ಪರಮಹಂಸ ಯೋಗಾನಂದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪರಮಹಂಸ ಯೋಗಾನಂದ. ಮೊದಲ ಹೆಸರು: ಮುಕುಂದ ಲಾಲ್ ಘೋಷ್; ಜನನ: 5 ಜನವರಿ 1893; ಗೋರಖ್ಪುರ (ಇಂದಿನ ಉತ್ತರ ಪ್ರದೇಶ, ಭಾರತ)- ಮುಕ್ತರು (ಮರಣ):7 ಮಾರ್ಚ್ 1952; (59 ನೇ ವಯಸ್ಸಿನಲ್ಲಿ); ಸ್ಥಳ: ಬಿಲ್ಟ್ ಮೊರೆ ಹೋಟೆಲ್, ಲಾಸ್ ಏಂಜಲೀಸ್, ಕ್ಯಾಲಿಫೋರ್ನಿಯಾ

ಪೀಠಿಕೆ[ಬದಲಾಯಿಸಿ]

ಪರಮಹಂಸ ಯೋಗಾನಂದ (ಜನವರಿ ೫, ೧೮೯೩ - ಮಾರ್ಚ್ ೭, ೧೯೫೨), ಮೂಲನಾಮ ಮುಕುಂದ ಲಾಲ್ ಘೋಷ್, ತಮ್ಮ ಪುಸ್ತಕ ಯೋಗಿಯ ಆತ್ಮಕಥೆಯ ಮೂಲಕ ಧ್ಯಾನ ಹಾಗು ಕ್ರಿಯಾಯೋಗದ ಬೋಧನೆಗಳಿಗೆ ಲಕ್ಷಾಂತರ ಪಾಶ್ಚಿಮಾತ್ಯರನ್ನು ಪರಿಚಯಿಸಿದ ಒಬ್ಬ ಭಾರತೀಯ ಯೋಗಿ ಹಾಗು ಗುರುಗಳಾಗಿದ್ದರು. ಯೋಗಾನಂದರು ಉತ್ತರ ಪ್ರದೇಶಗೋರಖ್‍ಪುರ್‌ದಲ್ಲಿ ಒಂದು ಧರ್ಮನಿಷ್ಠ ಕುಟುಂಬದಲ್ಲಿ ಜನಿಸಿದರು. ಅವರ ಕಿರಿಯ ಸಹೋದರ ಸಾನಂದನ ಪ್ರಕಾರ, ಅವರ ತಮ್ಮ ಮುಕುಂದರ ಅತ್ಯಂತ ಮುಂಚಿನ ವರ್ಷಗಳಿಂದಲೂ ಅಧ್ಯಾತ್ಮದ ಅರಿವು ಮತ್ತು ಅನುಭವ ಸಾಮಾನ್ಯ ಜನರ ಅನುಭವವನ್ನು ಬಹಳ ಮೀರಿತ್ತು.

ಯೋಗಾನಮದರು (ಮುಕುಂದ) ೬ ನೇ ವಯಸ್ಸಿನಲ್ಲಿ

ಜನನ-ಬಾಲ್ಯ[ಬದಲಾಯಿಸಿ]

  • 1893ರ ಜನವರಿ 5 ರಂದು ಗೋರಖ ಪುರದಲ್ಲಿ ಜನಿಸಿದ ಇವರ ಹುಟ್ಟು ಹೆಸರು ಮುಕುಂದ. ಇವರ ತಂದೆ ಭಗವತೀ ಚರಣ ಘೊಷ್ (1853-1942) ದಯಾಮಯಿ, ತಾಯಿ ಜ್ಞಾನಪ್ರಭಾ ಘೊಷ್ (1868-1904). ಅವರು ಪ್ರೀತಿಯ ಸ್ವರೂಪವೇ ಆಗಿದ್ದರು. ಮುಕುಂದ ಅಣ್ಣಂದಿರ ಜತೆ ಹೊರಗೆ ಆಟವಾಡುತ್ತಲೇ, ಮನೆಯೊಳಗೆ ಆಗಾಗ್ಗೆ ಧ್ಯಾನಕ್ಕೆ ಕೂರುತ್ತಿದ್ದರು. ಮುಕುಂದ ಚಿಕ್ಕವನಿರುವಾಗಲೇ ತಾಯಿ ಅಕಾಲಿಕ ಮರಣಕ್ಕೀಡಾದಾಗ ಭಗವತೀ ಚರಣರು ಸಂಸಾರದ ಜವಾಬ್ದಾರಿ ಹೊರಬೇಕಾಯಿತು. ಆಗ ಅವರಿಗೆ ಆಧ್ಯಾತ್ಮಿಕವಾಗಿಯೂ ಮಾನಸಿಕವಾಗಿಯೂ ಒತ್ತಾಸೆಯಾದವರು ಯೋಗಿ ಲಾಹಿರೀ ಮಹಾಶಯರು ಅವರಿಂದ ಕ್ರಿಯಾಯೋಗದ ದೀಕ್ಷೆ ಪಡೆದು ಭವದ ಸಾಗರವನ್ನು ಮುಕುಂದ ದಾಟಿದರು. ಯೋಗಿ ಲಾಹಿರಿ ಮಹಾಶಯರು ಹಿಮಾಲಯದ ಮಹಾಯೋಗಿ ಮಹಾವತಾರ ಬಾಬಾಜಿಯಿಂದ ಕ್ರಿಯಾಯೋಗದ ಉಪದೇಶ ಪಡೆದು ಸಿದ್ಧಿಪಡೆದವರು. ಮುಕುಂದ ಎಂಟು ವರ್ಷದವನಿದ್ದಾಗಲೇ ಲಾಹಿರಿ ಮಹಾಶಯರ ಭಾವಚಿತ್ರದ ಮೂಲಕ ಬೆಳಕಿನ ಅನುಗ್ರಹವಾಯಿತು. ಅವರಿಗೆ ಬಾಲ್ಯದಿಂದಲೂ ಒಂದಲ್ಲ ಒಂದು ರೋಗ ಕಾಡುತ್ತಿತ್ತು. ಒಮ್ಮೆ ಏಷ್ಯಾಟಿಕ್ ಕಾಲರಾ ಬಂದಾಗ, ತಾಯಿಯ ಸೂಚನೆಯಂತೆ ಲಾಹಿರಿ ಮಹಾಶಯರ ಭಾವಚಿತ್ರಕ್ಕೆ ತಲೆಬಾಗಿದ. ಅಲ್ಲಿಂದ ಬಂದ ಬೆಳಕು ಅವರನ್ನು ರೋಗಮುಕ್ತಗೊಳಿಸಿತು. ತಾಯಿ ಜ್ಞಾನಪ್ರಭಾ ತಮ್ಮ ಗುರುಗಳಲ್ಲಿಟ್ಟಿದ್ದ ಅಚಲನಿಷ್ಠೆಯು ಮತ್ತು ಆ ಗುರುಗಳ ಪ್ರಭಾವ ಹೀಗಿತ್ತು. ಮುಕುಂದ ಚಿಕ್ಕವನಾಗಿದ್ದಾಗ ವಾರಾಣಸಿಯಲ್ಲಿದ್ದ ಲಾಹಿರಿ ಗುರುಗಳ ಮನೆಗೆ ಹೋದಾಗ ‘ಇವನು ಯೋಗಿಯಾಗಿ ಆಧ್ಯಾತ್ಮಿಕ ಶಿಖರವೇರುತ್ತಾನೆ. ಅನೇಕರನ್ನು ಭಗವಂತನ ಸಾಮ್ರಾಜ್ಯಕ್ಕೆ ಕರೆದೊಯ್ಯುತ್ತಾನೆ’ ಎಂದಿದ್ದರು. ಅದನ್ನು ಅವರ ತಾಯಿ ಮರಣದ ಕಾಲದಲ್ಲಿ ಮುಕುಂದನಿಗೆ ಹೇಳಿದರು.[೧]
ಮಹಾವತಾರ ಬಾಬಾಜಿ ೬೦೦ / ೮೦೦ ವರ್ಷದಿಂದಲೂ ಬದುಕಿದ್ದು ಹಿಮಾಲಯದಲ್ಲಿ ಇರುವರೆಂದು ಹೇಳುವರು; ಕ್ರಿಯಾಯೋಗದ ಪ್ರವರ್ತಕರು
ಲಾಹಿರಿ ಮಹಾಶಯ - ಮಹಾವತಾರ ಬಾಬಾಜಿಯ ಶಿಷ್ಯರು. ಕ್ರಿಯಾಯೋಗ ರಹಸ್ಯವನ್ನು ಯುಕ್ತೇಶ್ವರರಿಗೆ ನೀಡಿದವರು.
ಶ್ರೀ ಯುಕ್ತೇಶ್ವರ ಗಿರಿ, ಲಾಹಿರಿ ಮಹಾಶಯ ಅವರ ಶಿಷ್ಯರು; ಪರಮಹಂಸ ಯೋಗಾನಂದರ ಗುರುಗಳು

