ಮೌರ್ಯ ಸಾಮ್ರಾಜ್ಯ
ಮೌರ್ಯ ಸಾಮ್ರಾಜ್ಯ ಭಾರತವನ್ನು ಒಗ್ಗೂಡಿಸಿದ ಮೊದಲ ದೊಡ್ಡ ಸಾಮ್ರಾಜ್ಯ. ಕ್ರಿ.ಪೂ. ೩೨೧ ರಿ೦ದ ಕ್ರಿ.ಪೂ. ೧೮೫ ರ ವರೆಗೆ ಅಸ್ತಿತ್ವದಲ್ಲಿದ್ದ ಈ ಸಾಮ್ರಾಜ್ಯ, ಮೌರ್ಯ ವಂಶದ ಚಕ್ರವರ್ತಿಗಳಿಂದ ಆಳಲ್ಪಟ್ಟಿತ್ತು. ಇದರ ತುಟ್ಟತುದಿಯಲ್ಲಿ ಇದು ಆಧುನಿಕ ಭಾರತದ ಬಹುಭಾಗವನ್ನು ಒಳಗೊಂಡಿತ್ತಲ್ಲದೆ, ಪಾಕಿಸ್ತಾನ ಮತ್ತು ಭಾಗಶಃ ಅಫ್ಘಾನಿಸ್ತಾನಗಳನ್ನೂ ಒಳಗೊಂಡಿತ್ತು.
ಪರಿವಿಡಿ |
[ಬದಲಾಯಿಸಿ] ಉಗಮ
ಕ್ರಿ.ಪೂ. ೩೨೬ ರಲ್ಲಿ ಗ್ರೀಸ್ ನ ಅಲೆಕ್ಸಾಂಡರ್ ಭಾರತದ ಉತ್ತರಪಶ್ಚಿಮ ಭಾಗದ ಕೆಲ ರಾಜ್ಯಗಳನ್ನು ಗೆದ್ದ ನಂತರ ಸಾಮಂತ ರಾಜ್ಯಗಳನ್ನು ಸ್ಥಾಪಿಸಿದ (ಸತ್ರಪಗಳು). ಬೇಗನೆಯೇ ಅಲೆಕ್ಸಾಂಡರ್ ಭಾರತದಿ೦ದ ಹಿ೦ದಿರುಗಿ ಕ್ರಿ.ಪೂ. ೩೨೩ ರಲ್ಲಿ ನಿಧನನಾದ ನಂತರ ಆತನ ಸಾಮ್ರಾಜ್ಯ ಹಂಚಿಹೋಗಲಾರ೦ಭಿಸಿತು. ಆಗ ಸೃಷ್ಟಿಯಾದ ಅವಕಾಶಗಳನ್ನು ಭಾರತದಲ್ಲಿ ಉಪಯೋಗಿಸಿಕೊಂಡದ್ದು ಚಂದ್ರಗುಪ್ತ ಮೌರ್ಯ.
[ಬದಲಾಯಿಸಿ] ಸಾಮ್ರಾಜ್ಯದ ಸ್ಥಾಪನೆ
ಮೂಲತಃ ತಕ್ಷಶಿಲೆಯವನಾಗಿದ್ದಿರಬಹುದಾದ ಚಂದ್ರಗುಪ್ತ ಅನೇಕ ಬಾರಿ ಗ್ರೀಕರ ಯುದ್ಧನೀತಿಗಳನ್ನು ಗಮನಿಸಿದ್ದ. ಅಲೆಕ್ಸಾಂಡರನ ಸಾಮ್ರಾಜ್ಯದ ಅವನತಿಯ ನಂತರ ಗ್ರೀಕರ ಯುದ್ಧತಂತ್ರಗಳೊಂದಿಗೆ ತನ್ನ ತಂತ್ರಗಳನ್ನು ಸೇರಿಸಿ, ಚಾಣಕ್ಯ ಕೌಟಿಲ್ಯನ ಸಹಾಯದೊಂದಿಗೆ ಮಗಧ ರಾಜ್ಯದ ನಂದ ವಂಶವನ್ನು ಅಧಿಕಾರದಿ೦ದ ಇಳಿಸಿ ಗಂಗಾ ನದಿ ತೀರದಲ್ಲಿ ತನ್ನ ಸಾಮ್ರಾಜ್ಯವನ್ನು ಕ್ರಿ.ಪೂ. ೩೨೧ ರಲ್ಲಿ ಸ್ಥಾಪಿಸಿದ. ನಂತರ, ಇಂದಿನ ಪಂಜಾಬ್ ಪ್ರದೇಶವನ್ನು ಸಹ ಗೆದ್ದು ತಕ್ಷಶಿಲೆಯ ವರೆಗೆ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದ.
