ತಳುಕಿನ ವೆಂಕಣ್ಣಯ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ತಳುಕಿನ ವೆಂಕಣ್ಣಯ್ಯ

ತಳುಕಿನ ಸುಬ್ಬಣ್ಣ ವೆಂಕಣ್ಣಯ್ಯನವರು (ಟಿ.ಎಸ್. ವೆಂಕಣಯ್ಯ) ಕನ್ನಡದ ಮೊದಲ ಪ್ರಾಧ್ಯಾಪಕರು. ಅಲ್ಲಿಯವರೆವಿಗೆ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಮದರಾಸಿಗೆ (ಈಗಿನ ಚೆನ್ನೈ) ಹೋಗಬೇಕಿತ್ತು. ಡಿ.ವಿ.ಜಿ. ಯವರು ಹೆಸರಿಸಿರುವ ಕನ್ನಡದ ಮೂವರು ಮೇರು ಗಿರಿಗಳಲ್ಲಿ ತಳುಕಿನ ವೆಂಕಣ್ಣಯ್ಯನವರು ಮೊದಲಿಗರು. ಟಿ.ಎಸ್.ವಿ ಮತ್ತು ಎ.ಆರ್. ಕೃಷ್ಣ ಶಾಸ್ತ್ರೀಗಳನ್ನು ಆಧುನಿಕ ಕನ್ನಡ ಸಾಹಿತ್ಯದ ಅಶ್ವಿನಿಕುಮಾರರೆಂದು ಕರೆಯುತ್ತಿದ್ದರು. ಇವರು ಪ್ರಾರಂಭಿಸಿದ ಕನ್ನಡ ಎಂ.ಎ. ತರಗತಿಯ ಪ್ರಥಮ ಬ್ಯಾಚಿನಲ್ಲಿದ್ದವರುಗಳಲ್ಲಿ ಒಬ್ಬರು ಕುವೆಂಪುರವರು. ಪುಟ್ಟಪ್ಪನವರು ತಮ್ಮ ಗುರುಗಳನ್ನು ದೇವರೆಂದೇ ತಿಳಿದಿದ್ದರಂತೆ.

ಜೀವನ[ಬದಲಾಯಿಸಿ]

ಟಿ.ಎಸ್.ವೆಂಕಣ್ಣಯ್ಯನವರು ೧೮೮೫ ಅಕ್ಟೋಬರ್ ೧ರಂದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯ ಬಳಿಯಲ್ಲಿದ್ದ ತಳುಕು ಗ್ರಾಮದಲ್ಲಿ ಜನಿಸಿದರು. ತಂದೆ ದೊಡ್ಡ ಸುಬ್ಬಣ್ಣನವರು. ತಾಯಿ ಮಹಾಲಕ್ಷ್ಮಮ್ಮನವರು. ತಂದೆ ಶ್ರೀ ರಾಮ ಭಕ್ತರು ಮತ್ತು ಚುಟುಕಗಳನ್ನು ರಚಿಸುವುದರಲ್ಲಿ ಪರಿಣಿತರಾಗಿದ್ದವರು.ತೆಲುಗಿನಲ್ಲಿ ಮತ್ತು ಕನ್ನಡದಲ್ಲಿ ಚುಟುಕಗಳನ್ನು ಹೊಸೆಯುತ್ತಿದ್ದರಂತೆ. ಕೊಡುಗೈ ದಾನಿ ಸುಬ್ಬಣ್ಣನವರು. ಮನೆಯ ಒಳಗೆ ಏನಿದೆ ಏನಿಲ್ಲ ಎಂಬುದರ ಬಗ್ಗೆ ಚಿಂತೆಯಿಲ್ಲ. ಮನೆ ಮುಂದೆ ಬಂದವರಿಗೆ ಒಂದು ತುತ್ತು ಊಟ ಹಾಕದೆಯೇ ಕಳುಹಿಸುತ್ತಿರಲಿಲ್ಲವಂತೆ. ಇವರು ೧೪ ವರ್ಷದವರಿದ್ದಾಗ ಇವರ ಮದುವೆ ೮ ವರ್ಷದ ಹುಡುಗಿ ಲಕ್ಷ್ಮೀದೇವಮ್ಮನೊಡನೆ ಆಯಿತು. ಹಿರಿಮಗನ ಓದಿನ ಬಗ್ಗೆ ಅವರ ತಮ್ಮನವರಾದ ಶ್ರೀನಿವಾಸರಾಯರು ನೋಡಿಕೊಳ್ಳುತ್ತಿದ್ದರು. ರಾಯರನ್ನು ಎಲ್ಲರೂ ಕಾಕಾ ಎಂದೇ ಸಂಭೋಧಿಸುತ್ತಿದ್ದರು. ಮೊದಲ ಮಗ ಟಿ.ಎಸ್.ವಿಯವರು ಜನಿಸಿದ್ದು ೧೮೮೫ರಲ್ಲಿ. ಅವರ ಮೊದಲ ಪತ್ನಿ ಭಾಗೀರಥಮ್ಮನವರು. ಅವರು ದೈವಾಧೀನರಾದ ಬಳಿಕ ರುಕ್ಮಿಣಿಯಮ್ಮನವರನ್ನು ಮದುವೆಯಾಗಿದ್ದರು. ಟಿ.ಎಸ್.ವಿಯವರು ಬಹಳ ಚಿಕ್ಕ ವಯಸ್ಸಿಗೇ ಅಂದ್ರೆ ೫೫ ತುಂಬುವ ವೇಳೆಗೆ ೧೯೩೯ರಲ್ಲಿ ನಿಧನರಾದರು.

