ಯಜ್ಞೋಪವೀತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಯಜ್ಞೋಪವೀತವು ಗಾಯತ್ರಿ ವಾಚನದ ಅರ್ಹತೆ ಪಡೆದವರಿಂದ ಧರಿಸಲಾಗುವ ಮೂರು ಎಳೆಗಳ ಪವಿತ್ರ ದಾರ. (ಈ ಮೂರು ಎಳೆಗಳು ಸೂರ್ಯೋದಯವಾದಾಗ, ಸೂರ್ಯ ಉತ್ತುಂಗದಲ್ಲಿದ್ದಾಗ ಮತ್ತು ಸೂರ್ಯಾಸ್ತವಾದಾಗ ಆಚರಿಸಬೇಕಾದ ಮೂರು ಸಂಧ್ಯಾ ವಿಧಿಗಳನ್ನು ಪ್ರತಿನಿಧಿಸುತ್ತವೆ -ಇದಕ್ಕೆ ಆಧಾರವಿಲ್ಲ). ಈ ವಿಧಿಗಳು ಹಿಂದೂ ತ್ರಿಮೂರ್ತಿ: ಬ್ರಹ್ಮ, ವಿಷ್ಣು, ಶಿವ/(ರುದ್ರ) ರ ಮೆಚ್ಚುಗೆಗಾಗಿವೆ (?).

ಆಡುಭಾಷೆಯಲ್ಲಿ ಇದು ಜನಿವಾರ ಎಂದು ಕರೆಯಲ್ಪಡುತ್ತದೆ.

ಯಜ್ಞೋಪವೀತ ಧಾರಣೆ[ಬದಲಾಯಿಸಿ]

ಜನಿವಾರ ಅಥವಾ ಯಜ್ಞೋಪವೀತವು ಯಾವಾಗಿನಿಂದ ಉಪಯೋಗಿಸಲು ಆರಂಭವಾಯಿತೆಂಬುದು ತಿಳಿಯದು . ಪುರಾಣ ಕಾಲದ ನಂತರ ಜನಿವಾರ ಧರಿಸುವ ಪದ್ಧತಿ ಆರಂಭವಾಗಿರಬಹುದು . ಏಕೆಂದರೆ ಬಹಳ ಪ್ರಾಚೀನವಾದ ರಾಮಾಯಣ ಮಹಾಭಾರತಗಳಲ್ಲಿ ಜನಿವಾರದ ಪ್ರಸ್ತಾಪ ಬರುವುದಿಲ್ಲ. ಯಜ್ಞೋಪವೀತವು ಸಂಸೃತ ಪದ. ಯಜ್ಞ + ಉಪವೀತ (ಕನ್ನಡ: ಜನ್ನ + ದಾರ =ಜನ್ನದಾರ= ಜನಿವಾರ/ ಜನ್ನ ಎಂದರೆ ಯಜ್ಞ). ಯಾವುದೇ ದೊಡ್ಡ ಯಜ್ಞವನ್ನು ಆರಂಭಿಸುವಾಗ ಯಜ್ಞೋಪವೀತ ವನ್ನು ಹೊಸದಾಗಿ ಧರಿಸಿಕೊಳ್ಳುವ ಪದ್ದತಿ ಈಗಲೂ ಇದೆ. ಯಜ್ಞೋಪವೀತ ಧಾರಣೆಯು ಒಂದು ದೀಕ್ಷೆಯನ್ನು ಹಿಡಿದ ಸಂಕೇತವೆಂದು ಹೇಳಬಹುದು. ವೇದ ಮಂತ್ರವಾದ ಗಾಯತ್ರಿ ಮಂತ್ರ ಉಪದೇಶ ಪಡೆದು ಅದರ ಅನಷ್ಠಾನ-ಮತ್ತು ವೇದಾಧ್ಯನದ ದೀಕ್ಷೆಯ ಸಂಕೇತವಾಗಿ ಉಪನಯನದ ದಿನ ವಟುವಿಗೆ (ಬಾಲಕನಿಗೆ) ಯಜ್ಞೋಪವೀತವನ್ನು ಶಾಸ್ಸ್ರ ವಿಧಿಯಂತೆ ಹಾಕಲಾಗುವುದು.
