ಕಂಸಾಳೆ
ಮಲೆ ಮಹಾದೇಶ್ವರನ ಭಕ್ತರಾದ ದೇವರಗುಡ್ಡರು ಬಳಸುವಂತಹ ವಿಶಿಷ್ಟ ಬಗೆಯ ವಾದ್ಯ ಕಂಸಾಳೆ. ಮಾದೇಶ್ವರನ ಕಾವ್ಯವನ್ನು ಈ ಕಲಾವಿದರು ಹಾಡುವರು. ಇವರು ಮೈಸೂರು, ಮಂಡ್ಯ, ಬೆಂಗಳೂರು ಜಿಲ್ಲೆಗಳಲ್ಲಿ ನೆಲೆಸಿರುವರು. ಕಥಾ ರೂಪದಲ್ಲಿ ಶಿವ ಮತ್ತು ಶರಣರ ಮಹಿಮೆಗಳನ್ನು ವಂಶಪರಂಪರ್ಯವಾಗಿ ಹೇಳುತ್ತಾ ಮುಂದುವರೆಸಿಕೊಂಡು ಬಂದಿರುವರು.
ಪರಿವಿಡಿ |
ಕಂಸಾಳೆ ಪದದ ನಿಷ್ಪತ್ತಿ[ಬದಲಾಯಿಸಿ]
ಇದರ ನಿಷ್ಪತ್ತಿಯ ಬಗೆಗೆ ಹಲವು ಚರ್ಚೆಗಳಿವೆ. ’ಕಾಂಸ್ಯ(ಕಂಚು)ತಾಳವೇ ಕಂಸಾಳೆಯಾಗಿದೆ’ ಎಂಬ ಅಭಿಪ್ರಾಯವಿದೆ. ಇದಕ್ಕೆ ಕೇಶಿರಾಜನ ಸಮರ್ಥನೆಯೆಂದರೆ "ಪೂರ್ವ ಪದಾಂತಕ್ಕೆ ದೀರ್ಘಮುಂ ಉತ್ತರ ಪದಾದಿಗೆ ಲೋಪಮುಮಾಗಿ ಕಾಂಸ್ಯತಾಳಕ್ಕೆ ಕಂಸಾಳಂ ಎಂದಾಯ್ತು" (ಸೂತ್ರ.೨೦೮) ಎಂಬ ವಿವರಣೆಯನ್ನು ನೀಡಿರುವನು. ಹಳಗನ್ನಡ ಕಾವ್ಯಗಳಲ್ಲಿ ಕಂಸಾಳೆಯ ಬಗೆ ಕಂಡುಬರುವ ಉಲ್ಲೇಖಗಳೆಂದರೆ ಹರಿಹರನ ’ಗಿರಿಜಾ ಕಲ್ಯಾಣ” ಮತ್ತು ವಿರೂಪಾಕ್ಷ ಪಂಡಿತನ ಚನ್ನಬಸವ ಪುರಾಣಗಳಲ್ಲಿ ’ಕಂಸಾಳ’ ಎಂಬ ಪದದ ಬಳಕೆಯಿರುವುದು. ಅಷ್ಟೇ ಅಲ್ಲದೆ ರಾಘವಾಂಕನ ’ಸಿದ್ದರಾಮ ಚಾರಿತ್ರ್ಯ’ , ಭೀಮಕವಿಯ ’ಬಸವ ಪುರಾಣ’ , ಸೂರ್ಯಕವಿಯ ’ಕವಿಕಂಠಹಾರ’ , ಗೋವಿಂದ ವೈದ್ಯನ ’ಕಂಠೀರವ ನರಸರಾಜ ವಿಜಯಂ’, ಗೋವಿಂದ ಕವಿಯ ’ನಾರಿಮಹಾತ್ಮ್ಯಂ’ ಕೃತಿಗಳಲ್ಲಿ ಕೌಸಾಳ, ಕಂಸತಾಳ, ಕಾಂಸಾಳ, ಕೈತಾಳ ಎಂಬ ಪ್ರಯೋಗಗಳು ಬಂದಿರುವುದನ್ನು ಗಮನಿಸಬಹುದಾಗಿದೆ.ಆಡುಭಾಷೆಯಲ್ಲಿ ಕಂಸಾಳೆ, ಕೈತಾಳ, ಕೌಸಳೆ, ಬಟ್ಲು ಎಂಬಿತ್ಯಾದಿ ಪದಗಳು ರೂಢಿಯಲ್ಲಿರುವುದು.’ಕಂಸಾಳೆ’ಯು ಕಂಚಿನಿಂದ ತಯಾರಿಸಿದ ತಾಳವಾಗಿರುವುದು.ಮಧ್ಯೆ ದಾರ ಕಟ್ಟಿರುವ ಅಂಗೈ ಅಗಲದ ಒಂದು ಬಟ್ಟಲು ಎಡ ಕೈಗೆ, ಹಾಗೆಯೇ ಇನ್ನೊಂದು ಕೈಯಲ್ಲಿ ಮಟ್ಟಸವಾದ ತಾಳ. ಮುಚ್ಚಳದ ನಡುಭಾಗ ಬಿಟ್ಟಿದ್ದು ಅದರ ರಂಧ್ರದ ಮೂಲಕ ದಾರವೊಂದನ್ನು ಬಿಗಿದು ಅದನ್ನು ಗೊಂಡೆಗಳಿಂದ ಅಲಂಕಾರ ಮಾಡಿ ಇಳಿ ಬಿಡುತ್ತಾರೆ. ಸಾಮ್ಯಾನವಾಗಿ ಇದು ಬಲಗೈ ಮೇಲಿಂದ ಇಳಿ ಬಿದ್ದಿರುತ್ತದೆ.