ನೋಡಲು ಎತ್ತರದ ಆಳು, ಟಿ.ಎಸ್.ವಿಯವರು. ಚಿತ್ರದುರ್ಗದಲ್ಲಿ ವಿದ್ಯಾಭ್ಯಾಸ ಮುಗಿಸಿದ ವೆಂಕಣ್ಣಯ್ಯನವರು ಮೈಸೂರಿನಲ್ಲಿ ಓದಿ ಬಿ.ಎ. ಪದವಿ ಸಂಪಾದಿಸಿದರು. ಅನಂತರ ಮುಂಬಯಿಗೆ ತೆರಳಿ ಸ್ವಲ್ಪ ಸಮಯ ಕಾನೂನು ವ್ಯಾಸಂಗ ಮಾಡಿದರು. ಬಿ.ಎ. ಮುಗಿಸಿದ ತರುವಾಯ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಕನ್ನಡ ವಿಷಯದಲ್ಲಿ ಎಂ.ಎ. ಮಾಡಿ ಮುಂದೆ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿದ್ದರು. ತಮ್ಮ ಶಿಷ್ಯರೆಲ್ಲರನ್ನೂ ತಮ್ಮ ಮಕ್ಕಳಂತೆ ಕಂಡು, ಕೈಲಾಗದವರಿಗೆ ಊಟ ವಸತಿಗಳನ್ನೂ ಕೊಟ್ಟು ಪಾಠ ಹೇಳಿಕೊಟ್ಟರು. ಕನ್ನಡ ಎಂ.ಎ.ನ ಮೊದಲನೆಯ ಬ್ಯಾಚಿನಲ್ಲಿ ಕುವೆಂಪು ಸೇರಿದಂತೆ ಹಲವರಿದ್ದರು. ಎಲ್ಲರನ್ನೂ ತಮ್ಮ ಮನೆಗೆ ಕರೆದೊಯ್ದು ಊಟ ಹಾಕಿ, ಪಾಠ ಹೇಳಿಕೊಟ್ಟವರು. ಅವರಂತೆಯೇ ಅಷ್ಟೇ ಎತ್ತರಕ್ಕೇರಿದವರು ಅವರ ತಮ್ಮಂದಿರಲ್ಲೊಬ್ಬರಾದ ತ.ಸು.ಶಾಮರಾಯರು. ಅವರಲ್ಲೂ ಇದೇ ಗುಣವನ್ನು ಕಂಡು, ಅವರ ಶಿಷ್ಯರಾಗಿದ್ದ ಜಿ.ಎಸ್.ಶಿವರುದ್ರಪ್ಪನವರು ಅವರ ಬಗ್ಗೆ ಒಂದು ಕವನವನ್ನೇ ರಚಿಸಿದ್ದರು. ಅದು ಬಹಳ ಜನಪ್ರಿಯವೂ ಹೌದು. ಅದೇ - ಎದೆ ತುಂಬಿ ಹಾಡಿದೆನು ಅಂದು ನಾನು ...

ವೆಂಕಣ್ಣಯ್ಯನವರು ಕೆಲಕಾಲ ಅಂಚೆ ಕಚೇರಿಯಲ್ಲಿ ಕೆಲಸ ಮಾಡಿದರು. ಆ ಮೇಲೆ ದೊಡ್ಡಬಳ್ಳಾಪುರದಲ್ಲಿ ಶಿಕ್ಷಕರದರು. ಬೆಂಗಳೂರಿನ ಕ್ಯಾಂಟೋನ್ಮೆಂಟ್ ಶಾಲೆಯಲ್ಲಿ ಉಪಾಧ್ಯಾಯರಾಗಿದ್ದರು. ಅನಂತರ ಮೂರು ವರ್ಷ ಕಾಲ ಧಾರವಾಡದ ಬಾಸೆಲ್ ಮಿಶನ್ ಹೈಸ್ಕೂಲಿನಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದರು. ಬಳಿಕ ಬೆಂಗಳೂರಿನ ಸೆಂಟ್ ಜೋಸೆಫ್ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿ ,೧೯೧೯ರಲ್ಲಿ ಸೆಂಟ್ರಲ್ ಕಾಲೇಜಿನಲ್ಲಿ ಹಾಗು ೧೯೨೭ರಲ್ಲಿ ಮಹಾರಾಜಾ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾದರು. ಇವರು ಮೈಸೂರು ವಿಶ್ವವಿದ್ಯಾನಿಲಯದ ಮೊದಲ ಕನ್ನಡ ಪ್ರೊಫ಼ೆಸರ್ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ.

