ಮನೆಘಟ್ಟದ ಟಿ.ಸುಬ್ಬರಾಯರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪರಿಚಯ :[ಬದಲಾಯಿಸಿ]

  • ಜನನ :೧೫-೧೨-೧೯೧೭ ; ಮರಣ : ೨೫-೧೨-೨೦೦೮
  • ಶ್ಯಾನುಭೋಗ ಸುಬ್ಬರಾಯರು ಸಾಗರ ತಾಲ್ಲೂಕಿನಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿಯೇ ಜೈಮಿನಿ ಭಾರತ ,ಕುಮಾರವ್ಯಾಸ ಭಾರತ ಮೊದಲಾದ ಕಾವ್ಯಗಳನ್ನು ವಾಚನ ಮಾಡಿ , ಆ ತಾಲ್ಲೂಕಿನ ಪ್ರ-ಪ್ರಥಮ ಗಮಕಿಗಳೆಂದು ಹೆಸರು ಪಡೆದರು.(ಗಮಕ - ಕಾವ್ಯ ವಾಚನ ಮಾಡುವ ಕಲೆ)
  • ಮನೆಘಟ್ಟ ಸಾಗರದಿಂದ ಪ್ರಸಿದ್ಧ ಕೆಳದಿ ಮಾರ್ಗವಾಗಿ ಹೋದರೆ ಸುಮಾರು ಹನ್ನೊಂದು ಕಿಲೋಮೀಟರ್ ದೂರದಲ್ಲಿದೆ. ಅದು ಒಂದು ಚಿಕ್ಕ ಹಳ್ಳಿ.

ಮನೆಘಟ್ಟದ ಟಿ ಸುಬ್ಬರಾಯರ ತಂದೆ ಶ್ರೀಯುತ ತಿಮ್ಮಪ್ಪನವರು ; ತಾಯಿ ಶ್ರೀಮತಿ ಭವಾನಮ್ಮನನವರು. ಸುಬ್ಬಾಯರು ಅವರ ಹಿರಿಯ ಮಗ ಅವರಿಗೆ ಶೀ ಗೋಪಾಲ ಕೃಷ್ಣ , ಶ್ರೀ ಮಂಗಳ ಮೂರ್ತಿ ಸಹೋದರರು. ಮೂ ವರು ಸಹೋದರಿಯರು. ಸುಬ್ಬರಾಯರಿಗೆ ೧೪ ವರ್ಷವಾದಾಗ ಅವರ ತಂದೆ ತೀರಿಕೊಂಡರು, ತಂದೆ ತೀರಿದ ಮರು ದಿನವೇ ತಾಯಿಯೂ ತೀರಿಕೊಂಡರು ; ಆ ಚಿಕ್ಕ ವಯಸ್ಸಿನಲ್ಲಿಯೇ ಕಡು ಬಡತನದ ಸಂಸಾರದ ಹೊಣೆ ಗಾರಿಕೆ ಹೊತ್ತು, ಇರುವ ಸ್ವಲ್ಪ ಅರೂಪವಾಗಿದ್ದ ಜಮೀನನ್ನೇ ತಮ್ಮಂದಿರ ಸಹಾಯದಿಂದ ಅಭಿವೃದ್ಧಿ ಪಡಿಸಿ ತಮ್ಮಂದಿರ ಮತ್ತು ತಂಗಿಯರಿಗೆ ತಕ್ಕ ಮಟ್ಟಿನ ವಿದ್ಯಾಭ್ಯಾಸ ಮಾಡಿಸಿದರು.. ಸ್ವಲ್ಪ ಕಾಲ ಶಿಕ್ಷಕರಾಗಿ ಕೆಲಸ ಮಾಡಿದರು.

