ಮೈಸೂರು ಸಹೋದರರು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
MysuruBrothers.jpg

ಭಾರತೀಯ ಶಾಸ್ತ್ರೀಯ ವಯೊಲಿನ್ ಪ್ರತಿಭೆಗಳಲ್ಲಿ ಮೈಸೂರು ನಾಗರಾಜ್ ಮತ್ತು ಡಾ.ಮೈಸೂರು ಮಂಜುನಾಥ್ ಜೋಡಿಯದು ದೊಡ್ಡ ಹೆಸರು. ದಕ್ಷಿಣಾದಿ ಪಿಟೀಲನ್ನು ಅಧ್ಬುತ ವಾಗಿ,ಅತ್ಯಂತ ಅಚ್ಚುಕಟ್ಟಾಗಿ, ಭಾವನಾಪೂರ್ಣವಾಗಿ ಮತ್ತು ಕರ್ಣಮಧುರವಾಗಿ ನುಡಿಸುವ ಇವರುಗಳು ಮೈಸೂರು ಸಹೋದರರು ಎಂದು ಪ್ರಪಂಚದೆಲ್ಲೆಡೆ ಶಾಸ್ತ್ರೀಯ ಸಂಗೀತ ವಲಯಗಳಲ್ಲಿ ಪ್ರಖ್ಯಾತರಾಗಿದ್ದಾರೆ. ಇಂದು ಜಾಗತಿಕ ಸಂಗೀತ ಜಗತ್ತಿನಲ್ಲಿ ಮೈಸೂರು ಸಹೋದರರು, ಕರ್ನಾಟಕದ ಶ್ರೇಷ್ಟ ಪ್ರಾತಿನಿದಿಕ ವಿದ್ವಾಂಸರಾಗಿದ್ದಾರೆ. ವಿಶ್ವದ ಎಲ್ಲೆಡೆ ಕರ್ನಾಟಕದ ಬಾವುಟ ವನ್ನು ಹಿಡಿದ ಕೀರ್ತಿ ಇವರದ್ದು.


ಪರಿವಿಡಿ

ಗುರು, ತಂದೆ ಶ್ರೀ ಮಹದೇವಪ್ಪ[ಬದಲಾಯಿಸಿ]

ಮೈಸೂರು ಸಹೋದರರ ತಂದೆ ಶ್ರೀ ಮಹದೇವಪ್ಪ, ಚಾಮರಾಜನಗರ ಜಿಲ್ಲೆಯ ಮುಡಿಗುಂಡಂ ಎಂಬ ಹಳ್ಳಿಯಲ್ಲಿ ಜನಿಸಿದವರು. ಬಾಲ್ಯದಿಂದಲೇ ವಯೊಲಿನ್ ಕಲಿಯಲು ಆರಂಭಿಸಿ, ಬಳಿಕ ನಾಟಕಗಳಲ್ಲಿಯೂ ಅಭಿನಯಿಸುತ್ತಿದ್ದವರು. ಗಾಯನ ಮತ್ತು ವಾದನದ ತರಬೇತಿಯನ್ನು ಇವರು ಮೊದಲಿಗೆ ಶ್ರೀ ಕೊಳ್ಳೇಗಾಲ ನಾರಾಯಣಸ್ವಾಮಿಯವರಿಂದ ಪಡೆದರು. ಪ್ರೌಢ ಶಿಕ್ಷಣವನ್ನು ಪಿಟೀಲು ಚೌಡಯ್ಯನವರ ತಮ್ಮ ಟಿ.ಪುಟ್ಟಸ್ವಾಮಯ್ಯನವರಿಂದ ಪಡೆದರು. ಮೈಸೂರಿನಲ್ಲಿ ನೆಲೆಸಿ 'ಬಿಡಾರಂ' ಸಂಗೀತ ಶಾಲೆ ಯಲ್ಲಿ ಕಠಿಣ ಗುರುಕುಲ ಅಭ್ಯಾಸವನ್ನು ನಡೆಸಿ ಮುಂದೆ ವಿದ್ವಾಂಸರಾಗಿ ಪ್ರಖ್ಯಾತರಾದರು.