ಇವರ ಮನೆಯಲ್ಲಿ ಪ್ರತಿನಿತ್ಯವೂ ಸಾಹಿತ್ಯ ಗೋಷ್ಠಿ ನಡೆಯುತ್ತಿತ್ತಂತೆ. ಅದರಲ್ಲಿ ಪಾಲ್ಗೊಳ್ಳುತ್ತಿದ್ದವರಲ್ಲಿ ಬಿ.ಎಂ.ಶ್ರೀ, ತೀ.ನಂ.ಶ್ರೀ, ಎ.ಆರ್.ಕೃ ಮುಂತಾದವರನ್ನು ಹೆಸರಿಸಬಹುದು. ಡಿ.ವಿ.ಗುಂಡಪ್ಪನವರು ಮಂಕುತಿಮ್ಮನ ಕಗ್ಗದ ಮುಖಪುಟದಲ್ಲಿ ಟಿ.ಎಸ್.ವಿ, ಎ.ಆರ್.ಕೃ ಮತ್ತು ಮೋಕ್ಷಗುಂಡಂ ಕೃಷ್ಣಮೂರ್ತಿಗಳನ್ನು (ಮೋಕ್ಷಗುಂಡಂ ವಿಶ್ವೇಶ್ವರಯ್ಯನವರ ಸಾಕು ಮಗ) ಮೂವರು ಮೇರು ಪರ್ವಗಳೆಂದು ಹೆಸರಿಸಿದ್ದಾರೆ. ಇವರ ಮನೆಯಲ್ಲಿ ನಡೆಯುತ್ತಿದ್ದ ಸಾಹಿತ್ಯ ಗೋಷ್ಠಿಯಲ್ಲಿ ಟಿ.ಎಸ್.ವಿ.ಯವರು ಎಷ್ಟರ ಮಟ್ಟಿಗೆ ತಲ್ಲೀನರಾಗುತ್ತಿದ್ದರೆಂದರೆ, ಒಮ್ಮೆ ಅವರ ನವಜಾತ ಕೂಸು ಮರಣ ಹೊಂದಿ ಮನೆಯವರೆಲ್ಲರೂ ಗೊಳೋ ಎಂದು ಅಳುತ್ತಿದ್ದರೆ, ಒಳಗೆ ಹೋಗಿ ಮತ್ತೆ ಬಂದು ಸಾಹಿತ್ಯ ಗೋಷ್ಠಿ ಯಲ್ಲಿ ಪಾಲ್ಗೊಂಡಿದ್ದರಂತೆ. ಅದಕ್ಕೆ ಅಲ್ಲಿದ್ದ ಒಬ್ಬರು ‍ಯಾರೋ ಹೇಳಿದ್ದರಂತೆ, 'ಒಳಗೆ ಅಳುತ್ತಿದ್ದಾರೆ, ಏನೋ ಅಚಾತುರ್ಯವಾಗಿದೆ, ನೀವು ನೋಡುವುದಿಲ್ಲವೇ?'. ಅದಕ್ಕಿವರು ಎಲ್ಲ ದೈವನಿಯಾಮಕ - ನಡೆಯುವುದೆಲ್ಲವೂ ನಡೆಯುತ್ತಲೇ ಇರುತ್ತದೆ ಎಂದಿದ್ದರಂತೆ. ಎಂದಿಗೂ ಹೆಚ್ಚಿನ ಸಂತೋಷ ಅಥವಾ ದು:ಖ ವ್ಯಕ್ತಪಡಿಸದ ವ್ಯಕ್ತಿತ್ವ ಅವರದ್ದು.

