ತೀ ನಂ ಶ್ರೀ
(ನವಂಬರ್ ೨೬, ೧೯೦೬ - ಸಪ್ಟಂಬರ್ ೭, ೧೯೬೬)
ಪ್ರೊಫೆಸರ್ ತೀರ್ಥಪುರ ನಂಜುಂಡಯ್ಯ ಶ್ರೀಕಂಠಯ್ಯ ಕನ್ನಡದ ಪ್ರಮುಖ ಸಾಹಿತಿಗಳಲ್ಲೊಬ್ಬರು, ಹಾಗೂ ಕನ್ನಡದ ಶ್ರೇಷ್ಠ ವಿದ್ವಾಂಸ ಹಾಗೂ ವಿಮರ್ಶಕರಾಗಿದ್ದರು. ಸೃಜನಶೀಲ ಲೇಖಕರಾಗಿದ್ದ ಅವರ ಸಂಶೋಧನಾತ್ಮಕ ಬರವಣಿಗೆಗಳಲ್ಲಿಯೂ ಕಾವ್ಯಸ್ಪರ್ಶವನ್ನು ಕಾಣಬಹುದಾಗಿತ್ತು. ಅವರು ಮೈಸೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು ಆಗಿದ್ದುದಲ್ಲದೆ ಕಲಾನಿಕಾಯದ ಡೀನ್ ಆಗಿದ್ದರು. ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕನ್ನಡ ವಿಭಾಗದ ಮೊಟ್ಟ ಮೊದಲ ಪ್ರಾಧ್ಯಾಪಕರೂ ಆಗಿದ್ದರು. ಅವರು ಆದರ್ಶ ಪ್ರಾಧ್ಯಾಪಕರು ಮತ್ತು ಶ್ರೇಷ್ಠ ವಾಗ್ಮಿಯೆಂದು ಪ್ರಸಿದ್ಧರಾಗಿದ್ದರು. ಇಂದು ಜೀವನದ ಅನೇಕ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಹಲವಾರು ಜನ ಮೇಧಾವಿಗಳು ತೀ.ನಂ.ಶ್ರೀ ಅವರ ಶಿಷ್ಯರಾಗಿದ್ದವರು. ತೀ.ನಂ.ಶ್ರೀ ಅವರು ಕಾವ್ಯಮೀಮಾಂಸೆ, ಸಾಹಿತ್ಯ ವಿಮರ್ಶೆ, ಛಂದಸ್ಸು, ಕಾವ್ಯ, ಪ್ರಬಂಧ ಸಾಹಿತ್ಯ, ಅನುವಾದ ಸಾಹಿತ್ಯ, ಗ್ರಂಥ ಸಂಪಾದನೆ ಮತ್ತು ಭಾಷಾವಿಜ್ಞಾನ - ಈ ವಿಷಯಗಳಲ್ಲಿ ವಿಶೇಷವಾದ ತಜ್ಞತೆಯನ್ನು ಪಡೆದಿದ್ದು, ಈ ಕ್ಷೇತ್ರಗಳನ್ನು ಶ್ರೀಮಂತಗೊಳಿಸಿದ್ದಾರೆ. "ಒಲುಮೆ" ಕನ್ನಡದ ಮೊಟ್ಟಮೊದಲನೆಯ ಪ್ರೇಮಗೀತೆಗಳ ಸಂಕಲನವಾಗಿದ್ದು, ಕೆ.ಎಸ್.ನರಸಿಂಹಸ್ವಾಮಿ ಅವರ "ಮೈಸೂರು ಮಲ್ಲಿಗೆ" ಸಂಕಲನದ ಮೇಲೆ ಗಾಢವಾದ ಪ್ರಭಾವವನ್ನು ಬೀರಿದೆ. "ನಂಟರು" ಕನ್ನಡದ ಮಹತ್ವದ ಲಲಿತ ಪ್ರಬಂಧಗಳ ಸಂಕಲನಗಳಲ್ಲೊಂದು. ರಾಕ್ಷಸನ ಮುದ್ರಿಕೆ ವಿಶಾಖ ದತ್ತನ ಮುದ್ರಾರಾಕ್ಷಸ, ನಾಟಕದ ಯಶಸ್ವಿ ಭಾಷಾಂತರ ಮಾತ್ರವಾಗಿರುವುದಲ್ಲದೆ, ಸೃಜನಶೀಲ ರೂಪಾಂತರವೂ ಆಗಿದೆ.