ವಿದ್ಯಾಭ್ಯಾಸ[ಬದಲಾಯಿಸಿ]

  • ಮುಕುಂದರ ತಂದೆ ಭಗವತೀ ಚರಣರು ಕಾಯಂ ನೌಕರರಾಗಿ ಕಲ್ಕತ್ತದಲ್ಲಿ ನೆಲೆಸಿದ್ದರು. ಪ್ರೌಢಶಾಲೆಯಲ್ಲಿ ಓದುತ್ತಿದ್ದ ಮುಕುಂದನಿಗೆ ಹಿಮಾಲಯಕ್ಕೆ ಹೋಗಬೇಕೆಂಬ ಬಯಕೆಯಾಯಿತು. ಒಮ್ಮೆ ಕಂಬಳಿ, ಪಾದರಕ್ಷೆ, ಕೌಪೀನ, ಜಪಸರ, ಲಾಹಿರೀ ಮಹಾಶಯರ ಭಾವಚಿತ್ರ ಹಾಗೂ ಗೀತೆಯ ಪುಸ್ತಕಗಳನ್ನು ಬಟ್ಟೆಯಲ್ಲಿ ಗಂಟುಕಟ್ಟಿ ಹೊರಡಲು ಯತ್ನಿಸಿದರು ಅದರೆ ಸಾಧ್ಯವಾಗಲಿಲ್ಲ. ತಂದೆಗೆ ಇದು ತಿಳಿಯಿತು. ಅವರು ಮಗನಿಗೆ ‘ಪ್ರೌಢಶಾಲಾ ವಿದ್ಯಾಭ್ಯಾಸ ಮುಗಿಸು, ನಂತರ ನೋಡೋಣ’ ಎಂದು ಬುದ್ಧಿವಾದ ಹೇಳಿದರು. ಈ ನಡುವೆ ಮುಕುಂದನು ಗಂಧಬಾಬಾ, ಹುಲಿಸ್ವಾಮಿ, ನಾಗೇಂದ್ರನಾಥ ಬಾದುರಿ, ಮಾಸ್ಟರ್ ಮಹಾಶಯ, ವಿಜ್ಞಾನಿ ಜಗದೀಶ್ಚಂದ್ರ ಬೋಸ್ ಇವರನ್ನು ಭೇಟಿಯಾದರು. ಮಾಸ್ಟರ್ ಮಹಾಶಯನ ಜತೆ ಕಾಳಿಘಾಟಿಗೆ ಹೋಗಿ ಕಾಳಿ ಆರಾಧನೆ ಮಾಡಿದ, ರಾಮಕೃಷ್ಣ ಪರಮಹಂಸರ ಬಗೆಗೆ ಕೇಳಿ ಕೆಲಹೊತ್ತು ಧ್ಯಾನಸ್ಥನಾದ. ಈ ನಡುವೆ ಪ್ರೌಢಶಾಲಾ ವ್ಯಾಸಂಗದ ಅಂತಿಮವರ್ಷದ ಪರೀಕ್ಷೆಗೆ ಕುಳಿತರು. ತರುವಾಯದಲ್ಲಿ ಆಧ್ಯಾತ್ಮಿಕ ಶಿಕ್ಷಣಕ್ಕೆಂದು ವಾರಾಣಾಸಿಯ ‘ಶ್ರೀ ಭಾರತಧರ್ಮ ಮಹಾಮಂಡಲ’ಕ್ಕೆ ಸೇರಿದರು. ಅಲ್ಲಿ ಉಪವಾಸ ಮಾಡುತ್ತ, ಸ್ವಾಮಿ ದಯಾನಂದ ಸರಸ್ವತಿಯವರ ಸೂಚನೆಯಂತೆ ಧ್ಯಾನ-ತಪಸ್ಸಿನ ಅಭ್ಯಾಸವನ್ನು ಮುಂದುವರಿಸಿದರು. ಒಮ್ಮೆ ಅವರಿಗೆ ಕಾಷಾಯವಸ್ತ್ರ ಧರಿಸಿದ್ದ ಸಂತರ ದರ್ಶನವಾಯಿತು. ಅವರು ಸೂಜಿಗಲ್ಲಿನಂತೆ ಇವರನ್ನು ಸೆಳೆದರು. ಅವರ ನಿರರ್ಗಳ ವಾಗ್ಝರಿ ಇವರ ಮನಸ್ಸಿಗೆ ನಾಟಿತು. ಅವರು ‘ನನ್ನ ಆಶ್ರಮ ಮತ್ತು ಸರ್ವಸ್ವವನ್ನು ಕೊಡುವೆ ಬಾ’ ಎಂದಿದ್ದಕ್ಕೆ ಮುಕುಂದ ‘ಜ್ಞಾನ ಮತ್ತು ದೈವಸಾಕ್ಷಾತ್ಕಾರ ಪಡೆಯುವುದಕ್ಕೆ ಮಾತ್ರ ಬರುತ್ತೇನೆ’ ಎಂದು ದೃಢವಾಗಿ ಹೇಳಿದ. ಆಗ ಆ ಯೋಗಿಗಳು ‘ನನ್ನ ಹೆಸರು ಸ್ವಾಮಿ ಶ್ರೀಯುಕ್ತೇಶ್ವರ ಗಿರಿ, ನನ್ನ ಆಶ್ರಮ ಕಲ್ಕತ್ತೆಗೆ ಸಮೀಪದ ಸಿರಾಂಪುರದಲ್ಲಿದೆ’ ಎಂದಾಗ ಮುಕುಂದನಿಗೆ ಅವರು ಲಹರಿಮಹಾಶಯರ ಶಿಷ್ಯರೆಂದು ತಿಳಿದು ಅಚ್ಚರಿಯಾಯಿತು.

