ಜಪಾನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಜಪಾನ್‌ ಇಂದ ಪುನರ್ನಿರ್ದೇಶಿತ)
ಜಪಾನ್
日本国
ನಿಹೊನ್-ಕೊಕು
Flag of ಜಪಾನ್
Flag
ಇಂಪೆರಿಯಲ್ ಸೀಲ್(Imperial Seal) of ಜಪಾನ್
ಇಂಪೆರಿಯಲ್ ಸೀಲ್(Imperial Seal)
Anthem: 君が代 (ಕಿಮಿ ಗ ಯೋ)
Location of ಜಪಾನ್
Capitalಟೋಕ್ಯೊ (de facto)1
Largest cityರಾಜಧಾನಿ
Official languagesಜಪಾನೀಸ್
Demonym(s)Japanese
Governmentಸಂಸದೀಯ ಪ್ರಜಾತಂತ್ರ ಮತ್ತು ಸಾಂವಿಧಾನಿಕ ಚಕ್ರಾಧಿಪತ್ಯ
Naruhito
Fumio Kishida
Formation
ಫೆಬ್ರುವರಿ 11, 660 BC3
ನವೆಂಬರ್ 29, 1890
ಮೇ 3, 1947

April 28, 1952
• Water (%)
0.8
Population
• 2007 estimate
127,433,494 (೧೦ನೇ)
• 2004 census
127,333,002
GDP (PPP)2007 estimate
• Total
$4,292 ಟ್ರಿಲಿಯನ್[೧] (೩ನೇ)
• Per capita
$33,596[೧] (೨೪ನೇ)
GDP (nominal)2007 estimate
• Total
$4,381 trillion[೧] (೨ನೇ)
• Per capita
$34,296[೧] (೧೪ನೇ)
Gini38.1 (2002)[೨]
Error: Invalid Gini value
HDI (2007)Increase 0.953
Error: Invalid HDI value · ೮ನೇ
CurrencyInternational Symbol ¥ Pronounced (Yen)
Japanese Symbol Pronounced (En) (JPY)
Time zoneUTC+9 (JST)
• Summer (DST)
not observed
Calling code81
Internet TLD.jp
  1. Yokohama is the largest incorporated city.
  2. "World Factbook; Japan—Economy". CIA. 2006-12-19. Archived from the original on 2015-12-20. Retrieved 2006-12-28. {{cite web}}: Check date values in: |date= (help)
  3. According to legend, Japan was founded on this date by the Emperor Jimmu, first emperor of Japan; it is seen as largely symbolic.

ಜಪಾನ್ (日本 ನಿಹೊನ್ ಅಥವಾ ನಿಪ್ಪೊನ್, ಅಧಿಕೃತವಾಗಿ 日本国 ನಿಹೋನ್-ಕೊಕು ) ಏಶ್ಯಾ ಖಂಡದ ಒಂದು ದ್ವೀಪ ದೇಶ. ಇದು ಪೆಸಿಫಿಕ್ ಮಹಾಸಾಗರದ ಸುಮಾರು ೩೦೦೦ ನಡುಗಡ್ಡೆಗಳ ಸಮೂಹ. ೪ ಪ್ರಮುಖ ದ್ವೀಪಗಳೆಂದರೆ ಹೊಂಶು, ಹೊಕ್ಕಾಇದೊ, ಶಿಕೊಕು ಮತ್ತು ಕ್ಯೂಶು. ಜಪಾನ್ ಜಗತ್ತಿನ ೧೦ನೆಯ ಅತಿ ಹೆಚ್ಚು ಜನ ಸಂಖ್ಯೆಯುಳ್ಳ ದೇಶ. ಇದರ ರಾಜಧಾನಿ ತೋಕ್ಯೊ(ಟೋಕ್ಯೊ) ಮಹಾನಗರ, ಹಾಗೂ ಇದರ ಇತರ ಪ್ರಮುಖ ನಗರಗಳು ಯೊಕೊಹಾಮಾ, ಓಸಾಕಾ, ಕ್ಯೋತೊ ಮತ್ತು ನಾಗೋಯಾ ಆಗಿವೆ. ಇದು ವಿಶ್ವದ ೨ನೆಯ ಅತಿ ಹೆಚ್ಚು ಜಿ.ಡಿ.ಪಿ ಹೊಂದಿರುವ ದೇಶ. ತಂತ್ರಜ್ಞಾನಕ್ಕೆ ಪ್ರಸಿದ್ಧಿ ಪಡೆದ ಈ ದೇಶ ವಿಶ್ವದ ಪ್ರಮುಖ ದೇಶಗಳಲ್ಲೊಂದು.

ಜಪಾನ್

ಏಷ್ಯ ಖಂಡದ ಪೂರ್ವದಲ್ಲಿ ಉತ್ತರ ಪೆಸಿಫಿಕ್ ಸಾಗರದಲ್ಲಿರುವ ಒಂದು ದ್ವೀಪಸಮುದಾಯ. ಖಂಡದ ಮುಖ್ಯ ಭೂಮಿಯಿಂದ ಸುಮಾರು 160 ಕಿ.ಮೀ. ದೂರದಲ್ಲಿ ಬಿಲ್ಲಿನಂತೆ ತೋರುವ ಈ ದ್ವೀಪಸಮುದಾಯದಲ್ಲಿ ಹಲವಾರು ಚಿಕ್ಕ ದೊಡ್ಡ ದ್ವೀಪಗಳಿವೆ. ಇವು ಸಮುದ್ರದ ನೀರಿನ ಮೇಲೆ ತಲೆಯೆತ್ತಿ ನಿಂತಿರುವ ಬಂಡೆಕಲ್ಲುಗಳಂತೆ ಕಾಣುತ್ತವೆ. ನಿಪ್ಪನ್ ಎಂಬುದು ಇದರ ಜಪಾನೀ ನಾಮ.

ಜಪಾನನ್ನು ಏಷ್ಯದ ಗ್ರೇಟ್ ಬ್ರಿಟನ್ ಎಂದು ಕರೆಯುತ್ತಾರೆ. ಜಪಾನಿಗೂ ಬ್ರಿಟನ್ನಿಗೂ ಹಲವು ಸಾಮ್ಯಗಳಿರುವುದು ಇದಕ್ಕೆ ಕಾರಣ. ಎರಡೂ ದೇಶಗಳು ಮುಖ್ಯ ಭೂಖಂಡಗಳಿಂದ ಪ್ರತ್ಯೇಕಿಸಲ್ಪಟ್ಟ ದ್ವೀಪಗಳು. ಎರಡೂ ಸಮಶೀತೋಷ್ಣವಲಯದಲ್ಲಿವೆ. ಎರಡು ದೇಶಗಳಲ್ಲೂ ಸಂವಿಧಾನಬದ್ಧ ರಾಜತ್ವವಿದೆ. ಇವುಗಳ ತೀರಗಳು ಅಂಕುಡೊಂಕಾಗಿರುವುದರಿಂದ ಅನೇಕ ಸ್ವಾಭಾವಿಕ ಬಂದರುಗಳಿವೆ. ಎರಡು ದೇಶಗಳ ಜನರೂ ನಾವಿಕ ವೃತ್ತಿಯಲ್ಲಿ ನೈಪುಣ್ಯ ಪಡೆದಿದ್ದಾರೆ. ಈ ದೇಶಗಳ ಸುತ್ತ ಸಾಗರ ಪ್ರವಾಹಗಳು ಹರಿಯುವುದರಿಂದ ವಾಯುಗುಣ ಹಿತಕರ; ಜನರು ಚತುರರು, ಸಾಹಸಿಗಳು ಆಗಿದ್ದಾರೆ. ಜಪಾನಿನ ಸಮುದ್ರ ತೀರದಲ್ಲಿ 45 ದೊಡ್ಡ ಬಂದರುಗಳು ಹಡಗು ಸಂಚಾರಕ್ಕೆ ಅನುಕೂಲವಾಗಿವೆ. ಜಪಾನಿನಲ್ಲೂ ಬ್ರಿಟನ್ನಿನಲ್ಲಿರುವಂತೆಯೇ ನಾನಾ ಬಗೆಯ ಕೈಗಾರಿಕೆಗಳು ಬೆಳೆದಿವೆ. ಜಪಾನ್ ಸಮುದ್ರ ಮತ್ತು ಕೊರಿಯ ಜಲಸಂಧಿಯಿಂದಾಗಿ ಜಪಾನು ಏಷ್ಯ ಖಂಡದಿಂದ ಬೇರ್ಪಟ್ಟಿದೆ. ಹಾಗೆಯೇ ಉತ್ತರದಲ್ಲಿ ಸೋಯಾ ಜಲಸಂಧಿ ಸ್ಯಾಕಲೀನ್ ದ್ವೀಪವನ್ನು ಜಪಾನಿನಿಂದ ಬೇರ್ಪಡಿಸಿದೆ. ಜಪಾನ್ ದ್ವೀಪಸಮೂಹದಲ್ಲಿ ನಾಲ್ಕು ದ್ವೀಪಗಳಿವೆ. ಹಾನ್‍ಷ್ಯೂ ದ್ವೀಪದ ಉತ್ತರಕ್ಕೆ ಇರುವ ದ್ವೀಪ ಹಾಕೈಡೋ. ಹಾನ್‍ಷ್ಯೂ ದ್ವೀಪದ ವಿಸ್ತೀರ್ಣ 87,000 ಚ.ಮೈ. ಹಾಕೈಡೋ 36,000 ಚ.ಮೈ. ವಿಸ್ತಾರವಾಗಿವೆ. ಹಾಕೈಡೋ ಮತ್ತು ಹಾನ್‍ಷ್ಯೂ ದ್ವೀಪಗಳನ್ನು ತ್ಸುಗಾರೂ ಜಲಸಂಧಿ ಬೇರ್ಪಡಿಸುತ್ತದೆ. ಜಪಾನ್ ದ್ವೀಪಗಳು ಉ.ಅ. 30-46 ಮತ್ತು ಪೂ.ರೇ. 12-147 ನಡುವೆ ಇವೆ. ವಿಸ್ತೀರ್ಣ (ಜಪಾನಿಗೆ ಮರಳಿ ಬಂದ ರೀಯೂಕ್ಕ್ಯೂ ದ್ವೀಪಗಳೂ ಸೇರಿ) 3,77,829 ಚ.ಕಿಮೀ. ಉತ್ತರ ದಕ್ಷಿಣವಾಗಿ ಇರುವ ಸಮುದ್ರ ತೀರ 9426 ಕಿ.ಮೀ ಜನಸಂಖ್ಯೆ 126,472,000(2000) ಇದರಲ್ಲಿ ಸೇ. 78 ನಗರವಾಸಿಗಳು 22 ಗ್ರಾಮಸ್ಥರು ಟೋಕಿಯೋ ಜನಸಂಖ್ಯೆ 81,63,573(1990) ರಾಜಧಾನಿ ಟೋಕಿಯೋ.

ಭೂವಿಜ್ಞಾನ[ಬದಲಾಯಿಸಿ]

ಫೆಸಿಫಿಕ್ ಸಾಗರದ ಪಶ್ಚಿಮಭಾಗದಲ್ಲಿ ದಕ್ಷಿಣೋತ್ತರವಾಗಿ ಸೈಬೀರಿಯದ ಕಮ್‍ಚಟಕಾ ಪರ್ಯಾಯದ್ವೀಪದ ದಕ್ಷಿಣ ತುದಿಯಿಂದ ಆಗ್ನೇಯ ಏಷ್ಯದವರೆಗೆ ಹರಡಿರುವ ಅನೇಕ ದ್ವೀಪವೃತ್ತಗಳಲ್ಲಿ ಜಪಾನ್ ದ್ವೀಪಸ್ತೋಮ ಬಹಳ ಮುಖ್ಯವಾದ್ದು. ಜಪಾನಿನ ಭೂನಕಾಶೆಯಲ್ಲಿ ವಿವಿಧ ಭೂಕಾಲಗಳಿಗೆ ಸೇರಿದ ಐದು ಪ್ರಮುಖ ಶಿಲಾಸಮುದಾಯಗಳನ್ನು ಗುರುತಿಸಬಹುದು:

5 ನವಜೀವಕಲ್ಪ

(ಸೀನೋಜೋóಯಿಕ್) ಅಗ್ನಿಶಿಲೆಗಳು ಘನೀಕೃತ ಶಿಲಾರಸ-ಟುಫ್-ಬ್ರೆಕ್ಷಿಯಾ ಜಪಾನಿನ ನಾಲ್ಕನೆಯ

ಒಂದು ಭಾಗವನ್ನು ಆಕ್ರಮಿಸಿದೆ.

4 ನವಜೀವಕಲ್ಪ

(ಸೀನೋಜೋóಯಿಕ್) ಜಲಜಶಿಲೆಗಳು ಮರಳುಕಲ್ಲು-ಜೇಡುಶಿಲೆಗಳು-(ಸಾಗರ ಹಾಗೂ ಸರೋವರ

ಗಳಲ್ಲಿ ಉಗಮವಾದವು. ಹಾನ್‍ಷ್ಯೂ ಹಾಗೂ ಹಾಕೈಡೋ

ಸುತ್ತಮುತ್ತಲಿನ ಬೆಟ್ಟಗುಡ್ಡ ಪ್ರದೇಶಗಳಲ್ಲಿ.

3 ಅಂತ್ಯಕ್ರಿಟೇಷಸ್

ಯುಗ (ಗ್ರಾನೈಟ್ ಶಿಲೆಗಳು) ಗ್ರಾನೈಟ್ ಹಾಗೂ ಅದಕ್ಕೆ ಸಂಬಂಧಪಟ್ಟ ಶಿಲೆಗಳು, ಮಧ್ಯ

ಹಾಗೂ ಪಶ್ಚಿಮ ಹಾನ್‍ಷ್ಯೂ ಮತ್ತು ಉತ್ತರ ಕೀಯೂಷೂ

ಪ್ರದೇಶಗಳಲ್ಲಿ ಅಧಿಕ ಪ್ರಮಾಣದಲ್ಲಿ ಹೊರಹೊಮ್ಮಿದೆ.

2 ಮಧ್ಯ ಜೀವಕಲ್ಪ

(ಮೀಸೋಜೋóಯಿಕ್) ರೂಪಾಂತರ   ಸರೋವರ ಜನಿತ ಮರಳುಗಲ್ಲು, ಸ್ಲೇಟು, ಚರ್ಟ್

ಹೊಂದಿಲ್ಲದ ಬೆಣಚುಕಲ್ಲು

ಶಿಲೆಗಳು

2ಎ ಪ್ರಾಚೀನ ರೂಪಾಂತರ ಸಾಗರ ಹಾಗೂ ಸರೋವರಜನಿತ ಮರಳುಕಲ್ಲು, ಸುಣ್ಣಕಲ್ಲು

ಜೀವಕಲ್ಪ ಹೊಂದಿಲ್ಲದ ಹಾಗೂ ಸ್ಲೇಟು. ಈ ಶಿಲಾಸ್ತೋಮಗಳು ಜಪಾನಿನ ಬಹು

(ಪೇಲಿಯೋಜೆóೂೀಯಿಕ್) ಶಿಲೆಗಳು ಭಾಗವನ್ನು ಆವರಿಸಿದ್ದು ಬೃಹತ್ ಮಡಿಕೆಗಳಾಗಿ ಹಲವಾರು

ಸ್ತರಭಂಗಗಳಾಗಿವೆ.

1 ಅತಿ ಪ್ರಾಚೀನ ಯುಗ ರೂಪಾಂತರ ನೈಸ್ ಹಾಗೂ ಷಿಪ್ಟ್ ಶಿಲೆಗಳು. ಈ ಶಿಲೆಗಳು ಜಪಾನಿನ

(ಪ್ರೀಕೇಂಬ್ರಿಯನ್) ಶಿಲೆಗಳು ಕೆಲವು ಭಾಗದಲ್ಲಿ ಮಾತ್ರ ಕಂಡುಬರುತ್ತವೆ.

ಭೂ ಚರಿತ್ರೆಯ ಪ್ರಕಾರ ಜಪಾನ್ ದ್ವೀಪಗಳು ಸಮುದ್ರದ ಮೇಲೆ ಹೊರ ಹೊಮ್ಮಿದವು. ಪ್ರಾಚೀನ ಜೀವಕಲ್ಪಯುಗದಲ್ಲಿ ಭೂಭಾಗದಿಂದ ಸಾಗರವನ್ನು ಸೇರಿದ ಅಗಾಧ ಪ್ರಮಾಣದ ಮೆಕ್ಕಲು ನಿಕ್ಷೇಪ ಕಾಲಾನುಕ್ರಮದಲ್ಲಿ ಅನೇಕ ರೀತಿಯ ಭೂಕ್ರಿಯೆಗಳಿಗೆ ಒಳಗಾಗಿ ಮೇಲಕ್ಕೆತ್ತಲ್ಪಟ್ಟುವು. ಈ ದ್ವೀಪಗಳಾಗಿ ಮಾರ್ಪಟ್ಟವು. ಮೆಕ್ಕಲು ನಿಕ್ಷೇಪದಲ್ಲಿ ದೊರಕುವ ಫಾಸಿಲುಗಳ ಆಧಾರದ ಮೇಲೆ ಸೈಲೂರಿಯನ್‍ನಿಂದ ಪರ್ಮಿಯನ್ ಕಾಲದ ವರೆಗಿನ (ಸು.440 ದ.ಲ. ವರ್ಷ ಪ್ರಾಚೀನದಿಂದ 280 ದ.ಲ. ವರ್ಷ ಪ್ರಾಚೀನದ ವರೆಗೆ) ವಿವಿಧ ಸ್ತರಗಳನ್ನು ಗುರುತಿಸಬಹುದು. ಈ ಸ್ತರಗಳೊಡನೆ ದೊರಕುವ ಅಗ್ನಿಶಿಲೆಗಳು ಆ ಕಾಲದ ಅಗ್ನಿಪರ್ವತಗಳ ಚಟುವಟಿಕೆಗಳನ್ನು ವ್ಯಕ್ತಪಡಿಸುತ್ತವೆ. ಇಂದಿನ ಜಪಾನಿನ ಬಹುಭಾಗ ಮಧ್ಯಮ ಹಾಗೂ ಅಂತ್ಯ ಟ್ರಯಾಸಿಕ್ ಕಾಲದ (ಸು.200 ದ.ಲ. ವ. ಪ್ರಾಚೀನ) ಅಕಿಯೋಸ್ಟಿಕ್ ಪರ್ವತೋದ್ಭವ ಕ್ರಿಯೆಯಿಂದ ಮೇಲಕ್ಕೆತ್ತಲ್ಪಟ್ಟ ಆ ಕಾಲದ ಶಿಲೆಗಳಿಂದ ಅವೃತವಾಗಿವೆ. ಹಾಗೆಯೇ ಜೂರಾಸಿಕ್ (190 ದ.ಲ.ವ. ಪ್ರಾಚೀನ) ಮತ್ತು ಆದಿ ಕ್ರಿಟೇಷಸ್ (135 ದ.ಲ. ವ. ಪ್ರಾಚೀನ) ಕಾಲದಲ್ಲಿ ಜಪಾನಿನ ಕೆಲಭಾಗಗಳು ಅಸಾಧಾರಣವಾದ ಭೂಕ್ರಿಯೆಗಳಿಂದ ಭಾಗಶಃ ಮುಳುಗಿಯೂ ಇವೆ. ಕ್ರಿಟೇಷಸ್ ಯುಗದಲ್ಲಿ (135 ದ.ಲ.ವ. ಪ್ರಾಚೀನದಿಂದ 65 ದ.ಲ. ವ. ಪ್ರಾಚೀನದ ವರೆಗೆ) ಅಗಾಧ ಪ್ರಮಾಣದ ಅಂತಸ್ಸರಣಗಳಾಗಿ ಅಗ್ನಿಶಿಲೆಗಳಿಗೆ ಎಡೆಕೊಟ್ಟಿವೆ. ನವಜೀವಕಲ್ಪದಲ್ಲಿ (ಟರ್ಷಿಯರಿ) ಅಗಾಧವಾದ ಪರ್ವತೋದ್ಭವ ಕ್ರಿಯೆಗಳಿಂದ ಬೃಹತ್ ಮಡಿಕೆಗಳುಂಟಾಗಿ ಬಹು ವ್ಯಾಪಕವಾದ ಬರ್ಹಿಸರಣ ಅಗ್ನಿಶಿಲೆಗಳು ರೂಪುಗೊಂಡವು. ಪ್ಲೀಸ್ಟೊಸೀನ್ ಕಾಲದಲ್ಲಿ ನಡೆದ ಭೂಚಲನವಲನಗಳು ಸಮುದ್ರದಂಚಿನಲ್ಲಿ ಅನೇಕ ಮಾರ್ಪಾಡುಗಳಿಗೆ ಕಾರಣವಾಗಿವೆ. ಹಾಗೆಯೇ ಭೂಕಾಲದ ಇತ್ತೀಚಿನ ದಿವಸಗಳಲ್ಲಿಯೂ ಕೂಡ ಉಂಟಾಗುತ್ತಿರುವ ಭೂಕಂಪನಗಳು, ಅಗ್ನಿಪರ್ವತಗಳ ಚಟುವಟಿಕೆಗಳು, ಸಣ್ಣಪುಟ್ಟ ಭೂಚಲನೆಗಳು ನಿರಂತರವಾಗಿ ಜಪಾನಿನ ಭೂವಿನ್ಯಾಸದ ವ್ಯತ್ಯಾಸಗಳಿಗೆ ಪೂರಕವಾಗಿವೆ.

ಖನಿಜ ಸಂಪತ್ತು[ಬದಲಾಯಿಸಿ]

ಕೈಗಾರಿಕೋದ್ಯಮದಲ್ಲಿ ಅಪಾರ ಪ್ರಗತಿಯನ್ನು ಜಪಾನ್ ಸಾಧಿಸಿದ್ದರೆ ಖನಿಜಕ್ಷೇತ್ರದಲ್ಲಿ, ಕೈಗಾರಿಕೆಗಳಿಗೆ ಬೇಕಾಗುವ ಎಲ್ಲ ಖನಿಜಗಳನ್ನು ಪಡೆದಿದೆ ಎಂದು ಹೇಳುವ ಹಾಗಿಲ್ಲ. ಅನೇಕ ಖನಿಜಗಳನ್ನು ಪರದೇಶಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಕಬ್ಬಿಣದ ನಿಕ್ಷೇಪಗಳು ಅಲ್ಪ ಪ್ರಮಾಣದಲ್ಲಿವೆ. ಇವು ಬಹುತೇಕ ಹಾಕೈಡೋ ಹಾಗೂ ಉತ್ತರ ಹಾನ್‍ಷ್ಯೂ ಪ್ರದೇಶಕ್ಕೆ ಸೀಮಿತವಾಗಿವೆ. ಈ ಪ್ರದೇಶದ ಅದುರಿನಲ್ಲಿ 35ರಷ್ಟು ಕಬ್ಬಿಣಾಂಶ ಉಂಟು. ಹಾಕೈಡೋ ಮತ್ತು ಹಾನ್‍ಷ್ಯೂವಿನ ಸುತ್ತಮುತ್ತ ಸುಮಾರು 50 ಗಣಿಗಳು ಕಾರ್ಯನಿರತವಾಗಿವೆ. ಪೆಟ್ರೋಲಿಯಮ್ ದೊರಕುವ ಪ್ರದೇಶ ಪಶ್ಚಿಮ ಹಾಕೈಡೋನಿಂದ ದಕ್ಷಿಣ ಹಾನ್‍ಷ್ಯೂವಿನ ವರೆಗೂ ಹಬ್ಬಿದೆ. ಆದರೆ ಪೆಟ್ರೋಲಿಯಮಿನ ಉತ್ಪಾದನೆ ಅತ್ಯಲ್ಪ. ಹೀಗಾಗಿ ಜಪಾನ್ ಅಧಿಕ ಪ್ರಮಾಣದಲ್ಲಿ ಪೆಟ್ರೋಲನ್ನು ಆಮದು ಮಾಡಿಕೊಳ್ಳುತ್ತದೆ. ನೈಸರ್ಗಿಕ ಅನಿಲವನ್ನು ಅಧಿಕ ಪ್ರಮಾಣದಲ್ಲಿ ನೀಗಾಟ ಹಾಗೂ ದಕ್ಷಿಣ ಕಾಂಟೋ ಪ್ರದೇಶಗಳಲ್ಲಿ ಹೊರತೆಗೆಯಲಾಗುತ್ತದೆ. ಜಪಾನಿನ ಖನಿಜ ಸಂಪತ್ತಿನಲ್ಲಿ ಕಲ್ಲಿದ್ದಲು ಅತಿಮುಖ್ಯವಾದದ್ದು. ಒಟ್ಟು ಖನಿಜೋತ್ಪಾದನೆಯಲ್ಲಿ ಇದು 47ರಷ್ಟಾಗುತ್ತದೆ. ಈ ನಿಕ್ಷೇಪ ಸುಮಾರು 20.79 ಬಿಲಿಯನ್ ಟನ್‍ಗಳಷ್ಟು ಇದೆಯೆಂದು ಅಂದಾಜು ಮಾಡಲಾಗಿದೆ. ಉತ್ತರ ಕೀಯೂಷೂ, ಹಾಕೈಡೋ, ಪೂರ್ವ ಹಾನ್‍ಷ್ಯೂ ಮತ್ತು ಪಶ್ಚಿಮ ಹಾನ್‍ಷ್ಯೂ ಕಲ್ಲಿದ್ದಲು ದೊರೆಯುವ ನಾಲ್ಕು ಪ್ರಮುಖ ಪ್ರದೇಶಗಳು. ಲೋಹ ಸಂಬಂಧ ಖನಿಜಗಳಲ್ಲಿ ಕಬ್ಬಿಣವನ್ನು ಬಿಟ್ಟರೆ ತಾಮ್ರ ಅತಿಮುಖ್ಯವಾದ್ದು. ಸುಮಾರು 200 ತಾಮ್ರ ಗಣಿಗಳಿವೆ. ಅವುಗಳ ಪೈಕಿ 6 ದೊಡ್ಡ ಪ್ರಮಾಣದವು. ಬಹುತೇಕ ಗಣಿಗಳು ಈಶಾನ್ಯ ಹಾನ್‍ಷ್ಯೂ ಹಾಗೂ ಷಿಕೋಕ್ಯೂ ಪ್ರದೇಶದ ಸುತ್ತ ಮುತ್ತ ಪ್ರಸರಿಸಿವೆ. ಸೀಸ ಹಾಗೂ ಸತು ಹೆಚ್ಚಾಗಿ ತಾಮ್ರದ ಅದುರಿನಲ್ಲಿ ದೊರೆಯುತ್ತವೆ. ಅಲೋಹ ಖನಿಜಸಂಪತ್ತಿನಲ್ಲಿ ಗಂಧಕ ಅತಿಮುಖ್ಯವಾದ್ದು. ಪೈರೈಟ್ ಇದರ ಅತಿಮುಖ್ಯ ಖನಿಜ. ಜಪಾನ್ ಪ್ರಪಂಚದಲ್ಲಿ ಅತಿ ಹೆಚ್ಚು ಪೈರೈಟ್ ಉತ್ಪಾದಿಸುವ ರಾಷ್ಟ್ರ. ಇತರ ಲೋಹ ಹಾಗೂ ಅಲೋಹಗಳಾದ ಚಿನ್ನ, ಬೆಳ್ಳಿ, ನೈಟ್ರೇಟ್ ಮುಂತಾದವು ಅತ್ಯಲ್ಪ ಪ್ರಮಾಣದಲ್ಲಿ ದೊರೆಯುತ್ತವೆ.

ದೇಶೀಯ ಬಳಕೆಯನ್ನು ಆಧಾರವಾಗಿಟ್ಟುಕೊಂಡು, ಜಪಾನಿನ ಖನಿಜ ಸಂಪತ್ತನ್ನು ಮೂರು ವಿಭಾಗಗಳಾಗಿ ವಿಂಗಡಿಸಬಹುದು : 1 ದೇಶೀಯ ಬಳಕೆಗೆ ಸಾಕಾಗುವಷ್ಟು ಅಥವಾ ಹೆಚ್ಚು ಕಡಿಮೆ ಸಾಕಾಗುವಷ್ಟು ದೊರೆಯುತ್ತಿರುವ ಖನಿಜಗಳು-ಕ್ರೋಮೈಟ್, ಕಲ್ಲಿದ್ದಲು, ಜಿಪ್‍ಸಮ್, ಸುಣ್ಣಕಲ್ಲು, ಮೆಗ್ನೀಸಿಯಮ್, ಪೈರೈಟ್, ಗಂಧಕ, ಸೀಸ, ಸತ್ತು, ತಾಮ್ರ, ಚಿನ್ನ ಮತ್ತು ಬೆಳ್ಳಿ, 2 ದೇಶೀಯ ಬಳಕೆಗೆ ಸಾಲದಷ್ಟು ಪ್ರಮಾಣದಲ್ಲಿ ದೊರೆಯುವ, ಆದ್ದದರಿಂದ ಭಾಗಶಃ ಆಮದು ಮಾಡಿಕೊಳ್ಳಬೇಕಾದ ಖನಿಜಗಳು-ಕಬ್ಬಿಣದ ಅದುರು, ಆಂಟಿಮನಿ, ಪಾದರಸ, ಮ್ಯಾಂಗನೀಸ್, ತವರ, 'ಟೈಟೇನೀಯಮ್, ಟಂಗ್‍ಸ್ಟನ್, ಕ್ರೋಮಿಯಮ್ ಹಾಗೂ ವೆನೆಡಿಯಮ್. 3 ಸಂಪೂರ್ಣವಾಗಿ ಆಮದು ಮಾಡಿಕೊಳ್ಳಲೇಬೇಕಾದ ಖನಿಜಗಳು-ನಿಕ್ಕಲ್, ಕೋಬಾಲ್ಟ್, ಅಲ್ಯೂಮಿನಿಯಮ್, ನೈಟ್ರೇಟ್ ಹಾಗೂ ವಿರಳ ಖನಿಜಗಳು.

