ಮಲ್ಲಿಕಾರ್ಜುನ ಮನ್ಸೂರ್
Wikipedia ಇಂದ
ಮಲ್ಲಿಕಾರ್ಜುನ ಮನ್ಸೂರ್ (೧೯೦೧-೧೯೯೨) ಕನ್ನಡ ನಾಡು ಕಂಡ ಶ್ರೇಷ್ಠ ಸಂಗೀತ ಪ್ರತಿಭೆ. ಇವರು ಹಾಡಿದ್ದು ಹಿಂದೂಸ್ತಾನಿ ಖಯಾಲ್ ಸಂಗೀತ ಶೈಲಿಯ ಜೈಪುರಿ-ಅತ್ರೊಲಿ ಘರಾಣೆಯಯಲ್ಲಿ. ನೀಲಕಂಠ ಬುವಾ ಮತ್ತು ಪ್ರಖ್ಯಾತ ಸಂಗೀತಕಾರ ಅಲ್ಲಾದಿಯಾ ಖಾನ್ ಅವರ ಪುತ್ರರಾದ ಮಂಜಿ ಖಾನ್ ಹಾಗೂ ಬುರಜಿ ಖಾನ್ ಇವರ ಸಂಗೀತ ಗುರುಗಳಲ್ಲಿ ಪ್ರಮುಖರಾಗಿದ್ದಾರೆ. ಸುಮಾರು 60 ವರುಷಗಳಿಗಿಂತ ಹೆಚ್ಚು ಕಾಲ ದೇಶ-ವಿದೇಶಗಳಲ್ಲಿ ಸಂಗೀತ ಸುಧೆಯನ್ನು ಹರಿಸಿದ ಮಹಾನ್ ಸಂಗೀತಗಾರ ಮಲ್ಲಿಕಾರ್ಜುನ ಮನ್ಸೂರ್. ಬಾಲ್ಯದಲ್ಲಿ ನಾಟಕಗಳಲ್ಲಿ ಪಾತ್ರ ಮಾಡಿ, ಪ್ರಹ್ಲಾದ, ಧ್ರುವ, ನಾರದ ಮೊದಲಾದ ಪಾತ್ರಗಳ ಅಭಿನಯಕ್ಕಾಗಿ ಅಪಾರ ಜನಪ್ರಿಯತೆ ಗಳಿಸಿದರೂ, ಸಂಗೀತದ ಒಲವು ಅವರನ್ನು ಸಂಗೀತದ ಸಾಧನೆಗೆ ಕರೆದೊಯ್ಯಿತು.
ಬಡ ಕುಟುಂಬದಿಂದ ಬಂದ ಮಲ್ಲಿಕಾರ್ಜುನ ಮನ್ಸೂರ್, ಸರಳ ಜೀವನ, ವಿನಯತೆ ಮತ್ತು ನೇರನುಡಿಗಾಗಿ ಪ್ರಸಿದ್ಧರು. ಸಂಗೀತವೇ ನನ್ನ ಜೀವನ, ನನ್ನ ಕಾಯಕ ಮತ್ತು ಪೂಜೆ ಎಂದು ಹೇಳಿ, ಬಾಳಿದವರು ಮಲ್ಲಿಕಾರ್ಜುನ ಮನ್ಸೂರ್. ಮಹಾತ್ಮ ಗಾಂಧೀಜಿ ಮತ್ತು ಧಾರವಾಡದ ಮುರುಘಾ ಮಠದ ಮೃತ್ಯುಂಜಯ ಮಹಾಸ್ವಾಮಿಗಳವರಿಂದ ಪ್ರಭಾವಿತರಾದ ಇವರು, ವಚನ ಸಂಗೀತಕ್ಕಾಗಿ ನೀಡಿದ ಕೊಡುಗೆ ಅಪಾರ.
ಇವರು ತಮ್ಮ ಜೀವನ ಚಿತ್ರವನ್ನು "ನನ್ನ ರಸಯಾತ್ರೆ" ಎಂಬ ಹೆಸರಿನ ಪುಸ್ತಕದಲ್ಲಿ ದಾಖಲಿಸಿದ್ದಾರೆ. ದೇಶದ ಪ್ರತಿಷ್ಠತ ಪ್ರಶಸ್ತಿ ಕಾಳಿದಾಸ ಸಮ್ಮಾನ್ ಪಡೆದ ಪ್ರಥಮ ಕನ್ನಡಿಗ ಸಂಗೀತಗಾರರು ಇವರು. ಕರ್ನಾಟಕ ವಿಶ್ವವಿದ್ಯಾಲಯವು ಇವರಿಗೆ ಗೌರವ ಡಾಕ್ಟರೇಟ್ ನೀಡಿದೆ.ಭಾರತ ಸರಕಾರ ಇವರಿಗೆ ಪದ್ಮವಿಭೂಷಣಪ್ರಶಸ್ತಿಯನ್ನಿತ್ತು ಗೌರವಿಸಿದೆ. ಪ್ರಚಾರ, ರಾಜಕೀಯದಿಂದ ದೂರ ಉಳಿದ ಮಲ್ಲಿಕಾರ್ಜುನ ಮನ್ಸೂರ್ ಪ್ರಶಸ್ತಿಗಳು,ಸನ್ಮಾನಗಳಿಗಾಗಿ ಹಾತೊರಯಲಿಲ್ಲ.
ಇವರ ಸುಪುತ್ರ ರಾಜಶೇಖರ ಮನ್ಸೂರ್ ತಂದೆಯಂತೆ ಪ್ರಸಿದ್ಧ ಸಂಗೀತಕಾರರಾಗಿದ್ದಾರೆ.