ಎಳವೆಯಲ್ಲಿ ಮಿಂಚಿದ ಬಾಲಪ್ರತಿಭೆಗಳು[ಬದಲಾಯಿಸಿ]

ತಂದೆಯ ಶಿಸ್ತಿನ ಶಿಕ್ಷಣದಿಂದ ರೂಪುಗೊಂಡು ನಾಗರಾಜ್ ಮತ್ತು ಡ್ಮಾ.ಮಂಜುನಾಥ್, ಕ್ರಮವಾಗಿ ಹತ್ತು ಮತ್ತು ಒಂಭತ್ತನೆಯ ವಯಸ್ಸಿನಲ್ಲಿ ಮೊದಲ ಕಛೇರಿಯನ್ನು ನಡೆಸಿಕೊಟ್ಟರು.ಹಾಗೂ ಬಾಲ್ಯದಿಂದಲೇ ಎಲ್ಲಾ ವಿದ್ವಾಂಸರು ಹಾಗೂ ವಿಮರ್ಶಕರಿಂದ ಅದ್ಭುತ ಬಾಲ ಕಲಾವಿದರೆಂದು ಮೆಚ್ಛುಗೆ ಪಡೆದರು. ನಾಗರಾಜ್, ತಮ್ಮ ಹದಿನಾಲ್ಕನೆಯ ವಯಸ್ಸಿನಲ್ಲಿ ಪ್ರತಿಷ್ಠಿತ 'ಮದರಾಸು ಮ್ಯೂಸಿಕ್ ಅಕಾಡಮಿ' ಯ 'ಅತ್ಯುತ್ತಮ ವಯಲಿನಿಸ್ಟ್' ಪ್ರಶಸ್ತಿ ಯನ್ನು ತಮ್ಮದಾಗಿಸಿಕೊಂಡರು. 1986 ರಲ್ಲಿ ಅಕಾಡೆಮಿ ಅವರಿಗೆ 'ಚಿನ್ನದ ಪದಕ'ವನ್ನು ಕೊಟ್ಟು ಸನ್ಮಾನಿಸಿತು. ಇವರನ್ನು ನಿಕಟವಾಗಿ ಹಿಂಬಾಲಿಸಿದ ಮಂಜುನಾಥ್, ತಾವೂ 'ಮದ್ರಾಸ್ ಮ್ಯೂಸಿಕ್ ಅಕಾಡೆಮಿ'ಯ 'ಅತ್ಯುತ್ತಮ ವಯೊಲಿನಿಸ್ಟ್' ಪ್ರಶಸ್ತಿಯನ್ನು ಪಡೆದುಕೊಂಡರು. ಮುಂದೆ ಮೈಸೂರು ಯುನಿವರ್ಸಿಟಿಯಲ್ಲಿ 'ಮಾಸ್ಟರ್ ಆಫ್ ಮ್ಯೂಸಿಕ್' ಪದವಿಯನ್ನು ಪ್ರಥಮ ರ್ಯಾಂಕ್ ಮತ್ತು ಮೂರು ಚಿನ್ನದ ಪದಕಗಳೊಂದಿಗೆ ಪೂರೈಸಿದರು. ಅಲ್ಲಿಗೆ ವಿಶ್ರಮಿಸದೆ, ಸಂಗೀತದ ಬಗ್ಗೆ ಪ್ರೌಢ ಪ್ರಬಂಧವನ್ನು ಮಂಡಿಸಿ ಡಾಕ್ಟರೇಟ್ ಪದವಿಯನ್ನು ಗಳಿಸಿದರು. ಸಹೋದರರಿಬ್ಬರೂ ಆಕಾಶವಾಣಿಯ 'ಎ ಟಾಪ್' ಶ್ರೇಣಿಯ ಕಲಾವಿದರಾಗಿದ್ದಾರೆ. ಡಾ|ಮಂಜುನಾಥ್, ಮೈಸೂರು ಯುನಿವರ್ಸಿಟಿಯಲ್ಲಿ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸುತ್ತಿದ್ದು ಹಲವಾರು ಮಂದಿಗೆ ಪಿ ಎಛ್ ಡಿ ಪದವಿಗೆ ಮಾರ್ಗಧರ್ಶಕರಾಗಿದ್ಧಾರೆ.

ನುಡಿಸುವಿಕೆ ಮತ್ತು ಶೈಲಿ[ಬದಲಾಯಿಸಿ]

