ಸುಕನ್ಯಾ ಪ್ರಭಾಕರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಡಾ. ಸುಕನ್ಯಾ ಪ್ರಭಾಕರ್ ಇಂದ ಪುನರ್ನಿರ್ದೇಶಿತ)



ಡಾ. ಸುಕನ್ಯಾ ಪ್ರಭಾಕರ್

ಸುಕನ್ಯಾ ಪ್ರಭಾಕರ್ ರವರ ಸಂಗೀತ ಕಛೇರಿಯಲ್ಲಿ ಭಾಗವಹಿಸಿದ ಕಲಾರಾಧಕರು ಅವರ ಸಂಗೀತಜ್ಞಾನವನ್ನು ಗೌರವಿಸಿದ್ದಾರೆ. ೨೦೦೮ ರಲ್ಲಿ ಬೆಂಗಳೂರಿನಲ್ಲಿ ನಡೆದ ಕರ್ಣಾಟಕ ಭಾಗವತ, ಬೃಹತ್ ಗ್ರಂಥದ "ವಿಶ್ವಾರ್ಪಣಾ ಮಹೋತ್ಸವ" ದ ಸಂದರ್ಭದಲ್ಲಿ, ಡಾ. ಸುಕನ್ಯಾ ಪ್ರಭಾಕರ್ ಕಾವ್ಯವಾಚನ ಮಾಡಿದ್ದರು.

ಬಾಲ್ಯದಲ್ಲೇ ಸಂಗೀತಾಸಕ್ತೆ[ಬದಲಾಯಿಸಿ]

ಮೈಸೂರಿನ ಸಂಸ್ಕೃತ ಪಾಠಶಾಲೆಯಲ್ಲಿ ಜರುಗಿದ ಒಂದು ಸಂಗೀತ ಸ್ಪರ್ಧೆಯಲ್ಲಿ ಕಲಾತಪಸ್ವಿ ಚೌಡಯ್ಯನವರ ಘನ-ಅಧ್ಯಕ್ಷತೆಯಲ್ಲಿ ಜರುಗಿದ ಸಂಗೀತ ಸ್ಪರ್ಧಾಕಛೇರಿ ಕಾರ್ಯಕ್ರಮದಲ್ಲಿ ಪುಟ್ಟ ಹುಡುಗಿ, ಸುಕನ್ಯ, 'ಖರಹರಪ್ರಿಯ ರಾಗ'ದ ಒಂದು ಅತಿ ಸುಂದರವಾದ ರಚನೆಯನ್ನು ಹಾಡಿ, ಸಭಿಕರ ಮೆಚ್ಚುಗೆ ಗಳಿಸಿದಳು. ಸ್ಪರ್ಧಾಳುಗಳ ಜೊತೆಯಲ್ಲಿ ಭಾಗವಹಿಸಲು ಅವರಿಗೆ ವಯಸ್ಸಿನ ಪರಿಮಿತಿ ಅಡ್ಡಿಬಂತು. ಆದರೆ ಚೌಡಯ್ಯನವರು ಆ ಬಾಲಕಿಯನ್ನು ಪ್ರೋತ್ಸಾಹಿಸಲು ತಮ್ಮ ಬಳಿಯಿದ್ದ ಬೆಳ್ಳಿಯಬಟ್ಟಲೊಂದನ್ನು ಬಹುಮಾನವಾಗಿ ಅವರಿಗೆ ಕೊಟ್ಟರಂತೆ.