  • ಹೆಣ್ಣು ಮಕ್ಕಳಿಗೆ / ಮಹಿಳೆಯರಿಗೆ ಯಜ್ಞೋಪವೀತವನ್ನು ಧರಿಸುವ ವಿಧಿ ಇಲ್ಲ. ಕಾರಣ ಅವರಿಗೆ ವೇದ ಉಪದೇಶ - ವೇದಾಧ್ಯಯನದ ಅವಕಾಶವಿಲ್ಲ. ಆದರೆ ಆರ್ಯ ಸಮಾಜದವರು ಮಹಿಳೆಯರಿಗೆ ಯಜ್ಞೋಪವೀತವನ್ನು ಧರಿಸುವ ಕ್ರಿಯೆ ಮಾಡುತ್ತಾರೆ.ಅವರಿಗೆ ಗಾಯತ್ರಿ ಉಪದೇಶ, ವೇದೋಪದೇಶವನ್ನೂ ಮಾಡಿಸುತ್ತಾರೆ. ಆದರೂ ಹೆಣ್ಣುಕ್ಕಳಿಗೆ ವಿವಾಹ ಸಂದರ್ಭದಲ್ಲಿ ಯಾವ ಸಂಸ್ಕಾರವೂ ಬಿಟ್ಟುಹೋಗಬಾರದೆಂದು, ವಿವಾಹ ಹೋಮಕ್ಕೆ ಮೊದಲು ಪುನ: ನಾಮಕರಣ, ಚೂಡಾಕರ್ಮ (ಎರಡು- ಮೂರು ಕೂದಲನ್ನು ಕತ್ತರಿಸುವರು), ಉಪನಯನದ ಶಾಸ್ತ್ರ ಮಾಡುವ ಪದ್ದತಿ ಬೋಧಾಯನ ಪದ್ದತಿಯಲ್ಲಿ ಇದೆ.
ಮೂರು ವಿಧದಲ್ಲಿ ಧಾರಣೆ.
ಯಜ್ಞೋಪವೀತವನ್ನು ಮೂರು ವಿಧದಲ್ಲಿ ಧಾರಣೆ ಮಾಡಲಾಗುವದು ,
1. ಉಪವೀತೀ;ಎಲ್ಲಾ ನಿತ್ಯ ನೈಮಿತ್ತಿಕ , ಶುಭ ಕಾರ್ಯಗಳಲ್ಲಿ ಎಡ ಭುಜದ ಮೇಲಿಂದ ಬಲ ಕಂಕುಳಿನ ಕೆಳಗೆ ಬರುವಂತೆ ಧಾರಣೆ ಮಾಡುವುದು. ದೇವ ತರ್ಪಣಕ್ಕೂ ಇದೇ ರೀತಿ ಧಾರಣೆ.
2.ನೀವೀತೀ; ಋಷಿಗಳಿಗೆ ತರ್ಪಣ ಕೊಡುವ ಸಂದರ್ಭದಲ್ಲಿ ಜನಿವಾರವನ್ನು ಮಾಲೆಯ ರೀತಯಲ್ಲಿ ಧರಿಸುವುದು. ಬಹಿರ್ದೆಶಗೆ ಹೋಗುವಾಗ (ಮಲವಿಸರ್ಜನೆ, ಮೂತ್ರವಿಸರ್ಜನೆ)ಕಾಲದಲ್ಲಿ , ಲೈಂಗಿಕ ಕ್ರಿಯೆಯ ಸಂಧರ್ಭದಲ್ಲಿ ,ಇದೇ ರೀತಿ ಮಾಲೆಯ ರೀತಿಯಲ್ಲಿ ಧರಿಸುವುದು.
