ವರದಕ್ಷಿಣೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


೧೯೭೫ರಲ್ಲಿ ಹೈದರಾಬಾದಿನ ಮಹಿಳಾ ಪ್ರಗತಿಪರ ಸಂಘಟನೆ[ಬದಲಾಯಿಸಿ]

ಈಗಾಗಲೇ ಗಮನಿಸಿರುವಂತೆ ಸ್ವಾತಂತ್ರ್ಯ ನಂತರದ ಮೊದಲ ಎರಡು ದಶಕಗಳ ಚಟುವಟಿಕೆ ಹೆಚ್ಚು ಕಡಿಮೆ ಸರ್ಕಾರ ಆಯೋಜಿಸಿದ್ದ ಕಾರ್ಯಕ್ರಮಗಳಾಗಿದ್ದು,ಈ ಅವಧಿಯಲ್ಲಿ ಕೆಲವು ಕಾನೂನುಗಳು,ಕಾನೂನಿಗೆ ತಿದ್ದುಪಡಿಗಳು ಜಾರಿಗೆ ಬಂದರೂ ಮಹಿಳಾ ಚಳುವಳಿಗಳ ದೃಷ್ಟಿಯಿಂದ ೧೯೭೦ರ ದಶಕದಿಂದ ಮತ್ತೇ ಚಲನೆಯನ್ನು ಕಾಣಬಹುದಾಗಿದೆ. ೧೯೭೫ರ ಅಂತರಾಷ್ಟ್ರೀಯ ಮಹಿಳಾ ವರ್ಷದ ನಂತರದಲ್ಲಿ ಮಹಿಳಾ ಚಳುವಳಿಗಳು ಪಡೆದುಕೊಂಡ ವಿಭಿನ್ನ ಆಯಾಮದ ಪ್ರಮುಖ ಅಂಶಗಳಲ್ಲಿ ಒಂದು ವರದಕ್ಷಿಣೆಯ ವಿರುದ್ಧದ ಮೊದಲ ಸಂಘಟಿತ ಮಹಿಳಾ ಪ್ರತಿಭಟನೆ ೧೯೭೫ರಲ್ಲಿ ಹೈದರಾಬಾದಿನ ಮಹಿಳಾ ಪ್ರಗತಿಪರ ಸಂಘಟನೆಯ ನೇತೃತ್ವದಲ್ಲಿ ಜರುಗಿತು. ಈ ಪ್ರತಿಭಟನೆಯಲ್ಲಿ ಎರಡು ಸಾವಿರದಷ್ಟು ಜನ ಭಾಗವಹಿಸಿದ್ದರೂ ಇದೊಂದು ಪೂರ್ಣ ಪ್ರಮಾಣದ ಹೋರಾಟವನ್ನು ತತ್ಕ್ಷಣದಲ್ಲಿ ರೂಪಿಸಿಕೊಳ್ಳಲಾಗಲಿಲ್ಲ. ದೇಶದಲ್ಲಿ ಜಾರಿಗೊಂಡ ತುರ್ತು ಪರಿಸ್ಥಿತಿಯು ಎಲ್ಲಾ ಬಗೆಯ ಸಂಘಟಿನಾತ್ಮಕ ಪ್ರಯತ್ನಗಳನ್ನು ನಿಷೇಧಗೊಳಿಸಿದ್ದರಿಂದ ಈ ಕುರಿತಂತೆ ಮುಂದುವರೆದ ಹೋರಾಟ ರೂಪಿಸುವುದು ಆಗ ಸಾಧ್ಯವಾಗಲಿಲ್ಲ. ಆದರೆ ತುರ್ತು ಪರಿಸ್ಥಿತಿಯು ಮುಗಿದ ಕೂಡಲೇ ದೆಹಲಿಯಲ್ಲಿ ವರದಕ್ಷಿಣೆ ವಿರುದ್ಧ ಪ್ರಬಲ ಆಂದೋಲನವೊಂದು ಆರಂಭಗೊಂಡಿತು. ಈ ಹೋರಾಟದಲ್ಲಿ ವರದಕ್ಷಿಣೆಯ ಕಾರಣಕ್ಕಾಗಿ ಹೆನ್ನು ಮಕ್ಕಳಿಗೆ ನೀಡುವ ಕಿರುಕುಳ, ವರದಕ್ಷಿಣೆಯ ಸಾವು ಹಾಗು ಆತ್ಮ ಹತ್ಯೆಗಳಂತಹ ವಿಚಾರಗಳ ಬಗ್ಗೆ ಜನಾಭಿಪ್ರಾಯ ರೂಪಿಸಲು ಹಾಗು ಕಾನೂನು ನಿರ್ಮಿಸಲು ಒತ್ತಡವನ್ನು [೧] ತರಲಾಯಿತು.