ಪರಿವಿಡಿ |
ಜನನ [ಬದಲಾಯಿಸಿ]
ತೀರ್ಥಪುರ ನಂಜುಂಡಯ್ಯ ಶ್ರೀಕಂಠಯ್ಯನವರು, ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ತೀರ್ಥಪುರವೆಂಬ, ಸಾಧಾರಣ ಹಳ್ಳಿಯ ಶ್ಯಾನುಭೋಗರ ಮಗನಾಗಿ, ೧೯೦೬ ರಲ್ಲಿ, ಜನಿಸಿದರು. ಇದು ಹಳ್ಳಿಯಾದಾಗ್ಯೂ, ಐತಿಹಾಸಿಕ ಸ್ಥಳವೆಂದು ಪ್ರಸಿದ್ಧಿಯಾಗಿತ್ತು. ವಿಜಯನಗರ ಸಾಮ್ರಾಜ್ಯ ಒಡೆದಮೇಲೆ, ತಲೆಯೆತ್ತಿಕೊಂಡ ಹಲವಾರು ಪಳೆಯಪಟ್ಟುಗಳಲ್ಲಿ ಒಂದಾದ ಹಾಗಲವಾಡಿ, ಚರಿತ್ರೆಯಮೂಲಕ ಚಿರಪರಿಚಿತವಾದ ಜಾಗ. ಇದು, ಚಿಕ್ಕನಾಯಕನಹಳ್ಳಿಯ ಪೂರ್ವಕ್ಕೆ, ಸುಮಾರು ೧೭ ಮೈಲಿ ದೂರದಲ್ಲಿದ್ದ ಹಾಗಲವಾಡಿ, ನೆಲಕಚ್ಚಿದಾಗ ಆಸ್ಥಾನಮಂತ್ರಿ ಬ್ರಾಹ್ಮಣರು ; ಬಡವರು. ತೀರ್ಥಪುರಕ್ಕೆ ವಲಸೆಬಂದು, ನೆಲೆಸಿದವರಲ್ಲಿ , ತೀ. ನಂ. ಶ್ರೀಯವರ ಪೂರ್ವಜರೂ ಇದ್ದರೆಂದು ಇತಿಹಾಸಕಾರರು ದಾಖಲು ಮಾಡಿದ್ದಾರೆ. ತಂದೆ, ನಂಜುಂಡಯ್ಯ. ತಾಯಿ, ಭಾಗೀರಥಮ್ಮ. ಶ್ರೀಕಂಠಯ್ಯನವರು. ೯ ನೆಯವಯಸ್ಸಿನಲ್ಲಿದ್ದಾಗಲೇ ತಾಯಿಯವರು ತೀರಿಕೊಂಡರು. ಈ ಅನಾಥ ಬಾಲಕನ ಲಾಲನೆ-ಪಾಲನೆಯನ್ನು ಅವರ ಸೊದರತ್ತೆ,(ವಿಧವೆ) ಮಾಡಿದರು. ಅವರ ಲೋಯರ್ ಸೆಕೆಂಡರಿ ವಿದ್ಯಾಭ್ಯಾಸ ಕನ್ನಡದಲ್ಲಿ ಚಿಕ್ಕನಾಯಕನಹಳ್ಳಿಯಲ್ಲಿ ನಡೆಯಿತು. ಪ್ರಾಥಮಿಕ ಶಾಲೆ ವ್ಯಾಸಂಗವನ್ನು ತುಮಕೂರು ಸರ್ಕಾರಿ ಕಾಲೇಜಿಯೇಟ್ ಮುಗಿಸಿದರು. ೧೯೨೩ ರಲ್ಲಿ ಎಂಟ್ರೆನ್ಸ್ ಪರೀಕ್ಷೆಗೆ ಕುಳಿತುಕೊಂಡರು. ಬಿ. ಎ. ಪದವಿಯನ್ನು ಪಡೆದರು. ಆಗ ಮೈಸೂರಿನ ಧೊರೆಯಾಗಿದ್ದ, ನಾಲ್ಮಡಿ ಕೃಷ್ಣರಾಜ ವೊಡೆಯರ್ ರವರ ಕೈಗಳಿಂದ ೬ ಚಿನ್ನದ ಮೆಡಲ್ ಗಳನ್ನು ಪಡೆದರು. ಅವರಿಗೆ 'ಕನ್ನಡದಲ್ಲಿ ಎಮ್.ಎ.'ಮಾಡುವ ಆಸೆ. ಆದರೆ, ಅದರ ವ್ಯವಸ್ಥೆ ಇರಲಿಲ್ಲ. ಅವರ ಮನೆಯಲ್ಲಿ ಎಲ್ಲೆಲ್ಲೂ ಓದು, ವಿದ್ಯಾರ್ಜನೆಯ ವಾತಾವರಣ ತುಂಬಿತ್ತು. ಅವರ ಮನೆಯ ಪುಸ್ತಕ ಭಂಡಾರದಲ್ಲಿ ೫,೦೦೦, ಪುಸ್ತಕಗಳಿದ್ದವು.