ಕಂಸಾಳೆ ಮೇಳದ ಬಗೆ[ಬದಲಾಯಿಸಿ]
ಕಂಸಾಳೆ ಮೇಳದಲ್ಲಿ ಮೂರರಿಂದ ಎಂಟು ಜನರು ಭಾಗವಹಿಸುತ್ತಾರೆ. ಹಾಡುವ ಸಂದರ್ಭದಲ್ಲಿ ಮೂವರು, ನೃತ್ಯ ಮಾಡುವ ಸಂದರ್ಭದಲ್ಲಿ ಎಂಟರಿಂದ ಹನ್ನೆರಡು ಜನ ಕಲಾವಿದರಿರುತ್ತಾರೆ. ಇವರಿಗೆ ಮೇಳದ ಸಮಯದಲ್ಲಿ ಇಂತಹುದೇ ವೇಷಭೂಷಣಗಳು ಇರಬೇಕೆಂಬ ನಿಯಮವೇನಿಲ್ಲ. ನಿತ್ಯದ ಅಂಗಿ, ಪಂಚೆ, ಹೆಗಲಿಗೆ ಜೋಳಿಗೆ, ಕೊರಳಿಗೆ ರುದ್ರಾಕ್ಷಿ, ಹಣೆಗೆ ವಿಭೂತಿಗಳಿರುತ್ತವೆ, ಈ ಕಲಾವಿದರಲ್ಲಿ ಒಬ್ಬ ಕಂಜರವನ್ನು ಹಿಡಿದಿರುತ್ತಾನೆ. ಇತರರು ಹಿಮ್ಮೆಳದವರು. ಹಾಡಿನ ಲಯಕ್ಕೆ ಅನುಗುಣವಾಗಿ ತಾಳದ ನುಡಿತವು ಉಂಟಾಗುತ್ತದೆ. ಉದಾಹರಣೆಗೆ: ’ಮಾದೇಶ್ವರನ’ ಸಾಲಿನಲ್ಲಿ ಹೀಗೆ ವರ್ಣಿಸಲಾಗಿದೆ. "ವಾಸ ಕಂಸಾಳೆಯ ನುಡಿಸಿಕೊಂಡು ಮಾ ದೇಶನಂಘ್ರಿಗೆ ನಮೋಯೆಂದು ಭಾಷೆ ಪಾಲಕ ದುರಿತವ ಪೊರೆಯೆಂದು ವೀ ರೇಶನ ಕೊಂಡಾಡಿದರು ಕಂಸಾಳೆಯ ದೇವರ ಗುಡ್ಡರು" ದೀಕ್ಷೆಯನ್ನು ಪಡೆದ ಮೇಲೆ ಗುಡ್ಡರಾಗುವ ಇವರು ತಮ್ಮ ಪಂಥದ ಪ್ರಚಾರಕರಾಗಿ, ಪ್ರಸಾರಕರಾಗಿ ಕಾರ್ಯವನ್ನು ನಿರ್ವಹಿಸುವರು. ಮಾದೇಶ್ವರನ ಗುಡ್ಡರನ್ನು ಕೈಸಾಳೆಯವರು, ಕಂಸಾಳೆಯವರು ಎಂದು ಕರೆಯುವರು. ಹರಿಜನರು, ಒಕ್ಕಲಿಗರು, ಕುರುಬರು, ಗಂಗಾಮತಸ್ಥರು, ಉಪ್ಪಲಿಗರು, ಮಡಿವಾಳರು, ಪರಿವಾರದವರು ಮಾದೇಶ್ವರನ ಗುಡ್ಡದವರಾಗುತ್ತಾರೆ. ಗಂಡಸರು ಮತ್ತು ಹೆಂಗಸರು ಮಾದೇಶ್ವರನ ಭಕ್ತರಾಗಿ ದೀಕ್ಷೆ ಪಡೆಯುವಾಗ ಗಂಡಸರನ್ನು ಗುಡ್ಡರೆಂದೂ, ಹೆಂಗಸರನ್ನು ಗುಡ್ಡಮ್ಮ, ಗುಡ್ಡಿಯರೆಂದು ಕರೆಯುವರು. ಸೂತಕವಾದ ಹೆಂಗಸರನ್ನು ಗುಡ್ಡಿಯಾಗಿ ಬಿಡುವಂತಹ ಕ್ರಮವಿಲ್ಲ. ಒಮ್ಮೆ ಗುಡ್ಡಿಯಾದ ಹೆಂಗಸಿಗೆ ಮದುವೆಯೂ ಇರುವುದಿಲ್ಲ. ಈ ಪದ್ದತಿಯು ಹೆಚ್ಚಾಗಿ ಹರಿಜನರಲ್ಲಿಯೇ ಕಂಡುಬರುವುದುಂಟು. ಗುಡ್ಡರು ಮಾದೇಶ್ವರನ ಕಥೆಯನ್ನು, ಗುಡ್ಡಿಯರು ಬಿಡಿ ಹಾಡುಗಳನ್ನು ಹಾಡುವರು. ಗುಡ್ಡರಾಗಿ ಬಿಡುವಂತಹ ಸಂಪ್ರದಾಯವು ವಂಶಪರಂಪರ್ಯವಾಗಿ ಬಂದಿರುವಂತಹುದು.