ತೀರಪ್ರದೇಶ[ಬದಲಾಯಿಸಿ]

ಜಪಾನಿನ ತೀರ 16,470 ಮೈಲಿಗಳಷ್ಟು ಉದ್ದವಿದೆ. ಸರಾಸರಿಯಲ್ಲಿ ಪ್ರತಿ ಚದರ ಮೈಲಿ ಪ್ರದೇಶಕ್ಕೂ 7 ಮೈ. ತೀರವುಂಟು. ಜಪಾನಿನ ಉದ್ದನೆಯ ತೀರ ಅದರ ಜನಜೀವನ ಮತ್ತು ಆರ್ಥಿಕ ವ್ಯವಸ್ಥೆಯ ಮೇಲೆ ತುಂಬ ಪರಿಣಾಮ ಬೀರಿದೆ. ಜಪಾನಿನ ಯಾವ ಪ್ರದೇಶವೂ ಸಮುದ್ರಕ್ಕೆ 75 ಮೈಲಿಗಳಿಗಿಂತ ಹೆಚ್ಚು ದೂರದಲ್ಲಿಲ್ಲ. ತೀರಪ್ರದೇಶದಲ್ಲಿ ಮರಳು ದಂಡೆಗಳು ಹಾಗೂ ತಗ್ಗಾದ ದಂಡೆಗಳಿಂದ ಬೇರ್ಪಟ್ಟ ಉಪ್ಪುನೀರಿನ ಹರವುಗಳುಂಟು. ಇಲ್ಲಿಯ ತೀರಪ್ರದೆಶ ಚಳಿಗಾಲದ ಚಂಡಮಾರುತಗಳಿಗೆ ಮತ್ತು ಅಲೆಗಳ ಪರಿಣಾಮಕ್ಕೆ ಒಳಗಾಗುತ್ತದೆ. ಪೆಸಿಫಿಕ್ ತೀರ ಪ್ರದೇಶದಲ್ಲಿ ಅನೇಕ ಒಳಚಾಚುಗಳುಂಟು. ಟೋಕಿಯೋ ಕೊಲ್ಲಿಯ ಬಳಿಯ ಪ್ರದೇಶ ಸಮತಟ್ಟಾದ ಮಣ್ಣಿನಿಂದ ಕೂಡಿದ ಮುಖಜ ಭೂಮಿ, ಸಗಾಮೀ ಕೊಲ್ಲಿಯ ಪೂರ್ವಭಾಗದಲ್ಲಿರುವ ವಿಸ್ತಾರ ಪ್ರದೇಶಗಳಲ್ಲಿ ಮರಳು ದಂಡೆಗಳು ಹಬ್ಬಿವೆ. ಅದರ ಪಶ್ವಿಮ ಭಾಗ ಕಡಿದು, ಬಂಡೆಗಳಿಂದ ಕೂಡಿದ್ದು.

ಈಜೂ ಪರ್ಯಾಯದ್ವೀಪದಲ್ಲಿ ಆಳವಾಗಿ ಸವೆದಿರುವ ಅಗ್ನಿಪರ್ವತಗಳು ಸಮುದ್ರದವರೆಗೂ ಹಬ್ಬಿವೆ. ಬಯಲುಗಳ ಕರಾವಳಿಗಳು ಮರಳಿನಿಂದ ಕೂಡಿದವು. ಬೆಟ್ಟಗಳ ಇಳಿಜಾರುಗಳು ನೇರವಾಗಿ ಸಮುದ್ರಕ್ಕೆ ಇಳಿದಿರುವ ಕಡೆಗಳಲ್ಲಿ ತೀರಗಳು ಶಿಲಾವೃತ. ಕುಮಾನೋ ಸಮುದ್ರಕ್ಕೆ ಎದುರಾಗಿರುವ ಕೀ ಪರ್ಯಾಯ ದ್ವೀಪದಲ್ಲಿ ಮತ್ತು ಕೀಟಾಕಾಮೀ ಪ್ರದೇಶದ ಈಶಾನ್ಯ ಭಾಗದುದ್ದಕ್ಕೂ ಅಧಿಕ ಒಳಚಾಚುಗಳನ್ನು ಕಾಣಬಹುದು. ಕೆಲವು ಕಡೆ ಸಮುದ್ರದಲ್ಲಿರುವ ಇತ್ತರವಾದ ಬಂಡೆಗಳನ್ನು ಆಧರಿಸಿ ನಿಂತಿರುವ ತೀರಸಮತಟ್ಟುಗಳುಂಟು. ಬೋಸೋ ಮತ್ತು ಕೀ ಪರ್ಯಾಯದ್ವೀಪಗಳಲ್ಲಿ ಈ ಲಕ್ಷಣಗಳನ್ನು ಕಾಣಬಹುದು.

ಒಟ್ಟಿನಲ್ಲಿ ಜಪಾನಿನ ತೀರಪ್ರದೇಶ ಎರಡು ಬಗೆ. ಒಂದು ಮರಳಿನಿಂದ ಕೂಡಿದ್ದರೆ, ಇನ್ನೊಂದು ಶಿಲಾವೃತ. ಕರಾವಳಿ ಅಂಕುಡೊಂಕು. ಅದ್ದರಿಂದ ಇಲ್ಲಿ ಕೆಲವು ಸ್ವಾಭಾವಿಕ ಬಂದರುಗಳುಂಟು. ಇದರ ಉದ್ದನೆಯ ಕರಾವಳಿ ಸಮುದ್ರಯಾನಕ್ಕೆ ಅನುಕೂಲಕರ. ಆಂತರಿಕ ಸಾರಿಗೆ ಹಾಗೂ ಮೀನುಗಾರಿಕೆ ಉದ್ಯಮಕ್ಕೆ ಇದು ಸಹಾಯಕ.

ಮೇಲ್ಮೈ ಲಕ್ಷಣ[ಬದಲಾಯಿಸಿ]

ಜಪಾನಿನ ದ್ವೀಪಗಳು ಪರ್ವತಗಳಿಂದಲೂ ಅನೇಕ ಜ್ವಾಲಾಮುಖಿಗಳಿಂದಲೂ ಕೂಡಿದವು. ಇಲ್ಲಿ ಪದೇಪದೇ ಸಂಭವಿಸುತ್ತಿರುವ ಭೂಕಂಪಗಳನ್ನೂ ಜೀವಂತವಾಗಿರುವ ಜ್ವಾಲಾಮುಖಿಗಳನ್ನೂ ಗಮನಿಸಿದರೆ ಇಲ್ಲಿಯ ಪರ್ವತರಚನಾಕ್ರಿಯೆ ಇನ್ನೂ ಮುಂದುವರಿದಿದೆಯೆಂಬುದು ಕಂಡುಬರುತ್ತದೆ. ಇಲ್ಲಿಯ ಪರ್ವತಸ್ತೋಮಗಳನ್ನು ಆರು ಪ್ರಕಾರಗಳಾಗಿ ವಿಂಗಡಿಸಬಹುದು: 1 ಕ್ಯುರೀಲ್ ಅಥವಾ ಚೀಷೀಮಾ ದ್ವೀಪಗಳಿಗೆ ಕಾರಣವಾದ, ಹಾಕೈಡೋ ದ್ವೀಪದಲ್ಲಿ ಈಶಾನ್ಯದ ಕಡೆಯಿಂದ ಮುಂದುವರಿದಿರುವ ಪರ್ವತಶ್ರೇಣಿ, 2 ಹಾಕೈಡೋವನ್ನು ವಾಯುವ್ಯ ಮೂಲೆಯಿಂದ ಪ್ರವೇಶಿಸುವ ಸ್ಯಾಕಲೀನ್ ಅಥವಾ ಕಾರಫ್ಯೂಟೋ ಪರ್ವತಗಳು, 3 ಹಾನ್‍ಷ್ಯೂವಿನ ಉತ್ತರಾರ್ಧ ಭಾಗವನ್ನೂ ಹಾಕೈಡೋವಿನ ದಕ್ಷಿಣದ ಪರ್ಯಾಯದ್ವೀಪವನ್ನೂ ಆವರಿಸಿರುವ ಟೋಹೋಕೂ ಅಥವಾ ಈಶಾನ್ಯ ಶ್ರೇಣಿ, 4 ಮಧ್ಯ ಹಾನ್‍ಷ್ಯೂವಿನಿಂದ ನೈಋತ್ಯದ ಕಡೆ ಹಬ್ಬಿ ಚೂಗೋಕೂ ಪರ್ಯಾಯದ್ವೀಪದ ಬೆನ್ನೆಲುಬಾಗಿರುವ ಮತ್ತು ಷಿಕೋಕ್ಯೂ ಪರ್ವತಗಳಾಗಿ ಬಹು ದೂರ ಹಬ್ಬಿರುವ ಸೇನಾನ್ ಅಥವಾ ನೈಋತ್ಯ ಭಾಗದ ಪರ್ವತಶ್ರೇಣಿ, 5 ಪೆಸಿಫಿಕ್ ದ್ವೀಪಸ್ತೋಮದ ಮೂಲಕ ಮಧ್ಯ ಹಾನ್‍ಷ್ಯೂವನ್ನು ದಾಟಿ ಉತ್ತರಕ್ಕೆ ಹಬ್ಬಿರುವ ಷಿಚಿಟೋ-ಮರಿಯಾನ ಶ್ರೇಣಿ, 6 ಫಾರ್ಮೋಸದಿಂದ ಉತ್ತರದ ಕಡೆಬಾಗಿ ಕೀಯೂಷೂವನ್ನು ಛೇದಿಸುವ ರೀಯೂಕ್ಯೂ ಶ್ರೇಣಿ. ಪರ್ವತ ಶ್ರೇಣಿಗಳು ಕೂಡುವ ಎಡೆಯಲ್ಲಿ ಉನ್ನತ ಪರ್ವತಗ್ರಂಥಿಗಳೂ ವಿಸ್ತಾರ ಬಯಲುಗಳೂ ಜ್ವಾಲಾಮುಖಿ ಸ್ತೋಮಗಳೂ ರೂಪುಗೊಂಡಿವೆ.

ಹಾನ್‍ಷ್ಯೂವಿನ ಮಧ್ಯಭಾಗದಲ್ಲಿ ಸೇನಾನ್ ಮತ್ತು ಷಿಚಿಟೋ-ಮರಿಯಾನ ಪರ್ವತಶ್ರೇಣಿಗಳು ಸಂಧಿಸುತ್ತವೆ. ಜಪಾನಿನ ಜ್ವಾಲಾಮುಖೇತರ ಮೂಲದ ಅತ್ಯುನ್ನತ ಪರ್ವತಗಳು ಇರುವುದು ಅಲ್ಲೇ. ಫ್ಯೂಜೀ ಜ್ವಾಲಾಮುಖಿಸ್ತೋಮ ಇರುವುದೂ ಅಲ್ಲೇ. ಈ ಸ್ತೋಮದ ಫ್ಯೂಜೀ, ಆಕೈಷೀ, ಮತ್ತು ಹಿಡಾ ಶಿಖರಗಳ ಎತ್ತರ ಅನುಕ್ರಮವಾಗಿ 12,395', 10,456' ಮತ್ತು 10,444'. ಈ ಎರಡು ಮಹಾಶ್ರೇಣಿಗಳ ಸಂಧಿಸ್ಥಳದಲ್ಲೇ ಜಪಾನಿನ ಅತ್ಯಂತ ದೊಡ್ಡ ಮೈದಾನವಾದ ಕ್ಯಾಂಟೋ ಬಯಲು ಇದೆ.

ಟೋಹೋಕೂ, ಕ್ಯೂರೀಲ್ ಮತ್ತು ಸ್ಯಾಕಲೀನ್ ಪರ್ವತಶ್ರೇಣಿಗಳು ಹಾಕೈಡೋನಲ್ಲಿ ಕೂಡುತ್ತವೆ. ಬೃಹತ್ ಜ್ವಾಲಾಮುಖಿಗಳು ಹೆಣೆದುಕೊಂಡಿರುವ ಆ ಪ್ರದೇಶ ಹಾಕೈಡೋನ ಜಾವಣಿ. ಜ್ವಾಲಾಮುಖಿಸ್ತೋಮದಿಂದ ಕೂಡಿದ ಇನ್ನೊಂದು ಪರ್ವತಗ್ರಂಥಿ ಇರುವುದು ಕೀಯೂಷೂನಲ್ಲೊ. ಇಲ್ಲಿ ಸೇನಾನ್ ಮತ್ತು ರೀಯೂಕ್ಯೂ ಶ್ರೇಣಿಗಳು ಸಂಧಿಸುತ್ತವೆ. ಇಲ್ಲೂ ಉನ್ನತ ಪರ್ವತ ಗ್ರಂಥಿಗಳೂ ನೆರೆಯಲ್ಲೇ ದೊಡ್ಡ ಪ್ರಸ್ಥಭೂಮಿಗಳೂ ವಿಶಾಲ ಮೈದಾನಗಳೂ ಇವೆ. ಸ್ಯಾಕಲೀನ್ ಪರ್ವತಶ್ರೇಣಿ ಎರಡು ಕವಲವಾಗಿ ಒಡೆದು ಹಾಕೈಡೋನಿಂದ ಮುಂದೆ ಸಾಗುವಾಗ, ದ್ವೀಪದ ಪೂರ್ವದಲ್ಲಿ ಕೀಟಾಮೀ ಮತ್ತು ಹಿಡಾಕ ಶ್ರೇಣಿಗಳಾಗಿಯೂ ಪಶ್ವಿಮದಲ್ಲಿ ಟೆಷೀಯೋ ಮತ್ತು ಯೂಬರೀ ಪರ್ವತಗಳಾಗಿಯೂ ಪರಿಣಮಿಸುತ್ತದೆ. ಇವುಗಳ ನಡುವೆ ವಿಶಾಲ ಮೈದಾನಗಳುಂಟು.

ದಕ್ಷಿಣದಲ್ಲಿ ಹಾಕೈಡೋನಲ್ಲಿ ವಿಸ್ತರಿಸಿರುವ ಕ್ಯುರೀಲ್ ಶ್ರೇಣಿ ಹಲವು ಜ್ವಾಲಾ ಮುಖಿಗಳಾಗಿ ಪರಿಣಮಿಸಿದೆ. ಇವುಗಳಲ್ಲಿ ಅತ್ಯುನ್ನತವಾದ್ದು ಅಸಾಹೀ-ಡಾಕೇ (7,513'). ಇದು ಮಧ್ಯ ಹಾಕೈಡೋನಲ್ಲಿದೆ. ಜಪಾನಿನ ಎರಡನೆಯ ದೊಡ್ಡ ಮೈದಾನವಾದ ಟೋಕಾಚೀ ಇರುವುದು ಹಾಕೈಡೋನ ಪಶ್ವಿಮ ಭಾಗದಲ್ಲಿ-ಕ್ಯುರೀಲ್ ಮತ್ತು ಸಾಕಲೀನ್‍ಗಳು ಸಂಧಿಸುವೆಡೆಯಲ್ಲಿ.

ಹಾಕೈಡೋನ ನೈಋತ್ಯ ಪರ್ಯಾಯದ್ವೀಪ ಭಾಗವನ್ನಾವರಿಸಿರುವ ಟೋಹೋಕೂ ಪರ್ವತ ವ್ಯವಸ್ಥೆ ಹಾನ್‍ಷ್ಯೂವಿನ ಮಧ್ಯದ ಪ್ರದೇಶಕ್ಕೆ ಮುಂದುವರಿಯುತ್ತದೆ. ಇಲ್ಲಿ ಮೂರು ಪರ್ವತಶ್ರೇಣಿಗಳೂ ಇವುಗಳ ಅಂಚುಗಳಲ್ಲಿ ಮತ್ತು ನಡುವೆ ಇರುವ ಮೈದಾನಗಳೂ ಟೋಹೋಕೂ ಶ್ರೇಣಿಗೆ ಸಮಾಂತರಗಳಲ್ಲಿವೆ. ಮಧ್ಯದ ಶ್ರೇಣಿ ಅತ್ಯುನ್ನತ. ಇದು ಈ ಪ್ರದೇಶದ ಬೆನ್ನೆಲುಬಿನಂತಿದೆ. ಇದರ ನೆತ್ತಿಯಲ್ಲಿ ಅನೇಕ ಉನ್ನತ ಜ್ವಾಲಾಮುಖಿಗಳುಂಟು. ಪಶ್ಚಿಮದಲ್ಲಿರುವ ದೇವಾ ಶ್ರೇಣಿ ಇದಕ್ಕಿಂತ ಬಲು ತಗ್ಗು. ಇವೆರಡರ ನಡುವೆ ಹರಡಿರುವ ಶ್ರೇಣಿಗಳು ತುಂಡುತುಂಡಾಗಿವೆ. ಅವುಗಳ ನಡುವಣ ನೆಲ ಫಲವತ್ತಾದ್ದು.

ಜಪಾನಿನ ಮುಖ್ಯ ಶ್ರೇಣಿಗಳಲ್ಲಿ ಷಿಚಿಟೋ ಮರಿಯಾನ ಒಂದು. ಫೆಸಿಫಿಕಿನಿಂದ ಹರಿದುಬರುವ ಈ ಶ್ರೇಣಿ ಆರಂಭದಲ್ಲೇ ಏಳು ದ್ವೀಪಗಳನ್ನುಂಟು ಮಾಡಿದೆ. ಇವು ಜ್ವಾಲಾಮುಖಿ ದ್ವೀಪಗಳು. ಇವುಗಳ ಹೆಸರು ಈಜೂ ಷಿಚಿಟೊ. ಈ ಶ್ರೇಣಿಯ ಇಲ್ಲಿಂದ ಮುಂದಿನ ಭಾಗವೇ ಈಜೂ ಪರ್ಯಾಯದ್ವೀಪ. ಇದರ ಬಿಸಿನೀರ ಊಟೆಗಳೂ ಮರಳ ದಂಡೆಯೂ ಪ್ರಸಿದ್ಧವಾದವು. ಇಲ್ಲಿಂದ ಉತ್ತರಕ್ಕೆ ಇರುವ ಪ್ರದೇಶದಲ್ಲಿ ಹಾಕೋನೀ ಜ್ವಾಲಾಮುಖಿ ಇದೆ. ಆಷಿ ಸರೋವರ ಇರುವುದು ಇದರ ವಿಶಾಲ ಬೋಗುಣಿಯಲ್ಲೆ. ಜಪಾನಿನ ಅತ್ಯಂತ ಎತ್ತರವಾದ ಮತ್ತು ಅತ್ಯಂತ ಸುಂದರವಾದ ಫ್ಯೂಜೀಯಾಮ ಅಗ್ನಿಪರ್ವತ (12,395') ಇದರ ಬಳಿಯಲ್ಲಿದೆ. ಸೇನಾನ್ ಶ್ರೇಣಿ ಪೂರ್ವಪಶ್ಚಿಮವಾಗಿ ಹಬ್ಬಿದೆ. ಇದರ ಒಂದು ಭಾಗ ಚೂಗೋಕೂ ಪರ್ವತ. ಇದು ಚೂಗೋಕೂ ಪರ್ಯಾಯದ್ವೀಪದ ಬೆನ್ನೆಲುಬಿನಂತಿದೆ. ಬೀವಾ ಸರೋವರಕ್ಕೆ ಪಶ್ವಿಮದಲ್ಲಿ ಟಂಬ್ಲ ಪ್ರಸ್ಥಭೂಮಿ ಇದೆ. ಚೂಗೋಕೂ ಪರ್ವತದ ಮುಖ್ಯ ಶಿಖರ ಹೊಟಾಕಡಾಕೆ (10,138').

ಜಪಾನಿನ ಪರ್ವತರಚನೆಯಿಂದಾಗಿ ಜನವಸತಿಗೆ ಮತ್ತು ಸಂಪರ್ಕ ಸಾಧನಗಳ ವ್ಯವಸ್ಥೆಗೆ ಅಡಚಣೆಯಾಗಿದೆ. ಆದರೂ ಈ ಪರ್ವತಗಳಲ್ಲಿ ಅಪಾರ ಅರಣ್ಯ ಸಂಪತ್ತುಂಟು. ವಿಪುಲ ಜಲದ ನೆಲೆ ಈ ಪ್ರದೇಶಗಳಲ್ಲಿ ಇರುವುದರಿಂದ ಅನೇಕ ನದಿಗಳ ಉಗಮಕ್ಕೆ ಕಾರಣವಾಗಿದೆ. ಇವು ಸುಂದರ ದೃಶ್ಯಗಳ ಬೀಡುಗಳು.

ಜಪಾನಿನಲ್ಲಿ ಮುಖ್ಯ ಬಯಲುಗಳೆಲ್ಲ ಇರುವುದು ತೀರಪ್ರದೇಶಗಳಲ್ಲಿ. ಬಹುತೇಕ ಅವು ಪರ್ವತಗಳಿಂದ ಹೊತ್ತು ತಂದ ಮೆಕ್ಕಲು ಮತ್ತಿತರ ಗೋಡು ಮಣ್ಣುಗಳಿಂದ ಆದಂಥವು. ಪೆಸಿಫಿಕ್ ತೀರದ ಮಧ್ಯ ಹಾನ್‍ಷ್ಯೂವಿನಲ್ಲಿರುವ ಕ್ವಾನ್‍ಟೋ ಬಯಲಿನ ವಿಸ್ತೀರ್ಣ ಸುಮಾರು 5,000 ಚ.ಮೈ.

ಜಪಾನಿನಲ್ಲಿ 100ಕ್ಕೂ ಹೆಚ್ಚು ನದಿಗಳುಂಟು. ಅವುಗಳ ಪೈಕಿ ಮೂರು ಮಾತ್ರ 200 ಮೈ.ಗಿಂತ ಉದ್ದ. ಅವುಗಳ ಹೆಸರು ಷಿನಾನೋ (299 ಮೈ.), ಇಷಿಕಾರೀ (227 ಮೈ.) ಮತ್ತು ಟೋನೇ (200 ಮೈ.). ನದಿಗಳು ಬೆಟ್ಟದ ಇಳಿಜಾರಿನಲ್ಲಿ ರಭಸದಿಂದ ಹರಿಯುವಾಗ ಹೊತ್ತು ತಂದ ಮಣ್ಣಿನಿಂದ ಫಲವತ್ತಾದ ಮೈದಾನಗಳಾಗಿವೆ. ಪರ್ವತಪ್ರದೇಶದಿಂದ ಇಳಿದು ಮೈದಾನದಲ್ಲಿ ಹರಿಯುವಾಗ ಮೈದಾನಗಳಾಗಿವೆ. ಪರ್ವತಪ್ರದೇಶದಿಂದ ಇಳಿದು ಮೈದಾನದಲ್ಲಿ ಹರಿಯುವಾಗ ಈ ನದಿಗಳ ಮಣ್ಣು ತಳದಲ್ಲಿ ತಂಗಿ ಇವುಗಳ ಪಾತ್ರಗಳು ನೆರೆಯ ನಾಡಿಗಿಂತ ಸಾಮಾನ್ಯವಾಗಿ ಎತ್ತರವಾಗಿರುತ್ತವೆ.

ಜಪಾನಿನ ವ್ಯವಸಾಯಕ್ಕೆ ಬೇಕಾದ ನೀರಿನಲ್ಲಿ ಮೂರನೆಯ ಎರಡು ಭಾಗ ಒದಗುವುದು ನದಿಗಳಿಂದ. ಇವುಗಳಿಂದ ವಿದ್ಯುತ್ತಿನ ಉತ್ಪಾದನೆಯೂ ಆಗುತ್ತಿದೆ.

ವಾಯುಗುಣ[ಬದಲಾಯಿಸಿ]

ದಕ್ಷಿಣೋತ್ತರವಾಗಿ ಜಪಾನಿನ ಹರವು 15 ಅಕ್ಷಾಂಶೀಯ ಡಿಗ್ರಿಗಳಷ್ಟು ಇರುವುದರಿಂದ ಇದರ ಉಷ್ಣತೆ ಮತ್ತು ಅವಪಾತಗಳಲ್ಲಿ ಪ್ರಾದೇಶಿಕ ಭಿನ್ನತೆಗಳು ಅಧಿಕ. ದಕ್ಷಿಣದ ಕೀಯೂಷೂ ಉಪೋಷ್ಣವಲಯದಲ್ಲಿದೆ. ಅಲ್ಲಿ ಮಳೆ ಹೆಚ್ಚು. ಉತ್ತರದ ಹಾಕೈಡೋದು ಖಂಡಾಂತರ ವಾಯುಗುಣ. ಸುತ್ತಣ ಸಮುದ್ರ ವಿಶೇಷ ಪ್ರಭಾವ ಬೀರಿದೆ. ಚಳಿಗಾಲದಲ್ಲಿ ಏಷ್ಯದ ಒಳನಾಡಿನ ತೀವ್ರ ಚಳಿಯಿಂದಾಗಿ ಪೂರ್ವ ಸೈಬೀರಿಯದಲ್ಲಿ ಹೆಚ್ಚು ಒತ್ತಡ ಪ್ರದೇಶ ಏರ್ಪಟ್ಟು, ಅಲ್ಲಿಯ ಚಳಿಗಾಳಿ ಫೆಸಿಫಿಕಿನತ್ತ ಹರಿಯುತ್ತದೆ. ಈ ಗಾಳಿ ಜಪಾನ್ ಸಮುದ್ರವನ್ನು ದಾಟುವಾಗ ತೇವವನ್ನು ಸಂಗ್ರಹಿಸಿ, ಜಪಾನಿನ ಮೇಲೆ ಮಳೆ ಹಿಮ ಸುರಿಸುತ್ತದೆ. ಬೇಸಗೆಯಲ್ಲಿ ಒತ್ತಡದ ಏರುತಗ್ಗು ತೀರುವುಮುರುವಾಗಿ, ಪೆಸಿಫಿಕಿನಿಂದ ಸೈಬೀರಿಯದತ್ತ ಬೀಸುವ ಮಾರುತದಿಂದ ಜಪಾನಿನಲ್ಲಿ ಮಳೆಯಾಗುತ್ತದೆ. ಮಾನ್ಸೂನಿನ ಪರಿಣಾಮದಿಂದಾಗಿ ಜಪಾನಿನಲ್ಲಿ ಅದರ ಅಕ್ಷಾಂಶಗಳಲ್ಲಿ ಇರಬೇಕಾದ್ದಕ್ಕಿಂತ ಚಳಿ ತೀವ್ರತರ; ಬೇಸಗೆಯೂ ತೇವಕರ, ಬೇಸಗೆಯಲ್ಲೂ ಅನಂತರದ ಎರಡು ತಿಂಗಳುಗಳಲ್ಲೂ ಜಪಾನು ಪದೇಪದೇ ಚಂಡಮಾರುತಕ್ಕೆ ಒಳಗಾಗುತ್ತದೆ. ದಕ್ಷಿಣ ಜಪಾನಿಗೆ ಇದರ ಬಾಧೆ ವಿಪರೀತ.

ಡಿಸೆಂಬರಿನಿಂದ ಫೆಬ್ರವರಿಯ ವರೆಗೆ ಜಪಾನಿನ ಹಲವು ಭಾಗಗಳಲ್ಲಿ ನೀರು ಗಡ್ಡೆ ಕಟ್ಟುವುದಕ್ಕಿಂತ ಕಡಿಮೆಯ ಉಷ್ಣತೆ ಇರುತ್ತದೆ. ಉತ್ತರದಿಂದ ದಕ್ಷಿಣಕ್ಕೆ ಬಂಧಂತೆ ಉಷ್ಣತೆ ಅಧಿಕ. ಹಾಕೈಡೋನ ಪಶ್ಚಿಮ ಮಧ್ಯದಲ್ಲಿರುವ ಆಸಾಹೀಗಾವ ನಗರದಲ್ಲಿ ಜನವರಿಯ ಮಧ್ಯ (ಮೀನ್) ಉಷ್ಣತೆ 14ಲಿ ಫ್ಯಾ. ; ಟೋಕಿಯೋದಲ್ಲಿ 37ಲಿ ಫ್ಯಾ. ನೈಋತ್ಯದಲ್ಲಿರುವ ಓಸಾಕದಲ್ಲಿ 30ಲಿ ಫ್ಯಾ. ಚಳಿಗಾಲದಲ್ಲಿ ಜಪಾನಿನಲ್ಲಿ ಅತ್ಯಧಿಕ ಉಷ್ಣತೆ ಇರುವ ಪ್ರದೇಶ ಕೀಯೂಷೂ. ಅಲ್ಲಿ ಜನವರಿಯ ಮಾಧ್ಯ ಉಷ್ಣತೆ 45ಲಿ ಫ್ಯಾ.

ಜಪಾನಿನ ಅಕ್ಷಾಂಶೀಯ ವ್ಯಾಪ್ತಿಯಿಂದ ಅದರ ಬೇಸಗೆ ಉಷ್ಣತೆಯ ಮೇಲೆ ಹೆಚ್ಚಿನ ಪರಿಣಾಮವಾಗಿಲ್ಲ. ಆದರೆ ಎತ್ತರಕ್ಕೆ ಅನುಗುಣವಾಗಿ ಅದು ವ್ಯತ್ಯಾಸವಾಗುತ್ತದೆ. ಹಾಕೈಡೋ ಹೆಚ್ಚು ತಂಪು. ಅತ್ಯುಷ್ಣ ತಿಂಗಳಾದ ಆಗಸ್ಟಿನಲ್ಲಿ ಮಾಧ್ಯ ಉಷ್ಣತೆ ಹೀಗಿರುತ್ತದೆ: ಕಾಗಷೀವ: 79ಲಿ ಫ್ಯಾ. ಓಸಾಕ 81ಲಿ ಫ್ಯಾ. ಟೋಕಿಯೋ 77ಲಿ ಫ್ಯಾ. ಸಪೋರೋ 69ಲಿ ಫ್ಯಾ. ಹಾಕೈಡೋದಲ್ಲಿ ವರ್ಷದಲ್ಲಿ 120 ದಿನಗಳು ಹಿಮಮುಕ್ತ. ಕೀಯೂಷೂವಿನಲ್ಲಿ ಇಂಥ ದಿನಗಳ ಸಂಖ್ಯೆ ಎರಡರಷ್ಟು.