3. ಪ್ರಾಚೀನಾವೀತೀ. : ಪಿತೃಗಳಿಗೆ ತರ್ಪಣಕೊಡುವ ಸಮಯದಲ್ಲಿ, ಪಿತೃಕಾರ್ಯದಲ್ಲಿ (ಶ್ರಾದ್ಧ ) ಅಪರ ಕರ್ಮಗಲ್ಲಿ (ಮರಣದನಂತರ ಮೃತ ವ್ಯಕ್ತಿಗಾಗಿ ಮಾಡುವ ಕರ್ಮಗಳು) ಜನಿವಾರವನ್ನು ಬಲಬುಜದ ಮೇಲಿಂದ ಎಡ ಕಂಕುಳ ಕೆಳಗೆ ಬರುವಂತೆ ಧರಿಸುವುದು.
ಜನಿವಾರ ಧಾರಣೆ ಸಂಖ್ಯೆ
  • ಬ್ರಹ್ಮಚಾರಿಗಳು ಒಂದು ಜನಿವಾರವನ್ನು ಮಾತ್ರಾ ಧರಿಸಬೇಕು.
  • ಗ್ರಹಸ್ಥರು / ವಿವಾಹಿತರು ಕನಿಷ್ಟ ಎರಡು ಜನಿವಾರ ಹಾಕಿಕೊಳ್ಳಬೇಕು; ಒಂದು ತನ್ನದು ಮತ್ತೊಂದು ಪತ್ನಿಯ ಪರವಾಗಿ; ಕೆಲವರು ಮೂರು ಜನಿವಾರ ಧರಿಸುತ್ತಾರೆ. ಯಾವುದೇ ಧಾರ್ಮಿಕ ಕ್ರಿಯೆ ಮಾಡುವಾಗ , ಹಿರಿಯರಿಗೆ ವಂದನೆ ಮಾಡುವಾಗ , ಹೆಗಲ ಮೇಲೆ ಉತ್ತರೀಯ(ಶಾಲು) ಇರಬೇಕೆಂಬುದು ಒಂದು ರೂಢಿಯಲ್ಲಿರುವ ಧಾರ್ಮಿಕ ನಿಯಮ; ಆದ್ದರಿಂದ ಉತ್ತರೀಯವಿಲ್ಲದಿದ್ದರೂ, ಅದಕ್ಕೆ ಲೋಪ ಬರದಂತೆ ಉತ್ತರೀಯದ ಬದಲಾಗಿ ಒಂದು ಹೆಚ್ಚನ ಜನಿವಾರ ಧರಿಸುತ್ತಾರೆ.
  • ಕೆಲವು ಗೃಹಸ್ತರು ನಾಲ್ಕು ಜನಿವಾರ ಧರಿಸುವುದೂ ಉಂಟು. ಜನಿವಾರ ಹರಿದರೆ ಆದಷ್ಟು ಬೇಗ ಬರುವ ಅಪರಾಹ್ನದೊಳಗೆ ಹೊಸ ಜನಿವಾರರ ಹಾಕಿಕೊಳ್ಳಬೇಕು. ಆದ್ದರಿಂದ ನಾಲ್ಕು ಜನಿವಾರ ಧರಿಸಿದರೆ ಒಂದು ಜನಿವಾರ ಅಕಸ್ಮಾತ್ ಹರಿದರೆ ಅದೊಂದು ಜನಿವಾರ ತೆಗೆದರೆ ಲೋಪವಾಗುವುದಿಲ್ಲ; ಬೇಗ ಪುನಃ ಹೊಸ ಜನಿವಾರ ಹಾಕಿಕೊಳ್ಳುವ ಅವಸರ-ಅಗತ್ಯವೂ ಇರುವುದಿಲ್ಲ. ; ಆದ್ದರಿಂದ ಕೆಲವರು ಮುಂಜಾಗ್ರತಾ ಕ್ರಮವಾಗಿ ನಾಲ್ಕು ಜನಿವಾರ ಹಾಕಿಕೊಳ್ಳುವರು.

