ಪಂಡಿತ್ ನರಸಿಂಹಲು ವಡವಾಟಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಡಾ.ಪಂಡಿತ್ ನರಸಿಂಹಲು ವಡವಾಟಿ
ಪಂಡಿತ್ ನರಸಿಂಹಲು ವಡವಾಟಿ
ಜನನ1942
ವಡವಾಟಿ ಗ್ರಾಮ, ರಾಯಚೂರು, ಭಾರತ
ಉದ್ಯೋಗಅಂತಾರಾಷ್ಟ್ರೀಯ ಖ್ಯಾತಿಯ ಕ್ಲಾರಿಯೋನೆಟ್ ಕಲಾವಿದರು
ಸಕ್ರಿಯ ವರ್ಷಗಳು50
ಜೀವನ ಸಂಗಾತಿಶ್ರೀಮತಿ ಶಿವಮ್ಮ
ಮಕ್ಕಳುವೆಂಕಟೇಶ್ವರ ವಡವಾಟಿ, ಶಾರದಾ ವಡವಾಟಿ
ಜಾಲತಾಣwww.vadavati.org

ಕ್ಲಾರಿಯೋನೇಟ್ ವಾದ್ಯವನ್ನು ನುಡಿಸುವ ಮೂಲಕ ಭಾರತದ ಉದ್ದಗಲಕ್ಕೂ ಚಿರಪರಿಚಿತರಾದ ಪಂಡಿತ್ ನರಸಿಂಹಲು ವಡವಾಟಿ ಅವರು ಅಮೇರಿಕದ ಲಾಸೋನಿಲಿಸ್ ವಿಶ್ವ ವಿದ್ಯಾಲಯ ೨೦೧೧ ಅಗಸ್ಟ್ ತಿಂಗಳಲ್ಲಿ ನಡೆಸಿದ ಅಂತಾರಾಷ್ಷ್ರೀಯ ಕ್ಲಾರಿಯೋನೇಟ್ ಸಮ್ಮೇಳನದ ಅಧ್ಯಕ್ಷತೆ ವಹಿಸಿ ನಮ್ಮ ರಾಜ್ಯದ, ರಾಷ್ಟ್ರದ ಕೀರ್ತಿ ಹೆಚ್ಚಿಸಿದ್ದಾರೆ. ಇವರ ಈ ಸಾಧನೆ ಯುವ ಸಂಗೀತಗಾರರ ವೃಂದಕ್ಕೆ ಪ್ರೇರಣೀಯವಾದದು.[೧]

ಅಂದಿನ ರಾಜ್ಯಪಾಲರಾದ ಶ್ರೀಮತಿ ರಮಾದೇವಿಯವರೊಂದಿಗೆ ವಡವಾಟಿ

ವಿಶ್ವ ವಿಖ್ಯಾತ ಕ್ಲಾರಿಯೋನೆಟ್ ವಾದಕರಾದ ಡಾ||ಪಂ.ನರಸಿಂಹಲು ವಡವಾಟಿಯವರು (Dr.Pt.Narasimhalu Vadavati) ಜೈಪುರ್ ಹಾಗೂ ಗ್ವಾಲಿಯರ್ ಘರಾನೆಗೆ ಸೇರಿದ ಇವರು, ಗಾನಯೋಗಿ ಪಂ.ಪಂಚಾಕ್ಷರಿ ಗವಾಯಿ, ಪಂ.ಮಲ್ಲಿಕಾರ್ಜುನ ಮನ್ಸೂರ್ ಇವರ ಪರಂಪರೆಗೆ ಸೇರಿದವರು. ಶ್ರೇಷ್ಠ ಗಾಯಕರಾದ ಪಂ.ಸಿದ್ಧರಾಮ ಜಂಬಲ ದಿನ್ನಿಯವರ ಶಿಷ್ಯರು. ಶ್ರೀಮತಿ ರಂಗಮ್ಮ ಹಾಗೂ ಬುಡ್ಡಪ್ಪನವರ ದಂಪತಿಗಳಿಗೆ ಮಗನಾಗಿ ನರಸಿಂಹಲು ವಡವಾಟಿಯವರು ಜನಿಸಿದ್ದು 1942ರ ಜನವರಿ 21. ರಾಯಚೂರಿನ ಪಕ್ಕದಲ್ಲೇ ಇರುವ ವಡವಾಟಿ ಎಂಬ ಸಣ್ಣ ಗ್ರಾಮದಲ್ಲಿ.

ಡಾ||ಪಂ.ನರಸಿಂಹಲು ವಡವಾಟಿಯವರು ಮೂಲತಃ ಗಾಯಕರು. ಇವರಿಗೆ ಶಾಸ್ತ್ರೀಯ ಸಂಗೀತದ ಕ್ಲಾರಿಯೋನೆಟ್ ಗುರುಗಳಿಲ್ಲ. ಗುರುಗಳಿಂದ ಗಾಯನ ಕಲಿತು, ತಮ್ಮದೇ ಸಂಶೋಧನೆಗಳಿಂದ, ವಿದೇಶಿವಾದ್ಯಕ್ಕೆ ಭಾರತೀಯ ಸಂಸ್ಕೃತಿಯ, ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತದ ದೀಕ್ಷೆಯನ್ನು ನೀಡಿದ ಕ್ಲಾರಿಯೋನೆಟ್ನಗ ಏಕಲವ್ಯ. ಹಾಗಾಗಿ, ಡಾ||ಪಂ.ನರಸಿಂಹಲು ವಡವಾಟಿಯವರು ಕ್ಲಾರಿಯೋನೆಟ್ ನುಡಿಸುತ್ತಿದ್ದರೆ, ಕ್ಲಾರಿಯೋನೆಟ್ನ ಲ್ಲಿ ಹಾಡುತ್ತಿದ್ದಾರೆಯೋ ಏನೋ ಅನ್ನುವ ಅನುಭವವಾಗುತ್ತದೆ. ಗಾಯಕೀಯ ಶೈಲಿಯ ಕ್ಲಾರಿಯೋನೆಟ್ ವಾದಕರೆಂದೇ ಹೆಸರು ಮಾಡಿದವರು. “ವಡವಾಟಿಯವರು ಹಾಡುತ್ತಿದ್ದರೆ, ಗುರು ಸಿದ್ಧರಾಮ ಜಂಬಲದಿನ್ನಿಯವರು ಹಾಡುತ್ತಿರುವಂತೆ, ಧ್ವನಿಯು ಗುರುಗಳದ್ದೇ ಎಂಬಂತಹ ಅನುಭವ ನೀಡುತ್ತದೆ” ಎಂದು ಅವರ ಗಾಯನ ಕೇಳಿದವರು ಉದ್ಘರಿಸುವುದುಂಟು. ಈ ಮೂಲಕ ಗುರುಗಳ ಪರಕಾಯ ಪ್ರವೇಶವಾಗಿದೆ.

ಅಮೇರಿಕಾದ ಇಂಟರ್ ನ್ಯಾಷನಲ್ ಕ್ಲಾರಿಯೋನೆಟ್ ಅಸೋಸಿಯೇಷನ್ ಡಾ||ಪಂ.ನರಸಿಂಹಲು ವಡವಾಟಿಯವರನ್ನು ಭಾರತದ ಅಧ್ಯಕ್ಷರನ್ನಾಗಿ ಆಯ್ಕೆಮಾಡಿದೆ. ಅಷ್ಟೇಅಲ್ಲದೆ, ಲಾಸ್ ಏಂಜಲಿಸ್ನರಲ್ಲಿ ನಡೆದ “ಇಂಟರ್ ನ್ಯಾಷನಲ್ ಕ್ಲಾರಿಯೋನೆಟ್ ಫೆಸ್ಟ್-2011”ರ ವಿಶ್ವ ಕ್ಲಾರಿಯೋನೆಟ್ ಸಂಗೀತ ಸಮ್ಮೇಳನದಲ್ಲಿ ಭಾಗವಹಿಸಿದ ಮೊದಲ ಭಾರತೀಯರು. ಇವರು ನುಡಿಸಿದ ಸಂಗೀತ ಕೇಳಿ, ವಿಶ್ವದ ಕ್ಲಾರಿಯೋನೆಟ್ನರ ಸಂಗೀತ ಪಂಡಿತರು ಹಾಗೂ ಇಡೀ ಸಭೆಯೇ ಎದ್ದು ನಿಂತು ಗೌರವ ಸಲ್ಲಿಸಿದ್ದು, ವಿವೇಕಾನಂದರ ಚಿಕಾಗೋ ಸನ್ನಿವೇಶವನ್ನು ನೆನಪಿಸುತ್ತದೆ.

ಅನೇಕ ದೇಶಗಳಲ್ಲಿ ಕಾರ್ಯಕ್ರಮಗಳನ್ನು ನೀಡುದ್ದಾರೆ ಅಮೇರಿಕಾದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ವಡವಾಟಿಯವರನ್ನು ಇಂಗ್ಲೆಂಡಿನ ಕೇಂಬ್ರಿಡ್ಜ್ ವಿಶ್ವ ವಿದ್ಯಾಲಯ “ಔಟ್ ಸ್ಟಾಂಡಿಂಗ್ ಆರ್ಟಿಸ್ಟ್ ಆಫ್ ಟ್ವೆಂಟಿಯತ್ ಸೆಂಚುರಿ” ಎಂದು ಗೌರವಿಸಿದೆ.[೨] ಫ್ರೆಂಚ್ ಸಿನೆಮಾ “ಹಾತಿ”ಗೆ ನೀಡಿರುವ ಸಂಗೀತಕ್ಕೆ ಅಂತರ ರಾಷ್ಟ್ರೀಯ ಪ್ರಶಸ್ತಿಯ ಮನ್ನಣೆ ದೊರೆತಿದೆ. ದೇಶ ವಿದೇಶಗಳಲ್ಲಿ ಅನೇಕ ಕಾರ್ಯಕ್ರಮ ನೀಡಿದ್ದಾರೆ. ಅನೇಕ ಪ್ರಶಸ್ತಿಗಳು ಇವರನ್ನು ಅರಸಿಕೊಂಡು ಬಂದಿವೆ. ಇವರಿಗೆ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿಯೊಂದಿಗೆ, ಅನೇಕ ಸಂಘ ಸಂಸ್ಥೆಗಳು ಪ್ರೀತಿ ಪೂರ್ವಕವಾಗಿ ಪ್ರಶಸ್ತಿ, ಸನ್ಮಾನಗಳೊಂದಿಗೆ ಗೌರವಿಸಿವೆ.

ಎ.ಕೆ.ಸಿ.ನಟರಾಜನ್ರಗವರೊಂದಿಗಿನ ಕರ್ನಾಟಕ ಶಾಸ್ತ್ರೀಯ ಸಂಗೀತದ ಕ್ಲಾರಿಯೋನೆಟ್, ಅಮೇರಿಕಾದ ವಿಲಿಯಮ್ ಪಾವೆಲ್ ಅವರೊಂದಿಗಿನ ಪಾಶ್ಚಾತ್ಯ ಕ್ಲಾರಿಯೋನೆಟ್, ವಾದನ ಅವಿಸ್ಮರಣಿಯ. ಪದ್ಮಶ್ರೀ ಕದ್ರಿಗೋಪಾಲ್ ನಾಥ್ ಅವರ ಸ್ಯಾಕ್ಸಾಫೋನ್, ಪಂ.ರೋಣು ಮೊಜುಮ್ದಾರ್ ಅವರ ಬಾನ್ಸುರಿ, ಡಾ||ಕಾರೈಕುಡಿ ಮಣಿ ಅಯ್ಯರ್, ಇತ್ಯಾದಿ... ಅನೇಕ ದಿಗ್ಗಜರೊಂದಿಗಿನ ಇವರ ಜುಗಲ್ ಬಂದಿಗಳು ಎಲ್ಲರ ಮನಸೆಳೆಯುತ್ತವೆ.

ಗುಲ್ಬರ್ಗಾ ವಿಶ್ವವಿದ್ಯಾಲಯವು ಡಿ.ಲಿಟ್. ಪದವಿಯನ್ನು ನೀಡಿ ಗೌರವಿಸಿದೆ. ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರವು ಡಾ||ಪಂ.ನರಸಿಂಹಲು ವಡವಾಟಿಯವರ “ಬದುಕು-ಸಾಧನೆಯ ಕ್ಲಾರಿಯೋನೆಟ್ ಮಾಂತ್ರಿಕ” ಪುಸ್ತಕವನ್ನು ಪ್ರಕಟಿಸಿದೆ. ಕುಂ.ವಿ. ಅವರು ರಚಿಸಿರುವ ಕಥಾ ಪುಸ್ತಕದಲ್ಲಿ “ವಡವಾಟಿಯೋ-ಕ್ಲಾರಿಯೋನೆಟ್ಟೋ” ಮೈಸೂರು ವಿಶ್ವವಿದ್ಯಾಲಯದ ದ್ವಿತೀಯ ಬಿ.ಎ. ಪದವಿ ವಿದ್ಯಾರ್ಥಿಗಳು, ಮೊದಲ ಪಾಠವಾಗಿ ಅಭ್ಯಾಸ ಮಾಡಿದ್ದಾರೆ. 2012 ರಿಂದ 2015ರವರೆ ಗುಲ್ಬರ್ಗಾ ವಿಶ್ವವಿದ್ಯಾಲಯದ ಮೊದಲ ಬಿ.ಕಾಂ.ನ ಮೊದಲ ಸೆಮಿಸ್ಟರ್ ವಿದ್ಯಾರ್ಥಿಗಳು ‘ಕಲಾವಿದರ ಬದುಕು’ ಎನ್ನುವ ಪುಸ್ತಕದಲ್ಲಿ “ಕ್ಲಾರಿಯೋನೆಟ್ ವಾದ್ಯಸಾಧಕ ನರಸಿಂಹಲು ವಡವಾಟಿ” ಪಠ್ಯವಾಗಿದೆ. ಅನೇಕ ವಿದೇಶಿಯರು ಇವರ ಮನೆಯಲ್ಲಿದ್ದು ಸಂಗೀತ ಕಲಿತು ಹೋಗಿದ್ದಾರೆ.

ಕರ್ನಾಟಕ ಸರ್ಕಾರದ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷರಾಗಿ (2008-2011) ಡಾ||ಪಂ.ನರಸಿಂಹಲು ವಡವಾಟಿಯವರು ಅತ್ಯುತ್ತಮ ಕೆಲಸವನ್ನು ನಿರ್ವಹಿಸುವುದರ ಮೂಲಕ ಸರಕಾರದ ಅಭಿನಂದನೆಗೂ ಪಾತ್ರರಾಗಿದ್ದಾರೆ.

ವಿಶ್ವವಿಖ್ಯಾತ ದಸರಾ ಮಹೋತ್ಸವ-2012ರಲ್ಲಿ ಡಾ||ವಡವಾಟಿ ಹಾಗೂ ಪಂ.ಸಿದ್ಧರಾಮ ಜಂಬಲದಿನ್ನಿಯವರ ಸ್ಥಬ್ಧಚಿತ್ರಗಳು ರಾಯಚೂರಿನಿಂದ ಪ್ರತಿನಿಧಿಸಿದ್ದವು.

ವಡವಾಟಿಯವರು ತಮ್ಮ ಗುರುಗಳ ಹೆಸರಿನಲ್ಲಿ “ಸ್ವರ ಸಂಗಮ ಸಂಗೀತ ವಿದ್ಯಾಲಯ”ವನ್ನು ರಾಯಚೂರಿನಲ್ಲಿ ತೆರೆದಿದ್ದಾರೆ. ಇದು ಕಲ್ಯಾಣ ಕರ್ನಾಟಕದಲ್ಲಿಯೇ ವಿಶೇಷವಾದ ವಿದ್ಯಾಲಯವಾಗಿದ್ದು, ಕರ್ನಾಟಕದ ಹೆಮ್ಮೆಯ ಗುರುಕುಲ ಪದ್ಧತಿಯಲ್ಲಿ ಕಲಿಸುವ ಸಂಸ್ಥೆಯಾಗಿದೆ. ತಮ್ಮ ಗುರುಗಳ ಹೆಸರಿನಲ್ಲಿ ಪ್ರತಿವರ್ಷ ಡಿಸೆಂಬರ್ ತಿಂಗಳ ಕೊನೆಯ ಶನಿವಾರದಂದು ತಮ್ಮ ಗುರುಗಳ ಸ್ಮರಣಾರ್ಥ ಪ್ರತೀವರ್ಷ ಸಂಗೀತ ಸಮ್ಮೇಳನವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಇಲ್ಲಿ ರಾಷ್ಟದ ಕಲಾವಿದರಲ್ಲದೆ, ವಿದೇಶೀ ಕಲಾವಿದರೂ ಕಾರ್ಯಕ್ರಮ ನೀಡುವುದರ ಮೂಲಕ ಇದೊಂದು ಅಂತಾರಾಷ್ಟ್ರೀಯ ಮಟ್ಟದ ವೇದಿಕೆಯಾಗಿ ಮಾರ್ಪಟ್ಟಿದೆ. 2013ರ ಡಿಸೆಂಬರ್ 28ರಂದು ನಡೆದ ಸಂಗೀತ ಸಮ್ಮೇಳನದ ಕಾರ್ಯಕ್ರಮವು 25ವರ್ಷಗಳನ್ನು ಪೂರೈಸುವುದರೊಂದಿಗೆ ಬೆಳ್ಳಿಹಬ್ಬವನ್ನು ಆಚರಿಸಿಕೊಂಡಿದೆ.


ಕ್ಲಾರಿಯೋನೆಟ್ನರ ಏಕಲವ್ಯರಾಗಿ, ಅತ್ಯಂತ ಹಿಂದುಳಿದ ಜಿಲ್ಲೆಯಿಂದ ಬಂದು ವಿಶ್ವಮಟ್ಟದಲ್ಲಿ ಹೆಸರು ಮಾಡಿರುವ ಡಾ||ಪಂ.ನರಸಿಂಹಲು ವಡವಾಟಿಯವರ ಜನುಮ ದಿನವನ್ನು ಎಲ್ಲಾ ಕಲಾವಿದರಿಗೆ ಅರ್ಪಿಸುತ್ತಾ ಜನವರಿ 21ನ್ನು “ಕಲಾವಿದರ ದಿನ” ವನ್ನಾಗಿ (Artist’s Day) ಆಚರಿಸಲಾಗುತ್ತಿದೆ.

ಇವರ ಮಕ್ಕಳಾದ ಶ್ರೀಮತಿ ಈರಮ್ಮ, ಶ್ರೀ ವೆಂಕಟೇಶ ರಾಯ ವಡವಾಟಿ, ಶ್ರೀಮತಿ ವಿಜಯಲಕ್ಷ್ಮಿ, ಶ್ರೀಮತಿ ವಡವಾಟಿ ಶಾರದಾ ಭರತ್, ಶ್ರೀಮತಿ ಭಾರತಿ ರಾಘವೇಂದ್ರ ಇವರೆಲ್ಲಾ ಸಂಗೀತಗಾಯಕರೇ ಆಗಿದ್ದು, ಅವರಲ್ಲಿ ಶ್ರೀಮತಿ ವಡವಾಟಿ ಶಾರದಾ ಭರತ್ (Vadavati Sharada Bharath) ಖ್ಯಾತ ಗಾಯಕರಾಗಿದ್ದಾರೆ. ಆಕಾಶವಾಣಿಯ “ಎ” ಗ್ರೇಡ್ ಕಲಾವಿದರೂ ಆಗಿದ್ದಾರೆ. ವೆಂಕಟೇಶರಾಯ ವಡವಾಟಿ ತಂದೆಯಂತೆ ಕ್ಲಾರಿಯೋನೆಟ್ನಿಲ್ಲಿ ಹೆಸರು ಮಾಡಿರುವವರೆ. ಇವರೂ ಸಹ ಆಕಾಶವಾಣಿಯ ಗ್ರೇಡೆಡ್ ಕಲಾವಿದರಾಗಿದ್ದಾರೆ.

ಬಾಲ್ಯ[ಬದಲಾಯಿಸಿ]

ಶಹನಾಯಿ ಎಂದಾಕ್ಷಣ ನೆನಪಾಗುವುದು ಬಿಸ್ಮಿಲ್ಲಾ ಖಾನರ ಹೆಸರು. ಅದೇ ರೀತಿಯಲ್ಲಿ ವಿದೇಶಿ ವಾದ್ಯ ಕರಿ ಕೊಳವೆ ಕ್ಲಾರಿಯೋನೆಟ್ ಎಂದಾಕ್ಷಣ ಭಾರತದಲ್ಲಿ ನೆನಪಾಗುವವರು ಡಾ||ಪಂಡಿತ್ ನರಸಿಂಹಲು ವಡವಾಟಿಯವರು. ಕ್ಲಾರಿಯೋನೆಟ್ ಮಾಂತ್ರಿಕರಾಗಿರುವ ಡಾ||ಪಂಡಿತ್ ನರಸಿಂಹಲು ವಡವಾಟಿಯವರು ಜನಿಸಿದ್ದು 1942ರ ಜನವರಿ 21ರಂದು, ಕರ್ನಾಟಕದ ಬಿಸಿಲನಾಡೆಂದೇ ಹೆಸರಾಗಿರುವ ರಾಯಚೂರಿನಿಂದ, ಸುಮಾರು ಐದು ಕಿ.ಮೀ. ದೂರದಲ್ಲಿರುವ ವಡವಾಟಿ ಗ್ರಾಮದಲ್ಲಿ. ಅವರ ತಂದೆ ಬುಡ್ಡಪ್ಪ, ತಾಯಿ ರಂಗಮ್ಮ. ಒಂದು ವರ್ಷದ ಮಗುವಾಗಿದ್ದಾಗಲೇ ಕಣ್ಣು ಬಿಡುವುದಕ್ಕಿಂತ ಮೊದಲೇ ತಂದೆಯನ್ನು ಕಳೆದುಕೊಂಡಿದ್ದರಿಂದ ತಂದೆಯ ಮುಖವೇ ನೋಡಿಲ್ಲ. ಹಾವು ಕಚ್ಚಿ ತಾಯಿ ಸಾವನ್ನಪ್ಪಿದಾಗ ವಡವಾಟಿಯವರಿಗೆ ಆಗಿದ್ದ ವಯಸ್ಸು ಕೇವಲ ಏಳು ವರ್ಷ. ಅಷ್ಟು ಚಿಕ್ಕ ಬಾಲಕನಾಗಿದ್ದಾಗಲೇ ತಂದೆ ತಾಯಿಗಳನ್ನು ಕಳೆದುಕೊಂಡು ತಬ್ಬಲಿಯಾಗಿದ್ದರು. ಆದರೂ ಅಜ್ಜ ಚಿಕ್ಕ ಓಬಳಪ್ಪ ಶಹನಾಯಿವಾದಕರಾಗಿದ್ದರು. ತಂದೆ ಬುಡ್ಡಪ್ಪ, ಅಲ್ಲಿನ ಹೆಸರಾಂತ ತಬಲ ವಾದಕರಾಗಿದ್ದರು. ತಾಯಿ ರಂಗಮ್ಮ ಭಕ್ತಿ ಸಂಗೀತ ಸುಮಧುರವಾಗಿ ಹಾಡುತ್ತಿದ್ದರು. ಹಾಗಾಗಿ ಇವರೆಲ್ಲರ ಪರಿಚವಿಲ್ಲದಿದ್ದರೂ ಸಂಗೀತ ಅವರ ರಕ್ತಗತವಾಗಿ ಬಳುವಳಿಯಾಗಿ ನರನಾಡಿಯಲ್ಲಿ ಹರಿದಾಡುತಿತ್ತು. ಹಾಗಾಗಿ ಅವರು ಜೀವನದಲ್ಲಿ ಅನುಭವಸಿದ ನೋವು, ಛಲದಿಂದ ಸಾಧಿಸಿದ ಸಾಧನೆ, ಮುಂದೆ ಸಾಧನೆಯ ಗುರಿ ಇಟ್ಟುಕೊಂಡಿರುವವರಿಗೆ; ಇವರು ಚೇತನದ ಚಿಲುಮೆ, ದಾರಿ ದೀಪ.

ವಡವಾಟಿ ಗ್ರಾಮದ ವೆಂಕಟರಮಣ ಸ್ವಾಮಿ ದೇವಾಲಯದಲ್ಲಿ ನಡೆಯುತ್ತಿದ್ದ ಭಜನೆಯಲ್ಲಿ ಏರುದನಿಯಲ್ಲಿ, ಎಲ್ಲರೂ ಗುರುತಿಸುವ ಧ್ವನಿ, ಮಧುರವಾಗಿ ಯಾವುದೋ ಸಣ್ಣ ವಯಸ್ಸಿನ ಧ್ವನಿ ಮೂಡಿಬರುತ್ತಿತ್ತು. ಅದು ಮತ್ತಾರದೂ ಅಲ್ಲ. ಬಾಲಕ ನರಸಿಂಹಲು ವಡವಾಟಿಯವರದು. ಪ್ರೀತಿಯಿಂದ ಆ ಬಾಲಕ ಹಾಡುವುದನ್ನು ಕೇಳಲು ಎಲ್ಲರೂ ಕಾತುರರಾಗಿ ಕಾಯುತ್ತಿದ್ದರು. `ಬೆಳೆಯುವ ಪೈರು ಮೊಳಕೆಯಲ್ಲಿ’ ಎಂಬುದಕ್ಕೆ ಇವರು ಅನ್ವರ್ಥ ನಾಮವಾಗಿದ್ದರು.

ಮಟಮಾರಿಯಲ್ಲಿ ಸೋದರ ಮಾವನ ಮನೆಯಲ್ಲಿದ್ದಾಗ ಓದಿದ್ದು ಕೇವಲ ಮೂರನೇ ತರಗತಿ ಮಾತ್ರ. ಸ್ವಾಭಿಮಾನಿ ನರಸಿಂಹಲುಗೆ ಸೋದರ ಮಾವನ ಮನೆಯಲ್ಲಿರಲು ಮುಜುಗರವೆನಿಸುತ್ತಿತ್ತು. ಅದಕ್ಕಾಗಿ ಮಟಮಾರಿ ಬಿಟ್ಟು ವಡವಾಟಿಗೆ ವಾಪಾಸಾದರು.

ಕಿಂದರಿ ಜೋಗಿ[ಬದಲಾಯಿಸಿ]

ವಡವಾಟಿಯಲ್ಲಿದ್ದ ಇವರ ಸಂಬಂಧಿಕರು ಚಿಕ್ಕಮಗಳೂರಿನಲ್ಲಿದ್ದ ಸಂಬಂಧೀಕರ ಮನೆಗೆ ಇವರನ್ನು ಕಳುಹಿಸಿದರು. ಆಗಿನ ಕಾಲದಲ್ಲಿ ಸಿನೆಮಾಗಳ ಪ್ರಚಾರಕ್ಕೆ ಟಾಂಗಾಗಳಲ್ಲಿ ಕ್ಲಾರಿಯೋನೆಟ್ ನುಡಿಸಿಕೊಂಡು ಪ್ರತಿದಿನ ಬರುತ್ತಿದ್ದರು. ಪ್ರತಿ ದಿನ ಆ ಟಾಂಗಾ ಬರುತ್ತಿದ್ದಂತೆ, ಕ್ಲಾರಿಯೋನೆಟ್ ಧ್ವನಿ ಕೇಳುತ್ತಿದ್ದಂತೆಯೇ, ಅವರಿಗೆ ಅರಿವಿಲ್ಲದಂತೆಯೇ ಟಾಂಗಾ ಹಿಂದೆ, ಅಂಗಡಿಯ ಯಜಮಾನರು ಬೇಡವೆಂದರೂ ಆ ಹಿಂದಿ ಹಾಡುಗಳನ್ನು ಕೇಳಿಕೊಂಡು ಹಿಂದೆಯೇ ಹೋಗಿಬಿಡುತ್ತಾ ಕಿಂದರಿ ಜೋಗಿಯಾಗಿದ್ದರು. ಕ್ಲಾರಿಯೋನೆಟ್ ನುಡಿಸುತ್ತಿದ್ದ ನರಸಿಂಗಪ್ಪ ಗಾಡಿ ನಿಲ್ಲಿಸಿ ಏಕೆ ಈ ಬಾಲಕ ಪ್ರತಿ ದಿನ ಹೀಗೆ ಹಿಂದೆ ಬೀಳುತ್ತಿರುವನಲ್ಲ ಎಂದು ವಿಚಾರಿಸಿದನು. ಬಾಲಕ ನರಸಿಂಹಲುವಿನ ಆಸಕ್ತಿ ಮತ್ತು ಕ್ಲಾರಿಯೋನೆಟ್ ಎಡೆಗಿನ ಒಲವನ್ನೂ ಗುರುತಿಸಿದ ನರಸಿಂಗಪ್ಪ, ತಾನೂ ಸಹ ವಡವಾಟಿ ಬಳಿಯ ಮತ್ತಕಲ್ಲದವನೆಂದೂ, ವಡವಾಟಿ ಗ್ರಾಮದ ಓಬಾಳಪ್ಪನ ಸಹಾಯದಿಂದಲೇ ಚಿಕ್ಕಮಗಳೂರಿಗೆ ಬಂದು ಇಲ್ಲಿ ಬದುಕನ್ನು ರೂಪಿಸಿಕೊಂಡೆ ಎಂದು ಕೃತಜ್ಞತೆಯಿಂದ ನೆನಪಿಕೊಂಡನು.

ಚಿಕ್ಕಮಗಳೂರಿನ ಹವಾಮಾನ ನರಸಿಂಹಲುಗೆ ಒಗ್ಗದೇ ಇದ್ದುದರಿಂದ ರಾಯಚೂರಿಗೆ ಮರಳುವಂತೆ ವೈದ್ಯರು ಸಲಹೆ ನೀಡಿದರು. ಅದರಂತೆ ನರಸಿಂಹಲು ಮರಳಿ ವಡವಾಟಿಗೆ ಬಂದರು. ಅಲ್ಲಿಯೂ ಒಂಟಿತನ ಕಾಡುತ್ತಿತ್ತು. ಅದು ಮಣ್ಣೆತ್ತಿನ ಅಮವಾಸ್ಯೆ. ಉತ್ತರ ಕರ್ನಾಟಕದಲ್ಲಿ ಅಂದು ಒಳ್ಳೆಯ ಕೆಲಸಗಳನ್ನು ಕೈಗೊಳ್ಳಬಾರದೆಂಬ ನಂಬಿಕೆ ಇಟ್ಟುಕೊಂಡಿರುವ ದಿನ. ನಾನು ಜೀವನದಲ್ಲಿ ಏನಾದರೂ ಸಾಧಿಸಬೇಕು. ಆ ಮಣ್ಣೆತ್ತಿನ ಅಮಾವಾಸ್ಯೆ ನನ್ನನ್ನೇನು ಮಾಡೀತು? ಏನಾದರೂ ಸಾಧಿಸುವುದಾದರೆ, ಈ ದಿನವೇ ನಾಂದಿಯಾಗಲಿ, ಎಂದು ವಡವಾಟಿಯನ್ನು ಬಿಟ್ಟು ಬಂದರು.

ರಾಯಚೂರಿಗೆ ಬಂದವರೆ ಬ್ಯಾಂಡ್ ಕಂಪನಿಯ ವೆಂಕಟಪ್ಪನವರ ಮನೆಗೆ ಬಂದು ಅವರ ಮನೆಯಲ್ಲಿ ಕ್ಲಾರಿಯೋನೆಟ್ ವಾದ್ಯದಲ್ಲಿ ಹಾಡುಗಳನ್ನು ನುಡಿಸುವ ಅಭ್ಯಾಸ ಮಾಡಿದರು. ನರಸಿಂಹಲು ಅವರ ಶರೀರ ದಷ್ಟಪುಷ್ಟವಾಗಿರಲಿಲ್ಲ. ಕರಿಕೊಳವೆ ಊದುವುದಕ್ಕ ಸಾಕಷ್ಟು ಉಸಿರಿನ ಶಕ್ತಿ ಬೇಕಿತ್ತು. ಆದರೆ, ಅವರ ಇಚ್ಛಾಶಕ್ತಿಯಿಂದಾಗಿ ಕ್ಲಾರಿಯೋನೆಟ್ ಊದುವುದು ಕಷ್ಟಕರವೆನಿಸಲಿಲ್ಲ. ವೆಂಕಟಪ್ಪನವರ ಬ್ಯಾಂಡ್ ಸೆಟ್ ಬೇಕೆನ್ನುವವರು ಬಾಲಕ ನರಸಿಂಹಲು ಇರಲೇಬೇಕು ಎನ್ನುವ ಒತ್ತಾಯವನ್ನು ಮಾಡುತ್ತಿದ್ದರು. ಬ್ಯಾಂಡ್ ಸೆಟ್ಟಿನ ಆಕರ್ಷಣೆ ‘ನರಸಿಂಹಲು’ ಆಗಿದ್ದರು. ಬಾಲಕನಿದ್ದಾಗಲೇ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿದರು. ಆಗಿನ ಕಾಲದಲ್ಲಿ ಅಷ್ಟೇ ಅಲ್ಲ. ಈಗಿನ ಕಾಲದಲ್ಲಿಯೂ ಬ್ಯಾಂಡ್ ಸೆಟ್ ಬಾರಿಸುವವರಿಗೆ ವಿಶೇಷ ಗೌರವಗಳೇನಿಲ್ಲ. ಹೊಟ್ಟೆ ಹೊರೆಯಲು ಇದೊಂದು ಕಾಯಕವೂ ಆಗಿತ್ತು. ಆದರೆ ವಡವಾಟಿಯವರಿಗೆ ಈ ಕರಿಕೊಳವೆಯನ್ನು ಊದಿಯೇ ಹೊಟ್ಟೆ ಹೊರೆಯಬೇಕಾಗಿರಲಿಲ್ಲ. ಕಾರಣ ಅವರ ತಾತ ದೊಡ್ಡ ಓಬಾಳಪ್ಪನವರು ದೊಡ್ಡ ಜಮೀನ್ದಾರರಾಗಿದ್ದರು. ಆಯುರ್ವೇದ ಪಂಡಿತರೂ ಆಗಿದ್ದರು. ಸಾಕಷ್ಟು ಜಮೀನು ಇತ್ತು. ನರಸಿಂಹಲು ತಾನು ದುಡಿದು ಗಳಿಸಿದ್ದರಲ್ಲಿಯೇ ಬದುಕಬೇಕೆಂಬ ಛಲವಾದಿಯಾಗಿದ್ದ ಸ್ವಾಭಿಮಾನಿ.

ಇಂತಹ ಸ್ವಾಭಿಮಾನಿ ನರಸಿಂಹಲುಗೆ ಒಂದು ದಿನ ನಡೆದ ಅವಮಾನದ ಪ್ರಸಂಗದ ಘಟನೆ ಇಡೀ ಬದುಕಿನ ದಿಕ್ಕನ್ನೇ ಬದಲಿಸಿತು. ಅಂದೇ ಬ್ಯಾಂಡ್ ಸೆಟ್ ಬಿಟ್ಟು ಹೊರಬಂದ ವಡವಾಟಿಯವರು ಹಳ್ಳಿಗಳಲ್ಲಿ ಪ್ರದರ್ಶನವಾಗುತ್ತಿದ್ದ ನಾಟಕಗಳಿಗೆ ಸಂಗೀತ ಸೇವೆ ಒದಗಿಸಲು ನಿರ್ಧರಿಸಿದರು. ಅಸ್ನಿಹಾಳ ಹಳ್ಳಿಯಲ್ಲಿ ನಡೆಯುವ ನಾಟಕದಲ್ಲಿ ಕ್ಲಾರಿಯೋನೆಟ್ ನುಡಿಸಲು ಅವಕಾಶ ಕೇಳಿದಾಗ ನಾಟಕದ ಮಾಸ್ತರರಿಗೆ ‘ಕರಿ ಕೊಳವಿ ಸಂಗೀತ’ದ ಬಗ್ಗೆ ಕೇಳಿ ನಗು ಬಂದಿತ್ತು. ಅಲ್ಲೇ ಇದ್ದ ಗಣ್ಯ ವ್ಯಕ್ತಿಯೊಬ್ಬರು ‘ಎಷ್ಟೇ ಆಗಲಿ ಪುಕ್ಕಟ್ಟೆಯಾಗಿ ತಾನೆ ವಾದ್ಯ ನುಡಿಸುತ್ತಾನೆ ಏಕೆ ಅವಕಾಶ ಮಾಡಿಕೊಡಬಾರದು’ ಎಂದು ಹೇಳಿದ್ದರಿಂದ ಅವಕಾಶವೂ ದೊರೆಯಿತು. ಹಾಡನ್ನು ವಾದ್ಯದಲ್ಲಿ ನುಡಿಸುತ್ತಾ ಹೋದಂತೆ ಮಾಸ್ತರರೇ ದಂಗಾಗಿ ಹೋದರು. ಪ್ರತಿದಿನ ರಾತ್ರಿ ಸೈಕಲ್ ಏರಿ ವಾದ್ಯಸೇವೆ ಸಲ್ಲಿಸಲು ತಮ್ಮನ್ನು ತೊಡಸಿಕೊಳ್ಳುತ್ತಿದ್ದರು. ನಾಟಕ ನಡೆದಾಗಲೆಲ್ಲ ಇವರು ನಾಟಕಕ್ಕೆ ನೀಡಿದ ಹಿನ್ನಲೆ ಸಂಗೀತ ಕೇಳಿ ಪ್ರೇಕ್ಷಕರು ರೋಮಾಂಚನಗೊಳ್ಳುತ್ತಿದ್ದರು. ಇದರಿಂದ ಬೇಡಿಕೆಯ ವ್ಯಕ್ತಿಯೂ ಆದರು. ಜನಪ್ರಿಯರೂ ಆದರು. ಎಲ್ಲರ ಗೌರವಕ್ಕೂ ಪಾತ್ರರಾದರು. ವಡವಾಟಿಯವರ ಜನಪ್ರಿಯತೆ ಸೋದರ ಮಾವನ ಕಿವಿಗೆ ಬಿದ್ದಿತ್ತು. ತಂಗಿ ರಂಗಮ್ಮನಿಗೆ ಕೊಟ್ಟ ಮಾತನ್ನು ನಡೆಸಿಕೊಡಲು ಇವರ ಸೋದರ ಮಾವ ತನ್ನ ಮಗಳಾದ ಶಿವಮ್ಮನೊಂದಿಗೆ ವಡವಾಟಿಯವರ ಮದುವೆಯನ್ನು ಮಾಡಿಸಿದರು.

ವಡವಾಟಿಯವರಿಗೆ ಮಕ್ಕಳಾದಂತೆ ಜೀವನದಲ್ಲಿ ಇನ್ನೂ ಏನೂ ಸಾಧಿಸದ ಅತೃಪ್ತಿ ಕಾಡುತ್ತಲೇ ಇತ್ತು. ಸಂಗೀತದ ದಾಹ ಹೆಚ್ಚತೊಡಗಿತ್ತು. ನಾಟಕಕ್ಕೆ ಹಿನ್ನಲೆ ಸಂಗೀತ ನೀಡುವುದನ್ನು ನಿಲ್ಲಿಸಿ ಗುರುವಿನ ಶೋಧದಲ್ಲಿ ತೊಡಗಿದರು.

ಏಕಲವ್ಯ ಡಾ||ವಡವಾಟಿ[ಬದಲಾಯಿಸಿ]

ಕ್ಲಾರಿಯೋನೆಟ್ನಯಲ್ಲಿ ಶಾಸ್ತ್ರೀಯ ಸಂಗೀತ ಕಲಿಯುವ ಆಸಕ್ತಿ ಮಾತ್ರ ಹೆಮ್ಮರವಾಗುತ್ತಾ ಹೋಯಿತು. ಆದರೆ, ಕ್ಲಾರಿಯೋನೆಟ್ ಕಲಿಯುವ ಹಂಬಲಕ್ಕೆ ಗುರುಗಳಾರು ದೊರೆಯಲಿಲ್ಲ. ಕೊನೆಗೆ ಅವರಿಗೆ ಗುರುವಾಗಿ ದೊರೆತದ್ದು ಖ್ಯಾತ ಹಿಂದುಸ್ಥಾನಿ ಹಾಗೂ ವಚನ ಗಾಯಕರಾದ ಜೇನ್ದನಿಯ ಪಂ.ಸಿದ್ಧರಾಮ ಜಂಬಲದಿನ್ನಿಯವರು. ‘ನನಗೆ ಕ್ಲಾರಿಯೋನೆಟ್ ನುಡಿಸಲು ಬರುವುದಿಲ್ಲ. ನಾನು ಒಬ್ಬ ಗಾಯಕ, ಎಂದು ಸಿದ್ಧರಾಮ ಜಂಬಲದಿನ್ನಿಯವರು ಅಂದಾಗ, ‘ಗುರುಗಳೇ ನೀವು ಗಾಯನ ಕಲಿಸಿ, ವಾದನ ನಾನು ಕಲಿತುಕೊಳ್ಳುತ್ತೇನೆ’ ಎಂದು ಇವರು ಶಿಷ್ಯತ್ವವನ್ನು ಪಡೆದುಕೊಂಡರು.

ವಿದೇಶಿ ನೋಟ್ಗುಳಿಗೆ ಹೊಂದಿಕೊಳ್ಳುವ, ಸರಿಯಾಗಿ ಹಿಂದುಸ್ಥಾನಿ ಸಂಗೀತದ ಮೀಂಡ್ಗಲಳೇ ಹೊರಳದ ಕ್ಲಾರಿಯೋನೆಟ್ನ ಲ್ಲಿ, ಬೆಳಗ್ಗೆ ಗುರುಗಳಿಂದ ಕಲಿತ ಗಾಯನವನ್ನು, ರಾತ್ರಿಪೂರ್ತಿ ಯಾವ ಕೀ ಅದುಮಿದರೆ, ಯಾವ ಸ್ವರ ಮೂಡುತ್ತದೆ ಎಂದು, ತಮ್ಮದೇ ಸಂಶೋಧನೆಯಲ್ಲಿ ತೊಡಗಿಕೊಂಡರು. ಹೀಗಾಗಿ, “ಕ್ಲಾರಿಯೋನೆಟ್ಟೇ ವಡವಾಟಿಯವರಿಗೆ ಗುರುವಾಗಿ”, “ವಡವಾಟಿಯವರೇ ಕ್ಲಾರಿಯೋನೆಟ್ಟಿಗೆ ಗುರುವಾಗಿ”, ತುಂಬು ಗರ್ಭಿಣಿ ಪತ್ನಿ ಶಿವಮ್ಮ ತಾನ್ಪುಗರದ ಸಾಥ್ ನೀಡುತ್ತಾ ಅಭ್ಯಾಸ ನಿರತರಾಗಿ ಸಾಧನೆ ಗೈಯುತ್ತ ಇವರು ಏಕಲವ್ಯರಾದವರು. ವಿದೇಶಿ ವಾದ್ಯಕ್ಕೆ ಸ್ವದೇಶಿ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತದ ದೀಕ್ಷೆಯನ್ನು ನೀಡಿದರು.

ಇಂದಿಗೂ ಪ್ರತಿದಿನ ಅಭ್ಯಾಸ ಮಾಡುವ ಡಾ||ವಡವಾಟಿಯವರು ಒಂದು ದಿನ ‘ಅಭ್ಯಾಸ ಮಾಡಲಿಲ್ಲವೆಂದರೆ, ಜ್ವರ ಬಂದ ಹಾಗೆ ಆಗುತ್ತದೆ’ ಎನ್ನುತ್ತಾರೆ. ಒಂದು ದಿನ ಅಭ್ಯಾಸ ಮಾಡಲಿಲ್ಲವಾದರೆ ‘ಇಂದು ಪೂಜೆ ಮಾಡಲಿಲ್ಲ’ವೆಂದು, ಎಷ್ಟು ಹೊತ್ತಾದರೂ ಸರಿಯೇ ಅಭ್ಯಾಸ ಮಾಡದೆ ಮಲಗುವುದಿಲ್ಲ. ಅವರಿಗೆ ಅಭ್ಯಾಸವೇ ದೇವರ ಆರಾಧನೆ.

ಕ್ಲಾರಿಯೋನೆಟ್ ವಿಶ್ವ ಸಂಗೀತ ಸಮ್ಮೇಳನದ ಭಾರತದ ಮೊದಲ ಅಧ್ಯಕ್ಷರು[ಬದಲಾಯಿಸಿ]

ಅಮೇರಿಕಾದ “ಇಂಟರ್ ನ್ಯಾಷನಲ್ ಕ್ಲಾರಿಯೋನೆಟ್ ಅಸೋಸಿಯೇಷನ್” ಪ್ರತಿಯೊಂದು ದೇಶದಲ್ಲೂ ಒಬ್ಬೊಬ್ಬರನ್ನು ತಮ್ಮ ಸಂಸ್ಥೆಗೆ ಪ್ರತಿನಿಧಿಯಾಗಿ ಆ ‘ದೇಶದ ಅಧ್ಯಕ್ಷ’ರನ್ನು ನೇಮಕ ಮಾಡಿಕೊಳ್ಳುತ್ತದೆ. ಈ ಸಂಸ್ಥೆಗೆ ಅಧ್ಯಕ್ಷರ ಆಯ್ಕೆ ಕೂಡ ಅಷ್ಟು ಸುಲಭವೂ ಅಲ್ಲ. ಆಯ್ಕೆ ಮಾಡಲು ಅನೇಕ ಮಾನದಂಡಗಳು, ಹಲವಾರು ಪ್ರಕ್ರಿಯೆಗಳನ್ನು ಇಟ್ಟುಕೊಂಡಿದೆ. ಅಂತಹ ವಿಶೇಷ ಸಂಸ್ಥೆಗೆ ಡಾ||ಪಂ.ನರಸಿಂಹಲು ವಡವಾಟಿಯವರನ್ನು ಭಾರತದ ಮೊಟ್ಟ ಮೊದಲ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿತು. ಹಾಗಾಗಿ ಡಾ||ಪಂ.ನರಸಿಂಹಲು ವಡವಾಟಿಯವರು ಇಂಟರ್ ನ್ಯಾಷನಲ್ ಕ್ಲಾರಿಯೋನೆಟ್ ಅಸೋಸಿಯೇಷನ್ನಂ ಮೊದಲ ಭಾರತದ ಅಧ್ಯಕ್ಷರು. ಈ ಸಂಸ್ಥೆ ಡಾ||ವಡವಾಟಿಯವರ ಬಗ್ಗೆ ಲೇಖನವನ್ನು ಅದರ ಪತ್ರಿಕೆಯಲ್ಲಿ ಬರೆದು ಕೊಂಡಾಡಿದೆ.

ಇಂಟರ್ ನ್ಯಾಷನಲ್ ಕ್ಲಾರಿಯೋನೆಟ್ ಅಸೋಸಿಯೇಷನ್ ಪ್ರತಿವರ್ಷ ಅತ್ಯಂತ ಪೂರ್ವಸಿದ್ಧತೆಯೊಂದಿಗೆ `ಇಂಟರ್ ನ್ಯಾಷನಲ್ ಕ್ಲಾರಿಯೋನೆಟ್ ಫೆಸ್ಟ್’ ನಡೆಸುತ್ತದೆ. ಈ ಸಮ್ಮೇಳನದಲ್ಲಿ ಕಾರ್ಯಕ್ರಮದ ವಿಡಿಯೋ ಚಿತ್ರೀಕರಣ ಅಷ್ಟೇ ಅಲ್ಲ, ಛಾಯಚಿತ್ರ ತೆಗೆಯಲೂ ಅವಕಾಶ ಇರುವುದಿಲ್ಲ. ಕಾರಣ ಛಾಯಾಚಿತ್ರ ತೆಗೆಯುವ ಸಂದರ್ಭದಲ್ಲಿ ಕ್ಯಾಮರ ಕ್ಲಿಕ್ಕಿಸುವ ಸಂದರ್ಭದಲ್ಲಿ ಹೊರಹೊಮ್ಮುವ ಧ್ವನಿಯೂ ಕಲಾವಿದರ ಏಕಾಗ್ರತೆಗೆ ಭಂಗ ತರುತ್ತದೆಂಬ ಉದ್ದೇಶ. ಸೂಜಿಮೊನೆ ಬಿದ್ದರೂ ಅದರ ಧ್ವನಿ ಕೇಳಿಸಬೇಕೆಂಬ ಶಿಸ್ತನ್ನು ಹೊಂದಿದ್ದು, ನಿಯಮವನ್ನು ಅಳವಡಿಸಿಕೊಂಡಿರುವ ಸಂಸ್ಥೆ ಅದು. ಅದರಂತೆ “ಇಂಟರ್ ನ್ಯಾಷನಲ್ ಕ್ಲಾರಿಯೋನೆಟ್ ಫೆಸ್ಟ್-2011”ರಂದು ಲಾಸ್ ಏಂಜಲೀಸ್ನುಲ್ಲಿ ನಡೆದ ವಿಶ್ವ ಕ್ಲಾರಿಯೋನೆಟ್ ಸಂಗೀತ ಸಮ್ಮೇಳನದಲ್ಲಿ ನಿಗದಿಪಡಿಸಿದ್ದ ನಲವತ್ತು ನಿಮಿಷಗಳ ಕಾರ್ಯಕ್ರಮವನ್ನು ಇವರು ನೀಡಿದರು. ಕೇವಲ ಪಾಶ್ಚಾತ್ಯಾ ಸಂಗೀತವನ್ನೇ ಎಲ್ಲಾ ದೇಶದವರು ನುಡಿಸಿದ್ದಂತಹ ಆ ಕಾರ್ಯಕ್ರಮದಲ್ಲಿ ವಿದೇಶಿಯರಿಗೇ ವಿದೇಶಿ ವಾದ್ಯದಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತವನ್ನು ನುಡಿಸಿದ್ದು, ಇಂತಹ ವಾದ್ಯದಲ್ಲಿ ಇಷ್ಟು ಮಾಧುರ್ಯವಾಗಿ, ಈ ರೀತಿಯಲ್ಲೂ ನುಡಿಸಬಹುದೇ ಎಂಬುದನ್ನು ತಮ್ಮ ವಿದ್ವತ್ ಪೂರ್ಣ ಸಂಗೀತ ಸಾಧನೆಯ ಅನಾವರಣವಾದಾಗ ಇಡೀ ಸಭೆಯೇ ಎದ್ದು ನಿಂತು ದೀರ್ಘ ಚಪ್ಪಾಳೆ (ಸ್ಟ್ಯಾಂಡಿಂಗ್ ಓವಿಯೇಷನ್) ಗೌರವವನ್ನು ನೀಡಿತು. ಅಷ್ಟೇ ಅಲ್ಲದೆ ಮತ್ತೆ ಕಾರ್ಯಕ್ರಮವನ್ನು ಮುಂದುವರೆಸುವಂತೆ ಕೇಳಿಕೊಂಡಿತು. ಒಟ್ಟು ತೊಂಬತ್ತು ನಿಮಿಷಗಳ ಕಾರ್ಯಕ್ರಮ ನೀಡಿದರು. ಇದು ಸ್ವಾಮಿ ವಿವೇಕಾನಂದರಿಗೆ ಚಿಕಾಗೋದಲ್ಲಿ ಆದ ಅನುಭವದ ಘಟನೆಯನ್ನು ನೆನಪಿಸುತ್ತದೆ.

ಅಲ್ಲಿ ಬೇರೆ ಬೇರೆ ದೇಶಗಳಿಂದ ಬಂದಿದ್ದ ವಿದ್ವಾಂಸರು, ವಿಶ್ವವಿದ್ಯಾಲಗಳ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಪ್ರಾಧ್ಯಾಪಕರು ಹೀಗೆ ನೆರೆದಿದ್ದವರ ಪ್ರಶಂಸೆಯ ಮಹಾಪೂರವೇ ಹರಿಯಿತು.

ಮರುದಿನ ಅಲ್ಲಿ ನೆರೆದಿದ್ದವರು ರಾಯಚೂರನ್ನು ಅಂತರ್ಜಾಲದಲ್ಲಿ ಹುಡುಕುತ್ತಿದ್ದರು. ಇವರ ಕಾರ್ಯಕ್ರಮದ ಬಗ್ಗೆ ಬಹುತೇಕರು ಸಾಮಾಜಿಕ ತಾಣಗಳಲ್ಲೂ ಪ್ರಶಂಸೆಯನ್ನು ಹಂಚಿಕೊಂಡರು.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷರು[ಬದಲಾಯಿಸಿ]

ಡಾ||ಪಂ.ನರಸಿಂಹಲು ವಡವಾಟಿಯವರನ್ನು ಕರ್ನಾಟಕ ಸರ್ಕಾರದ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷರನ್ನಾಗಿ ನೇಮಕ ಮಾಡುವುದರ ಮೂಲಕ ಸರ್ಕಾರ ಅವರನ್ನು ಗೌರವಿಸಿದೆ. ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ 2008-2011ರ ಅವಧಿಯಲ್ಲಿ ಎಲ್ಲಾ ಸದಸ್ಯರ ಸಹಕಾರದೊಂದಿಗೆ ಅನೇಕ ಹೊಸ ಹೊಸ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಇವರ ಅವಧಿಯಲ್ಲಿ ಅರ್ಥಪೂರ್ಣ ಕಾರ್ಯಕ್ರಮಗಳು ನಡೆದಿವೆ.

ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಯಾವ ಸಂಗೀತ ಜ್ಞಾನವೂ ಇಲ್ಲದೆ ಹಾಡುವ ಅಲೆಮಾರಿ ಜನಾಂಗಕ್ಕೆ, ಸಂಪೂರ್ಣವಾಗಿ ಕಲಿಸಲು ಸಾಧ್ಯವಿಲ್ಲವೆಂಬುದು ಗೊತ್ತಿದ್ದರೂ, ಕನಿಷ್ಠ ಅವರು ಕಲಿತು ಹಾಡುತ್ತಿರುವ ಹಾಡುಗಳಿಗೆ ಹೊಳಪನ್ನು ನೀಡುವ ಸಲುವಾಗಿ ವಿಶೇಷವಾದ ಕಾರ್ಯಕ್ರಮವನ್ನು ಇವರು ರೂಪಿಸಿದರು.

ರಾಯಚೂರಿನ ನೆಲೆಹಾಳ್ ಗ್ರಾಮದಲ್ಲಿ ಅಲೆಮಾರಿ ಜನಾಂಗಕ್ಕೆ ವಿಶೇಷವಾಗಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಕೇವಲ ಉದ್ಘಾಟಿಸಿ ಬರುವುದಲ್ಲದೆ, ಆಗಾಗ ತಾನೇ ಖುದ್ದು ಭೇಟಿಯಾಗಿ ಒಮ್ಮೊಮ್ಮೊ ತಾವೇ ಹೇಳಿ ಕೊಡುವುದಷ್ಟೇ ಅಲ್ಲದೆ, ಬದುಕನ್ನು ತಿಳಿಹೇಳಿ, ಕುಡಿತದ ದುಶ್ಚಟಗಳಿಗೆ ದಾಸರಾಗಿದ್ದವರ ಮನಃ ಪರಿವರ್ತನೆ ಮಾಡಿದ್ದಾರೆ.

ತಮ್ಮ ಗಂಡಂದಿರು ಕುಡಿತ ಬಿಟ್ಟಿರುವುದರಿಂದ ತಮ್ಮ ಸಂಸಾರದಲ್ಲಿ ಸಂತಸ ಗೊಂಡಿರುವ ಹೆಣ್ಣುಮಕ್ಕಳು ಕಾಲಿಗೆ ನಮಸ್ಕರಿಸಿ, ವಡವಾಟಿಯವರ ಭಾವ ಚಿತ್ರವನ್ನು ತೆಗೆದುಕೊಂಡು “ನಮ್ಮ ಮನೆಗಳಲ್ಲಿ ನಿಮ್ಮ ಭಾವಚಿತ್ರ ಹಾಕಿಕೊಳ್ಳುತ್ತೇವೆ” ಎಂದು ನೆನಪಿಸಿಕೊಂಡದ್ದು, ಸಾಮಾಜಿಕ ಪರಿವರ್ತನೆಗೆ ನಾಂದಿಯಾಗಿದ್ದರ ಸಾಕ್ಷಿ.

ಈ ಕಾರ್ಯಕ್ರಮ ಯಶಸ್ವಿಯಾಗಿದ್ದರ ಬಗ್ಗೆ ಹಂಪಿ ಉತ್ಸವದಲ್ಲಿ, ಆಗಿನ ಸಚಿವರಾಗಿದ್ದ ಜನಾರ್ಧನ ರೆಡ್ಡಿಯವರು ಈ ಕಾರ್ಯಕ್ರಮ ಯಶಸ್ವಿಯಾಗಿರುವುದರ ಬಗ್ಗೆ ಪ್ರಸ್ತಾಪಿಸಿದ್ದೂ ಅಲ್ಲದೆ, ಬೇರೆಡೆಯೂ ಇಂತಹ ಕಾರ್ಯಕ್ರಮ ನಡೆಸುವಂತೆ, ಇದಕ್ಕೆ ಪ್ರೋತ್ಸಾಹ ನೀಡುವುದಾಗಿ ಕೇಳಿಕೊಂಡರು. ಚಾಮರಾಜನಗರ, ಬಿಳಿಗಿರಿ ರಂಗನ ಬೆಟ್ಟದಲ್ಲಿ ಆದಿವಾಸಿ ಜನಾಂಗದವರಿಗೆ ಹಾಗೂ ಇತರೆಡೆಗಳಲ್ಲಿ ಮಾಡಿದ ಇಡೀ ಕಾರ್ಯಕ್ರಮ ತುಂಬಾ ಯಶಸ್ವಿಯಾಯಿತು.

ಹಿಂದಿನ ಅಧ್ಯಕ್ಷರ ಅವಧಿಯಲ್ಲಿ ನಿರ್ಣಯಿಸಿದ್ದ ಪುಸ್ತಕ ಪ್ರಕಟಣೆಗಳಿಗೆ ಮರುಚಾಲನೆಯನ್ನು ನೀಡಿ, ಸರ್ಕಾರಕ್ಕೆ ಹಿಂದಿರುಗಿದ್ದ ಹಣವನ್ನು ಮತ್ತೆ ತಂದು, ಆ ಎಲ್ಲಾ ಸಂಗೀತ ಸಂಪುಟಗಳನ್ನು ಪ್ರಕಟಿಸಿದ್ದು ಮತ್ತೊಂದು ವಿಶೇಷ.

ಅಕಾಡೆಮಿಯ ಮತ್ತೊಂದು ಜವಾಬ್ದಾರಿಯಾದ ಪ್ರಶಸ್ತಿ ನೀಡುವ ಸಂದರ್ಭದಲ್ಲಿ ವಯಸ್ಸಾದ ಹಿರಿಯ ಸಾಧಕ ಜೀವಿಗಳಿಗೆ ನೀಡಿದ್ದು ವಿಶೇಷ. ಇದಕ್ಕಾಗಿ ವಿಶೇಷವಾದ ಅಭಿನಂದನೆಗಳನ್ನು ಸಚಿವರಾದ ಕೆ. ಸುರೇಶ್ ಕುಮಾರ್ ಅವರೂ ಸೇರಿದಂತೆ ಪ್ರತಿ ಸಾಲಿನಲ್ಲಿ ಭಾಗವಹಿಸಿದ್ದ ಅತಿಥಿಗಳು ಸಲ್ಲಿಸಿದ್ದು, ಅರ್ಥಪೂರ್ಣತೆಗೆ ಸಾಕ್ಷಿ.

ಇವರ ಅವಧಿಯಲ್ಲಿ ನಡೆದ ಅನೇಕ ಜನ್ಮ ಶತಮಾನೋತ್ಸವಗಳು ನಡೆದವು. ಅವುಗಳಲ್ಲಿ ಮುಖ್ಯವಾದವು ಎಂದರೆ ಪಂ.ಮಲ್ಲಿಕಾರ್ಜುನ ಮನ್ಸೂರರ ಜನ್ಮಶತಮಾನೋತ್ಸವ. ಮರೆತುಹೋಗಿದ್ದ ಪಂ.ಮಲ್ಲಿಕಾರ್ಜುನ ಮನ್ಸೂರರ ಗುರುಗಳಾದ ಪಂ.ನೀಲಕಂಠ ಬುವ ಮೀರಜ್ ಕರ್ ರವರ ಜನ್ಮಶತಮಾನೋತ್ಸವವನ್ನು ರಾಷ್ಟ್ರಮಟ್ಟದ ಕಾರ್ಯಕ್ರಮ ಆಯೋಜಿಸಲಾಯಿತು. ರಾಷ್ಟ್ರಮಟ್ಟದ ಅನೇಕ ಕಾರ್ಯಕ್ರಮಗಳಿಗೆ ದೇಶದ ಅನೇಕ ಪ್ರಖ್ಯಾತ ಕಲಾವಿದರಿಂದ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದರು. ಅದಕ್ಕೆ ಉದಾಹರಣೆ ಎಂಬಂತೆ ಪಂ.ಮಲ್ಲಿಕಾರ್ಜುನ ಮನ್ಸೂರರ ಜನ್ಮಶತಮಾನೋತ್ಸವಕ್ಕೆ ಪ್ರಖ್ಯಾತ ಗಾಯಕರಾದ ಪಂ.ಅಸ್ಲಾಂ ಖಾನ್ ಅವರ ಕಾರ್ಯಕ್ರಮ, ಹಾಗೆಯೇ ಪಂ.ರಾಜನ್ ಮಿಶ್ರ ಹಾಗೂ ಪಂ.ಸಾಜನ್ ಮಿಶ್ರ ಅವರ ಕಾರ್ಯಕ್ರಮವನ್ನು ಪಂ.ನೀಲ ಕಂಠ ಬುವಾ ಅವರ ಜನ್ಮ ಶತಮಾನೋತ್ಸವ ಸಂದರ್ಭಗಳಲ್ಲಿ ಏರ್ಪಡಿಸಿದ್ದದ್ದೇ ಸಾಕ್ಷಿ.

ಕಮ್ಮಟ, ಶಿಬಿರ, ಪ್ರಾತ್ಯಕ್ಷಿಕೆಗಳಲ್ಲಿ ವಿಶೇಷವಾಗಿ ಉತ್ತರ ಭಾರತದ ವಿಶೇಷವಾದ ಆಕರ್ಷಣಿಯವಾದ ದೃಪದ್, ಧಮಾರ್ ಕಾರ್ಯಕ್ರಮವಂತೂ ಎಲ್ಲರ ಮನಸೆಳೆಯಿತು.

ಸಂಗೀತ ಮತ್ತು ನೃತ್ಯ ಹಾಗೂ ಇತರೆ ವಿಭಾಗದ ಸಾಂಸ್ಕೃತಿಕ ಕಾರ್ಯಕ್ರಮಗಳ ವಿಮರ್ಶೆಗಳನ್ನು ಪತ್ರಿಕೆ ಹಾಗೂ ಇತರೆ ಮಾಧ್ಯಮಗಳಿಗೆ ಬರೆಯುವ ಸಲುವಾಗಿ ಶಿಬಿರಗಳನ್ನು ಏರ್ಪಡಿಸಿದ್ದರು.

ಕಲಾವಿದರ ಬದುಕಿನ ಬಗ್ಗೆ ಅರಿವಿದ್ದ ಡಾ||ವಡವಾಟಿಯವರು ಇದ್ದ ಸಂಪನ್ಮೂಲದಲ್ಲೇ ಕಲಾವಿದರ ಸಂಭಾವನೆಯನ್ನು ಧಾರಾಳವಾಗಿ ನೀಡುತ್ತಿದ್ದರು.

ಮುಂಬಯಿ, ದೆಹಲಿ, ಪೂನಾ ಹೀಗೆ ಅನೇಕ ನಮ್ಮ ಹೊರ ನಾಡ ಕನ್ನಡಿಗರನ್ನು ಒಗ್ಗೂಡಿಸಿ, ಹೊರ ನಾಡ ಕನ್ನಡಿಗರಿಗಾಗಿಯೇ ಎರಡು ದಿನಗಳ ಕಾಲ ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ಕಲಾವಿದರಿಗೆ ನಮ್ಮ ನಾಡಿನಲ್ಲಿ ಕಾರ್ಯಕ್ರಮ ಆಯೋಜಿಸಿದ್ದರು. ಇದೇ ರೀತಿಯಲ್ಲಿ ಇನ್ನೂ ಅನೇಕ ಕಾರ್ಯಕ್ರಮಗಳನ್ನು ಬೇರೆಡೆಯೂ ಆಯೋಜಿಸಿದ್ದರು. ಹಾಗೆಯೇ ಇಲ್ಲಿನ ಕಲಾವಿದರಿಗೆ ಕಾರ್ಯಕ್ರಮವನ್ನು ಹೊರ ರಾಜ್ಯಗಳಲ್ಲಿ ಏರ್ಪಡಿಸಿದ್ದರು. ಅಂತಹ ಕಾರ್ಯಕ್ರಮಗಳಲ್ಲಿ ಕಾಶಿಯಲ್ಲಿ ನಡೆದ ಕಾರ್ಯಕ್ರಮ ವಿಶೇಷ. ಅಥಣಿ, ಗುಲ್ಬರ್ಗಾ ಜಿಲ್ಲೆಯ ಸೇಡಂ, ಚಾಮರಾಜನಗರ, ಹೀಗೆ ಇತರೆಡೆಗಳಲ್ಲಿ ಏರ್ಪಡಿಸಿದ್ದ ಗಡಿನಾಡ ಉತ್ಸವಗಳು ಅಲ್ಲಿನ ಕನ್ನಡಿಗ ಕಲಾವಿದರಿಗೆ ಆತ್ಮಾವಿಶ್ವಾಸ ತುಂಬಿದೆ. ಇವರ ಅವಧಿಯಲ್ಲಿ ಅಕಾಡೆಮಿಯ ವತಿಯಿಂದ ಎಂದಿಗೂ ಸಂಗೀತ ಹಬ್ಬವನ್ನು ಏರ್ಪಡಿಸದೇ ಇದ್ದ ಗುಲ್ಬರ್ಗಾ, ರಾಯಚೂರು, ಬೀದರ್, ಮಂಗಳೂರು, ಬೆಂಗಳೂರು, ಮೈಸೂರು ಹಾಗೂ ಇತರೆಡೆಗಳಲ್ಲಿ, ಸಂಗೀತ ಕ್ಷೇತ್ರಕ್ಕೆ ಈಗಷ್ಟೇ ಹೆಜ್ಜೆ ಇಟ್ಟಿರುವ ಯುವ ಕಲಾವಿದರಿಗೆ ಹಾಗೂ ರಾಷ್ಟ್ರ ಮಟ್ಟದಲ್ಲಿಯೂ ಹೆಸರು ಮಾಡಿರುವ ಹಿರಿಯ ಕಲಾವಿದರೆಲ್ಲರನ್ನೂ ಸೇರಿಸಿ, ಪ್ರತಿ ಸ್ಥಳದಲ್ಲೂ, ಮೂರು, ಐದು ದಿನಗಳ ಸಂಗೀತ ಸಮ್ಮೇಳನವನ್ನು ಆಯೋಜಿಸಿದರು. ಶಿಷ್ಯವೇತನವನ್ನು ನೀಡಿದ್ದಾರೆ. ಮಾಶಾಸನ ನೀಡುವ ಸಂದರ್ಭದಲ್ಲಿ ವಯೋಮಿತಿಯನ್ನು ಗಮನಿಸಿ, ವಯಸ್ಸಾದ ಹಣ್ಣುಹಣ್ಣು ವಯೋವೃದ್ಧ ಕಲಾವಿದರಿಗೆ ತೊಂದರೆಯಾಗದಂತೆ ಸಹಾಯವಾಗುವ ರೀತಿಯಲ್ಲಿ ಸಂದರ್ಶನಗಳನ್ನು ಮಾಡಿ, ಮಾಶಾಸನವನ್ನು ಮಂಜೂರು ಮಾಡಿದ್ದಾರೆ. ಕಾಲೇಜು ವಿದ್ಯಾರ್ಥಿಗಳಿಗೆ ಯುವ ಜನೋತ್ಸವ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರೆ. ವಿಕಲಚೇತನರ ಕಲಾವಿದರಿಗಾಗಿಯೇ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುವುದರ ಮೂಲಕ ಅವರಿಗೂ ಪ್ರೋತ್ಸಾಹವನ್ನು ನೀಡಿದ್ದಾರೆ. ಅಧ್ಯಕ್ಷರ ವಿವೇಚನೆಯಡಿಯಲ್ಲಿ ನೀಡುವ ಅನುದಾನವನ್ನು ತುಂಬಾ ಅಗತ್ಯವಾಗಿರುವವರಿಗೆ ನೀಡುವುದರ ಮೂಲಕ ಅವರ ಕಷ್ಟಗಳಿಗೆ ಸ್ಪಂದಿಸಿದ್ದಾರೆ.

ವಡವಾಟಿಯವರು ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಅಕಾಡೆಮಿಯು ನೀಡುತ್ತಿದ್ದ ಅನುದಾನವನ್ನು ಹೆಚ್ಚಿಸುವಂತೆ ಹಾಗೂ ಅಧ್ಯಕ್ಷರಿಗೆ ನೀಡುವ ಗೌರವ ಧನದ ಹೆಚ್ಚಳಕ್ಕೆ ಸಂಬಂಧಿಸಿದಂತೆ ಎಲ್ಲಾ ಅಕಾಡೆಮಿಯ ಅಧ್ಯಕ್ಷರು, ಸದಸ್ಯರು ಸೇರಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಅದರ ಫಲವಾಗಿ ಮುಂದಿನ ಅವಧಿಯಲ್ಲಿ ಅಧಿಕಾರ ಸ್ವೀಕರಿಸಿದ ಅಕಾಡೆಮಿ ಅಧ್ಯಕ್ಷರಿಗೆ ಗೌರವ ಧನ ಹಾಗೂ ಅನುದಾನವೂ ಹೆಚ್ಚಳವಾಗಿದೆ.

ಗಾನಯೋಗಿ, ಪುಟ್ಟರಾಜ ಗವಾಯಿಗಳ ಜನ್ಮದಿನವನ್ನು ವಡವಾಟಿಯವರ ಅವಧಿಯಲ್ಲಿ ಮಾತ್ರಾ ಅಕಾಡೆಮಿಯ ವತಿಯಿಂದ ಮಾಡಲಾಯಿತು.

ನಮ್ಮ ನಾಡಿನ ಸಂಗೀತ ಗಾಯಕರನ್ನು ಭಾರತ ರತ್ನ ಎಂದು ಭಾರತ ಸರ್ಕಾರ ಘೋಷಿಸಿದ ನಂತರ ವಡವಾಟಿಯವರು ಅಧ್ಯಕ್ಷರಾಗಿ ಹೆಮ್ಮೆಯಿಂದ ಪಂ.ಭೀಮಸೇನ್ ಜೋಷಿಯವರನ್ನು ಅಕಾಡೆಮಿಯ ವತಿಯಿಂದ ಗೌರವಿಸಿ ಬಂದರು.

ಕ್ಯಾಸೆಟ್ ಮತ್ತು ಸಿ.ಡಿಗಳು[ಬದಲಾಯಿಸಿ]

ಲಹರಿ ಕಂಪನಿಯ:

  • ‘ರಾಗ್ ಡಿಲೈಟ್’,
  • ‘ಮಂಗಲ ಧ್ವನಿ’,
  • ಕಲ್ಕತ್ತಾ ಉಲ್ಪತ್ ಚಕ್ರವರ್ತಿಯೊಂದಿಗಿನ ವಯೋಲಿನ್ ಜುಗಲ್ ಬಂದಿ,
  • ಶ್ರೀ ನಿಜಗುಣ ಶಿವಯೋಗಿಗಳ ರಚನೆಯ ‘ಕೈವಲ್ಯ ಕಿರಣ’-ಗಾಯನ
  • ‘ಶ್ರೀರಕ್ಷಾಶತಕ’- ಗಾಯನ-ಮುನ್ನುಡಿ ಶ್ರೀ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರಿಂದ

ಸಂಗೀತ ಸಂಸ್ಥೆ:

  • ‘ಪ್ರಭಾತ ರಾಗಗಳು’
  • ‘ಕ್ಲಾರಿಯೋನೆಟ್’
  • ‘ಕಲ್ಯಾಣ ಮಂಗಲ ನಾದ’
  • ‘ಕ್ಲಾರಿಯೋನೆಟ್ ಮತ್ತು ಸ್ಯಾಕ್ಸಾಫೊೀನ್’ ಜುಗಲ್ ಬಂದಿ

(ವಡವಾಟಿ ಮತ್ತು ಕದ್ರಿ ಗೋಪಾಲ್ ನಾಥ್)

ಡ್ರೀಮ್ಸ್ ಸಂಸ್ಥೆ:

  • ‘ಬ್ರೀಜ್’ ಜುಗಲ್ ಬಂದಿ (ವಡವಾಟಿ ಮತ್ತು ಕದ್ರಿ ಗೋಪಾಲ್ ನಾಥ್)

ಸಾಗರ್ ಸಂಸ್ಥೆ:

  • ‘ರಾಗ್ ಡಿಲೈಟ್’

ಮ್ಯಾಗ್ನ ಸೌಂಡ್ ಸಂಸ್ಥೆ:

  • ‘ಜುಗಲ್ ಬಂದಿ ವಿತ್ ಕದ್ರಿ ಗೋಪಾಲ್ ನಾಥ್’

ಡಾ||ರಾಜ್ ಕುಮಾರ್ ಅವರು ಡಾ||ಪಂ.ನರಸಿಂಹಲು ವಡವಾಟಿಯವರು “ಕೈವಲ್ಯ ಕಿರಣ” ಕ್ಯಾಸೆಟ್ನಿಲ್ಲಿ ಹಾಡಿರುವ ಗೀತೆಗಳನ್ನು ಕೇಳಿ, ಮನೆಗೆ ಕರೆಸಿಕೊಂಡು ಸತ್ಕರಿಸಿದರು.

ಹರಿಹರನ ಶ್ರೀರಕ್ಷಾ ಶತಕಕ್ಕೆ ಪಂ.ಸಿದ್ಧರಾಮ ಜಂಬಲದಿನ್ನಿಯವರು ಐದು ಪದ್ಯಗಳಿಗೆ ರಾಗ ಸಂಯೋಜನೆ ಮಾಡಿದ್ದರೆ, ಅದೇ ಮಟ್ಟನ್ನು ಉಳಿಸಿಕೊಂಡು ಇನ್ನುಳಿದ ಪದ್ಯಗಳಿಗೆ ರಾಗ ಸಂಯೋಜನೆ ಮಾಡಿ ಪಂ.ಕಲ್ಮಲ್ ನಾರಾಯಣಪ್ಪ ಹಳೆಗನ್ನಡದ ವಾಚನಮಾಡಿದ್ದರೆ, ಡಾ||ವಡವಾಟಿಯವರಿಂದ ಗಾಯನವಿದೆ. ಹರಿಕೃಷ್ಣ ಅವರು ಸರಳಗನ್ನಡದಲ್ಲಿ ಅರ್ಥವನ್ನು ನೀಡಿದ್ದಾರೆ. ಅಂತಹ ವಿಶೇಷವಾದ ಸಿ.ಡಿ.ಗೆ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರು ಮುನ್ನುಡಿಯಾಗಿ ಮಾತನಾಡಿದ್ದಾರೆ.