ಸಂಗೀತಾಭ್ಯಾಸ[ಬದಲಾಯಿಸಿ]

ಅವರ ತಾಯಿ, ಶ್ರೀಮತಿ ಲಕ್ಷ್ಮಮ್ಮನವರೇ ಅವರ ಪ್ರಥಮ ಗುರು. ಸುಕನ್ಯಾರವರು, ಲಲಿತಕಲಾ ಕಾಲೇಜ್‍ನಲ್ಲಿ ವಿದುಷಿ. ಗೌರಿಕುಪ್ಪುಸ್ವಾಮಿ, ಪ್ರೊ. ವಿ. ರಾಮರತ್ನಂ, ರವರ ಮಾರ್ಗದರ್ಶನ ಹಾಗೂ ಪ್ರೋತ್ಸಾಹಗಳಿಂದಾಗಿ ಬಿ ಮ್ಯೂಸಿಕ್, ಎಮ್. ಮ್ಯೂಸಿಕ್ ಪರೀಕ್ಷೆಗಳನ್ನು ಉನ್ನತದರ್ಜೆಯಲ್ಲಿ ಮುಗಿಸಿದರು. ಸುಪ್ರಭಾ ಕಾವ್ಯನಾಮದಲ್ಲಿ ಬರೆದ ಲೇಖನಗಳು ಮಂಡಿಸಿದ ಪ್ರಬಂಧಗಳು ಹಲವಾರು ಲಲಿತಕಲಾ ಪ್ರಾಂಶುಪಾಲ್, ಪ್ರೊ. ಬಿ. ಎಸ್. ವಿಜಯರಾಘವನ್, ಡಾ. ಬಿ. ಚನ್ನಕೇಶವಯ್ಯ ಮತ್ತು ವಿ. ವಿ. ನಂಜುಂಡಯ್ಯ ಸ್ವಾಮಿ, ಮೊದಲಾದ ಹಿರಿಯರ ನೆರವಿನಲ್ಲಿ ಕರ್ನಾಟಕ ಸಂಗೀತಕ್ಕೆ ಶ್ರೀ ಜಯಚಾಮರಾಜೇಂದ್ರ ಒಡೆಯರ್ ರವರ ಕೊಡುಗೆ ಎಂಬ ಪ್ರಬಂಧ ಬರೆದರು. ಮಗಳು, ಸುಮನ ಮತ್ತು ಮಗ ಸುಕೀರ್ತಿ.

ಸಂಗೀತವಲಯದ ಸಾಧನೆಗಳು[ಬದಲಾಯಿಸಿ]