ಯಜ್ಞೋಪವೀತದ ಅರ್ಥ[ಬದಲಾಯಿಸಿ]

ಯಜ್ಞೋಪವೀತದ ಅರ್ಥವನ್ನು ಎಲ್ಲಿಯೂ ಶಾಸ್ತ್ರ ದಲ್ಲಿ ಅಧಿಕೃತವಾಗಿ ಹೇಳಿರುವುದು ಕಾಣುವುದಿಲ್ಲ. ಆದರೆ ಒಂದೇ ದಾರವನ್ನು ಮೂರು ಮಡಿಕೆ ಮಾಡಿ- ಹುರಿಮಾಡಿ, ಅದನ್ನು ಪುನಃ ಮೂರು ಮಡಿಕೆಮಾಡಿ ಹುರಿಮಾಡಿ, ಆ ಒಂಭತ್ತು (ಮಡಿಕೆಗಳಲ್ಲಿರುವ) ಎಳೆಗಳ ದಾರದಿಂದ ಮಾಡಿದ ದಾರವನ್ನು ಮೂರು ಸುತ್ತುಮಾಡಿ, ಮೂರು ಎಳೆಗಳಲ್ಲಿ ಧರಿಸಲಾಗುವುದು. ಎರಡು ತುದಿ ಸೇರಿದಲ್ಲಿ ಬ್ರಹ್ಮಗಂಟನ್ನು ಹಾಕಿದ ಮೂರ ಎಳೆಯ ದಾರವನ್ನು ಎಡ ಭುಜದ ಮೇಲಿಂದ ಬಲ ಕಂಕುಳಿನ ಕೆಳಗೆ ಬರುವಂತೆ ಸಾಮಾನ್ಯವಾಗಿ ಧಾರಣೆ ಮಾಡುತ್ತಾರೆ.
ಈ ಮೂರು ದಾರಕ್ಕೆ ಬ್ರಹ್ಮ ,ವಿಷ್ಣು , ಮಹೇಶ್ವರ (ರುದ್ರ) ; ಓಂಕಾರದ ಅ-ಕಾರ, ಉ-ಕಾರ, ಮ-ಕಾರ, ಮತ್ತು ತ್ರಿಕಾಲ ಸಂಧ್ಯಾವಂದನೆ ಮಾಡುವ ದೀಕ್ಷೆ, ದೇವ ಋಣ, ಮನುಷ್ಯ ಋಣ , ಪಿತೃ ಋಣಗಳನ್ನು ತೀರಿಸಲು ಮಾಡಬೇಕಾದ ಕರ್ತವ್ಯದ ನೆನಪು ಮಾಡಲು (ಇಂಗ್ಲಿಷ್ ತಾಣ) , ಇನ್ನೂ ಮೊದಲಾದ ಎಲ್ಲಾ ಉತ್ತಮ ‘ತ್ರಯ ತತ್ವ’ ಗಳ ಪ್ರತೀಕವೆಂದು ಅರ್ಥ ಮಾಡುವರು (ಗಾಯತ್ರಿ ಜಪ -ಗ್ರಂಥ-ಕಾರಂತ).[೧] ಅದರಲ್ಲಿರುವ ಒಂಭತ್ತು ಎಳೆಗಳಿಗೆ ಒಂಭತ್ತು ದೇವತೆಗಳು ಅಧಿಪತಿಗಳಾಗಿದ್ದಾರೆ.
  • ಯಜ್ಞೋಪವೀತದ ಅಧಿಪತಿ ದೇವತೆಗಳು
ಓಂಕಾರೋಗ್ನಿಶ್ಚ ನಾಗಶ್ಚ |
ಸೋಮಃ ಪಿತೃಪ್ರಜಾಪತೀ ||
ವಾಯುಃ ಸೂರ್ಯೋ ವಿಶ್ವೇದೇವಾ |
ಇತ್ಯೇತಾ ಸ್ತಂತುದೇವತಾಃ ||
1,ಓಂ ಕಾರ; 2, ಅಗ್ನಿ; 3,ನಾಗ; 4,ಸೋಮ; 5,ಪಿತೃ; 6,ಪ್ರಜಾಪತಿ; 7, ವಾಯು; 8,ಸೂರ್ಯ; 9,ವಿಶ್ವೇದೇವಾ .

ಯಜ್ಞೋಪವೀತ ಧಾರಣೆಯ ಶಾಸ್ತ್ರ ಕ್ರಮ[ಬದಲಾಯಿಸಿ]

ಯಜ್ಞೋಪವೀತ ಧಾರಣೆ ಮಾಡುವಾಗ ದಾರವನ್ನು ಪೂಜೆಮಾಡಿ ಈ ಯಜ್ಞೋಪವೀತದ ಅಧಿಪತಿ ದೇವತೆಗಳನ್ನು ವಿಧಿಪೂರ್ವಕ ದಾರಕ್ಕೆ ಆವಾಹನೆಮಾಡಿ ಕ್ರಮಪ್ರಕಾರ ಧರಿಸಲಾಗುವುದು. ವೇದಾಧಿಕಾರವಿರುವವರು ಯಜ್ಞೋಪವೀತವನ್ನು ಪೂಜೆ ಮಾಡಿ ಧರಿಸುವರು. ವೇದಾಧಿರವಿಲ್ಲದವರು ಪೂಜೆ ಮಾಡದೆ ಹಾಗೆಯೇ ಧರಿಸುವರು; ವೇದಾಧಿಕಾರ ವಿಲ್ಲದವರೂ, ಕೆಲವರು ಜನಿವಾರ ಧರಿಸುವ ಪದ್ದತಿ ಇದೆ.
ಧರಿಸುವಾಗ ಸಂಕಲ್ಪದಲ್ಲಿ ಶ್ರೌತ ಸ್ಮಾರ್ತಾದಿ ನಿತ್ಯ ನೈಮಿತ್ತಿಕ ಕರ್ಮಾನುಷ್ಠಾನ ಯೋಗ್ಯತಾ ಸಿದ್ಯರ್ಥಂ ಎಂದು ಹೇಳಿ ಮೂರು ವೇದಗಳ ಛಂದಸ್ಸನ್ನು ಮತ್ತು ಬ್ರಹ್ಮ , ವಿಷ್ಣು , ರುದ್ರ ಈ ಮೂವರು ದೇವತೆಗಳ ಹೆಸರಿನಲ್ಲಿ (ಅವುಗಳನ್ನು ೩ದಾರಗಳು ಪ್ರತಿನಿಧಿಸುತ್ತವೆ?) ಯಜ್ಞೋಪವೀತ ಧಾರಣ ಮಂತ್ರವನ್ನು ಕರ ಷಡಂಗ-ವಿನ್ಯಾಸ ಪೂರ್ವಕ, ದೇಹಕ್ಕೆ ಆವಾಹನೆ ಮಾಡಿಕೊಂಡು ಸೂರ್ಯನ ಮತ್ತು ಪೃಥಿವೀ ಸ್ತುತಿಯ ವೇದ ಮಂತ್ರಗಳೊಂದಿಗೆ - ದಾರಣಮಂತ್ರ ಹೇಳಿ ಧರಿಸಲಾಗುವುದು.
ಯಜ್ಞೋಪವೀತ ಧಾರಣ ಮಂತ್ರ
ಯಜ್ಞೋಪವೀತಂ ಪರಮಂಪವಿತ್ರಂ |
ಪ್ರಜಾಪತೇರ್ಯತ್ಸಹಜಂ ಪುರಸ್ತಾತ್ |
ಆಯುಷ್ಯಮಗ್ರ್ಯಂ ಪ್ರತಿಮಂಚಶುಭ್ರಂ |
ಯಜ್ಞೋಪವೀತಂ ಬಲಮಸ್ತು ತೇಜಃ||
ಈ ಮಂತ್ರದಿಂದ ಧಾರಣೆ ಮಾಡಿ 108 ಅಥವಾ 1000 ಗಾಯತ್ರಿ ಜಪ ಮಾಡಬೇಕು.

