ಡಿ. ಕೆ. ಪಟ್ಟಮ್ಮಾಳ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದಾಮಲ್ ಕೃಷ್ಣಸ್ವಾಮಿ ಪಟ್ಟಮ್ಮಾಳ್
ಡಿ.ಕೆ ಪಟ್ಟಮ್ಮಾಳ್ (ಬಲ) ಮತ್ತು ಅವರ ಸಹೋದರ ಡಿ.ಕೆ ಜಯರಾಂ
ಹಿನ್ನೆಲೆ ಮಾಹಿತಿ
ಮೂಲಸ್ಥಳಕಾಂಚೀಪುರಂ, ತಮಿಳು ನಾಡು, ಭಾರತ
ಸಂಗೀತ ಶೈಲಿಕರ್ನಾಟಕ ಸಂಗೀತ ಮತ್ತು ಹಿನ್ನಲೆ ಗಾಯನ
ವೃತ್ತಿಗಾಯಕಿ
ಸಕ್ರಿಯ ವರ್ಷಗಳು೧೯೨೯–೨೦೦೯
L‍abelsHMV, EMI, RPG, AVM Audio, Inreco, Charsur Digital Workshop etc.

ದಾಮಲ್ ಕೃಷ್ಣಸ್ವಾಮಿ ಪಟ್ಟಮ್ಮಾಳ್ (ತಮಿಳು: தாமல் கிருஷ்ணசுவாமி பட்டம்மாள்) (೨೮ ಮಾರ್ಚ್ ೧೯೧೯ – ೧೬ ಜುಲೈ ೨೦೦೯) ಕರ್ನಾಟಕ ಸಂಗೀತದ ಮೇರು ಗಾಯಕಿ ಮತ್ತು ಅನೇಕ ಭಾರತೀಯ ಭಾಷೆಯ ಚಲನಚಿತ್ರಗಳಲ್ಲಿ ಹಿನ್ನಲೆ ಗಾಯಕರು. ಇವರು ಸುಮಾರು ೬ ದಶಕಗಳ ಕಾಲ ಕರ್ನಾಟಕ ಸಂಗೀತಾರಾಧಕರನ್ನು ತಮ್ಮ ಸುಮಧುರ ಕಂಠಶ್ರೀಯಿಂದ ತಣಿಸಿ, ಕರ್ನಾಟಕ ಶಾಸ್ತ್ರೀಯ ಸಂಗೀತ ಶೈಲಿಗೆ ಘನತೆ, ಗೌರವಗಳನ್ನು ತಂದುಕೊಟ್ಟವರಲ್ಲಿ ಒಬ್ಬರು. ಮನೆಯಲ್ಲಿ ತಂದೆ ತಾಯಿಯರೇ ಸಂಗೀತ ಕ್ಷೇತ್ರದಲ್ಲಿ ಸಾಧಕರು. ಅಂತಹ ಮನೆಯವಾತಾವರಣ ಸಹಜವಾಗಿ ಪಟ್ಟಮ್ಮಾಳ್ ರವರನ್ನು ಸಂಗೀತದೆಡೆಗೆ ಕರೆದೊಯ್ಯಿತು. ಅವರ ಅಭಿಮಾನಿಗಳಿಗೆ 'ಪಟ್ಟಾ,' ಎಂದೇ ಸಂಗೀತಾಸಕ್ತರ ವಲಯದಲ್ಲಿ ಜನಪ್ರಿಯರಾಗಿದ್ದ ಸಂಗೀತ ಸಾಮ್ರಾಜ್ಯದ ದಿಗ್ಗಜರಾಗಿದ್ದ, ವಿದುಷಿ, ಶ್ರೀಮತಿ. ಪಟ್ಟಮ್ಮಾಳ್, ಶ್ರೀಮತಿ, ಎಮ್. ಎಸ್. ಸುಬ್ಬುಲಕ್ಷ್ಮಿ, ಶ್ರೀಮತಿ, ಎಮ್. ಎಲ್. ವಸಂತಕುಮಾರಿ ಮಹಿಳಾ ತ್ರಿಮೂರ್ತಿಗಳೆಂದೇ ಪ್ರಖ್ಯಾತರಾಗಿ ಗುರುತಿಸಲ್ಪಟ್ಟಿದ್ದಾರೆ. ಶ್ರೀಮತಿ. ಡಿ. ಕೆ. ಪಟ್ಟಮ್ಮಾಳ್ ರವರು, ಕರ್ನಾಟಕ ಸಂಗೀತದಲ್ಲಿ ಅತ್ಯಂತ ಕ್ಲಿಷ್ಟಕರವಾಗಿದ್ದ " ರಾಗಂ, ತಾನಂ, ಪಲ್ಲವಿ " ಯನ್ನು ಸಂಗೀತ ಕಛೇರಿಗಳಲ್ಲಿ ಸುಲಲಿತವಾಗಿ ಬಳಸಿದ ಮೊಟ್ಟಮೊದಲ ಮಹಿಳಾರತ್ನರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಜನನ ಹಾಗೂ ಬಾಲ್ಯ[ಬದಲಾಯಿಸಿ]