ಹೆಚ್ಚು ಮಳೆ ಅಥವಾ ಹಿಮ ಬೀಳದ ಪ್ರದೇಶ ಜಪಾನಿನಲ್ಲಿ ಇಲ್ಲ. ಬೇಸಗೆಯ ಆರಂಭಕಾಲದಲ್ಲಿ ಗರಿಷ್ಠ ಮಳೆ. ಇದಕ್ಕೆ ಅಪವಾದವೆಂದರೆ ಜಪಾನ್ ಸಮುದ್ರದ ನೆರೆಯ ಪ್ರದೇಶ. ಅಲ್ಲಿ ಚಳಿಗಾಲದ ಹಿಮಪಾತ ಹೆಚ್ಚು. ಜಪಾನಿನ ಬಹು ಭಾಗದಲ್ಲಿ 40 ಗಿಂತ ಹೆಚ್ಚು ಮಳೆ ಅಥವಾ ಹಿಮ ಬೀಳುತ್ತದೆ. ಪಶ್ಚಿಮ ಹಾಕೈಡೋ, ಪೂರ್ವ ಹಾನ್‍ಷ್ಯೂ, ಒಳ ಸಮುದ್ರಪ್ರದೇಶದಲ್ಲಿ ವರ್ಷಕ್ಕೆ 40"-60" ಅವಪಾತ.

ಜಪಾನಿನಲ್ಲಿ ಅನೇಕ ಸರೋವರಗಳುಂಟು. ಬಹುತೇಕ ಅವು ಸಣ್ಣವು. ಮಧ್ಯ ಹಾನ್‍ಷ್ಯೂವಿನ ಪಶ್ಚಿಮದಲ್ಲಿರುವ ಬೀವಾ ಸರೋವರ (260 ಚ.ಮೈ.) ಅತ್ಯಂತ ದೊಡ್ಡದು.

ವಿದ್ಯುತ್ತು[ಬದಲಾಯಿಸಿ]

ಜಪಾನು ಪರ್ವತಪ್ರದೇಶಗಳಿಂದ ಕೂಡಿರುವುದರಿಂದಲೂ ಅಲ್ಲಿಯ ನದಿಗಳು ವರ್ಷದ ಬಹು ಕಾಲ ತುಂಬಿ ಹರಿಯುವುದರಿಂದಲೂ ವಿದ್ಯುತ್ತಿನ ಉತ್ಪಾದನೆಗೆ ವಿಪುಲ ಅವಕಾಶವಿದೆ. ಜಪಾನಿನ ಜಲವಿದ್ಯುತ್ ಕಾರ್ಯಗಾರಗಳಲ್ಲಿ ಶೇಕಡ 88ರಷ್ಟು ಕಾರ್ಯಾಗಾರಗಳು 10,000 ಕಿವಾ. ವಿದ್ಯುತ್ ಉತ್ಪಾದನೆಗೂ ಕಡಿಮೆ ಸಾಮಥ್ರ್ಯ ಉಳ್ಳವು. ಉಷ್ಣ ವಿದ್ಯುತ್ತೂ ಗಣನೀಯವಾಗಿ ಉತ್ಪಾದಿತವಾಗುತ್ತಿದೆ. ಜಪಾನಿನ ಇಂಧನ ಸಾಮಥ್ರ್ಯದ ಶÉೀ. 56ರಷ್ಟು ಕಲ್ಲಿದ್ದಲು ಮತ್ತು ಲಿಗ್ನೈಟ್ ಮೂಲವುಳ್ಳದ್ದು; ಶೇ. 33 ಜಲವಿದ್ಯುತ್ತು.

ಅರಣ್ಯ ಸಂಪತ್ತು[ಬದಲಾಯಿಸಿ]

ಜಪಾನಿನ ಅರ್ಧಕ್ಕಿಂತ ಹೆಚ್ಚು ಪ್ರದೇಶ ಅರಣ್ಯಾವೃತ. ಒಟ್ಟು ವಿಸ್ತೀರ್ಣವಾದ 9-14 ಕೋಟಿ ಎಕರೆಗಳಲ್ಲಿ 5.5 ಕೋಟಿ ಎಕರೆ ಅರಣ್ಯ ಪ್ರದೇಶ. ಇದರ ಅರ್ಧ ಭಾಗದಲ್ಲಿ ಅಗಲ ಎಲೆಗಳ ಕಾಡೂ ಶೇಕಡ 29ರಷ್ಟು ಪ್ರದೇಶದಲ್ಲಿ ಶಂಕುಧಾರಿ ಕಾಡೂ ಇವೆ. ಶೇ. 5ಕ್ಕಿಂತ ಕಡಿಮೆ ಪ್ರದೇಶ ಬಿದಿರು ಕಾಡು. ಇದರ ಜೊತೆಗೆ 60 ಲಕ್ಷ ಎಕರೆ ಪ್ರದೇಶಗಳಲ್ಲಿ ಕುರುಚಲು ಕಾಡಿದೆ. ಜಪಾನ್ ಸಸ್ಯಸಂಪತ್ತಿನಲ್ಲಿ ಸಮೃದ್ಧವಾಗಿರುವುದಕ್ಕೆ ಅಲ್ಲಿ ವರ್ಷದ ಬಹುಭಾಗ ಮಳೆ ಬೀಳುವುದು ಮತ್ತು ಗುಡ್ಡಬೆಟ್ಟಗಳಿಂದ ತುಂಬಿರುವುದೇ ಮುಖ್ಯ ಕಾರಣ.

ಜಪಾನಿನ ಅರಣ್ಯ ಪ್ರದೇಶಗಳನ್ನು ಸ್ಥೂಲವಾಗಿ ಮೂರು ವಲಯಗಳಾಗಿ ವಿಂಗಡಿಸಬಹುದು: 1 ಉತ್ತರವಲಯ: ಹಾಕೈಡೋದ ಮಧ್ಯ ಮತ್ತು ಪೂರ್ವ ಭಾಗ, ಹಾನ್‍ಷ್ಯೂವಿನ ಎತ್ತರ ಪ್ರದೇಶ. ಇಲ್ಲಿ ಹೆಚ್ಚಾಗಿ ಭೂರ್ಜ, ಫರ್, ಲಾರ್ಜ್ ಮತ್ತು ಸ್ಪ್ರೂಸ್ ಮರಗಳಿವೆ. 2 ಸಮಶೀತೋಷ್ಣವಲಯ: ಮಧ್ಯ ಹಾನ್‍ಷ್ಯೂವಿನ 5,400'ಗಿಂತ ಕಡಿಮೆ ಎತ್ತರದ ಪ್ರದೇಶ. ಇಲ್ಲಿಯದು ಮಿಶ್ರ ಅರಣ್ಯ. ಈ ಪ್ರದೇಶದಲ್ಲಿ ಎಲೆ ಉದುರುವ, ಅಗಲ ಎಲೆಯ ವಂಶಕ್ಕೆ ಸೇರಿದ, ಬೀಚ್, ಆಷ್, ಚೆಸ್‍ನಟ್ ಮತ್ತು ಓಕ್ ಮರಗಳಿವೆ. ಶಂಕುಧಾರಿ ಜಾತಿಯ ಪೈನ್, ಫರ್ ಮತ್ತು ದೇವದಾರು ಮರಗಳೂ ಬೆಳೆಯುತ್ತವೆ. 3 ಉಪೋಷ್ಣವಲಯ: ಕೀಯೂಷೂ, ಷಿಕೋಕೂ, ಕ್ವಾಂಟೋ ಮೈದಾನದವರೆಗಿನ ಹಾನ್‍ಷ್ಯೂ ಪ್ರದೇಶ. ಅಗಲ ಎಲೆಗಳ ನಿತ್ಯಹಸುರಿನ ಮತ್ತು ಎಲೆ ಉದುರುವ ಮರಗಳಿವೆ. ಆಲ, ತಾಳೆ, ನೀಲಗಿರಿ ಮುಂತಾದ ವೃಕ್ಷಗಳು ದಕ್ಷಿಣ ಷಿಕೋಕೂ ಮತ್ತು ಕೀಯೂಷೂಗಳಲ್ಲಿವೆ.

ಜಪಾನಿನ ಸರ್ಕಾರಿ ಮತ್ತು ಶ್ರೀಮಂತರ ಕೆಲವು ಕಟ್ಟಡಗಳನ್ನು ಬಿಟ್ಟರೆ ಉಳಿದೆಲ್ಲವನ್ನೂ ಬಹುತೇಕ ಮರದಿಂದಲೇ ಕಟ್ಟಲಾಗಿದೆ. ಮರಗಳು ಹೇರಳವಾಗಿರುವುದು ಒಂದು ಕಾರಣ. ಇಲ್ಲಿ ಆಗಾಗ ಸಂಭವಿಸುವ ಭೂಕಂಪಗಳ ಭಯ ಇನ್ನೊಂದು ಕಾರಣ. ಲೋಹದ ಉಪಕರಣಗಳ ಬದಲಿಗೆ ಸಾಧ್ಯವಾದಲ್ಲೆಲ್ಲ ಮರದ ಪಾತ್ರೆಗಳನ್ನೇ ಬಳಸಲಾಗುತ್ತದೆ. ಕಾಗದ, ಕೃತಕ ರೇಷ್ಮೆ ಇವು ಅರಣ್ಯವನ್ನವಲಂಬಿಸಿದ ಎರಡು ಮುಖ್ಯ ಕೈಗಾರಿಕೆಗಳು. ಮರದ ಇದ್ದಿಲನ್ನು ಅಡುಗೆಗೂ ಅನಿಲ ಉತ್ಪಾದನೆಗೂ ಬಳಸಲಾಗುತ್ತದೆ.

ಜಪಾನ್ ಈಗ ಮರದ ನಾಟಾಗಳನ್ನು ವಿದೇಶಗಳಿಂದಲೂ ಆಮದು ಮಾಡಿಕೊಳ್ಳುತ್ತಿದೆ. ಆದರೆ ಇನ್ನೂ ದುರ್ಗಮವಾಗಿರುವ ಅದರ ಕಾಡುಗಳನ್ನು ಬಳಸಿಕೊಳ್ಳಬಹುದು ಮತ್ತು ಪುನರ್ನವೀಕರಣದಿಂದ ಅದರ ಬೇಡಿಕೆಯ ಗಣನೀಯ ಭಾಗವನ್ನು ತುಂಬಿಕೊಳ್ಳಬಹುದು.

ಪ್ರಾಣಿ ಸಂಪತ್ತು[ಬದಲಾಯಿಸಿ]

ಜಪಾನ್ ಅಪಾರ ಪ್ರಾಣಿಸಂಪತ್ತಿರುವ ದೇಶ. ಅಲ್ಲಿಯ ವಾಯುಗುಣ ಮತ್ತು ಸಸ್ಯಸಂಪತ್ತಿನಂತೆ ಪ್ರಾಣಿಸಂಪತ್ತೂ ವೈವಿಧ್ಯ ಪೂರ್ಣ. ಅಕ್ಷಾಂಶ ಹಾಗೂ ನೆಲದ ಎತ್ತರಕ್ಕೆ ಅನುಗುಣವಾಗಿ ಇದು ವ್ಯತ್ಯಾಸವಾಗುತ್ತದೆ. ಜಪಾನಿನ ನೆಲ ಪ್ರಾಣಿಗಳು ಬಹುತೇಕ ಸಮಶೀತೋಷ್ಣವಲಯ ಜಾತಿಗಳವು. ಹಾಕೈಡೋದಲ್ಲಿ ಉಪಶೀತವಲಯ ಪ್ರರೂಪಗಳೊಂದಿಗೂ ಇವು ಬೆರೆತುಕೊಂಡಿವೆ. ಚೀನ, ಕೊರಿಯ, ಸೈಬೀರಿಯ ಮತ್ತು ಆಗ್ನೇಯ ಏಷ್ಯದ ಪ್ರಾಣಿ ಜಾತಿಗಳಿಗೂ ಇವಕ್ಕೂ ಸಾದೃಶ್ಯಗಳಿರುವುದರಿಂದ ಇವು ಮೂಲತಃ ಖಂಡಪ್ರದೇಶದಿಂದ ಇಲ್ಲಿಗೆ ಬಂದಿರಬಹುದೆಂದು ಊಹಿಸಬಹುದು. ಸಾಗರಿಕ ಪ್ರಾಣಿಗಳನ್ನೂ ಉತ್ತರ, ಮಧ್ಯ ಮತ್ತು ಉಷ್ಣವಲಯವೆಂದು ವಿಂಗಡಿಸಬಹುದು. ಆದರೆ ಒಂದು ವ್ಯತ್ಯಾಸ: ಉಷ್ಣವಲಯದ ಜಾತಿಗಳು ಇವೇ ಜಾತಿಗಳ ನೆಲ ಪ್ರಾಣಿಗಳಿರುವುದಕ್ಕಿಂತಲೂ ಉತ್ತರದಲ್ಲಿ ಸಾಗರದಲ್ಲಿವೆ. ಜಪಾನ್ ಉಷ್ಣೋದಕ ಪ್ರವಾಹದಲ್ಲಿ ಟೋಕಿಯೋ ಕೊಲ್ಲಿಯ ಹೊರಗಿರುವ ಬೋಸೋ ಪರ್ಯಾಯ ದ್ವೀಪದ ವರೆಗೂ ಉಷ್ಣನೀರಿನ ಪ್ರಾಣಿಜಾತಿಗಳು ಪ್ರಸರಿಸಿವೆ.

ಜಪಾನ್ ಮತ್ತು ನೆರೆಯ ಕಡಲುಗಳಲ್ಲಿ ಸುಮಾರು 140 ಸಸ್ತನಿಗಳನ್ನು ಗುರುತಿಸಲಾಗಿದೆ. ದಂಶಕ, ತಿಮಿಂಗಿಲ, ಹಂದಿಮೀನು, ಕಡಲ ಹಂದಿ, ಸಣ್ಣಿಲಿ, ಮುಖಮಲ್ ಹೆಗ್ಗಣ, ಬಾವಲಿ, ಮಕಾತ್ ಎಂಬ ವಾನರ, ಕರಡಿ, ಬ್ಯಾಡ್ಜರ್, ನೀರುನಾಯಿ, ಅರ್ಮಿನ್, ಮಿಂಕ್, ಮಾರ್ಟೆನ್, ರಾಕೂನ್, ನರಿ, ತೋಳ, ಸೀಲ್, ವಾಲ್ರಸ್, ಕಾಡುಹಂದಿ, ಜಿಂಕೆ, ಸಾರಗ-ಇವು ಕೆಲವು ಪ್ರಾಣಿಗಳು. ಜಪಾನಿನ ಸುತ್ತಣ ಸಮುದ್ರಗಳಲ್ಲಿ ಮೂವತ್ತಕ್ಕೂ ಹೆಚ್ಚು ಬಗೆಯ ತಿಮಿವರ್ಗ ಪ್ರಾಣಿಗಳಿವೆ. ಜಪಾನಿನಲ್ಲಿ ಸುಮಾರು 450 ಜಾತಿಯ ಹಕ್ಕಿಗಳಿವೆ. ಇವುಗಳಲ್ಲಿ ಸುಮಾರು ನೂರೈವತ್ತು ನೀರುಹಕ್ಕಿಗಳ ಉರಗಗಳಲ್ಲಿ ಮೂವತ್ತು ಜಾತಿ.

ಜಪಾನಿನ ಸಾಕು ಪ್ರಾಣಿಗಳಲ್ಲಿ ದನ, ಕುದುರೆ, ಕುರಿ, ಕೋಳಿ, ಹಂದಿ ಮುಖ್ಯ. 1971ರಲ್ಲಿ 36,15,000 ದನಗಳೂ ಇಲ್ಲಿ ಸ್ವಾಭಾವಿಕ ಹುಲ್ಲುಗಾವಲುಗಳ ಕೊರತೆ ಇರುವುದರಿಂದ ದನಗಳ ಸಾಕಣೆ ವೆಚ್ಚ ದುಬಾರಿ. ಇಲ್ಲಿಯ ಬೆಟ್ಟದ ಹುಲ್ಲು ಒರಟು, ನಿಸ್ಸಾರ. ಆದ್ದರಿಂದ ದನಗಳ ಮೇವಿನ ಸಮಸ್ಯೆ ತೀವ್ರವಾದ್ದು. ದನಗಳನ್ನೂ ಕುದುರೆಗಳನ್ನೂ ವ್ಯವಸಾಯಕ್ಕೆ. ನೆಲ ಮಟ್ಟಮಾಡಲು ಮತ್ತು ಗೊಬ್ಬರಕ್ಕಾಗಿ ಸಾಕುತ್ತಾರೆ.

ಜನಜೀವನ[ಬದಲಾಯಿಸಿ]

ಇಲ್ಲಿಯ ಜನ ಏಷ್ಯದ ಮುಖ್ಯ ಭೂಭಾಗದಿಂದ ಬಂದು ನೆಲೆಸಿದವರು. ಬಹು ಸಂಖ್ಯಾತರು ಮಾಂಗೋಲಾಯಿಡ್ ಬುಡಕಟ್ಟಿಗೆ ಸೇರಿದವರು. ಇವರಲ್ಲಿ ಇತರ ಮಾಂಗೋಲಾಯಿಡ್ ಜನರಿಂದ ಭಿನ್ನವೆನಿಸುವ ಲಕ್ಷಣಗಳು ಹಲವಿಲ್ಲ. ಉತ್ತರ ಜಪಾನಿನ ಮೂಲವಾಸಿ ಐನುಗಳ ಮತ್ತು ಆಗ್ನೇಯ ಏಷ್ಯ, ಕೊರಿಯ, ಯೂರೋಪ್ ಮುಂತಾದವರ ಮಿಶ್ರಣದ ಜನರೂ ಅಲ್ಪಸಂಖ್ಯೆಯಲ್ಲುಂಟು. ಜಪಾನಿನ ಬಹು ಸಂಖ್ಯಾತರು ಆನುವಂಶಿಕವಾಗಿ ಕೊರಿಯನರಿಗೆ, ಟುಂಗುಸ್ ಪಂಗಡಗಳಿಗೆ ಮತ್ತು ಉತ್ತರ ಚೀನೀಗುಂಪುಗಳಿಗೆ ಅತ್ಯಂತ ಸಮೀಪವೆಂದು ಹೇಳಲಾಗಿದೆ. ಇತರ ಮಾಂಗೋಲಾಯಿಡ್ ಗುಂಪುಗಳಿಗಿಂತ ಜಪಾನೀಯರಿಗೆ ಮೈ ಮತ್ತು ಮುಖಗಳ ಮೇಲೆ ಕೂದಲು ಹೆಚ್ಚು; ಮೈಬಣ್ಣ ಹಳದಿಗಿಂತ ಹೆಚ್ಚು ಕಂದು. ಮೈಕಟ್ಟು ಹೆಚ್ಚು ಗಟ್ಟಿಮುಟ್ಟು. ಜಪಾನೀಯರು ಕುಳ್ಳ ಜನಾಂಗವೆನಿಸಿದ್ದರೂ 1900 ರಿಂದೀಚೆಗೆ ಅವರಲ್ಲಿ ಅಸಾಧಾರಣ ದೈಹಿಕ ಬದಲಾವಣೆಗಳಾಗಿವೆ. ಅವರ ಸರಾಸರಿ ಎತ್ತರ 50 ವರ್ಷಗಳಲ್ಲಿ ಸುಮಾರು 3"ಗಳಷ್ಟು ಅಧಿಕವಾಗಿದೆ (5' 4"). ಇದು ಸುಧಾರಿತ ಆಹಾರ ಮತ್ತು ವೈದ್ಯ ಸೌಲಭ್ಯಗಳ ಫಲ ಎಂದು ಹೇಳಲಾಗಿದೆ. ಪಟ್ಟಣದ ಜನ ಹಳ್ಳಿಗರಿಗಿಂತ ಹೆಚ್ಚು ಎತ್ತರ. ಜಪಾನೀ ಕುಸ್ತಿಪಟುಗಳ ಮೈಕಟ್ಟು ಅಸಾಧಾರಣ.

ಅಲ್ಪಸಂಖ್ಯಾತ ಕುಲಗಳ ಪೈಕಿ ಐನುಗಳದು ಗಮನಾರ್ಹ, ದೈಹಿಕ ಲಕ್ಷಣ, ಸಂಸ್ಕøತಿ ಮತ್ತು ಭಾಷೆಯಲ್ಲಿ ಅವರು ವಿಶಿಷ್ಟರು. ಅವರ ಮೂಲ ಗೊತ್ತಿಲ್ಲ. ಅವರ ಲಕ್ಷಣಗಳಿಂದ ಅವರು ಕಾಕಸಾಯಿಡ್ ಸಂಬಂಧ ಇರಬಹುದೆಂದು ಊಹಿಸಬಹುದು. ಅವರ ಮೈಮೇಲೆ ಕೂದಲು ಅಧಿಕ.

ಜಪಾನಿನಲ್ಲಿ ಒಂದು ಪ್ರಮುಖ ಮತಧರ್ಮವಿಲ್ಲ. ಅಲ್ಲಿ ಅನೇಕ ಮತಗಳೂ ಅರೆ ಮತಗಳೂ ಜೊತೆಜೊತೆಯಾಗಿವೆ. ರಾಷ್ಟ್ರೀಯ ಮತ್ತು ಸಾಮಾಜಿಕ ಪದ್ಧತಿಗಳು ಷಿಂಟೋ ಮತಕ್ಕೆ ಅನುಗುಣವಾಗಿವೆ. ಸಾರ್ವಜನಿಕ ಹಾಗೂ ಖಾಸಗಿ ನೀತಿನಡವಳಿಕೆಗಳಿಗೆ ಕಾನ್ಫ್ಯೂಷನಿಸಂ ಆಧಾರ. ತಾತ್ತ್ವಿಕ ವಿಚಾರಗಳಲ್ಲಿ ಬೌದ್ಧಮತ ಪ್ರಧಾನ. ಈ ಎಲ್ಲ ಮತಧರ್ಮಗಳೂ ಪರಸ್ಪರ ಪ್ರಭಾವ ಬೀರಿವೆ. ಕ್ರೈಸ್ತ ಮತವೂ ವ್ಯಾಪಕವಾಗಿದೆ.

ಆರ್ಥಿಕತೆ[ಬದಲಾಯಿಸಿ]

ಕೃಷಿ[ಬದಲಾಯಿಸಿ]

ಜಪಾನಿನ ಒಟ್ಟು ಭೂಪ್ರದೇಶದಲ್ಲಿ ಶೆÉೀಕಡ 16ರಷ್ಟು ಮಾತ್ರ ಸಾಗುವಳಿಗೆ ಯೋಗ್ಯವಾದ್ದು. ಇರುವ ಜಮೀನಿನಲ್ಲೂ ಮಣ್ಣಿನಲ್ಲಿ ಆಮ್ಲದ ಲಾವ ಬೆರೆತಿರುವುದರಿಂದ ಅಷ್ಟು ಫಲವತ್ತಾಗಿಲ್ಲ. ಮಳೆಯ ಕಾರಣದಿಂದಾಗಿ ಆಗಾಗ ಮಣ್ಣು ತೊಳೆದುಹೋಗುವುದರಿಂದಲೂ ಅಧಿಕ ತೇವದಿಂದಾಗಿ ಮಣ್ಣಿನ ಸಾರ ಆಳಕ್ಕೆ ಇಳಿಯುವುದರಿಂದಲೂ ಜಮೀನಿನ ಫಲವಂತಿಕೆಯನ್ನು ಶ್ರಮ ಪೂರ್ವಕವಾಗಿ ಸಂರಕ್ಷಿಸಬೇಕು.

ಜಪಾನಿನ ವಾಯುಗುಣ ಆಹಾರಬೆಳೆಗೆ ಅನುಕೂಲಕರವಾದ್ದು. ಜಪಾನಿನ ಎಲ್ಲ ಭಾಗಗಳಲ್ಲೂ ಸಾಕಷ್ಟು ಮಳೆಯಾಗುತ್ತದೆ. ಇಲ್ಲಿಯ ಸಾಗುವಳಿ ಭೂಮಿಯ ಶೇಕಡ 30ರಲ್ಲಿ ಎರಡು ಬೆಳೆ ಬೆಳೆಯುತ್ತಾರೆ. ಉತ್ತರ ಮತ್ತು ಪೂರ್ವ ಭಾಗಗಳಲ್ಲಿ ಚಳಿಗಾಲದಲ್ಲಿ ಬೀಳುವ ಮಂಜು ಮತ್ತು ಅಧಿಕ ಹಿಮದಿಂದಾಗಿ ಎರಡನೆಯ ಬೆಳೆ ಸಾಧ್ಯವಿಲ್ಲ. ಎರಡು ಬೆಳೆ ಬೆಳೆಯುವ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಬೇಸಿಗೆಯಲ್ಲಿ ಬತ್ತ ಬೆಳೆದರೆ ಚಳಿಗಾಲದಲ್ಲಿ ಗೋಧಿ ಮತ್ತು ಖುಷ್ಕಿ ಬೆಳೆಗಳನ್ನು ಬೆಳೆಯುತ್ತಾರೆ.

ವ್ಯವಸಾಯಕ್ಕೆ ಕ್ಯಾಂಟೋ, ಇಷಿಕಾರೀ, ಈಚಿಗೋ, ನೋಬೀ ಮೊದಲಾದ ಬಯಲುಗಳು ಪ್ರಸಿದ್ಧವಾಗಿವೆ. ಇಲ್ಲಿಯ ನದಿಗಳು ಬೆಟ್ಟಗುಡ್ಡಗಳು ಮತ್ತು ಕಣಿವೆಗಳಲ್ಲಿ ಹರಿದು ಬಹು ಬೇಗ ಸಮುದ್ರವನ್ನು ಸೇರುವುದರಿಂದ ವಿಶಾಲ ಬಯಲುಗಳಲ್ಲಿ ದೊಡ್ಡ ಅಣೆಕಟ್ಟುಗಳನ್ನು ನಿರ್ಮಿಸಿ ನೀರಾವರಿಯನ್ನು ಹೆಚ್ಚಿಸಲು ಕಷ್ಟಕರವಾಗಿದೆ. ಸಾಮಾನ್ಯವಾಗಿ ಈಗಿರುವ ವ್ಯವಸಾಯ ಕ್ಷೇತ್ರದ ಬಹುಭಾಗಕ್ಕೆ ನೀರಾವರಿಯ ಕೊರತೆಯಿಲ್ಲ.

ಮಹಾಯುದ್ಧದಲ್ಲಿ ಕೈಗಾರಿಕೆಗಳು ಮತ್ತು ಭಾರಿ ಉದ್ಯಮಗಳು ನಾಶಹೊಂದಿದಾಗ ಜಪಾನಿನ ಆರ್ಥಿಕ ಆಶ್ರಯವಾಗಿ ಉಳಿದುಕೊಂಡಿದ್ದು ವ್ಯವಸಾಯ ಒಂದೇ. 1860ರ ದಶಕದಲ್ಲಿ ಜಪಾನಿನ ಸುಮಾರು 80ರಷ್ಟು ಜನ ವ್ಯವಸಾಯವನ್ನು ಅವಲಂಬಿಸಿದರು. 1949ರ ಹೊತ್ತಿಗೆ ವ್ಯವಸಾಯವನ್ನು ಅವಲಂಬಿಸಿದ್ದವರ ಸಂಖ್ಯೆ ಒಟ್ಟು ಜನಸಂಖ್ಯೆಯ ಅರ್ಧಕ್ಕೆ ಇಳಿದಿತ್ತು. ಯುದ್ಧೋತ್ತರ ಆರ್ಥಿಕ ಪುನರ್‍ರಚನೆಯಲ್ಲಿ ಗಣನೀಯ ಪ್ರಗತಿ ಸಾಧಿಸಿದ ಜಪಾನ್‍ನಲ್ಲಿ 1970ರ ವೇಳೆಗೆ ವ್ಯವಸಾಯದಲ್ಲಿ ನಿರತರಾದವರ ಸಂಖ್ಯೆ ಒಟ್ಟು ಜನಸಂಖ್ಯೆಯ ಶೇಕಡ 15ಕ್ಕೂ ಕಡಿಮೆ.

ವ್ಯವಸಾಯ ಪ್ರದೇಶದ ಕೊರತೆಯಿಂದಾಗಿ ಅಲ್ಲಿ ಸಾಂದ್ರ ಬೇಸಾಯಕ್ಕೆ ಹೆಚ್ಚು ಗಮನ ಸಂದಿದೆ. ಬತ್ತದ ಗದ್ದೆಗಳು ಮೆಟ್ಟಿಲುಮೆಟ್ಟಿಲಾಗಿವೆ. ಪ್ರತಿ ಮೆಟ್ಟಿಲಿಗೂ ಮಧ್ಯೆ ಬದು ಹಾಕಲಾಗಿದೆ. ಅನೇಕ ಎತ್ತರದ ಪ್ರದೇಶಗಳನ್ನು ಸಮತಟ್ಟು ಮಾಡಿ ಗಟ್ಟಿ ಮಾಡಲಾಗಿದೆ. ಹಳೆಯ ವ್ಯವಸಾಯ ಪದ್ಧತಿಯನ್ನು ಬಿಟ್ಟು ಭೂಮಿಯ ಸಾರವನ್ನು ಕಾಯ್ದಿರಿಸಲೂ ಬಹು ಬೆಳೆಗಳನ್ನು ಬೆಳೆಯಲೂ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜಪಾನಿನಲ್ಲಿ ಸಣ್ಣ ಹಿಡುವಳಿಗಳೇ ಹೆಚ್ಚು. ಆದರೂ ಅತ್ಯಾಧುನಿಕ ವಿಧಾನವನ್ನು ಅನ್ವಯಿಸುವುದರಲ್ಲಿ ಹಿಂದುಳಿದಿಲ್ಲ.