  • ತಾಯಿಯ ಸೋದರಮಾವ ಕೆಳದಿ ಲಕ್ಷ್ಮಿನಾರಾಯಣ ನಾಡಿಗರು ಸುತ್ತ ಮುತ್ತದ ಅನೇಕ ಗ್ರಾಮಗಳ ಶಾನುಭೋಗರಾಗಿದ್ದರು ಅವರಲ್ಲಿ ಅದರ ಲೆಕ್ಕ ಪತ್ರಗಳನ್ನು ಬರೆಯುವಲ್ಲಿ ಸಹಾಯಕರಾಗಿ ಕೆಲಸ ಮಾಡಿದರು. ನಾಡಿಗರ ನಂತರ ನಾಡಿಗರ ಅಪೇಕ್ಷೆಯಂತೆ ಸುಬ್ಬರಾಯರೇ ಆ ಗ್ರಾಮಗಳಿಗೆಲ್ಲಾ ಶಾನುಭೋಗರಾದರು . ಶಾನುಭೋಗ ಸುಬ್ಬರಾಯರಾಗಿ ಉತ್ತಮ ಕೆಲಸ ಮಾಡಿದ್ದರಿಂದ ಅವು ಶ್ಯಾನುಭೋಗ ಸುಬ್ಬರಾಯರೆಂದು ಹೆಸರು ಪಡೆದರು. ತಾವೂ ವಿವಾಹವಾಗಿ ತಮ್ಮಂದಿರ , ತಂಗಿಯರ ವಿವಾಹಗಳನ್ನು ನೆರವೇರಿಸಿದರು. ಸುಬ್ಬರಾಯರ ಪತ್ನಿ ಸಿದ್ದಾಪುರದ ದೊಡ್ಮನೆ ಶ್ರೀಮತಿ ಶರಾವತಿಯವರು. ಅವರದು ಅವಿಭಕ್ತ ಕುಟುಂಬ. ಈ ಶತಮಾನದ ಆರಂಭದ ವರೆಗೂ ಅವಿಕ್ತ ಕುಟುಂಬವಾಗಿ ತಾಲ್ಲೂಕಿನಲ್ಲಿಯೇ ೨೦-೨೪ ಜನರ ಮಾದರಿ ಕುಟುಂಬವೆಂದು ಹೆಸರು ಪಡೆದಿದ್ದಿತು.
  • ಆ ಪ್ರಾಂತ್ಯದ ಜನ ಅವರನ್ನು ಸುಬ್ಬರಾಯರು ಎಂದು ಕರೆಯುವದಕ್ಕಿಂತ ಅಣ್ಣು ಅಣ್ಣಯ್ಯ - ಅಣ್ಣುಮಾವ ಎಂದು ಕರೆಯುವುದೇ ಹೆಚ್ಚು . ಅವರು ಚಿಕ್ಕ ಮಗುವಗಿದ್ದಾಗ ಅವರ ತಾಯಿ, ಅಣ್ಣಪ್ಪ ಎಂದು ಹೆಸರಿಡುವುದಾಗಿ ಹರಕೆ ಮಾಡಿ ಕೊಂಡಿದ್ದರಿಂದ ಅವರ ನಾಮಕರಣದ ಹೆಸರಿಗಿಂತ ಅಣ್ಣು ಎಂಬ ಹೆಸರೇ ಹತ್ತಿರದವರಲ್ಲಿ ರೂಢಿಯಲ್ಲಿತ್ತು.
  • ಅವರಿಗೆ ನಾಲ್ಕು ಜನ ಗಂಡು ಮಕ್ಕಳು ಹಾಗೂ ನಾಲ್ಕು ಜನ ಹೆಣ್ಣು ಮಕ್ಕಳು. ಹಿರಿಯವರಾದ ಎಮ್ ಎಸ್ ತಿಮ್ಮಪ್ಪ ಲೇಖಕ; ಎರಡನೆಯವರಾದ ನಾಗರಾಜ ಮತ್ತು ಕೊನೆಯವರಾದ ಸಮುದ್ಯತಾ ಉತ್ತಮ ಗಮಕಿಗಳಾಗಿ ಹೆಸರು ಪಡೆದಿದ್ದಾರೆ.

ಸ್ವಾತಂತ್ರ್ಯ ಸಂಗಾಮದಲ್ಲಿ :[ಬದಲಾಯಿಸಿ]


  • ಶ್ರೀ ಸುಬ್ಬರಾಯರು ಪ್ರಾಯಕ್ಕೆ ಬರುವಾಗ ಎಲ್ಲೆಡೆ ಸ್ವಾತಂತ್ರ್ಯ ಸಂಗ್ರಾಮದ ಕಾವು ಇತ್ತು. ಹಾಗೆಯೇ ಸುಬ್ಬರಾಯರು ಗಾಂಧೀಜಿಯವರ ಪ್ರಭಾವಕ್ಕೆ ಒಳಗಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದರು. ಗ್ರಾಮಾಂತರ ಪ್ರದೇಶದಲ್ಲಿ ಮನೆಮನೆಗೆ ಹೋಗಿ ತಮ್ಮ ಸುಮಧುರವಾದ ಕಂಠದಿಂದ ದೇಶ ಭಕ್ತಿ ಗೀತೆಗಳನ್ನು ಹಾಡಿ ಜನರನ್ನು ಜಾಗ್ರತ ಗೊಳಿಸುತ್ತಿದ್ದರು ; ಅದರ ಜೊತೆಗೆ ಖಾದಿ ಬಟ್ಟೆಯನ್ನು ಮಾರಾಟಮಾಡುತ್ತಿದ್ದರು.