[ಬದಲಾಯಿಸಿ] ಮೌರ್ಯ ಸಮ್ರಾಟರು
[ಬದಲಾಯಿಸಿ] ಚಂದ್ರಗುಪ್ತ
ಕ್ರಿ.ಪೂ. ೩೦೧ ರಲ್ಲಿ ಸೆಲ್ಯೂಸಿಡ್ ಸಾಮ್ರಾಜ್ಯದ ಚಕ್ರವರ್ತಿ ಸೆಲ್ಯೂಕಸ್, ಭಾರತದ ಉತ್ತರಪಶ್ಚಿಮದಲ್ಲಿ ಕಳೆದುಕೊಂಡಿದ್ದ ಭಾಗಗಳನ್ನು ಮತ್ತೊಮ್ಮೆ ಗೆದ್ದುಕೊಳ್ಳಲು ಪ್ರಯತ್ನಿಸಿದ. ಸ್ಪಷ್ಟ ಫಲಿತಾಂಶ ಕಾಣದ ಯುದ್ಧದ ನಂತರ ಸೆಲ್ಯೂಕಸ್ ಮತ್ತು ಚಂದ್ರಗುಪ್ತ ಶಾಂತಿಯ ಒಪ್ಪಂದ ಮಾಡಿಕೊಂಡರು. ಸೆಲ್ಯೂಕಸ್ ನ ಮಗಳನ್ನು ಚಂದ್ರಗುಪ್ತ ವಿವಾಹವಾದದ್ದಲ್ಲದೆ, ಗಾಂಧಾರ ಮತ್ತು ಅರಕೋಸಿಯಾ ಪ್ರಾಂತ್ಯಗಳನ್ನು ಪಡೆದ. ಹಾಗೆಯೇ ಸೆಲ್ಯೂಕಸ್ ಚಂದ್ರಗುಪ್ತನ ಸೈನ್ಯದಿ೦ದ ೫೦೦ ಯುದ್ಧದ ಆನೆಗಳನ್ನು ಪಡೆದ (ಕ್ರಿ.ಪೂ. ೩೦೧ ರ ಗ್ರೀಕ್ ಅರಸರ ಮೇಲಿನ ಇಪ್ಸಸ್ ಯುದ್ಧದಲ್ಲಿ ಈ ಆನೆಗಳು ಸೆಲ್ಯೂಕಸ್ ನ ವಿಜಯದಲ್ಲಿ ಪ್ರಮುಖ ಪಾತ್ರ ವಹಿಸಿದವು). ರಾಜನೈತಿಕ ಸಂಬಂಧಗಳು ಏರ್ಪಟ್ಟ ನಂತರ ಅನೇಕ ಗ್ರೀಕರು ಚ೦ದ್ರಗುಪ್ತನ ಆಸ್ಥಾನಕ್ಕೆ ಬರಲಾರಂಭಿಸಿದರು (ಉದಾ: ಗ್ರೀಕ್ ಚರಿತ್ರಕಾರ ಮೆಗಾಸ್ತನೀಸ್).
ಚಾಣಕ್ಯನ ಮ೦ತ್ರಿತ್ವದ ಅಡಿಯಲ್ಲಿ ಚ೦ದ್ರಗುಪ್ತ ಕೇ೦ದ್ರೀಕೃತವಾದ ರಾಜ್ಯವ್ಯವಸ್ಥೆಯನ್ನು ಸ್ಥಾಪಿಸಿದ.ರಾಜಧಾನಿ ಪಾಟಲಿಪುತ್ರ (ಇ೦ದಿನ ಪಾಟ್ನಾ). ಮೆಗಾಸ್ತನೀಸ್ ವರ್ಣಿಸುವ೦ತೆ, ಮರದ ಕೋಟೆಯನ್ನು ಹೊ೦ದಿದ್ದ ನಗರ ಕೋಟೆಯಲ್ಲಿ ೬೪ ದ್ವಾರಗಳು ಮತ್ತು ೫೭೦ ಗೋಪುರಗಳನ್ನು ಹೊ೦ದಿದ್ದಿತು. ಚಾಣಕ್ಯನು ತಕ್ಷಶಿಲೆಯ ವಿಶ್ವ್ವವಿದ್ಯಾಲಯದ ಪ್ರಾಧ್ಯಾಪಕನಾಗಿದ್ದ.ಚಾಣಕ್ಯನು ಒಳ್ಳೆಯ ಅರ್ಥಶಾಸ್ತ್ರಗ್ನನಾಗಿದ್ದ. ಮೌರ್ಯರ ಸಾಮ್ರಾಜ್ಯವನ್ನು ಚಾಣಕ್ಯನು ಕಟ್ಟಿದ್ದು ಭಾರತವನ್ನು ಯವನರ ದೌರ್ಜನ್ಯದಿನ್ದ ಕಾಪಾದಲು. ಚಂದ್ರಗುಪ್ತನು ಒಳ್ಳೆಯ ಆದಡಳಿತಗಾರನಾಗಿದ್ದ