ದೆಹಲಿಯ ನಾರಿ ರಕ್ಷಾ ಸಮಿತಿ[ಬದಲಾಯಿಸಿ]

ದೆಹಲಿಯ ಮಹಿಳಾ ದಕ್ಷತಾ ಸಮಿತಿ, ಸ್ತ್ರೀ ಸಂಘರ್ಷ ಸಂಘಟನೆ ಮುಂತಾದ ಸಂಸ್ಥೆಗಳು ಸಮಕಾಲೀನ ಪ್ರಮುಖ ಮಹಿಳಾ ವಿಷಯವಾಗಿ ವರದಕ್ಷಿಣೆ ಹಾಗೂ ವರದಕ್ಷಿಣೆ ಸಂಬಂಧಿ ಕಿರುಕುಳಗಳನ್ನು ಮುಂಚೂಣಿಗೆ ತಂದವು. ೧೯೭೯ರ ಜೂನ್ ೧ರಂದು ಸ್ತ್ರೀಸಂಘರ್ಷ ಸಂಘಟನೆಯು ತಲ್ವಿಂದರ್ ಕೌರ್ ಎಂಬ ದೆಹಲಿ ನಿವಾಸಿಯೊಬ್ಬಳ ಮರಣ ಸಂದರ್ಭ ಹೇಳಿಕೆಯನ್ನಾಧರಿಸಿ ಈ ಹೋರಾಟವನ್ನು ರೂಪಿಸಿತ್ತು. ಅದೇ ತಿಂಗಳ ಜೂನ್ ೧೨ರಂದು ದೆಹಲಿಯ ನಾರಿ ರಕ್ಷಾ ಸಮಿತಿಯು ಬೃಹತ್ ಪ್ರತಿಭಟನೆಯನ್ನು ರೂಪಿಸಿತ್ತು. ಹಾಗೂ ಈ ಪ್ರತಿಭಟನೆಯು ಪತ್ರಿಕೆಗಳ ಮೂಲಕ ಸಾಕಷ್ಟು ಜನತೆಯ ಗಮನವನ್ನು ಸೆಳೆಯಿತು. ಆ ಹೋರಾಟ ಆರಂಭಗೊಳ್ಳುವವರೆಗೆ ಗಂಡನ ಮನೆಯಲ್ಲಿ ಅಕಾಲವಾಗಿ ಮಹಿಳೆ ತುತ್ತಾಗುವ ಬೆಂಕಿ ಅನಾಹುತವನ್ನು ಆಕಸ್ಮಿಕ ದುರ್ಘಟನೆ ಎಂದೋ ಆತ್ಮಹತ್ಯೆಯ ಪ್ರಯತ್ನವೆಂದೋ ಮಾತ್ರ ಪರಿಗಣಿಸಲಾಗುತ್ತಿತ್ತು. ಪೋಲೀಸ್ ಇಲಾಖೆಯು ಅದನ್ನೊಂದು ಕುಟುಂಬದೊಳಗಿನ ದುರಂತವೆಂಬಂತೆ ಗ್ರಹಿಸಿ ತನ್ನ ತನಿಖೆಯನ್ನು ಮುಕ್ತಾಯಗೊಳಿಸುತ್ತಿತ್ತು.[೨]

ಆದರೆ ಮೊದಲ ಬಾರಿಗೆ ಮಹಿಳಾ ಚಳುವಳಿಯು ಇದೊಂದು ವರಕ್ಷಿಣೆ ಸಂಬಂಧಿ ಕಿರುಕುಳ ಪ್ರಯತ್ನವೆಂದು ಗುರುತಿಸುವ ಮೂಲಕ ಕಾನೂನು ಈ ವಿಚಾರದಲ್ಲಿ ಮಧ್ಯ ಪ್ರವೇಶಿಸಬೇಕೆಂಬ ಒತ್ತಡ ತಂದಿತು. ವರದಕ್ಷಿಣೆಯು ಕೇವಲ ವಿವಾಹ ಸಂಬಂಧ ಆಚರಣೆ ಮಾತ್ರವಾಗಿದೇ ಅದೊಂದು ಸಾಮಾಜಿಕ ಸಮಸ್ಯೆ, ಪ್ರಮುಖ ಮಹಿಳಾ ವಿಷಯ ಎಂಬುದಾಗಿ ನಿರೂಪಿಸಿತು. ಪತಿಯ ಗೃಹದಲ್ಲಿನ ಹೆಣ್ಣೊಬ್ಬಳ ಮರಣವು ತನಿಖೆಗೊಳ್ಳಲೇ ಬೇಕಾದ ವಿಚಾರವಾಗಿದ್ದು ಈ ತನಿಖೆಯು ದುರಂತಕ್ಕೀಡಾದ ಹೆಣ್ಣಿನ ಮರಣ ಕುಟುಂಬದವರ ಹೇಳಿಕೆ ಹಾಗು ಸ್ನೇಹಿತರ ನೆರೆಯವರ ಸಾಕ್ಷಿಗಳನ್ನು ಆಧರಿಸಿದ್ದಾಗಿರಬೇಕು ಎಂದು ವಾದಿಸಿದವು.