ವಿದುಷಿ ಸುಕನ್ಯಾ, ೨೦೦೧ ರಲ್ಲಿ ಪಿ. ಎಚ್. ಡಿ. ಪದವಿಯನ್ನು ಗಳಿಸಿದರು. "ಕರ್ನಾಟಕ ಸಂಗೀತಕ್ಕೆ ಶ್ರೀ ಜಯಚಾಮರಾಜೇಂದ್ರ ಒಡೆಯರ್ ರವರ ಕೊಡುಗೆ", ಎಂಬ ಪ್ರಬಂಧವನ್ನು ಮಂಡಿಸಿ ತಮ್ಮ ಡಾಕ್ಟರೇಟ್ ಪದವಿಯನ್ನು ಹೊತ್ತು ತಂದರು. ತಮ್ಮ ವಿಸ್ತೃತ ವಿಶ್ಲೇಷಣದಲ್ಲಿ ನಿರಂತರ ಶ್ರದ್ಧೆ, ಶ್ರಮ, ಉತ್ಸಾಹ ಅವರ ವ್ಯಕ್ತಿತ್ವದಲ್ಲಿ ಕಂಡುಬರುತ್ತದೆ. ಸುಕನ್ಯ ರವರು ಅಧ್ಯಯನದಲ್ಲಿ ಮೈಸೂರಿನ ಸಾಂಸ್ಕೃತಿಕ ಪರಿಸರ, ಒಡೆಯರ ಮನೆತನ, ವಿವಿಧ ಕ್ಷೇತ್ರಗಳಿಗೆ ಅರಸರ ಕೊಡುಗೆ, ಜಯಚಾಮರಾಜೆಂದ್ರ ಒಡೆಯರ ಜೀವನ ಅವರ ಸಂಗೀತ ಸಾಹಿತ್ಯ ಸಾಧನೆಗಳು ಚೆನ್ನಾಗಿ ಮೂಡಿಬಂದಿವೆ. ಅವರ ಕೃತಿಗಳಲ್ಲಿ ಬಳಸಿದ ಭಾಷೆ, ಛಂದಸ್ಸು, ವಸ್ತು, ರಚನಾಪ್ರಕಾರ, ಬಳಸಿರುವ ರಾಗ-ತಾಳಗಳು, ಮಹಾರಾಜರಿಗೆ ಹಿರಿಯ ವಾಗ್ಗೇಯಕಾರರ ಪ್ರಭಾವ, ಶ್ರೀ ವಿದ್ಯಾರಹಸ್ಯ, (ಜಯಚಾಮರಾಜರು, ಶ್ರೀ ವಿದ್ಯಾ ಉಪಾಸಕರು, ಶ್ರೀ ವಿದ್ಯಾ ಅವರ ಅಂಕಿತನಾಮ). ಶ್ರೀ ಚಕ್ರ, ಷಟ್ ಚಕ್ರಗಳ ಸೂಕ್ಷ್ಮ ಅಧ್ಯಯನ, ಸೋಹಂ ಭಾವನ ಪೂಜಯೇತ್, ಎಂಬ ಅದ್ವೈತನೆಲೆಯ ಅನುಷ್ಠಾನ, ಅಪರೂಪ ರಾಗಗಳ ಸಂಚಾರ, ಹಾಗೇ ಒಡೆಯರ ಆ ಸ್ಥಾನವನ್ನು ಬೆಳಗಿದ ವಿದ್ವನ್ಮಣಿಗಳ ಸ್ಥೂಲಪರಿಚಯ, ಅಗತ್ಯವೆನಿಸುವ ಟಿಪ್ಪಣಿಗಳು, ಆಕರಗ್ರಂಥಗಳು, ಪಾರಿಭಾಷಿಕ ಶಬ್ದಗಳು... ಇತ್ಯಾದಿ ವಿಷಯಗಳೊಂದಿಗೆ ಸಮೃದ್ಧವಾಗಿದ್ದು ಅಧ್ಯನ ಯೋಗ್ಯ, ಸಂಗ್ರಹಯೋಗ್ಯ ಪುಸ್ತವಾಗಿದೆ. ಸುಕನ್ಯಾ ಪ್ರಭಾಕರ್ ಆಕಾಶವಾಣಿ-ದೂರದರ್ಶನದ ಏ ಗ್ರೇಡ್ ಕಲಾವಿದೆ. ತಾವೇ ಎ. ಐ. ಆರ್ ಗಾಗಿ ಅನೇಕ ಕಾರ್ಯಕ್ರಮಗಳನ್ನು ತಯಾರಿಸಿ, ನಿರ್ದೇಶಿಸಿದ್ದಾರೆ. ಸುಕನ್ಯಾರವರ ವಿಶೇಷತೆಗಳೆಂದರೆ, ಸ್ವರಮಾಧುರ್ಯ, ಗಮಕ ಪ್ರೌಡಿಮೆ, ನೆರವಲ್ಲುಗಳ ಲಾಸ್ಯ, ರಾಗದ ರಸಭಾವ ಪ್ರವಾಹ, ಲೀಲಾಜಾಲವಾದ ಶಾರೀರಸಂಚಾರ, ಸಾಹಿತ್ಯದ ಅನನ್ಯ ಭಾವಾಭಿವ್ಯಕ್ತ, ಇವೆಲ್ಲಾ ಆಕೆಯ ಸಂಗೀತದ ವಿಶೇಷತೆಗಳು.

ತಂದೆ, ಸಂಗೀತಾಸಕ್ತ, ಕನ್ನಡಲಿಪಿ-ಸಂಸ್ಕರಣಕಾರ[ಬದಲಾಯಿಸಿ]