ಮೈಸೂರು ಸಹೋದರರು ತಮ್ಮ ಅಪ್ರತಿಮ ಶಿಸ್ತಿನ ಗಂಭೀರ ಶೈಲಿಯಿಂದ ಇತರೆಲ್ಲರಿಗಿಂತ ಪ್ರತ್ಯೇಕವಾಗಿ ನಿಲ್ಲುತ್ತಾರೆ. ಇವರ ನುಡಿಸಾಣಿಕೆಯು ಭಾವನಾಪ್ರಧಾನವಾಗಿ ಗಮಕಗಳಿಂದ ಶ್ರೀಮಂತವಾಗಿದೆ. ಲೆಕ್ಕಾಚಾರಗಳಿಂದ ಕೂಡಿದ ಕ್ಲಿಷ್ಟ ಮತ್ತು ಅತಿವೇಗದ ಚಲನೆಗಳಲ್ಲಿಯೂ ಸಮತೋಲನವನ್ನು ಎಳ್ಳಷ್ಟೂ ಬಿಟ್ಟುಕೊಡದೆ, ನುಡಿಸುವುದು ಇವರ ವಿಶೇಷತೆ. ಹಿಂದುಸ್ಥಾನಿ ಮತ್ತು ದಕ್ಷಿಣಾದಿಗಳೆರಡರಲ್ಲಿಯೂ ಪ್ರಭುತ್ವವಿದ್ದು, (ಹೆಚ್ಚಾಗಿ) ನಾಗರಾಜ್ ದಕ್ಷಿಣಾದಿಯಲ್ಲಿ, ಮತ್ತು ಮಂಜುನಾಥ್ ಹಿಂದುಸ್ಥಾನಿಯಲ್ಲಿ ನಿರ್ವಹಿಸಿ ಜುಗಲ್ ಬಂದಿಗಳನ್ನೂ ಅದ್ಭುತವಾಗಿ ನಡೆಸಿಕೊಡುತ್ತಾರೆ. ತಮ್ಮ ಅನನುಕರಣೀಯ ಶೈಲಿಯಿಂದ ಅಸಂಖ್ಯ ಅಭಿಮಾನಿಗಳನ್ನು ಪಡೆದಿದ್ದು 'ಮೈಸೂರು ಸಹೋದರರ ಶೈಲಿ' ಎಂದು ಗುರುತಿಸಿ ಆಸ್ವಾದಿಸುವ ದೊಡ್ಡ ಕಲಾರಸಿಕರ ಬಳಗವನ್ನು ವಿಶ್ವದಾದ್ಯಂತ ಪಡೆದಿದ್ದಾರೆ.


ಯಶಸ್ಸಿನ ಹಾದಿಯ ಮೈಲಿಗಲ್ಲುಗಳು[ಬದಲಾಯಿಸಿ]

ಮೈಸೂರು ಸಹೋದರರು ಜಂಟಿಯಾಗಿ ಅಲ್ಲದೆ, ಇತರ ಜಗತ್ಪ್ರಸಿದ್ಧ ಸಂಗೀತಗಾರರೊಂದಿಗೆ (ಭಾರತೀಯ ಮತ್ತು ವಿದೇಶಿ), ಸಹವಾದನವನ್ನು ನಡೆಸಿದ್ದಾರೆ. ಉತ್ತರಾದಿ-ಮತ್ತು ದಕ್ಷಿಣಾದಿ ಜುಗಲ್ ಬಂದಿಗಳಲ್ಲಿ ಭಾಗವಹಿಸಿದ್ದಾರೆ. ಮೇಲೆ ತಿಳಿಸಿದಂತೆ ತಮ್ಮ ಎಳೆಯ ವಯಸ್ಸಿನಿಂದ ಕಛೇರಿಗಳನ್ನು ನಡೆಸಿಕೊಡುತ್ತಿರುವುದರಿಂದ ಇವರು ನಡೆಸಿಕೊಟ್ಟ ಕಾರ್ಯಕ್ರಮಗಳು ಸಹಸ್ರಾರು. ಅವುಗಳಲ್ಲಿ ಈ ಕೆಳಗಿನ ಕಾರ್ಯಕ್ರಮಗಳನ್ನು ವಿಶೇಷವಾಗಿ ಹೆಸರಿಸಬಹುದು.

  • ಕಾಮನ್ ಥ್ರೆಡ್ ಫೆಸ್ಟಿವಲ್, ಓರೆಗಾನ್, ಯು ಯಸ್ ಏ
  • ಆಲ್ ಯುರೋಪಿಯನ್ ಕಲ್ಚರಲ್ ಫೆಸ್ಟಿವಲ್, ಯುಕೆ
  • ಸಿಡ್ನಿ ಒಪೆರಾ ಹೌಸ್, ಆಸ್ಟ್ರೇಲಿಯಾ
  • ಫೆಸ್ಟಿವಲ್ ಆಫ್ ಇಂಡಿಯಾ ಲಂಡನ್, ಯುಕೆ
  • ರೋಯಲ್ ಛಾರಿಟಿ ಕಾನ್ಸರ್ಟ್, ಕೌಲಾಲಂಪುರ್ (ಮಲೇಷಿಯಾದ ರಾಜರೆದುರು)
  • ಫೇಡರೇಶನ್ ಸ್ಕ್ವೇರ್, ಮೆಲ್ಬರ್ನ್
  • ನಮೀಬಿಯಾದ ಅಧ್ಯಕ್ಷ ಡಾ| ಸ್ಯಾಂ ನುಜಾಮೋ ರಿಗಾಗಿ ವಿಶೇಷ ಕಾರ್ಯಕ್ರಮ

