ಪ್ರಸ್ಥಾನತ್ರಯೀ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಿಂದೂ ಧರ್ಮಗ್ರಂಥಗಳು

Aum

ಋಗ್ವೇದ · ಯಜುರ್ವೇದ · ಸಾಮವೇದ · ಅಥರ್ವವೇದ

ಐತರೇಯ · ಬೃಹದಾರಣ್ಯಕ · ಈಶಾವಾಸ್ಯ · ತೈತ್ತಿರೀಯ · ಛಾಂದೋಗ್ಯ · ಕೇನ · ಮುಂಡಕ · ಮಾಂಡೂಕ್ಯ · ಕಠ · ಪ್ರಶ್ನ · ಶ್ವೇತಾಶ್ವತರ

ಗರುಡ · ಅಗ್ನಿ . ನಾರದ . ಪದ್ಮ . ಸ್ಕಾಂದ . ಭವಿಷ್ಯ . ಬ್ರಹ್ಮ . ಭಾಗವತ . ಬ್ರಹ್ಮವೈವರ್ತ . ಬ್ರಹ್ಮಾಂಡ . ವಾಯು . ಲಿಂಗ . ವಿಷ್ಣು . ವಾಮನ . ಮಾರ್ಕಂಡೇಯ . ವರಾಹ . ಕೂರ್ಮ . ಮತ್ಸ್ಯ

ಮಹಾಭಾರತ · ರಾಮಾಯಣ

ಭಗವದ್ಗೀತೆ · ಆಗಮ· ಶೂನ್ಯ ಸಂಪಾದನ· ಶ್ರೀ ಸಿದ್ಧಾಂತ ಶಿಖಾಮಣಿ · ವೀರಶೈವ ಪುರಾಣ · ವಿಷ್ಣು ಸಹಸ್ರನಾಮ . ಬಸವರಾಜ ವಿಜಯಂ

ಭಗವದ್ಗೀತೆ, ಉಪನಿಷತ್ತುಗಳು ಹಾಗೂ ಬ್ರಹ್ಮಸೂತ್ರಗಳಿಗೆ ಒಟ್ಟಾಗಿ ಪ್ರಸ್ಥಾನತ್ರಯೀ ಎಂದು ಹೆಸರು. ಉತ್ತರ ಮೀಮಾಂಸೆ|ಉತ್ತರ ಮೀಮಾಂಸಾ ಶಾಖೆಯ ಮೂರು ಪ್ರಮುಖ ದಾರ್ಶನಿಕರಾದ ಆದಿ ಶಂಕರರು, ರಾಮಾನುಜರು ಹಾಗೂ ಮಧ್ವರು ಈ ಗ್ರಂಥಗಳಿಗೆ ಭಾಷ್ಯಗಳನ್ನು ರಚಿಸಿದ್ದಾರೆ.

ಪರಿಚಯ[ಬದಲಾಯಿಸಿ]

ಭಾರತೀಯ ತತ್ವಸೌಧಕ್ಕೆ ಪ್ರಸ್ಥಾನತ್ರಯವೇ ಆಧಾರಸ್ಥಂಭಗಳು. ಉಪನಿಷತ್ತು , ಬ್ರಹ್ಮಸೂತ್ರ ಮತ್ತು ಭಗವದ್ಗೀತೆ ಗಳನ್ನೇ ಭಾರತೀಯ (ಹಿಂದೂ) ತತ್ವದರ್ಶನದಲ್ಲಿ ಪ್ರಸ್ಥಾನತ್ರಯವೆಂದು ಕರೆಯಲಾಗಿದೆ. ಯಾವ ತತ್ವವನ್ನೇ ಹೇಳಬೇಕಾದರೂ ಈ ಪ್ರಸ್ಥಾನತ್ರಯಗಳ ವಿಚಾರವನ್ನೇ ಪ್ರಮಾಣವನ್ನಾಗಿಟ್ಟುಗೊಂಡು ಹೇಳಬೇಕು ಮತ್ತು ಹೇಳುವ ವಿಚಾರದಕ್ಕೆ ಇವುಗಳಲ್ಲಿ ಪ್ರಮಾಣವು ಸಿಗಬೇಕು. ಅಂತಹ ವಿಚಾರವು ತತ್ವವಿಚಾರಗಳಲ್ಲಿ ಮಾನ್ಯತೆಯನ್ನು ಪಡೆಯುತ್ತದೆ. ಈ ಕಾರಣಕ್ಕೇ ಈ ಮೂರೂ ದರ್ಶನಗಳ ಮೇಲೆ ಹೆಚ್ಚಿನ ಭಾಷ್ಯಗಳು, ಟೀಕೆಗಳು, ತಾತ್ಪರ್ಯಗಳು ಮೂಡಿಬಂದಿರುವುದು.