ಸುಕನ್ಯಾರವರ, ತಂದೆ, ಹೆಚ್. ಕೆ. ಸುಬ್ಬರಾಯರು, ಕನ್ನಡಲಿಪಿ ಸಂಸ್ಕರಣದಲ್ಲಿ ಪ್ರಸಿದ್ಧರು. ಅವರೊಬ್ಬ ಸ್ವಾತಂತ್ರ್ಯಯೋಧರು, ದೇಶಭಕ್ತರು. ಅನೇಕವೇಳೆ ಸ್ವಾತಂತ್ತ್ರ್ಯಹೋರಾಟದ ಸಮಯದಲ್ಲಿ ಜೈಲಿನಲ್ಲಿ ಕಳೆದರು. ಶಾಸ್ತ್ರೀಯ ಸಂಗೀತ ಅವರ ನಾಡಿನಾಡಿಗಳಲ್ಲೂ ಪ್ರವಹಿಸುತ್ತಿತ್ತು. ತಾಯಿ ಲಕ್ಷ್ಮಮ್ಮನವರು, ಮೊದಲ ಗುರು. ಅವರ ಸೃಜನ ಶೀಲ ಪ್ರತಿಭೆ ಅನನ್ಯ. ತಂದೆ, ಸುಬ್ಬರಾಯರು, ಕನ್ನಡದ ಅಗತ್ಯವಾದ ಸಾಂಪ್ರದಾಯಿಕ, ೧೨೦ ಅಕ್ಷರಗಳನ್ನು ಕೇವಲ ೩೪ ಕ್ಕೆ, ಇಳಿಸಿದ್ದಾರೆ. ಗುಜರಾತಿನ, ಗಾಂಧೀಗ್ರಾಮದ ಕಾಕಾ ಕಾಲೇಲ್ಕರ್ ರವರು ಹಿಂದಿ ಲಿಪಿಯಲ್ಲಿ ಮಾಡಿದ ಸುಧಾರಣೆಗಳಿಂದ ಪ್ರೇರಿತರಾಗಿ, ತಮ್ಮ ಮುದ್ರಣಾಲಯದಲ್ಲೂ ೨೫೦ ಕೇಸುಗಳಿಗೆ ಬದಲಾಗಿ, ೯೬ ಕ್ಕೆ ಸೀಮಿತಗೊಳಿಸಿ ಒಂದು ಕ್ರಾಂತಿಯನ್ನೇ ಮಾಡಿದರು. ಈ ಹೊಸಕ್ರಮ, ಕಂಪ್ಯೂಟರ್ ಮಾನೋಟೈಪ್ ಅಚ್ಚೊತ್ತಿಗೂ ಒಗ್ಗುತ್ತದೆ. ಇಂತಹ ಹೊಸಮಾರ್ಪಾಡುಗಳನ್ನು ಜನರಿಗೆ ತಲುಪಿಸಿ ಒಪ್ಪಿಸಲು, ಹಲವಾರು ಪ್ರಾತ್ಯಕ್ಷಿಕೆಗಳನ್ನು ನಡೆಸಿದರು. ತಾವುಮಾಡಿದ ಸಂಶೋಧನೆಯ ೨೫,೦೦೦ ಪ್ರತಿಗಳನ್ನು ಸ್ವತಃತಾವೇ ಮುದ್ರಿಸಿ ಹಂಚಿದರು. ಸುಪ್ರಸಿದ್ಧ ಬೆರಳಚ್ಚಿ ತಜ್ಞರುಗಳು, ಲಿಪಿಸಂಶೋಧಕರು, ಕರ್ನಾಟಕ ಪಠ್ಯಪುಸ್ತಕ ವಿಭಾಗದ ಸಂಬಂಧಪಟ್ಟ ಅಧಿಕಾರಿಗಳು, ಕನ್ನಡ ಸಾಹಿತ್ಯ ಪರಿಷತ್ತು, ಹಾಗೂ ಆಗಿನ ಕಾಲದ ಸುಪ್ರಸಿದ್ಧ ಸಾಹಿತಿ, ಗೋರೂರು ರಾಮಸ್ವಾಮಿ ಐಯ್ಯಂಗಾರ್, ಸ್ವಾಗತಿಸಿ ಪ್ರೋತ್ಸಾಹನೀಡಿದ್ದರು.