ದೇವರ ಗುಡ್ಡರಲ್ಲಿ ೨ ಬಗೆ[ಬದಲಾಯಿಸಿ]
- ಸಿರಿಯ ದೇವರ ಗುಡ್ಡರು
- ಅಲೆಮಾರಿ ಗುಡ್ಡರು
ಸಿರಿಯ ದೇವರ ಗುಡ್ಡರು[ಬದಲಾಯಿಸಿ]
ಕಂಚಿನ ತಟ್ಟೆಯಲ್ಲಿ ಇವರು ಊಟವನ್ನು ಮಾಡುವುದಿಲ್ಲ. ಕಾರಣ ಇವರು ಕಂಚನ್ನು ಮಾದೇಶ್ವರನ ಶ್ರೇಷ್ಠ ಕಂಸಾಳೆಯೆಂದು ಭಾವಿಸುತ್ತಾರೆ.ಇವರು ಪಾದರಕ್ಷೆಯನ್ನು ಹಾಕುವುದಿಲ್ಲ. ಸೋಮವಾರ, ಶುಕ್ರವಾರ, ಅಮಾವ್ಯಾಸೆಯ ದಿನದಂದು ’ಕ್ವಾರಣ್ಯ’ವನ್ನು ಮಾಡುವರು. ಹಬ್ಬ, ಉತ್ಸವದ ದಿನಗಳಲ್ಲಿ ಮಾದೇಶ್ವರನ ದರ್ಶನವನ್ನು ಮಾಡುವರು. ಈ ಗುಡ್ಡರು ದೀಕ್ಷೆಯನ್ನು ಪಡೆದಿದ್ದರೂ ಕೂಡ ಮದುವೆಯನ್ನು ಆಗಬಹುದಾಗಿದೆ.
ಅಲೆಮಾರಿ ಗುಡ್ಡರು[ಬದಲಾಯಿಸಿ]
ಮಾದೇಶ್ವರನ ಸಂಪೂರ್ಣ ಕಥೆಯನ್ನು ಹಾಡುವರು. ಅಲ್ಲದೇ ಹಬ್ಬ, ಉತ್ಸವದ ದಿನಗಳಲ್ಲಿ ಮಾದೇಶ್ವನ ದರ್ಶನವನ್ನು ಪಡೆದು ಸೇವೆಯನ್ನು ಸಲ್ಲಿಸುತ್ತಾರೆ.
ದೀಕ್ಷಾ ವಿಧಾನ[ಬದಲಾಯಿಸಿ]
ಗುಡ್ಡರಾಗುವ ಮಾದೇಶ್ವರನ ಭಕ್ತರ ಸಾಲಿಗೆ ಸಂಬಂಧಿಸಿದಂತೆ ಪ್ರತಿಯೊಂದು ಪ್ರದೇಶಕ್ಕೆ ಸಂಬಂಧಿಸಿದಂತೆ ಒಬ್ಬ ’ಪುರಸೇಕಾರಿ’ಯಿರುತ್ತಾನೆ.ಈತನು ಗುಡ್ಡರಿಗೆ ದೀಕ್ಷೆಯನ್ನು ಕೊಡುವವನಾಗಿರುವನು. ಈ ದೀಕ್ಷೆಯು ಮಾದೇಶ್ವರನ ಗುಡ್ಡದಲ್ಲಿ ಅಥವಾ ಅವರವರ ಊರುಗಳಲ್ಲಿ ನಡೆಯುತ್ತದೆ. ಆಷಾಢಮಾಸವನ್ನು ಬಿಟ್ಟು ಉಳಿದ ಶಿವರಾತ್ರಿ, ದೀಪಾವಳಿ, ಯುಗಾದಿ, ಕಾರ್ತಿಕ ಮಾಸದಲ್ಲಿ ಗುಡ್ಡರನ್ನು ಬಿಡುವ ಸಂಪ್ರದಾಯವುಂಟು. ಅಲ್ಲದೇ ಶುಭ ಮೂಹರ್ತದ ಸಮಯವನ್ನು ಪರಿಗಣಿಸಿ ಆಯ್ಕೆ ಮಾಡಲಾಗುತ್ತದೆ.ಗುಡ್ಡರಾಗುವವರು ಮೊದಲು ಅವರ ಊರಿನ ಮಂಟೇಸ್ವಾಮಿ ಗುಡ್ಡರು, ಪಾರ್ವತಿ ಗುಡ್ಡರು, ಮಾದೇಶ್ವರನ ಗುಡ್ಡರು, ಜೋಗಿಗಳು, ದಾಸರುಗಳ ದರ್ಶನ ಮಾಡಿ ಹಿರಿಯ ವ್ಯಕ್ತಿಗಳೊಂದಿಗೆ ಬಾವಿ ಅಥವಾ ನದಿಯ ಬಳಿ ಸೇರುವರು. ಮೊದಲು ಮಂಡೆ, ಉಗುರು, ಉಡುದಾರಗಳನ್ನು ತೆಗೆಸಿ, ಅನಂತರ ಗಂಗೆಗೆ ಕರೆತರುವರು. ಗುಡ್ಡರ ಕೈಯಲ್ಲಿ ನೀರು ಹಾಕಿಸಿ ಹೊಸ ಉಡುದಾರ, ಕಚ್ಚೆಪಾವುಡ, ಭಸ್ಮಗಳನ್ನು ಧರಿಸಿ, ಕಂಸಾಳೆ ನಾದಗಳೊಂದಿಗೆ ಆತನನ್ನು ಸಾಲೂರು ಮಠಕ್ಕೆ ಕರೆತರಲಾಗುತ್ತದೆ.