ಮಾನ್ವಿ ನರಸಿಂಗರಾವ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಾನ್ವಿ ನರಸಿಂಗರಾವ್
ಜನನಏಪ್ರಿಲ್ ೨, ೧೯೧೧
ರಾಯಚೂರು
ಮರಣಸೆಪ್ಟೆಂಬರ್ ೯, ೧೯೬೯
ವೃತ್ತಿಪ್ರಾಧ್ಯಾಪಕರು
ವಿಷಯಕನ್ನಡ ಸಾಹಿತ್ಯ

ಮಾನ್ವಿ ನರಸಿಂಗರಾವ್ (ಏಪ್ರಿಲ್ ೨,೧೯೧೧ಸೆಪ್ಟೆಂಬರ್ ೯,೧೯೬೯) ಇಪ್ಪತ್ತನೆಯ ಶತಮಾನದ ಕನ್ನಡ ಸಾಹಿತ್ಯದ ನವ್ಯ ಬರಹಗಾರರಲ್ಲಿ ಒಬ್ಬರೆನಿಸಿದ್ದಾರೆ.

ಜೀವನ[ಬದಲಾಯಿಸಿ]

ಹೈದರಾಬಾದ್ ಕರ್ನಾಟಕ ವಿಭಾಗದ ಕನ್ನಡ ಸಾಹಿತ್ಯ ನವ ನಿರ್ಮಾಣದಲ್ಲಿ ಪ್ರಮುಖರಾದ ‘’ಮಾನ್ವಿ ನರಸಿಂಗರಾವ್’’’ ಏಪ್ರಿಲ್ ೨, ೧೯೧೧ರಂದು ರಾಯಚೂರಿನಲ್ಲಿ ಜನಿಸಿದರು. ತಂದೆ ರಾಘವೇಂದ್ರರಾವ್ ಅವರು ಮತ್ತು ತಾಯಿ ಚಂದ್ರಮ್ಮನವರು. ತಂದೆ ರಾಘವೇಂದ್ರ ರಾವ್ ಅವರು ರಾಯಚೂರಿನ ತಹಸೀಲ್‌ದಾರರ ಕಚೇರಿಯಲ್ಲಿ ಗಿರ್ದಾವರ್ ಆಗಿದ್ದರು. ಪ್ರಾಥಮಿಕದಿಂದ ಹೈಸ್ಕೂಲುವರೆಗೆ ರಾಯಚೂರಿನ ಹಮ್‌ದರ್ದ್ ಹೈಸ್ಕೂಲಿನಲ್ಲಿ ಓದಿದ ನರಸಿಂಗರಾಯರು ಪ್ರತಿಭಾವಂತ ವಿದ್ಯಾರ್ಥಿ ಎಂಬ ಖ್ಯಾತಿ ಪಡೆದಿದ್ದರು. ಮೆಟ್ರಿಕ್ ನಂತರದಲ್ಲಿ ಹೈದರಾಬಾದಿನ ಉಸ್ಮಾನಿಯ ವಿಶ್ವವಿದ್ಯಾಲಯದಿಂದ ಬಿ.ಎ. ಪದವಿ ಪಡೆದು, ೧೯೩೬ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಪದವಿಯನ್ನು ಉನ್ನತ ಶ್ರೇಣಿಯಲ್ಲಿ ಸ್ವರ್ಣಪದಕದೊಂದಿಗೆ ಪಡೆದರು. ಅವರು ಕನ್ನಡ ಸಾಹಿತ್ಯ ಲೋಕದ ಶ್ರೇಷ್ಠರಾದ ಬಿ.ಎಂ.ಶ್ರೀ. ಟಿ.ಎಸ್. ವೆಂಕಣ್ಣಯ್ಯ, ತೀನಂಶ್ರೀ ಮೊದಲಾದವರ ಅಚ್ಚುಮೆಚ್ಚಿನ ಶಿಷ್ಯರಾಗಿದ್ದರು.

ಪ್ರಮುಖ ಬರಹಗಳು[ಬದಲಾಯಿಸಿ]

