆಕೊಟ್ಟರು. ಮುಂದುವರಿದ ಸತ್ಯಾಗ್ರಹದ ಹೋರಾಟದಲ್ಲಿ ೨೫.0೪.೧೯೩೮ ರಂದು ಪೋಲೀಸರು ಮಾಡಿದ ಗೋಲಿಬಾರಿನಲ್ಲಿ ಹಲವಾರು ಸತ್ಯಾಗ್ರಹಿಗಳು ಪ್ರಾಣತ್ಯಾಗಮಾಡಿದರು. ಅವರ ಪಾರ್ಥಿವ ಶರೀರಗಳನ್ನು ವಿದುರಾಶ್ವತ್ಥದ ದೇವಾಲಯದ ಸಮೀಪದಲ್ಲಿರುವ ಉದ್ಯಾನವನದಲ್ಲೇ ಹೂತು ಸ್ಮಾರಕವನ್ನು ಸ್ಥಾಪಿಸಿದ್ದಾರೆ. "ಸತ್ಯಾಗ್ರಹಸ್ಮಾರಕ ಭವನ," ಈ ಪಾರ್ಕಿನ ಹತ್ತಿರದಲ್ಲೇ ಇದೆ.

ಸಮಾಜಸೇವಕರ, ರಾಜಕೀಯ ಧುರೀಣರ ಬೀಡು[ಬದಲಾಯಿಸಿ]

ವಿದುರಾಶ್ವತ್ಥದಿಂದ ಸುಮಾರು ೫-೬ ಕಿಲೋಮೀಟರ್ ದೂರದ ನಾಗಸಂದ್ರ, ಸ್ವಾತಂತ್ರ್ಯ ಹೋರಾಟಗಾರ ಮತ್ತು ಸಮಾಜಸೇವಕ ಎನ್. ಸಿ. ನಾಗಯ್ಯ ರೆಡ್ಡಿ ಮತ್ತು ಅವರ ಸೋದರ ಎನ್. ಸಿ. ತಿಮ್ಮಾರೆಡ್ಡಿಯವರು ಹುಟ್ಟೂರು. ಅಲ್ಲಿನ ರೈತಾಪಿಜನ ಅಲ್ಲಿ ಭಾರತಮಾತಾ ದೇವಸ್ಥಾನವನ್ನು ಕಟ್ಟಿದ್ದಾರೆ. ಪ್ರತಿ ಆಗಸ್ಟ್ ೧೫ ರಂದು, ವಿಶೇಷ ಪೂಜೋತ್ಸವಗಳು, ಜಾನಪದ ಮನರಂಜನೆಯ ಕಾರ್ಯಕ್ರಮಗಳು ಜರುಗುತ್ತವೆ. ಆ ಸಮಯದಲ್ಲಿ ಸತ್ಯಾಗ್ರಹಿಗಳ ಮೇಲೆ ನಡೆಸಿದ ಹಿಂಸಾಚಾರವನ್ನು ನೆನಪುಮಾಡುವ ಲಾವಣಿಯ ಪ್ರವಚನವೂ ಆಗುತ್ತದೆ. ಪವನಸುತರು ಬರೆದು ಪ್ರಸ್ತುತಪಡಿಸಿದ " ರಾಜಕೀಯ ಧುರೀಣ ಎನ್. ಸಿ. ನಾಗಯ್ಯ ರೆಡ್ಡಿ" ಎಂಬ ಜೀವನಚರಿತ್ರೆಯ ಪುಸ್ತಕದಿಂದ ಹೆಕ್ಕಿ ಹಾಡುವ ಲಾವಣಿ, ಅಂದು ಬಹಳ ಪ್ರಸ್ತುತವಾಗುತ್ತದೆ. ಈ ಪುಸ್ತಕಕ್ಕೆ ಮುನ್ನುಡಿಯನ್ನು ಮಾಜೀಉಪರಾಷ್ಟ್ರಪತಿ, ಶ್ರೀ.ಬೀ.ಡಿ.ಜತ್ತಿಯವರು ಬರೆದಿದ್ದಾರೆ. ಅದರಲ್ಲಿ ಅವರು ದಾಖಲಿಸಿರುವ ಹೆಸರುಗಳು : ಕೇ.ಟಿ.ಭಾಷ್ಯಂ, ನಂಜುಂಡಯ್ಯ, ರುಮಾಲೆ ಚನ್ನಬಸವಯ್ಯ, ಟೀ.ರಾಮಾಚಾರ್, ಎಚ್.ಸಿ.ದಾಸಪ್ಪ,ರಾಮಸ್ವಾಮಿ, ನೀಲಕಂಠರಾವ್, ಪಟ್ಟಾಭಿಸೀತಾರಾಮಯ್ಯ, ಅನ್ನಪೂರ್ಣಮ್ಮ,ಎನ್.ಸಿ.ತಿಮ್ಮಾರೆಡ್ಡಿ. ಇದರಲ್ಲಿ ಪ್ರಮುಖ ಮುಂದಾಳತ್ವವನ್ನು ರುಮಾಲೆ ಚನ್ನಬಸವಯ್ಯನವರು ವಹಿಸಿಕೊಂಡಿದ್ದರು. ಸ್ವತಃ ಪೇಂಟರ್, ಮತ್ತು ಸೇವಾದಳದ ಸಂಚಾಲಕರಾಗಿದ್ದ ಅವರು, ’ತಾಯಿನಾಡು,’ ಕನ್ನಡ ದಿನಪತ್ರಿಕೆಯನ್ನು ೪ ವರ್ಷನಡೆಸಿಕೊಂಡು ಬಂದರು. ಅಲ್ಲಿನ ಎಮ್.ಎಲ್.ಸಿ.ಯಾಗಿ ಚುನಾಯಿತರಾಗಿದ್ದ, ಚೆನ್ನಬಸವಯ್ಯನವರು, " ಕರ್ನಾಟಕರಾಜ್ಯೋತ್ಸವ ಪ್ರಶಸ್ತಿ " ವಿಜೇತರು. ಕೋಲಾರಜಿಲ್ಲೆ ಕಾಂಗ್ರೆಸ್ ಸಮಿತಿ ಅದ್ಯಕ್ಷರಾಗಿರುವ ಶ್ರೀ ಎನ್. ಸಿ. ನಾಗಯ್ಯರೆಡ್ಡಿಯವರು, ವಿದುರಾಶ್ವತ್ಥದಲ್ಲಿ ಸ್ಥಾಪಿಸಿದ "ಸತ್ಯಾಗ್ರಹ ಸ್ಮಾರಕ ಪ್ರೌಢಶಾಲೆ, ಸುತ್ತಮುತ್ತಲ ಹಳ್ಳಿಯ ವಿದ್ಯಾರ್ಥಿಗಳಿಗೆ ವರದಾನವಾಗಿದೆ.