ಪಟ್ಟಮ್ಮಾಳ್ ರವರು, ತಮಿಳುನಾಡಿನ ಕಾಂಚೀಪುರದ ಸುಸಂಸ್ಕೃತ ಸಂಪ್ರದಾಯಸ್ಥ ಬ್ರಾಹ್ಮಣರ ಕುಟುಂಬದಲ್ಲಿ ೧೯೧೯ ರಲ್ಲಿ ಜನಿಸಿದರು. ಅವರ ಮನೆಯ ಪರಿಸರ ಸಂಗೀತಕ್ಕೆ ಅನುಕೂಲವಾಗಿತ್ತು. ತಂದೆಯವರು, ಧಮಾಳ್ ಕೃಷ್ಣಸ್ವಾಮಿ ದೀಕ್ಷಿತರು. ಸಂಗೀತದಲ್ಲಿ ಆಸ್ತೆಯುಳ್ಳವರು. ಬಾಲ್ಯದ ಹೆಸರು, 'ಅಲಮೇಲು,' ಎಂದು. ಅವರ ಪ್ರಭಾವ ಚಿಕ್ಕತನದಿಂದ ಅವರಮೇಲೆ ಗಾಢವಾದ ಪರಿಣಾಮ ಬೀರಿತು. ಪ್ರಾಥಮಿಕ ಸಂಗೀತದ ಕಲಿಕೆ ಅವರ ತಾಯಿ, ಕಾಂತಿಮತಿಯವರಿಂದ ಆರಂಭವಾಯಿತು. ತಮ್ಮ ೧೦ ನೆಯ ವಯಸ್ಸಿನಲ್ಲೇ ಮದ್ರಾಸ್ ಆಕಾಶವಾಣಿಯಲ್ಲಿ ಸಂಗೀತ ಕಾರ್ಯಕ್ರಮವನ್ನು ನೀಡಿ (AIR) ಎಲ್ಲರನ್ನೂ ಚಕಿತಗೊಳಿಸಿದ್ದರು. ೧೯೩೨ ರ ಹೊತ್ತಿಗೆ ತಮ್ಮ ಮೊದಲ ಸಾರ್ವಜನಿಕ ಸಂಗೀತ ಕಚೇರಿ ನಡೆದಿದ್ದು, ' ರಸಿಕ ರಂಜನಿ ಸಭಾ,' ದ ಆಶ್ರಯದಲ್ಲಿ. ಅಲ್ಲಿಂದ ಆರಂಭವಾದ ಸಂಗೀತ ಪಯಣ ನಿರಂತರವಾಗಿ ತಡೆಯಿಲ್ಲದೆ ಸಾಗಿತ್ತು. ೧೯೩೨ ರ ನಂತರ ಮದ್ರಾಸ್ ಗೆ ಬಂದು ನೆಲೆಸಿದ ಪಟ್ಟಮ್ಮಾಳ್ ರವರ ನಿಯಮಿತವಾದ ಸಂಗೀತ ಕಚೇರಿಗಳು ಅವ್ಯಾಹತವಾಗಿ ನಡೆದವು. ೬ ವರ್ಷಗಳ ಸಂಗೀತ ಸಾಧನೆಯ ಬಳಿಕ ಅವರು 'ಈಶ್ವರನ್,' ರವರನ್ನು ವಿವಾಹವಾದರು.