ಯುಕ್ತೇಶ್ವರ ಗಿರಿ ಗುರುವಿನೊಡನೆ[ಬದಲಾಯಿಸಿ]

ಯೋಗಿ ಶ್ರೀ ಯುಕ್ತೇಶ್ವರ ಗಿರಿ; ಪರಮಹಂಸ ಯೋಗಾನಂದರ ಗುರುಗಳು
  • ವಾರಾಣಸಿಯಲ್ಲಿ 27 ದಿನ ಇದು ರೈಲಿನಲ್ಲಿ ಸಿರಾಂಪುರಕ್ಕೆ ಹೋಗಿ, ಯುಕ್ತೇಶ್ವರರ ಆಶ್ರಮಕ್ಕೆ ಮುಕುಂದ ಬಂದರು. ಗುರುಗಳು ಕೆಲದಿನಗಳಲ್ಲಿ ಅವರಿಗೆ ಕ್ರಿಯಾಯೋಗದ ದೀಕ್ಷೆ ನೀಡಿದರು. ಅವರ ಆಣತಿಯಂತೆ ಕಲ್ಕತ್ತೆಗೆ ಹಿಂತಿರುಗಿ ಬಂದು ಕಾಲೇಜು ಸೇರಿಕೊಂಡರು. ಬಿಡುವಾದಾಗಲೆಲ್ಲಾ ಯುಕ್ತೇಶ್ವರರ ಆಶ್ರಮಕ್ಕೆ ಹೋಗುತ್ತಿದ್ದರು. ಗುರುಗಳ ಸಾನ್ನಿಧ್ಯ ಎಲ್ಲ ಸಂಶಯಗಳನ್ನು ನೀಗಿಸುತ್ತಿತ್ತು. ಗುರು-ಶಿಷ್ಯರು ಅನೇಕ ರಾತ್ರಿಗಳನ್ನು ಆಧ್ಯಾತ್ಮಿಕ ಚರ್ಚೆಯಲ್ಲಿ ಕಳೆಯುತ್ತಿದ್ದರು. ಗುರುಗಳ ಅಪೂರ್ವ ಆಧ್ಯಾತ್ಮಿಕ ಪ್ರಭಾವವನ್ನು ಮುಕುಂದ ಅನುಭವಿಸುತ್ತಿದ್ದರು. ಯುಕ್ತೇಶ್ವರರು ಯೌಗಿಕ ಸ್ಥಿತಿಯ ನೆಲೆಗಳನ್ನು ಪ್ರಯೋಗದ ಮೂಲಕ ಮುಕುಂದ ಅವರಿಗೆ ಮಾಡಿ ತೋರಿಸುತ್ತಿದ್ದರು. ಸವಿಕಲ್ಪ ಸಮಾಧಿಯಿಂದ ನಿರ್ವಿಕಲ್ಪ ಸಮಾಧಿಯನ್ನು ತಲುಪವವರೆಗೂ ಯೋಗಸಿದ್ಧಯನ್ನೂ ಅದರ ರಹಸ್ಯವನ್ನೂ ಮುಕುಂದ ಅವರಿಂದ ಪಡೆದರು. ಒಮ್ಮೆ ಸ್ವಾಮೀಜಿ ‘ಸೃಷ್ಟಿಯು ನಿಯಮಕ್ಕೆ ಬದ್ಧವಾದುದು. ವಿಜ್ಞಾನಿಗಳು ಹೊರಗಿನ ವಿಶ್ವದಲ್ಲಿ ಕಾರ್ಯಪ್ರವೃತ್ತವಾದ ನಿಯಮಗಳನ್ನು ತಿಳಿಯುತ್ತಾರೆ. ಅವು ಪ್ರಕೃತಿಸಹಜ ನಿಯಮಗಳಾಗಿವೆ. ಆದರೆ, ಜಗತ್ತನ್ನು ಮೀರಿ ಸುಪ್ತವಾದ ಆಧ್ಯಾತ್ಮಿಕ ಸ್ತರಗಳನ್ನು ಮತ್ತು ಪ್ರಜ್ಞೆಯ ಅಂತಃಸಾಮ್ರಾಜ್ಯವನ್ನು ಆಳುವುದಕ್ಕೆ ಸೂಕ್ಷ್ಮವಾದ ನಿಯಮಗಳಿವೆ. ಯೋಗದ ವಿಜ್ಞಾನದ ಮೂಲಕ ಮಾತ್ರಾ ಅವನ್ನು ತಿಳಿಯಲು ಸಾಧ್ಯ ಎಂದರು. ಇದು ಆತ್ಮಸಾಕ್ಷಾತ್ಕಾರ ಪಡೆದ ಯೋಗಿಯಾದ ವಿಜ್ಞಾನಿಗೆ ಮಾತ್ರ ಸಾಧ್ಯ’ವೆಂದು ಯೋಗವಿಜ್ಞಾನದ ರಹಸ್ಯಗಳನ್ನು ಮುಕಂದ ಅವರಿಗೆ ಯುಕ್ತೇಶ್ವರರು ತಿಳಿಸಿಕೊಟ್ಟರು. ಮುಕುಂದ 1915 ರ ಜೂನ್ನಲ್ಲಿ ಕಲ್ಕತ್ತ ವಿಶ್ವವಿದ್ಯಾಲಯದಲ್ಲಿ ಹೆಚ್ಚಿನ ಅಂಕಗಳೊಂದಿಗೆ ತತ್ತ್ವಶಾಸ್ತ್ರ ಪದವಿಯನ್ನು ಗಳಿಸಿದಾಗ ತಂದೆ ಘೋಷರಿಗೆ ಬಹಳ ಸಂತಸವಾಯಿತು.

ಸಂನ್ಯಾಸ ದೀಕ್ಷೆ[ಬದಲಾಯಿಸಿ]