ಸಮಾಜ ಸೇವೆ ಮತ್ತು ಉದಾರತೆ :[ಬದಲಾಯಿಸಿ]


  • ಸುಬ್ಬರಾಯರು ಅಜಾನುಬಾಹು ಸುಂದರ ದಷ್ಟ ಪುಷ್ಟ ಶರೀರ ಉಳ್ಳವರು. ಅವರು ಉತ್ತಮ ಕೃಷಿಕರು. ಅವರ ಅವಿಭಕ್ತ ಕುಟುಂಬ ತಾಲೂಕಿಗೇ ಮಾದರಿಯಾಗಿತ್ತು. ಅವರ ಮನೆಗೆ ಯಾರೇ ಬಂದರೂ ಗೌರವದಿಂದ ಬರಮಾಡಿಕೊಂಡು ಊಟ ಉಪಚಾರದ ವ್ಯವಸ್ಥೆ ಆಗುತ್ತಿತ್ತು.. ಆಗ ಶಾಲೆಯಲ್ಲಿ ಕೆಲಸಮಾಡುವ ಶಿಕ್ಷಕರಿಗೆ ವಸತಿ ಸೌಕರ್ಯ ಇರಲಿಲ್ಲ. ಸುತ್ತ ಮುತ್ತ ಇರುವ ಶಾಲೆಯಲ್ಲಿ ಕೆಲಸ ಮಾಡುವ ಶಿಕ್ಷಕರಿಗೆ ಸುಬ್ಬರಾಯರ ಮನೆಯಲ್ಲಿಯೇ ಊಟೋಪಚಾರದ ವ್ಯವಸ್ಥೆ ಮಾಡಲಾಗುತ್ತಿತ್ತು.
  • ಶ್ಯಾನುಭೋಗರಾಗಿ ಶುದ್ಧ ಹಸ್ತರಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿ ಜನರಿಗೆ ರೈತರಿಗೆ ಮಾರ್ಗದರ್ಶನ ಮಾಡಿ ಜನರಿಂದಲೂ ಸರ್ಕಾರದಿಂದಲೂ ಮೆಚ್ಚುಗೆ ಪಡೆದ್ದಿದ್ದರು. ಜನರ ಕಷ್ಟಸುಖಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಊರಿಗೆ ಪ್ರಾಥಮಿಕ ಶಾಲೆ , ಗ್ರಾಮಕ್ಕೆಫ್ರೌಢಶಾಲೆಗಳನ್ನು ತರುವಲ್ಲಿ ಇವರ ಪರಿಶ್ರಮ ಸಾಕಷ್ಟು ಇತ್ತು . .
  • ಅವರ ಕೈಬರೆಹ ಅತ್ಯಂತ ಸುಂದರ ಮತ್ತು ಸ್ಪುಟವಾಗಿತ್ತು. ಆ ಪ್ರಾಂತ್ಯದಲ್ಲಿ ಕುಟುಂಬಗಳಲಿ ಆಗಿರುವ ಹಿಸ್ಸೆ ಪತ್ರ, ಪಾರಿಕತ್ತು, ಕ್ರಯಪತ್ರಗಳು ಬಹಳಷ್ಟು ಅವರಿಂದಲೇ ಬರೆಯಲ್ಪಟ್ಟು ವಿವಾದಕ್ಕೆ ಅವಕಾಶವಿಲ್ಲದಂತೆ ಇರುತ್ತಿತ್ತು.
  • ಅವರು ಆ ಪ್ರಾಂತದ ಅಜಾತ ಶತ್ರುವಾಗಿದ್ದರು. ಆ ಪ್ರಾಂತ್ಯದಲ್ಲಿ, ವ್ಯಕ್ತಿ - ವ್ಯಕ್ತಿಗಳಲ್ಲಿ ಗ್ರಾಮ ಗ್ರಾಮಗಳಲ್ಲಿ ತಂಟೆ ತಕರಾರು ಬಂದಲ್ಲಿ ಅವುಗಳನ್ನು ಪರಸ್ಪರ ಪ್ರೀತಿ ವಿಸ್ವಾಸದಿಂದ ಪಂಚಾಯತರಾಗಿ, ಮಧ್ಯಸ್ಥರಾಗಿ ಬಗೆಹರಿಸುತ್ತಿದ್ದರು. ಅನೇಕ ಕುಟುಂಬದ ಹಿಸ್ಸೆ (ಆಸ್ತಿವಿಭಾಗ) ಮತ್ತು ಇತರೆ ಜಗಳ-ವ್ಯಾಜ್ಯಗಳನ್ನು ಉತ್ತಮ ಪಂಚಾಯತುದಾರರಗಿ ಬಗೆಹರಿಸಿದ್ದಾರೆ. ಅವರಿಗೆ ಉತ್ತಮ ಪಂಚಾಯತಿ-ದಾರರೆಂಬ ದೊಡ್ಡ ಮರ್ಯಾದೆ ಇತ್ತು. ಈ ಎಲ್ಲಾ ಸೇವೆಗಾಗಿ ಅವರನ್ನು ಅನೇಕ ಸಂಘ ಸಂಸ್ಥೆಗಳು ಸನ್ಮಾನಿಸಿವೆ.