ಅಲ್ಲಿರುವಂತಹ ಪುರಸೇಕಾರಿಗೆ ಹುಡುಗನನ್ನು ಒಪ್ಪಿಸಿ, "ಈತ ನಮ್ಮ ಮಗನಲ್ಲ ಮಾದೇಶ್ವರನ ಮಗ" ಎಂದು ಹೇಳುತ್ತಾ "ಮಾದೇವ ನಿನ್ನೊಕ್ಕಲಾಯ್ತಿರೋ ಕಂದನನ್ನು ಉದ್ಧಾರ ಮಾಡಪ್ಪಾ" ಎಂದು ಕೈ ಮುಗಿಯುತ್ತಾರೆ.ಪುರಸೇಕಾರಿಯ ಗುಡ್ಡನ ಕಣ್ಣುರೆಪ್ಪೆ, ಕಿವಿ, ತಲೆ, ಹಣೆ, ತೋಳು, ಎದೆ, ಬೆನ್ನು,ಕೈಕಾಲುಗಳಿಗೆ ಬ್ರಹ್ಮ, ವಿಷ್ಣು, ಮಹೇಶ್ವರನ ಹೆಸರನ್ನು ಹೇಳುತ್ತಾನೆ. ನಂತರ ವಿಭೂತಿ ಧಾರಣೆ ಮಾಡಿಸಿ ಹುಡುಗನನ್ನು ಕರಿಕಂಬಳಿಯ ಗದ್ದುಗೆಯಲ್ಲಿ ಕೂರಿಸುವರು. ಹುಡುಗನ ಬಳಿ ೫ ಕಳಸಗಳನ್ನು ಇಡಲಾಗುತ್ತದೆ. ಕಳಸಗಳಿಗೆ ಸುತ್ತಿದ ದಾರದಲ್ಲಿ ಒಂದು ಎಳೆಯನ್ನು ಹುಡುಗನ ಕತ್ತಿಗೆ ಕಟ್ಟಲಾಗುತ್ತದೆ. ಹೊಸ ದಾರದಲ್ಲಿ ರುದ್ರಾಕ್ಷಿ ಮಣಿಯನ್ನು ಅಡ್ಡವಾಗಿ ಕಟ್ಟುತ್ತಾರೆ. ಅರಿಶಿನ ಬಟ್ಟೆಯಲ್ಲಿ ಅರಿಶಿನದ ಕೊಂಬು, ಕಬ್ಬಿಣದ ಉಂಗುರವನ್ನಿಟ್ಟು ಕಪ್ಪು ಉಡುದಾರದಲ್ಲಿ ಕಟ್ಟುತ್ತಾರೆ. ಕರ್ಪೂರ ಹಚ್ಚಿ, ರುದ್ರಾಕ್ಷಿ ಕಟ್ಟಿ ಕಂಕಣಧಾರಣೆ ಮಾಡಿ ಎಲ್ಲರಿಂದಲೂ ಶರಣು ಮಾಡಿಸುತ್ತಾರೆ.ಈ ಗುಡ್ಡರಿಗೆ ಅಕ್ಕಿ, ಎಲೆ, ಅಡಿಕೆ, ಬೆಲ್ಲ, ಕಾಯಿ ಕೊಟ್ಟು ಕಂಕಣ ಕಟ್ಟಿ ಎಲ್ಲರಿಗೂ ನಮಸ್ಕಾರವನ್ನು ಮಾಡಿಸಲಾಗುತ್ತದೆ. ಹೊಸದಾಗಿ ದೀಕ್ಷೆಯನ್ನು ಪಡೆದುಕೊಂಡ ಗುಡ್ಡರಿಗೆ ಮುತ್ತಗದ ಎಲೆಯನ್ನು ನೀಡಿ ಎಲ್ಲರ ಬಳಿಗೆ ಕಳುಹಿಸಿದಾಗ ಎಲ್ಲರು ಒಂದೊಂದು ಹಿಡಿ ಅನ್ನವನ್ನು ನೀಡುತ್ತಾರೆ. ನಂತರ ಅದನ್ನು ಎಲ್ಲರೊಂದಿಗೆ ಪಂಕ್ತಿಯಲ್ಲಿ ಕುಳಿತು ಉಣ್ಣುವುದು ರೂಢಿಯಲ್ಲಿರುವುದು.ಆ ದಿನದಿಂದ ಹುಡುಗನು ಗುಡ್ಡರ ಸಾಲಿಗೆ ಸೇರಿದ ಎಂಬ ಅರ್ಥವಿರುವುದು. ಈ ಗುಡ್ಡನು ಹಾಡುಗಾರನಾಗಿದ್ದಾರೆ ಆತನಿಗೆ ಮಾದೇಶ್ವನ ಕಥೆಯನ್ನು ಹೇಳಿಕೊಡಲಾಗುತ್ತದೆ. ಇಲ್ಲವೇ ಆತನಿಗೆ ಬಿಡಿ ಹಾಡುಗಳನ್ನು ಹೇಳಿಕೊಡಲಾಗುತ್ತದೆ.