  • ಮುಕುಂದ ಅವರು ಆಧ್ಯಾತ್ಮಿಕ ಸಾದನೆಯಲ್ಲ ನಿರುತರಾಗಿ ಇರುತ್ತಿದ್ದರು. ಪದವಿಯ ನಂತರ ಸಂನ್ಯಾಸದೀಕ್ಷೆಯನ್ನು ಪಡೆಯುವ ಬಯಕೆಯಾಯಿತು. ಅವರು ಯುಕ್ತೇಶ್ವರರಿಗೆ ಆ ದೀಕ್ಷೆಯನ್ನು ಸಕಾಲದಲ್ಲಿ ಕೊಡುತ್ತೇನೆಂದು ಹೇಳಿದ್ದ ಮಾತನ್ನು ನೆನಪಿಸಿದರು. ವಿಶೇಷ ಬಾಹ್ಯಾಚರಣೆಯಿಲ್ಲದೆ, ಯೋಗ ಮಾರ್ಗದಲ್ಲಿ ಮುಕುಂದ ಅವರನ್ನು ಸ್ವಾಮಿಯನ್ನಾಗಿ ಮಾಡಿ, ಅವನ ಅಪೇಕ್ಷೆಯಂತೆ ‘ಯೋಗಾನಂದ’ ಎಂಬ ಹೆಸರಿನ ಅಭಿಧಾನ ಕೊಟ್ಟರು. ‘ಯೋಗದ ಮೂಲಕ ಪರಮಾತ್ಮನನ್ನು ಸೇರುವ ಮೂಲಕ(ಸಾಯುಜ್ಯದಿಂದ) ಆನಂದ’ ಎಂಬುದು ಇದರ ಅರ್ಥವಾಗಿತ್ತ್ತು. ಯೋಗಿ ಯುಕ್ತೇಶ್ವರರು ಮಾಡಿದ ಪರಮಾಶೀರ್ವಾದದಲ್ಲಿ ಯೋಗಾನಂದರಿಗೆ ಕೆಲ ವಿಶಿಷ್ಟವಾದ ಅನುಭವಗಳಾದವು. ಯೋಗಾನಂದರು ಧ್ಯಾನದಲ್ಲಿದ್ದಾಗ ಅಂತರ್ವಾಣಿಯಿಂದ ಅಣ್ಣ ಅನಂತ ಕಾಯಿಲೆಯಿಂದ ಹಾಸಿಗೆ ಹಿಡಿದಿರುವುದು ತಿಳಿಯಿತು. ಅವರು ಮನೆಗೆ ಭೇಟಿಕೊಟ್ಟು ಅಣ್ನನಿಗೆ ಸಾಂತ್ವನ ಹೇಳಿದರು.

ಕ್ರಿಯಾಯೋಗ[ಬದಲಾಯಿಸಿ]

  • ಯುಕ್ತೇಶ್ವರರಿಂದ ಹರಿದುಬಂದ ಯೋಗವಿಜ್ಞಾನ ಯೋಗಾನಂದರಿಂದ ವ್ಯಾಪಕವಾಗಿ ಸುಪ್ರಸಿದ್ಧವಾಯಿತು. ‘ಕ್ರಿಯಾಯೋಗ’ ಎಂದರೆ ಗೊತ್ತಾದ ಕ್ರಿಯೆಯ ಮೂಲಕ ಅವ್ಯಕ್ತ ಪರಮಾತ್ಮನೊಡನೆ ಸೇರುವುದು. ಇದು ಮಾನವನ ರಕ್ತದಿಂದ ಇಂಗಾಲವನ್ನು ಹೊರಹಾಕಿ ಆಮ್ಲಜನಕವನ್ನು ಪೂರೈಸಿ ಶುದ್ಧೀಕರಿಸಿದಂತೆ ಮನಸ್ಸನ್ನೂ ಅಂತರಮಗವನ್ನೂ ಶುದ್ಧಗೊಳಿಸುವ ಒಂದು ಸರಳ ಶಾಸ್ತ್ರಪದ್ಧತಿ. ಈ ವಿಜ್ಞಾನ ಬಲು ಪುರಾತನವಾದುದು.
  • ಭಗವದ್ಗೀತೆಯಲ್ಲಿ, ‘ಉಚ್ವಾಸದ ಉಸಿರನ್ನುನ್ನು ನಿಃಶ್ವಾಸದ ಗಾಳಿಗೆ ಅರ್ಪಿಸಿ, ನಿಃಶ್ವಾಸದ ಗಾಳಿಯನ್ನು ಉಚ್ವಾಸದ ಗಾಳಿಗೆ ಅರ್ಪಿಸಿ, ಯೋಗಿಯಾದವನು ಎರಡೂ ಉಸಿರಾಟಗಳನ್ನು ನಿಷ್ಪರಿಣಾಮಗೊಳಿಸುತ್ತಾನೆ. ತನ್ಮೂಲಕ ಹೃದಯದಿಂದ ‘ಪ್ರಾಣ’ವನ್ನು ಬಿಡುಗಡೆ ಮಾಡಿ ಪ್ರಾಣಶಕ್ತಿಯನ್ನು ತನ್ನ ಅಧೀನಕ್ಕೆ ತಂದುಕೊಳ್ಳುತ್ತಾನೆ’ ಎಂದು ಹೇಳಿದ ಕ್ರಮವನ್ನು ಅನುಸರಿಸಿದೆ ಎನ್ನುತ್ತಾರೆ..
ಅಪಾನೇ ಜುಹ್ವತಿ ಪ್ರಾಣಂ ಪ್ರಾಣಾಪಾನಂ ತಥಾಪರೇ|ಪ್ರಾಣಾಪಾನ ಗತೀ ರುದ್ಧ್ವಾ ಪ್ರಾಣಾಯಾಮ ಪಾರಾಯಣಾಃ||ಅ.೪; ಶ್ಲೋ.೨೯||
  • ಕ್ರಿಯಾಯೋಗದಲ್ಲಿ ದೈಹಿಕ ಶಿಕ್ಷಣವೂ ಮನೋನಿಯಂತ್ರಣವೂ ಪ್ರಣವದ ಧ್ಯಾನ ಎಲ್ಲವೂ ಸೇರುತ್ತವೆ. ಕ್ರಿಯಾಯೋಗವು ದೇಹ-ಮನಸ್ಸುಗಳ ಮೇಲೆ ಪ್ರಭುತ್ವ ಸಾಧಿಸುವ ಮಾರ್ಗವಾಗಿದೆ. ಅಂತಿಮವಾಗಿ 'ಅದೇ ನಾನು' - 'ಸೋ ಹಂ'ಎಂಬುದು ಅರಿವಾಗುತ್ತದೆ. ಈ ಕ್ರಿಯಾಯೋಗವೇ ನಿಜವಾದ ಅಗ್ನಿಕಾರ್ಯ. ಹಿಂದಿನ ಮತ್ತು ಇಂದಿನ ಬಯಕೆಗಳೆಲ್ಲ ದೈವೀಪ್ರೇಮವೆಂಬ ಅಗ್ನಿಗೆ ಆಹುತಿಯಾಗುತ್ತದೆ. ಕೊಳೆ ಕಳೆದುಕೊಂಡ ಮಾನವ ಪರಿಶುದ್ಧನಾಗುತ್ತಾನೆ. ಯೋಗಾನಂದರು ಕ್ರಿಯಾಯೋಗ ವಿಜ್ಞಾನವನ್ನು ಸರಳವಾಗಿಯೂ ಶಾಸ್ತ್ರಬದ್ಧವಾಗಿಯೂ ವಿಶ್ವಕ್ಕೆ ಸಾರಿದರು. ಮೇಲಿನದೇ [೨] [೩]

ಕ್ರಿಯಾಯೋಗದ ಪ್ರಸಾರ[ಬದಲಾಯಿಸಿ]