ಸಂಗೀತಕಾರರ ರಚನೆಗಳು[ಬದಲಾಯಿಸಿ]

ಪಟ್ಟಮ್ಮಾಳ್ ರವರು ತಮ್ಮ ಇಂಪಾದ ಕಂಠದಿಂದ ಮುತ್ತುಸ್ವಾಮಿ ದೀಕ್ಷಿತರ ಹಾಗೂ ಇತರ ಕೆಲವು ಕೃತಿಗಳನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದರು. ದೇಶ ಭಕ್ತಿ ಮತ್ತು ಕ್ರಾಂತಿಕವಿ ಸುಬ್ರಹ್ಮಣ್ಯ ಭಾರತಿಯವರ ಕೆಲವು ರಚನೆಗಳನ್ನು ಪಟ್ಟಮ್ಮಾಳ್ ರವರ ಮುಖದಿಂದ ಕೇಳಿದಾಗ ಆಗುತ್ತಿದ್ದ ಆನಂದ, ಅನುಪಮ ಹಾಗೂ ಅವರ್ಣನೀಯವೆಂದು ಸಂಗೀತ-ತಜ್ಞರಸಿಕರ ಅಭಿಪ್ರಾಯ. ಹಾಗೆಯೇ, ' ಪಾಪ ನಾಶಂ ಶಿವಂ, ರವರ ಕೃತಿರಚನೆಗಳನ್ನೂ ಹಾಗೆಯೇ ಹಾಡಿ ಅವಕ್ಕೆ ಮೆರುಗುತುಂಬಿದ್ದರು. 'ದೇಶಭಕ್ತಿ' ಮತ್ತು 'ದೈವಭಕ್ತಿ' ಯ ಗೀತೆಗಳು ಅವರಿಗೆ ಪ್ರಿಯವಾಗಿದ್ದವು. ಸಿನಿಮಾ ಕ್ಷೇತ್ರದಲ್ಲಿ ಸಾಂದರ್ಭಿಕವಾಗಿ ಬರುವ ಪ್ರಣಯ ಗೀತೆಗಳನ್ನು ಅವರು ಹಾಡಲು ಒಪ್ಪಲಿಲ್ಲ. ಹೇಗೋ ಬಲವಂತಕ್ಕೆ ೧೯೩೯ ರಲ್ಲಿ , 'ತ್ಯಾಗಭೂಮಿ' ಚಿತ್ರಕ್ಕೆ ಹಾಡಿದ ಗೀತೆ, ಬ್ರಿಟಿಷ್ ಸರ್ಕಾರ ನಿಷೇಧಹಾಕಿದ್ದರಿಂದ ಅದು ರಸಿಕ-ಜನರನ್ನು ಮುಟ್ಟಲಿಲ್ಲ. ಹಾಗಾದರೂ ಒಟ್ಟಾರೆ ಅವರು ೫೦ ಕ್ಕೂ ಹೆಚ್ಚು ಚಿತ್ರಗಳಲ್ಲಿ ತಮ್ಮ ಕಂಠದಾನಮಾಡಿದ್ದಾರೆ. ೨೦೦೦ ನೆ ಇಸವಿಯಲ್ಲಿ ' ಹೇರಾಮ್ ,' ಚಿತ್ರಕ್ಕೆ ಹಾಡಿದ ಗೀತೆ ಕೊನೆಯದು. ಅವರ ವಿಶೇಷತೆಯೆಂದರೆ, ಕೆಲವು ಹಾಡುಗಳಿಗೆ ಪುರುಷ ದನಿಯನ್ನು ಅವರೇ ನೀಡಿದ್ದರು.

ಮೈಸೂರಿನ ಜೊತೆ ಕೊಂಡಿಯನ್ನು ಹೊಂದಿದ್ದರು[ಬದಲಾಯಿಸಿ]