ಮತ್ತು ಈ ಕೆಳಗಿನ ಕೇಂದ್ರಗಳಲ್ಲಿ ನಡೆಸಿಕೊಟ್ಟ ಕಾರ್ಯಕ್ರಮಗಳು

  • ಪುಟ್ರಾ ವರ್ಲ್ಡ್ ಟ್ರೇಡ್ ಸೆಂಟರ್, ಕೌಲಾಲಂಪುರ್
  • ಥಿಯೇಟರ್ ಡ ಲ ವಿಲ್ಲಾ, ಪ್ಯಾರಿಸ್
  • ಶೈಕ್ಷಣಿಕ ತರಬೇತಿ ಮತ್ತು ಕಛೇರಿಗಳು, ಡೆಲಾವೇರ್ ಯುನಿವರ್ಸಿಟಿ
  • ಯುನಿವರ್ಸಿಟಿ ಆಫ್ ವೆಲ್ಸಿಯಾನ್
  • ಯುನಿವರ್ಸಿಟಿ ಆಫ್ ಅಯೋವಾ
  • ಯುನಿವರ್ಸಿಟಿ ಆಫ್ ಶಿಕಾಗೋ
  • ಯುನಿವರ್ಸಿಟಿ ಆಫ್ ನಾರ್ಥ್ ಟೆಕ್ಸಾಸ್
  • ಯುನಿವರ್ಸಿಟಿ ಆಫ್ ಒಸಾಕಾ
  • ಯುನಿವರ್ಸಿಟಿ ಆಫ್ ನಾರ್ಥ್ ಕೆರೋಲಿನಾ
  • ಟೆಕ್ಸಾಸ್ ಎ & ಎಮ್ ಯುನಿವರ್ಸಿಟಿ

ಕಛೇರಿ ನೀಡಿರುವ ದೇಶಗಳು: ಭಾರತ, ಅಮೆರಿಕಾ, ಕೆನಡಾ, ಇಂಗ್ಲೆಂಡ್, ಫ್ರಾನ್ಸ್, ಜಪಾನ್, ಜರ್ಮನಿ, ಆಸ್ಟ್ರಿಯಾ, ಹಾಂಗ್ ಕಾಂಗ್, ಸಿಂಗಾಪುರ, ಮಲೇಶಿಯಾ, ಫಿಲಿಫೀನ್ಸ್,, ಸ್ವಿಟ್ಸರ್ ಲ್ಯಾಂಡ್,ಸ್ಲೊವೇನಿಯ, ಆಸ್ಟ್ರೇಲಿಯಾ,ನೂಜ಼ಿಲಾಂಡ್ , ಅರಬ್ ದೇಶಗಳು ಮತ್ತು ಹಲವಾರು ಇತರ ದೇಶ ಗಳು.


ಅರಸಿ ಬಂದಿರುವ ಪ್ರಶಸ್ತಿಗಳು

  • ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
  • ಅಮೇರಿಕಾದ ವಿಶ್ವ ಸಂಸ್ಕೃತಿ ಸಂಸ್ಥೆಯಿಂದ ಶ್ರೇಷ್ಠತಾ ಪ್ರಶಸ್ತಿ
  • ಅಮೆರಿಕನ್ ಆರ್ಟ್ಸ್ ಕೌನ್ಸಿಲ್ ನಿಂದ ಆನರ್ಸ್
  • ಯುನಿವರ್ಸಿಟಿ ಆಫ್ ಒಕ್ಲಹಾಮದಿಂದ ಅರ್ಹತಾ ಪ್ರಶಸ್ತಿ
  • ಸಂಗೀತ ಸಾಮ್ರಾಟ್, ಸಂಗೀತ ರತ್ನ,, ಗಾನಕಲಾಶ್ರೀ,ವಯ್.ಟಿ.ತಾತಾಚಾರ್ ರಾಷ್ತ್ರೀಯ ಪ್ರಶಸ್ತಿ,ಸಂಗೀತ ವಿದ್ವನ್ ಮಣಿ, ಸತ್ಯಶ್ರೀ,ಕಂಚಿ ಕಾಮಕೂಟಿ ಪೀಠ ದಿಂದ ತಂತಿ ವಾದ್ಯ ಶಿರೋಮಣಿ, ಆರ್ಯಭಟ ಬಿರುದುಗಳು

ಮತ್ತು ಇತರ ಪ್ರಶಸ್ತಿ, ಪುರಸ್ಕಾರಗಳು ಸಂದಿವೆ.

ಆಕರ[ಬದಲಾಯಿಸಿ]

www.violinindia.com ಮತ್ತು ಇತರ ಸೈಟುಗಳು