ನೌಕರಿ [ಬದಲಾಯಿಸಿ]
ಎಮ್.ಸಿ.ಎಸ್ ಪರೀಕ್ಷೆ ಮುಗಿಸಿ, ಶ್ರೀರಂಗಪಟ್ಟಣದಲ್ಲಿ, ಕಂದಾಯದ ಇಲಾಖೆಯಲ್ಲಿ ಪ್ರೊಬೇಷನರ್ ಪದವಿಗೆ ಸೇರಿದರು. ಈ ವೄತ್ತಿ ಅವರಿಗೆ ಸಮಾಧಾನ ಕೊಡಲಿಲ್ಲ. ಮೈಸೂರಿನ ಇಂಟರ್ ಮೀಡಿಯೇಟ್ ಕಾಲೇಜ್ ಗೆ ಸೇರಿದರು. ೧೯೨೬ ರಲ್ಲಿ, ಜಯಲಕ್ಷ್ಮಿಯವರನ್ನು ಮದುವೆಯಾದರು. ೧೯೨೯ ರಲ್ಲಿ ಇಂಗ್ಲೀಷ್ ಎಮ್.ಎ ನಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದರು. ಮಹಾರಾಜ ಕಾಲೇಜ್ ನಲ್ಲಿ ಉಪ-ಪ್ರಾಧ್ಯಾಪಕ ಕೆಲಸ ಸಿಕ್ಕಿತು. ತಂದೆಯರು ಅದೇ ಸಮಯದಲ್ಲಿ, ನಿಧನರಾದರು. ಪ್ರಥಮ ಕೃತಿ ಒಲುಮೆ ಪ್ರಕಟ. ೧೯೩೧ ರಲ್ಲಿ ಮಗಳು ನಾಗರತ್ನ,ಜನಿಸಿದಳು . ೧೯೩೨ ರಲ್ಲಿ ಎಮ್. ಎ. ಕನ್ನಡ ಶುರುವಾಯಿತು. ಆನಂತರದಲ್ಲಿ ಹುಟ್ಟಿದ ೨ ಗಂಡುಮಕ್ಕಳು, ಶೈಶವದಲ್ಲೇ ಮರಣ ಹೊಂದಿದರು. ೧೯೪೨,ರಲ್ಲಿ ಮಗ, ನಾಗಭೂಷಣನ ಜನನ. ಆ ಹೊತ್ತಿನಲ್ಲೇ ತೀ. ನಂ. ಶ್ರೀ ಯವರ ಸಹೋದರಿ ಮರಣಹೊಂದಿದರು. ೧೯೪೩ ರಲ್ಲಿ, ಅವರನ್ನು ಸಾಕಿ-ಸಲಹಿದ ಸೊದರತ್ತೆ, ಲಕ್ಷೀದೇವಮ್ಮನವರು ನಿಧನರಾದರು.