ವರ್ಷಕ್ಕೊಮ್ಮೆ ಉಪಾಕರ್ಮ ವಿಧಿಯಲ್ಲಿ ಎಲ್ಲರೂ ಹಳೆಯ ಜನಿವಾರ ತೆಗೆದು ಹೊಸ ಜನಿವಾರ ಧರಿಸುತ್ತಾರೆ. ಉಪಾಕರ್ಮ ವಿಧಿಗಳು ಹೆಚ್ಚು ವಿಸ್ತಾ ರವಾದದ್ದು. ಹೋಮ ಮಾಡಿ ಋಷಿಗಳ ಪೂಜೆ ಮಾಡಿ ವಿಷೇಷಕರ್ಮಗಳೊಂದಿಗೆ ಯಜ್ಞೋಪವೀತ ಧಾರನೆ ಮಾಡುವರು. ಋಗ್ವೇದಿಗಳು ಮತ್ತು ಕೆಲವರು ಶ್ರಾವಣ ತಿಂಗಳ ಶುದ್ಧದಲ್ಲಿ ಶ್ರವಣ ನಕ್ಷತ್ರವಿರುವ ದಿನ ಉಪಾಕರ್ಮ ವಿಧಿಮಾಡಿ ಜನಿವಾರ ಧರಿಸಿವರು . ಯಜುರ್ವೇದಿಗಳು ಮತ್ತು ಅದೇ ಸಂಪ್ರದಾಯದವರು ಆ ತಿಂಗಳ ಹುಣ್ಣಿಮೆಯಂದು ಉಪಾಕರ್ಮ ವಿಧಿಮಾಡಿ ಜನಿವಾರ ಧರಿಸಿವರು.

  • (ಋಗ್ವೇದಿಗಳು ಮತ್ತು ಇತರೆ ಕೆಲವರಲ್ಲಿ ಜನಿವಾರವನ್ನು ಪೂಜೆ ಮಾಡಿ ಒಂಭತ್ತು ದೇವತೆಗಳನ್ನು ಆವಾಹನೆ ಮಾಡುವ ಪದ್ದತಿ ಇಲ್ಲ. ಹಾಗೆಯೇ ಯಜ್ಞೋಪವೀತ ಧಾರಣ ಮಂತ್ರ ಹೇಳಿ ಜನಿವಾರ ಹಾಕಿಕೊಳ್ಳುತ್ತಾರೆ.)
  • ಬ್ರಾಹ್ಮಣರು, ವೈಶ್ಯರು , ಕ್ಷತ್ರಿಯರು ಸಾಮಾನ್ಯವಾಗಿ ಯಜ್ಞೋಪವೀತ ಧಾರಣೆ ಮಾಡುವರು.
  • ಗಾಯತ್ರೀಜಪ /ವೇದಾಭ್ಯಾಸ ಮಾಡುವ ಯಾರೂ ಜನಿವಾರ ಧಾರಣೆ ಮಾಡಬಹುದು. ಸ್ತ್ರೀಯರೂ ಧಾರಣೆ ಮಾಡಬಹುದು. ಆರ್ಯ ಸಮಾಜದವರು ಯಾರಿಗೆ ಬೇಕಾದರೂ ಉಪನಯನಮಾಡಿ ಜನಿವಾರ ಧಾರಣೆ ಮಾಡಿಸುತ್ತಾರೆ.

ಜ್ಞಾನಿಗಳೆಂದು ಪ್ರಖ್ಯಾತರಾದ ಗೋವಿಂದ ಭಟ್ಟರು ಮುಸಲ್ಮಾನ ಬಾಲಕ ಶರೀಫ /ಸಂತ ಶಿಶುನಾಳ ಶರೀಫರು ರಿಗೆ ಜನಿವಾರ ಹಾಕಿ ಮಂತ್ರೋಪದೇಶ ಮಾಡಿದ್ದು ಇತಿಹಾಸ. ಷರೀಷ್ ಸಾಬ್`ರು ನಂತರ ಅದನ್ನೇ ಒಂದು ಹಾಡು/ಲಾವಣಿಮಾಡಿದ್ದು -ಹಾಡಿದ್ದು ಎಲ್ಲರಿಗೂ ಪರಿಚಿತ- "ಹಾಕಿದ ಜನಿವಾರವಾ --ಇತ್ಯಾದಿ."