ಕಲಾಸೇವೆ ಮತ್ತು ರಾಜ್ಯ ಪ್ರಶಸ್ತಿ ವಿಜೇತರು :[ಬದಲಾಯಿಸಿ]


  • ಅವರು ಸ್ವಂತ ಪರಿಶ್ರಮ ಪಟ್ಟು ಕಾವ್ಯ ವಾಚನವನ್ನು ಅಭ್ಯಾಸ ಮಾಡಿದ್ದರು. ಅವರದು ಮಧುರವಾದ ಕಂಚಿನ ಕಂಠ. ಐವತ್ತು-ನೂರು ಜನರಿದ್ದ ಸಭೆಗೆ ಅವರಿಗೆ ಮೈಕೇ ಅಗತ್ಯ ಇರಲಿಲ. ಆಗಿನ ಕಾಲದಲ್ಲಿ ಮೈಕಿನ ಸೌಲಭ್ಯವೂ ಇರಲಿಲ್ಲ. ಆನೇಕ ಹಳ್ಳಿಗಳಿಗಳಿಗೆ ಹೋಗಿ ಪ್ರಾಚೀನ ಕಾವ್ಯಗಳಾದ ಜೈಮಿನಿ ಭಾರತ , ಗದುಗಿನ ಭಾರತ , ನೀತಿ ಶತಕ, ಮತ್ತು ಇತರ ಕಾವ್ಯಗಳನ್ನು ಸಾಗರ, ಸೊರಬ, ದಕ್ಷಿಣ ಕನ್ನಡ ಪ್ರದೇಶಗಳಲ್ಲಿ ವಾಚನ ಮಾಡಿ, ಗಮಕ ಕಾರ್ಯಕ್ರಮ ನೀಡಿ, ಸಾಹಿತ್ಯ ಸೇವೆ ಮತ್ತು ಪ್ರಚಾರ ಮಾಡಿದರು . ಅವರು ಯಾವುದೇ ಸಿದ್ಧತೆ ಇಲ್ಲದೆ ಈ ಪ್ರಾಚೀನ ಕಾವ್ಯಗಳನ್ನು ಓದಬಲ್ಲವರಾಗಿದ್ದರು, ಅವರು ಬೆಳೆಯೂರಿನ ಪಾಠಶಾಲೆಯಲ್ಲಿ ಗಮಕ ತರಗತಿಗಳನ್ನು ನೆಡೆಸಿ, ಶಿಷ್ಯರನ್ನು ತಯಾರು ಮಾಡಿದ್ದಾರೆ.
  • ಇವರ ಸಾಹಿತ್ಯ ಸೇವೆಯನ್ನು ಗಮನಿಸಿ ಕರ್ನಾಟಕ ಸಕಾರವು ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತು. ಅದರಿಂದ ಬಂದ ರೂ. ೫೦೦೦/- ವನ್ನು ಡಿಪಾಸಿಟ್ ಮಾಡಿ ಬರುವ ಬಡ್ಡಿಯನ್ನು ಗಮಕ ಕಲೆ ಮತ್ತು ಸಾಹಿತ್ಯ ಪ್ರಚಾರಕ್ಕೇ ಮೀಸಲಿಟ್ಟಿದ್ದಾರೆ. ಸಾಗರದಲ್ಲಿರುವ ಮಲೆನಾಡು ಗಮಕ ಕಲಾಸಂಘ ಸಾಗರ ಈ ಸಂಸ್ಥೆಯೂ ಅವರ ಸೇವೆಯನ್ನು ಸ್ಮರಿಸಿ ಅವರನ್ನು ೧೧- ೨ -೧೯೮೮ ರಲ್ಲಿ ಸನ್ಮಾನಿಸಿದೆ
  • ಅವರು ಉತ್ತಮ ನಟರೂ ಆಗಿದ್ದರು . ಆಗಿನ ಕಾಲದಲ್ಲಿ ಸ್ಥಳೀಯ ನಾಟಕ ಮಂಡಲಿಗಳು ಇದ್ದವು. ಕೆಳದಿ ಸೀಮೆಯಲ್ಲಿಯೂ ಸ್ಥಳೀಯ ಕಲಾವಿದರಿಂದ ಕೂಡಿದ ಒಂದು ಹವ್ಯಾಸಿ ನಾಟಕ ಮಂಡಳಿ ಇತ್ತು. ಅದರಲ್ಲಿ, ವೀರ ಅಭಿಮನ್ಯು, ಸ್ತ್ರೀ ರತ್ನ , ರಾಜಾ ಭರ್ತೃಹರಿ, ತುಳಸಿ ಜಲಂಧರ, ಮೊದಲಾದ ನಾಟಕಗಳನ್ನು ಪ್ರದರ್ಶನ ಮಾಡುತ್ತಿದ್ದರು. ಅವುಗಳಲ್ಲಿ ಮುಖ್ಯ ಪಾತ್ರ ವಹಿಸುತ್ತಿದ್ದ ಸುಬ್ಬರಾಯರ ಅಭಿನಯ , ಸುಸ್ರಾವ್ಯ ಹಾಡುಗಾರಿಕೆ ಉತ್ತಮ ಮಟ್ಟದ್ದಾಗಿರುತ್ತಿತ್ತು . ಈಗಲೂ ಅವರ ಜೊತೆ ಅಭಿನಯಿಸಿದ ಅವರ ತಮ್ಮ ಶ್ರೀ ಮಂಗಳಮೂರ್ತಿ ಮತ್ತು ಅವರ ಮಾವ ಬೆಳೆಯೂರು ಲಕ್ಷ್ಮಿ ನಾರಾಯಣ ರಾವ್ ನೆನಪಿಸಿಕೊಳ್ಮ್ಳತ್ತಾರೆ..