ಭಾರತದಲ್ಲಿನ ವಿವಾಹ ಪದ್ಧತಿ ಎರಡು ಬಗೆ[ಬದಲಾಯಿಸಿ]

  • ಹೀಗೆ ವರದಕ್ಷಿಣೆ ಸಂಬಂಧಿ ಆಂದೋಲನವು ೧೯೭೯ರ ಸರಿಸುಮಾರಿನಲ್ಲಿ ಆರಂಭಗೊಂಡಿತೆಂದರೆ ಈ ಸಮಸ್ಯೆ ಸಹಜ ಎಂದು ಭಾವಿಸಬೇಕಿಲ್ಲ. ಇದುವರೆಗೆ ನಡೆದಿರುವ ಅಧ್ಯಯನಗಳು ದೃಡಪಡಿಸುವಂತೆ ಭಾರತದಲ್ಲಿನ ವಿವಾಹ ಪದ್ಧತಿಯನ್ನು ಎರಡು ಬಗೆಯಲ್ಲಿ ವಿಂಗಡಿಸಬಹುದು. ಹೀಗೆ ವರದಕ್ಷಿಣೆ ಸಂಬಂದಿ ಆಂದೊಲನವು ೧೯೭೯ರ ಸರಿಸುಮರಿನಲ್ಲಿ ಆರಂಭಗೊಂಡಿತೆಂದರೆ ಈ ಸಮಸ್ಯೆ ಅಂದು ಉದ್ಬವಿಸಿದ್ದಂದು ಭಾವಿಸಬೇಕಿಲ್ಲ. ವಿದ್ವಾಂಸರು ವರದಕ್ಷಣೆಯೆಂಬುದು ಪ್ರಾಚೀನ ಆಚರಣೆ ಎಂಬುದಾಗಿ ರಾಮಾಯಣ ,ಮಹಾಭಾರತದ ಕಾಲಗಳಿಂದಲೇ ಗುರುತಿಸುತ್ತಾರೆ. ಇದುವರೆಗೆ ನಡೆದಿರುವ ಅಧ್ಯಯನಗಳು ದೃಡಪಡಿಸುವಂತೆ ಭಾರತದಲ್ಲಿನ ವಿವಾಹ ಪದ್ಧತಿಯನ್ನು ಎರದು ಬಗೆಯಲ್ಲಿ ವಿಂಗಡಿಸಬಹುದು.
    • ೧. ವರದಕ್ಷಿಣೆ ಆಧಾರಿತ ವಿವಾಹ. ಇದು ವೈದಿಕ ವಿವಾಹ ಪದ್ಧತಿ.[೩]
    • ೨. ಕನ್ಯಾ ಶುಲ್ಕ(ವಧು ದಕ್ಷಿಣೆ)ಆಧಾರಿತ ವಿವಾಹ. ಇದು ಅವೈದಿಕ ವಿವಾಹದ ಪದ್ಧತಿ. ಇಂದಿನ ಸಮಾಜದಲ್ಲಿ ಆದರೆ ವರದಕ್ಷಿಣೆ ಪದ್ಧತಿ ಅವೈದಿಕ ಸಮಾಜವನ್ನು ಆವರಿಸಿದ್ದು,ಕೊನೆಗೆ ಇಸ್ಲಾಮ್,ಕ್ರಿಶ್ಚಿಯನ್ನಂತಹ ಅನ್ಯ ಧರ್ಮಗಳನ್ನು ವ್ಯಾಪಿಸಿದೆ. ಕನ್ಯಾಶುಲ್ಕದ ಆಚರಣೆಯು ಮಾತ್ರ ಬೇರೆ ಬೇರೆ ಹೆಸರುಗಳಲ್ಲಿ ಸಾಂಕೇತವಾಗಿ ಇನ್ನೂ ಹಲವಾರು ಬುಡಕಟ್ಟುಗಳಲ್ಲಿ ಉಳಿದುಕೊಂಡಿರುವುದನ್ನು ಗುರುತಿಸಬಹುದು. ನಮ್ಮ ಸಮಾಜದಲ್ಲಿ ಕನ್ಯೆಗೆ ಉಡುಗೊರೆ ನೀಡಿದರೆ ಮಾತ್ರ ಕನ್ಯೆಯು ಮಾರಟವಾಗುತ್ತದೆಂಬ ವ್ಯಾಖ್ಯಾನದೊಂದಿಗೆ ನಿರಾಕರಣೆಗೊಳ್ಳುತ್ತಲೆ,ವರನಿಗೆ ಕೊಡುವ ಉಡುಗೊರೆಯು ವರನ ಶ್ರೇಷ್ಟತೆಯನ್ನು ಪುರಸ್ಕರಿಸುವ ದಕ್ಷಿಣೆಯಾಗಿ ಸ್ಥಾಪಿತವಾಯಿತು. ಪುರುಷನನ್ನು ಸಮಾಜದ ಕೇಂದ್ರವಾಗಿ,ಯಜಮಾನನಾಗಿ,ಪರಿಪೂರ್ಣಗೊಳಿಸಲು ಹೊರಟ ಪಿತೃಪ್ರಧಾನತೆಯು ವರದಕ್ಷಿಣೆಯನ್ನು ಒಂದ ಪ್ರಮುಖ ಅಂಶವಾಗಿ ಪರಿಗಣಿಸಿ ಚಲಾವಣೆಗೊಳಿಸಿತು.
  • ವರದಕ್ಷಿಣೆಯಿಂದ ತಪ್ಪಿಸಿಕೊಳ್ಳುವ ಮಾರ್ಗವಾಗಿ ಹೆಣ್ಣು ಶಿಶುಹತ್ಯೆ,ಭ್ರೂಣಹತ್ಯೆಗಳಂತಹ ಅಮಾನವೀಯ ಪದ್ಧತಿಗಳನ್ನು ಅಳವಡಿಸಿಕೊಂಡಿತು. ವರದಕ್ಷಿಣೆ ಎಂಬುದು ಹೆಣ್ಣಿನಿಂದ ಕುಟುಂಬಕ್ಕೆ ಒದಗುವ ಅಪಾಯವಾಗಿ ಮಾತ್ರ ಗ್ರಹಿಸಿ ಹೆಣ್ಣುಗಳ ಹತ್ಯೆಗೆ,ಅನಾಧರಣೆಗೆ ತೊಡಗಿತು. ಹಾಗಾಗಿ ಸಮಾಜ ಸುಧಾರಕರು ವರದಕ್ಷಿಣೆಯ ನಿರಾಕರಣೆಯು ಪುರುಷನ ಆತ್ಮ ಸಮ್ಮಾನದ ವಿಚಾರ ಎಂಬುದಾಗಿ ಪ್ರತಿಪಾದಿಸಿದರು.