ಜಪಾನಿನಲ್ಲಿ ಯಾಂತ್ರೀಕರಣದ ಬೆಳೆವಣಿಗೆಯಾಗಿದ್ದರೂ ಪ್ರಾಣಿಗಳನ್ನು ಹೂಡಿ ಬೇಸಾಯ ಮಾಡುವುದು ಹೆಚ್ಚಾಗಿ ಬಳಕೆಯಲ್ಲಿತ್ತು. ಮಾನವಶಕ್ತಿ ಅಗಾಧವಾಗಿರುವುದರಿಂದ ಶ್ರಮ ಮಿಗಿಸುವ ಉಪಕರಣಗಳನ್ನು ಬಳಸುವಲ್ಲಿ ಜಪಾನೀಯರು ಅಷ್ಟು ಮುಂದಾಗಲಿಲ್ಲ. ಆದರೆ ಎರಡನೆಯ ಮಹಾಯುದ್ಧದ ಕಾಲದಿಂದ ವ್ಯವಸಾಯಕ್ಕೆ ವ್ಯಾಪಕವಾಗಿ ತಾಂತ್ರಿಕ ಕ್ರಮ ಅನ್ವಯಿಸಲಾಗಿದೆ. ರಾಸಾಯನಿಕ ಗೊಬ್ಬರಗಳ ಬಳಕೆ ಹೆಚ್ಚಿದೆ. ಕ್ರಿಮಿನಾಶಕಗಳು ಮತ್ತು ಕಳೆನಾಶಕ ವಸ್ತುಗಳನ್ನು ಹೆಚ್ಚಾಗಿ ಬಳಸುತ್ತಾರೆ. ಫಲಸನ್ನು ಹದಮಾಡಲು ಮತ್ತು ಭೂಮಿಯನ್ನು ಉಳಲು ಸಣ್ಣ ಕೈಯಂತ್ರಗಳನ್ನು ಹೆಚ್ಚಾಗಿ ಬಳಸಲಾಗುತ್ತಿದೆ. ಹಣ್ಣುಗಳು ಮತ್ತು ತರಕಾರಿಗಳ ಬೆಳೆಯನ್ನು ವಿಸ್ತರಿಸಲಾಗಿದೆ.

ಜಪಾನಿನ ವ್ಯವಸಾಯದಲ್ಲಿ ಆಹಾರಬೆಳೆಗಳಿಗೇ ಪ್ರಾಧಾನ್ಯ. ಕೃಷಿ ನೆಲದಲ್ಲಿ ಶೇ. 80ರಷ್ಟು ಇದಕ್ಕೆ ಮೀಸಲು. ಅದರಲ್ಲೂ ಬತ್ತಕ್ಕೆ ಅಗ್ರಸ್ಥಾನ. ಬತ್ತದ ಇಳುವರಿಯಲ್ಲಿ ಜಪಾನ್ ಏಷ್ಯದಲ್ಲೇ ಉನ್ನತ ಮಟ್ಟದಲ್ಲಿದೆ. ಶೇಕಡ 55 ನೆಲದಲ್ಲಿ ಬತ್ತವನ್ನೂ ಶೇಕಡ 40 ನೆಲದಲ್ಲಿ ಧಾನ್ಯಗಳನ್ನೂ ಬೆಳೆಯಲಾಗುತ್ತದೆ. ಗೋಧಿ, ಬಾರ್ಲಿ, ಗೆಣಸು, ಬಿಳಿ ಆಲೂಗೆಡ್ಡೆ, ಉಪ್ಪುನೇರಳೆ, ಚಹಾ, ಹೊಗೆಸೊಪ್ಪು ಮತ್ತು ಮಿಲೆಟ್ಸ್ ಇತರ ಮುಖ್ಯ ಬೆಳೆಗಳು. ದ್ವಿತೀಯ ಮಹಾಯುದ್ಧದ ಅನಂತರ ಚಹಾ ಮತ್ತು ಉಪ್ಪುನೇರಳೆ ಬೆಳೆಯುವ ಪ್ರದೇಶ ಇಳಿಮುಖವಾಗಿದೆ. ರೇಷ್ಮೆ ಉತ್ಪಾದನೆ 1930ರ ದಶಕದಲ್ಲಿ ಪ್ರಮುಖವಾಗಿತ್ತು.

ಜಪಾನಿನಲ್ಲಿ ಸಣ್ಣ ಹಿಡುವಳಿಗಳೇ ಅಧಿಕ. ಹಿಡುವಳಿಗಳ ಸರಾಸರಿ 2.5 ಎಕರೆ. 1/3 ಭಾಗ ಒಕ್ಕಲುಗಳು 1.2 ಎಕರೆಗಳಿಗಿಂತಲೂ ಕಡಿಮೆ ಹಿಡುವಳಿ ಹೊಂದಿವೆ. 5 ಎಕರೆಗಳಿಗಿಂತ ಹೆಚ್ಚಿನ ವಿಸ್ತೀರ್ಣದ ಹಿಡುವಳಿಗಳು ಶೇ. 10 ಮಾತ್ರ.

ಕೈಗಾರಿಕೆ[ಬದಲಾಯಿಸಿ]

ಜಪಾನ್ 19ನೆಯ ಶತಮಾನದ ಪೂರ್ವಾರ್ಧದ ವರೆಗೂ ವ್ಯವಸಾಯಪ್ರಧಾನ ರಾಷ್ಟ್ರವಾಗಿತ್ತು. ಅದು ಆ ಕಾಲದ ಏಷ್ಯದ ಇತರ ರಾಷ್ಟ್ರಗಳಂತೆ ಆರ್ಥಿಕವಾಗಿ ಹಿಂದುಳಿದ ರಾಷ್ಟ್ರವಾಗಿತ್ತು. ಆದರೆ 1868ರಿಂದ ಅದು ಪಾಶ್ಚಾತ್ಯ ನಾಗರಿಕತೆಯ ವಿಧಾನಗಳನ್ನು ತ್ವರಿತವಾಗಿ ಅಳವಡಿಸಿಕೊಂಡಿದ್ದರಿಂದ ಅದರ ಆರ್ಥಿಕ ರಂಗ ಹೊಸ ಶಕೆಗೆ ಕಾಲಿಟ್ಟಿತು. ಜಪಾನ್ ತನ್ನ ಏಕಾಂತತೆಯಿಂದ ಹೊರಬಂದು ವೈಜ್ಞಾನಿಕ ಪ್ರಗತಿಯ ಮಹತ್ತ್ವವನ್ನು ಬಹುಬೇಗ ಗ್ರಹಿಸಿತು. ಇದರ ಪರಿಣಾಮವಾಗಿ ಕೈಗಾರಿಕೆ ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಗಳಾದವು. ಇಡೀ ಏಷ್ಯದಲ್ಲೇ ಇದು ಪ್ರಥಮ ಆಧುನಿಕ ರಾಷ್ಟ್ರವೆನಿಸಿತು.

19ನೆಯ ಶತಮಾನದ ಉತ್ತರಾರ್ಧದಲ್ಲಿ ಗಣಿಗಾರಿಕೆ, ಸಂಚಾರ ಮಾರ್ಗಗಳ ನಿರ್ಮಾಣ, ನೌಕಾ ನಿರ್ಮಾಣ, ಶಸ್ತ್ರಾಸ್ತ್ರಗಳ ತಯಾರಿಕೆ, ಸಿಮೆಂಟು, ಗಾಜು, ಕಬ್ಬಿಣ, ಉಕ್ಕು ಮುಂತಾದ ಕಾರ್ಖಾನೆಗಳ ಬಟ್ಟೆಗಿರಣಿಗಳ ರೇಷ್ಮೆ ಉದ್ಯಮಗಳ ಸ್ಥಾಪನೆ ಆರಂಭವಾಯಿತು. ವ್ಯವಸಾಯ ಪ್ರಧಾನ ರಾಷ್ಟ್ರವಾಗಿದ್ದ ಜಪಾನ್ ತನ್ನ ಆರ್ಥಿಕ ವ್ಯವಸ್ಥೆಯನ್ನು ಬದಲಿಸಿ ಕೈಗಾರಿಕಾ ರಾಷ್ಟ್ರವಾಗಿ ರೂಪುಗೊಂಡಿತು.

ಜಪಾನಿನ ಕಾರ್ಖಾನೆಗಳು ಕಚ್ಚಾ ಸಾಮಗ್ರಿಗಳನ್ನು ಪರದೇಶದಿಂದ ಸಾಮಾನ್ಯವಾಗಿ ಆಮದು ಮಾಡಿಕೊಳ್ಳುತ್ತವೆ. ಆದರೆ ಜನಶಕ್ತಿ ಮತ್ತು ಕಾರ್ಖಾನೆ ನಡೆಸಲು ಬೇಕಾಗುವ ವಿದ್ಯುಚ್ಛಕ್ತಿ ಜಪಾನಿನಲ್ಲೇ ದೊರೆಯುತ್ತದೆ. ಕಾರ್ಖಾನೆಗಳಿಗೆ ಬೇಕಾಗುವ ಕಲ್ಲಿದ್ದಲಿನ 9/10 ಭಾಗ ಜಪಾನಿನಲ್ಲಿಯೇ ದೊರೆಯುತ್ತದೆ ಉಳಿದ 1/10 ಭಾಗ ಕಲ್ಲಿದ್ದಲನ್ನು ಬೇರೆ ದೇಶಗಳಿಂದ ತರಿಸಿಕೊಳ್ಳುತ್ತಾರೆ. ಇಲ್ಲಿ ದೊರೆಯುವ ಪೆಟ್ರೋಲಿಯಂ ಅದರ ಅಗತ್ಯದ 1/10 ಭಾಗ ಮಾತ್ರ. ಉಳಿದದ್ದನ್ನು ಆಮದು ಮಾಡಿಕೊಳ್ಳಲಾಗುತ್ತದೆ.

ಜಪಾನಿನಲ್ಲಿ ವ್ಯವಸಾಯಯೋಗ್ಯ ಭೂಮಿ ಬಹಳ ಕಡಿಮೆ ಇರುವುದೂ ಅಲ್ಲಿ ಹಲವು ಒಳ್ಳೆಯ ಬಂದರುಗಳಿರುವುದೂ ಅದು ಕೈಗಾರಿಕೆಯಲ್ಲಿ ಮುಂದುವರಿಯಲು ಕಾರಣವಾದುವು. ಟೋಕಿಯೋದಿಂದ ನಾಗಸಾಕೀ ವರೆಗಿನ 600 ಮೈ. ಉದ್ದದ ಮಧ್ಯ ಪ್ರದೇಶದಲ್ಲಿ 100 ಕಾರ್ಖಾನೆಗಳಿವೆ. ಇವುಗಳ ಸ್ಥಾಪನೆಗೆ ಮುಖ್ಯವಾಗಿ ಅಲ್ಲಲ್ಲೇ ದೊರೆಯುವ ರೇಷ್ಮೆ ಮತ್ತು ಕಲ್ಲಿದ್ದಲೂ ಅಲ್ಲಿರುವ ಉತ್ತಮ ಬಂದರುಗಳೂ ಕಾರಣ. ಜಪಾನ್ ದೇಶದ ಕೈಗಾರಿಕಾ ಪ್ರದೇಶಗಳನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಬಹುದು: 1 ಓಸಾಕ, ಕೋಬೀ ಮತ್ತು ಕೀಯೋಟೋ ವಿಭಾಗ : ಇಲ್ಲಿ ಹತ್ತಿ ಗಿರಣಿಗಳು ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗಳು, ಹಡಗು ಕಟ್ಟುವ ಉದ್ಯಮ ರೇಷ್ಮೆ, ಮಣ್ಣಿನ ಪಾತ್ರೆಗಳ ಕಾರ್ಖಾನೆಗಳಿವೆ. ಕೋಬೀ ಈ ವಿಭಾಗದ ಮುಖ್ಯ ಬಂದರು. 2 ಟೋಕೀಯೋ, ಯೋಕಹಾಮ ವಿಭಾಗ: ಇಲ್ಲಿ ರೇಷ್ಮೆ, ಹತ್ತಿ ಜವಳಿ, ಸಣ್ಣ ಗಾತ್ರದ ಕೃಷಿ ಉಪಕರಣ, ವಿದ್ಯುದುಪಕರಣ ಮತ್ತು ಎಣ್ಣೆಶುದ್ಧೀಕರಣ ಕೈಗಾರಿಕೆಗಳಿವೆ. ಯೋಕಹಾಮ ಇಲ್ಲಿಯ ಮುಖ್ಯ ಬಂದರು. ಇಲ್ಲಿ ಹಡಗು ಕಟ್ಟುವ ಉದ್ಯಮವೂ ಇದೆ. 3 ನಾಗಾಯಿಯ ವಿಭಾಗ: ಇಲ್ಲಿ ರೇಷ್ಮೆ, ಹತ್ತಿ, ಉಣ್ಣೆ, ವಿಮಾನ ಮತ್ತು ಕಬ್ಬಿಣ-ಉಕ್ಕು ಕೈಗಾರಿಕೆಗಳಿವೆ. ಮುಖ್ಯ ಬಂದರು ನಗಾಯಿಯ. 4 ಉತ್ತರ ಕೀಯೂಷೂ ವಿಭಾಗ: ಮುಖ್ಯ ಕೈಗಾರಿಕೆ ಕಬ್ಬಿಣ ಮತ್ತು ಉಕ್ಕು. ಜಪಾನಿನ ಗೃಹಕೈಗಾರಿಕೆಗಳು ವೈಶಿಷ್ಟ್ಯಪೂರ್ಣವಾದವು. ಪ್ರತಿ ವಸತಿಯೂ ಯಾವುದಾದರೊಂದು ದೊಡ್ಡ ಕೈಗಾರಿಕೆಗೆ ಅವಶ್ಯವಾದ ಭಾಗಗಳನ್ನು ತಯಾರಿಸುತ್ತದೆ. ಇವನ್ನು ಸಹಕಾರ ಸಂಘಗಳು ಶೇಖರಿಸಿ ಕಾರ್ಖಾನೆಗಳಿಗೆ ಒದಗಿಸುತ್ತವೆ. ದಿನಬಳಕೆಯ ಹಲವು ಸರಕುಗಳೂ ಇಲ್ಲಿ ತಯಾರಾಗುತ್ತವೆ. ರೇಷ್ಮೆ ನೂಲು, ನೇಯ್ಗೆ, ಟೇಪ್, ರಿಬ್ಬನ್, ಬೆಂಕಿಕಡ್ಡಿ, ಬೊಂಬೆ, ಕಾಗದ, ರಟ್ಟು, ಪೆನ್ಸಿಲ್, ಚಾಪೆ, ಮರದ ಚಪ್ಪಲಿ, ಪಿಂಗಾಣಿ ವಸ್ತುಗಳು, ಛತ್ರಿ, ಫ್ಯಾನ್, ಬೈಸಿಕಲ್, ವಿದ್ಯುದುಪಕರಣ ಮುಂತಾದವು ಮುಖ್ಯವಾದವು. ಜಪಾನಿನಲ್ಲಿ ತಯಾರಾಗದ ಪದಾರ್ಥಗಳೇ ಇಲ್ಲವೆನ್ನಬಹುದು. ಅಂದವಾದ ಅಗ್ಗವಾದ ಹಲವು ಪದಾರ್ಥಗಳು ತಯಾರಾಗುತ್ತವೆ.

ಮೀನುಗಾರಿಕೆ[ಬದಲಾಯಿಸಿ]

ಜಪಾನಿನಲ್ಲಿ ಮೀನು ಅನೇಕರ ಮುಖ್ಯ ಆಹಾರ. ಆಹಾರಕ್ಕೆ ಆಗಿ ಉಳಿದ ಮೀನನ್ನು ಬೇರೆ ದೇಶಗಳಿಗೆ ಕಳುಹಿಸುತ್ತಾರೆ. ಜಪಾನಿನ ಸಮುದ್ರ ತೀರ ಅಂಕುಡೊಂಕಾಗಿ ಹೆಚ್ಚು ಆಳವಿಲ್ಲದೆ ಇರುವುದರಿಂದ ಅಲ್ಲಿ ಹೆಚ್ಚು ಸಂಖ್ಯೆಯಲ್ಲಿ ಮೀನುಗಳುಂಟು. ಅಲ್ಲಿ ಹರಿಯುವ ಉಷ್ಣೋದಕ ಮತ್ತು ಶೀತೋದಕ ಪ್ರವಾಹಗಳು ಮೀನುಗಳ ಬೆಳವಣಿಗೆಗೆ ಅನುಕೂಲಕರ. ಜಪಾನ್ ಸಮುದ್ರತೀರದಲ್ಲೆಲ್ಲ ಮೀನುಗಾರಿಕೆ ಒಂದು ಮುಖ್ಯ ಕಸಬು. ಜಪಾನ್ ಸರ್ಕಾರ ಮೀನುಗಾರರಿಗೆ ವಿಶೇಷ ಪ್ರೋತ್ಸಾಹ ನೀಡಿದೆ.

ಸಾರಿಗೆ ಸಂಪರ್ಕ[ಬದಲಾಯಿಸಿ]

ಜಪಾನಿನ ಸಾರಿಗೆ ವ್ಯವಸ್ಥೆ ವಿಶಿಷ್ಟವಾದ್ದು. ಇದು ಪರ್ವತಮಯ ದೇಶವಾದ್ದರಿಂದ ರಸ್ತೆಗಳ ನಿರ್ಮಾಣದಲ್ಲಿ ಜಪಾನ್ ಮೊದಲಿನಿಂದಲೂ ಹೆಚ್ಚಿನ ಪ್ರಗತಿ ಸಾಧಿಸಲಾಗಲಿಲ್ಲ. ರೈಲುಮಾರ್ಗಗಳ ನಿರ್ಮಾಣವೂ ಈ ಸಮಸ್ಯೆಯನ್ನು ಎದುರಿಸುತ್ತದೆ. ಆದರೆ ಜಪಾನು ದ್ವೀಪಸಮೂಹಗಳ ದೇಶವಾಗಿರುವುದರಿಂದ ಅದರ ಅಂತರಿಕ ಸಾರಿಗೆಯ ಬಹುಭಾಗ ಸಮುದ್ರದ ಮೂಲಕವೇ ನಡೆಯುತ್ತದೆ. ಆದ್ದರಿಂದ ಅಲ್ಲಿ ನೌಕಾಸಂಚಾರ ತೀವ್ರ ಅಭಿವೃದ್ಧಿ ಸಾಧಿಸಿದೆ.

ರಸ್ತೆಗಳು: ಜಪಾನಿನ ರಸ್ತೆ ಸಾರಿಗೆ ಪುರಾತನವಾದದ್ದು. ಟೊಂಕಗಾವ ಕಾಲದಲ್ಲಿ ಐದು ಮುಖ್ಯ ಹೆದ್ದಾರಿಗಳನ್ನು ನಿರ್ಮಿಸಲಾಯಿತು. ಇವುಗಳ ಒಟ್ಟು ಉದ್ದ ಸುಮಾರು 1,320 ಮೈ. ಈ ಮಾರ್ಗಗಳು ಮುಂದೆ ಮೇಜಿ ಪುನಃ ಸ್ಥಾಪನೆಯ ಕಾಲದಲ್ಲಿ ಜಪಾನಿನ ಆಧುನಿಕ ರಸ್ತೆಸಾರಿಗೆ ವ್ಯವಸ್ಥೆಗೆ ಅಡಿಗಲ್ಲಾದುವು.

ನಗರಗಳೆಲ್ಲ ತೀರಪ್ರದೇಶದಲ್ಲಿದ್ದುದರಿಂದಲೂ ರಸ್ತೆ ನಿರ್ಮಾಣ ಕಾರ್ಯ ಕಷ್ಟವಾದ್ದರಿಂದಲೂ ರೈಲುಸಂಚಾರ ಹೆಚ್ಚಿದ್ದರಿಂದಲೂ ಹೆದ್ದಾರಿ ನಿರ್ಮಾಣ ಕಡೆಗಣಿಸಲ್ಪಟ್ಟಿತು. ಜಪಾನಿನ ರಸ್ತೆಗಳಲ್ಲಿ ನಾಲ್ಕು ವರ್ಗಗಳಿವೆ. ರಾಷ್ಟ್ರೀಯ ರಸ್ತೆಗಳು, ಪ್ರಿಫೆಕ್ಜರ್ (ಜಿಲ್ಲೆ) ರಸ್ತೆಗಳು, ಮುನಿಸಿಪಲ್ ರಸ್ತೆಗಳು ಮತ್ತು ಪಟ್ಟಣ ಹಾಗೂ ಹಳ್ಳಿ ರಸ್ತೆಗಳು. 1950ರಲ್ಲಿ ಒಟ್ಟು 5,15,000 ಮೈಲಿಗಳಷ್ಟು ಉದ್ದದ ರಸ್ತೆಗಳಿದ್ದುವು.

ಜಪಾನ್ ಮೊಟ್ಟಮೊದಲಿಗೆ 1872ರ ಸೆಪ್ಟೆಂಬರ್‍ನಲ್ಲಿ ಟೋಕಿಯೋದಿಂದ ಯೋಕಹಾಮದ ವರೆಗಿನ ಇಲ್ಲಿಯ ರೈಲುಮಾರ್ಗ ರಚಿಸಿತು. ಈ ಮಾರ್ಗರಚನೆಗಾಗಿ ಬ್ರಿಟನ್ನಿನ ಖಾಸಗಿ ವ್ಯಕ್ತಿ ಇಲ್ಲಿಯಯೊಬ್ಬನಿಂದ ಸಾಲ ಪಡೆದುದಲ್ಲದೆ ಬ್ರಿಟಿಷ್ ಎಂಜಿನಿಯರ್‍ಗಳು ಮತ್ತು ಆ ದೇಶದ ಉಪಕರಣಗಳು ನೆರವನ್ನು ಪಡೆಯಬೇಕಾಯಿತು. 1871ರ ಹೊತ್ತಿಗೆ ಕೋಬೀಯಿಂದ ಕೀಯೋಟೋ ವರೆಗೂ ಟೋಕಿಯೋದಿಂದ ಕೋಬೀ ವರೆಗೂ ಸುಮಾರು 400 ಮೈ. ರೈಲುಮಾರ್ಗ ನಿರ್ಮಾಣವಾಯಿತು. ಜಪಾನಿನ ಬಹುತೇಕ ರೈಲುಮಾರ್ಗಗಳು ತೀರಪ್ರದೇಶಗಳಲ್ಲಿವೆ. ಅದಕ್ಕೆ ತೀರ ಪ್ರದೇಶಗಳಲ್ಲಿರುವ ಮುಖ್ಯ ನಗರಗಳು ಕಾರಣ. ಪ್ರಾರಂಭದಲ್ಲಿ ಸರ್ಕಾರಿ, ಖಾಸಗಿ ಈ ಎರಡೂ ಕ್ಷೇತ್ರಗಳಿಂದಲೂ ರೈಲುಮಾರ್ಗಗಳ ನಿರ್ಮಾಣಕಾರ್ಯ ನಡೆಯಿತು. 1892ರಲ್ಲಿ ಅಲ್ಲಿಯ ಸಂಸತ್ತು ಒಂದು ರೈಲುಮಾರ್ಗ ನಿರ್ಮಾಣ ವಿಧೇಯಕವನ್ನು ಅಂಗೀಕರಿಸಿ ಬೃಹತ್ ಯೋಜನೆಯೊಂದನ್ನು ಜಾರಿಗೆ ತಂದಿತು. 1906ರ ಮಾರ್ಚ್ 31ರಂದು ರೈಲುಮಾರ್ಗ ರಾಷ್ಟ್ರೀಕರಣ ಕಾನೂನನ್ನು ಜಾರಿಗೆ ತರಲಾಯಿತು. 1907ರಲ್ಲಿ 36 ಖಾಸಗಿ ಮಾರ್ಗಗಳ ಪೈಕಿ 2,823 ಮೈ. ಉದ್ದದ 17 ಮುಖ್ಯ ಮಾರ್ಗಗಳ ರಾಷ್ಟ್ರೀಕರಣವಾಯಿತು. ಜಪಾನಿನ ಬಹುತೇಕ ರೈಲುಮಾರ್ಗಗಳು ನ್ಯಾರೊಗೇಜಿನವು. ಅಲ್ಲಿಯ ಪ್ರದೇಶ ಪರ್ವತಮಯವಾಗಿರುವುದು ಇದಕ್ಕೆ ಕಾರಣ. 1953ರ ಹೊತ್ತಿಗೆ ಮುಖ್ಯ ರೈಲುಮಾರ್ಗಗಳ ಉದ್ದ 17,000 ಮೈ. ಗಳಿಗೂ ಮೀರಿತ್ತು. ಅದರಲ್ಲಿ 12,400 ಮೈ.ಗಳ ಉದ್ದದ ಮಾರ್ಗ ಸರ್ಕಾರಿ ಆಡಳಿತಕ್ಕೊಳಪಟ್ಟಿತ್ತು.

ನೌಕಾಸಾರಿಗೆಯಲ್ಲಿ ಜಪಾನ್ ಬಹು ಮುಂದಿದೆ. ಇದಕ್ಕೆ ಕೆಲವಾರು ಕಾರಣಗಳಿವೆ. ಜಪಾನಿನಲ್ಲಿ ದೀರ್ಘ ತೀರ ಪ್ರದೇಶವುಂಟು. ದ್ವೀಪಗಳ ನಡುವಣ ಸಮುದ್ರಗಳು ನೌಕಾಸಂಚಾರಕ್ಕೆ ಅನುಕೂಲವಾಗಿವೆ. ಜಪಾನ್ ದ್ವೀಪಸಮೂಹವಾದ್ದರಿಂದ ಜಲ ಸಾರಿಗೆಯೇ ಆರ್ಥಿಕವಾಗಿ ಹೆಚ್ಚು ಅನುಕೂಲಕರ. ಅದರ ಕೈಗಾರಿಕಾ ನಗರಗಳು ತೀರ ಪ್ರದೇಶದಲ್ಲೇ ಹೆಚ್ಚಾಗಿವೆ.

ಜಪಾನ್ ಪ್ರಪಂಚದ ಮುಖ್ಯ ನೌಕಾ ನಿರ್ಮಾಣ ರಾಷ್ಟ್ರಗಳಲ್ಲಿ ಒಂದು. ಇಂದು ನೌಕಾನಿರ್ಮಾಣದಲ್ಲಿ ಅದು ಪ್ರಪಂಚದಲ್ಲೇ ಅಗ್ರಸ್ಥಾನ ಪಡೆದಿದೆ. ಅದರ ನೌಕೆಗಳಿಗೆ ವಿದೇಶೀ ಬೇಡಿಕೆ ಗಮನಾರ್ಹ. 1971ರಲ್ಲಿ 8,851 ವ್ಯಾಪಾರಿ ಹಡಗುಗಳಿದ್ದುವು.

ಜಪಾನಿನಲ್ಲಿ ಮೊಟ್ಟಮೊದಲ ವಿಮಾನ ಹಾರಾಟ 1910ರಲ್ಲಿ ಪ್ರಾರಂಭವಾಯಿತು. ಜಪಾನಿನ ಮಿಲಿಟರಿ ವಿಮಾನಗಳು ಪ್ರಥಮ ಬಾರಿಗೆ 1914ರಲ್ಲಿ ಜರ್ಮನ್ ಸೈನ್ಯದ ವಿರುದ್ಧ ಯುದ್ಧದಲ್ಲಿ ಭಾಗವಹಿಸಿದವು. ಕ್ರಮಬದ್ಧ ನಾಗರಿಕ ವಿಮಾನ ಸಾರಿಗೆ ವ್ಯವಸ್ಥೆ 1922ರಲ್ಲಿ ಪ್ರಾರಂಭವಾಯಿತು. ಪ್ರಪ್ರಥಮ ವಿಮಾನ ಅಂಚೆ ಸೇವೆ ಪ್ರಾರಂಭವಾದದ್ದು 1925ರಲ್ಲಿ.

ಜಪಾನಿನ ಮುಖ್ಯ ನಗರಗಳನ್ನೂ ಅವುಗಳ ಜನಸಂಖ್ಯೆಗಳನ್ನೂ ಮುಂದೆಕೊಟ್ಟಿದೆ :

ಟೋಕಿಯೋ (ರಾಜಧಾನಿ) … ಕೇಂದ್ರ ನಗರ 8163573. ಮಹಾನಗರ ಜನಸಂಖ್ಯೆ 28,447,000

ಓಸಾಕ … 2623801 ಮಹಾನಗರ ಜನಸಂಖ್ಯೆ 8,734,516 (2000)

ಯೋಕಹಾಮ … 3220331

ನಗಾಯಿಯ … 21,54793

ಕೀಯೋಟೋ … 1461103

ಕೋಬೀ … 1,477,410

ಕೀಟಾ-ಕೀಯೂಷೂ … 1026455

ಸಪೋರೋ … 1671742

ಕಾವಸಾಕೀ …      1,173,603

ಸಾಕೈ … 807765

ಆಮಗಸಾಕೀ … 498,999

ಹಿರೋಷೀಮ … 1,085,705

ಚೀಬ … 829455

ಕೂಮಮೋಟೋ … 579106

ನಾಗಸಾಕೀ … 444591

ಷಿಜûವೋಕ … 472196

ಹಿಮೆಜೀ … 454,360

ಕಾಗಷೀಯ … 536,752

ಗೀಫೂ … 410,324

ನೀಗಾಟ … 486,097

ನಿಷಿನೋಮೀಯ … 426909

ಓಕಯಾಮ … 593730

ಟೋಯೋನಾಕ … 409832

ವಾಕಯಾಮ … 396553

ಕನಾಜûವ … 442,868

ಯೋಕಾಸಕ … 433358

ಮಾಟ್ಸಯಾಮ … 443,322

ಸಾಸಬೋ … 244,677

ಜಪಾನಿನ ನಾಣ್ಯ ಯೆನ್. ಒಂದು ಯೆನ್‍ಗೆ 100 ಸೆನ್, 1,000 ರಿನ್. ಮೆಟ್ರಿಕ್ ಅಳತೆ ತೂಕ ಪದ್ಧತಿ ಜಾರಿಯಲ್ಲಿದೆ. ಜೂಡೋ, ಸೂಮೋ (ಜಪಾನೀ ಕುಸ್ತಿ) ಮತ್ತು ಕೆಂಡೋ (ಕತ್ತಿವರಸೆ) ಪರಂಪರೆಯಿಂದ ಬಂದ ಕ್ರೀಡೆಗಳು. ಬೇಸ್ ಬಾಲ್, ಈಜು, ಸ್ಕೀಯಿಂಗ್, ಟೇಬಲ್-ಟೆನಿಸ್ ಇತರ ಪ್ರಮುಖ ಆಟಗಳು. ಗಾಲ್ಫ್ ಜನಪ್ರಿಯವಾಗುತ್ತಿದೆ. 1964ರಲ್ಲಿ ಟೋಕಿಯೋದಲ್ಲಿ ಒಲಿಂಪಿಕ್ ಕ್ರೀಡೆಗಳನ್ನು ಏರ್ಪಡಿಸಲಾಗಿತ್ತು. 1972ರಲ್ಲಿ ಚಳಿಗಾಲದ ಒಲಿಂಪಿಕ್ ಕ್ರೀಡೆಗಳು ಸಪೋರೋದಲ್ಲಿ ನಡೆದುವು.