ಅಭಿಪ್ರಾಯ :[ಬದಲಾಯಿಸಿ]


  • ಪ್ರಸಿದ್ಧ ಗಮಕ (ಕಾವ್ಯ ವಾಚನ) ವ್ಯಾಖ್ಯಾನ ಕಾರರೂ , ಯಕ್ಷಗಾನ(ಜಾಗರಣ ಬ್ಶೆಠಕ್) ಅರ್ಥಧಾರಿಗಳೂ ಆದ ಶ್ರೀ ಅಮಚಿ ಎಂ.ಆರ್. ಲಕ್ಷ್ಮಿನಾರಾಯಣ ಅವರು ಶ್ರೀ ಸುಬ್ಬರಾಯರ ವಾಚನದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹೀಗೆ ದಾಖಲಿಸಿದ್ದಾರೆ :
  • ಘನ ಗಂಭೀರವಾದ ಪುರುಷ ಕಂಠ, ರಸಭಾವ ಪೋಷಕವೂ, ಛಂದೋಬದ್ಧವೂ ಆದ ಕಾವ್ಯ ವಾಚನ ಶೈಲಿ, ಸಾಹಿತ್ಯ ಸಂಗೀತಗಳ ಸಮ ಮಿಶ್ರಣ, ಸ್ಫುಟವಾದ ಉಚ್ಛಾರ , ಶುದ್ಧವೂ ನಿರರ್ಗಳವೂ ಆದ ಓದು, ಇವೆಲ್ಲ ಆ ಗಮಕಿ ಸುಬ್ಬರಾಯರ ನಿತ್ಯ ಆಭರಣವು.
  • ಕುಮಾರವ್ಯಾಸ ಭಾರತ , ಜೈಮಿನಿ ಭಾರತ, ತೊರವೆ ರಾಮಾಯಣ, ಹರಿಶ್ಚಂದ್ರ ಕಾವ್ಯ, ಇವು ಅವರಿಗೆ ಇಷ್ಟವಾದ ಕಾವ್ಯಗಳು. ಹಳ್ಳಿಗಳಲ್ಲಿ ಧ್ವನಿವರ್ಧಕಗಳನ್ನು ವ್ಯವಸ್ಥೆ ಮಾಡುವುದು ಕಷ್ಟವಾಗಿದ್ದ ಕಾಲ ಅದು. ಸುಬ್ಬರಾಯರಿಗೆ ಅದು ಬೇಕಾಗುತ್ತಿರಲಿಲ್ಲ. ಇಡೀಸಭಾ ಭವನ ಮೊಳಗುವಂತೆ ಹಾಡುತ್ತಿದ್ದರು. ಯಾವ ಪೂರ್ವ ತಯಾರಿ ಇಲ್ಲದೆ ಹಾಡಬಲ್ಲ ಗಮಕಿಗಳೆಂದರೆ, ನನ್ನ (ಎಂ.ಆರ್. ಲಕ್ಷ್ಮಿನಾರಾಯಣ) ಒಡನಾಟಕ್ಕೆ ಒದಗಿದವರಲ್ಲಿ ಸುಬ್ಬರಾಯರೊಬ್ಬರೇ ! ವೇದಿಕೆ ಏರಿದ ಮೇಲೆ, ಮುಂದು ಮುಂದಿನ ಪದ್ಯಕ್ಕೆ ತಕ್ಕ ರಾಗ ಸಂಯೋಜನೆ ಮಾಡಿಕೊಳ್ಳತ್ತಿದ್ದರು.
  • ವ್ಯಾಖ್ಯಾನಕ್ಕೆಂತಲೇ ಮತ್ತೊಬ್ಬರು ಇದ್ದಾಗ್ಯೂ , ಕೆಲವು ಗಮಕಿಗಳು ಪದ್ಯದಲ್ಲಿನ, ಕರ್ತೃ, ಕರ್ಮ, ಕ್ರಿಯಾಪದಗಳನ್ನು ಸರಿಯಾಗಿ ಹೊಂದಿಸಿ ಕೆಲವು ಸಾಲುಗಳನ್ನು ಹಿಂದೆ ಮುಂದೆ ಮಾಡಿ ಪದ್ಯದಲ್ಲೇ ಇರದ ಬೇರೆ ಪದಗಳನ್ನು ತೂರಿಸಿ ತಮ್ಮ ಪರಾಕ್ರಮವನ್ನು ಮೆರೆಸುತ್ತಾರೆ. ಈ ಕಸರತ್ತು ಮಾಡುವಾಗ ಪದ್ಯದ ಛಂದೋ ಭಂಗವಾಗುತ್ತದೆ. ಕ್ರಮ ಪ್ರಕಾರ ಇರುವ ಮಾತ್ರಾಗಣಗಳ ಗುಚ್ಛ ಕಲಸುಮೇಲೋಗರವಾಗುತ್ತದೆ. ವ್ಯಾಖ್ಯಾನಕಾರರು . ವ್ಯಾಖ್ಯಾನ ಕಾರರು ಇಲ್ಲದಿರುವಾಗ ಇದೆಲ್ಲಾ ಬೇಕಾಗಬಹುದು. ವ್ಯಖ್ಯಾನಕ್ಕೆ ಮತ್ತೊಬ್ಬರಿರುವಾಗ ಛಂದೋಭಂಗವಾಗದಂತೆ, ರಸ ಭಾವಗಳಿಗೆ ತಕ್ಕ ರಾಗದಲ್ಲಿ ಲಯಬದ್ಧವಾಗಿ ಹಾಡುವುದು ಮಾತ್ರಾ ವಾಚನಕಾರರ ಕರ್ತವ್ಯ..
  • ಈ ಕರ್ತವ್ಯ ಪಾಲನೆಯನ್ನು ಸುಬ್ಬರಾಯರು ಚಂದವಾಗಿ ಮಾಡುತ್ತಿದ್ದರು. ಭಾಮಿನಿ - ವಾರ್ಧಿಕ ಷಟ್ಪದಿಗಳಾಗಲಿ , ಕಂದ ಪದ್ಯವಾಗಲಿ, ವೃತ್ತ ರಗಳೆಯಾಗಿರಲಿ , ಅದನ್ನು ಮೊದಲಿಂದ ಕೊನೆಯವರೆಗೆ ಛಂದಸ್ಸು ವ್ಯತ್ಯಯವಾಗದಂತೆ ನಿರ್ದಿಷ್ಟಪಡಿಸಿಕೊಂಡ ರಾಗದಲ್ಲಿ ಒಮ್ಮೆ ಹಾಡಿ ಮುಗಿಸು ತ್ತಿದ್ದರು. ಮಾತ್ರಾಗಣಗಳು ಪಲ್ಲಟವಾಗದಂತೆ ಗುರು ಲಘುಗಳ ಉಚ್ಛಾರ-ಕಾಲ ಹೆಚ್ಚು ಕಡಿಮೆಯಾಗದಂತೆ ಸಾಹಿತ್ಯ ತಿಳಿಯುವಂತೆ ರಾಗ ತಪ್ಪದಂತೆ ಒಂದು ಪದ್ಯವನ್ನು ಸಾರೋದ್ಧಾರವಾಗಿ ಹಾಡುತ್ತಿದ್ದರು. ತೀರಾ ಕ್ಲಿಷ್ಟವಾದ ಪದ ಸಮುಚ್ಚಯಗಳಿದ್ದು ರೂಪಕ, ಶ್ಲೇಷ, ವ್ಯಂಗ್ಯ ಒಗಟುಗಳಿದ್ದು ಗೂಢಾರ್ಥಗಳಿಂದ ಕೂಡಿದ ಪದ್ಯವಾದರೆ, ಅವು ಸ್ಪಷ್ಟವಾಗುವ ಹಾಗೆ ಎರಡನೇ ಬಾರಿ ಬಿಡಿಸಿ ಬಿಡಿಸಿ ಹಾಡುವ ಕ್ರಮವೂ ಇತ್ತು . ಅಂಥಾ ಸನ್ನಿವೇಶ ತೀರಾ ಕಡಿಮೆ. ಸುಬ್ಬರಾಯರ ಈ ಕ್ರಮ ನನಗಂತೂ ಮೆಚ್ಚಿಕೆಯಾಗಿತ್ತು.
  • ಅವರ ಧ್ವನಿ ವೀರ ರೌದ್ರ ಭಯಾನಕ ರಸಗಳಿಗೆ ಇವರ ಪುರುಷ ಗಂಭೀರ ಕಂಠ ಕೊಡುತ್ತಿದ್ದ ಅದ್ಭುತ ಪೋಷಣೆ ಹಾಗೂ ಔನ್ನತ್ಯ ದುಃಖ, ಭಕ್ತಿ, ಕರುಣ ರಸಗಳಿಗೆ ಒದಗುತ್ತಿರಲಿಲ್ಲ. ಇದಕ್ಕೆ ಅವರ ಧ್ವನಿಯೇ ಕಾರಣವಿರಬೇಕು.