  • ಕ್ರಿಯಾಯೋಗದ ಸರಿಯಾದ ಶಿಕ್ಷಣವನ್ನು ಯುವಕರಿಗೆ ಕೊಡಬೇಕೆಂಬ ಅಭೀಪ್ಸೆಯಿಂದ ಯೋಗಾನಂದರು ಬಂಗಾಳದ ದಿಹಿಕಾ ಎಂಬ ಹಳ್ಳಿಯಲ್ಲಿ ಶಾಲೆಯನ್ನು ಪ್ರಾರಂಭಿಸಿದರು. ನಂತರ 1918ರಲ್ಲಿ ರಾಂಚಿಯಲ್ಲಿ ‘ಯೋಗದಾ ಸತ್ಸಂಗ ಬ್ರಹ್ಮಚರ್ಯ ವಿದ್ಯಾಲಯ’ ವನ್ನು ಆರಂಭಿದರು. ಅಲ್ಲಿ ನೈತಿಕ ಹಾಗೂ ಆಧ್ಯಾತ್ಮಿಕ ಮೌಲ್ಯಗಳನ್ನೊಳಗೊಂಡ ಶಿಕ್ಷಣಕ್ರಮವನ್ನು ರೂಪಿಸಿದರು. ಆಧುನಿಕ ಶಿಕ್ಷಣದ ಜತೆಗೆ ಯೋಗ-ಧ್ಯಾನ-ಪ್ರಾಣಾಯಾಮದ ವಿವಿಧ ಹಂತಗಳನ್ನು ಕಲಿಸತೊಡಗಿದರು. ಅದೇಸಮಯದಲ್ಲಿ ರವೀಂದ್ರನಾಥ ಟ್ಯಾಗೋರರು ಶಾಂತಿನಿಕೇತನವನ್ನು ನಡೆಸುತ್ತಿದ್ದರು. ತಮ್ಮ ಆಪ್ತಕಾರ್ಯದರ್ಶಿ ಸಿ.ಎಫ್. ಆಂಡ್ರೂಸ್ ಮೂಲಕ ಟ್ಯಾಗೋರರಿಗೆ ಯೋಗಾನಂದರ ಪರಿಚಯವಾಯಿತು. ಈ ಇಬ್ಬರು ಮಹನೀಯರು ಕಲೆ, ಸಾಹಿತ್ಯ, ತತ್ತ್ವಜ್ಞಾನ, ವಿಜ್ಞಾನಗಳನ್ನು ಕುರಿತು ವಿಚಾರವಿನಿಮಯ ನಡೆಸಿದರು. ಆಗಷ್ಟೇ ಮೊದಲನೇ ವಿಶ್ವಯುದ್ಧ ಮುಗಿದಿತ್ತು. 1920ರ ಆಗಸ್ಟ್‍ನಲ್ಲಿ ‘ದಿ ಸಿಟಿ ಆಫ್ ಸ್ಪಾರ್ಟ್’ ಎಂಬ ಹಡಗಿನಲ್ಲಿ ಯೋಗಾನಂದರು ಅಮೆರಿಕೆಗೆ ಹೊರಟರು. ಬೋಸ್ಟನ್ನಲ್ಲಿನ ಧರ್ಮಸಮ್ಮೇಳನದಲ್ಲಿ ಅವರು ಭಾಗವಹಿಸುವಕಾರ್ಯಕ್ರಮವಿತ್ತು. ಪರಮಹಂಸ ಯೋಗಾನಂದರು 1920ರ ಅಕ್ಟೋಬರ್ 6 ರಂದು ನಡೆದ ಜ್ಞಾನಸಮ್ಮೇಳನದಲ್ಲಿ ‘ಧರ್ಮ ಮತ್ತು ವಿಜ್ಞಾನ’ ಕುರಿತು ಉದ್ಬೋಧಕ ಉಪನ್ಯಾಸ ನೀಡಿದರು. ಅದು ಮರುದಿನ ಪತ್ರಿಕೆಯಲ್ಲಿ ಪ್ರಕಟವಾಗಿ ಅವರ ಹೆಸರು ಅಮೇರಕಾದಲ್ಲ ಹಾಗೂ ವಿಶ್ವದಲ್ಲಿ ಪ್ರಸಿದ್ಧವಾಯಿತು. ನಂತರ 1924ರಲ್ಲಿ ಖಂಡಾಂತರ ಪ್ರವಾಸ ಕೈಗೊಂಡು ಜಗತ್ತಿನ ಅನೇಕಕಡೆ ಉಪನ್ಯಾಸ ನೀಡಿದರು. ಅಧ್ಯಾತ್ಮ ಜಿಜ್ಞಾಸು ವಿದ್ಯಾರ್ಥಿಗಳ ನೆರವಿನಿಂದ 1925 ರ ಅಂತ್ಯದ ವೇಳೆಗೆ ಕ್ಯಾಲಿಫೋರ್ನಿಯಾದ ಲಾಸ್ ಏಂಜಲಿಸಿನ ‘ಮೌಂಟ್ ವಾಷಿಂಗ್ಟನ್ ಎಸ್ಟೇಟ್’ ಬೆಟ್ಟದ ಮೇಲೆ ಅವರು ‘ಯೋಗಕೇಂದ್ರ’ವನ್ನು ಸ್ಥಾಪಿಸಿದರು. ಯೋಗಾನಂದರು ಅಮೆರಿಕದಲ್ಲಿ 15 ವರ್ಷಗಳ ಕಾಲ ಇದ್ದು ಅಲ್ಲಿ ನೂರಾರು ವಿದ್ಯಾರ್ಥಿಗಳನ್ನು ಶಿಷ್ಯರಾಗಿ ಸ್ವೀಕರಿಸಿ ಕ್ರಿಯಾಯೋಗದ ಕ್ರಮವನ್ನು ಬೋಧಿಸಿದರು. ಅಮೇರಿಕಾದಲ್ಲಿ ಒಮ್ಮೆ ಯೋಗಾನಂದರು ಧ್ಯಾನದಲ್ಲಿರುವಾಗ ಯುಕ್ತೇಶ್ವರರ ಧ್ವನಿ ಅವರ ಒಳಮನಸ್ಸಿಗೆ ಕೇಳಿಸಿತು- ‘ಬೆಳಕಿನ ಬೀಡಿಗೆ ಹೋಗುತ್ತಿರುವೆ, ನೀನು ಬಾ’ ಎಂದಂತಾಯಿತು. 1935ರ ಮಾರ್ಚಿನಲ್ಲಿ ಅವರು ಹಿಂದಿರುಗುವಾಗ ಕ್ಯಾಲಿಫೋರ್ನಿಯಾ ಸಂಸ್ಥಾನದ ಕಾನೂನಿನ ಪ್ರಕಾರ ‘ಸೆಲ್ಪ್ರಿಯಲೈಸೇಷನ್ ಫೆಲೋಷಿಪ್’ ಸಂಸ್ಥೆ ತೆರೆದರು. ಆಗಸ್ಟ್ 22ರಂದು ಮುಂಬೈ ತಲುಪಿದರು. ಅಲ್ಲಿಂದ ಕಲ್ಕತ್ತೆಗೆ ಬಂದು ಅಲ್ಲಿಂದ ಸಿರಾಂಪುರದ ಆಶ್ರಮ ತಲುಪಿದಾಗ ಯುಕ್ತೇಶ್ವರರು ಶಿಷ್ಯನಿಗಾಗಿ ಕಾದಿದ್ದರು. ಯೋಗಾನಂದರು ಗುರುವಿನ ಪಾದಗಳಿಗೆ ಮಣಿದರು, ಯುಕ್ತೇಶ್ವರರು ಆಲಿಂಗಿಸಿಕೊಂಡರು.[೪]