ವೆಂಕಣ್ಣಯ್ಯನವರು ತಮ್ಮ ಅಮೋಘ ವ್ಯಕ್ತಿತ್ವಕ್ಕೆ ಹೆಸರಾಗಿದ್ದರು. ನಿರ್ಲಿಪ್ತತೆ, ನಿಸ್ಪ್ರುಹತೆ, ಮಾನವೀಯ ಗುಣಗಳಿಗೆ ಅವರು ಮಾದರಿಯಾಗಿದ್ದರು. ಸಾಹಿತ್ಯಾಸಕ್ತಿ, ಇನ್ನೊಬ್ಬರಲ್ಲಿರುವ ಸಾಹಿತ್ಯಾತ್ಮಕ ಶಕ್ತಿಯನ್ನು ಗುರುತಿಸಿ ಅವರನ್ನು ಬೆಳೆಸುವಲ್ಲಿ ವೆಂಕಣ್ಣಯ್ಯನವರು ಅಗ್ರಗಣ್ಯರು. ಬಿಎಂಶ್ರೀ ಅವರೇ ಹೇಳುವಂತೆ ವೆಂಕಣ್ಣಯ್ಯನವರು ನಿಧನರಾದಾಗ "ನಾವು ಆಶ್ರಯ ಪಡೆದಿದ್ದ ಹಡಗು ಮುಳುಗಿತು" ಎಂದು ಕಂಬನಿ ಮಿಡಿದಿದ್ದಾರೆ. ಅವರ ಜೀವನಶೈಲಿ ಇತರರಿಗೆ ಮಾರ್ಗದರ್ಶನವಾಗಿತ್ತು. ಭಗವದ್ಗೀತೆಯನ್ನು ಓದಿ ಅದರಂತೆ ನಡೆದ ವಿಶಿಷ್ಟ ವ್ಯಕ್ತಿ ವೆಂಕಣ್ನಯ್ಯನವರು.

ಒಮ್ಮೆ ಒಬ್ಬರು ಸ್ವಾಮಿಗಳು ಅವರಿಗೆ ಹೇಳಿದ್ದರಂತೆ - ವೆಂಕಣ್ಣಯ್ಯ ನಿನಗೆ ಪುನರ್ಜನ್ಮವಿಲ್ಲ ಎಂದು. ಅದೆಷ್ಟರ ಮಟ್ಟಿಗೆ ಸತ್ಯವೋ ಬಲ್ಲವರಾರು? ಆದರೆ ಆ ಆತ್ಮದ ನಿರ್ಲಿಪ್ತತೆಯನ್ನು ನೋಡಿದರೆ ಆತ್ಮದ ಬಗ್ಗೆ ನಂಬಿಕೆ ಇರುವವರು ಈ ಮಾತುಗಳನ್ನು ನಂಬುವರೇನೋ.

ಹಾಗೆಯೇ ತಮಾಷೆಗಾಗಿ ಒಮ್ಮೆ ಕೈಲಾಸಂರವರು ಇವರ ಎತ್ತರವನ್ನು ಚುಡಾಯಿಸಲು, 'ಸಾರ್ ಅಲ್ಲೇ ಮೇಲೆ ಸ್ವರ್ಗದಲ್ಲಿ ನನ್ನ ಪೂರ್ವಜರು ಕ್ಷೇಮವೇ ಸ್ವಲ್ಪ ನೋಡಿಬಿಡಿ', ಎಂದಿದ್ದರಂತೆ.

ಕೃತಿಗಳು[ಬದಲಾಯಿಸಿ]

ಜೀವನ ಚರಿತ್ರೆ[ಬದಲಾಯಿಸಿ]

  • ಶ್ರೀ ರಾಮಕೃಷ್ಣ ಪರಮಹಂಸರ ಚರಿತ್ರೆ (ಎ.ಆರ್.ಕೃಷ್ಣಶಾಸ್ತ್ರಿಗಳ ಜೊತೆಗೆ)

ಲೇಖನ ಸಂಕಲನ[ಬದಲಾಯಿಸಿ]

  • ಕನ್ನಡ ಸಾಹಿತ್ಯ ಮತ್ತು ಇತರ ಲೇಖನಗಳು

ಅನುವಾದ[ಬದಲಾಯಿಸಿ]

ಶ್ರೀ ರಾಮಕೃಷ್ಣ ಪರಮಹಂಸರ ಲೀಲಾ ಪ್ರಸಂಗ (ಬಂಗಾಲಿಯಿಂದ)

ಸಂಪಾದಿತ[ಬದಲಾಯಿಸಿ]

  • ಬಸವದೇವರಾಜ ರಗಳೆ
  • ಕರ್ನಾಟಕ ಕಾದಂಬರಿ ಸಂಗ್ರಹ
  • ಹರಿಶ್ಚಂದ್ರ ಕಾವ್ಯ ಸಂಗ್ರಹ
  • ಕುಮಾರವ್ಯಾಸ ಭೀಷ್ಮಪರ್ವ ಸಂಗ್ರಹ (ಡಿ.ಎಲ್.ಎನ್. ಜೊತೆಗೆ)
  • ಸಿದ್ಧರಾಮ ಚಾರಿತ್ರ್ಯ (ಡಿ.ಎಲ್.ಎನ್. ಜೊತೆಗೆ)