ಈ ವೀರ ಲಾವಣಿ ಇತಿಹಾಸದ ಭವ್ಯಪುಟಗಳ ನೆನಪಿನ ಸಂಕೇತ[ಬದಲಾಯಿಸಿ]

"ಒಂಭೈನೂರ್ ಮೂವತ್ತೆಂಟನೆ ಏಪ್ರಿಲ್

ತಿಂಗಳ ಇಪ್ಪತ್ತೈದರೊಳು ತುಂಬಿರೆ

ಬಹು ಪ್ರಜೆ ಸಂಭ್ರಮದಿಂದಲಿ

ವಿದುರಾಶ್ವತ್ಥ ಜಾತ್ರೆಯೊಳು,

ಸುತ್ತಮುತ್ತಲು ಲಾಠಿ ಹೊಡೆತಗಳ

ಮತ್ತೆ ಗುಂಡಿನ ಏಟುಗಳ್ ಸತ್ತ

ಹೆಣಗಳ

ಲೆಕ್ಕವಿಲ್ಲವು ಹೊತ್ತರೆಷ್ಟೋ

ಗುಪ್ತದೊಳ್".

'ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ'ದ ನೆನೆಪುತರುವ 'ವಿದುರಾಶ್ವತ್ಥ'[ಬದಲಾಯಿಸಿ]

ಗೌರಿಬಿದನೂರಿನ ಬಳಿಯ ವಿದುರಾಶ್ವತ್ಥದಲ್ಲಿ ಏಪ್ರಿಲ್ ೨೫ ೧೯೩೮ ರಲ್ಲಿ ಭಾರತದ ಸ್ವಾತಂತ್ರ್ಯಸತ್ಯಾಗ್ರಹಿ ಹೋರಾಟಗಾರಮೇಲೆ ಹಿಂಸಾಚಾರದ ಗೋಲೀಬಾರನ್ನು ನೆನಪಿಗೆ ತರುವ ಈ ಲಾವಣಿ, ೧೯೧೯ ರ, ಏಪ್ರಿಲ್,೧೩ ರಂದಿನ, ಪಂಜಾಬಿನ "ಜಲಿಯನ್ ವಾಲಾ ಬಾಗ್," ಹತ್ಯಾಕಾಂಡದ ಕ್ರೌರ್ಯವನ್ನು ನೆನಪಿಸುತ್ತದೆ. ಪಂಜಾಬಿನ ಜಲಿಯನ್ ವಾಲಾ ಬಾಗಿನಲ್ಲಿ, ನಮ್ಮದೇಶದ ನೂರಾರು ಸ್ವಾತಂತ್ರ್ಯ ಸತ್ಯಾಗ್ರಹ ಆಂದೋಳನಕಾರರು, ಬ್ರಿಟಿಷರ ಗುಂಡಿನೇಟಿಗೆ ಬಲಿಯಾಗಿ, ತಮ್ಮ ಪ್ರಾಣಗಳನ್ನು ಬಲಿದಾನಮಾಡಿದರು.