ಜಪಾನು ಕಚ್ಚಾ ಹತ್ತಿ. ಕಬ್ಬಿಣದ ಅದಿರು, ಉಣ್ಣೆ, ಬೀಡು ಕಬ್ಬಿಣ, ಪೆಟ್ರೋಲ್ ಮತ್ತು ರಾಸಾಯನಿಕ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತದೆ. ಬಟ್ಟೆ, ರೇಷ್ಮೆ, ರೇಯಾನ್, ಸಿದ್ಧವಸ್ತುಗಳು, ಯಂತ್ರೋಪಕರಣಗಳು ಮತ್ತು ಹದ ಮಾಡಿದ ಮೀನು ರಫ್ತಾಗುತ್ತವೆ.

ಆಡಳಿತ ವ್ಯವಸ್ಥೆ[ಬದಲಾಯಿಸಿ]

ಜಪಾನ್ ಪ್ರಾಚೀನಕಾಲದಿಂದಲೂ ರಾಜತ್ವವನ್ನು ಮನ್ನಿಸಿದ ದೇಶ. ರಾಜ ದೇವರ ಸಾಕ್ಷಾತ್ ಪ್ರತಿನಿಧಿಯೆಂದೇ ಜಪಾನೀಯರು ನಂಬಿದ್ದರು. ಅಲ್ಲಿ ಚಕ್ರವರ್ತಿಯ ನಿರಂಕುಶಾಧಿಕಾರವಿತ್ತು. ದೇಶದ ಒಳಗೆಲ್ಲ ಊಳಿಗಮಾನ್ಯ ವ್ಯವಸ್ಥೆಯ ಆಡಳಿತ ಸಾಮಾನ್ಯ ಲಕ್ಷಣವಾಗಿತ್ತು. ದೊಡ್ಡದೊಡ್ಡ ಭೂಮಾಲೀಕರು ಮತ್ತು ರಾಜಕೀಯ ನಾಯಕರು ಸ್ವತಃ ಸಾಮಂತ ಪ್ರಭುಗಳಂತೆ ಸ್ಥಳೀಯ ಜನತೆಯ ಮೇಲೆ ಅಧಿಕಾರ ನಡೆಸುತ್ತಿದ್ದರು. ಆದರೆ 19ನೆಯ ಶತಮಾನದಲ್ಲಿ ಅಲ್ಲೊಂದು ಹೊಸ ರಾಷ್ಟ್ರೀಯ ಭಾವನೆ ಬೆಳೆಯಿತು. ಇದರಿಂದಾಗಿ ತಮ್ಮ ರಾಷ್ಟ್ರೀಯ ಏಕತೆಯ ಸಂಕೇತವಾಗಿ ಮೇಜಿ ಚಕ್ರವರ್ತಿ 1868ರಲ್ಲಿ ಪುನಃಸ್ಥಾಪಿತನಾದ. ತರುವಾಯ ಪಾಶ್ಚಾತ್ಯ ಮಾದರಿಯ ಸಂವಿಧಾನಬದ್ಧ ಆಡಳಿತವ್ಯವಸ್ಥೆಯನ್ನು ರಚಿಸಲು ಜಪಾನೀಯರು ಮುಂದಾದರು. ಇದರ ಫಲವಾಗಿ ಆಡಳಿತದಲ್ಲಿ ಮಹತ್ತರ ಬದಲಾವಣೆಗಳಾದುವು.

ಸಂವಿಧಾನ ರಚನೆ[ಬದಲಾಯಿಸಿ]

1880ರ ದಶಕದಲ್ಲಿ ಇಟೊ ಹಿರೋಬುಮಿಯ ನೇತೃತ್ವದಲ್ಲಿ ಸಂವಿಧಾನ ರಚನಾ ಆಯೋಗ ಸಂವಿಧಾನ ರಚಿಸುವ ಕಾರ್ಯ ಕೈಗೊಂಡಿತು. 1889ರ ಹೊತ್ತಿಗೆ ಈ ಕಾರ್ಯ ಮುಗಿಯಿತು. ಕೆಳಸದನಕ್ಕೆ ಚುನಾವಣೆಗಳು ನಡೆದು 1890ರಲ್ಲಿ ಸಂಸತ್ ಸಭೆ ಸೇರಿತು. ಸಂಸದೀಯ ವ್ಯವಸ್ಥೆಯಲ್ಲಿ ಚಕ್ರವರ್ತಿಯೇ ರಾಜ್ಯದ ಹಾಗೂ ಸಂವಿಧಾನಬದ್ಧ ಮುಖ್ಯನಾದ. ಇದರಿಂದಾಗಿ ಅವನಲ್ಲಿ ಕಾರ್ಯಾಂಗದ ಅಧಿಕಾರಗಳೂ ಸೇರಿಕೊಂಡುವು.

ಎರಡು ಸದನಗಳ ಸಂಸತ್ತಿನಲ್ಲಿ ಮೇಲ್ಮನೆ ಪ್ರತಿಷ್ಠಿತರಿಂದ ಕೂಡಿದ್ದು ವಿಶೇಷ ಅಧಿಕಾರಗಳನ್ನು ಪಡೆಯಿತು. ಕೆಳಸದನಕ್ಕೆ ಕಾನೂನನ್ನು ಮಂಡಿಸುವ ಮತ್ತು ತೆರಿಗೆ ವಿಧಿಸುವ ವಿಧೇಯಕಗಳನ್ನು ಅಂಗೀಕರಿಸುವ ಅಧಿಕಾರವಿತ್ತು.

ಚಕ್ರವರ್ತಿ ಸೈನ್ಯದ ಮೇಲೆ ಸಂಪೂರ್ಣ ಅಧಿಕಾರ ಪಡೆದಿದ್ದ. ಯುದ್ಧ ಘೋಷಿಸಲು ಮತ್ತು ಶಾಂತಿ ಮಾಡಿಕೊಳ್ಳಲು ಅವನು ವಿಧಿಬದ್ಧ ಅಧಿಕಾರ ಪಡೆದಿದ್ದ. ಸಂವಿಧಾನವನ್ನು ತಿದ್ದುಪಡಿ ಮಾಡಬೇಕಾದರೆ ಅಥವಾ ಯಾವುದೇ ಕಾನೂನು ಜಾರಿಗೆ ಬರಬೇಕಾದರೆ ಅದಕ್ಕೆ ಚಕ್ರವರ್ತಿಯ ಒಪ್ಪಿಗೆ ಅಗತ್ಯವಾಗಿತ್ತು. ಚುನಾವಣೆಯಲ್ಲಿ ಮತ ನೀಡುವವರು 15 ಯೆನ್ ತೆರಿಗೆ ಕೊಡುವಂಥ ಕನಿಷ್ಠ ಅರ್ಹತೆ ಪಡೆದಿರಬೇಕಾಗಿತ್ತು. ಕೆಲವರು ಅಭಿಪ್ರಾಯಪಡುವಂತೆ ಈ ಸಂವಿಧಾನದ ಅಳವಡಿಕೆಯ ಉದ್ದೇಶ ರಾಷ್ಟ್ರೀಯ ಏಕತೆಯನ್ನು ಸಾಧಿಸುವುದು ಮತ್ತು ಆಧುನಿಕ ಪಾಶ್ಚಾತ್ಯ ಮಾದರಿಯ ವೇಷದಲ್ಲಿ ಅಂತರರಾಷ್ಟ್ರೀಯ ಮನ್ನಣೆ ಗಳಿಸುವುದಾಗಿತ್ತೇ ವಿನಾ ನಿಜವಾದ ಪ್ರಜಾಪ್ರಭುತ್ವದ ಹಕ್ಕುಗಳನ್ನು ಜನತೆಗೆ ನೀಡುವುದಾಗಿರಲಿಲ್ಲ.

ಮೇಜಿ ಪುನಃಸ್ಥಾಪನೆಯ ಕಾಲದಲ್ಲಿ ರಾಷ್ಟ್ರದ ಹಿರಿಯ ನಾಯಕರಿಂದ ಕೂಡಿದ ಜೆóನ್ರೊ ಎಂಬ ಒಂದು ಮಂಡಲಿಯ ರಚನೆಯಾಯಿತು. ಅದು ಸರ್ಕಾರಕ್ಕೆ ರಾಜಕೀಯ ಸಲಹೆ ನೀಡುವುದಾಗಿತ್ತು. 1925ರಲ್ಲಿ ಸಾರ್ವತ್ರಿಕ ಮತದಾನ ಪದ್ಧತಿ ಜಾರಿಗೆ ಬಂತು. ಸರ್ಕಾರದ ರಚನೆಯಲ್ಲಿ ರಾಜಕೀಯ ಪಕ್ಷಗಳೂ ವಿಶೇಷ ಪಾತ್ರ ವಹಿಸುತ್ತಿದ್ದುವು. 1918ರಿಂದ 1931ರ ವರೆಗಿನ ಆಡಳಿತವನ್ನು ಜಪಾನಿನಲ್ಲಿ ಪಕ್ಷಗಳ ಸರ್ಕಾರದ ಕಾಲವೆಂದು ಕರೆಯಲಾಗಿದೆ. ಆದರೆ 1930ರ ದಶಕದಲ್ಲಿ ಯುದ್ಧಾಸಕ್ತ ವರ್ಗಗಳು ಪ್ರಬಲಿಸಿ ಸರ್ಕಾರದ ಮೇಲೆ ನಿಯಂತ್ರಣ ಪಡೆದುವು. ಇದರಿಂದ ಸಂವಿಧಾನಬದ್ಧ ಪ್ರಜಾಪ್ರಭುತ್ವ ನಶಿಸಿಹೋಯಿತು.

1947ರ ಸಂವಿಧಾನ[ಬದಲಾಯಿಸಿ]

ಎರಡನೆಯ ಮಹಾಯುದ್ಧದಲ್ಲಿ ಜಪಾನನ್ನು ವಶಪಡಿಸಿಕೊಂಡ ಮೇಲೆ (1945) ಅದರ ಆಡಳಿತ ವಿಧಾನದಲ್ಲಿ ಅಪೂರ್ವ ಬದಲಾವಣೆಗಳಾದುವು. ಆಮೆರಿಕ ಜಪಾನಿನಲ್ಲಿ ಪ್ರಜಾಪ್ರಭುತ್ವ ಶಕ್ತಿ ಬೆಳೆಸುವ ಉದ್ದೇಶ ಹೊಂದಿತ್ತು. ಅ

ಅಮೆರಿಕನರು ಮತ್ತು ಜಪಾನೀಯರ ಸಂಯುಕ್ತ ಪ್ರಯತ್ನದಿಂದ 1947ರ ಮೇ 30ರಂದು ಒಂದು ಹೊಸ ಸಂವಿಧಾನ ಜಾರಿಗೆ ಬಂತು. ಇದನ್ನು 1889ರ ಸಂವಿಧಾನದ ಬದಲಿಗೆ ಅಳವಡಿಸಲಾಯಿತು.

ಈ ಹೊಸ ಸಂವಿಧಾನದಿಂದ ಚಕ್ರವರ್ತಿಯ ನಿರಂಕುಶ ಅಧಿಕಾರಗಳು ರದ್ದಾದುವು. ಅವನು ಸಾಂಕೇತಿಕವಾಗಿ ಸಂವಿಧಾನ ಮುಖ್ಯ. ಅಲ್ಲಿಯ ರಾಜತ್ವ ಬಹುತೇಕ ಇಂಗ್ಲೆಂಡಿನ ರಾಜತ್ವದ ಸ್ವರೂಪ ಪಡೆದುಕೊಂಡಿತು.

ಸರ್ವ ರಾಜಕೀಯ ಅಧಿಕಾರಗಳನ್ನೂ ಉಭಯ ಸದನಗಳುಳ್ಳ ಸಂಸತ್ತಿಗೆ ವಹಿಸಲಾಯಿತು. ಇದರ ಸದಸ್ಯರನ್ನು ಜನತೆ ಆರಿಸಬೇಕು. ಬಹುಮತ ಗಳಿಸಿದ ಪಕ್ಷ ಮಂತ್ರಿಮಂಡಲ ರಚಿಸಲು ಅವಕಾಶ ಕಲ್ಪಿಸಲಾಗಿದೆ. ಸಂಸತ್ತಿಗೆ ಸಂವಿಧಾನದ ತಿದ್ದುಪಡೆಯ ಅಧಿಕಾರ ಇದೆ. ಇದಕ್ಕೆ 2/3 ಭಾಗ ಸದಸ್ಯರ ಬೆಂಬಲ ಅಗತ್ಯ.

ಪಾರ್ಲಿಮೆಂಟಿನ ಉಭಯ ಸದನಗಳಲ್ಲಿ ಒಂದನ್ನು ಪ್ರತಿನಿಧಿ ಸಭೆಯೆಂದೂ ಇನ್ನೊಂದನ್ನು ಪರಿಷದ ಸಭೆಯೆಂದೂ ಕರೆಯಲಾಗಿದೆ. ಪ್ರತಿನಿಧಿ ಸಭೆಯಲ್ಲಿ ಸದಸ್ಯ ಸಂಖ್ಯೆ 486 (1971). ಪರಿಷದಸಭೆಯದು 250, ಪ್ರತಿನಿಧಿ ಸಭೆಯ ಸದಸ್ಯರನ್ನು ದೇಶಾದ್ಯಂತ ಇರುವ 118 ಚುನಾವಣಾ ಜಿಲ್ಲೆಗಳಿಂದ ಆರಿಸಲಾಗುತ್ತದೆ. ಇವರ ಅಧಿಕಾರಾವಧಿ ನಾಲ್ಕು ವರ್ಷ. ಪರಿಷತ್ತಿನ ಸದಸ್ಯರಲ್ಲಿ 100 ಜನ ಒಟ್ಟು ರಾಷ್ಟ್ರದಿಂದ ಆರಿಸಲ್ಪಟ್ಟಿರೆ ಇನ್ನು 150 ಜನ ಸದಸ್ಯರು ಪ್ರಿಪೆಕ್ಜರ್‍ಗಳಿಂದ (ಜಿಲ್ಲೆ) ಆರಿಸಲ್ಪಡುತ್ತಾರೆ. ಇದರ ಸದಸ್ಯರ ಅಧಿಕಾರಾವಧಿ 6 ವರ್ಷಗಳು. ಪ್ರತಿ ಮೂರು ವರ್ಷಗಳಿಗೊಮ್ಮೆ 1/3 ಭಾಗ ಸದಸ್ಯರನ್ನು ಚುನಾವಣೆಯ ಮೂಲಕ ಆಯ್ಕೆ ಮಾಡಲಾಗುವುದು. ಪ್ರತಿಯೊಬ್ಬ ಮತದಾರನಿಗೂ ಒಂದು ವರ್ಗದ ಸದಸ್ಯರನ್ನು ಆರಿಸಲು ಒಂದು ಮತದ ಹಕ್ಕಿರುತ್ತದೆ. ಕೆಳಸದನವನ್ನು ಮಂತ್ರಿ ಸಂಪುಟ ವಿಸರ್ಜಿಸಬಹುದು. ಆದರೆ 40 ದಿವಸಗಳೊಳಗಾಗಿ ಮರುಚುನಾವಣೆ ನಡೆಯಬೇಕಾಗುತ್ತದೆ. ಚುನಾವಣೆ ಆದ 30 ದಿನಗಳೊಳಗೆ ಸಂಸತ್ ಸಭೆ ಸೇರಬೇಕು.

ವ್ಯಕ್ತಿಗೌರವವನ್ನು ಹಕ್ಕುಗಳ ವಿಧೇಯಕದ ಮೂಲಕ ಎತ್ತಿ ಹಿಡಿಯಲಾಗಿದೆ. ಸಂವಿಧಾನದ ಯಾವುದೇ ತಿದ್ದುಪಡಿಯನ್ನು ಪರಿಶೀಲಿಸುವ ಅಧಿಕಾರ ಮತ್ತು ಪ್ರತಿನಿಧಿಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ಅಧಿಕಾರವನ್ನು ಜನತೆಗೆ ನೀಡಲಾಗಿದೆ. ಇಲ್ಲಿಯ ಪರಮೋಚ್ಚ ನ್ಯಾಯಾಲಯಕ್ಕೆ ಯಾವುದೇ ಕಾನೂನು ಸಂವಿಧಾನಬದ್ಧವಾಗಿದೆಯೆ ಇಲ್ಲವೆ ಎಂದು ನಿರ್ಣಯಿಸುವ ಅಧಿಕಾರ ಇದೆ. ಸಂವಿಧಾನದಲ್ಲಿ ನಾಗರಿಕರಿಗೆ ಪ್ರಜಾಪ್ರಭುತ್ವದಲ್ಲಿರುವ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಹಕ್ಕುಗಳನ್ನು ನೀಡಲಾಗಿದೆ.

ನ್ಯಾಯಾಂಗ: 1947ಕ್ಕೆ ಹಿಂದೆ ನ್ಯಾಯಾಂಗ ಕಾರ್ಯಾಂಗಕ್ಕೆ ಅಧೀನವಾಗಿದ್ದಿತು. 1947ರ ಸಂವಿಧಾನದಲ್ಲಿ ನ್ಯಾಯಾಂಗವನ್ನು ಆಮೂಲಾಗ್ರವಾಗಿ ಬದಲಾಯಿಸಲಾಯಿತು. ಇದಕ್ಕನುಗುಣವಾಗಿ ನ್ಯಾಯಾಂಗ ಕಾರ್ಯಾಂಗದ ಹತೋಟಿಯಿಂದ ಮುಕ್ತಗೊಂಡಿತು. ಇದೊಂದು ಸ್ವತಂತ್ರ ಶಾಖೆಯಾಗಿ ರೂಪುಗೊಂಡಿತು.

ಪರಮೋಚ್ಚ ನ್ಯಾಯಾಲಯದ ಅಧಿಕಾರ ವ್ಯಾಪ್ತಿಯನ್ನು ಹೆಚ್ಚಿಸಲಾಯಿತು. ಯಾವುದೇ ಕಾನೂನು ಅಥವಾ ನಿಬಂಧನೆ ಸಂವಿಧಾನಬದ್ಧವಾಗಿ ಇದೆಯೇ ಇಲ್ಲವೇ ಎಂದು ಅಂತಿಮವಾಗಿ ನಿರ್ಣಯಿಸುವ ಅಧಿಕಾರ ಇದಕ್ಕೆ ಇದೆ.

ಪರಮೋಚ್ಚ ನ್ಯಾಯಾಲಯದಲ್ಲಿ 15 ಜನ ನ್ಯಾಯಾಧೀಶರು ಇರುತ್ತಾರೆ. ಮುಖ್ಯ ನ್ಯಾಯಾಧೀಶನನ್ನು ಮಂತ್ರಿಮಂಡಲದ ಅನುಮೋದನೆಯ ಮೇರೆಗೆ ಚಕ್ರವರ್ತಿಯೇ ನೇಮಿಸಬೇಕು. ಉಳಿದ ನ್ಯಾಯಾಧೀಶರನ್ನು ಮಂತ್ರಿ ಮಂಡಲವೇ ನೇರವಾಗಿ ನೇಮಿಸುತ್ತದೆ. ಆದರೆ ಇಲ್ಲಿ ಅಳವಡಿಸಿದ ಹೊಸ ಸೂತ್ರವೆಂದರೆ, ಹೀಗೆ ನೇಮಿತರಾದ ನ್ಯಾಯಾಧೀಶರು ಮೊದಲ ಅವಧಿಗೆ ನೇಮಕವಾದ ಮೇಲೆ ಬರುವ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಜನರು ಅವರ ನೇಮಕವನ್ನು ಅನುಮೋದಿಸಬೇಕು. ತರುವಾಯ ಪ್ರತಿ ಹತ್ತು ವರ್ಷಗಳಿಗೊಮ್ಮೆ ಈ ಅನುಮೋದನೆ ನಡೆಯಬೇಕು. ಮತದಾರರು ಅವರ ನೇಮಕವನ್ನು ತಿರಸ್ಕರಿಸಿದರೆ ಅಂಥವರು ತಮ್ಮ ಸ್ಥಾನದಲ್ಲಿ ಮುಂದುವರಿಯುವಂತಿಲ್ಲ.

ಇತರ ನ್ಯಾಯಾಲಯಗಳಿಗೆ ಹತ್ತು ವರ್ಷಗಳ ಅವಧಿಗೆ ನ್ಯಾಯಾಧೀಶರನ್ನು ನೇಮಿಸಲಾಗುವುದು. ಸಂಸತ್ತಿನಿಂದ ಚುನಾಯಿತರಾದ 14 ಜನರ ಮಂಡಲಿಯೊಂದು ನ್ಯಾಯಾಧೀಶರುಗಳಲ್ಲಿ ಯಾರನ್ನೇ ಆದರೂ ಮಹಾಭಿಯೋಗಮಾಡಿ (ಇಂಪೀಚ್‍ಮೆಂಟ್) ಪದಚ್ಯುತಗೊಳಿಸಬಹುದು.

ಪರಮೊಚ್ಚ ನ್ಯಾಯಾಲಯದ ಕೆಳಗೆ 8 ಉನ್ನತ ನ್ಯಾಯಾಲಯಗಳೂ 49 ಜಿಲ್ಲಾ ನ್ಯಾಯಾಲಯಗಳೂ 570 ಸ್ಥಳೀಯ ನ್ಯಾಯಾಲಯಗಳೂ ಇವೆ. ಜಪಾನಿನಲ್ಲಿ ಕೌಟುಂಬಿಕ ವಿಷಯಗಳಿಗೆ ಸಂಬಂಧಿಸಿದಂತೆ ತೀರ್ಪು ನೀಡಲು ಪ್ರತ್ಯೇಕ ನ್ಯಾಯಾಂಗ ವ್ಯವಸ್ಥೆಯಿದೆ.

ರಾಜಕೀಯ ಪಕ್ಷಗಳು[ಬದಲಾಯಿಸಿ]

ಜಪಾನಿನಲ್ಲಿ ಏಷ್ಯದ ಇತರ ರಾಷ್ಟ್ರಗಳಿಗಿಂತ ಬಹು ಬೇಗ, 19ನೆಯ ಶತಮಾನದ ಉತ್ತರಾರ್ಧದಲ್ಲೇ, ರಾಜಕೀಯ ಪಕ್ಷಗಳು ಹುಟ್ಟಿಕೊಂಡುವು. ಸರ್ಕಾರದ ರಚನೆಯಲ್ಲಿ ಅವುಗಳ ಪಾತ್ರ ವಿಶೇಷವಾಗಿತ್ತು. 1918ರಿಂದ 1931ರ ವರೆಗಿನ ಆಡಳಿತದಲ್ಲಿ ರಾಜಕೀಯ ಪಕ್ಷಗಳು ಪರಿಣಾಮಕಾರಿ ಪಾತ್ರ ವಹಿಸಿದುವು. ಆದರೆ 1889ರ ಸಂವಿಧಾನದಲ್ಲಿ ಚಕ್ರವರ್ತಿಗೆ ಮತ್ತು ಕಾರ್ಯಾಂಗಕ್ಕೆ ಹೆಚ್ಚಿನ ಅಧಿಕಾರಗಳು ದತ್ತವಾಗಿದ್ದುದರಿಂದ ರಾಜಕೀಯ ಪಕ್ಷಗಳ ಅಧಿಕಾರವ್ಯಾಪ್ತಿ ಸೀಮಿತವಾಗಿತ್ತು. 1930ರ ದಶಕದಲ್ಲಿ ರಾಜ್ಯದ ಆಡಳಿತದಲ್ಲಿ ಯುದ್ಧಾಸಕ್ತ ವರ್ಗದ ಪ್ರಾಬಲ್ಯ ಹೆಚ್ಚಿದ್ದರಿಂದ ರಾಜಕೀಯ ಪಕ್ಷಗಳು ಗೌಣವಾದುವು. 1940ರಲ್ಲಿ ಎಲ್ಲ ಪಕ್ಷಗಳು ಸ್ವಇಚ್ಛೆಯಿಂದ ಸಾಮ್ರಾಜ್ಯ ಆಡಳಿತ ಸಹಾಯಕ ಸಂಘವೆಂಬ ಏಕೈಕ ಪಕ್ಷ ಸ್ಥಾಪಿತವಾಯಿತು.

1945ರಲ್ಲಿ ಯುದ್ಧಾನಂತರ ಲಿಬರಲ್ ಮತ್ತು ಪ್ರಗತಿ ಪಕ್ಷಗಳು ಹುಟ್ಟಿಕೊಂಡುವು. ಸಮಾಜವಾದಿ ಪಕ್ಷವೂ ಸ್ಥಾಪನೆಗೊಂಡಿತು. 1945ರ ಆಕ್ಟೋಬರ್‍ನಲ್ಲಿ ಪ್ರಪ್ರಥಮವಾಗಿ ಕಾನೂನುಬದ್ಧ ಕಮ್ಯೂನಿಸ್ಟ್ ಪಕ್ಷದ ಸ್ಥಾಪನೆಯಾಯಿತು. ಜಪಾನಿನ ರಾಜಕೀಯ ಚಟುವಟಿಕೆಯಲ್ಲಿ ಸಂಪ್ರದಾಯವಾದಿಗಳ ಮತ್ತು ಸಮಾಜವಾದಿಗಳ ಪಕ್ಷಗಳ ಪ್ರಭಾವವನ್ನು ಕಾಣಬಹುದು. ಗ್ರಾಮಾಂತರ ಪ್ರದೇಶಗಳಲ್ಲಿ ಸಂಪ್ರದಾಯ ವಾದಿಗಳ ಪಕ್ಷಗಳ ಪ್ರಭಾವವಿದೆ. ಕೈಗಾರಿಕಾ ನಗರಗಳಲ್ಲಿ ಸಮಾಜವಾದಿಗಳ ಪ್ರಭಾವ ಹೆಚ್ಚು.

ಲಿಬರಲ್ ಡೆಮೊಕ್ರಾಟಿಕ್ ಪಕ್ಷ ಈಗ ಆಡಳಿತ ನಡೆಸುತ್ತಿದೆ. ಸಮಾಜವಾದಿ ಮತ್ತು ಪ್ರಜಾಪ್ರಭುತ್ವ ಸಮಾಜವಾದಿ ಪಕ್ಷಗಳೂ ಜನಪ್ರಿಯವಾಗುತ್ತಿವೆ. ಶುದ್ಧ ಸರ್ಕಾರದ ಪಕ್ಷ 1964ರಲ್ಲಿ ಸ್ಥಾಪಿತವಾಯಿತು. ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಪ್ರಬಲವಾಗಿರುವ ವರ್ಗದ ಹಿಡಿತದಿಂದ ಇಲ್ಲಿಯ ರಾಜಕೀಯ ಇನ್ನೂ ಪಾರಾಗಿಲ್ಲ.

ಸ್ಥಳೀಯ ಆಡಳಿತ[ಬದಲಾಯಿಸಿ]

1947ರಲ್ಲಿ ಸಂಸತ್ತು ಅಂಗೀಕರಿಸಿದ ಸ್ಥಳೀಯ ಸ್ವಯಮಾಡಳಿತ ಕಾನೂನು ಸ್ಥಳೀಯ ಆಡಳಿತ ಅಂಗಗಳಿಗೆ ಹೆಚ್ಚಿನ ಒಳಾಡಳಿತ ಸ್ವಾತಂತ್ರ್ಯ ನೀಡಿದೆ. ಇಡೀ ರಾಷ್ಟ್ರವನ್ನು 46 ಪ್ರಿಫೆಕ್ಟ್‍ಗಳಾಗಿ (ಜಿಲ್ಲೆಗಳು) ವಿಂಗಡಿಸಲಾಗಿದೆ. ಇವನ್ನು ನಗರಗಳು, ಪಟ್ಟಣಗಳು, ಹಳ್ಳಿಗಳೆಂದು ಉಪವಿಭಾಗಗಳನ್ನಾಗಿ ಮಾಡಲಾಗಿದೆ. ಪ್ರಿಫೆಕ್ಟ್‍ಗಳ ಗವರ್ನರ್‍ಗಳು ಮತ್ತು ಇತರ ಸ್ಥಳೀಯ ಅಧಿಕಾರಿಗಳನ್ನು ಚುನಾಯಿಸಲಾಗುತ್ತವೆ. ವಾರ್ಡ್‍ಗಳು, ಮುನಿಸಿಪಾಲಿಟಿಗಳು ಮತ್ತು ಪಟ್ಟಣಗಳ ಆಡಳಿತ ಸಭೆಗೂ ನೇರ ಚುನಾವಣಾಪದ್ಧತಿ ಇದೆ. ಪ್ರಿಫೆಕ್ಟಿನ ಸಭೆಗೆ ನಾಲ್ಕು ವರ್ಷಗಳ ಅವಧಿಗೆ ಚುನಾವಣೆ ನಡೆಯುತ್ತದೆ. ಚುನಾಯಿತ ಸಮುದಾಯ ಇಚ್ಛೆಪಟ್ಟಾಗ ಸ್ಥಳೀಯ ಆಡಳಿತ ಸಭೆಗಳನ್ನು ವಿಸರ್ಜಿಸಲು ಒತ್ತಾಯ ಪಡಿಸಬಹುದು ಹಾಗೂ ಅವುಗಳ ಲೆಕ್ಕಪತ್ರಗಳನ್ನು ಪರಿಶೀಲಿಸಬಹುದು.

ಸ್ಥಳೀಯ ಸ್ವಯಮಾಡಳಿತ ಸಂಸ್ಥೆಗಳ ಮೇಲ್ವಿಚಾರಣೆ ಗೃಹಖಾತೆಗೆ ಸೇರಿದ್ದು. ಟೋಕಿಯೋನಿನಂಥ ದೊಡ್ಡ ನಗರಗಳಿಗೆ ವಿಶೇಷ ಆಡಳಿತ ವ್ಯವಸ್ಥೆ ಇದೆ.