೧೯೬೧ ರ ವರದಕ್ಷಿಣೆ ನಿಷೇಧ ಕಾನೂನು[ಬದಲಾಯಿಸಿ]

  • ೧೯-೪-೨೦೧೭;
  • ೧೯೬೧ರಲ್ಲಿ ಹೊರಡಿಸಲಾದ "Anti dowry act" ನಂತರವಂತೂ ಕಾಣಿಕೆ, ಸೇವೆಗಳ ರೂಪವು ಮತ್ತು ಬಲಗೊಂಡು ಬಹುರೂಪಿ ವರದಕ್ಷಿಣೆ ಪದ್ಧತಿ ರೂಢಿಗೆ ಬಂದಿತು. ವರದಕ್ಷಿಣೆಯು ಅವಕಾಶವನ್ನು ಹೆಚ್ಚಿಸುವಂತೆ ಹೊಸ ಸಂಪ್ರದಾಯಗಳು ರೂಢಿಗೆ ಬಂದವು. ವರದಕ್ಷಿಣೆ ಪಡೆಯದ ಸಂದರ್ಭದಲ್ಲಿ ಕೂಡ ಗಂಡಿನ ಕುಟುಂಬವು ಸಂಕೋಚವಿಲ್ಲದೆ ಈ ಸೇವೆಯನ್ನು ತಮ್ಮ ಹಕ್ಕೆಂದು ಪಡೆಯತೊಡಗಿದವು.
  • ಇಷ್ಟಾದರೂ ಕೂಡ ವರದಕ್ಷಿಣೆ ಸಂಬಂಧಿ ಕ್ರೌರ್ಯ ಮತ್ತು ಉಲ್ಬಣಿಸುತ್ತಲೇ ಮುಂದುವರೆದಿದೆ. ವಿವಾಹವನ್ನು ಒಂದು ಜನ್ಮ ಜನ್ಮಾಂತರದ ಪವಿತ್ರ ಬಂಧವೆಂದು ಕರೆಯುತ್ತಲೇ ವ್ಯಾಪರವಾಗಿ ನಡೆಸಲಾಗುತ್ತಿದೆ. ಪಿತೃಪ್ರಧಾನ ವ್ಯವಸ್ಥೆಯಲ್ಲಿ ವಿವಾಹದಸುತ್ತಲೇ ಸುತ್ತುತ್ತಿರುವ ಹೆಣ್ಣು ಅದನ್ನು ನಿರಾಕರಿಸಲಾಗದೆ,ಸುಧಾರಿಸಲಾಗದೆ ಕೊನೆಗೆ ಪ್ರತಿಭಟಿಸಿ ಹೊರಬರಲಾರದೆ ಅತ್ಯಂತ ಅಸಹಾಯಕ ಸ್ಥಿತಿಯಲ್ಲಿ ಬಲಿಯಾಗುತ್ತಿದ್ದಾಳೆ. ನಾಲ್ಕು ಗೋಡೆಗಳಿಂದ ಸಿಡಿದು ಆಚೆ ಬಂದು ದಾಖಲಾಗುವ ಕೇಸುಗಳು ಕೂಡ ಇಡೀ ಸಮಾಜದ ಪುರುಷಪ್ರಧಾನ ನಿಲುವಿನ ರಾಜಕಾರಣದಿಂದಾಗಿ ನ್ಯಾಯ ಪಡೆಯಲಾರದೆ ಹೋಗಿತ್ತಿದೆ. FIR ಫೈಲು ಮಾಡಿದ ಘಟನೆಗಳಲ್ಲಿ ಬಹುಪಾಲಿನವು ಸಾಕ್ಶ್ಯಧಾರಗಳಿಲ್ಲದೆ ಬಿದ್ದು ಹೋಗುತ್ತಿದೆ. ಹೆಣ್ಣಿನ ಮನೆಯವರ ಆಕ್ರೋಶವು ಅತ್ಯಂತ ಭಾವುಕ ನೆಲೆಯದಾಗಿದ್ದು, ಕಾನೂನು ವ್ಯವಸ್ಥೆ ವಿಳಂಬದಿಂದಾಗಿ ಬಹುಪಾಲು ಕೇಸುಗಳು ಹಾಗೇ ತಣ್ಣದಾಗುತ್ತದೆ. ಸತ್ತವಳು ತಿರುಗಿ ಬರುವಳೆ ಎಂಬ ದಾರ್ಶನಿಕತೆ,ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಎಂಬ ನಿರ್ಲಕ್ಷ್ಯಗಳು ತವರಿನ ಇಚ್ಛಾಶಕ್ತಿಯನ್ನು ಕರಗಿಸುತ್ತದೆ. ಒಟ್ಟಾರೆಯಾಗಿ ಪುರುಷನ ಶ್ರೇಷ್ಟತೆಯನ್ನು,ಅಧಿಕಾರವನ್ನು ಒಟ್ಟು ಸಮಾಜವೇ ಸಮ್ಮತಿಸಿರುವಾಗ ಹೆಣ್ಣಿನ ಬಾಳಿ ಬದುಕುವ ಹಕ್ಕ್ಕು ಆತನ ಕೃಪಾಶ್ರಿತ್ವಾದುದು ಮಾತ್ರವಾಗುತ್ತದೆ.

