ಮಾಕಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚನ್ನಪಟ್ಟಣದಿಂದ ಉತ್ತರಕ್ಕೆ ೧೫ ಕಿಲೋ ಮೀಟರ್ ದೂರವಿರುವ ಮಾಕಳಿಗ್ರಾಮ. ಸುಮಾರು ೩೫೦೦ ರಿಂದ ೪೦೦೦ ಜನಸಂಖ್ಯೆಯನ್ನು ಹೊಂದಿರುವ ಈ ಗ್ರಾಮ. ಸುಮಾರು ಹನ್ನೆರಡು ಸಾವಿರ ಎಕರೆಯ ಸುಂದರವಾದ ಹಸಿರಿನ ಅರಣ್ಯದ ನಡುವೆ ಇರುವ ಮಾಕಳಿಗ್ರಾಮ. ರಾಜ ಮಹಾರಾಜರ ಕಾಲದ ಇತಿಹಾಸದ ಪುಟಗಳನ್ನೇ ತೆರೆದಿಡಲು ಇಲ್ಲಿ ಐವತ್ತಕ್ಕು ಹೆಚ್ಚಿನದಾಗಿ ದೊರೆಯುವ ವೀರಗಲ್ಲುಗಳು, ಮಾಸ್ತಿಗಲ್ಲುಗಳು ಒಂದು ಪುಟ್ಟ ಇತಿಹಾಸವನ್ನೇ ತೆರೆದಿಡುತ್ತವೆ ಆದರೆ ಇವುಗಳ ಬಗ್ಗೆ ಅಧ್ಯಯನ ನಡೆಸುವ ಅಗತ್ಯತೆ ಅವಶ್ಯಕ ವಾಗಿದೆ ಹಾಗೂ ಇಲ್ಲಿ ದೊರೆಯುವ ಶಾಸನದಿಂದ ಈ ಪ್ರದೇಶವನ್ನು ವಿಜಯನಗರದ ಅರಸು ದೇವರಾಯನ ಕಾಲದಲ್ಲಿ ಗೋಪಿನಾಯಕ ಎಂಬುವವನು ಆಳ್ವಿಕೆ ಮಾಡುತ್ತಿದ್ದುದಾಗಿ ತಿಳಿದುಬರುತ್ತದೆ. ಊರಿನ ಪಕ್ಕದಲ್ಲಿ ರಾಮಚಂದ್ರ ಕಲ್ಲು ಎಂಬ ಪ್ರದೇಶದಲ್ಲಿ ಈ ಹಿಂದೆ ಕೋಟೆ ಇತ್ತು ಎಂಬುದಕ್ಕೆ ಮೂಕ ಸಾಕ್ಷಿಯಾಗಿ ನಿಂತ ಬೆಟ್ಟದ ಮೇಲಿನ ಕಲ್ಲುಗಳನ್ನು ಕಾಣಬಹುದು. ವೀರಗಲ್ಲುಗಳಿಗಿಂತ ಹೆಚ್ಚಿನದಾಗಿ ಮಾಸ್ತಿಗಲ್ಲುಗಳು ದೊರೆಯುವುದರಿಂದ ಈ ಊರಿನಲ್ಲಿ ಸತಿಸಹಗಮನ ಪದ್ದತಿ ಅಸ್ತಿತ್ವದಲ್ಲಿತ್ತು ಎಂಬುದನ್ನು ತಿಳಿಯಬಹುದಾಗಿದೆ.