ರಾಷ್ಟ್ರರಕ್ಷಣೆ[ಬದಲಾಯಿಸಿ]

1945ರಲ್ಲಿ ಮಿತ್ರರಾಷ್ಟ್ರಗಳು ಜಪಾನಿನ ಸಶಸ್ತ್ರ ಪಡೆಗಳನ್ನು ವಿಸರ್ಜಿಸಿದುವು. 1952ರಲ್ಲಿ ರಾಷ್ಟ್ರೀಯ ರಕ್ಷಣಾದಳ ಎಂಬ ಹೆಸರಿನಲ್ಲಿ ಪುನಃ ಸೈನ್ಯದ ಸಂಘಟನೆ ಪ್ರಾರಂಭವಾಯಿತು. 1945ರಲ್ಲಿ ಜಪಾನ್ ಮತ್ತು ಅಮೆರಿಕಗಳು ಪರಸ್ಪರ ರಕ್ಷಣಾ ಒಪ್ಪಂದಕ್ಕೆ ಸಹಿಮಾಡಿದುವು. ಅದೇ ವರ್ಷದ ಜೂನಿನಲ್ಲಿ ಜಪಾನಿನ ಸಂಸತ್ತು ಹೊಸ ಭೂಪಡೆ, ವಾಯುಪಡೆ ಮತ್ತು ನೌಕಾ ಪಡೆಯ ರಚನೆಗೆ ವಿಧೇಯಕ ಅಂಗೀಕರಿಸಿತು.

ಇತಿಹಾಸ[ಬದಲಾಯಿಸಿ]

ಪ್ರಾಗಿತಿಹಾಸ[ಬದಲಾಯಿಸಿ]

ಪ್ಲೀಸ್ಟೊಸೀನ್ ಯುಗದ ಅಂತ್ಯ ಭಾಗದಲ್ಲಿ ಜಪಾನಿನಲ್ಲಿ ಜನವಸತಿ ಇದ್ದ ಬಗ್ಗೆ ಹಲವು ಕುರುಹುಗಳು ಇತ್ತೀಚೆಗೆ ದೊರಕಿವೆ. ಹಾಕೈಡೋ ವಿಭಾಗದ ತಾರುಕೀಷಿ ಮತ್ತು ಇತರ ಕೆಲವು ಸ್ಥಳಗಳಲ್ಲಿ ಪಟ್ಟೆಚಕ್ಕೆಯ ಶಿಲಾಯುಧ ಪ್ರಕಾರಗಳು ದೊರಕಿವೆ. ಅವು ಸುಮಾರು 13 ಅಥವಾ 12 ಸಾವಿರ ವರ್ಷಗಳಷ್ಟು ಹಳೆಯವೆಂದು ರೇಡಿಯೋ ಕಾರ್ಬನ್ ವಿಧಾನಗಳಿಂದ ತೀರ್ಮಾನಿಸಲಾಗಿದೆ. ಹಾಕೈಡೋ ವಿಭಾಗದ ಉತ್ತರದ ಪ್ರದೇಶಗಳಲ್ಲಿ, ಅದರಲ್ಲೂ ಯೂಬೆಟ್ಸು ನದೀ ಕಣಿವೆಯ ಷಿರತಾಕಿ ಮುಂತಾದ ನೆಲೆಗಳಲ್ಲಿ. ಈ ಶಿಲಾಯುಧ ಸಂಸ್ಕøತಿಯ ಸ್ತರಗಳು ಕಂಡುಬಂದಿವೆ. ಅವುಗಳ ಅತ್ಯಂತ ಪ್ರಾಚೀನ ಘಟ್ಟದಲ್ಲಿ ತುದಿಯಲ್ಲಿ ಸಣ್ಣ ಚಕ್ಕೆಗಳನ್ನು ಎತ್ತಿ ಪರಿಷ್ಕರಿಸಿದ ಉದ್ದನೆಯ ಹಾಗೂ ಚಿಕ್ಕ ಪಟ್ಟೆಚಕ್ಕೆ ಆಯುಧಗಳೂ ಉಪಯೋಗದಲ್ಲಿದ್ದುವೆಂದು ತಿಳಿಯುತ್ತದೆ. ಇನ್ನೂ ಮುಂದಿನ ಘಟ್ಟದಲ್ಲಿ ಕೊರೆಗ ಉಪಯೋಗದಲ್ಲಿದ್ದುವೆಂದು ತಿಳಿಯುತ್ತದೆ. ಇನ್ನೂ ಮುಂದಿನ ಘಟ್ಟದಲ್ಲಿ ಕೊರೆಗಗಳೂ. ಪಟ್ಟೆಚಕ್ಕೆಗಳನ್ನು ತೆಗೆಯಲು ಬಳಸಿದ ಮಾತೃಶಿಲೆಗಳೂ ಸಿಗುತ್ತವೆ. ಹಾಕೈಡೋದ ಕರಾವಳಿಯಲ್ಲಿ ಇದೇ ಸಂಸ್ಕøತಿ ಇನ್ನೊಂದು ರೂಪದಲ್ಲಿ ಕಾಣಸಿಗುತ್ತದೆ. ಇದರಲ್ಲಿ ಕೊರೆಗಗಳು, ಪಟ್ಟೆಚಕ್ಕೆಗಳು, ಉಜ್ಜಿ ನಯಗೊಳಿಸಿದ ಶಿಲಾಯುಧಗಳು, ಹಿಂದುಮುಂದಾಗಿ ಚಕ್ಕೆ ಎಬ್ಬಿಸಿ ಪರಿಷ್ಕರಿಸಿದ ಕಲ್ಲಿನ ಮೊನೆಗಳು ದೊರಕಿವೆ. ಇಲ್ಲಿಯ ಆಯುಧಗಳೆಲ್ಲ ಆಬ್ಸಿಡಿಯನ್ ಎಂಬ ನಯವಾದ ಗಾಜಿನಂಥ ಕಲ್ಲಿನಲ್ಲಿ ಮಾಡಿದವುಗಳು. ಹಾನ್ಷ್ಯೂ ವಿಭಾಗದಲ್ಲಿ ಎರೆಕಲ್ಲು ಬಳಕೆಯಲ್ಲಿತ್ತು. ಅಲ್ಲಿಯ ಸಂಸ್ಕøತಿಯಲ್ಲಿ ಕೊರೆಗಗಳೂ ಬರೆಯುವ ಸಾಧನಗಳೂ ಉಂಡೆಕಲ್ಲಿನಿಂದ ಮಾಡಿದ ಕೆಲವು ಆಯುಧಗಳೂ ಬೆಳಕಿಗೆ ಬಂದಿವೆ. ಕಾಂಟೋ ಬಯಲಿನ ಗೊಂಬೆನ್ಯಾಮದಲ್ಲಿ ಕೈಕೊಡಲಿಗಳು ಮತ್ತು ದೊಡ್ಡ ಚಕ್ಕೆಗಳು ಸಿಕ್ಕಿವೆ. ಇವು ಪ್ರಾಯಶಃ ಮೇಲಿನ ಸಂಸ್ಕøತಿಗಳಿಗಿಂತ ಹಿಂದಿನ ಕಾಲದವಿರಬಹುದೆಂದು ಊಹಿಸಲಾಗಿದೆ. ಇವೆಲ್ಲ ಬೇಟೆಗಾರ ಜನಾಂಗಗಳು ಉಪಯೋಗಿಸುತ್ತಿದ್ದ ಆಯುಧಗಳು. ಹೆಚ್ಚಿನ ನೆಲೆಗಳು ನದಿ ಅಥವಾ ಸರೋವರಗಳ ಪಕ್ಕಗಳಲ್ಲಿ, ಇಳಿಜಾರು ಪ್ರದೇಶಗಳಲ್ಲಿ ಮಾತ್ರ ಕಂಡುಬರುತ್ತವೆ. ಈ ಶಿಲಾಯುಧ ಸಂಸ್ಕøತಿಗಳು ಚೀನ ಭೂಭಾಗದಿಂದ ಜಪಾನ್ ಪ್ರದೇಶಕ್ಕೆ ಬಂದಿರಬೇಕೆಂದು ಊಹೆ. ಪ್ಲೀಸ್ಟೊಸೀನ್ ಅಂತ್ಯದಲ್ಲಿ ಹಿಮಗಾಲದಲ್ಲಿ ಸಮುದ್ರಮಟ್ಟ ಕೆಳಕ್ಕೆ ಇಳಿದಿದ್ದುದರಿಂದ, ಅಂದು ಚೀನ ಮತ್ತು ಜಪಾನ್ ದ್ವೀಪಗಳು ಭೂಸೇತುವೆಗಳಿಂದ ಒಂದುಗೂಡಿದ್ದುದರಿಂದ, ಆ ಕಾಲದಲ್ಲೇ ಚೀನೀ ಭೂಭಾಗದಿಂದ ಜಪಾನಿಗೆ ಜನ ವಲಸೆ ಬಂದಿರಬೇಕೆಂದು ಅನೇಕ ವಿದ್ವಾಂಸರು ತರ್ಕಿಸಿದ್ದಾರೆ.

ಜಪಾನಿನಲ್ಲಿ ನೆಲೆ ಹೂಡಿದ್ದ ನವಶಿಲಾಯುಗ ಸಂಸ್ಕøತಿ ಕ್ರಿ.ಪೂ. 3-2ನೆಯ ಸಹಸ್ರಮಾನಗಳಲ್ಲಿ ಯಾವಾಗಲೋ ಪ್ರಾರಂಭವಾಯಿತು. ಈ ಸಂಸ್ಕøತಿಯ ಆದಿಘಟ್ಟವನ್ನು ಜೋಮೋನ್ ಎಂದು ಹೆಸರಿಸಲಾಗಿದೆ. ಈ ಘಟ್ಟದ ಕಾಲದ ವ್ಯಾಪ್ತಿ ಕ್ರಿ.ಪೂ. ಸು. 2500-250 ಇರಬಹುದು. ಈ ಘಟ್ಟದಲ್ಲಿ ವ್ಯವಸಾಯವಾಗಲಿ, ನಾಯಿಯ ವಿನಾ ಬೇರೆ ಪ್ರಾಣಿಗಳ ಸಾಕಣೆಯಾಗಲಿ ಇರಲಿಲ್ಲ. ಜನರು ಬೇಟೆಯಿಂದಲೂ ಮೀನು ಹಿಡಿದೂ ಜೀವನ ಸಾಗಿಸುತ್ತಿದ್ದರು. ನುಣುಪುಗೊಳಿಸಿದ ಆಯುಧಗಳು ಮತ್ತು ಮಡಕೆಗಳ ಉಪಯೋಗ ಪ್ರಾರಂಭವಾಗಿತ್ತು. ಮಡಕೆಗಳನ್ನು ಚಕ್ರದ ಉಪಯೋಗವಿಲ್ಲದೆ ಕೈಯಿಂದ ಮಾಡಿದ್ದರೂ ಹಗ್ಗದ ವಿನ್ಯಾಸದ ಉತ್ತಮ ಅಲಂಕರಣವನ್ನು ಅವುಗಳ ಮೇಲೆ ಮೂಡಿಸುವುದು ರೂಢಿಯಾಗಿತ್ತು. ಜನರು ಒಂದೇ ಕೋಣೆಯ ಮನೆಗಳಲ್ಲಿ ವಾಸಿಸುತ್ತಿದ್ದರು. ಇವು ನೆಲದಲ್ಲಿ ಅಗೆದು ಮಾಡಿದ ಗುಣಿಗಳು. ಗುಣಿಗಳ ಮಧ್ಯದಲ್ಲಿ ಒಂದು ಕಂಬ ನೆಟ್ಟು ಮೇಲೆ ಚಾವಣಿ ಹೊದಿಸುವ ಪದ್ಧತಿ ಇತ್ತು. ಈ ಸಂಸ್ಕøತಿಗೂ ಸಾಮ್ಯ ಇರುವುದರಿಂದ ಜಪಾನಿನ ಜೋಮೋನ್ ಸಂಸ್ಕøತಿ ಅತ್ತಣಿಂದ ಬಂದಿರಬಹುದೆಂದು ಊಹಿಸಲಾಗಿದೆ.

ಯಯೋಇ ಎಂಬುದು ಇಲ್ಲಿಯ ನವಶಿಲಾಯುಗ ಸಂಸ್ಕøತಿಯ ಮುಂದಿನ ಘಟ್ಟ. ಈ ಸಂಸ್ಕøತಿಗೂ ಏಷ್ಯದ ಮುಖ್ಯ ಭೂಭಾಗದ ಬತ್ತ ಬೆಳೆಯುವ ಪ್ರದೇಶಗಳಲ್ಲಿದ್ದ ಸಂಸ್ಕøತಿಗಳಿಗೂ ಬಹಳ ಸಂಬಂಧ ಇರುವುದರಿಂದ ಮೊದಲಾಗಿ ಈ ಸಂಸ್ಕøತಿಯನ್ನು ತಂದ ಜನ ರೀಯೂಕ್ಯೂ ದ್ವೀಪಗಳು ಮತ್ತು ಕೊರಿಯದ ಕಡೆಯಿಂದ ಜಪಾನಿನ ಕೀಯೂಷೂ ಪ್ರದೇಶದಲ್ಲಿ ಬಂದು ನೆಲಸಿ ಅಲ್ಲಿಂದ ಬೇರೆಡೆಗೆ ಪಸರಿಸಿರಬೇಕೆಂದು ತಿಳಿಯಲಾಗಿದೆ. ಯಯೋಇ ಸಂಸ್ಕøತಿಯ ಕಾಲದಲ್ಲಿ ಜನರು ಚಕ್ರದ ಮೇಲೆ ಮಾಡಿದ ಮಡಕೆಗಳನ್ನು ಉಪಯೋಗಿಸುತ್ತಿದ್ದರು. ಬತ್ತದ ವ್ಯವಸಾಯದಿಂದ ಜನರ ಆರ್ಥಿಕ ಸ್ಥಿತಿ ಹಿಂದಿನ ಘಟ್ಟದ್ದಕ್ಕಿಂತ ಉತ್ತಮವಾಯಿತು. ಈ ಘಟ್ಟದ ಕೊನೆಯ ಭಾಗದಲ್ಲಿ ಏಷ್ಯದ ಉತ್ತರದ ನಾಡುಗಳಿಂದ ಕೊರಿಯದ ಮೂಲಕ ಹೊಸ ಜನರು ವಲಸೆ ಬಂದು ಈ ಸಂಸ್ಕøತಿಯಲ್ಲಿ ಹಲವು ಮಾರ್ಪಾಡುಗಳನ್ನು ಉಂಟು ಮಾಡಿದರು. ಅವರು ತಂದ ಹೊಸ ಅಂಶಗಳಲ್ಲಿ ಕಂಚಿನ ಉಪಯೋಗ ಮುಖ್ಯವಾದ್ದು. ಇದರ ಉಪಯೋಗ ಮೊದಲು ದಕ್ಷಿಣ ಜಪಾನಿನಲ್ಲಿ, ಅದರಲ್ಲೂ ಕೀಯೂಷೂ ಪ್ರದೇಶದಲ್ಲಿ ರೂಢಿಗೆ ಬಂದದ್ದರಿಂದ, ಅಲ್ಲಿಯವರು ಜಪಾನಿನ ಇತರೆಡೆಗಳಲ್ಲಿದ್ದ ಜನರಿಗಿಂತ ಹೆಚ್ಚು ಆರ್ಥಿಕ ಹಾಗೂ ಕ್ಷಾತ್ರಬಲ ಸಾಧಿಸಿಕೊಳ್ಳುವುದಕ್ಕೆ ಅವಕಾಶವಾಗಿ ಅಲ್ಲಿಯ ಸಂಸ್ಕøತಿ ಇತರ ಎಡೆಗಳಿಗೆ ಬೇಗ ಹರಡಲು ಕಾರಣವಾಯಿತು. ಜಪಾನಿನಲ್ಲಿ ಕಂಚಿನ ಯುಗ ಕ್ರಿ.ಪೂ. 2-3ನೆಯ ಶತಮಾನಗಳಲ್ಲಿ ಪ್ರಾರಂಭವಾಗಿ ಕ್ರಿ.ಶ. 2-3ನೆಯ ಶತಮಾನಗಳ ವರೆಗೂ ಮುಂದುವರಿಯಿತು.

ಕ್ರಿ.ಶ. 2ನೆಯ ಶತಮಾನದ ಹೊತ್ತಿಗೆ ಕಬ್ಬಿಣದ ಆಯುಧಗಳನ್ನು ಉಪಯೋಗಿಸುತ್ತಿದ್ದ ಚೀನೀ ಸಂಸ್ಕøತಿ ಕೊರಿಯದಲ್ಲಿ ಪ್ರಚಲಿತವಾಗಿತ್ತು. 3ನೆಯ ಶತಮಾನದ ಹೊತ್ತಿಗೆ ಅದು ಜಪಾನಿಗೂ ಹರಿಯಿತು. ಜಪಾನಿನಲ್ಲಿ ಕಬ್ಬಿಣದ ಯುಗ ಆರಂಭವಾದ ಮೇಲೆ ಲಭ್ಯವಾದ ಹೊಸ ತಂತ್ರಜ್ಞಾನದಿಂದ ಸಾಮಾಜಿಕ ವ್ಯವಸ್ಥೆಯಲ್ಲೂ ಹಲವು ಬದಲಾವಣೆಗಳು ಆದುವು. 3ರಿಂದ 8ನೆಯ ಶತಮಾನದ ಅವಧಿಗೆ ಸೇರುವ ಹಲವಾರು ಬೃಹತ್ ಸಮಾಧಿಗಳು ಜಪಾನಿನ ಕರಾವಳಿ ಪ್ರದೇಶಗಳಲ್ಲಿ ಕಂಡುಬಂದಿವೆ. ಇವು ಆ ಕಾಲದ ಯೋಧಗಣಗಳ ಮುಖ್ಯರ ಸಮಾಧಿಗಳಿರಬೇಕೆಂದು ಊಹಿಸಲು ಆಧಾರಗಳಿವೆ. ಅಲ್ಲದೆ ಆ ಕಾಲದಲ್ಲಿ ಸಮಾಜ ಹಲವು ಅಂತಸ್ತುಗಳಾಗಿ ವಿಭಜಿತವಾಗಿತ್ತೆಂದೂ ತರ್ಕಿಸಬಹುದಾಗಿದೆ. ಆ ಕಾಲದ ಸಮಾಧಿಗಳು ಮಣ್ಣುಕಲ್ಲುಗಳಿಂದ ಮಾಡಿದವಾದರೂ ಕೆಲವು ಬಹು ದೊಡ್ಡವು. ನಿಂತೋಕು ರಾಜನದೆಂದು ಊಹಿಸಲಾಗಿರುವ ಒಂದು ಸಮಾಧಿ ಪ್ರಪಂಚದಲ್ಲೇ ಅತಿ ದೊಡ್ಡದು. ಇದನ್ನು ಕಟ್ಟಲು ಸುಮಾರು 5,000 ಜನ ಒಂದು ವರ್ಷ ಶ್ರಮಿಸಿರಬೇಕು. ಈ ಬೃಹತ್ ಸಮಾಧಿಗಳಲ್ಲಿ ಅನೇಕ ರೀತಿಯ ಆಯುಧಗಳು ಮತ್ತು ಆಭರಣಗಳನ್ನು ಮೃತನ ಜೊತೆಗೆ ಹೂಳಲಾಗುತ್ತಿತ್ತು. ಇಂಥ ವಸ್ತುಗಳ ಉಪಯೋಗ ಆ ಜನರ ಅನುಕೂಲ ಸ್ಥಿತಿಯನ್ನು ಸೂಚಿಸುತ್ತದೆ. ದುಡಿಮೆಯ ಬದಲು ಸುಲಭ ಆಕ್ರಮಣಗಳಿಂದ ಸಂಪತ್ತನ್ನು ಸಂಗ್ರಹಿಸುವವರು ಮಾತ್ರವೇ ಅದನ್ನು ಆ ರೀತಿ ವಿನಿಯೋಗ ಮಾಡಬಹುದು. ಈ ಕಾಲದ ಮಡಕೆಗಳು ಮತ್ತು ಆಯುಧಗಳು ಕೂಡ ಬಹಳ ಉತ್ತಮ ತಂತ್ರಗಳನ್ನು ಉಪಯೋಗಿಸಿ ತಯಾರಿಸಿದವು. ಮುಂದೆ ರಾಜಚಿಹ್ನೆಗಳಾಗಿ ಉಪಯೋಗಕ್ಕೆ ಬಂದ ಮಗತಮ ಎಂಬ ಬಾಗಿದ ಆಭರಣ, ಕತ್ತಿ ಹಾಗೂ ಕನ್ನಡಿಗಳು ಈ ಸಮಾಧಿಗಳಲ್ಲಿ ದೊರಕಿವೆ. ಅಲ್ಲದೆ ಒಳಭಾಗ ಟೊಳ್ಳಾಗಿರುವ ಹನೀವ ಎಂಬ ಮಣ್ಣಿನ ಬೊಂಬೆಗಳು ಈ ಸಮಾಧಿಗಳ ಜೊತೆಗೆ ಅಸಂಖ್ಯಾತವಾಗಿ ಸಿಗುತ್ತವೆ. ಈ ಹನೀವಗಳು ಯೋಧ, ಸ್ತ್ರೀ ಮತ್ತು ಕುದುರೆಗಳ, ಹಲವು ಬಾರಿ ಮನೆಗಳ, ಪ್ರತಿಕೃತಿಗಳು.

6ನೆಯ ಶತಮಾನದಲ್ಲಿ ಬೌದ್ಧ ಧರ್ಮ ಜಪಾನಿಗೆ ಬಂದ ಮೇಲೆ ಇಂಥ ಬೃಹತ್ ಸಮಾಧಿಗಳ ರಚನೆಯ ಪದ್ಧತಿ ನಿಂತುಹೋಯಿತು. ಅಲ್ಲದೆ ಅನತಿಕಾಲದಲ್ಲಿ ಬರವಣಿಗೆಯ ಕಲೆಯೂ ಚೀನದಿಂದ ಜಪಾನಿಗೆ ಹರಡಿದ್ದರಿಂದಲೂ ಅದರ ಜೊತೆಗೇ ಇತರ ಸಾಂಸ್ಕøತಿಕ ಪ್ರಭಾವಗಳೂ ತ್ವರಿತವಾಗಿ ಪಸರಿಸಿದ್ದರಿಂದಲೂ ಜಪಾನಿನಲ್ಲಿ ಹೊಸ ಸಾಂಸ್ಕøತಿಕ ಸಾಮಾಜಿಕ ವ್ಯವಸ್ಥೆ ರೂಪುಗೊಂಡು ಇತಿಹಾಸ ಕಾಲ ಪ್ರಾರಂಭವಾಯಿತು.

ಇತಿಹಾಸ[ಬದಲಾಯಿಸಿ]

ಜಪಾನಿನ ಇತಿಹಾಸಕಾಲ ಯಾವಾಗ ಆರಂಭವಾಯಿತು ಎಂಬ ಬಗ್ಗೆ ನಿಖರವಾಗಿ ಹೇಳುವುದು ಕಷ್ಟ. ಕ್ರಿ.ಶ. 8ನೆಯ ಶತಮಾನದಿಂದೀಚಿನ ದೇಶೀಯ ಬರೆವಣಿಗೆಗಳ ಆಧಾರದ ಮೇಲೆ ಕೆಲವು ವಿಷಯಗಳು ತಿಳಿದುಬರುತ್ತವೆ. ಇಂಥ ಪ್ರಾಚೀನ ಗ್ರಂಥಗಳಲ್ಲಿ ಎರಡು ಬಹು ಮುಖ್ಯವಾದವು. ಒಂದು ಕ್ರಿ.ಶ. 712ರಲ್ಲಿ ರಚಿತವಾದ ಕೋಜಿಕಿ ಅಥವಾ ಪ್ರಾಚೀನ ವಿಚಾರಗಳ ದಫ್ತರ. 720ರಲ್ಲಿ ಬರೆಯಲಾದ ನಿಹೋನ್‍ಗಿ ಎಂಬುದು ಇನ್ನೊಂದು. ಈ ಗ್ರಂಥಗಳಲ್ಲಿ ಜಪಾನಿನಲ್ಲಿ ರಾಜಕೀಯ ಯುಗ ಹೇಗೆ ಪ್ರಾರಂಭವಾಯಿತೆಂಬುದನ್ನು ಕುರಿತ ಐತಿಹ್ಯಗಳು ಇವೆ. ಈ ಗ್ರಂಥಗಳ ಪ್ರಕಾರ ಕ್ರಿ.ಪೂ. 6ನೆಯ ಶತಮಾನಕ್ಕಿಂತ ಮೊದಲು ಅಮತ್ಯುರತೇರ ಕಾಮಿ ಎಂಬ ಸೂರ್ಯದೇವತೆ ಸ್ವರ್ಗಲೋಕದಿಂದ ಬಂದು ಜಪಾನ್ ದೇಶದಲ್ಲಿ ಮೊಟ್ಟಮೊದಲು ರಾಜ್ಯವೊಂದನ್ನು ಸ್ಥಾಪಿಸಿದಳೆಂದು ಗೊತ್ತಾಗುತ್ತದೆ. ಆಕೆಯ ಮೊಮ್ಮಗನಾದ ಜಿಮ್ಮು ಕ್ರಿ.ಪೂ. 660ರಲ್ಲಿ ರಾಜ್ಯ ಸೂತ್ರಗಳನ್ನು ಕೈಗೊಂಡು ಜಪಾನ್ ದೇಶದ ಮೊದಲನೆಯ ಚಕ್ರವರ್ತಿಯಾಗಿ ರಾಜ್ಯವಾಳಿದನೆಂದು ಈ ಗ್ರಂಥಗಳು ತಿಳಿಸುತ್ತವೆ. ಜಿಮ್ಮು ತನ್ನ ಅಜ್ಜಿಯಿಂದ ಒಂದು ಆಭರಣ, ಕತ್ತಿ ಮತ್ತು ಕನ್ನಡಿಯನ್ನು ತಂದ. ಈ ವಂಶಕ್ಕೆ ಸೇರಿದ ಚಕ್ರವರ್ತಿಗಳೇ ಅವ್ಯಾಹತವಾಗಿ ಜಪಾನನ್ನು ಆಳಿದರು. ಈ ಕಥೆಯ ಹಿಂದೆ ಐತಿಹಾಸಿಕ ಸತ್ಯವಿರಬಹುದೆಂದು ಊಹಿಸಿ ಆಧುನಿಕ ವಿದ್ವಾಂಸರು ಅದರ ಸಂಶೋಧನೆಗೆ ಶ್ರಮಿಸುತ್ತಿದ್ದಾರೆ. ಕ್ರಿ.ಶ. 8ನೆಯ ಶತಮಾನಕ್ಕೆ ಮುಂಚೆ ಈ ಐತಿಹ್ಯ ಈಗಿನ ರೂಪದಲ್ಲಿ ಬರೆಯಲ್ಪಟ್ಟಿರಲಿಲ್ಲ. ಚೀನೀಯರ ಸಂಪರ್ಕ ಪಡೆದ ಜಪಾನೀಯರು ತಮ್ಮ ರಾಜವಂಶವೂ ಚೀನದ ರಾಜವಂಶಕ್ಕೆ ಸಮಾನವಾದ್ದೆಂದು ಹೇಳಿಕೊಳ್ಳಲು ಈ ಮಾರ್ಗ ಹಿಡಿದಂತೆ ತೋರುತ್ತದೆ. ಈ ಐತಿಹ್ಯ ಈ ಶತಮಾನದ ಜಪಾನೀಯರ ಮೇಲೆ ಹೆಚ್ಚಿನ ಪ್ರಭಾವ ಬೀರಿದೆ. ಅವರು ತಮ್ಮ ದೇಶದ ರಚನೆಯಲ್ಲಿ ದೈವಾಂಶದ ಪ್ರಭಾವವನ್ನು ದೃಢವಾಗಿ ನಂಬಿದ್ದಾರೆ. ಚಕ್ರವರ್ತಿ ಸೂರ್ಯದೇವತೆಯಿಂದ ನೇಮಕನಾದವನೂ ಆಕೆಯ ವಂಶಸ್ಥನೂ ಆದ್ದರಿಂದ ಆತ ದೈವಾಂಶ ಸಂಭೂತನೆಂದು ಸಮರ್ಥಿಸುತ್ತಾರೆ. ಮೊದಲನೆಯ ಚಕ್ರವರ್ತಿ ಜಿಮ್ಮುವಿಗೆ ತನ್ನ ಅಜ್ಜಿಯಿಂದ ದೊರಕಿತೆನ್ನಲಾದ ಆಭರಣವೂ ಖಡ್ಗವೂ ಕನ್ನಡಿಯೂ ಜಪಾನೀಯರ ರಾಜಚಿಹ್ನೆಗಳು.

ಕ್ರಿ.ಪೂ. 660ರಿಂದ ಕ್ರಿ.ಶ. 531ರ ವರೆಗಿನ ಕಾಲವನ್ನು ಸಾಂಪ್ರದಾಯಿಕ ಕಾಲವೆಂದು ಕರೆಯಬಹುದು. ಈ ಕಾಲದ ಸ್ಥಿತಿಗತಿಗಳನ್ನು ತಿಳಿದುಕೊಳ್ಳಲು ಜಪಾನೀಯರ ಪ್ರಾಚೀನ ಗ್ರಂಥಗಳಾದ ಕೋಜಿಕಿ ಮತ್ತು ನಿಹೋನ್‍ಗಿ ಸಹಾಯಮಾಡುತ್ತವೆ. ತಾವು ಯಮಟೋ ಕುಲದವರೆಂದು ಜಪಾನೀಯರ ಹೆಮ್ಮೆ. ಯಮಟೋ ಜನಾಂಗ ದೇಶದಲ್ಲಿ ಶಾಂತವಾಗಿ ನೆಲಸಿದ ಮೇಲೆ ರಾಜಕೀಯ ವ್ಯವಸ್ಥೆ ಪ್ರಾರಂಭವಾಯಿತು. ಅರಸು ಮನೆತನಗಳು ಆದಿವಾಸಿ ಮನೆತನಗಳೆಂದೂ ಮಿಕ್ಕೆಲ್ಲ ಜನರ ಮನೆತನಗಳು ಅವುಗಳ ಕವಲುಗಳೆಂದೂ ಆಗಿನ ಜನರ ನಂಬಿಕೆಯಾಗಿತ್ತು. ಅದರಂತೆ ರಾಜನೇ ಸರ್ವಕ್ಕೂ ಒಡೆಯನೆಂದು ತಿಳಿದು, ಜನ ಅವನ ವಶಕ್ಕೆ ರಾಜ್ಯವನ್ನು ಒಪ್ಪಿಸಿ ತಾವು ಆತನ ಅಪ್ಪಣೆಯಂತೆ ನಡೆದುಕೊಳ್ಳುತ್ತಿದ್ದರು. ಇಚುಮೋ ಮತ್ತು ಯಮಟೋಗಳು ಜಪಾನೀಯರ ಸಾಂಸ್ಕøತಿಕ ಕೇಂದ್ರಗಳಾಗಿದ್ದುವು. ಭೌದ್ಧ ಧರ್ಮ ಜಪಾನಿನ ರಾಷ್ಟ್ರಧರ್ಮವೆಂದು ಅಧಿಕೃತವಾಗಿ ಘೋಷಿತವಾಯಿತು. 604ರಲ್ಲಿ ಜಪಾನಿನ ಇತಿಹಾಸದಲ್ಲೆ ಮೊದಲ ಬಾರಿಗೆ ಸಂವಿಧಾನದ ರಚನೆಯಾಯಿತು. 646ರಲ್ಲಿ ಚಕ್ರವರ್ತಿ ಕೊತುಕು ಚೀನದ ಟ್ಯಾಂಗ್ ಆಡಳಿತದಂತೆ ಹೊಸರೀತಿಯ ಆಡಳಿತವನ್ನು ವ್ಯವಸ್ಥೆಗೊಳಿಸಿದ.