ವರದಕ್ಷಿಣೆ ನಿಷೇಧ ಕಾಯ್ದೆಯ ದುರುಪಯೋಗ ತಡೆ[ಬದಲಾಯಿಸಿ]

  • 2015ರ ನವೆಂಬರ್‌ ತಿಂಗಳಿನಲ್ಲಿ ಮುಂಬೈನ ಸಾಫ್ಟ್‌ವೇರ್‌ ಉದ್ಯೋಗಿ ಸತೀಶ್‌ ಎಂಬುವರು ಹೆಂಡತಿಯ ವಿರುದ್ಧ ದೂರು ದಾಖಲು ಮಾಡಿ ಮಾಧ್ಯಮಗಳಲ್ಲಿ ಚರ್ಚೆಗೆ ಕಾರಣರಾದರು. ಅದೇ ರೀತಿ, ಇತ್ತೀಚೆಗೆ ಬೆಂಗಳೂರಿನ ಟೆಕಿ ಮಂಜುನಾಥನ್‌ ಕೂಡ ಇದೇ ಹಾದಿ ತುಳಿದು ಎಲ್ಲರ ಹುಬ್ಬೇರಿಸಿದ್ದಾರೆ.
  • ತಮ್ಮ ಹೆಂಡತಿಯ ತವರು ಮನೆಯವರು ತಮಗೆ ವರದಕ್ಷಿಣೆ ನೀಡಿರುವುದು ತಪ್ಪು ಎಂದು ಅವರ ವಿರುದ್ಧ ‘ವರದಕ್ಷಿಣೆ ನಿಷೇಧ ಕಾಯ್ದೆ’ ಅಡಿ ಇವರಿಬ್ಬರೂ ದೂರು ದಾಖಲಿಸಿರುವುದೇ ಇಷ್ಟೆಲ್ಲಾ ಚರ್ಚೆಗೆ ಕಾರಣ! ಈ ಕಾಯ್ದೆಯ ಪ್ರಕಾರ ವರದಕ್ಷಿಣೆ ಪಡೆಯುವುದು ಮಾತ್ರವಲ್ಲದೆ ಅದನ್ನು ನೀಡುವುದು ಕೂಡ ಅಪರಾಧ ಆಗಿರುವುದರಿಂದ ಹೆಂಡತಿಯ ಪೋಷಕರನ್ನೂ ಶಿಕ್ಷಿಸಿ ಎಂದು ದೂರು ದಾಖಲು ಮಾಡಿದ್ದಾರೆ. ಮುಂಬೈ ಪ್ರಕರಣದಲ್ಲಿ ಅಲ್ಲಿಯ ಮ್ಯಾಜಿಸ್ಟ್ರೇಟ್‌ ಕೋರ್ಟ್‌, ಹೆಂಡತಿ ಹಾಗೂ ಆಕೆಯ ತಂದೆಯ ಕುಟುಂಬದವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸುವಂತೆ ಪೊಲೀಸರಿಗೆ ಆದೇಶಿಸಿದೆ. ಬೆಂಗಳೂರಿನ ಪ್ರಕರಣದಲ್ಲಿ ಪೊಲೀಸರು ಪ್ರಥಮ ಮಾಹಿತಿ ವರದಿ (ಎಫ್‌ಐಆರ್‌) ದಾಖಲು ಮಾಡಿದ್ದಾರೆ. ಇವೆರಡೂ ಪ್ರಕರಣಗಳು ಇನ್ನೂ ಇತ್ಯರ್ಥಕ್ಕೆ ಬಾಕಿ ಇವೆ.