ಸುರಭಿ[ಬದಲಾಯಿಸಿ]

ಸುರಭಿ ಒಂದು ಕಲಾಪ್ರಪಂಚವಿದ್ದಂತೆ. ಸಂಗೀತಕ್ಷೇತ್ರದ ಹತ್ತು ಹಲವು ಆಯಾಮಗಳಿಗೆ ತನ್ನನ್ನು ತೆರೆದುಕೊಂಡಿದೆ. ಹಲವಾರು ಕಲಾವಿದರು, ವಿದ್ವಾಂಸರು, ಕಲಾಸಕ್ತರೊಡನೆ ನಡೆಯುತ್ತಿರುವ ಚಿಂತನ ಕಾರ್ಯಕ್ರಮ, ಸಂಗೀತಾವಿಷ್ಕಾರಗಳು, ಉದಯೋನ್ಮುಖ ಕಲಾವಿದರಿಗೆ ವೇದಿಕೆಯ ಅವಕಾಶ, ಹೊರ ರಾಜ್ಯಗಳ ಪ್ರೌಢಗಾಯಕರುಗಳಿಂದ ಗಾಯನ ಕಾರ್ಯಕ್ರಮಗಳು, ಅಬಲೆಯ ಆಶ್ರಯ ತಾಣವಾಗಿರುವ ಮೈಸೂರಿನ ಶಕ್ತಿಧಾಮದಲ್ಲಿ ಸಂಗೀತ ಸಾಂತ್ವನ, ಚಿಂತನ ಸೌರಭವೆಂಬ ತೈಮಾಸಿಕ, ಕಾರ್ಯಾಗಾರಗಳು, ಧ್ವನಿಸುರುಳಿಗಳು, ಕೆಳವರ್ಗದ ಮಕ್ಕಳೇ ಕಲಿಯುತ್ತಿರುವ ಶಾಲೆಗಳಲ್ಲಿ ವಿಶೇಷವಾಗಿ ಸಂಗೀತದ ಬಗ್ಗೆ ಆಸಕ್ತಿ ಇರುವ ಮಕ್ಕಳಿಗೆ ಉಚಿತವಾಗಿ ಸುರಭಿಯ ಹಿರಿಯ ಶಿಕ್ಷಕರುಗಳಿಂದ ಸಂಗೀತಧಾರೆ, ಸಂಗೀತ ವರ್ಷದಡಿಯಲ್ಲಿ ವಾರಕ್ಕೊಮ್ಮೆ ಸಂಗೀತ ಶಿಕ್ಷಣ ; ಹೀಗೆ ಸುಕನ್ಯಾರವರು ಸತತವಾಗಿ ಸೇವೆ ನಡೆಸುತ್ತಿದ್ದಾರೆ. ಕುವೆಂಪುರವರ ರಾಮಾಯಣ ದರ್ಶನಂ ಪುಸ್ತಕ, ಇವರಿಗೆ ಪ್ರಿಯವಾದದ್ದು.

ಕರ್ಣಾಟಕ ಭಾಗವತದ ಅದ್ಭುತ ಕಾವ್ಯವಾಚನ[ಬದಲಾಯಿಸಿ]

ವರ್ಷ ೨೦೦೮ ರಲ್ಲಿ, ಅಮೆರಿಕದ ಭೌತಶಾಸ್ತ್ರಜ್ಞ, ಡಾ.ಎಚ್.ಆರ್.ಚಂದ್ರಶೇಖರ್ ರವರು ಪುರಾತನ ತಾಳೆಗರಿಗಳಿಂದ ಹೊರತಂದು ಸಂಪಾದಿಸಿದ ಕರ್ಣಾಟಕ ಭಾಗವತ, ಬೃಹತ್ ಗ್ರಂಥದ ಎರಡು ಸಂಪುಟಗಳನ್ನು ಮೈಸೂರಿನಲ್ಲಿ ಶ್ರೀ. ಶಿವರಾತ್ರೇಶ್ವರ ಸ್ವಾಮಿಗಳ ಸಮ್ಮುಖದಲ್ಲಿ ವಿಶ್ವಾರ್ಪಣೆ ಮಾಡಲಾಯಿತು. ಆ ಸಮಾರಂಭದಲ್ಲಿ ಉಪಸ್ಥಿತರಿದ್ದ, ವಿದ್ವಾಂಸರು, ಕಾವ್ಯಾಸಕ್ತರು, ಹಾಗೂ ರಸಿಕರ ಸಮ್ಮುಖದಲ್ಲಿ ಡಾ. ಸುಕನ್ಯಾ ಪ್ರಭಾಕರ್ ರವರು, ನಡೆಸಿಕೊಟ್ಟ ಕಾವ್ಯವಾಚನ ಕಾರ್ಯಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಇದರ ಯೂಟ್ಯೂಬ್ ವೀಡಿಯೊ ಅಂತರ್ಜಾಲದಲ್ಲಿ ಲಭ್ಯವಿದೆ.