ಉಪನಿಷತ್ತುಗಳು[ಬದಲಾಯಿಸಿ]

ಪ್ರಸ್ಥಾನತ್ರಯದಲ್ಲಿ ಉಪನಿಷತ್ತುಗಳು ಅತ್ಯಂತ ಪ್ರಾಚೀನವಾದವುಗಳೆಂದು ಗಣಿಸಲ್ಪಟ್ಟಿದೆ. ವೇದಗಳ ಅಂತ್ಯದಲ್ಲಿ ಇವುಗಳ ಉಲ್ಲೇಖವಿರುವುದರಿಂದ 'ವೇದಾಂತ' ಎಂದೂ ಕರೆಯಲಾಗಿದೆ. ವೇದಗಳನ್ನು ಕರ್ಮಕಾಂಡವೆಂದು ಕರೆದರೆ ಉಪನಿಷತ್ತುಗಳನ್ನು ಜ್ಞಾನಕಾಂಡವೆಂದು ಹೇಳಲಾಗಿದೆ. ಉಪನಿಷತ್ತುಗಳಲ್ಲಿ ಕರ್ಮವನ್ನು ಹೊರಗಿಟ್ಟು ಕೊಡದೆ 'ಕೇವಲ ಜ್ಞಾನ'ಕ್ಕೆ ಪ್ರಾಧಾನ್ಯತೆ ನೀಡಲಾಗಿದೆ. ಹತ್ತು ಉಪನಿಷತ್ತುಗಳನ್ನು ಪ್ರಮುಖವಾಗಿ ಹೆಸರಿಸಲಾಗಿದೆ. ಅವುಗಳೆಂದರೆ,

  1. ಈಶೋಪನಿಷತ್ತು
  2. ಕೇನೋಪನಿಷತ್ತು
  3. ಕಠೋಪನಿಷತ್ತು
  4. ಪ್ರಶ್ನೋಪನಿಷತ್ತು
  5. ಮುಂಡಕೋಪನಿಷತ್ತು
  6. ಮಾಂಡೂಕ್ಯೋಪನಿಷತ್ತು
  7. ತೈತ್ತಿರೀಯ ಉಪನಿಷತ್ತು
  8. ಐತರೇಯ ಉಪನಿಷತ್ತು
  9. ಛಾಂದೋಗ್ಯ ಉಪನಿಷತ್ತು
  10. ಬೃಹದಾರಣ್ಯಕ ಉಪನಿಷತ್ತು

ಬ್ರಹ್ಮಸೂತ್ರಗಳು[ಬದಲಾಯಿಸಿ]