[ಬದಲಾಯಿಸಿ] ಬಿಂದುಸಾರ
ಚ೦ದ್ರಗುಪ್ತನ ಮಗ ಬಿಂದುಸಾರ ಮೌರ್ಯ ಸಾಮ್ರಾಜ್ಯವನ್ನು ಭಾರತದ ದಕ್ಷಿಣದತ್ತ ವಿಸ್ತರಿಸಿದ. ಈ ಕಾಲದಲ್ಲಿಯೂ ಒಬ್ಬ ಗ್ರೀಕ್ ರಾಯಭಾರಿ (ಡೀಮ್ಯಾಕಸ್) ಆತನ ಆಸ್ಥಾನದಲ್ಲಿದ್ದನೆ೦ದು ತಿಳಿದುಬ೦ದಿದೆ. ಈತನ ಮಗನೇ ಅಶೋಕ.
[ಬದಲಾಯಿಸಿ] ಅಶೋಕ
ಮೌರ್ಯ ಸಾಮ್ರಾಜ್ಯದ ಅತಿ ಪ್ರಸಿದ್ಧ ಚಕ್ರವರ್ತಿ ಸಾಮ್ರಾಟ್ ಅಶೋಕ (ಆಡಳಿತ: ಕ್ರಿ.ಪೂ. ೨೭೩-೨೩೨). ಕಳಿ೦ಗ ಯುದ್ಧದ ನ೦ತರ ಬೌದ್ಧ ಧರ್ಮಕ್ಕೆ ತಿರುಗಿದ ಅಶೋಕ ಬೌದ್ಧ ಧರ್ಮವನ್ನು ಭಾರತದಲ್ಲಿ ಹರಡಿದ್ದಲ್ಲದೆ, ಬೌದ್ಧ ರಾಯಭಾರಿಗಳನ್ನು ಶ್ರೀಲ೦ಕಾ, ಚೀನಾ ಮತ್ತು ಪರ್ಶಿಯಾಗಳತ್ತಲೂ ಕಳುಹಿಸಿದ.ಈತನ ಬಿರುದು"ದೇವಾಂನಾಂಪ್ರಿಯ" ಅಂದರೆ ದೇವರಿಗೆ ಪ್ರೀತಿಯದವನು. ಭಾರತದಲ್ಲಿ ಬೌದ್ಧ ಧರ್ಮ ಬೆಳೆಯಲು ಅಶೋಕನು ಬಹಳ ಶ್ರಮಿಸಿದನು. ಬೌದ್ಹ ಧರ್ಮದ ಪ್ರಚಾರಕ್ಕಾಗಿ ತನ್ನ ಮಕ್ಕಳನ್ನು ಶ್ರೀಲ೦ಕಾಗೆ ಅಶೋಕನು ಕಳುಹಿಸಿದನು.
[ಬದಲಾಯಿಸಿ] ಅವನತಿ
ಅಶೋಕನ ಆಡಳಿತದ ನ೦ತರ ೫೦ ವರ್ಷಗಳ ಕಾಲ ಮೌರ್ಯ ಸಾಮ್ರಾಜ್ಯ ದುರ್ಬಲ ಅರಸರಿ೦ದ ಆಳಲ್ಪಟ್ಟಿತು. ಮೌರ್ಯ ವ೦ಶದ ಕೊನೆಯ ಚಕ್ರವರ್ತಿ ಬೃಹದ್ರಥ. ಕ್ರಿ.ಪೂ. ೧೮೫ ರಲ್ಲಿ ಸೈನ್ಯದ ಕವಾಯತನ್ನು ವೀಕ್ಷಿಸುತ್ತಿದ್ದಾಗ ಅವನ ಸೇನಾಧಿಪತಿ ಪುಷ್ಯಮಿತ್ರ ಶುಂಗ ಆತನನ್ನು ಕೊಲೆ ಮಾಡಿ ಶುಂಗ ವಂಶವನ್ನು ಸ್ಥಾಪಿಸಿದ.