ಎಂಟನೆಯ ಶತಮಾದಿಂದೀಚಿನ ಜಪಾನೀಯರ ಇತಿಹಾಸವನ್ನು ಈ ರೀತಿ ಸ್ಥೂಲವಾಗಿ ವಿಭಾಗಿಸಬಹುದು ; 1 ನಾರಾ ಕಾಲ (710-784), 2 ಹೀಯಾನ್ ಕಾಲ (484-1185), 3 ಕಾಮಾಕುರಾ ಕಾಲ (1185-1336), 4 ಆಷಿಕಾಗ ಕಾಲ (1336-1603), 5 ಟೋಕುಗಾವಾ ಕಾಲ (1603-1868), 6 ಆಧುನಿಕ ಕಾಲ (1868ರಿಂದ ಈಚೆಗೆ).

ನಾರಾ ಕಾಲ (710-784)[ಬದಲಾಯಿಸಿ]

ನಾರಾ ಎಂಬುದನ್ನು ಖಾಯಂ ರಾಜಧಾನಿಯಾಗಿ ಮಾಡಿಕೊಂಡು ಆಳಿದ ಜಪಾನೀ ಚಕ್ರವರ್ತಿಗಳ ಕಾಲ ಇದು. ಎಂಟನೆಯ ಶತಮಾನಕ್ಕೆ ಹಿಂದೆ ಜಪಾನಿನಲ್ಲಿ ಒಂದು ಖಾಯಂ ರಾಜಧಾನಿ ಇರಲಿಲ್ಲ. ರಾಜನ ಆಸ್ಥಾನ ಊರಿಂದೂರಿಗೆ ಚಲಿಸುತ್ತಿತ್ತು. ಸರ್ಕಾರ ಸಂಕೀರ್ಣವಾದಾಗ ಒಂದುs ಸ್ಥಿರ ರಾಜಧಾನಿಯ ಅಗತ್ಯವಾಯಿತು. ಅದಕ್ಕಾಗಿ ಆಯ್ಕೆಯಾದ್ದು ನಾರಾ. ಆದ್ದರಿಂದ ಆಗಿನ ಕಾಲಕ್ಕೆ ನಾರಾ ಕಾಲವೆಂದೇ ಹೆಸರಾಗಿದೆ. ಜಪಾನಿನ ಇತಿಹಾಸದಲ್ಲಿ ಈ ಕಾಲ ಮಹತ್ತ್ವಪೂರ್ಣವಾದ್ದು. ಜಪಾನೀಯರ ಧರ್ಮ, ಕಲೆ, ಸಾಹಿತ್ಯ. ಜನಜೀವನಗಳು ಚೀನದ ಸಂಸ್ಕøತಿಯಿಂದ ಪ್ರಭಾವಗೊಂಡು ಬೆಳೆದುವು. ಈ ಕಾಲದಲ್ಲಿದ್ದ ಸೋಕೋಕು ಎಂಬ ಚಕ್ರವರ್ತಿ ಬೌದ್ಧಧರ್ಮಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿ, ಅದು ದೇಶದಲ್ಲೆಲ್ಲ ಹರಡಲು ಕಾರಣವಾಗಿ, ಜಪಾನಿನ ಅಶೋಕ ಚಕ್ರವರ್ತಿ ಎಂಬ ಕೀರ್ತಿ ಪಡೆದ. ಅಶೋಕನಂತೆ ಇವನೂ ಬೌದ್ಧಧರ್ಮದ ಪ್ರಚಾರದ ಜೊತೆಗೆ ದೇಶದಲ್ಲೆಲ್ಲ ಪ್ರಜೆಗಳ ಸೌಕರ್ಯಕ್ಕಾಗಿ ಛತ್ರಗಳನ್ನೂ ಔಷಧಾಲಯಗಳನ್ನೂ ಕಟ್ಟಿಸಿದ. ಚೀನದಿಂದ ಶಿಲ್ಪಿಗಳನ್ನು ಕರೆಸಿಕೊಂಡು ಅನೇಕ ಬೌದ್ಧ ದೇವಾಲಯಗಳನ್ನು ನಿರ್ಮಿಸಿದ. ರಾಜಧಾನಿ ನಾರಾದಲ್ಲಿ ಇಂದಿಗೂ ಆ ಭವ್ಯ ವೈಭವವನ್ನು ಪ್ರತಿನಿಧಿಸುವ ಐತಿಹಾಸಿಕ ಸ್ಮಾರಕಗಳಿವೆ. ಜಪಾನಿನಲ್ಲಿ ಇಂದಿಗೂ ಪ್ರಸಿದ್ಧವಾಗಿರುವ ತೋದೈಜಿ, ಯಾಕುಕ್ಷೀಜೀ, ಹೊರ್ಯೂಜಿ ಮೊದಲಾದ ಬೌದ್ಧ ದೇವಾಲಯಗಳು ಆ ಕಾಲದಲ್ಲಿ ನಿರ್ಮಿತವಾದುವು. ಬೌದ್ಧಧರ್ಮ ರಾಷ್ಟ್ರದ ಸೊತ್ತೆಂದು ಘೋಷಿಸಲಾಯಿತು. ಆ ಧರ್ಮ ರಾಷ್ಟ್ರದ ಕಾನೂನಿನ ರಚನೆಯ ಮೇಲೆ ಪ್ರಭಾವ ಬೀರಿತು. ಪ್ರಖ್ಯಾತ ವ್ಯಕ್ತಿ ಸತ್ತಾಗ ಅವನ ಅನುಯಾಯಿಗಳು ಆತ್ಮಾರ್ಪಣೆ ಮಾಡಿಕೊಳ್ಳುವ ಪ್ರಾಚೀನ ಸಂಪ್ರದಾಯವನ್ನು ನಿಷೇಧಿಸಲಾಯಿತು. ಅಂತೆಯೇ ಅಪರಾಧಿಗಳಿಗೆ ಕೆಲವೊಂದು ಸಂದರ್ಭಗಳಲ್ಲಿ ವಿಶೇಷ ಕ್ಷಮೆ ನೀಡುವುದನ್ನು ಜಾರಿಗೆ ತರಲಾಯಿತು. ಇದಲ್ಲದೆ ವಿಶೇಷ ದಿವಸಗಳಲ್ಲಿ ಬೌದ್ಧಧರ್ಮದ ಮಠಾಧಿಪತಿಗಳು ರಾಜಕೀಯದಲ್ಲೂ ಪ್ರಭಾವಶಾಲಿ ವ್ಯಕ್ತಿಗಳಾಗಿದ್ದರು.

ಆ ಕಾಲದಲ್ಲಿ ಸಾಹಿತ್ಯದ ನಿರ್ಮಾಣ ಆಯಿತು. ಪ್ರಾಚೀನ ಗ್ರಂಥಗಳೆಂದು ಪರಿಗಣಿಸಲ್ಪಟ್ಟಿರುವ ಹಾಗೂ ಐತಿಹಾಸಿಕ ಸಂಗತಿಗಳನ್ನು ಒಳಗೊಂಡಿರುವ ಕೋಜಿಕಿ ಮತ್ತು ನಿಹೋನ್‍ಗಿಗಳು ರಚಿಸಲ್ಪಟ್ಟುವು. ಮಾನ್ಯೋಷೂ ಎಂಬುದು ಈ ಕಾಲದ ಪ್ರಮುಖ ಸಾಹಿತ್ಯ ಗ್ರಂಥ. ಜಪಾನೀಯರು ಕಾವ್ಯದಲ್ಲಿ ಪ್ರಣಯ ಮತ್ತು ಪ್ರಕೃತಿವರ್ಣನೆಗಳಿಗೆ ಹೆಚ್ಚಿನ ಪ್ರಾಮುಖ್ಯ ನೀಡಿದಂತೆ ಕಾಣುತ್ತದೆ.

ಈ ಕಾಲದ ರಾಜಕೀಯ ಜೀವನದಲ್ಲಿ ಚಕ್ರವರ್ತಿಗಳಿಗಿಂತ ಪಾಳೆಯಗಾರರ ಪ್ರಭಾವವೇ ಹೆಚ್ಚಾಗಿತ್ತು. ನಾಲ್ಕು ಜನ ಚಕ್ರವರ್ತಿನಿಯರು ಆಳ್ವಿಕೆ ನಡೆಸಿದ್ದು ಈ ಕಾಲದ ಮತ್ತೊಂದು ವಿಶೇಷ. ಸೋಕೋಕು ವಂಶೀಯರ ಆಳ್ವಿಕೆಯ ಅನಂತರ ಕಮ್ಮು ಎಂಬವನು ಪಟ್ಟಕ್ಕೆ ಬಂದು 784ರಲ್ಲಿ ಹೊಸ ಯುಗವೊಂದನ್ನು ಪ್ರಾರಂಭಿಸಿದ.

ಹೀಯಾನ್ ಕಾಲ (784-1185)[ಬದಲಾಯಿಸಿ]

ಈ ಅವಧಿಯಲ್ಲಿ ಜಪಾನಿನ ರಾಜಧಾನಿಯನ್ನು ನಾರಾ ಪಟ್ಟಣದಿಂದ ಹೊಸದಾಗಿ ನಿರ್ಮಿತವಾದ ಕೀಯೋಟೋಗೆ ವರ್ಗಾಯಿಸಲಾಯಿತು. ನಾರಾ ಪಟ್ಟಣದ ಬೌದ್ಧಧರ್ಮೀಯ ಮುಖಂಡರ ವಿಶೇಷ ರಾಜಕೀಯ ಪ್ರಭಾವಗಳಿಂದ ಬಿಡುಗಡೆ ಪಡೆಯುವುದೂ ಸಂಪರ್ಕದ ದೃಷ್ಟಿಯಿಂದ ಕೀಯೋಟೋ ಉತ್ತಮವಾಗಿದ್ದುದೂ ಈ ಬದಲಾವಣೆಗೆ ಕಾರಣಗಳು. ಚಕ್ರವರ್ತಿ ಕಮ್ಮು (781-806) ಈ ಪಟ್ಟಣದ ನಿರ್ಮಾಪಕ. ಚೀನೀಯರ ಪ್ರಭಾವ ಇಲ್ಲೂ ಎದ್ದುಕಾಣುತ್ತಿತ್ತು. 1867ರ ವರೆಗೆ ಈ ಪಟ್ಟಣ ಜಪಾನೀ ಚಕ್ರವರ್ತಿಗಳ ಕೇಂದ್ರವಾಗಿ ಮುಂದುವರಿಯಿತು. ಜಪಾನ್ ದೇಶದ ಪ್ರಾಚೀನ ಕಲಾಕೌಶಲಗಳಿಗೆ ತವರುಮನೆಯಾಗಿ ಕೀಯೋಟೋ ನಗರ ಇಂದಿಗೂ ಮೆರೆಯುತ್ತಿದೆ.

ಹೀಯಾನ್ ಕಾಲದಲ್ಲಿ ಕಾನಾ ವರ್ಣಮಾಲೆ ಪ್ರಚಾರಕ್ಕೆ ಬಂತು. ಇದರಿಂದ ಸಾಹಿತ್ಯದ ಬೆಳವಣಿಗೆಯಾಯಿತು. ಪುರುಷರು ಹೆಚ್ಚಾಗಿ ಯುದ್ಧಕಾರ್ಯಗಳಲ್ಲಿ ನಿರತರಾದ್ದರಿಂದಲೋ ಏನೋ, ಆ ಕಾಲದ ಸಾಹಿತ್ಯ ನಿರ್ಮಾಣ ಆಸ್ಥಾನದ ಪ್ರತಿಭಾವಂತ ಸ್ತ್ರೀಯರಿಗೆ ಸೀಮಿತವಾಯಿತು. ಆಗಿನ ಜಪಾನೀ ಸ್ತ್ರೀಯರು ರಚಿಸಿದ ಗದ್ಯಗ್ರಂಥಗಳು ಜಪಾನೀ ಭಾಷೆಯ ಪ್ರಾಚೀನ ಗದ್ಯಶೈಲಿಯ ಮಾದರಿಗಳಾಗಿವೆ. ಮುರಾಸಾಕಿ ಷಿಕಿಬು ಎಂಬವನು ರಚಿಸಿದ ಗೆಂಜಿ ಮನೊಗತಾರಿ ಅಥವಾ ಗೆಂಜಿಯ ಕತೆಗಳು ಎಂಬ ಗ್ರಂಥ ವಿಶ್ವಸಾಹಿತ್ಯದ ಅಗ್ರಕೃತಿಗಳ ಪಂಕ್ತಿಗೆ ಸೇರುತ್ತದೆ. ಮುರಾಸಾಕಿ ದಿನಚರಿಯೊಂದನ್ನೂ ಬರೆದ. ಸೆಯಿ ಷೊನಗನ್ ಎಂಬವಳು ಮಕೂರ-ನೋ-ಸೋಷಿ ಎಂಬ ದಿನಚರಿ ಬರೆದಿದ್ದಾಳೆ. ಕೊಂಕಿನ್‍ಷೂ ಎಂಬ ಪದ್ಯಸಂಕಲನವೂ ಈ ಕಾಲಕ್ಕೆ ಸೇರಿದ್ದು. ಈ ಗ್ರಂಥದಲ್ಲಿ ಪ್ರಣಯ ಮತ್ತು ಪ್ರಕೃತಿ ವರ್ಣನೆಗಳು ಹೆಚ್ಚಾಗಿ ಬಂದಿವೆ.

ರಾಷ್ಟ್ರದ ಆಡಳಿತದಲ್ಲಿ ಚಕ್ರವರ್ತಿಗಿಂತ ಪಾಳೆಯಗಾರರ ಮನೆತನಗಳು ಹೆಚ್ಚು ಪ್ರಭಾವಶಾಲಿಗಳಾಗಿದ್ದುವು. ಪ್ರಾಚೀನ ಕಾಲದಲ್ಲಿ ಸಾಮೂಹಿಕ ಅನುಭವದಲ್ಲಿದ್ದ ಜಮೀನುಗಳು ಈ ಕಾಲದಲ್ಲಿ ಖಾಸಗಿ ಜಮೀನುಗಳಾಗಿ ಪರಿವರ್ತನೆಗೊಂಡುವು. ಈ ಬದಲಾವಣೆಯನ್ನು ಚಕ್ರವರ್ತಿಗಳು ವಿರೋಧಿಸಿದರೂ ಪ್ರಯೋಜನವಾಗಲಿಲ್ಲ. ಕೆಲವು ವರ್ಷಗಳೊಳಗಾಗಿ ಹಲವು ಪ್ರಬಲ ಪಾಳೆಯಗಾರ ಮನೆತನಗಳು ತಲೆಯೆತ್ತಿದವು. ಹೆಚ್ಚು ಬಲಿಷ್ಠವಾದ ಫುಜಿವಾರ ಮನೆತನ ರಾಜ್ಯಸೂತ್ರಗಳನ್ನು ವಹಿಸಿಕೊಂಡು ಚಕ್ರವರ್ತಿಯನ್ನು ಉತ್ಸವಮೂರ್ತಿಯನ್ನಾಗಿ ಮಾಡಿತು. ಫುಜಿವಾರ ಮನೆತನ ಜಪಾನಿಗೆ ಶ್ರೇಷ್ಠ ಆಡಳಿತಗಾರರನ್ನೂ ಪಂಡಿತರನ್ನೂ ಕೊಟ್ಟಿತು. ಈ ಮನೆತನದವರು ಅಶಕ್ತರಾದ ತರುವಾಯ ಟಾಯಿರಾ (1160-85) ಮತ್ತು ಮಿನಾಮೊಮೊ (1185-1219) ಮನೆತನಗಳು ಅಧಿಕಾರಕ್ಕಾಗಿ ಹೋರಾಟ ನಡೆಸಿದ್ದವು. 1185ರಲ್ಲಿ ಮಿನಾಮೊಟೊ ಮನೆತನದವರು ಟಾಯಿರಾ ಮನೆತನದವರನ್ನು ಹತ್ತಿಕ್ಕಿ ಪ್ರಾಬಲ್ಯಕ್ಕೆ ಬಂದು, ಕಾಮಾಕುರಾ ಪಟ್ಟಣದಲ್ಲಿ ಆಳ್ವಿಕೆ ಪ್ರಾರಂಭಿಸಿದರು.

ಕಾಮಾಕುರಾ ಕಾಲ (1185-1336)[ಬದಲಾಯಿಸಿ]

ಇದನ್ನು ಸಾಮುರೈ ಕಾಲವೆಂದು ಕರೆಯುವುದುಂಟು. ಸಾಮುರೈ ಎಂದರೆ ಕ್ಷತ್ರಿಯರು, ಯುದ್ಧ ಶೌರ್ಯ ಸಾಹಸ ಪ್ರದರ್ಶನಗಳಲ್ಲೇ ನಿರತರಾದ-ಅದಕ್ಕಾಗಿ ಶಿಕ್ಷಣ ಪಡೆದ-ಪ್ರಾಣವನ್ನು ಮೀಸಲಾಗಿಟ್ಟ-ಜನರು. ಮಿನಾಮೊಟೊ ಮನೆತನದ ಯೊರಿಟೊಮೊ ಎಂಬ ಪಾಳೆಯಗಾರ ಇತರ ಸಣ್ಣಪುಟ್ಟ ಪಾಳೆಯಗಾರರನ್ನು ಜಯಿಸಿ, ಚಕ್ರವರ್ತಿಗಳ ರಾಜಧಾನಿಯಾದ ಕೀಯೋಟೋ ಪಟ್ಟಣಕ್ಕೆ 300 ಮೈ. ದೂರದಲ್ಲಿ ಕಾಮಾಕುರಾ ಪಟ್ಟಣವನ್ನು ಕಟ್ಟಿಕೊಂಡು ರಾಜ್ಯವಾಳತೊಡಗಿದ (1192-98). 1192ರಲ್ಲಿ ಜಪಾನಿನ ಚಕ್ರವರ್ತಿ ಈತನಿಗೆ ಸೆಯಿ ತೈಷೋಗುನ್ ಅಥವಾ ಮುಖ್ಯ ಸೇನಾಪತಿ ಎಂಬ ಬಿರುದನ್ನಿತ್ತ. ಈತನ ಕೈಯಲ್ಲೇ ರಾಜ್ಯದ ಆಡಳಿತ ಸೂತ್ರಗಳೆಲ್ಲ ಇದ್ದುವು. ಚಕ್ರವರ್ತಿ ಹೆಸರಿಗೆ ಮಾತ್ರ ಆಡಳಿತದ ಮುಖ್ಯಸ್ಥ. ಅವವನ್ನು ದೇವಾಂಶ ಸಂಭೂತನೆಂದು ಪೂಜಿಸುತ್ತಿದ್ದದ್ದುಂಟು. ಮಿನಾಮೊಟೊ ಮನೆತನದ ಈ ಪಾಳೆಯಗಾರ ಹೆಚ್ಚಿನಮಟ್ಟಿಗೆ ಸರಳ ಜೀವನ ನಡೆಸುತ್ತ ರಾಜ್ಯಕ್ಕೆ ಹೆಚ್ಚು ಸಹಾಯ ಮಾಡುತ್ತಿದ್ದ. ಇವನ ವಂಶೀಯರಿಗೂ ಇವನ ಗುಣಗಳೇ ಇದ್ದುವು.

ರಾಜ್ಯದ ಭದ್ರತೆಗಾಗಿ ಯೊರಿಟೊಮೊ ಸೈನಿಕರನ್ನೆಲ್ಲ ಒಟ್ಟುಗೂಡಿಸಿ, ಅವರಿಗೆ ಕ್ಷಾತ್ರಧರ್ಮವನ್ನು ಬೋಧಿಸಿದ. ಪ್ರತಿಯೊಬ್ಬ ಯೋಧನೂ ಪ್ರಮಾಣಿಕನಾಗಿರಬೇಕು; ಸರಳ ಜೀವನ ನಡೆಸಬೇಕು; ಅಬಲರಿಗೆ, ಅಶಕ್ತರಿಗೆ ನೆರವಾಗಬೇಕು. ಸಮಯ ಬಂದಾಗ ದೇಶಕ್ಕಾಗಿಯೂ, ಚಕ್ರವರ್ತಿಗಳಿಗಾಗಿಯೂ ಪ್ರಾಣವನ್ನು ಧಾರೆಯೆರೆಯಲು ಸಿದ್ಧನಿರಬೇಕು ಎಂದು ಉಪದೇಶಿಸಿದ. ಮೇಲ್ಕಂಡ ಸೂತ್ರಗಳನ್ನೊಳಗೊಂಡ ಬೂಷೀಡೋ ಸಂಪ್ರದಾಯ ಇತ್ತೀಚಿನವರೆಗೂ ಪ್ರಖ್ಯಾತವಾಗಿತ್ತು.

ಯೊರಿಟೊಮೊ ಮರಣಹೊಂದಿದ ಮೇಲೆ, ಷೋಗುನ್‍ಗೆ (ಸೇನಾಪತಿ, ಸರ್ವಾಧಿಕಾರಿ) ಅಧೀನರಾಗಿದ್ದ, ಸೇವಕರಾಗಿದ್ದ ಹೋಜೋಗಳ ಮನೆತನ ಪ್ರಾಬಲ್ಯಕ್ಕೆ ಬಂತು. ಚೀನೀ ಚಕ್ರವರ್ತಿಯಾಗಿದ್ದ ಕೂಬ್ಲೈಖಾನ್ ಜಪಾನು ತನಗೆ ಕಪ್ಪಕಾಣಿಕೆ ಕೊಟ್ಟು ಆಶ್ರಿತ ಸಂಸ್ಥಾನವಾಗಿರಬೇಕೆಂದೂ ಇಲ್ಲದಿದ್ದರೆ ಅದರ ಮೇಲೆ ದಂಡೆತ್ತಿ ಬರುವುದಾಗಿಯೂ ಜಪಾನಿನ ಪಾಳೆಯಗಾರನಿಗೆ ಪತ್ರ ಬರೆದ. ಜಪಾನೀಯರು ಇದಕ್ಕೆ ಒಪ್ಪಲಿಲ್ಲ. 1280-81ರಲ್ಲಿ ಅವನು ಜಪಾನಿನ ಮೇಲೆ ದಾಳಿಮಾಡಲು ನೌಕಾಪಡೆಯೊಂದನ್ನು ಕಳುಹಿಸಿಕೊಟ್ಟ. ಹೋಜೋಗಳು ವೀರಾವೇಶದಿಂದ ಹೋರಾಡಿ, ನೌಕಾಪಡೆಯನ್ನು ನಾಶಮಾಡಿ, ದೇಶವನ್ನು ದಾಳಿಯಿಂದ ರಕ್ಷಿಸಿದರು. ಈ ಘಟನೆ ನಡೆದ ಸ್ವಲ್ಪ ಕಾಲದಲ್ಲೇ ಹೋಜೋ ಮನೆತನ ಅವನತಿ ಹೊಂದಿತು. ಚಕ್ರವರ್ತಿ ಗೊ-ದೈಗೊ (ಇಮ್ಮಡಿ ದೈಗೊ) ಹೋಜೋಗಳ ವಿರುದ್ಧ ಸಂಚು ನಡೆಸಿ ವಿಫಲನಾಗಿ ಸಿಂಹಾಸನ ಕಳೆದುಕೊಂಡು ಸೆರೆ ಸಿಕ್ಕಿ ದೇಶಭ್ರಷ್ಟನಾದ (1333); ಮತ್ತೆ ಬಂದು ಆಡಳಿತ ನಡಸಿದ; ಮತ್ತೆ ಓಡಿಸಲ್ಪಟ್ಟ. ಆಷಿಕಾಗ ಸರ್ವಾಧಿಕಾರಿ ಮನೆತನ ಪ್ರಬಲವಾಯಿತು. ರಾಜಮನೆತನದ ಮತ್ತೊಂದು ಕುಡಿಯ ವ್ಯಕ್ತಿಯೊಬ್ಬನನ್ನು ಸಿಂಹಾಸನಕ್ಕೆ ತರಲಾಯಿತು.

ಕಾಮಾಕುರಾ ಕಾಲದಲ್ಲಿ ಬೌದ್ಧ ಭಿಕ್ಷುಗಳು ಹಳ್ಳಿಹಳ್ಳಿಗೂ ಹೋಗಿ ಧರ್ಮಪ್ರಸಾರ ಮಾಡಿದರು. ಜೆóನ್ ಬೌದ್ಧಪಂಥವೇ ಮೊದಲಾದವು ಈ ಕಾಲದಲ್ಲಿ ಉಗಮವಾದುವು. ಸ್ತ್ರೀಯರ ಶಿಕ್ಷಣದಲ್ಲಿ ಬಟ್ಟೆ ಹೊಲಿಯುವ, ಮನೆಯನ್ನು ಶುಚಿಯಾಗಿ ಇಟ್ಟುಕೊಳ್ಳುವ ವಿಷಯಗಳು ಸೇರಿದ್ದುವು. ಚೀನದ ಸೂಂಗ್ ಮತ್ತು ಟಾಂಗ್ ಅರಸರ ಕಾಲದ ಕಲೆ ಕಾಮಾಕುರಾ ಕಾಲದ ಕಲೆಯ ಮೇಲೆ ವಿಶಿಷ್ಟ ಪ್ರಭಾವ ಉಂಟುಮಾಡಿತು. ಸು. 1252ರಲ್ಲಿ ಕಾಮಾಕುರಾ ಪಟ್ಟಣದಲ್ಲಿ 35 ಎತ್ತರದ ಹಿತ್ತಾಳೆಯ ಬುದ್ಧವಿಗ್ರಹವನ್ನು ಎರಕ ಹೊಯ್ಯಲಾಯಿತು. ಈ ಮೂರ್ತಿ ಬಹು ಸುಂದರವಾಗಿದ್ದು, ಜಪಾನೀಯರ ಕಲೆಗೆ ಒಂದು ಉತ್ತಮ ಸಾಕ್ಷಿಯಾಗಿ ಇಂದಿಗೂ ಕಾಮಾಕುರಾದಲ್ಲಿ ನಿಂತಿದೆ.

ಕಾಮಾಕುರಾ ಕಾಲದಲ್ಲಿ ಚಿಕ್ಕಪುಟ್ಟ ಕೈಗಾರಿಕೆಗಳಲ್ಲಿ ದೇಶ ಪ್ರಸಿದ್ಧಿ ಪಡೆಯಿತು. ಬಟ್ಟೆ ನೇಯುವುದು, ಕುಂಭ ಕಲೆ, ಮರದ ಮತ್ತು ಕಾಗದ ತಯಾರಿಕೆ ಸುಧಾರಿಸಲ್ಪಟ್ಟುವು. ದೇಶದಲ್ಲಿ ರಸ್ತೆಗಳು ನಿರ್ಮಾಣವಾದುವು. ವ್ಯಾಪಾರ ವೃದ್ಧಿಯಾಯಿತು.

ಕಾಮಾಕುರಾ ಕಾಲ ಪ್ರಧಾನವಾಗಿ ವೀರಯುಗ. ಇದನ್ನೇ ಈ ಕಾಲದ ಸಾಹಿತ್ಯದಲ್ಲೂ ಹೆಚ್ಚಾಗಿ ನೋಡಬಹುದು. ಹೀಯಾನ್ ಕಾಲದ ಸಾಹಿತ್ಯದಲ್ಲಿ ಶೃಂಗಾರ, ಪ್ರಕೃತಿ ವರ್ಣನೆಗಳಿಗೆ ಪ್ರಾಧಾನ್ಯವಿದ್ದರೆ, ಈ ಕಾಲದ ಸಾಹಿತ್ಯದಲ್ಲಿ ರಣಕಾಳಗಗಳ ವರ್ಣನೆಗೆ ಹೆಚ್ಚಿನ ಸ್ಥಾನ ಕೊಟ್ಟಂತೆ ಕಾಣುತ್ತದೆ. ಹೀಗೆ ಮನೋಗತಾರಿ (ಟಾಯಿರಾ ವಂಶದ ಕಥೆ) ಎಂಬುದು ಈ ಕಾಲದ ಪ್ರಖ್ಯಾತ ಗ್ರಂಥ.