  • ಮಾಕಳಿಯ ಗೋಪಾಲಕೃಷ್ಣ ದೇವಾಲಯವು ಇಲ್ಲಿನ ಶಾಸನದ ಪ್ರಕಾರ ಹೊಯ್ಸಳರ ಕಾಲದಲ್ಲಿ ನಿರ್ಮಿಸಲ್ಪಟ್ಟಿದೆಂದು ತಿಳಿಯುತ್ತದೆ. ಈ ದೇವಾಲಯದಲ್ಲಿ ಸುಂದರವಾದ ಕೃಷ್ಣನ ವಿಗ್ರಹವನ್ನು ಹೊಂದಿದೆ. ದೇವಾಲಯವು ಈಗ ಜೀರ್ಣೋದ್ದಾರದಿಂದಾಗಿ ಕಾಂಕ್ರೀಟ್ ಗೋಡೆಯನ್ನು ಪಡೆದಿದ್ದು ತನ್ನ ಹಳೆಯ ಸೊಬಗನ್ನು ಕಳೆದುಕೊಂಡಿದೆ.
  • ಮಾಕಳಿಯು ಗ್ರಾಮ ಪಂಚಾಯಿತಿಯನ್ನು ಹೊಂದಿದೆ. ಮಾಕಳಿ ಗ್ರಾಮಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ಪ್ರದೇಶವೆಂದರೆ ಮಾಕಳಿಹೊಸಹಳ್ಳಿ, ಕೋಟೆಹೋಲ(ರಾಮರಾಜಪುರ), ನಾಯಿದೊಳ್ಳೆ, ಪ್ಲಾಂಟೆಷನ ದೊಡ್ಡಿ, ರಾಮನರಸಿಂಹರಾಜಪುರ ಗ್ರಾಮಗಳನ್ನು ಒಳಗೊಂಡಿದೆ. ಮಾಕಳಿಯ ಪ್ರಖ್ಯಾತ ದೇವಸ್ಥಾನಗಳೆಂದರೆ ಶ್ರೀ ಹಿರಿಯಮ್ಮ ದೇವಸ್ಥಾನ, ಶ್ರೀ ಗೋಪಾಲಕೃಷ್ಣ ದೇವಸ್ಥಾನ, ಶ್ರೀ ಬಲ್ಲೆಲಿಂಗೇಶ್ವರ ದೇವಸ್ಥಾನ, ಶ್ರೀ ತಿಮ್ಮಪ್ಪ ದೇವಸ್ಥಾನ, ಶ್ರೀ ವೆಂಕಟೇಶ್ವರ ದೇವಸ್ಥಾನ ಮುಂತಾದವು. ಮಾಕಳಿ ಎಂದೊಡನೆ ಮಾಕಳಿ ಬೇರು ಪ್ರಸಿದ್ಧ ಮಾಕಳಿ ಬೇರಿನ ಉಪ್ಪಿನಕಾಯಿ ತುಂಬ ವಿಶಿಷ್ಟ. ಮಾಕಳಿಯಲ್ಲಿ ಒಂದನೆ ತರಗತಿಯಿಂದ ದ್ವಿತೀಯ ಪಿ.ಯು.ಸಿ ವರೆಗಿನ ಶಾಲಾ-ಕಾಲೇಜು ಸುತ್ತ ಮುತ್ತಲಿನ ಗ್ರಾಮಗಳ ಮಕ್ಕಳಿಗೆ ವ್ಯಾಸಂಗ ಮಾಡಲು ಅನುಕೂಲವಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರವಿದೆ. ಒಟ್ಟಿನಲ್ಲಿ ಉತ್ತಮವಾದ ವಾತವಾರಣದಿಂದ ಕೂಡಿದ ಗ್ರಾಮ ಇದಾಗಿದೆ. ಇಲ್ಲಿನ ಜನರ ಪ್ರಮುಖ ಕಸುಬು ವ್ಯವಸಾಯ. ಪ್ರಮುಖವಾದ ಬೆಳೆಗಳೆಂದರೆ ರಾಗಿ, ಭತ್ತ, ಮಾವು, ತರಕಾರಿ ಬೆಳೆಗಳು ಇತ್ಯಾದಿ. ವ್ಯವಸಾಯದ ಜೊತೆಗೆ ಹೈನುಗಾರಿಕೆ, ಕುರಿ ಸಾಕಣೆ, ರೇಷ್ಮೆ ಸಾಕಣೆ ಮುಂತಾದ ಈ ಜನರ ಮುಖ್ಯ ಆಧಾಯದ ಮೂಲಗಳಾಗಿವೆ.


  • ಮಾಕಳಿಯ ಮತ್ತೊಂದು ವಿಶಿಷ್ಟತೆಯೆಂದರೆ ಪ್ರತಿವರ್ಷವು ನಡೆಯುವ ಹಿರಿಯಮ್ಮ ಗ್ರಾಮ ದೇವತೆಯ ಹಬ್ಬವು ಬಹು ವಿಜೃಭಣೆಯಿಂದ ಜರಗುತ್ತದೆ. ಈ ಹಬ್ಬವು ಒಂದು ವಾರಗಳ ಕಾಲ ನಡೆಯುತ್ತದೆ.ಸುತ್ತ ಮುತ್ತಲ ಗ್ರಾಮದವರಿಗೂ ಒಂದು ಸಡಗರದ ದಿನವಾಗಿರುತ್ತದೆ. ಈ ಸಂದರ್ಭದಲ್ಲಿ ನಡೆಯುವ ದೇವರ ಉತ್ಸವ, ಕೋಲಾಟ, ಕೊಂಡ(ಬೆಂಕಿಯ ಕೆಂಡದ ಮೇಲೆ ನಡೆಯುವುದು), ನೀರ್ಗಾಲಿ, ಡೊಳ್ಳು ಕುಣಿತ ಮುತಾಂದ ಕಾರ್ಯಕ್ರಮಗಳು ಜನರ ಮನ ಸೆಳೆಯುತ್ತವೆ.


