ಲಿಂಗದೇವರು ಹಳೆಮನೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಪ್ರೊ.ಲಿಂಗದೇವರು ಹಳೆಮನೆ ಇಂದ ಪುನರ್ನಿರ್ದೇಶಿತ)
ಪ್ರೊ.ಲಿಂಗದೇವರು ಹಳೆಮನೆ

ಮೈಸೂರಿನ ಭಾರತೀಯ ಭಾಷಾ ಸಂಸ್ಥಾನ (ಸಿ.ಐ.ಐ.ಎಲ್)ದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದ [[ಪ್ರೊ.ಲಿಂಗದೇವರು ಹಳೆಮನೆ | ಲಿಂಗದೇವರು ಹಳೆಮನೆ](೬-೩-೧೯೪೯-೭-೬-೨೦೧೧)] ವಿದ್ವಾಂಸರು ಹಾಗೂ ಭಾಷಾ ಶಾಸ್ತ್ರಜ್ಞರು. ಮೈಸೂರಿನ ರಂಗಾಯಣದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು.

ಜನನ- ಬೆಳವಣಿಗೆ[ಬದಲಾಯಿಸಿ]

ಹುಟ್ಟು ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕು ಹಾಲುಗೊಣ ಗ್ರಾಮದಲ್ಲಿ ೬-೩-೧೯೪೯ರಲ್ಲಿ ಆಯಿತು.

ವೃತ್ತಿ ಜೀವನ[ಬದಲಾಯಿಸಿ]

  • ಲಿಂಗದೇವರು ಹಳೆಮನೆಯವರು ಬಹುಮುಖಿ ವ್ಯಕ್ತಿತ್ವ. ಭಾಷಾ ವಿಜ್ಞಾನ ಮತ್ತು ಕನ್ನಡ ಸಾಹಿತ್ಯದಲ್ಲಿ ಎಂ.ಎ ಪದವಿಯನ್ನು ಪಡೆದ ನಂತರ ಮೈಸೂರಿನ ಭಾರತೀಯ ಭಾಷಾ ಸಂಸ್ಥಾನ(ಸಿಐಐಎಲ್)ದಲ್ಲಿ ಬೋಧಕರಾಗಿ, ಸಂಶೋಧಕರಾಗಿ ಮೂರುವರೆ ದಶಕಗಳ(೧೯೭೩-೨೦೦೯) ಕಾಲ ಸೇವೆ ಸಲ್ಲಿಸಿದರು.
  • ಈ ಅವಧಿಯಲ್ಲಿ ಭಾಷಾ ವಿಜ್ಞಾನ, ರಂಗಭೂಮಿ, ನಾಟಕ ಬರವಣಿಗೆ, ಬೋಧನಾ ಸಾಮಗ್ರಿಗಳ ತಯಾರಿ, ಸಾಹಿತ್ಯ ವಿಮರ್ಶೆ, ಅಂಕಣ ಬರಹ, ವಯಸ್ಕರ ಶಿಕ್ಷಣ, ಸಂಸ್ಕೃತಿ ಅಧ್ಯಯನ, ಜನಪರ ಚಳುವಳಿ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ಕೃಷಿ ಮಾಡಿದರು.
  • ಭಾರತೀಯ ಭಾಷಾ ಸಂಸ್ಥಾನದಲ್ಲಿ ಕೆಲಸ ನಿರ್ವಹಿಸುವಾಗಲೇ ಅಲ್ಲಿನ ಶೈಕ್ಷಣಿಕ ತಂತ್ರಜ್ಞಾನ ಮತ್ತು ಮಾಧ್ಯಮಗಳ ಅಧ್ಯಯನ, ಭಾಷಾ ಮಂದಾಕಿನಿ ಯೋಜನೆಗಳ ಮುಖ್ಯಸ್ಥರಾಗಿದ್ದರು. ಅಲ್ಲದೆ ಕನ್ನಡ ಶಾಸ್ತ್ರೀಯ ಭಾಷೆ, ಕನ್ನಡ ಭಾಷಾ ವಿಶ್ವಕೋಶದ ಸಂಯೋಜಕರಾಗಿ ಸೇವೆ ಸಲ್ಲಿಸಿದ್ದಾರೆ.