ಕಂಸಾಳೆಯಲ್ಲಿ ಎರಡು ವಿಧ[ಬದಲಾಯಿಸಿ]
- ಕುಳಿತು ಹಾಡುವ ಕಂಸಾಳೆ
- ಬೀಸು ಕಂಸಾಳೆ
ಕುಳಿತು ಹಾಡುವ ಕಂಸಾಳೆ[ಬದಲಾಯಿಸಿ]
ಈ ಮೇಳದಲ್ಲಿ ಮೂವರಿಂದ ಎಂಟು ಜನ ಭಾಗವಹಿಸುವುದುಂಟು. ಪ್ರಧಾನ ಹಾಡುಗಾರನು ಮಧ್ಯದಲ್ಲಿದ್ದು ಸಹ ಕಲಾವಿದರು ಡಪ್ಪು, ಕಂಸಾಳೆ, ಚಿಟಿಕೆ ಹಿಡಿದು ಸುತ್ತಲೂ ಕುಳಿತಿರುತ್ತಾರೆ. ವಾದ್ಯಕ್ಕೆ ಅನುಗುಣವಾಗಿ ಹಾಡುತ್ತ ದನಿಗೂಡಿಸುತ್ತಾರೆ.ಕಥೆಯ ಸಂಭಾಷಣೆಗೆ ತಕ್ಕಂತೆ ನಡೆಯುವಾಗ ಉಳಿದವರು ’ಹೌದಪ್ಪಾ ಹೌದು’ ಎಂದು ಹೇಳುವರು. ಒಬ್ಬ ಕಲಾವಿದನು ಒಂದು ಕಥೆಯನ್ನು ಹೇಳಿ ನಿಲ್ಲಿಸಿದಾಗ, ಮತ್ತೊಬ್ಬ ಕಲಾವಿದನು ಮತ್ತೊಂದು ಕಥೆಯನ್ನು ಮುಂದುವರೆಸಿಕೊಂಡು ಹೋಗುವನು. ಇಂತಹ ಕಥಾ ನಿರೂಪಣೆಯು ಗದ್ಯ ಪದ್ಯ ಮಿಶ್ರಿತದಿಂದ ಕೂಡಿರುವುದು. ಕಂಸಾಳೆಯ ಮೂಲಕ ಮಾದೇಶ್ವರನ ಕಾವ್ಯವನ್ನು ಹೇಳುವುದಕ್ಕೆ ’ಕಥೆ ಮಾಡುವುದು’ ಎನ್ನಲಾಗುತ್ತದೆ. ಮೊದಲಿಗೆ ಗಣಪತಿ, ಸರಸ್ವತಿ ದೇವತೆಗಳನ್ನು ಸ್ತುತಿಸಿ ಕೊನೆಗೆ ಮಂಗಳದೊಂದಿಗೆ ಕಥೆಯನ್ನು ಮುಕ್ತಾಯ ಮಾಡುವರು. ಮಾದೇಶ್ವರ ಮತ್ತು ಇತರ ದೇವತೆಗಳನ್ನು ಕಥೆಯ ಆರಂಭ ಮತ್ತು ಅಂತ್ಯದಲ್ಲಿ ಸ್ಮರಿಸುವುದು ಕಡ್ಡಾಯವಾಗಿರುವುದು.
ಬೀಸು ಕಂಸಾಳೆ[ಬದಲಾಯಿಸಿ]
ಮಾದೇವನು ಇದರ ಪ್ರವರ್ತಕನೆಂಬ ನಂಬಿಕೆಯಿದೆ. ಕತ್ತಿ ಪವಾಡದ ಹಳ್ಳದಲ್ಲಿ ಬಿಲ್ಲಯ್ಯ-ಕಾರಯ್ಯನನ್ನು ಪರೀಕ್ಷೆ ಮಾಡಿದ ಸಂತೋಷದಿಂದ ಮಾದೇಶ್ವರನು ಕಂಸಾಳೆ ಬೀಸಿ ನೃತ್ಯ ಮಾಡಿದರಿಂದ ಇದರ ಆರಂಭ ಎಂಬ ನಂಬಿಕೆಯು ಇರುವುದು. ಇದರಲ್ಲಿ ’ತಟ್ ಬಟ್ಲು’ , ’ತಾರ್ ಬಟ್ಲು’ ಎಂಬ ಎರಡು ವಿಧಗಳಿವೆ. ಕಂಸಾಳೆಯನ್ನು ತಟ್ಟುತ್ತಾ ಕುಣಿಯುವುದೇ ತಟ್ ಬಟ್ಲು. ಮೂವರಿಂದ ಎಂಟು ಜನರು ಇದರಲ್ಲಿ ಭಾಗವಹಿಸುತ್ತಾರೆ.ಈ ಕಂಸಾಳೆಯ ಮೇಲಿನ ಮುಸುಕಿಗೆ ಸುಮಾರು ೦.೪೫ ಮೀ. ಅಥವಾ ೦.೬೧ ಮೀ ಉದ್ದದ ದಾರವನ್ನು ಕಟ್ಟಲಾಗುತ್ತದೆ. ಇದಕ್ಕೆ ಬಣ್ಣದ ಗೊಂಡೆಗಳಿಂದ ಅಲಂಕಾರವನ್ನು ಮಾಡಲಾಗಿರುತ್ತದೆ. ಈ ದಾರದ ತುದಿಯನ್ನು ಹಿಡಿದು ಬೀಸಿ ತಾಳ ಹಾಕುವುದರಿಂದಲೇ ಇದನ್ನು ಬೀಸು ಕಂಸಾಳೆಯೆಂದು ಕರೆಯುವರು.