  • ಮಾಕಳಿ ಎಂಬ ಹೆಸರು ಮತ್ತೊಂದರ ಪ್ರಕಾರ ಮಾಕಳಿ ರಾಜ್ಯ ಅರಣ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉಪ್ಪಿನ ಕಾಯಿಗೆ ಬಳಸುವ "ಮಾಗಣಿ ಬೇರು" ದೊರೆಯುತ್ತಿದ್ದರಿಂದ ಮಾಗಣಿ ಊರು ತದನಂತರದಲ್ಲಿ "ಮಾಕಳಿ"ಯಾಗಿರಬೇಕು. ಇನ್ನೊಂದು ಐತಿಹ್ಯದ ಪ್ರಕಾರ ಈ ಊರಿನಲ್ಲಿ ನೂರಾರು ವರ್ಷಗಳ ಹಿಂದೆ ಮಹಾಕಾಳಿ ದೇವಾಲಯವಿತ್ತೆಂದು ಅದರಿಂದ ಮಹಾಕಾಳಿ ಊರೆಂದು ನಂತರದಲ್ಲಿ ಮಾಕಳಿಯಾಯಿತ್ತೆಂದು ತಿಳಿಯುತ್ತದೆ. ಆದರೆ ಈಗ ಮಹಾಕಾಳಿ ದೇವಾಲಯ ನಶಿಸಿಹೋಗಿ ಈಗಿನ ಹಿರಿಯಮ್ಮ ದೇವಾಲಯವೇ ಹಿಂದೆ ಮಹಾಕಾಳಿ ದೇವಾಲಯವಾಗಿರಬೇಕು ಎನಿಸುತ್ತದೆ.

ಮಾಕಳಿ ಶಾಸನ[ಬದಲಾಯಿಸಿ]

ಮಾಕಳಿ ಗ್ರಾಮದಿಂದ ಉತ್ತರಕ್ಕೆ ಸಿಗುವ ಈ ಶಾಸನದ ಕಾಲ ಕ್ರಿ.ಶ.೧೪೧೪. ಇದನ್ನು ಬಿ.ಎಲ್.ರೈಸ್ ರವರು ತಮ್ಮ ಎಫಿಗ್ರಾಫಿಯಾ ಆಫ್ ಕರ್ನಾಟಕದ ೯ನೇ ಸಂಪುಟದಲ್ಲಿ ಪ್ರಕಟಿಸಿದ್ದಾರೆ. ಇದೊಂದು ದಾನ ಶಾಸನವಾಗಿದೆ. ವಿಜಯನಗರದ ಅರಸು ದೇವರಾಯನ ಕಾಲದಲ್ಲಿ ಈ ಸೀಮೆಯನ್ನು ಗೋಪಿನಾಯಕ ಎಂಬುವವನು ಆಳ್ವಿಕೆ ಮಾಡುತ್ತಿರುವಾಗ ಕೇತುಗೌಡ ಎಂಬುವವನು ಈ ಪ್ರದೇಶದಲ್ಲಿ ಹೊಸದಾದ ಹಳ್ಳಿಯನ್ನು ಹಾಗೂ ಕೆರೆಯನ್ನು ಕಟ್ಟಿಸಿ ದತ್ತಿ ಬಿಟ್ಟ ವಿಚಾರ ಈ ಶಾಸನದಿಂದ ತಿಳಿದುಬರುತ್ತದೆ. ಈ ಶಿಲಾಶಾಸನದ ಭಾಷೆ ಹಾಗೂ ಲಿಪಿ ಕನ್ನಡದಲ್ಲಿದ್ದು, ೨೫ ಸಾಲುಗಳಿಂದ ಕೂಡಿದೆ.

ಮಾಕಳಿಯ ಬರಹಗಾರರು :

ಮಾಕಳಿಯಲ್ಲಿ ಸಿಗುವ ಮಾಸ್ತಿ-ವೀರಗಲ್ಲುಗಳು[ಬದಲಾಯಿಸಿ]

ಮಾಸ್ತಿಗಲ್ಲು - ವೀರಗಲ್ಲುಗಳು


ಹೊರಗಿನ ಕೊಂಡಿಗಳು[ಬದಲಾಯಿಸಿ]

"https://kn.wikipedia.org/w/index.php?title=ಮಾಕಳಿ&oldid=1165756" ಇಂದ ಪಡೆಯಲ್ಪಟ್ಟಿದೆ