ರಂಗಭೂಮಿ[ಬದಲಾಯಿಸಿ]

  • ರಂಗ ವಿಮರ್ಶೆ, ನಾಟಕ ರಚನೆಯಲ್ಲಿ ತೊಡಗಿಸಿಕೊಂಡಿದ್ದ ಲಿಂಗದೇವರು ಸಮುದಾಯದ ಸ್ಥಾಪಕ ಸದಸ್ಯರಲ್ಲಿ ಒಬ್ಬರು. ಚಿಕ್ಕದೇವ ಭೂಪ, ಅಂತೆಂಬರ ಗಂಡ, ತಸ್ಕರ, ಹೈದರ್, ಶಾಪ, ಗಡಿಯಂಕ ಕುಡಿಮದ್ದ ಎಂಬ ನಾಟಕಗಳನ್ನು ರಚಿಸಿದ್ದಾರೆ. ರಾಡ್ ಲ್ಯಾಂಗ್ಲೆ, ಬಾದಲ್ ಸರಕಾರ್, ಜೀನ್ ಪಾಲ್ ಸಾರ್ತ್ರೆ, ಬರ್ಟೋಲ್ಟ್ ಬ್ರೆಕ್ಟ್‌ರ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.
  • ರಂಗಭೂಮಿಗೆ ಸಂಬಂಧಿಸಿದಂತೆ ನೂರಾರು ಲೇಖನಗಳನ್ನು ಬರೆದಿದ್ದಾರೆ. ಬೀದಿ ನಾಟಕಗಳನ್ನು ಆಡಿಸಿದ್ದಾರೆ. ಹಲವು ಕಿರುನಾಟಕಗಳನ್ನು ಬರೆದಿದ್ದಾರೆ. ಇವುಗಳೆಲ್ಲ ‘ರೂಪರೂಪಗಳನುದಾಟಿ’, ‘ರಂಗರೂಪಕ’ ಮತ್ತು ‘ರಂಗಕ್ಕೊಂದುಷ್ಟು ಹತ್ತಿರ’ ಪುಸ್ತಕಗಳ ರೂಪದಲ್ಲಿ ಪ್ರಕಟವಾಗಿವೆ. ಅಂತರಜಾಲದ ಮೂಲಕ ಕನ್ನಡ ಕಲಿಸುವ ಕನ್ನಡ ಲರ್ನಿಂಗ್ ಸೆಂಟರ್ ಎಂಬ ತಾಣವೊಂದನ್ನು ಪ್ರಾರಂಭಿಸಿದ್ದರು.

ಮರಣ[ಬದಲಾಯಿಸಿ]

ಮೈಸೂರಿನ ಕನಕದಾಸ ನಗರದಲ್ಲಿನ ನಿವಾಸದಲ್ಲಿ ತೀವ್ರ ಹೃದಯಾಘಾತಕ್ಕೆ ಈಡಾಗಿ ತಮ್ಮ ೬೨ನೇ ವಯಸ್ಸಿನಲ್ಲಿ ( ೭-೬-೨೦೧೧ ) ಕೊನೆಯುಸಿರೆಳೆದರು. ಅಪೋಲೊ ಆಸ್ಪತ್ರೆಗೆ ಕೊಂಡೊಯ್ಯುವ ಹಾದಿಯಲ್ಲಿ ಮರಣವನ್ನಪ್ಪಿದರು.

ಹಳೆಮನೆ ಕುರಿತು ಇತರರು[ಬದಲಾಯಿಸಿ]

ಕನ್ನಡದ ಹಿರಿಯ ಸಂಶೋಧಕ ರಹಮತ್ ತರೀಕೆರೆ ಕೆಂಡಸಂಪಿಗೆಯಲ್ಲಿ ಹಳೆಮನೆಯವರನ್ನು ಕುರಿತು ಹೇಳಿದ್ದು:

ತಿಪಟೂರು ತಾಲೂಕಿನ ಹಾಲಗೊಣದವರಾದ ಲಿಂಗದೇವರು ಹಳೆಮನೆ, ಒಳ್ಳೆಯ ಮಾತುಗಾರರಾಗಿದ್ದರು. ಕರ್ನಾಟಕವನ್ನು ಬೇಕಾದಂತೆ ತಿರುಗಾಡಿ ನೋಡಿದ್ದರು. ನಾಡಿನ ತುಂಬೆಲ್ಲ ಅವರಿಗೆ ಗೆಳೆಯರಿದ್ದರು. ಕರ್ನಾಟಕದಲ್ಲಿ ಸಾಹಿತ್ಯ, ರಂಗಭೂಮಿ, ಸಂಸ್ಕೃತಿ, ಚಳುವಳಿ, ರಾಜಕಾರಣ, ಸಾಮಾಜಿಕ ಸಮಸ್ಯೆ- ಹೀಗೆ ಹಲವಾರು ವಿಷಯಗಳಲ್ಲಿ ಅಧಿಕೃತವಾಗಿ ಮಾತಾಡಬಲ್ಲ ಕೆಲವೇ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು. ಈಚೆಗೆ ಬರವಣಿಗೆ ಕಡಿಮೆ ಮಾಡಿದ್ದರು. ಸಂಪಾದಕರಾಗಿ ‘ಅರಿವು ಕುರುಹು’ ಎಂಬ ಪತ್ರಿಕೆಯನ್ನು ಚೆನ್ನಾಗಿ ತರುತ್ತಿದ್ದರು. ‘ರಂಗಾಯಣ’ದ ನಿರ್ದೇಶಕರಾಗಿ ಏನು ಮಾಡುತ್ತಿದ್ದರೊ ನನಗೆ ಮಾಹಿತಿಯಿರಲಿಲ್ಲ. ಮಹಾಪ್ರೀತಿಯ, ವೈಯಕ್ತಿಕ ಬದುಕಿನಲ್ಲಿ ನೋವುಂಡ, ಸಾಕಷ್ಟು ಅಶಿಸ್ತುಗಳಿದ್ದ ವ್ಯಕ್ತಿ ಅವರು. ಎರಡು ಹೆಣ್ಣುಮಕ್ಕಳ ತಂದೆಯಾದ ಅವರು ಈಚೆಗೆ ಹೊಸಮನೆ ಕಟ್ಟಿಸಿಕೊಂಡು ಕೊಂಚ ನೆಮ್ಮದಿಯ ಬದುಕಿಗೆ ಹೊರಳುತ್ತಿದ್ದರು. ‘ಹೆಸರು ಹಳೆಮನೆ. ಇರುವುದು ಹೊಸಮನೆ’ ಎಂದು ನಾನು ಅಣಕಿಸುತ್ತಿದ್ದೆ. ಹಳೆಮನೆಗೆ ಈಗ ೬೨ ವರ್ಷಗಳಾಗಿದ್ದಿರಬೇಕು. ಸಾಯುವ ವಯಸ್ಸೇನಲ್ಲ. ಆದರೂ ಅವಸರ ಮಾಡಿ ಕಾಣದ ಮನೆಗೆ ಹೋಗಿಬಿಟ್ಟರು. [೧]

ಪ್ರಕಟಿತ ಕೃತಿಗಳು[ಬದಲಾಯಿಸಿ]

ನಾಟಕಗಳು[ಬದಲಾಯಿಸಿ]

  1. ಚಿಕ್ಕದೇವ ಭೂಪ
  2. ಅಂತೆಂಬರ ಗಂಡ
  3. ತಸ್ಕರ
  4. ಹೈದರ್
  5. ಶಾಪ
  6. ಗಡಿಯಂಕ ಕುಡಿಮದ್ದ
  7. ಡಾ.ಭೆಥೂನ್
  8. ಧರ್ಮಪುರಿಯ ದೇವದಾಸಿ
  9. ನೆರಳಿಲ್ಲದ ಮನುಷ್ಯರು
ಇತರೆ ಪುಸ್ತಕಗಳು[ಬದಲಾಯಿಸಿ]
  1. ರೂಪರೂಪಗಳನುದಾಟಿ
  2. ರಂಗರೂಪಕ
  3. ರಂಗಕ್ಕೊಂದುಷ್ಟು ಹತ್ತಿರ
  4. ಬೆಳಕು ಬೆರಗು
  5. ಸಂದರ್ಭ

==ಅಪ್ರಕಟಿತ ನಾಟಕಗಳು[ಬದಲಾಯಿಸಿ]

ಶಾಪ ಮದರ್ ಕರೇಜ್ ಗುಂಡು ತಲೆ ಚೂಪು ತಲೆ ಮಠಾಶ್ ರಾಜಾ ಜನತೆ

  1. An Intensive Course in Kannada (with M.N. Leelavathi), Mysore: Central Institute of Indian Languages, 1983.

ಅನುವಾದಗಳು[ಬದಲಾಯಿಸಿ]

ಪ್ರಶಸ್ತಿ - ಸನ್ಮಾನ[ಬದಲಾಯಿಸಿ]

  1. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
  2. ಕನ್ನಡ ರಾಜ್ಯೋತ್ಸವ ಪ್ರಶಸ್ತಿ

ಉಲ್ಲೇಖಗಳು[ಬದಲಾಯಿಸಿ]

ಹೊರಗಿನ ಕೊಂಡಿಗಳು[ಬದಲಾಯಿಸಿ]

  1. ಲಿಂಗದೇವರು ಹಳೆಮನೆಯವರ ಜತೆಗಿನ ಸಂದರ್ಶನ ಪಾಡ್ ಕಾಸ್ಟ್ Archived 2011-05-19 ವೇಬ್ಯಾಕ್ ಮೆಷಿನ್ ನಲ್ಲಿ.
  2. ಪತ್ರಕರ್ತ ಹರ್ಷ ಕುಮಾರ್ ಕುಗ್ವೆ ನಡೆಸಿದ ಸಂದರ್ಶನ