ಕಾಯ್ದೆಯ ದುರುಪಯೋಗ[ಬದಲಾಯಿಸಿ]

  • ‘ವರದಕ್ಷಿಣೆ ನಿಷೇಧ ಕಾಯ್ದೆ’ಯ ದುರುಪಯೋಗ ಆಗುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್‌ ಆತಂಕ ವ್ಯಕ್ತಪಡಿಸಿದ ಬೆನ್ನಲ್ಲೇ, 2014ರಲ್ಲಿ ಕಾಯ್ದೆಗೆ ತಿದ್ದುಪಡಿ ತರುವ ಕುರಿತು ಕೇಂದ್ರ ಸರ್ಕಾರ ಚರ್ಚೆ ಶುರು ಮಾಡಿತ್ತು. ಆದರೆ ಅದಿನ್ನೂ ಚರ್ಚೆಯ ಹಂತದಲ್ಲಿಯೇ ಇದೆ. ಕಳೆದ ವರ್ಷ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ತಿಳಿಸಿದ ಅಂಕಿಅಂಶಗಳ ಪ್ರಕಾರ, ವರದಕ್ಷಿಣೆ ನಿಷೇಧ ಕಾಯ್ದೆ ಅಡಿ ದಾಖಲಾಗುವ ಪ್ರಕರಣಗಳಲ್ಲಿ ಶೇಕಡ 10ರಿಂದ 15ರಷ್ಟು ಪ್ರಕರಣಗಳು ಖೊಟ್ಟಿ. ಇದನ್ನು ಪರಿಗಣಿಸಿದ್ದ ಸುಪ್ರೀಂ ಕೋರ್ಟ್‌, ‘ಈ ರೀತಿ ಖೊಟ್ಟಿ ಪ್ರಕರಣ ದಾಖಲು ಮಾಡುವುದು ಕೂಡ ವಿಚ್ಛೇದನಕ್ಕೆ ಒಂದು ಕಾರಣ ಆಗಬಹುದು’ ಎಂದು ಕೆ.ಶ್ರೀನಿವಾಸ್‌ ಹಾಗೂ ಕೆ.ಸುನೀತಾ ದಂಪತಿ ಪ್ರಕರಣದಲ್ಲಿ ಹೇಳಿದೆ. ಇದರ ಹೊರತಾಗಿಯೂ ಅಲ್ಲಲ್ಲಿ ಕಾಯ್ದೆಯ ದುರುಪಯೋಗದ ಮಾತುಗಳು ಕೇಳಿ ಬರುತ್ತಿವೆ.

ಎನ್‌ಸಿಆರ್‌ಬಿ ವರದಿ[ಬದಲಾಯಿಸಿ]

  • ಭಾರತದಲ್ಲಿ ‘ವರದಕ್ಷಿಣೆ ನಿಷೇಧ ಕಾಯ್ದೆ’ ಜಾರಿಗೆ ಬಂದು ಐದೂವರೆ ದಶಕ ಕಳೆದಿದೆ (ಇದು 1961ರ ಕಾಯ್ದೆ). ವರದಕ್ಷಿಣೆಗೆ ಸಂಬಂಧಿಸಿದಂತೆ ವಿಶ್ವದಲ್ಲಿ ಇರುವ ಅತ್ಯಂತ ಹಳೆಯ ಕಾಯ್ದೆ ನಮ್ಮದು ಎಂಬ ಹೆಗ್ಗಳಿಕೆಯೂ ಇದೆ. ಹಾಗೆಯೇ, ಬ್ರಿಟನ್‌ ಹೊರತಾಗಿ ವಿಶ್ವದ ಬಹುಪಾಲು ದೇಶಗಳಲ್ಲಿ ವರದಕ್ಷಿಣೆ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಆದರೆ ವಿಚಿತ್ರ ಎಂದರೆ, ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್‌ಸಿಆರ್‌ಬಿ) ಈಚೆಗೆ ನೀಡಿರುವ ವರದಿಯ ಪ್ರಕಾರ ವರದಕ್ಷಿಣೆ ಕೊಲೆ, ವರದಕ್ಷಿಣೆ ಕಿರುಕುಳದಿಂದ ಆತ್ಮಹತ್ಯೆ ಪ್ರಕರಣಗಳು ಬ್ರಿಟನ್‌ಗಿಂತಲೂ ಭಾರತದಲ್ಲೇ ಹೆಚ್ಚು. ಭಾರತಕ್ಕೆ ಇದರಲ್ಲಿ ನಂ.1 ಪಟ್ಟ! ಇಲ್ಲಿ ಪ್ರತಿ ಗಂಟೆಗೆ ಒಬ್ಬ ಮಹಿಳೆ ವರದಕ್ಷಿಣೆಯ ಕಾರಣಗಳಿಂದಾಗಿ ಸಾಯುತ್ತಿದ್ದಾಳೆ ಎಂದಿದೆ ಎನ್‌ಸಿಆರ್‌ಬಿ. ಕಳೆದ ಮೂರು ವರ್ಷಗಳಲ್ಲಿ ಭಾರತದಲ್ಲಿ ಸುಮಾರು 25 ಸಾವಿರ ವರದಕ್ಷಿಣೆ ಕೊಲೆ ಪ್ರಕರಣಗಳು ನಡೆದಿರುವುದಾಗಿ ಈಚೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ತಿಳಿಸಿದೆ. ಅಪ್ಪ ವರದಕ್ಷಿಣೆ ನೀಡಬೇಕಾಗುತ್ತದೆ ಎಂದು ಹೆದರಿ ಇಬ್ಬರು ಯುವತಿಯರು ಆತ್ಮಹತ್ಯೆ ಮಾಡಿಕೊಂಡಿರುವುದು ಮೊನ್ನೆಮೊನ್ನೆಯಷ್ಟೇ ಮಹಾರಾಷ್ಟ್ರದ ಲಾತೂರ್‌ನಿಂದ ವರದಿಯಾಗಿದೆ.

ನಿಜವಾದ ಸಮಸ್ಯೆ[ಬದಲಾಯಿಸಿ]

  • ಇನ್ನೊಂದೆಡೆ, ಮದುವೆಯಾದ ನಂತರ ಹೆಣ್ಣುಮಕ್ಕಳು ಯಾವುದೇ ಕಾರಣಕ್ಕೆ ಸತ್ತರೂ ಅದು ವರದಕ್ಷಿಣೆ ಸಾವೇ ಎಂಬ ಅನುಮಾನ ಸುಳಿದಾಡುವುದು ಸಹಜ. ತಮ್ಮ ಮಗಳು ಕೊಲೆಯಾದಳೆಂದೋ ಅಥವಾ ಆತ್ಮಹತ್ಯೆ ಮಾಡಿಕೊಂಡಳು ಎಂದೋ ತಿಳಿದ ತಕ್ಷಣ ಹಿಂದೆ ಮುಂದೆ ಯೋಚಿಸದ ಆಕೆಯ ಪೋಷಕರು ಮೊದಲು ಗಂಡಿನ ವಿರುದ್ಧ ಅಸ್ತ್ರವಾಗಿ ಬಳಸುವುದು ಇದೇ ಕಾಯ್ದೆಯನ್ನು. ಪೊಲೀಸರು ಕೂಡ ಸತ್ಯಾಸತ್ಯತೆಯನ್ನು ಪರೀಕ್ಷಿಸುವ ಮೊದಲೇ ಗಂಡನ ಮನೆಯವರನ್ನು ಬಂಧಿಸುತ್ತಾರೆ.
  • ಗಂಡಿನ ಮನೆಯವರು ಧನಪಿಶಾಚಿಗಳು ಎಂದು ತಿಳಿದರೂ, ಆತನ ‘ಅರ್ಹತೆ’ ನೋಡಿಯೋ ಇಲ್ಲವೇ ವರದಕ್ಷಿಣೆ ಕೊಟ್ಟರಷ್ಟೇ ಮಗಳು ಸುಖವಾಗಿರುತ್ತಾಳೆ ಎಂಬ ಭ್ರಮೆಯಿಂದಲೋ ಮದುವೆ ಮಾಡಿಕೊಡುವವರ ದೊಡ್ಡ ಸಂಖ್ಯೆಯೇ ಇದೆ. ಮದುವೆಯಾದ ಮೇಲೆ ಗಂಡಿನ ಮನೆಯವರ ಬೇಡಿಕೆ ಈಡೇರಿಸಲಾಗದೆ ಮಗಳನ್ನು ಕಳೆದುಕೊಂಡು ಅವಳ ಶವದ ಎದುರು ರೋದಿಸುವಾಗ ಮಾತ್ರ ಇವರಿಗೆಲ್ಲಾ ವರದಕ್ಷಿಣೆ ನಿಷೇಧ ಕಾಯ್ದೆ ನೆನಪಾಗುತ್ತದೆ.