ಕೃತಿಗಳು[ಬದಲಾಯಿಸಿ]

ಪ್ರಶಸ್ತಿಗಳು[ಬದಲಾಯಿಸಿ]

  1. 'ಮದ್ರಾಸ್ ಮ್ಯೂಸಿಕಲ್ ಅಕ್ಯಾಡಮಿ'ಯಿಂದ ಎರಡುಬಾರಿ ಸನ್ಮಾನಗಳಿಸಿದ್ದಾರೆ. 'ಗಾನಕೋಗಿಲೆ', 'ಗಾನಸರಸ್ವತಿ', 'ಗಾನಕಲಾಶ್ರೀ', 'ಹರಿದಾಸಪ್ರಶಸ್ತಿ',
  2. ೧೯೯೫ ರಲ್ಲಿ,' ಲಂಡನ್ ಭಾರತೀಯ ವಿದ್ಯಾಭವನ'ದ ಆಹ್ವಾನದ ಮೇರೆಗೆ. ಲಂಡನ್ ಪ್ರವಾಸ ಮಾಡಿದರು. ಸಂಗೀತ ಕಾರ್ಯಾಲಯಗಳನ್ನು ನಡೆಸಿಕೊಟ್ಟು, ಅಸಂಖ್ಯಾತ ವಿದ್ಯಾರ್ಥಿಗಳನ್ನೂ, ಸಂಗೀತಾಭಿಮಾನಿಗಳನ್ನೂ, ಪ್ರಶಂಸೆ-ಪುರಸ್ಕಾರಗಳನ್ನೂ ತಮ್ಮ ಸಂಗೀತ ಸಾಮ್ರಾಜ್ಯಕ್ಕೆ ಸೇರಿಸಿಕೊಂಡರು.
  3. ೨೦೦೫ ರಲ್ಲಿ ಕರ್ನಾಟಕ ಸರ್ಕಾರ, ಸುಕನ್ಯಾರವರಿಗೆ, ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವ ಸಲ್ಲಿಸಿತು. ಗಂಟೆಗಳಕಾಲ ಸಂಗೀತಸುಧೆಯನ್ನು ರಸಿಕರಿಗೆ ಉಣಬಡಿಸಿದಮೇಲೂ ಸ್ವರಮಾಧುರ್ಯತೆ ರವರಿಗೆ ಮೈಗೂಡಿಬಂದ ನಂಟು, ಕಛೇರಿಯ ಸಮಯದಲ್ಲಾಗಲಿ, ಮಂದಿರ ಮನೆ ಯಾವುದಾದರೂ ಸರಿ, ಮಹತ್ಸಭೆಯಾಗಲೀ ಸಾಮಾನ್ಯವರ್ಗದ ಶ್ರೋತೃ ವೃಂದವಾಗಿರಲಿ, ಅಥವಾ ವಿದ್ವನ್ಮಣಿಗಳೇ ಇರಲಿ ತಮ್ಮ ಸಂಗೀತಸುಧೆಯನ್ನು ವ್ಯವಸ್ಥಿತವಾಗಿ ಮಾಡುತ್ತಾರೆ.

ಕೆಲವು ಕೊಂಡಿಗಳು[ಬದಲಾಯಿಸಿ]

- ವಿದುಷಿ ಶ್ಯಾಮಲಾ ಪ್ರಕಾಶ್