ಕಂಸಾಳೆಯ ಸಂಪ್ರದಾಯದಲ್ಲಿ ಮಲೆಯ ಮಾದೇಶ್ವನ ಕಾವ್ಯವು ಪ್ರಮುಖವಾದುದು. ಈ ಕಾವ್ಯವು ಏಳು ಸಾಲುಗಳಾಗಿ ಒಡೆದಿದ್ದು ಒಂದೊಂದೂ ಸ್ವತಂತ್ರವೆನ್ನುವಂತೆ ವಿಶಿಷ್ಷತೆಯನ್ನು ಪಡೆದಿರುವುದು. ಅವುಗಳೆಂದರೆ:
- ತಾಳುಗತೆ
- ಶ್ರವಣದೊರೆ ಸಾಲು
- ಜುಂಜೆಗೌಡನ ಸಾಲು
- ಸಂಕಮ್ಮನ ಸಾಲು
- ಇಕ್ಕೇರಿ ದೇವಮ್ಮನ ಸಾಲು
- ಸರಗೂರಯ್ಯನ ಸಾಲು
- ಬೇವಿಹಟ್ಟಿ ಕಾಳಿಯ ಸಾಲು
ಸಂಕಮ್ಮನ ಸಾಲು[ಬದಲಾಯಿಸಿ]
ಸೋಲಿಗರ ನೀಲಪ್ಪನೊಡನೆ ಸಂಕಮ್ಮನ ಮದುವೆಯಾಯಿತು. ಮಾವನ ಮನೆಯಲ್ಲಿ ಹೆಚ್ಚು ದಿನ ಇರಬಾರದೆಂದು ನೀಲಪ್ಪ ಮಡದಿಯೊಡನೆ ಮೂಡುಮಲೆ ಕಾಡಿಗೆ ಬಂದ. ನಿರ್ಜನ ಪ್ರದೇಶದಲ್ಲಿ ಸೊಪ್ಪಿನ ಗುಡಿಸಲನ್ನು ಮಾಡಿ ಅದರಲ್ಲಿ ಹೆಂಡತಿಯೊಬ್ಬಳನ್ನೆ ಬಿಟ್ಟು ವಜ್ರದ ಮಲೆಯ ಕಾಡಿಗೆ ಬೇಟೆಗೆ ಹೊರಟ. ಒಂಬತ್ತು ತಿಂಗಳು ಬೇಟೆಯಾಡಿ ಬರಬೇಕು. ಆದರೆ ತನ್ನ ಹೆಂಡತೆ ಒಬ್ಬಳೆ ಇರುವಳು ಎಂದು ಅವಳ ’ತೋಳು ಬಾಳೆಯ ಕಂಬ, ಮುಖದ ಹೋಲಿಕೆ ಚಂದ್ರ ಒಂದು ಪಾಲು, ಸೂರ್ಯ ಒಂದು ಪಾಲು ಆದಂತೆ....’ ಎಂಬ ಸಂಶಯವು ಬಂದು ಗುಡಿಸಲ ಮುಂದೆ ಎಪ್ಪತ್ತೇಳು ಮಂಡಲ ಬರೆದನು. ’ಚೀಟು’ ಬರೆದು ಮುಂದಿಟ್ಟನು. ’ರಾಕಾಸಿ’ ಗೊಂಬೆ ಮಾಡಿ ಬಾಗಿಲಲ್ಲಿ ನಿಲ್ಲಿಸಿದನು. ಅಷ್ಟೇ ಅಲ್ಲದೆ ಅವಳ ಬಟ್ಟೆ ಬರೆಗಳನ್ನೆಲ್ಲ ಬಿಚ್ಚಿಸಿ ಸೊಪ್ಪಿನ ಉಡುಗೆ ತೊಡಿಸಿದನು. "ಬಾಯಿಗೆ ಚೂಜಿಕೊಟ್ಟು ಕಣ್ಣಿಗೆ ಕಾವಾಡ ಕಟ್ಟಿಬಿಟ್ಟು ಹಿಂಗೈ ಮುಂಗೈ ಕಟ್ಟಿ ಅವಳ್ನ ಮೊಕಡ್ನೆ ಕೆಡವಿ ಜೂಲುನಾಯಿಯೊಡನೆ, ಬೀಸುವ ಮಚ್ಚನ್ನು ಹಿಡಿದು ಕಾಡಿಗೆ ಹೋದ". ಸಂಕಮ್ಮನು ದುಃಖದಿಂದ ತನ್ನ ಮನೆ ದೇವರನ್ನು ಸ್ಮರಿಸುವಾಗ ಮಾದಯ್ಯನು ’ನರಲೋಕದಲ್ಲೆಲ್ಲೋ ಹೆಣ್ಣಿನ ಗೋಳಾಗುತ್ತಿದೆ’ ಎಂದು ಬರಗನೇರಿ ತವಸೆರೆ ಬೆಟ್ಟದ ಮಗ್ಗುಲಾಗಿ ಸಂಕಮ್ಮನ ಗುಡಿಸಲ ಬಳಿ ಬಂದ. ಬರಗನನ್ನು ನೋಡಿ ಹೆದರುವಳು ಎಂದು ಸಣ್ಣ ಕೊತ್ತಿಯನ್ನು ಮಾಡಿ ದೂರಬಿಟ್ಟು ತನ್ನ ’ಕಪ್ಪು ಧೂಳ್ತ’ದಿಂದ ಮಂಡಲವನ್ನು, ’ರಾಕಾಸಿ’ ಗೊಂಬೆಯನ್ನು ನಾಶಮಾಡಿ ಭಿಕ್ಷೆ ಸಾರಿದ. ಮನೆ ದೇವರಾದ ಮಾದೇವನೇ ಬಂದಿರುವನು ಆದರೆ ಹೊರಗೆ ಬರುವ ಸ್ಥಿತಿಯಲ್ಲಿ ಇಲ್ಲವಲ್ಲ ಎಂದು ಕಣ್ಣಿರಿಟ್ಟಳು. ನಂತರ ಮಾದೇವನು ಕಪ್ಪು ಧೂಳ್ತವನ್ನು ಮನೆಯ ಮೇಲೆ ಹಾಕಿದಾಗ ಏಳುಪ್ಪರಿಗೆಯ ಮನೆಯಾಯಿತು. ಸಕಲ ಐಶ್ವರ್ಯವು ಮನೆಯಲ್ಲಿ ತುಂಬಿದವು. ಸಂಕಮ್ಮನು ಸೀರೆ ಧರಿಸಿಕೊಂಡು ಮಾದೇವನಿಗೆ ಭಿಕ್ಷೆಯನ್ನು ತೆಗೆದುಕೊಂಡು ಬಂದಳು. ಆದರೆ ಅದನ್ನು ಬಂಜೆಯ ಕೈಯಿಂದ ತೆಗೆದುಕೊಳ್ಳುವುದಿಲ್ಲವೆಂದು ನಿರಾಕರಿಸಿದನು.ಆಗ ಸಂಕಮ್ಮನು ಸಕಲ ಸಂಪತ್ತನ್ನು ನೀಡಿದ ನೀನೇ ಮಕ್ಕಳ ಫಲವನ್ನು ನನಗೆ ನೀಡು, ಇಲ್ಲವಾದರೆ ನಿನ್ನ ಪಾದದ ಬಳಿಯೇ ಪ್ರಾಣ ಬಿಡುವೆನು ಎಂಬುದಾಗಿ ಹೇಳಿದಳು. ಅದಕ್ಕೆ ಮಾದೇವನು ನಿನಗೆ ನಾನು ಮಕ್ಕಳ ಫಲ ನೀಡಿದರೆ ನನಗೆ ಏನು ಕೊಡುವೆ ಎಂದಾಗ ’ನನಗೆ ಹೆಣ್ಣಾಗಲಿ ಗಂಡಾಗಲಿ, ಹುಟ್ಟಿದ ಒಂಬತ್ತೇ ದಿನಕ್ಕೆ ಭಿಕ್ಷೆ ಕೊಟ್ಟುಬಿಡ್ತೀನಿ’ ಎಂದಳು. ಕಾಡು ಬೆಂಡೇಕಾಯಿಯಲ್ಲಿ ’ಪಿಂಡಪರಸಾದ’ ಕೊಟ್ಟುದಲ್ಲದೆ ಅವಳ ರಕ್ಷಣೆಗೆಂದೇ ಅವಳ ಮನೆಯಲ್ಲಿ ಬಿಳಿಯ ಪಲ್ಲಿಯಾಗಿ ಉಳಿದನು. ’ಹೆಂಡತಿಯ ಮ್ಯಾಲೆ ಗ್ಯಾನ’ ಬರುವ ಹಾಗೆ ನೀಲೆಗೌಡನಿಗೆ ಬೇಟೆಯಿಂದ ಮರಳುವಂತೆ ಮಾದೇವನು ಮಾಡಿದನು. ತನ್ನ ಮನೆಯ ಸ್ಥಿತಿಯನ್ನು ಕಂಡ ತಕ್ಷಣ ನೀಲೆಗೌಡನಿಗೆ ಕೋಪವು ಹೆಚ್ಚಾಗಿ ಸಂಕಮ್ಮನ ತಲೆಯನ್ನು ಕತ್ತರಿಸಬೇಕೆಂದು ಕತ್ತಿಯನ್ನು ಮಸೆದು ಹಿಡಿದುಕೊಂಡು ಮನೆಯ ಬಳಿ ಬಂದ. ಈತನ ಮನಸ್ಥಿತಿಯನ್ನು ಅರಿತ ಮಾದೇವನು ಸಂಕಮ್ಮನ ಹಾಗೆ ಗೊಂಬೆಯನ್ನು ಸೃಷ್ಟಿಸಿ ಅವನೆದುರು ಬಿಟ್ಟ. ಅದನ್ನು ಮೂರು ತುಂಡುಗಳಾಗಿ ಕತ್ತರಿಸಿದ ಬಳಿಕ ಆತನ ಕೋಪವು ಇಳಿಯಿತು. ನಂತರ ಸಂಕಮ್ಮನು