ಜನಿವಾರ ಮಾಡುವ ಕ್ರಮ[ಬದಲಾಯಿಸಿ]

ತಕಲಿಯಿಂದ ದಾರ ತೆಗೆದು ಅದನ್ನು ಮೊದಲು ಮೂರು ಎಳೆಗಳುಳ್ಳ ಒಂದು ದಾರವಾಗಿ ಹುರಿಮಾಡಲಾಗುವುದು. ನಂತರ ,ಪುನಃ ಅದನ್ನು ಮೂರು ಮಡಿಕೆ ಮಾಡಿ ಸರಿಯಾಗಿಅಂಸಚುಗಳು ತುದಿಗೆ ಬರುವಂತೆ ಹುರಿಮಾಡಲಾಗುವುದು. ಈಗ ಅದು 14-16 ಅಡಿಗಳ ಜನಿವಾರವಾಗುತ್ತದೆ. ಅದನ್ನು ಎಡ ಅಂಗೈಗೆ ನಡು ಬೆರಳ ಹಿಂಭಾಗಕ್ಕೆ ಬರುವಂತೆ ಅಂಗೈಸುವರೆಸಿ ಮಡಿಕೆ ಮಾಡಿ ಇಡಲಾಗುವುದು . ಅದು ಸಾಮಾನ್ಯವಾಗಿ 15 ಸುತ್ತು ಬರುವುದು.- ಎಂದರೆ 15 ಅಡಿಯಷ್ಟು. ನಂತರ ಧರಿಸುವಾಗ ಅದನ್ನು ಗಂಟಾಗದಂತೆ ಎಚ್ಚರಿಕೆಯಿಂದ ಬಿಚ್ಚಿ ಚಕ್ಕಲಮಲ್ಕಲು ಕುಳಿತು ಮಂಡಿಗಳಸುತ್ತ ಮೂರು ಸುತ್ತು ಬರುವಂತ್ ಮಾಡಿ, ಎರಡೂ ತುದಿ ಸೇರಿಸಿ ಬ್ರಹ್ಮಗಂಟು ಹಾಕಲಾಗುವುದು. ಈಗ ಜನಿವಾರ ಪೂಜೆಗೆ-ಮತ್ತು ಧರಿಸಲು ಸಿದ್ಧವಾಗಿದೆ. ಧರ್ಮಸಿಂಧು ಗ್ರಂಥದಲ್ಲಿ 96 ಗೇಣು ಉದ್ದ* ಕೈಯಿಂದ ತೆಗೆದ ಒಂದು ದಾರವನ್ನು ಮೊದಲು ಮೂರು ಮಡಿಕೆಯ (ದಾರ) ಹುರಿ ಮಾಡಿ ನಂತರ ಪುನಹ ಮೂರು ಮಡಿಕೆಯ ಹುರಿ ಮಾಡಬೇಕೆಂದು ಹೇಳಿದೆ.ಅದನ್ನು ಮೂರು ಸುತ್ತಿನ ದಾರ ಮಾಡಿ ಗಂಟುಹಾಕಿದರೆ ಅದು ನಾಭಿಯ ಮಟ್ಟದಲ್ಲಿರಬೇಕೆಂದು ತಿಳಿಸುತ್ತದೆ.(*ಹೆಬ್ಬೆರಳು ಬಿಟ್ಟು ನಾಲ್ಕು ಬೆರಳು ಸೇರಿಸಿ ಅದಕ್ಕೆ 96 ಸುತ್ತುಬರುವಷ್ಟು ದಾರ)
ಬ್ರಹ್ಮಗಂಟು