ನರಸಿಂಗರಾಯರು ಬರೆದ ಹಲವಾರು ಕವನಗಳು ಹೈದರಾಬಾದಿನ ಸಾಹಿತ್ಯ ಮಂದಿರದಿಂದ ಪ್ರಕಟಿಸಿದ ‘ಶ್ರೀಕಾರ’ ಎಂಬ ಗ್ರಂಥದಲ್ಲಿ ‘ಮಾನ್ವಿ’ ಎಂಬ ಹೆಸರಿನಿಂದ ಪ್ರಕಟಗೊಂಡಿವೆ. ಇವರು ಪ್ರಕಟಿಸಿದ ಪ್ರಮುಖ ಕೃತಿಗಳೆಂದರೆ ವಿ.ಸೀ.ಯವರ ಪಂಪಯಾತ್ರೆಯಂತೆಯೇ ‘ಕನ್ನಡಯಾತ್ರೆ’. ‘ಕನ್ನಡದ ಪರಿಚಯ’ ಎಂಬ ಹಿಂದಿ ಭಾಷೆಯಲ್ಲಿ ಬರೆದ ಕೃತಿ. ಭಾಷಾಶಾಸ್ತ್ರಕ್ಕೆ ಸಂಬಂಸಿದ ಕೃತಿ ‘ನಡುಗನ್ನಡ.’ ಈ ನಡುಗನ್ನಡ ಚರಿತ್ರೆಯಲ್ಲಿ ಭಾಷಾಶಾಸ್ತ್ರದ ಬೆಳಕಿನಲ್ಲಿ ವಿವರವಾಗಿ ಬರೆದು “ಕನ್ನಡ ಸಾಹಿತ್ಯಕ್ಕಾಗಿ ಪರಿಪುಷ್ಟವಾಗಿಯೂ, ಶ್ಲಾಘನೀಯವಾಗಿಯೂ ಮಾನ್ವಿಯವರು ಮಾಡಿರುವರು” ಎಂದು ಎ.ಆರ್.ಕೃಷ್ಣಶಾಸ್ತ್ರಿಗಳಿಂದ ಹೊಗಳಿಸಿಕೊಂಡ ಗ್ರಂಥವಿದು. ‘ಸರಸ್ವತಿ ತತ್ತ್ವ’ ಎಂಬದು ೯ ಲೇಖನಗಳ ಸಂಗ್ರಹ. ಸಾಹಿತ್ಯದ ಉಗಮ, ರಸಸಿದ್ಧಾಂತ, ಕಲೆ ಮತ್ತು ನೀತಿ, ಕನ್ನಡ ಸಾಹಿತ್ಯ ಸಂಶೋಧನೆ, ಹೊಸಗನ್ನಡ ವಿಮರ್ಶೆ, ನಾಟಕ ಮೊದಲಾದುವುಗಳನ್ನೊಳಗೊಂಡಿದೆ. ಗುರುರಾಜ ಎಂಬ ಅಂಕಿತದಿಂದ ಹಲವಾರು ವಚನಗಳನ್ನು ರಚಿಸಿದ್ದಾರೆ.

ಸಂದ ಗೌರವಗಳು[ಬದಲಾಯಿಸಿ]

ಮಾನ್ವಿ ನರಸಿಂಗರಾಯರಿಗೆ ಸಂದ ಗೌರವಗಳೆಂದರೆ-ಹೈದರಾಬಾದು ಕರ್ನಾಟಕ ವಿಭಾಗದ ತನ್ನದೇ ಆದ ಸಾಹಿತ್ಯ ಪರಿಷತ್ತನ್ನು ಹೊಂದಿದ್ದು ೧೯೫೬ರಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ. ೧೯೫೯ರಲ್ಲಿ ಬಿದರೆಯಲ್ಲಿ ನಡೆದ ಅಖಿಲ ಕರ್ನಾಟಕ ಸಾಹಿತ್ಯ ಸಮ್ಮೇಳನದ ಸಂಶೋಧನೆ ಮತ್ತು ವಿಮರ್ಶಾಗೋಷ್ಠಿ ಅಧ್ಯಕ್ಷತೆ. ಆಂಧ್ರ ಪ್ರದೇಶದ ಕರ್ನಾಟಕ ಸಾಹಿತ್ಯ ಪರಿಷತ್ತಿನ ಸಂಚಾಲಕರಾಗಿ, ಭಾರತ ಸರ್ಕಾರದ ಸಾಹಿತ್ಯ ಅಕಾಡಮಿಯ ಕಾರ್ಯಶಕಾರಿ ಸಮಿತಿಯ ಸದಸ್ಯರಾಗಿಯೂ ಸಂದ ಗೌರವ.

ವಿದಾಯ[ಬದಲಾಯಿಸಿ]

ಈ ಎಲ್ಲ ಗೌರವಗಳಿಗೂ ಭಾಜನರಾದ ಮಾನ್ವಿ ನರಸಿಂಗರಾಯಾರು ಕನ್ನಡ ಕೈಂಕರ್ಯದಲ್ಲಿ ತೊಡಗಿದ್ದು ಪ್ರಾಧ್ಯಾಪಕರಾಗಿ ದುಡಿಯುತ್ತಿದ್ದಾಗಲೇ ಹೃದಯಾಘಾತಕ್ಕೊಳಗಾಗಿ ಸೆಪ್ಟೆಂಬರ್ ೯, ೧೯೬೯ರಲ್ಲಿ ಈ ಲೋಕವನ್ನಗಲಿದರು.

ಮಾಹಿತಿ ಕೃಪೆ[ಬದಲಾಯಿಸಿ]

ಕಣಜ Archived 2016-05-26 ವೇಬ್ಯಾಕ್ ಮೆಷಿನ್ ನಲ್ಲಿ.