ಕೊನೆಯ ದಿನಗಳು[ಬದಲಾಯಿಸಿ]

  • ಯೋಗಾನಂದರು 1935ರ ನವೆಂಬರಿನಲ್ಲಿ ದಕ್ಷಿಣಭಾರತದ ಪ್ರವಾಸ ಕೈಗೊಂಡರು. ಅವರು ಉಸ್ಮಾನಿಯಾ ವಿಶ್ವವಿದ್ಯಾಲಯ, ಬೆಂಗಳೂರಿನ ನ್ಯಾಷನಲ್ ಹೈಸ್ಕೂಲ್, ಪುಟ್ಟಣ್ಣಚೆಟ್ಟಿ ಪುರಭವನ, ಮೈಸೂರಿನ ಪುರಭವನ, ಮಹಾರಾಜ ಕಾಲೇಜು ಮೊದಲಾದೆಡೆ ಉಪನ್ಯಾಸ ನೀಡಿದರು. ನಂತರ ಮದರಾಸಿಗೆ ಹೋಗಿ ಅಲ್ಲಿ ಅನೇಕ ಕಡೆ ಉಪನ್ಯಾಸ ನೀಡಿದರು. ‘ಸದಾಶಿವಬ್ರಹ್ಮೇಂದ್ರ’ರ ಪವಿತ್ರಸ್ಥಳಕ್ಕೆ ಭೇಟಿ ಕೊಟ್ಟಾಗ ಅವರಿಗೆ ಅನಿರ್ವಚನೀಯ ಅನುಭವವಾಯಿತು ಎಂದಿದ್ದಾರೆ. ನಂತರ ಶ್ರೀರಮಣ ಮಹರ್ಷಿಗಳನ್ನು ಕಾಣಲು ಅರುಣಾಚಲಕ್ಕೆ ತೆರಳಿದರು. ಅಲ್ಲಿ ರಮಣರ ದೈವೀಪ್ರೇಮದ ಅನುಭವ ಪಡೆದರು. ಮತ್ತೆ ಯುಕ್ತೇಶ್ವರರ ಸೆಳೆತ ಪ್ರಾರಂಭವಾದಾಗ, ಆಶ್ರಮಕ್ಕೆ ಹಿಂತಿರುಗಿ ಅವರ ಜತೆ ಕೊನೆಗಾಲವನ್ನು ಕಳೆದರು. 1936ರ ಮಾರ್ಚ್ 9ರಂದು ಯುಕ್ತೇಶ್ವರರು ಮಹಾಸಮಾಧಿ ಪ್ರವೇಶಿಸಿದರು.

ಯೋಗಾನಂದರು ಲಂಡನ್‍ನಲ್ಲಿ[ಬದಲಾಯಿಸಿ]

  • 1936ರ ಸೆಪ್ಟೆಂಬರ್ನಲ್ಲಿ ಯೋಗಾನಂದರು ಲಂಡನಿಗೆ ಹಿಂದಿರುಗಿ ಅಲ್ಲಿ ಅನೇಕಕಡೆ ಯೋಗಶಿಕ್ಷಣದ ತರಗತಿ ನಡೆಸಿದರು. ಅಲ್ಲಿಂದ ಕ್ಯಾಲಿಫೋರ್ನಿಯಾದ ಎನ್ಸಿನಿಟಾಪ್‍ಗೆ ಬಂದಾಗ ಆಶ್ರಮವೊಂದು ನಿರ್ಮಾಣಗೊಂಡಿತ್ತು. ಜೇಮ್್ಸ ಜೆ. ಲಿನ್, ಸೋದರಿ ಜ್ಞಾನಾಮಾತಾ ಮತ್ತಿತರ ಶಿಷ್ಯರು ಸೇರಿ ನಿರ್ವಿುಸಿ ಸ್ವಾಮಿಗಳಿಗೆ ಉಡುಗೊರೆಯಾಗಿ ನೀಡಿದ ಒಂದು ನಿತಾಂತ ಭವ್ಯ ಆಶ್ರಮವಾಗಿತ್ತದು. ಯೋಗಾನಂದರು ‘ಕಾಸ್ಮಿಕ್ ಚಾಂಟ್ಸ್’ ಕೃತಿಯನ್ನು ಪೂರ್ಣಗೊಳಿಸಿದ್ದು ಇಲ್ಲೇ. 1940ರಿಂದ 51ರವರೆಗೂ ಪಶ್ಚಿಮದ ಹಲವೆಡೆ ಯೋಗಶಿಕ್ಷಣದ ತರಗತಿ, ಧ್ಯಾನ-ಶಿಬಿರಗಳನ್ನು ಪರಮಹಂಸರು ನಡೆಸಿದರು. ‘ವಿಶ್ವದ ಎಲ್ಲ ರಾಷ್ಟ್ರಗಳಿಗೂ ಹಿರಿಯಣ್ಣನಂತಿರುವ ಭಾರತ ಸಂಚಯಿಸಿರುವ ಜ್ಞಾನವು ಮಾನವ ಜನಾಂಗದ ಆಸ್ತಿ’ಯೆಂದು ಸಾರಿದರು. 1952ರ ಮಾರ್ಚ್ 7ರಂದು ಭಾರತದ ರಾಯಭಾರಿ ವಿನಯ್ ಆರ್. ಸೇನ್ ಆಯೋಜಿಸಿದ್ದ ಔತಣಕೂಟದಲ್ಲಿ ಭಾಗವಹಿಸಿ, ಅಂದೇ ಮಹಾಸಮಾಧಿ ಹೊಂದಿದರು. 59 ವರ್ಷ ಬದುಕಿದ್ದು ವಿಶ್ವವನ್ನು ಯೋಗದ ಬಾಹುಗಳಿಂದ ಅಪ್ಪಿಕೊಂಡ ಯೋಗಾನಂದರು, ವಿಶ್ವಮಾನವ ಮತ್ತು ವಿಶ್ವದೈವೀಪ್ರಜ್ಞೆಯನ್ನು ಜಾಗೃತಗೊಳಿಸುತ್ತ ಹೋದರು. ವಿಶ್ವಭ್ರಾತೃತ್ವದ ಕಲ್ಪನೆಯನ್ನು ಎಲ್ಲರಲ್ಲೂ ಮೂಡಿಸಿದರು. ತಮ್ಮಲ್ಲಿ ಬಂದವರಿಗೆ ಕ್ರಿಯಾಯೋಗದ ದೀಕ್ಷೆ ನೀಡಿದರು. ಹತ್ತಾರು ಪುಸ್ತಕಗಳನ್ನು ಬರೆದು ಯೋಗದ ನೆಲೆಯನ್ನು ವಿಶ್ವದಾದ್ಯಂತ ವಿಸ್ತರಿಸಿದರು. ಅವರ ‘ಆಟೋಬಯಾಗ್ರಫಿ ಆಫ್ ಎ ಯೋಗಿ’(ಕನ್ನಡದಲ್ಲಿ'ಒಂದು ಯೊಗಿಯ ಆತ್ಮಕಥೆ') ಪ್ರಸಿದ್ಧಕೃತಿಯಾಗಿ ಸರ್ವರಿಗೂ ಮಾರ್ಗದರ್ಶಕವಾಗಿದೆ. [೫]

