ಜಾತವೇದ ಮುನಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಾತವೇದ ಮುನಿಯು ಬಿಜಾಪುರ ಜಿಲ್ಲೆಯ ಕೂಡಲಸಂಗಮ ಕ್ಷೇತ್ರದಲ್ಲಿ 12ನೆಯ ಶತಮಾನದಲ್ಲಿದ್ದ ವಿದ್ಯಾಪೀಠದ ಕುಲಪತಿ. ಶ್ರೇಷ್ಠ ಜ್ಞಾನಿಯೆಂದೂ ಪರಿಶುದ್ಧ ಮನಸ್ಕನೆಂದೂ ಹೆಸರಾಗಿದ್ದವ. ಈತನ ಆಶ್ರಯದಲ್ಲಿ ಬಸವಣ್ಣ, ಅಕ್ಕನಾಗಮ್ಮ, ಚನ್ನಬಸವಣ್ಣ, ಶಿವಸ್ವಾಮಿ ಮುಂತಾದ ವೀರಶೈವ ಅನುಭಾವಿಗಳು ವಿದ್ಯಾಭ್ಯಾಸ ಮಾಡಿದಂತೆ ಪುರಾಣಗಳಲ್ಲಿ ಹೇಳಿದೆ. ಬಸವಣ್ಣನವರ ಅಪ್ರತಿಮ ವ್ಯಕ್ತಿತ್ವ ರೂಪುಗೊಳ್ಳುವುದರಲ್ಲಿ ಈ ಮಹಾಮಹಿಮನ ಮಾರ್ಗದರ್ಶನ ಬಹುಮಟ್ಟಿಗೂ ಕಾರಣವಾಗಿದೆ ಎನ್ನಲಾಗಿದೆ. ಭೀಮಕವಿಯ ಬಸವಪುರಾಣದಲ್ಲಿ ಈತನನ್ನು ಕಪ್ಪಡಿಸಂಗಮನಾಥನೆಂದೂ ಕರೆದಿದ್ದಾನೆ.

ಧರೆಗೆ ಕಪ್ಪಡಿಸಂಗಮೇಶ್ವರ

ಪುರವೆಸೆವುದಲ್ಲಿ ಪ್ರಸಿದ್ಧೋ

ದ್ಧರಣ ಕೂಡಲಸಂಗಮೇಶನ ಮಂದಿರಕೆ ಪೋಗಿ

ನೆರೆದ ಭಕ್ತರು ತನ್ನ ನಿದಿರ್ಗೊಳು

ತಿರೆ ತದೀಯದ್ವಾರದೊಳು ಸ

ದ್ಗುರುಪದಕೆ ಸಾಷ್ಟಾಂಗವೆ¾ಗಿಯಲರ್ದು ಪೊಡವಂಟು

ಆಗಮ ಪುರಾಣಾರ್ಥ ವಿಹಿತ ವಿ

ಭಾಗ ಸೂಕ್ತಿಗಳಿಂದೆ ಮಂಜುಳ

ರಾಗರಸವೊಸೆರ್ದೆಸೆಯಲನುರಾಗಿಸಿ ನುತಿಸುತಿರಲು

ಆಗ ಮುನ್ನಿನ ವೇಷವೊಪ್ಪಿರ

ಲಾಗಿ ಸಂಗಮದೇವದೇವನು

ದೇಗುಲದ ಬಾಗಿಲ ಹೊರಗೆ ತಲೆದೋರಿದನು ಬಂದು

ಬಸವರಾಜ ದೇವರ ರಗಳೆಯಲ್ಲಿ ಈತನನ್ನು ಈಶಾನ್ಯಗುರುವೆಂದು ಸಂಬೋಧಿಸಲಾಗಿದೆ. ಸಿಂಗಿರಾಜನ ಬಸವರಾಜಚಾರಿತ್ರವೇ ಮೊದಲಾದ ಗ್ರಂಥಗಳಲ್ಲಿ ಈತನ ಉಲ್ಲೇಖವಿದೆ. ಕಪ್ಪಡಿಯ ಸಂಗಮೇಶ್ವರ ಗುಡಿಯ ಬಲಭಾಗದಲ್ಲಿ ಈತನ ಮಠ ಈಗಲೂ ಇದೆ.


ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: