ದಿನಕರ ದೇಸಾಯಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
'ದಿನಕರ ದೇಸಾಯಿ'

ದಿನಕರ ದೇಸಾಯಿ (೧೯೦೯-೧೯೮೨) ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು. ಚುಟುಕ ಬ್ರಹ್ಮನೆಂದು ಪ್ರಖ್ಯಾತ.

ಪರಿವಿಡಿ

[ಬದಲಾಯಿಸಿ] ಜನನ,ವಿದ್ಯಾಭ್ಯಾಸ,ಮತ್ತು ವೃತ್ತಿ-ಜೀವನ

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲ್ಲೂಕಿನ ಅಂತರವಳ್ಳಿಯಲ್ಲಿ ಜನಿಸಿದ ದಿನಕರರ ತಂದೆ ದತ್ತಾತ್ರೇಯ ದೇಸಾಯಿ ಶಾಲಾ ಮಾಸ್ತರರು. ತಾಯಿ ಅಂಬಿಕಾ. ಚಿಕ್ಕ ವಯಸ್ಸಿನಲ್ಲೇ ತಾಯನ್ನು ಕಳೆದುಕೊಂಡ ದಿನಕರರಿಗೆ ಏಕಾಂತ ಜೀವನ, ಪ್ರಕೃತಿಯ ಚೆಲುವು ಮನಸ್ಸಿನ ತುಂಬಾ ತುಂಬಿಕೊಂಡಿತ್ತು . ಕಿರಿಯ ವಯಸ್ಸಲ್ಲೇ ಕಾವ್ಯ ಅವರ ಮನದಲ್ಲಿ ಉದಯಿಸತೊಡಗಿತು. ಅದಕ್ಕೆ ನೀರೆರದು ಪೋಷಿಸಿದವರು ರಂಗರಾವ ಹಿರೇಕೆರೂರು ಎಂಬ ಪಂಡಿತರು. ಅವರ ಮಾರ್ಗದರ್ಶನದಲ್ಲಿ ದಿನಕರರು ವಿವಿಧ ಛಂದಸ್ಸುಗಳಲ್ಲಿ ಕಾವ್ಯ ರಚಿಸುವುದನ್ನು ಕಲಿತರು. 'ಚೌಪದಿ' 'ಅವರಿಗೆ ಪ್ರಿಯವಾದ ಕಾವ್ಯರಚನಾ ಛಂದಸ್ಸು. ಮೆಟ್ರಿಕ್ ಪರೀಕ್ಷೆಯನ್ನು ಬರೆಯಲು ಧಾರವಾಡಕ್ಕೆ ಹೋದಾಗ ಬಿ ಎಂ ಶ್ರೀ ಯವರ ಇಂಗ್ಲೀಷ್ ಗೀತೆಗಳನ್ನು ನೋಡಿ ಬೆರಗಾದರು. ಅವರ ಇಂಟರ್ ಮೀಡಿಯೇಟ್ ಶಿಕ್ಷಣ, ಬೆಂಗಳೂರಿನಲ್ಲಿ ಹಾಗೂ ಬಿ. ಎ. ಕನ್ನಡ, ಇತಿಹಾಸ , ರಾಜ್ಯಶಾಸ್ತ್ರ. ದ ವ್ಯಾಸಂಗ ಮೈಸೂರಿನಲ್ಲಿ ಜರುಗಿತು. ಅವರಗುರುಗಳಲ್ಲಿ ಪ್ರಮುಖರು, ಬಿ.ಎಂ.ಶ್ರೀಕಂಠಯ್ಯ, ವಿ.ಸೀತಾರಾಮಯ್ಯನವರು, ಹಾಗೂ ಟಿ.ಎಸ್.ವೆಂಕಣ್ಣಯ್ಯನವರಂಥ ಧೀಮಂತ ವ್ಯಕ್ತಿಗಳು. ಪದವಿಶಿಕ್ಷಣದ ಕೊನೆಯ ವರ್ಷದಲ್ಲಿ ಇತಿಹಾಸದ ವಿಷಯದಲ್ಲಿ ಪ್ರಸಿದ್ಧ " ಕ್ಯಾಂಡಿ ಪಾರಿತೋಷಕ' ಗಳಿಸಿದರು. ನಂತರ ಬೊಂಬಾಯಿನ,, 'ಸೈಂಟ್ ಝೇವಿಯರ್ ಕಾಲೇಜ್ ' ನಲ್ಲಿ ಇತಿಹಾಸದ ವಿಷಯದೊಂದಿಗೆ, ಎಂ.ಎ. ಪದವಿಯನ್ನು ಉನ್ನತ ದರ್ಜೆಯಲ್ಲಿ ಮುಗಿಸಿದರು. ಅದರ ಜೊತೆ, ಎಲ್.ಎಲ್.ಬಿ ಪರೀಕ್ಷೆಯನ್ನೂ ಮುಗಿಸಿದರು.

[ಬದಲಾಯಿಸಿ] ಕಾರ್ಮಿಕ ಸಂಘಟಕರಾಗಿ

ಬೊಂಬಾಯಿಯಲ್ಲಿ 'ಭಾರತ ಸೇವಕ ಸಮಾಜ' ದ ಬಗ್ಗೆ ಅರಿತು, ಅದರ ಸದಸ್ಯರಾದರು. ಎಮ್.ಎನ್. ಜೋಷಿಯವರೇ ಆ ಸಂಸ್ಥೆಯ ಕಾರ್ಮಿಕ ಮುಖಂಡರು. ಅವರು ಕೇಂದ್ರ ಅಸೆಂಬ್ಲಿಯ ಸದಸ್ಯರಾಗಿದ್ದರು. ಜೋಷಿಯವರ ಜೊತೆಯಲ್ಲಿ ದೆಹಲಿಗೆ ಹೋದ ದೇಸಾಯಿಯವರು, ಪತ್ರಿಕಾರಂಗಕ್ಕೂ ಪಾದಾರ್ಪಣೆ ಮಾಡಿದರು. 'ಅಸೆಂಬ್ಲಿಯ ಗ್ಯಾಲರಿಯಿಂದ,' ಎಂಬ ಶೀರ್ಷಿಕೆಯಡಿಯಲ್ಲಿ 'ಸಂಯುಕ್ತ-ಕರ್ನಾಟಕ' ಪತ್ರಿಕೆಗೆ, ವರದಿಗಳನ್ನು ಬರೆದು ಕಳಿಸುತ್ತಿದ್ದರು. ಜೋಷಿಯವರ ಆದೇಶದ ಮೇರೆಗೆ, ಗೋಕಾಕ್ ಗೆ ಹೋಗಿ ಅಲ್ಲಿನ 'ಗೋಕಾಕ್ ಹತ್ತಿಗಿರಣಿಯ ಕಾರ್ಮಿಕರ ಹೋರಾಟ' ದಲ್ಲಿ ಪಾಲ್ಗೊಂಡರು. ಇಲ್ಲಿ ದೊರೆತ ಅನುಭವದಿಂದ ಬೊಂಬಾಯಿನಲ್ಲಿ 'ಕಡಲ ಕೆಲಸಗಾರರ ಸಂಘ' ವನ್ನು ಕಟ್ಟಿಬೆಳೆಸಿದರು. ಅಂತಾರಾಷ್ಟ್ರೀಯ ವೇದಿಕೆಯಲ್ಲೂ ಅದನ್ನು ಪ್ರತಿನಿಧಿಸಿದರು. ಉತ್ತರ ಕನ್ನಡ ಜಿಲ್ಲೆಯ ರೈತರನು ಸಂಘಟಿಸಿದರು.'ಉಳುವವನೇ ಭೂಮಿಯ ಒಡೆಯ' ತತ್ವವನ್ನು ಸಾರಿ ಎತ್ತಿಹಿಡಿದರು. ಬ್ರಿಟಿಷರ ಕೋಪಕ್ಕೆ ಗುರಿಯಾದರು. ಬ್ರಿಟಿಷ್ ಸರ್ಕಾರ ಅವರಿಗೆ ೫ ವರ್ಷ ' ಗಡೀಪಾರ್ ಶಿಕ್ಷೆ ' ವಿಧಿಸಿತ್ತು.

[ಬದಲಾಯಿಸಿ] 'ಕರ್ನಾಟಕ ಸಾಹಿತ್ಯ ಅಕ್ಯಾಡಮಿ ಪ್ರಶಸ್ತಿ,,' ಅವರ 'ದಿನಕರ ಚೌಪದಿ' ಕೃತಿಗೆ ದೊರೆಯಿತು

ದಿನಕರ ದೇಸಾಯಿಯವರು, ಒಟ್ಟು ೧೨ ಕೃತಿಗಳನ್ನು ರಚಿಸಿದ್ದಾರೆ. ಅದರಲ್ಲಿ, ' ದಿನಕರನ ಚೌಪದಿ' 'ಕರ್ನಾಟಕ ಸಾಹಿತ್ಯ ಅಕ್ಯಾಡಮಿ ಪ್ರಶಸ್ತಿ ' ಗೆ ಆಯ್ಕೆಯಾಯಿತು. ಅವರ ಚೌಪದಿಗಳಲ್ಲಿ ಎಲ್ಲಾ ರಸಗಳೂ ಅಡಕವಾಗಿರುತ್ತಿದ್ದವು. ಬಂಡಾಯ ಸಾಹಿತ್ಯ ಪರಂಪರೆ ಶುರುವಾಗುವ ದಶಕಗಳ ಮೊದಲೇ ೧೯೩೧ ರಲ್ಲಿ 'ಬಾರ್ಡೋಲಿ ಸತ್ಯಾಗ್ರಹ' ದ ಬಗೆಗೆ, ಚುಟುಕು ಪದ್ಯಗಳನ್ನು ರಚಿಸಿದ್ದರು. 'ಹಾಲಕ್ಕಿ ಜನಾಂಗ' ದ ಬಗೆಗೆ ಬರೆದ ಚುಟುಕ, 'ದೀನ-, ದಲಿತರ ಬಗೆಗೆ ಇದ್ದ ಕಾಳಜಿ' ಯನ್ನು ದರ್ಶಾಯಿಸುತ್ತದೆ. ಅವರ ಕವಿತೆಗಳಲ್ಲಿ 'ಅಲಂಕಾರಿಕ ಕುಸುರಿಕೆಲಸ' ವನ್ನು ಇಷ್ಟಪಡದೆ, ನೇರವಾಗಿ ಮನಸ್ಸಿಗೆ ನಾಟುವಂತೆ ಬರವಣಿಗೆ ಅವರಿಗೆ ಪ್ರಿಯವಾಗಿತ್ತು.

'ಇವನ ಮನೆಯೊಳಗಿಲ್ಲ ಸಾಕಷ್ಟು ಅಕ್ಕಿ

ಆದರೂ ಈತನಿಗೆ ಹೆಸರು 'ಹಾಲಕ್ಕಿ'

ಹಾಲು ಅಕ್ಕಿಗಳೆರಡೂ ಹೆಸರೊಳಗೆ ಮಾತ್ರ

ಹಸಿವೆಯೊಂಬುದು ಇವನ 'ಹಣೆಯ ಕುಲಗೋತ್ರ'

  • ಅವರ ಪ್ರಥಮ ಸಂಕಲನದ ಹೆಸರು "ಕವನ ಸಂಗ್ರಹ" (೧೯೫೦).
  • "ಹೂ ಗೊಂಚಲು"
  • "ತರುಣರ ದಸರೆ"
  • "ಕಡಲ ಕನ್ನಡ"
  • ದಾಸಾಳ, ಮಕ್ಕಳ ಗೀತೆಗಳು, ಮತ್ತು ಮಕ್ಕಳ ಪದ್ಯಗಳುವಗೀತೆ ಹಾಗೂ ಶಿಶುಕವನಗಳ ಸಂಕಲನಗಳು.

ಅವರು ಬರೆದ "ಟಿಕ್ ಟಿಕ್ ಗೆಳೆಯಾ ಟಿಕ್ ಟಿಕ್ ಟಿಕ್" ಎನ್ನುವದು ಮಕ್ಕಳಿಗೆ ಅತ್ಯಂತ ಪ್ರಿಯವಾದ ಕವನವಾಗಿತ್ತು. ದಿನಕರ ದೇಸಾಯಿಯವರು " ನಾ ಕಂಡ ಪಡುವಣ" ಎಂಬ ಪ್ರವಾಸ ಕಥನವನ್ನೂ ಬರೆದಿದ್ದಾರೆ.

"ಜನಸೇವಕ" ಎಂಬ ಪತ್ರಿಕೆಯ ಮೂಲಕ ಜನಕ್ಕೆ ತಿಳಿವನ್ನೂ, ಅರಿವನ್ನೂ ಮೂಡಿಸಿದ ದಿನಕರ ದೇಸಾಯಿಯವರಿಗೆ ಸಾಹಿತ್ಯಲೋಕದಲ್ಲಿ ಅಪಾರ ಜನಪ್ರಿಯತೆ ತಂದು ಕೊಟ್ಟದ್ದು ಅವರ ಚುಟುಕುಗಳು. ಜಯಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ "ದೀನ ದಲಿತ ದೇವ ಬಡವ" ಎಂಬ ಕವಿತೆ ಬಹಳ ಪ್ರಸಿದ್ದಿಯಾಯಿತು. ಸುಧಾ - ವಾರಪತ್ರಿಕೆಯಲ್ಲಿ ದಿನಕರ ದೇಸಾಯಿಯವರ ಅನೇಕ ಚುಟುಕುಗಳು ಬೆಳಕು ಕಂಡಿದ್ದವು. ಅವರನ್ನು "ಚುಟುಕು ಬ್ರಹ್ಮ" ಎಂದೇ ಸಾಹಿತ್ಯಲೋಕದಲ್ಲಿ ಗುರುತಿಸುತ್ತಾರೆ.

[ಬದಲಾಯಿಸಿ] ಶೈಕ್ಷಣಿಕ ಕ್ಷೇತ್ರ

೧೯೫೫ ರಲ್ಲಿ ಅಂಕೋಲದಲ್ಲಿ ' ಜನಸೇವಕ ಕನ್ನಡ ವಾರ ಪತ್ರಿಕೆ' ಯ ಆರಂಭಮಾಡಿದರು. ಸುಮಾರು ೧೭ ವರ್ಷಗಳವರೆಗೆ ನಡೆಸಿಕೊಂಡು ಬಂದ ಈ ಪತ್ರಿಕೆಯಲ್ಲಿ ಗೌರೀಶ ಕಾಯ್ಕಿಣಿಯವರು, ಹಲವು ವರ್ಷಗಳ ಕಾಲ ಬರಹಗಳನ್ನು ಬರೆದರು. ಶ್ರೀ ದಿನಕರ ದೇಸಾಯಿಯವರು ಉತ್ತರ ಕನ್ನಡ ಜಿಲ್ಲೆಯಾದ್ಯಂತ ಶೈಕ್ಷಣಿಕ ಕ್ರಾಂತಿಗೆ ಹರಿಕಾರರಾದರು. ತಾಲೂಕು ಸ್ಥಳಗಳನ್ನು ಹೊರತುಪಡಿಸಿ, ಗ್ರಾಮೀಣ ಪ್ರದೇಶದಲ್ಲಿ ಶಾಲಾ ಸೌಲಭ್ಯಗಳು ಉತ್ತರ ಕನ್ನಡ ಜಿಲ್ಲೆಯ ಮಕ್ಕಳಪಾಲಿಗೆ ಗಗನ ಕುಸುಮವಾಗಿತ್ತು. ಹಳ್ಳಿಗಳಿಂದ ಮಕ್ಕಳು ತುಂಬಾದೂರದವರೆಗೆ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣಕ್ಕಾಗಿ ಕಾಲುನಡಿಗೆಯಲ್ಲಿ ಹೋಗಬೇಕಾಗಿತ್ತು. ಈ ಕಷ್ಟವನ್ನು ಮನಗಂಡ ಶ್ರೀ ದಿನಕರರು, ಸ್ವಪ್ರಯತ್ನದಿಂದ ೧೯೫೩ ರಲ್ಲಿ "ಕೆನರಾ ವೆಲ್ ಫೇರ್ ಸೋಸೈಟಿ" ಎಂಬ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ, ಸುಮಾರು ೨೭ ಜನತಾ ವಿಧ್ಯಾಲಯಗಳನ್ನು ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಮಕ್ಕಳಿಗಾಗಿ ಜಿಲ್ಲೆಯ ವಿವಿಧ ಗ್ರಾಮೀಣ ಪ್ರದೇಶಗಳಲ್ಲಿ ಪ್ರಾರಂಭಿಸಿದರು ಮತ್ತು ಅಂಕೋಲೆಯಲ್ಲಿ ಒಂದು 'ಗೋಖಲೆ ಸೆ೦ಟಿನರಿ ಕಾಲೇಜ ' ನ್ನು ಪ್ರಾರಂಭಿಸಿದರು .೨೦೦೬ ರಲ್ಲಿ 'ಸುವರ್ಣ ಮಹೋತ್ಸವ ' ವನ್ನು ಆಚರಿಸಿಕೊ೦ಡಿದೆ. ಶಿಕ್ಷಣ ಕ್ಶೇತ್ರದಲ್ಲೂ ರವರು ಗಮನಾರ್ಹ ಛಾಪನ್ನು ಮೂಡಿಸಿದ್ದರು. 'ಪ್ರೈಮರಿ ಎಜುಕೇಷನ್ ಇನ್ ಇಂಡಿಯ' ಎಂಬ ಆಂಗ್ಲ ಕೃತಿಯನ್ನು ರಚಿಸಿದರು. ರಾಜಕೀಯ ಕ್ಷೇತ್ರದಲ್ಲಿ ಧುಮುಕಿದ ದಿನಕರ್ ರವರು, 'ಬೊಂಬಾಯಿನ ಕಾರ್ಪೊರೇಷನ್ ನ ಕಾರ್ಪೊರೇಟರ್' ' ಆಗಿ ೧೩ ವರ್ಷ ದುಡಿದರು. ೧೯೬೭ ರಲ್ಲಿ ಉತ್ತರ ಕನ್ನಡ ಜಿಲ್ಲೆಯಿಂದ 'ಪಕ್ಷೇತ್ರರ ಸಂಸದ' ರಾಗಿ ಚುನಾಯಿತರಾಗಿದ್ದರು. 'ಸಮಾಜವಾದ ತತ್ವ' ದ ಪ್ರತಿಪಾದಕರಾಗಿದ್ದ ರ್ವರು, ಸಂಸತ್ ನಲ್ಲಿ ಸಾಮಾನ್ಯ ಜನರ ಬವಣೆಗಳ ಬಗೆಗೆ ದನಿಎತ್ತಿದ್ದರು. ನೇರ ಹಾಗೂ ಸರಳಜೀವಿಯಾಗಿದ್ದ ದೇಸಾಯಿಯವರು, 'ಇಂದಿರಾ ' ರವರಜೊತೆ ವಿವಾಹವಾದರು. ವಿವಾಹಕ್ಕೆ ಸಂದ ಖರ್ಚು ಕೇವಲ, ೭ ರೂಪಾಯಿಗಳು. ಅದೂ ನೋಂದಣಿಗಾಗಿ. ಸಂಸದರಾಗಿದ್ದಾಗಲೂ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನೇ ಬಳಸುತ್ತಿದ್ದರು. ಪ್ರಚಾರಪ್ರಿಯತೆ ಅವರಿಗೆ ಸರಿಬರುತ್ತಿರಲಿಲ್ಲ. ಅವರ ಗೆಳೆಯರು ಆಪ್ತರೆಲ್ಲಾ ಸೆರಿ ಅವರ "ಶಷ್ಠ್ಯಬ್ದಿಪೂರ್ತಿ ಸಮಾರಂಭ " ವನ್ನು ಆಯೋಜಿಸಿದ್ದರು. ಆದರೆ ದಿನಕರ ದೇಸಾಯಿಯವರು ನಾಪತ್ತೆಯಾಗಿದ್ದರು. ಒಂದು 'ಚೌಪದಿ' ಯನ್ನು ಬರೆದು ತಮ್ಮ ಅನಿಸಿಕೆಗಳನ್ನು ಸ್ಪಷ್ಟಪಡಿಸಿದರು.

" ನನಗೇಕೆ ಶಷ್ಠ್ಯಬ್ದಿ ಸಾಕು ಬರವಣಿಗೆ

ಕವಿಗೆ ಬೇಕಾಗಿಲ್ಲ ಯಾವ ಮೆರವಣಿಗೆ

ಮೂಲೆಯಲಿ ಕುಳಿತು ಬರೆದರೆ ಒಂದು ಪದ್ಯ

ತಾಯ್ನುಡಿಗೆ ಅರ್ಪಿಸಿದ ಹಾಗೆ ನೈವೇದ್ಯ "

ಎಂಬ ಸಾಲುಗಳು, ಅವರ 'ಮನೋಧರ್ಮ' ವನ್ನು ಪ್ರತಿಪಾದಿಸುತ್ತವೆ.

[ಬದಲಾಯಿಸಿ] ದಿನಕರರ ಆಯ್ದ ಚುಟುಕುಗಳು

  • ಹೆಜ್ಜೆ ಹಾಕುತ ಬನ್ನಿರಿ ಮುಂದೆ, ನೋಡಲು ದಸರೆಯ ಹಬ್ಬವನು.


ಉತ್ಸಾಹದ ಕಿರುಗೆಜ್ಜೆಯ ಕಟ್ಟಿ, ಹಾಡಿರಿ ನಾಡಿನ ಕಬ್ಬವನು.


  • ಮನವು ನಲಿದಾಡಲಿಕೆ ಕಡಲು ಕುಣಿದಾಡುವುದು ಹಸಿರೇ ಉಸಿರಾಡುವುದು ಎಲ್ಲ ಕಡೆಗೆ.


ಗಗನವೇ ಮುತ್ತಿಡುವ ಉತ್ತುಂಗ ಶಿಖರವೇ ಕಳಶವಲ್ಲವೇ ನಮ್ಮ ಬಾಳ ಗುಡಿಗೆ.


  • ಸಾಗರವು ಆಗಸವನ್ನಾಲಂಗಿಸುವ ಕ್ಷಿತಿಜ ನಮ್ಮ ಮನೆಯಂಗಳದ ಕೊನೆಯ ರೇಖೆ.


ನಮ್ಮ ಹೃದಯಾಕಾರ ಸಾಗದ ವಿಸ್ತಾರ ಅದರಂತೆ ಆಳವೂ ಆಗದೇಕೆ ?


  • ಶೇಕಡಾ ತೊಂಬತ್ತು ಹೊಡೆಯುವವು ಗೋತಾ ಉಳಿದ ಹತ್ತರ ಪೈಕಿ ಏಳೆಂಟು ಸತ್ತು ಒಂದೆರಡು ಬದುಕಿದರೆ


ಅವು ಮಾತ್ರ ಮುತ್ತು


  • ಇವನು ಅಂಕೋಲೆಯವ ಮುದುಕಾಗಿ ಸತ್ತ ಇವನ ಕೈಯೊಳಗಿತ್ತು ಚೌಪದಿಯ ಬೆತ್ತ


ಹಾವಳಿಯನೆಬ್ಬಿಸಿದ ಈ ಬೆತ್ತದಿಂದ ಕಹಿ ವಿಡಂಬನ ಗುಳಿಗೆ ಕನ್ನಡಕ ತಂದ

[ಬದಲಾಯಿಸಿ] ಮರಣ

ದಿನಕರದೇಸಾಯಿಯವರು, ಅನೇಕ ಸಾಮಾಜಿಕ ಸಮಸ್ಯೆಗಳಿಗೆ ತಮ್ಮ ಪ್ರತಿಕ್ರಿಯೆಯನ್ನು ಸಮರ್ಥವಾಗಿ ನೀಡಿದ್ದಾರೆ. ಸಮಯಬಂದಾಗ, ಅವರ ಪರಿಮಿತಿಯಲ್ಲಿ ಅನೇಕ ಜನಪರ ಕಾರ್ಯಗಳನ್ನು ಮಾಡಿ ಅನುಕರಣೀಯರಾಗಿದ್ದಾರೆ. ಆದರ್ಶಮಯ ಜೀವನವನ್ನು ನಡೆಸಿದ ಜನಪರ-ಸಾಹಿತಿ, 'ದಿನಕರ್' ರವರು, ನವೆಂಬರ್, ೬, ರ ೧೯೮೨ ರಲ್ಲಿ ತಮ್ಮ ಕೊನೆಯುಸಿರೆಳೆದರು. ಹುಟ್ಟಿನಿಂದ ಮರಣದ ತನಕ ಬಡತನದಲ್ಲೇ ಜೀವಿಸಿದ ವ್ಯಕ್ತಿ. 'ದಿನಕರ ದೇಸಾಯಿ'ಯವರು ಇಂದಿರಾ ದೇಸಾಯಿಯವರನ್ನು ಲಗ್ನವಾದರು. ಆಕೆ ಸನ್, ೨೦೦೨ ರಲ್ಲಿ ತೀರಿಕೊಂಡರು. ಈ ದಂಪತಿಗಳಿಗೆ ಇಬ್ಬರು ಮಕ್ಕಳು. ಹಿರಿಯ ಮಗಳು ಉಷಾ ಪ್ರಧಾನ್, ಮುಂಬೈನಲ್ಲಿ ವಾಸಿಸುತ್ತಿದ್ದಾರೆ. ಕಿರಿಯಮಗಳು, ನಿಶಾ ವೆಂಗ್ ಸರ್ಕರ್, 'ಬರೋಡ'ದಲ್ಲಿದ್ದಾರೆ.

ಹೊರ ಸಂಪರ್ಕ : [[೧]]

ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