ಸುಪ್ರಸಿದ್ಧ ವ್ಯಂಗ್ಯ ಚಿತ್ರಕಾರ, 'ಆರ್. ಕೆ. ಲಕ್ಷ್ಮಣ್', ಮತ್ತು 'ಆರ್. ಕೆ. ನಾರಾಯಣ್,' ರ ಸೋದರಿ, ಆರ್. ಕೆ. ಪಟ್ಟಾಭಿಯವರ ಪುತ್ರಿ, 'ಶಾಂತಾ,' ಳನ್ನು ಪಟ್ಟಮ್ಮಾಳ್ ರವರ ಪುತ್ರ, 'ಲಕ್ಷ್ಮಣ್ ಕುಮಾರ್,' ಮದುವೆಯಾಗಿದ್ದಾರೆ. ಖ್ಯಾತ ಮೃದಂಗ ವಾದಕ, 'ಪಾಲ್ಘಾಟ್ ಮಣಿ ಅಯ್ಯರ್,' ರವರ ಮಗಳನ್ನು ಪಟ್ಟಮ್ಮಾಳ್ ರವರ ಮಗನಿಗೆ ತಂದುಕೊಂಡಿದ್ದರು. ಹಾಗಾಗಿ ಪಟ್ಟಮ್ಮಾಳ್ ರವರ ಅನೇಕ ಸಂಗೀತ ಕಚೇರಿಗಳಲ್ಲಿ ಪಾಲ್ಘಾಟ್ ಮಣಿ ಅಯ್ಯರ್, ಮೃದಂಗದ ಸಾಂಗತ್ಯನೀಡಿದ್ದರು.

ಪ್ರಶಸ್ತಿ ಹಾಗೂ ಸನ್ಮಾನಗಳು ಪಟ್ಟಮ್ಮಾಳ್ ರವರನ್ನು ಅರಸಿಕೊಂಡು ಬಂದವು[ಬದಲಾಯಿಸಿ]

ಪಟ್ಟಮ್ಮಾಳ್ ರವರ ಶಿಷ್ಯರು ಅನೇಕರು.[ಬದಲಾಯಿಸಿ]

ಅವರಲ್ಲಿ ತಮ್ಮ, 'ಡಿ. ಕೆ . ಜಯರಾಮನ್,' , ಅಕ್ಕನಷ್ಟೇ ಪ್ರತಿಭಾವಂತರು. ೧೯೯೦ ರಲ್ಲಿ 'ಸಂಗೀತ ಕಲಾನಿಧಿ ಪ್ರಶಸ್ತಿ' ಗಳಿಸಿ, ಪಟ್ಟಮ್ಮಾಳ್ ರವರಿಗೆ ಮೊದಲೇ ವಿಧಿವಶರಾದರು. ಪಟ್ಟಮ್ಮಾಳ್ ರವರ ಸೊಸೆ, 'ಲಲಿತಾ ಶಿವಕುಮಾರ್,' ಪಟ್ಟಮ್ಮಾಳ್ ರವರ ಪ್ರಿಯ ಶಿಷ್ಯೆ, ಮೊಮ್ಮಗಳು, ಮತ್ತು ಹೆಸರಾಂತ ಸಂಯೋಜಕಿ. ' ನಿತ್ಯಶ್ರೀ ಮಹಾದೇವನ್', ಪಟ್ಟಮ್ಮಾಳ್ ಪರಿವಾರದ, ಇಂದಿನ ಜನಪ್ರಿಯ-ಗಾಯಕಿ, ಮತ್ತು, ಶಂಕರ್ ಮಹಾದೇವನ್ ರವರ ಪತ್ನಿ.

ಪಟ್ಟಮ್ಮಾಳ್ ರವರ, ೬ ದಶಕಗಳ ದೀರ್ಘಕಾಲದ ಸಂಗೀತಕೊಡುಗೆ ಅನನ್ಯವಾದದ್ದು[ಬದಲಾಯಿಸಿ]

ದೀರ್ಘಕಾಲದ ಅನಾರೋಗ್ಯದಿಂದ ಬಳಲಿದ ೯೦ ವರ್ಷದ ಪ್ರಾಯದ ಪಟ್ಟಮ್ಮಾಳ್ ರವರು, ೧೬, ಜುಲೈ, ೨೦೦೯ ರಂದು ವಿಧಿವಶರಾದರು. ಇಬ್ಬರು ಪುತ್ರರನ್ನೂ, ಕುಟುಂಬವರ್ಗದವರನ್ನೂ, ಅಪಾರಬಂಧುವರ್ಗದವರನ್ನೂ ಹಾಗೂ ಸಂಗೀತಾಭಿಮಾನಿಗಳನ್ನೂ ಅಗಲಿದ್ದಾರೆ.