ಮದುವೆಯ ನೋಂದಣಿಯಲ್ಲಿ ವರದಕ್ಷಿಣೆ ನಮೂದಿಸಿ[ಬದಲಾಯಿಸಿ]

  • ಈ ನಿಟ್ಟಿನಲ್ಲಿ, ವರದಕ್ಷಿಣೆ ನಿಷೇಧ ಕಾಯ್ದೆಗೆ ಇನ್ನಷ್ಟು ಬಲಕೊಡಬೇಕಿದೆ, ಅದಕ್ಕೆ ಸ್ಪಷ್ಟ ರೂಪ ಬರಬೇಕಿದೆ. ಕೆಲವು ಹೆಣ್ಣುಮಕ್ಕಳ ಪೋಷಕರು ವರದಕ್ಷಿಣೆ ರೂಪದಲ್ಲಿ ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಅಳಿಯನಿಗೆ ಕಾಣಿಕೆ ರೂಪದಲ್ಲೋ, ‘ಮದುವೆಯ ಖರ್ಚು’ ಎಂದು ಹೇಳಿಯೋ ಒಂದಿಷ್ಟು ಹಣ, ಒಡವೆ, ವಾಹನ ಇತ್ಯಾದಿಗಳನ್ನು ನೀಡುವುದಿದೆ. ಈ ಪ್ರತ್ಯಕ್ಷ, ಪರೋಕ್ಷ ರೂಪದ ಉಪಚಾರಗಳನ್ನು ಕಾನೂನುಬದ್ಧಗೊಳಿಸಬೇಕಿದೆ.
  • ಮದುವೆಯ ನೋಂದಣಿ ಮಾಡಿಸುವುದು ಈಗ ಕಡ್ಡಾಯ. ನೋಂದಣಿಯ ವೇಳೆ ಹೆಣ್ಣಿನ ಮನೆಯವರಿಂದ ಗಂಡಿನ ಮನೆಯವರು ಏನೇನು ಪಡೆದುಕೊಂಡಿದ್ದಾರೆ (ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ) ಎಂಬುದನ್ನು ಅದರಲ್ಲಿಯೇ ನಮೂದಿಸುವುದನ್ನು ಕೂಡ ಕಡ್ಡಾಯ ಮಾಡಬೇಕಿದೆ. ಮದುವೆಯ ಮಾತುಕತೆ ಸಂದರ್ಭದಲ್ಲಿ ದಕ್ಷಿಣೆಯ ನೋಂದಣಿಗೆ ಗಂಡಿನ ಕಡೆಯವರು ಒಪ್ಪಿದರೆ ಅವರ ಮೇಲೆ ಸಂಪೂರ್ಣ ವಿಶ್ವಾಸ ಮೂಡಲು ಹೆಣ್ಣಿನ ಕಡೆಯವರಿಗೆ ಸಾಧ್ಯವಾದೀತು. ಇದರ ಜೊತೆಗೆ, ಮುಂದೆ ಅನಾಹುತ ಸಂಭವಿಸಿದರೆ ಪರಸ್ಪರ ಆರೋಪ, ಪ್ರತ್ಯಾರೋಪ ಮಾಡುವುದನ್ನು ತಪ್ಪಿಸಬಹುದು. ಇನ್ನೊಂದೆಡೆ, ಗಂಡಿನ ಮನೆಯವರು ಹಣ ಪಡೆದಿರುವ ಸಾಕ್ಷ್ಯ ಈ ದಾಖಲೆಯಲ್ಲೇ ಸಿಕ್ಕರೆ, ವರದಕ್ಷಿಣೆಯ ಹೆಸರಿನಲ್ಲಿ ಗಂಡಿನ ಮನೆಯವರ ಮೇಲೆ ಸುಳ್ಳು ಮೊಕದ್ದಮೆ ಹೂಡುವ ಪ್ರಮೇಯವೂ ತಪ್ಪಲು ಸಾಧ್ಯವಾಗುತ್ತದೆ.[೪]]

ಆಧಾರ[ಬದಲಾಯಿಸಿ]

  • ಆಕರ:ಡಾ.ಎಂ.ಉಷಾ ಬರೆದಿರುವ ಮಹಿಳಾ ಚಳುವಳಿ ಮತ್ತು ಮಹಿಳಾ ವಿಷಯಗಳು

ಉಲ್ಲೇಖ[ಬದಲಾಯಿಸಿ]

  1. https://www.britannica.com/topic/dowry
  2. https://pulitzercenter.org/projects/asia-india-dowry-marriage-violence-against-women-bride-culture-husband-physical-mental-sexual-suicide
  3. https://www.merriam-webster.com/dictionary/dowry
  4. [https://web.archive.org/web/20170426171747/http://www.prajavani.net/news/article/2017/04/19/485395.html Archived 2017-04-26 ವೇಬ್ಯಾಕ್ ಮೆಷಿನ್ ನಲ್ಲಿ. ವರದಕ್ಷಿಣೆ: ಶಂಕೆ ನಿವಾರಣೆ ಸೂತ್ರ;ಸುಚೇತನಾ ನಾಯ್ಕ;19 Apr, 2017