ನೌಕರಿ, ಹಲವಾರು ನಗರಗಳಲ್ಲಿ [ಬದಲಾಯಿಸಿ]
ಇಂಟರ್ಮೀಡಿಯೇಟ್ ಕಾಲೇಜ್ ಬೆಂಗಳೂರಿಗೆ ವರ್ಗ. ಮತ್ತೆ, ೧೯೫೭ ರಲ್ಲಿ ಮೈಸೂರು. ಮೈಸೂರು ಸಂವಿಧಾನ ಪರಿಷತ್ ನಲ್ಲಿ ಭಾಷಾಂತರಕಾರರಾಗಿ. ದಾವಣಗೆರೆ ಕಾಲೇಜ್ ನಲ್ಲಿ ಸೂಪೆರಿನ್ಟೆಂಡೆಂಟ್ ಆಗಿ, ಕೋಲಾರ ಕಾಲೇಜ್, ಧಾರವಾಡ ಕರ್ನಾಟಕ ಕಾಲೇಜಿನಲ್ಲಿ ಪ್ರಥಮ ಕನ್ನಡ ಪ್ರಾಧ್ಯಾಪಕರಾಗಿ. ಮೈಸೂರು ಮಹಾರಾಜ ಕಾಲೇಜ್ ಕನ್ನಡ ಕಾಲೆಜ್ ನಲ್ಲಿ ಪ್ರೊಫೆಸರ್,ಆಗಿ ನಿಯುಕ್ತರಾದರು.
ಮೈಸೂರಿನ, ಓರಿಯೆಂಟಲ್ ರಿಸರ್ಚ್ ಶಾಖೆಯಲ್ಲಿ [ಬದಲಾಯಿಸಿ]
ತೀ.ನಂ.ಶ್ರೀ ಯವರ ಜೊತೆಗೆ ದುಡಿದ ಗೆಳೆಯರು, ಪ್ರೊ. ಡಿ.ಎಲ್.ನರಸಿಂಹಾಚಾರ್,ಕಸ್ತೂರಿ ರಂಗಚಾರ್, ಮುಂತಾದವರುಗಳು. ಅಲ್ಲಿನ ಅಪಾರ ಗ್ರಂಥಗಳನ್ನು ವಿಂಗಡಿಸಿ, ೧. ಕನ್ನಡಭಾಷೆಯ ಬೈಬ್ಲಿಯೋಥಿಕ, ಹಾಗೂ, ೨. ಸಂಸ್ಕೄತ ಭಾಷೆಯ ಬೈಬ್ಲಿಯೋಥಿಕ ಗಳನ್ನು,ಒಂದುಕಡೆ ಶೇಖರಿಸಿಟ್ಟರು. ಈ ಅಮೂಲ್ಯ ಗ್ರಂಥ ರಾಶಿಯಿಂದ, ಪ್ರೊ. ಆರ್.ಶ್ಯಾಮಾಶಾಸ್ತ್ರಿಗಳು, ಕೌಟಿಲ್ಯನ ಅರ್ಥಶಾಸ್ತ್ರ ವನ್ನು ಹುಡುಕಿ, ಸಂಪಾದಿಸಿ ಪ್ರಕಟಿಸಿದರು. ಓರಿಯೆಂಟಲ್ ಗ್ರಂಥಾಲಯವನ್ನು, ೧೯೧೮ ರಲ್ಲೇ ಸ್ಥಾಪಿಸಲಾಯಿತು. (ಮೈಸೂರು ವಿಶ್ವವಿದ್ಯಾಲಯ, ೧೯೧೬ ರಲ್ಲಿ ಸ್ಥಾಪನೆಗೊಂಡಿತು.) ಗ್ರಂಥಾಲಯದ ಸಮಿತಿಯಲ್ಲಿ, ಅವರಜೊತೆಗೆ, ಪ್ರೊ.ಸಿ.ಆರ್.ರೆಡ್ಡಿ, ಪ್ರೊ ಎಮ್.ಹಿರಿಯಣ್ಣ, ಎನ್. ರಂಗಾಚಾರ್ಯ, ಮುಂತಾದವರುಗಳು ಸಹಾಯಕರಾಗಿ ದುಡಿಯುತ್ತಿದ್ದರು. ೧೯೪೩ ರಲ್ಲಿ, ತೀ.ನಂ.ಶ್ರೀ ಯವರನ್ನು ಛೇರ್ಮನ್ ಆಗಿ ನಿಯುಕ್ತಿಸಲಾಯಿತು. ಮಾನಸ ಗಂಗೋತ್ರಿ, ಕನ್ನಡ ಅಧ್ಯಯನ ಕೇಂದ್ರಕ್ಕೆ ಅವರು ಭದ್ರವಾದ ತಳಪಾಯ ಹಾಕಿಕೊಟ್ಟರು. ೧೯೫೮ ರಲ್ಲಿ ನಿಘಂಟು ಸಮಿತಿಯಲ್ಲಿ ಅಧ್ಯಕ್ಷರಾದರು.