ಈ ಗ್ರಂಥದಲ್ಲಿರುವ ವಾಕ್ಯಗಳು ತುಂಬ ಸಂಕೀರ್ಣವಾಗಿದ್ದು ಸೂತ್ರಗಳ ರೂಪದಲ್ಲೇ ಇದೆ. ಭಾಷ್ಯಕಾರರ ಟಿಪ್ಪಣಿಗಳಿಲ್ಲದೆ, ವ್ಯಾಖ್ಯಾನಗಳಿಲ್ಲದೆ ಇದನ್ನು ಓದಿ ಅರಿತುಕೊಳ್ಳುವುದು ಕಷ್ಟ. ಒಟ್ಟು ಸಂಗ್ರಹರೂಪದಲ್ಲಿದ್ದ ಈ ಸೂತ್ರವಾಕ್ಯಗಳನ್ನು ವರ್ಗೀಕರಣಗೊಳಿಸಿ ಒಪ್ಪಗೊಳಿಸಿದವರು ವೇದವ್ಯಾಸರೆಂದು ಬಹುವಾಗಿ ಚಾಲ್ತಿಯಲ್ಲಿದೆ. ಈ ಗ್ರಂಥದಲ್ಲಿ ಬ್ರಹ್ಮದ ಅನುಭವ, ಸಾಕ್ಷಾತ್ಕಾರ ಮತ್ತು ಸಾಧನೆಗಳ ವಿವರಣೆಗಳನ್ನು ಚರ್ಚಿಸಲಾಗಿದೆ. ಉಪನಿಷತ್ತುಗಳಿಂದ ಆಯ್ದ ಸಂಕ್ಷೇಪಸೂತ್ರಗಳನ್ನು ತಾತ್ವಿಕ ದೃಷ್ಟಿಯಿಂದ ಈ ಗ್ರಂಥದಲ್ಲಿ ಹೇಳಲಾಗಿದೆ. ಜೀವ, ಜಗತ್ತು, ಈಶ್ವರ, ಕರ್ಮ, ಜ್ಞಾನ, ಬ್ರಹ್ಮ ಮುಂತಾದ ವಿಷಯಗಳೆಲ್ಲಾ ಇಲ್ಲಿ ಬರುತ್ತದೆ. ಆಚಾರ್ಯತ್ರಯರಾದ ಶಂಕರಾಚಾರ್ಯರು, ಮಧ್ವಾಚಾರ್ಯರು ಮತ್ತು ರಾಮಾನುಜಾಚಾರ್ಯರು ಬ್ರಹ್ಮಸೂತ್ರಗಳಿಗೆ ಭಾಷ್ಯಗಳನ್ನು ಬರೆದಿದ್ದಾರೆ. ಆದಿಶಂಕರರ ಭಾಷ್ಯವು ಇವುಗಳಲ್ಲಿ ಅತ್ಯಂತ ಪ್ರಾಚೀನವಾದುದೆಂದು ಹೇಳಲಾಗಿದೆ.

ಭಗವದ್ಗೀತೆ[ಬದಲಾಯಿಸಿ]

ಮೂರನೆಯ ಪ್ರಸ್ಥಾನವೇ ಭಗವದ್ಗೀತೆ. ಇದು ಮಹಾಭಾರತದ ಭೀಷ್ಮಪರ್ವದಲ್ಲಿ ಬರುವುದು. ಇದು ಹದಿನೆಂಟು ಅಧ್ಯಾಯಗಳನ್ನೊಳಗೊಂಡಿದೆ. ಏಳುನೂರು ಶ್ಲೋಕಗಳಿವೆ. ಉಪನಿಷತ್ತುಗಳ ಸಾರಸಂಗ್ರಹವೇ ಗೀತೆಯಲ್ಲಿದೆ. ಶಂಕರಾಚಾರ್ಯರು ಗೀತಾಭಾಷ್ಯದ ಆರಂಭದಲ್ಲೇ ಇದನ್ನು ಸಮಸ್ತ ವೇದಾರ್ಥ ಸಾರಸಂಗ್ರಹಭೂತಮ್ ಎಂದು ವರ್ಣಿಸಿದ್ದಾರೆ. ಮುಖ್ಯವಾಗಿ ಭಗವದ್ಗೀತೆಯಲ್ಲಿರುವುದು ಬ್ರಹ್ಮವಿದ್ಯೆ. ಜೀವ-ಜಗತ್ತಿನ ಸ್ವರೂಪವೇನು ಎಂಬುದನ್ನು ಕೃಷ್ಣನು ಅರ್ಜುನನಿಗೆ ಹೇಳುವ ರೀತಿಯಲ್ಲಿ ವಿವರಿಸಲಾಗಿದೆ.

ಇದನ್ನೂ ನೋಡಿ[ಬದಲಾಯಿಸಿ]