ಎರಡೂಮಂಡಿಗಳ ಮಧ್ಯದಲ್ಲಿ ದಾರದ ಎರಡೂ ತುದಿಗಳು ಬರುವಂತೆ ಮಾಡಿಕೊಳ್ಳಬೇಕು. ಆಎರಡೂತುದಿಗಳನ್ನು ಉಳಿದೆರಡು ದಾರಕ್ಕೆ ಪರಸ್ಪರ ವಿರುದ್ಧ ಸುತ್ತಿ ಪವಿತ್ರ ಗಂಟುಹಾಕುವುದು; ಉಳಿದ ಒಂದು ಇಂಚಿನಷ್ಟು ದಾರದ ತುದಿಗಳನ್ನು ಮೂರ ಎಳೆಗಳ ಸುತ್ತಿನ ದಾರವನ್ನ ತಲೆಕೆಳಗಾದ ‘ಳ' ದ ಆಕಾರದಲ್ಲಿ ಬೆರಳಲ್ಲಿ ಎತ್ತಿಹಿಡಿದು ಅದರಸೊದಿನ / ರಂದ್ರದ ಮೂಲಕ ತುದಿಕಾಣದಂತೆ/ಹೊರಗೆ ಉಳಿಯದಂತೆ ಸುತ್ತಬೇಕು . ನಂತರ ಎರಡೂಕಡೆ ಮೂರು ಎಳೆಗಳ ದಾರವನ್ನು ಎಳದರೆ ದಾರದ ತುದಿ ಎಳೆಗಳ ಒಳಗೆ ಸೇರಿ ದಾರದ ತುದಿ ಕಾಣದಂತೆ ಆಗುತ್ತದೆ . ಇದು ಬ್ರಹ್ಮ ಗಂಟು. ಜನಿವಾರವವವು ಒಂದೇ ಎಳೆ ದಾರದಿಂದ ಮಾಡಿರಬೇಕು . ಹತ್ತಿಯಿ ನೂಲಿನಿಂದ ಮಾಡಿರಬೇಕು. ನೈಲಾನ ದಾರ ಒಳ್ಳೆಯದಲ್ಲ. ಅದು ಹರಿದಿರುವುದರಿಂದ ಕತ್ತಿಗೆಗೆ ಸಿಕ್ಕಿ ಎಳೆದರೆ ಅಪಾಯ ;ಹಾಗೆಯೇ ಯಾವುದಕ್ಕಾದರೂ ಸಿಕ್ಕಿ ಎಳೆದರೆ ಗಾಯವಾಗಿ ಅಪಾಯವಾಗಬಹುದು. ಹತ್ತಿಯ ನೂಲಿನಿಂದ ಕೈಯಿಂದ ಮಾಡಿದ ಒಂಭತ್ತು ಎಳೆಯ ಜನಿವಾರ / ಯಜ್ಞೋಪವೀತ ಶ್ರೇಷ್ಟವಾದುದು.[೨][೩]

ನೋಡಿ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

  1. ಗಾಯತ್ರಿ ಜಪ -ಗ್ರಂಥ-ಕಾರಂತ)
  2. ಬೋಧಾಯನೀಯ ನಿತ್ಯ ಕರ್ಮ ಪ್ರದೀಪಃ : ಹವ್ಯಕ ಸಂಪದಭಿವೃದ್ಧಿ ಸಮಾಜ ಕೇಡಲೇಸರ , ಭೀಮನಕೋಣೆ : ಮುದ್ರಣ :೧೯೮೦: ಸಂಗ್ರಹ ಕಾರರು ವೇ.ಬ್ರ. ಬರಿಗೆ ಗಣೇಶಭಟ್ಟರು.
  3. ಗಾಯತ್ರೀ ಜಪ - ಲೇ. ಮತ್ತು ಪ್ರಕಾಶಕ: ಕೋಟ ವಾಸುದೇವ ಕಾರಂತ, ನಿ. ಛೀಫ್ ಇಲೆಕ್ತ್ರಿಕಲ್ ಇಂಜನೀರ್, ಮಂಗಳೂರು