ಸಾಹಿತ್ಯಾಧ್ಯಯನದಲ್ಲೇ ತಮ್ಮ ಜೀವನದ ಸರ್ವಸ್ವ [ಬದಲಾಯಿಸಿ]
ಅವರು, 'ಕನ್ನಡದ ನವೋದಯ ಸಾಹಿತ್ಯದ ಆಚಾರ್ಯಪುರುಷರುಗಳಲ್ಲೊಬ್ಬರು'. ಅವರು ಬರೆಯದೆ ಹೋದದ್ದು ಹೆಚ್ಚು. ವಿಚಾರ, ವಿದ್ವತ್ತು, ಬಹುಶೃತತ್ವವನ್ನು, ಹೊಂದಿದ್ದರು. ಅವರ ಸಮಯ, ಸದಾ ಗೋಷ್ಠಿಗಳು, ಅಧ್ಯಾಪಕ ವೃತ್ತಿ, ನಿರಂತರ ಓದು, ಇವುಗಳಲ್ಲೇ ವ್ಯಯವಾಗುತ್ತಿತ್ತು. ಬರೆಯಲು ಸಮಯವೇ ಇಲ್ಲ. ಅವರ ಕೈನಿಂದ, ಕನ್ನಡ ಭಾಷಾ ಚರಿತ್ರೆ, ಎಂಬ ಅಮೋಘ ಕೃತಿ, ಬರಬೇಕಾಗಿತ್ತು. ಅತ್ಯಂತ ಕನ್ನಡಾಭಿಮಾನಿ, ಸದಾ ಚಿಂತನೆ, ಬೋಧನೆ. ಓದಿನ ಗೀಳು. ತೀ.ನಂ.ಶ್ರೀ.ಯವರ ಕೈಯಲ್ಲಿ, ಪುಸ್ತಕ ಕೊಟ್ಟರೆ ಸಾಕು; ನೀರು, ಅನ್ನ, ನಿದ್ರೆ, ಏನೂ ಬೇಡ.
"ಓದು ಬರಹಕ್ಕೆ ಶತೃ, ಮಾತು ಕೃತಿಗೆ ಶತೃ". ಇದು, ಪದೇ-ಪದೇ ತೀ.ನಂ.ಶ್ರೀ. ಯವರು ತಮ್ಮ ಗೆಳೆಯರು, ಹಾಗೂ ಅಪ್ತರಬಳಿ ಹೇಳುತ್ತಿದ್ದ ಮಾತುಗಳು. ಜಿ.ಎಸ್.ಎಸ್. ಅವರನ್ನು, "ಪರಿಪೂರ್ಣತೆಯ, ಅತೃಪ್ತ ಅನ್ವೇಷಕ", ಎನ್ನುತ್ತಿದ್ದರು.
ಮರಣ [ಬದಲಾಯಿಸಿ]
೧೯೬೬ ರಲ್ಲಿ ಸೆಪ್ಟೆಂಬರ್ ೭ ರಂದು, ೬೦ ವರ್ಷ ವಯಸ್ಸಿನಲ್ಲಿ ತಮ್ಮ ಗೆಳೆಯರ ಮನೆಗೆ ಕಲ್ಕತ್ತಾಕ್ಕೆ ಹೋಗಿದ್ದರು. ಅಲ್ಲೇ, ಹೃದಯಾಘಾತದಿಂದ ಮರಣಹೊಂದಿದರು.
ರಚಿಸಿದ ಕೃತಿಗಳು [ಬದಲಾಯಿಸಿ]
- ಒಲುಮೆ (ಕವನ ಸಂಕಲನ)
- ನಂಟರು (ಪ್ರಬಂಧ ಸಂಕಲನ)
- ಭಾರತೀಯ ಕಾವ್ಯಮೀಮಾಂಸೆ
- ಕನ್ನಡ ಮಧ್ಯಮ ವ್ಯಾಕರಣ
- ನಂಬಿಯಣ್ಣನ ರಗಳೆ (ಸಂಪಾದನೆ)
- ಬಿಡಿ ಮುತ್ತು (ಕವನ ಸಂಕಲನ)
- ರಾಕ್ಷಸನ ಮುದ್ರಿಕೆ.