ಸಮಾಧಿ[ಬದಲಾಯಿಸಿ]

  • ಅವರ ಅಂತಿಮಯಾತ್ರೆ (ಸಾವು) ಹತ್ತಿರವಾದ ದಿನಗಳಲ್ಲಿ, ಯೋಗಾನಂದ ಅವರು ಜಗತ್ತನ್ನು ಬಿಡಲು ಸಮಯ ಬಂದಿದೆ ಎಂದು ಸುಳಿವು ನೀಡಿದರು. 1952 ರ ಮಾರ್ಚ್ 7 ರಂದು, ಲಾಸ್ ಎಂಜಲೀಸ್ನ ಬಿಲ್ಟ್ ಮೊರೆ ಹೊಟೇಲ್‍ನಲ್ಲಿ ಅಮೆರಿಕದ ಸಂದರ್ಶಕ ಭಾರತೀಯ ರಾಯಭಾರಿ ಬಿನಯ್ ರಂಜನ್ ಸೇನ್ ಮತ್ತು ಅವರ ಪತ್ನಿಗಾಗಿ ಏರ್ಪಡಿಸಿದ್ದ ಔತಣಕೂಟದಲ್ಲಿ ಅವರು ಭಾಗವಹಿಸಿದರು. ಔತಣಕೂಟದ ಮುಕ್ತಾಯದ ಸಮಯದಲ್ಲಿ, ಯೋಗಾನಂದ ಅವರು "ಯುನೈಟೆಡ್ ವರ್ಲ್ಡ್" ಎಂಬ ತಮ್ಮ ಬಯಕೆಯ ಭರವಸೆ ವ್ಯಕ್ತಪಡಿಸುವ ಪ್ರವಚನದ ಮೂಲಕ , ಭಾರತ ಮತ್ತು ಅಮೆರಿಕದ ಬಗ್ಗೆ, ವಿಶ್ವ ಶಾಂತಿ ಮತ್ತು ಮಾನವ ಪ್ರಗತಿಗೆ ಅವರ ಕೊಡುಗೆಗಳು, ಮತ್ತು ಅವರ ಭವಿಷ್ಯದ ಸಹಕಾರ, ಮತ್ತು "ಆಧ್ಯಾತ್ಮಿಕ ಭಾರತ" ಬಗ್ಗೆ ಮಾತನಾಡಿದರು. ಯೋಗಾನಂದ ಅವರು ಭಾಷಣವನ್ನು ಕೊನೆಗೊಳಿಸುವ ಹಂತದಲ್ಲಿ, (1955-2010 ರಿಂದ ಸ್ವಯಂ-ಸಾಕ್ಷಾತ್ಕಾರ ಫೆಲೋಷಿಪ್ನ ಮುಖ್ಯಸ್ಥನಾಗಿದ್ದ ಯೋಗಾನಂದರ ನೇರ ಅನುಯಾಯಿಯಾದ ದಯಾ ಮಾತಾ ಅವರ ನೇರ ಅನುಭವ ಮತ್ತು ಹೇಳಿಕೆ) ಯೋಗಾನಂದರು ತಮ್ಮ ಕವನ - "ಕಣಿವೆ, ಹಿಮಾಲಯನ್ ಗುಹೆಗಳು, ಮತ್ತು ಪುರುಷರು ಎಲ್ಲಿ ದೇವರನು ಕನಸಿನಲಿ ಕಾಣವರೊ - ಅಲ್ಲಿ ನಾನು ನಾನೆಂಬುದು ಅಳಿದು ಶೂನ್ಯನಾಗಿರುವೆ; ನನ್ನ ದೇಹವು ಹುಲ್ಲುಹಾಸನು ಮುಟ್ಟಿದೆ" ಎಂಬ ಪದಗಳೊಂದಿಗೆ ಮುಕ್ತಾಯಗೊಂಡಿರುವ ಅವರ ಕವಿತೆಯನ್ನು "ಮೈ ಇಂಡಿಯಾ" ದಿಂದ ಓದಿದರು. ["Where Ganges, woods, Himalayan caves, and men dream God— I am hallowed; my body touched that sod."] ಅವರು ಈ ಮಾತುಗಳನ್ನು ಹೇಳತ್ತಿದ್ದಂತೆ, ಕೂಟಸ್ಥ ಕೇಂದ್ರಕ್ಕೆ (ಅಜ್ನಾ ಚಕ್ರ) ಕಣ್ಣುಗಳು ದಿಟ್ಟಿಸಿದವು ಮತ್ತು ಅವರ ದೇಹವು ನೆಲಕ್ಕೆ ಇಳಿಯಿತು. ಅನುಯಾಯಿಗಳು ಅವರು ಮಹಾಮಾಮಾದಿಯಲ್ಲಿ ಪ್ರವೇಶಿಸಿದ್ದಾರೆಂದು ಹೇಳುತ್ತಾರೆ. ಸಾವಿನ ಅಧಿಕೃತ ವೈದ್ಯಕೀಯ ಕಾರಣ ಹೃದ್ರೋಗ- ಹೃದಯಸ್ಥಂಬನ. [೬][೭]
  • ಅವರ ಅಂತ್ಯಕ್ರಿಯೆಯ ಸೇವೆ, ನೂರಾರು ಹಾಜರಿದ್ದ, ಮೌಂಟ್ ಮೇಲೆ ಎಸ್ಆರ್ಎಫ್ ಪ್ರಧಾನ ಕಛೇರಿಯಲ್ಲಿ ನಡೆಯಿತು. ಲಾಸ್ ಏಂಜಲೀಸ್ನಲ್ಲಿ ವಾಷಿಂಗ್ಟನ್. ಸ್ವಯಂ-ಸಾಕ್ಷಾತ್ಕಾರ ಫೆಲೋಶಿಪ್ನ ಹೊಸ ಅಧ್ಯಕ್ಷ ರಾಜರ್ಷಿ ಜನಕಾನಂದರು "ದೇಹವನ್ನು ದೇಹಕ್ಕೆ ಬಿಡುಗಡೆ ಮಾಡುವ ಪವಿತ್ರ ಆಚರಣೆಗಳನ್ನು ಮಾಡಿದರು". ಯೋಗಾನಂದದ ಅವಶೇಷಗಳನ್ನು ಗ್ರೇಟ್ ಸಮಾಧಿಯ ಅರಣ್ಯ ಲಾನ್ ಸ್ಮಾರಕ ಉದ್ಯಾನವನದಲ್ಲಿ (ಸಾಮಾನ್ಯವಾಗಿ ಸಂದರ್ಶಕರಿಗೆ ಮುಚ್ಚಲಾಗಿದೆ; ಆದರೆ ಯೋಗಾನಂದನ ಕ್ಯಾಲಿಫೋರ್ನಿಯಾದ ಗ್ಲೆಂಡೇಲ್ನಲ್ಲಿ ಸಮಾಧಿ ಪ್ರವೇಶಿಸಬಹುದು). [೮]

ಯೋಗಿಯ ಆತ್ಮಚರಿತ್ರೆ[ಬದಲಾಯಿಸಿ]