ಪಂಚಾಯತರಾಗಿ ;[ಬದಲಾಯಿಸಿ]

  • ಕುಟುಂಬ ಕಲಹ, ಆಸ್ತಿ ವಿವಾದ, ಗಡಿ ತಂಟೆ, ಹಿಸ್ಸೆ ಪ್ರಕರಣ , ವ್ಯವಹಾರ ತೊಡಕು ,ಸಂಬಂಧಗಳ ಸಮಸ್ಯೆ ಇತ್ಯಾದಿ ಹಲವಾರು ಪ್ರಕರಣಗಳ ಪಂಚಾಯತರಾಗಿ ಸುಬ್ಬರಾಯರು ಮತ್ತು ನಾನು (ಎಮ್.ಆರ್. ಲಕ್ಷ್ಮಿನಾರಾಯಣ)ಭಾಗವಹಿಸಿದ್ದೆವು. ಸಮಸ್ಯೆಗಳ ಮೂಲವೆಲ್ಲಿ ಎಂಬುದನ್ನು ನಿರ್ದಿಷ್ಟವಾಗಿ ಹುಡುಕಿ ತೆಗೆಯುತ್ತಿದ್ದರು. ಮನಷ್ಯ ಸಹಜವಾದ ದೌರ್ಬಲ್ಯಗಳನ್ನು ಗುರುತಿಸಿ , ಅವುಗಳಿಗೆ ಯಾರನ್ನೂ ದೂಷಿಸದೆ, ಅಸೀಮ ಸಹನೆಯಿಂದ ಸೂಕ್ತ ಪರಿಹಾರಗಳನ್ನು ಸೂಚಿಸುತ್ತಿದ್ದರು. ತಮಗೆ ಗೌರವಕೊಟ್ಟು ಕರೆದ ಪಾರ್ಟಿ -ಇದು ಎಂದು ಯಾವ ಒಲವನ್ನೂ ತೋರಿಸದೆ , ಅತ್ಯಂತ ನಿಷ್ಪಕ್ಷಪಾತವಾದ ನಿರ್ಣಯಕ್ಕೆ ಬರುತ್ತಿದ್ದರು. ಸರಳವಾಗಿ ಮನಸ್ಸಿಗೆ ನಾಟುವಂತೆ ಆತ್ಮೀಯವಾಗಿ ಪರಿಹಾರ ಹೇಳತ್ತಿದ್ದರು. ಅವರ ವಾದವನ್ನು ಒಪ್ಪದವರೂ ಕೂಡಾ ಅವರ ಪ್ರಾಮಾಣಿಕತೆಯನ್ನು ಸಂದೇಹಿಸುತ್ತಿರಲಿಲ್ಲ. ಅವರ ನಿರ್ಣಯಗಳು ಪಾರ್ಟಿಗಳಿಗೆ ಕೆಲವೊಮ್ಮೆ ಅಸಂಗತ ವೆನಿಸಿದರೂ, ವರ್ತಮಾನದ ಸ್ಥಿತಿ-ಗತಿ, ಭವಿಷ್ಯದ ಆಗು-ಹೋಗುಗಳು, ಲಾಭ-ನಷ್ಟಗಳ ಲೆಕ್ಕಾಚಾರಗಳಗಳನ್ನು ತಾಳ್ಮೆಯಿಂದ ವಿವರಿಸಿ ಪಾರ್ಟಿಗಳ ಮನ ಒಲಿಸುತ್ತಿದ್ದರು. ಆದರೂ ಒಪ್ಪದಿದ್ದರೆ ಬೇಸರಿಸದೆ ನಿರ್ವಿಕಾರವಾvರುತ್ತಿದ್ದರು.
  • ಭಾವುಕ ಮತು ವೈಚಾರಿಕ ನೆಲೆಗಳಲ್ಲಿ ಸಮತೋಲ ಸಾಧಿಸಿ, ಸಂಪರ್ಕಕ್ಕೆ ಬಂದವರಿಗೆಲ್ಲ ಸಂತೋಷವನ್ನು ಹಂಚಿ, ತುಂಬು ಜೀವನ ನಡೆಸಿದ ಅಣ್ಣು ಶ್ಯಾನುಭೋಗರು ಪ್ರಾತಃಸ್ಮರಣೀಯರು.

--

ನಮನ[ಬದಲಾಯಿಸಿ]


  • ಕೃಷಿಯ ಕಾಯಕದಲ್ಲಿ ಕೈಲಾಸ ಕಂಡಿರುವೆ ;
  • ಕಲೆಗಳಾರಾಧನೆಯ ಸುಖವ ಪಡೆದಿರುವೆ |
  • ಎನಿತೋ ಸಂಕಟ ಕ್ಷಣದಿ ನಿರ್ಲಿಪ್ತನಾಗಿರುವೆ ;
  • ಜೀವನ ರಹಸ್ಯವನು ಅರಿತು ಬಾಳಿರವೆ ||
  • (ಶ್ರೀಮತಿ ಸಮುದ್ಯತಾ ವೆಂಕಟರಾಮು ಲೇಖಕಿ-ಸಂಪಾದಕಿ)

ಆಧಾರ :[ಬದಲಾಯಿಸಿ]


  • ಅಕ್ಷರ ನಮನ (ಮನೆಘಟ್ಟದ ಸುಬ್ಬರಾಯರ ಸಂಸ್ಮರಣೆ ಗ್ರಂಥ) :ಲೇಕಖರು ಮತ್ತು ಸಂಪಾದಕರು : ಸಮುದ್ಯತಾ ವೆಂಟರಾಮು, ಶೆಡ್ತಿಕೆರೆ, ಸಾಗರ ತಾಲ್ಲೂಕು. ಶಿವಮೊಗ್ಗ ಜಿಲ್ಲೆ.

ನೋಡಿ:[ಬದಲಾಯಿಸಿ]