ಪತಿಯ ಬಳಿ ಬಂದು ನಡೆದ ಸಂಗತಿಯನ್ನು ವಿವರಿಸಿದಳು. ನೀಲೆಗೌಡನು ದೇವರ ದೃಢವನ್ನು ಪರೀಕ್ಷೆ ಮಾಡಲು ಹೆಂಡತಿಗೆ ಪರೀಕ್ಷೆಗಳನ್ನು ನೀಡಿದನು. ಸಂಕಮ್ಮನು ೯ ತಿಂಗಳ ಗರ್ಭವತಿಯಾದಳು. ಅವಳ ಬೆನ್ನು ಮಚ್ಚೆಯನ್ನು ಸೀಳಿಕೊಂಡು ಎರಡು ಗಂಡು ಮಕ್ಕಳು ಜನಿಸಿದರು. ಮನೆಯಲ್ಲಿ ಬಿಳಿಯ ಪಲ್ಲಿಯಾಗಿ ಕಾಯುತ್ತಿದ್ದ ಮಾದೇವನು ನಂತರ ಜಂಗಮನಾಗಿ ’ಮಕ್ಕಳ ಭಿಕ್ಷೆ’ಯನ್ನು ಕೇಳಿದೊಡನೆ ನೀಲೆಗೌಡನಿಗೆ ಕೋಪ ಬಂದು ಮನೆಯ ಮುಂದೆ ಇದ್ದ ಸೌದೆಯನ್ನು ತೆಗೆದುಕೊಂಡು ಜಂಗಮನ ಹಿಂದೆಯೇ ಅಟ್ಟಿಸಿಕೊಂಡು ಹೋದ. ಸ್ವಲ್ಪ ಸಮಯದವರೆಗೆ ಮಾದೇವನು ಮರೆಯಾಗಿ ಬರಗನನ್ನು ಕರೆದು ಮಕ್ಕಳನ್ನು ಕೊಲ್ಲದೆ, ನೀಲೆಗೌಡನಿಗೆ ಬೆದರಿಸುವಂತೆ ಹೇಳಿ ಕಳುಹಿಸಿದನು. ನೀಲೆಗೌಡನು ಮಾದೇವನಿಗೆ ಶರಣಾಗಿ, "ಸ್ವಾಮಿ ಇಂಥ ದುಷ್ಟಮೂರ್ತಿ ಅಂತ ತಿಳಿಯಲಿಲ್ಲ ಮಕ್ಕಳ ಭಿಕ್ಷೆ ಕೊಡುತೀನಿ ನಿನ್ನ ಮಾಯದ ಹುಲಿಯ ಕರಕಪ್ಪ" ಎಂದನು. ಸಂಕಮ್ಮನ ಮಕ್ಕಳಿಬ್ಬರೂ ’ಕಾರಯ್ಯ-ಬಿಲ್ಲಯ್ಯ’ ಎಂಬ ಹೆಸರಿನಿಂದ ಮಾದೇವನ ಭಕ್ತರಾಗಿ ಸೇವೆಯನ್ನು ಸಲ್ಲಿಸಿದರು.
ಬಾಹ್ಯ ಸಂಪರ್ಕಗಳು[ಬದಲಾಯಿಸಿ]
- ಕಲ್ಯಾಣ ಅವರ ಬ್ಲಾಗ್, ಚಿತ್ರ ಮತ್ತು ವೀಡಿಯೋ [೧]
- ಕಂಸಾಳೆ:ಮಹಾದೇವಯ್ಯನವರ ಬಗೆಗಿನ ಮಾಹಿತಿ[೨]
ಉಲ್ಲೇಖಗಳು[ಬದಲಾಯಿಸಿ]
- ಕರ್ನಾಟಕ ಜನಪದ ಕಲೆಗಳ ಕೋಶ: ಸಂಪಾದಕ-ಹಿ.ಚಿ.ಬೋರಲಿಂಗಯ್ಯ, ಪ್ರಸಾರಂಗ ಕನ್ನಡ ವಿಶ್ವವಿದ್ಯಾಲಯ, ಹಂಪಿ, ವಿದ್ಯಾರಣ್ಯ.೧೯೯೬.
- ಕರ್ನಾಟಕ ಜನಪದ ಕಲೆಗಳು: ಸಂಪಾದಕ-ಗೊ.ರು. ಚನ್ನಬಸಪ್ಪ, ಕನ್ನಡ ಸಾಹಿತ್ಯ ಪರಿಷತ್ತು,೧೯೭೭
- ↑ ಕಲ್ಯಾಣ ಅವರ ಬ್ಲಾಗ್ http://kalyana-rupa.blogspot.in/2008/11/kamsale.html
- ↑ ಕಂಸಾಳೆ ಮಹಾದೇವಯ್ಯನವರ ಮಾಹಿತಿhttp://kanaja.in/%E0%B2%95%E0%B2%82%E0%B2%B8%E