  • 1946 ರಲ್ಲಿ, ಯೋಗಾನಂದ ಅವರ ಜೀವನ ಕಥೆಯನ್ನು ಪ್ರಕಟಿಸಿದರು, ಅದೇ 'ಆಟೋಬಯಾಗ್ರಫಿ ಆಫ್ ಎ ಯೋಗಿ'. ಇದು ನಂತರ 45 ಭಾಷೆಗಳಲ್ಲಿ ಅನುವಾದಗೊಂಡಿದೆ. 1999 ರಲ್ಲಿ, ಫಿಲಿಪ್ ಝಲೆಸ್ಕಿ ಮತ್ತು ಹಾರ್ಪರ್ಕಾಲಿನ್ಸ್ ಪ್ರಕಾಶಕರು ನಡೆಸಿದ ಆಧ್ಯಾತ್ಮಿಕ ಲೇಖಕರ ಸಮಿತಿಯಿಂದ "20 ನೇ ಶತಮಾನದ 100 ಅತ್ಯಂತ ಮಹತ್ವದ ಆಧ್ಯಾತ್ಮಿಕ ಪುಸ್ತಕ" ಗಳಲ್ಲಿ ಇದು ಒಂದಾಗಿತ್ತು. ಯೋಗಿಗಳ ಪುಸ್ತಕಗಳಲ್ಲಿ 'ಯೋಗಿಯ ಆತ್ಮಚರಿತ್ರೆ' ಹೆಚ್ಚು ಜನಪ್ರಿಯವಾಗಿದೆ.
  • ಜಾರ್ಜಿಯಾ ಹ್ಯಾರಿಸನ್, ರವಿಶಂಕರ್ ಮತ್ತು ಸ್ಟೀವ್ ಜಾಬ್ಸ್ ಸೇರಿದಂತೆ ಅನೇಕ ಜನರಿಗೆ ಆಟೋಬಯಾಗ್ರಫಿ ಸ್ಫೂರ್ತಿಯಾಗಿದೆ. ಸ್ಟೀವ್ ಜಾಬ್ಸ್ ಎಂಬ ಪುಸ್ತಕದಲ್ಲಿ ಲೇಖಕರು ಬರೆಯುತ್ತಾರೆ: ಶ್ರೀ. ಜಾಬ್ಸ್ ಮೊದಲ ಬಾರಿಗೆ ಆತ್ಮಚರಿತ್ರೆ ಹದಿಹರೆಯದವನಾಗಿ ಓದುತ್ತಿದರು. ಅವರು ಅದನ್ನು ಭಾರತದಲ್ಲಿ ಪುನಃ ಓದಿದರು ಮತ್ತು ಪ್ರವಾಸಕ್ಕಾಗಿ ತಯಾರಿ ಮಾಡುವಾಗ, ಅವರು ಅದನ್ನು ತನ್ನ ಐಪ್ಯಾಡ್ 2 ನಲ್ಲಿ ಡೌನ್ಲೋಡ್ ಮಾಡಿ ನಂತರ ಒಂದು ವರ್ಷದ ನಂತರ ಮತ್ತೊಮ್ಮೆ ಅದನ್ನು ಮರು-ಓದಿದರು. [೯] [೧೦]

ಸ್ಮರಣಾರ್ಥ ಭಾರತದ ಅಂಚೆಚೀಟಿ 1977[ಬದಲಾಯಿಸಿ]

  • ಭಾರತವು 1977 ರಲ್ಲಿ ಪರಮಹಂಸ ಯಾಗಾನಂದರ ಗೌರವಾರ್ಥವಾಗಿ ಒಂದು ಸ್ಮರಣಾರ್ಥ ಅಂಚೆಚೀಟಿ ಬಿಡುಗಡೆ ಮಾಡಿತು. "ಮಾನವೀಯತೆಯ ಆಧ್ಯಾತ್ಮಿಕ ಉನ್ನತಿಗೆ ಅವರ ಮಹತ್ತರದ ಕೊಡುಗೆಗಳನ್ನು ಗೌರವಿಸುವ ಯೋಗಾನಂದರ ಗೌರವಾರ್ಥ ಮತ್ತು ಸ್ಮರಣಾರ್ಥ, ಅವರ ಜೀವನ್ಮುಕ್ತಿಯ ಇಪ್ಪತ್ತೈದನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಅಂಚೆ ಇಲಾಖೆ ಅಂಚೆ ಚೀಟಿಯನ್ನು ಹೊರಡಿಸಿತು." ಅದು ಪರಮಹಂಸ ಯೋಗಾನಂದರು ತಮ್ಮ ಜೀವನದಲ್ಲಿ ದೇವರಿಗೆ ಸಲ್ಲಿಸಿದ ಪ್ರೀತಿಯ ಆದರ್ಶ ಮತ್ತು ಮಾನವೀಯತೆಯ ಸೇವೆಗೆ ಅವರ ಕ್ರಿಯಾಶೀಲ ಅಭಿವ್ಯಕ್ತಿ ತೋರಿದುದಕ್ಕೆ ಕೃತಜ್ಞತೆಯ ಮತ್ತು ಗೌರವ ಸಲ್ಲಿಕೆಯ ಸಂಕೇತವಾಗಿತ್ತು.[೧೧]

ಗ್ರಂಥಗಳು[ಬದಲಾಯಿಸಿ]

  • Autobiography of a Yogi -
  • God Talks With Arjuna: The Bhagavad Gita - English
  • The Second Coming of Christ - English
  • The Science of Religion - English
  • Man's Eternal Quest - English
  • Wine of the Mystic (ಗೀತೆಗಳು)

ನೋಡಿ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

  1. https://yssofindia.org/paramahansa-yogananda/Autobiography-of-a-Yogi Autobiography of a Yogi
  2. Autobiography of a Yogi
  3. ಕ್ರಿಯಾಯೋಗದ ಪಾಠಗಳು ಯೋಗದಾ ಆಶ್ರಮ
  4. [ಮೇಲಿನದೇ ಗ್ರಂಥ- Yogananda, p. 395]
  5. [ಅದೇ-]
  6. Religion: Guru's Exit -Monday, Aug. 04, 1952
  7. "ಯೋಗಾನಂದ-ಕ್ರಿಯಾಯೋಗದ ಮಹಾಸಂತ ಪರಮಹಂಸ ಯೋಗಾನಂದ;ಪ್ರೊ. ಜಿ. ವೆಂಕಟೇಶ್ ಮಲ್ಲೇಪುರ. Sunday, 08.04.2018". Archived from the original on 2018-10-21. Retrieved 2018-11-04.
  8. [Mata, Daya (1990). Finding the Joy Within, 1st ed. Los Angeles, CA: Self-Realization Fellowship, p 256[27]
  9. [O'Mahony, John (June 3, 2008). "A Hodgepodge of Hash, Yoga and LSD – Interview with Sitar giant Ravi Shankar". The Guardia]
  10. [Isaacson, Walter (2011). Steve Jobs: A Biography. Simon & Schuster]
  11. ಸ್ಮರಣಾರ್ಥ ಅಂಚೆಚೀಟಿ ಬಿಡುಗಡೆ