ಸಂಗೀತ ವಿದ್ಯಾಲಯ ಮತ್ತು ಸಂಗೀತ ಸಮ್ಮೇಳನ[ಬದಲಾಯಿಸಿ]

ಡಾ||ವಡವಾಟಿಯವರ ಗುರುಗಳಾದ ಸಂಗೀತ ಸುಧಾಕರ ಶ್ರೀ ಸಿದ್ದರಾಮ ಜಂಬಲದಿನ್ನಿಯವರ ಸ್ಮರಣಾರ್ಥ ‘ಸ್ವರ ಸಂಗಮ ಸಂಗೀತ ವಿದ್ಯಾಸಂಸ್ಥೆ’ ಯನ್ನು 1986ರಲ್ಲಿ ರಾಯಚೂರಿನ ಉದಯನಗರದಲ್ಲಿ ಸ್ಥಾಪಿಸಿದ್ದಾರೆ. ಗುರುಶಿಷ್ಯ ಪರಂಪರೆಯಲ್ಲಿ ಸಂಗೀತ ಬೋಧಿಸುವ ಈ ವಿದ್ಯಾಲಯ ಕಲ್ಯಾಣ ಕರ್ನಾಟಕದ ಸಂಗೀತಾಸಕ್ತರಿಗೆ ಸಂಗೀತದ ಅಮೃತವನ್ನು ಉಣಬಡಿಸುವುದಷ್ಟೇ ಅಲ್ಲದೆ, ಕರ್ನಾಟಕದಲ್ಲಿಯೇ ವಿಶಿಷ್ಟವಾದ ಹೆಮ್ಮೆಯ ಸಂಸ್ಥೆ.

ಡಾ||ವಡವಾಟಿಯವರು ಹಳೆಯ ಬೆಂಗಳೂರಿನ ಜೊತೆ ಸಂಬಂಧ ಇರಿಸಿಕೊಂಡಿದ್ದರೂ, ಎಲ್ಲಾ ಕಲಾವಿದರಂತೆ ಬೆಂಗಳೂರನ್ನು ತಮ್ಮ ನೆಲೆಯಾಗಿ ಮಾಡಿಕೊಳ್ಳದೆ, ಸಂಗೀತ ಕಛೇರಿ ನೀಡಿ ಮರಳಿ ಗೂಡಿಗೆ ರಾಯಚೂರಿಗೇ ಹಿಂತಿರುಗುತ್ತಿದ್ದರು. ತಾವು ಹುಟ್ಟಿದ ಊರಿಗೆ ಋಣ ತೀರಿಸಬೇಕೆಂಬ ಮಹೋನ್ನತ ಉದ್ದೇಶದಿಂದ ಮೊದಲು ತಾವು ಇರಲು ತಮ್ಮ ಗೂಡು ಕಟ್ಟಿಕೊಳ್ಳುವುದನ್ನು ಬಿಟ್ಟು, ಕೈ ಯಲ್ಲಿ ಹಣವಿಲ್ಲದಿದ್ದರೂ ಒಂದೊಂದು ಸಿಮೆಂಟ್ ಚೀಲವನ್ನು ಸೈಕಲ್ ಮೇಲೆ ಹೊತ್ತು ತಂದು ಸ್ಪಲ್ಪ ಸ್ವಲ್ಪವೇ ಕೆಲಸವನ್ನು ಮುಂದುವರೆಸುತ್ತಾ, ಕನಸಿನ ವಿದ್ಯಾಲಯವನ್ನು ನಿರ್ಮಿಸಿದ್ದಾರೆ. ಈ ವಿದ್ಯಾಲಯಕ್ಕೆ “ನನ್ನಂತೆ ಹಾರ್ಮೋನಿಯಂ ನುಡಿಸುವವರಿಲ್ಲ. ವಡವಾಟಿಯಂತೆ ಕ್ಲಾರಿಯೋನೆಟ್ ನುಡಿಸುವವರಿಲ್ಲ” ಎಂದು ಅಭಿಮಾನದಿಂದ ಹೇಳುತ್ತಿದ್ದ ಗಾನ ಯೋಗಿ ಪಂ.ಪುಟ್ಟರಾಜ ಗವಾಯಿಗಳು ಪಾದ ಬೆಳೆಸುವುದರ ಮೂಲಕ ಇದು ಪುಣ್ಯ ಭೂಮಿಯೂ ಆಗಿದೆ. ಅನೇಕ ಸಾಹಿತಿಗಳು, ಸ್ವಾಮೀಜಿಗಳು, ರಾಜಕಾರಣಿಗಳು, ಅನೇಕ ಕ್ಷೇತ್ರದ ಗಣ್ಯರು ವಿದ್ಯಾಲಯಕ್ಕೆ ಭೇಟಿ ನೀಡಿದ್ದಾರೆ.

ಗುರುಗಳಾದ ಸಂಗೀತ ರತ್ನ ಶ್ರೀ ಸಿದ್ಧರಾಮ ಜಂಬಲದಿನ್ನಿ ಸ್ವರಗಳ ಜೊತೆ ವಿಲೀನರಾದ 31ರ ಡಿ. 1988ರ ನಂತರ ಮುಂದಿನ ವರ್ಷದಿಂದ ಅವರ ಸ್ಮರಣಾರ್ಥ ಸಂಗೀತ ಸಮ್ಮೇಳನವನ್ನು ನಡೆಸುತ್ತಾ ಬರುತ್ತಿದ್ದಾರೆ. ಆ ಸಮ್ಮೆಳನದಲ್ಲಿ ಗಾನಕೋಗಿಲೆ ಗಂಗೂಬಾಯಿ ಹಾನಗಲ್ ಅವರಿಂದ ಹಿಡಿದು ಉತ್ತರ ಭಾರತದ ಪ್ರಭಾ ಅತ್ರೆ, ಮುಂತಾದ ಹಿರಿಯ ಕಿರಿಯ ಕಲಾವಿದರು ಸಂಗೀತ ಸುಧೆಯನ್ನೇ ಹರಿಸಿದ್ದಾರೆ. ವಿದೇಶಿಯರು ಕಾರ್ಯಕ್ರಮ ನೀಡುವುದರ ಮೂಲಕ ಆ ವೇದಿಕೆಯು ಅಂತರ ರಾಷ್ಟ್ರೀಯ ಸಂಗೀತ ಸಮ್ಮೇಳನದ ವೇದಿಕೆಯಾಗಿಯೂ ಪರಿವರ್ತನೆಯಾಗಿದೆ.

2013ರ ಡಿ. 28ಕ್ಕೆ ನಡೆದ ಸಂಗೀತ ಸಮ್ಮೇಳನವು 25ನೇ ವರ್ಷದ ಬೆಳ್ಳಿ ಹಬ್ಬವನ್ನು ಆಚರಿಸಿಕೊಂಡಿದೆ.

ಕಲಾವಿದರ ದಿನ[ಬದಲಾಯಿಸಿ]

ದೆಹಲಿಯಿಂದ ದೂರವಿರುವ ದಕ್ಷಿಣ ಭಾರತದಲ್ಲಿ, ಅದರಲ್ಲೂ ಅತ್ಯಂತ ಹಿಂದುಳಿದ ಹೈದರಾಬಾದ್ ಕರ್ನಾಟಕದ, ಅತ್ಯಂತ ಹಿಂದುಳಿದ ಜಿಲ್ಲೆಯಿಂದ, ವಿಶ್ವ ಸಂಗೀತ ಸಮ್ಮೇಳನದಲ್ಲಿ, ತಮ್ಮ ಸಂಗೀತದ ಮೂಲಕ, ಕ್ಲಾರಿಯೋನೆಟ್ನಿ ಇಡೀ ವಿಶ್ವದ ಖ್ಯಾತ ಪಂಡಿತರನ್ನು ನಮ್ಮ ಭಾರತದ ಕಡೆಗೆ ತಿರುಗಿ ನೋಡುವಂತೆ ಮಾಡಿದ ಡಾ||ಪಂ.ನರಸಿಂಹಲು ವಡವಾಟಿವರು, ಎಂದಿಗೂ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡವರಲ್ಲ. ಅದರ ಬಗ್ಗೆ ಅವರಿಗೆ ಆಸಕ್ತಿಯೂ ಇಲ್ಲದ್ದರಿಂದ, ಇವರಂತೆ ಅನೇಕ ಕಲಾವಿದರು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳದಿರುವುದರಿಂದ, ಸಂತೋಷವನ್ನು ಧಾರೆ ಎರೆಯುವ ಎಲ್ಲಾ ಕಲಾವಿದರ ಕಲೆ, ನೋವು, ನಲಿವು, ಸಂತೋಷಗಳನ್ನು ನೆನಪಿಸಿಕೊಳ್ಳುವ ಸಲುವಾಗಿ ಡಾ||ಪಂ.ನರಸಿಂಹಲು ವಡವಾಟಿಯವರ ಜನುಮ ದಿನವನ್ನು ಎಲ್ಲಾ ಕಲಾವಿದರಿಗೂ ಅರ್ಪಿಸುತ್ತಾ, ಭಾರತದಲ್ಲಿ ಮೊಟ್ಟಮೊದಲ ಬಾರಿಗೆ, ಡಾ||ಪಂ.ನರಸಿಂಹಲು ವಡವಾಟಿಯವರ ಜನುಮ ದಿನವಾದ “ಜನವರಿ 21”ರಂದು “ಕಲಾವಿದರ ದಿನ”ವನ್ನಾಗಿ (Artist’s Day in India)[೩] ಆಚರಿಸಲಾಗುತ್ತಿದೆ. ಭಾರತ್ ಸಾಂಸ್ಕೃತಿಕ ಕಲಾ ಕೇಂದ್ರವು 2013ರಿಂದ ಕಲಾವಿದರ ದಿನವಾಗಿ ಆಚರಿಸಲು ಪ್ರಾರಂಭಿಸಿತು.

ಉಲ್ಲೇಖ[ಬದಲಾಯಿಸಿ]

ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರ ಹೊರತಂದಿರುವ ಹರಿಕೃಷ್ಣ ಅವರು ಬರೆದಿರುವ ಪಂಡಿತ್ ಡಾ||ನರಸಿಂಹಲು ವಡವಾಟಿಯವರ ಬದುಕು ಸಾಧನೆ ಕುರಿತ “ಕ್ಲಾರಿಯೋನೆಟ್ ಮಾಂತ್ರಿಕ” ಪುಸ್ತಕವನ್ನು ಓದಿ.

ಕಲಬುರಗಿ ವಿಶ್ವವಿದ್ಯಾಲಯವು ಪದವಿ ವಿದ್ಯಾರ್ಥಿಗಳಿಗಾಗಿ ನಿಗದಿಪಡಿಸಿ ಪ್ರಕಟಿಸಲಾಗಿರುವ ``ಕಲಾವಿದರ ಬದುಕು ಪುಸ್ತಕವನ್ನು ಓದಿ.

  1. "ಆರ್ಕೈವ್ ನಕಲು". Archived from the original on 2014-12-18. Retrieved 2014-12-22.
  2. "Pandit Narasimhalu Vadavati: World Music Festival 2011". thehindu.com. Retrieved 2013-01-21.
  3. http://en.wikipedia.org/wiki/Artists_day_in_india