ಆಷಿಕಾಗ ಕಾಲ (1336-1603)[ಬದಲಾಯಿಸಿ]

ಹದಿನಾಲ್ಕನೆಯ ಶತಮಾನದ ಮೊದಲ ಭಾಗದಲ್ಲಿ ಟಾಕಾವುಜಿ ಆಷಿಕಾಗನೆಂಬ ಪಾಳೆಯಗಾರ ಕಾಮಾಕುರಾದ ಪಾಳೆಯಗಾರನನ್ನು ಸೋಲಿಸಿ, ತನ್ನ ಆಡಳಿತವನ್ನು ಹಳೆಯ ರಾಜಧಾನಿಯಾದ ಕೀಯೋಟೋದಲ್ಲಿ ಸ್ಥಾಪಿಸಿದ. ಇವನ ಮನೆತನದ ಆಡಳಿತ ಆ ನಗರದ ಮುರೊಮಾಚಿ ಎಂಬ ಬೀದಿಯಲ್ಲಿದ್ದ ಕಚೇರಿಯಲ್ಲಿ ನಡೆಯುತ್ತಿದ್ದುದರಿಂದ, ಈ ಮನೆತನದ ಆಳ್ವಿಕೆಯ ಕಾಲವನ್ನು ಮುರೊಮಾಚಿ ಕಾಲವೆಂದೂ ಕರೆಯುವುದುಂಟು. ಟಾಕಾವುಜಿ ಆಷಿಕಾಗನ ಕಾಲದಲ್ಲಿ ಚೀನ ಮತ್ತು ಕೊರಿಯಗಳಿಗೆ ಜಪಾನಿನಿಂದ ರಾಯಭಾರಿಗಳನ್ನು ಕಳುಹಿಸಲಾಗಿತ್ತು. ಇದರಿಂದ ಆ ದೇಶಗಳೊಡನೆ ಜಪಾನಿನ ವ್ಯಾಪಾರ ಸಂಬಂಧ ಉತ್ತಮಗೊಂಡಿತು. ಇದರಿಂದ ಆ ದೇಶಗಳೊಡನೆ ಜಪಾನಿನ ವ್ಯಾಪಾರ ಸಂಬಂಧ ಉತ್ತಮಗೊಂಡಿತು. ಈ ಕಾಲದಲ್ಲಿ ಸಾಮುರೈ ವ್ಯವಸ್ಥೆ ವೃದ್ಧಿಗೊಂಡಿತು. ಆಷಿಕಾಗನ ಉತ್ತರಾಧಿಕಾರಿಗಳು ಕಲೆಗಳ ಬೆಳವಣಿಗೆಯಲ್ಲಿ ಆಸಕ್ತರಾಗಿದ್ದಾಗ ಅಧಿಕಾರಕ್ಕಾಗಿ ಜಪಾನಿನ ಪ್ರಬಲ ಪಾಳೆಯಗಾರ ಮನೆತನಗಳಲ್ಲಿ ಕಲಹಗಳು ಜರುಗುತ್ತಿದ್ದವು. ಒಂದು ಶತಮಾನದಷ್ಟು ಕಾಲ ದೇಶದಲ್ಲಿ ಅನಾಯಕತ್ವ ಉಂಟಾಯಿತು. ದೇಶದ ಏಕತೆಯನ್ನು ಸಾಧಿಸಲು ಟಾಯಿರಾ ಮನೆತನದ ಒಡಾ ನೊಬುನಾಗಾ ಎಂಬವನು ಪ್ರಯತ್ನಿಸಿದ. ಇತರ ಪಾಳೆಯಗಾರರನ್ನು ಅಡಗಿಸಿ, ಬೌದ್ಧರ ಪ್ರಭಾವವನ್ನು ತಗ್ಗಿಸಿದ. ಆದರೆ ಅತೃಪ್ತ ಸೇನಾಧಿಕಾರಿಯೊಬ್ಬನಿಂದ ಕೊಲೆಮಾಡಲ್ಪಟ್ಟ. ಅವನ ಸೇನಾನಿಯಾಗಿದ್ದ ಹಿದಯೋಷಿ ಎಂಬವನು ಟೋಕುಗಾವಾ ಆಯಯಾಸು ಎಂಬ ಮತ್ತೊಬ್ಬ ಸಾಮುರೈ ಸಹಾಯದಿಂದ 1590ರಲ್ಲಿ ದೇಶವನ್ನೆಲ್ಲ ಗೆದ್ದು ತನ್ನ ಹತೋಟಿಗೆ ತಂದುಕೊಂಡ. ಹಿದಯೋಷಿಯ ಮರಣಾನಂತರ ಟೋಕುಗಾವಾ ಆಯಯಾಸು ಅನೇಕ ಪಾಳೆಯಗಾರರನ್ನು ಸೋಲಿಸಿ ಇಡೀ ದೇಶದ ಸರ್ವಾಧಿಕಾರಿ (ಷೋಗುನ್) ಆದ. ಹಳೆಯ ರಾಜಧಾನಿಯಾದ ಕೀಯೋಟೋಗೆ 350 ಮೈ.ಗಳ ದೂರದಲ್ಲಿ ಯೇದೋ ಎಂಬ ಹೊಸ ಪಟ್ಟಣ ಕಟ್ಟಿ, 1603ರಿಂದ ಅಲ್ಲಿ ರಾಜ್ಯ ಆಳಲಾರಂಭಿಸಿದ. ಅವನ ಆಳ್ವಿಕೆಯಿಂದ ಟೋಕುಗಾವಾ ಕಾಲ ಪ್ರಾರಂಭವಾಯಿತು.

ಆಷಿಕಾಗ ಕಾಲದಲ್ಲಿ ಜಪಾನು ಪಾಶ್ಚಾತ್ಯ ದೇಶಗಳೊಡನೆ ಸಂಪರ್ಕ ಪಡೆಯಿತು. ಪೋರ್ಚುಗೀಸರು 1542ರಲ್ಲಿ ವ್ಯಾಪಾರದ ಸಲುವಾಗಿ ಜಪಾನಿಗೆ ಬಂದರು. ಅವರ ಅನಂತರ ಸ್ಪ್ಯಾನಿಷರು ಮತ್ತು ಡಚ್ಚರು ಬಂದರು. ಐರೋಪ್ಯರೊಡನೆ ಕ್ರೈಸ್ತ ಮತ ಜಪಾನಿನೊಳಗೆ ಕಾಲಿಟ್ಟಿತು. 1549ರಲ್ಲಿ ಕ್ರೈಸ್ತ ಪಾದ್ರಿ ಫ್ರಾನ್ಸಿಸ್ ಜೇóವಿಯರ್ ಜಪಾನಿಗೆ ಬಂದು ಆ ಧರ್ಮದ ಪ್ರಚಾರಕಾರ್ಯದಲ್ಲಿ ಉದ್ಯುಕ್ತನಾದ. ಈತ ಜಪಾನಿಗೆ ಬರುವ ಮುನ್ನ ಗೋವದಲ್ಲಿ ಭಾರತೀಯರನ್ನು ಕ್ರೈಸ್ತಧರ್ಮಕ್ಕೆ ಪರಿವರ್ತಿಸಿದ್ದ. ಕೇವಲ ಮೂವತ್ತು ವರ್ಷಗಳ ಪ್ರಚಾರದಿಂದ ದಕ್ಷಿಣ ಜಪಾನಿನಲ್ಲಿ 15 ಲಕ್ಷ ಜನ ಕ್ರೈಸ್ತಧರ್ಮಾವಲಂಬಿಗಳಾದರು. ನೂರಾರು ಚರ್ಚುಗಳು ನಿರ್ಮಾಣವಾದುವು.

ಟೋಕುಗಾವಾ ಕಾಲ (1603-1868)[ಬದಲಾಯಿಸಿ]

ಟೋಕುಗಾವಾ ಆಡಳಿತ ಮನೆತನಕ್ಕೆ ಆಯಯಾಸು ಆದಿಪುರಷ. ಈತನ ರಾಜಧಾನಿ ಯೇದೋ. ಜಪಾನಿನಲ್ಲಿ ಸುಭದ್ರವಾದ ಆಡಳಿತಕ್ಕೆ ತಕ್ಕ ಬುನಾದಿಯನ್ನು ಹಾಕಿದ ಕೀರ್ತಿ ಇವನದು. ದೇಶದ ಸಾಗುವಳಿ ಭೂಮಿ ಇವನ ನಲವತ್ತು ಸ್ನೇಹಿತರ ಕೈಯಲ್ಲಿತ್ತು. ಆಯಯಾಸುವಿನ ಸರ್ವಾಧಿಕಾರದಲ್ಲಿ ವಿಶಿಷ್ಟ ಊಳಿಗಮಾನ್ಯ ಪಾಳೆಯಗಾರ ಆಡಳಿತ ಸ್ಥಾಪಿತವಾಯಿತು. ಇವನ ವಂಶದವರು ಸುಮಾರು 250 ವರ್ಷಗಳ ಕಾಲ ಆಡಳಿತ ನಡೆಸಿದರು. ಟೋಕುಗಾವಾ ವಂಶದವರು ಜಪಾನಿನ ಚಕ್ರವರ್ತಿಗಳನ್ನು ಗಣನೆಗೆ ತಾರದೆ, ತಮ್ಮಲ್ಲೆ ಅಧಿಕಾರವನ್ನೆಲ್ಲ ಕೇಂದ್ರೀಕರಿಸಿಕೊಂಡಿದ್ದರು. ಈ ಕಾಲದಲ್ಲಿ ಚಕ್ರವರ್ತಿಗಳು ಹಳೆಯ ರಾಜಧಾನಿ ಕೀಯೋಟೋದಲ್ಲಿ ನಿರ್ಬಂಧದ ಜೀವನ ನಡೆಸುತ್ತಿದ್ದರು. ಚಕ್ರವರ್ತಿಗಳು ದೇವಾಂಶಸಂಭೂತರೆಂದು ಪರಿಗಣಿಸಲ್ಪಟ್ಟಿದ್ದರೂ ಅವರಿಗೆ ಯಾವ ವಿಧವಾದ ಅಧಿಕಾರವೂ ಇರಲಿಲ್ಲ. ಟೋಕುಗಾವಾ ಸರ್ವಾಧಿಕಾರಿಗಳ ಆದಾಯ ಚಕ್ರವರ್ತಿಗಳ ಆದಾಯಕ್ಕಿಂತ 80ರಷ್ಟು ಹೆಚ್ಚಾಗಿತ್ತು. ಆಯಯಾಸು ತನ್ನ ವಂಶದವರ ಪ್ರಭುತ್ವದ ಭದ್ರತೆಗಾಗಿ ಹದಿಮೂರು ಸೂತ್ರಗಳನ್ನು ರಚಿಸಿದ. ಅವು ಕ್ಷತ್ರಿಯ ಶಾಸನ ಎಂಬುದಾಗಿ ಪ್ರಸಿದ್ಧವಾದುವು.

ಜನರನ್ನು ವ್ಯವಸ್ಥೆಯಲ್ಲಿಡುವುದಕ್ಕಾಗಿ ಸರ್ವಾಧಿಕಾರಿ ಆಯಯಾಸು ಅವರನ್ನು ಷಿ, ನೋ, ಕೊ, ಷೋ ಎಂಬ ನಾಲ್ಕು ಪಂಗಡಗಳಾಗಿ ವರ್ಗೀಕರಿಸಿದ. ಕ್ಷತ್ರಿಯ, ವ್ಯವಸಾಯಗಾರ, ಕೈಗಾರಿಕೋದ್ಯಮಿ ಮತ್ತು ವ್ಯಾಪಾರಿ ಎಂಬವೇ ಅವು. ರಾಜ್ಯವನ್ನು ರಕ್ಷಿಸುವ ಜನರಿಗೆ ಅವನ ದೃಷ್ಟಿಯಲ್ಲಿ ಪ್ರಥಮಸ್ಥಾನ. ವ್ಯವಸಾಯದ ಮೂಲಕ ದೇಶಕ್ಕೆ ಸಹಾಯಮಾಡುವ ರೈತರಿಗೆ ಎರಡನೆಯ ಸ್ಥಾನ. ಆಯುಧ ಮುಂತಾದ ಯುದ್ಧಸಲಕರಣೆಗಳನ್ನು ಒದಗಿಸಿ ಕೊಡುವ ಕೈಗಾರಿಕಾ ಕುಶಲಕರ್ಮಿಗಳಿಗೆ ಮೂರನೆಯ ಸ್ಥಾನ. ದೇಶಕ್ಕೆ ಈ ಬಗೆಯ ಯಾವ ಪ್ರಯೋಜನವೂ ಇಲ್ಲದೇ, ಕೇವಲ ತಮ್ಮ ವ್ಯಾಪಾರದಲ್ಲಿ ನಿರತರಾಗಿರುವ ವ್ಯಾಪಾರಸ್ಥರದು ಸಮಾಜದಲ್ಲಿ ಕಡೆಯ ಸ್ಥಾನ.

ಟೋಕುಗಾವಾ ಸರ್ವಾಧಿಕಾರಿಗಳು ಐರೋಪ್ಯರ ವಿರುದ್ಧ ಕಠಿಣತರ ಕ್ರಮ ಕೈಗೊಂಡರು. ವ್ಯಾಪಾರಮಾಡಲು ಬಂದ ಪಾಶ್ಚಾತ್ಯರು ತಮ್ಮ ದೇಶವನ್ನೇ ವಶಮಾಡಿಕೊಳ್ಳುವರೆಂಬ ಭಯದಿಂದ ಸರ್ವಾಧಿಕಾರಿಗಳು 1624ರಲ್ಲಿ ಸ್ಪ್ಯಾನಿಷರನ್ನು ಮತ್ತು 1638ರಲ್ಲಿ ಪೋರ್ಚುಗೀಸರನ್ನು ಜಪಾನಿನಿಂದ ಓಡಿಸಿದರು. ಕ್ರೈಸ್ತ. ಧರ್ಮಾವಲಂಬಿಗಳನ್ನು ಸಾಮೂಹಿಕವಾಗಿ ಕೊಲ್ಲಲಾಯಿತು. ಡಚ್ಚರು ಮಾತ್ರ ಈ ಕಠಿಣತರವಾದ ನಿಷೇಧಾಜ್ಞೆಗಳ ನಡುವೆಯೂ ಸ್ವಲ್ಪ ವ್ಯಾಪಾರ ನಡೆಸುತ್ತಿದ್ದರು. ಜಪಾನೀಯರು ದೇಶ ಬಿಟ್ಟು ಹೋಗದಂತೆ ಆಜ್ಞೆ ಹೊರಡಿಸಲಾಯಿತು. ಒಟ್ಟಿನಲ್ಲಿ 1954ರ ವರೆಗೆ ಜಪಾನ್ ಪರದೇಶಗಳ ಸಂಪರ್ಕದಿಂದ ಹೊರಗಿದ್ದು ತನ್ನದೇ ಆದ ರೀತಿಯಲ್ಲಿ ಮುಂದುವರಿಯುತ್ತಿತ್ತು.

ಟೋಕುಗಾವಾ ಮನೆತನದ ಆಡಳಿತದ ಕಾಲದ ಕೊನೆಯಲ್ಲಿ ರಾಜ್ಯದ ಬಿಗಿ ತಪ್ಪಿತು. ಎಷ್ಟೋ ಪಾಳೆಯಗಾರರು ಹೆಚ್ಚುಹೆಚ್ಚಿನ ಅಧಿಕಾರ ಪಡೆಯಲು ಹವಣಿಸತೊಡಗಿದರು. ಆರ್ಥಿಕ ದುಃಸ್ಥಿತಿಯಿಂದಾಗಿ ಕ್ಷತ್ರಿಯರು ಹಣದಾಸೆಗಾಗಿ ತಮ್ಮ ಮಾನವನ್ನು ಮಾರಿಕೊಳ್ಳಲು ಸಿದ್ಧರಾದರು. ಎರಡು ಕತ್ತಿಗಳನ್ನು ಸೊಂಟದಲ್ಲಿ ಧರಿಸುವುದು ಮೇಲಾದ ಮಾನವೆಂದೆನಿಸುತ್ತಿದ್ದುದರಿಂದ ರೈತರೂ ವ್ಯಾಪಾರಸ್ಥರೂ ಕ್ಷತ್ರಿಯರಿಗೆ ಬೇಕಾದಷ್ಟು ಹಣ ಕೊಟ್ಟು ಅವನ್ನು ಕೊಂಡು ಧರಿಸತೊಡಗಿದರು. ಕೆಲವು ಕ್ಷತ್ರಿಯರು ಧನದ ದಾಹದಿಂದ ವ್ಯಾಪಾರಸ್ಥರ ಕನ್ಯೆಯರನ್ನು ಮದುವೆಯಾಗತೊಡಗಿದರು. ಕ್ಷತ್ರಿಯರನ್ನು ಅಳಿಯಂದಿರನ್ನಾಗಿ ಮಾಡಿಕೊಳ್ಳುವುದರಿಂದ ಸಮಾಜದಲ್ಲಿ ತಾವು ಮೇಲಿನ ಮೆಟ್ಟಿಲನ್ನೇರುವೆವೆಂಬ ಭಾವನೆ ವ್ಯಾಪಾರಸ್ಥರಲ್ಲಿ ಬೆಳೆಯಲಾರಂಭಿಸಿತು. ಆದ್ದರಿಂದಲೇ ಬೇಡಿದಷ್ಟು ವರದಕ್ಷಿಣೆ ಕೊಡಲು ಅವರು ಸಿದ್ಧರಾದರು. ಪಾಳೆಯಗಾರರು ಕೂಡ ಸರ್ವಾಧಿಕಾರಿಯ ಕಿರುಕುಳಕ್ಕೆ ಸಿಕ್ಕಿಬಿದ್ದು, ತಕ್ಕಷ್ಟು ಹಣವನ್ನು ಗಳಿಸಿಕೊಳ್ಳದೆ ತಮ್ಮ ದರ್ಪವನ್ನುಳಿಸಿಕೊಳ್ಳುವುದು ಅಸಾಧ್ಯವೆಂದು ವ್ಯಾಪಾರಸ್ಥರಿಂದ ಸಾಲ ಪಡೆಯತೊಡಗಿದರು. ಸಾಲದ ಹಂಗಿನಿಂದಾಗಿ ಅವರು ವ್ಯಾಪಾರಸ್ಥರಿಗೆ ಹೆಚ್ಚಿನ ಮಾನ ಕೊಡಬೇಕಾಯಿತು. ಹೀಗಾಗಿ 1940ರ ವೇಳೆಗೆ ಕೆಲವು ವ್ಯಾಪಾರಸ್ಥರು ಹಣದ ಬಲದಿಂದ ಪಾಳೆಯಗಾರರ ದರ್ಪಕ್ಕೆ ಕುಂದು ತಂದರು ಮತ್ತು ಹಣದ ಆಸೆಗಾಗಿ ಎಷ್ಟೋ ಕ್ಷತ್ರಿಯರು ಸಾಹುಕಾರರ ಊಳಿಗದಲ್ಲಿ ಸೇರಿಕೊಂಡು ಅವರ ರಾಜಕೀಯ ಪ್ರಭಾವ ಹೆಚ್ಚಿಸಿದರು. ಈ ಬಗೆಯ ಬದಲಾವಣೆಗಳು ಸಮಾಜದಲ್ಲಿ ಭರದಿಂದ ಸಾಗಿಬರುತ್ತಿದ್ದರೂ ಅವನ್ನು ತಡೆಯದಷ್ಟು ಮಟ್ಟಿಗೆ ಸರ್ವಾಧಿಕಾರಿ ಬಲಹೀನನಾಗಿದ್ದ. ಈ ರೀತಿ ಸರ್ವಾಧಿಕಾರಿಯ ಹಿರಿಯರು ವಿರಚಿಸಿದ ಸಮಾಜದ ಕಟ್ಟು ಆರ್ಥಿಕ ದುಃಸ್ಥಿತಿಯಿಂದ ಕಳಚಿ ಸಡಿಲವಾಯಿತು.

ವ್ಯವಸಾಯಗಾರರು ಶಕ್ತಿಮೀರಿ ಕಂದಾಯ ಸಲ್ಲಿಸುತ್ತಿದ್ದರು. ಆದರೆ ಸರ್ವಾಧಿಕಾರಿಯ ದುಂದುಗಾರಿಕೆಯ ವೆಚ್ಚವನ್ನು ಇದೂ ಪೂರೈಸದಾಯಿತು. ಮಿತಿಮೀರಿದ ಕಂದಾಯ ತೆರಲಾರದೆ ಎಷ್ಟೋ ರೈತರು ಸರ್ಕಾರದ ವಿರುದ್ಧ ಬಂಡು ಹೂಡಿದರು.

ಇಂಥ ಅಶಾಂತ ವಾತಾವರಣದಲ್ಲಿ ಜಪಾನ್ ಮುಳುಗಿದ್ದಾಗ, ಪಾಶ್ಚಾತ್ಯರು ಜಪಾನಿನೊಡನೆ ಸಂಪರ್ಕ ಬೆಳೆಸಲು ಬಂದರು. ಇವರ ಆಗಮನದಿಂದ ದೇಶದಲ್ಲಿ ಒಂದು ರಾಜಕೀಯ ಆಂದೋಳನ ಸಂಭವಿಸಿತು. ಜಪಾನನ್ನು ಮೊದಲು ಪ್ರವೇಶಿಸಿದ ದೇಶ ಅಮೆರಿಕ. ಚೀನದೊಡನೆ ವ್ಯಾಪಾರ ಮಾಡುತ್ತಿದ್ದ ಅಮೆರಿಕಕ್ಕೆ ಜಪಾನಿನಲ್ಲಿ ತಂಗಲು ಹಾಗೂ ವ್ಯಾಪಾರ ಮಾಡಲು ಯೋಗ್ಯ ಬಂದರಿನ ಆವಶ್ಯಕತೆಯಿತ್ತು. 1853ರಲ್ಲಿ ಅಮೆರಿಕದ ನೌಕಾಧಿಕಾರಿ ಕಮೋಡೋ ಪೆರಿ ಎಂಬಾತ ಅಧ್ಯಕ್ಷ ಫಿಲ್ಮೋರನಿಂದ ಪತ್ರವೊಂದನ್ನು ತಂದು, ಟೋಕಿಯೋ ಬಳಿ ತನ್ನ ಬಲಪ್ರದರ್ಶನ ನಡೆಸಿ, ವ್ಯಾಪಾರಕ್ಕೆಂದು ದೇಶದ ಬಾಗಿಲುಗಳನ್ನು ತÉಗೆಯಬೇಕೆಂದು ಟೋಕುಗಾವಾ ಸರ್ವಾಧಿಕಾರಿಗೆ ಬೆದರಿಕೆ ಹಾಕಿದ. ಈ ಬಗ್ಗೆ ಯೋಚನೆ ಮಾಡಲು ಜಪಾನ್ ಸರ್ಕಾರಕ್ಕೆ ಸ್ವಲ್ಪ ಕಾಲಾವಕಾಶ ಕೊಟ್ಟು, ಮರುವರ್ಷ (1954) ಪೆರಿ ಹೆಚ್ಚಿನ ಬಲದೊಡನೆ ಜಪಾನಿಗೆ ಬಂದ. ಸರ್ವಾಧಿಕಾರಿ ಅವನೊಡನೆ ಒಪ್ಪಂದ ಮಾಡಿಕೊಂಡು, ಎರಡು ಬಂದರುಗಳನ್ನು ವ್ಯಾಪಾರಕ್ಕಾಗಿ ತೆರೆದಿಟ್ಟ. ಆ ದೇಶದ ಪ್ರತಿನಿಧಿ ಜಪಾನಿನಲ್ಲಿರಲು ಅನುಮತಿ ಕೊಟ್ಟ. ಅಮೆರಿಕದಂತೆ ಇಂಗ್ಲೆಂಡ್, ಫ್ರಾನ್ಸ್, ರಷ್ಯ ಮತ್ತು ಹಾಲೆಂಡ್ ದೇಶಗಳೂ ವ್ಯಾಪಾರ ಸೌಲಭ್ಯಗಳನ್ನು ಪಡೆದುಕೊಂಡುವು.

ಪರಕೀಯರೊಡನೆ ಮಾಡಿಕೊಂಡ ಈ ಒಪ್ಪಂದಿಂದ ಸರ್ವಾಧಿಕಾರಿ ತನ್ನ ಸ್ಥಾನಕ್ಕೆ ತಾನೇ ಚ್ಯುತಿ ತಂದುಕೊಂಡಂತಾಯಿತು. ಹೆಚ್ಚಿನ ಪಾಳೆಯಗಾರರು ಮತ್ತು ಅವರ ಅನುಯಾಯಿಗಳಾದ ಸಾಮುರೈಗಳು ವಿದೇಶೀಯರಿಗೆ ಜಪಾನಿನಲ್ಲಿ ಸೌಲಭ್ಯಗಳನ್ನು ಕೊಟ್ಟ ಬಗ್ಗೆ ವಿರೋಧ ವ್ಯಕ್ತಪಡಿಸಿದರು. ಇದರ ಜೊತೆಗೆ ಚಕ್ರವರ್ತಿ ತನ್ನ ಅಸಮಾಧಾನ ತೋರಿಸಿದ. ಹೀಗಾಗಿ, ಸರ್ವಾಧಿಕಾರಿ ಉಭಯ ಸಂಕಟಕ್ಕೆ ಸಿಕ್ಕಿಬಿದ್ದ. ತಮ್ಮ ದೇಶದ ಸ್ವಾತಂತ್ರ್ಯಕ್ಕೆ ಧಕ್ಕೆತರುವ ಸರ್ವಾಧಿಕಾರಿಯ ಈ ಕ್ರಮದಿಂದ ಅಸಮಾಧಾನಗೊಂಡ ಕೆಲವು ಪಾಳೆಯಗಾರರು ಚಕ್ರವರ್ತಿಯತ್ತ ತಿರುಗಿ, ಅವನು ಸರ್ವಾಧಿಕಾರಿಯನ್ನು ವಿರೋಧಿಸುವಂತೆ ಮಾಡಿದರು. 1957-1863ರಲ್ಲಿ ಪರಕೀಯರ ಬಗ್ಗೆ ಸಾರ್ವಜನಿಕರ ದ್ವೇಷ ಹೆಚ್ಚಿತು. ಅನೇಕ ಕಡೆ ಪರಕೀಯರ ಮೇಲೆ ಹಲ್ಲೆಗಳು ನಡೆದುವು. ಮತ್ತೆ ಕೆಲವರು ಇಂಥ ಕೃತ್ಯಗಳು ಉಪಯೋಗವಿಲ್ಲವೆಂದೂ ವಿದೇಶೀಯರು ಪ್ರಬಲರಾಗಿರುವುದರಿಂದ ಅವರನ್ನು ಜಪಾನಿನಿಂದ ಓಡಿಸುವ ಬದಲು ಬೇರೆ ರೀತಿಯ ನೀತಿ ಅನುಸರಿಸುವುದು ಉತ್ತಮವೆಂದೂ ಚಕ್ರವರ್ತಿಗೆ ಸಲಹೆ ಮಾಡಿದರು. ಒಟ್ಟಿನಲ್ಲಿ ಈ ವಿಷಯದ ಬಗ್ಗೆ ದೇಶದಲ್ಲಿ ಎರಡು ಪಕ್ಷಗಳು ಏರ್ಪಟ್ಟುವು. ಅಶಕ್ತನಾದ ಷೋಗುನ್ ತನ್ನ ಅಧಿಕಾರವನ್ನೆಲ್ಲ ಚಕ್ರವರ್ತಿಗೇ ಬಿಟ್ಟುಕೊಟ್ಟ. 1868ರಲ್ಲಿ ಚಕ್ರವರ್ತಿಯ ಪುನರಾಗಮನವಾಯಿತು. ಅವನನ್ನು ಕೀಯೋಟೋ ನಗರದಿಂದ ಟೋಕಿಯೋಗೆ ಬರಮಾಡಿಕೊಂಡು ಅಧಿಕಾರದಲ್ಲಿ ಕುಳ್ಳಿರಿಸಲಾಯಿತು. ಹೀಗೆ 250 ವರ್ಷಗಳ ಕಾಲ ಆಡಳಿತ ನಡೆಸಿದ ಟೋಕುಗಾವಾ ಮನೆತನದ ಕಾಲ ಕೊನೆಗೊಂಡಿತು.

ಆಧುನಿಕ ಕಾಲ (1868 ರಿಂದ ಈಚೆಗೆ)[ಬದಲಾಯಿಸಿ]

ಜಪಾನಿನ ಆಧುನಿಕ ಇತಿಹಾಸ ಮೇಜಿ ಕಾಲದಿಂದ ಪ್ರಾರಂಭವಾಗುತ್ತದೆ. ಮೇಜಿ ಎಂದರೆ ಪ್ರಗತಿಶೀಲ ಪ್ರಭುತ್ವ. 1868ರಲ್ಲಿ ಮುಟ್ಸುಹಿಟೊ ಎಂಬ ಹೆಸರಿನ 15 ವರ್ಷದ ಬಾಲಕ ಚಕ್ರವರ್ತಿಯಾಗಿ ಸಿಂಹಾಸನವನ್ನೇರಿದ. ಇವನ ರಾಜ್ಯಭಾರದ ಕಾಲವನ್ನು (1868-1912) ಮೇಜಿ ಆಳ್ವಿಕೆಯ ಕಾಲವೆಂದು ಕರೆಯಲಾಗಿದೆ. ಇದು ಬಹಳ ಮಹತ್ತ್ವಪೂರ್ಣವಾದ್ದು. ಈ ಕಾಲದಲ್ಲಿ ಅನೇಕ ಮೂಲಭೂತ ಬದಲಾವಣೆಗಳು ಸಂಭವಿಸಿದವು. ಪಾಶ್ಚಾತ್ಯ ಸಂಸ್ಕøತಿ ತನ್ನ ಪ್ರಭಾವವನ್ನು ಎಲ್ಲ ಕ್ಷೇತ್ರಗಳ ಮೇಲೂ ಬೀರಿತು. ಪ್ರಗತಿಪರ ಮಾರ್ಗದಲ್ಲಿ ಜಪಾನು ಸಾಗಿದ ಕಾಲವಿದು.

ಮೇಜಿ ಸುಧಾರಣೆಗಳು[ಬದಲಾಯಿಸಿ]

ಊಳಿಗಮಾನ್ಯ ಪದ್ಧತಿಯನ್ನು ಕೊನೆಗೊಳಿಸಿ, ಹೊಸ ರೀತಿಯಲ್ಲಿ ಕೇಂದ್ರಸರ್ಕಾರವನ್ನು ರಚಿಸಲಾಯಿತು. ಪಾಳೆಯಗಾರರು ತಮ್ಮ ತಮ್ಮ ಹಕ್ಕುಬಾಧ್ಯತೆಗಳು, ಅಂತಸ್ತು, ಐಶ್ಚರ್ಯಗಳನ್ನು ಚಕ್ರವರ್ತಿಗೆ ಒಪ್ಪಿಸಿದರು. ದೇಶದ ಎಲ್ಲ ಭೂಮಿ ಮತ್ತು ಜನಗಳಿಗೆ ಚಕ್ರವರ್ತಿಯೆ ಒಡೆಯನೆಂದು ಘೋಷಿಸಲಾಯಿತು. 1871ರಲ್ಲಿ ಅಧಿಕೃತವಾಗಿ ಊಳಿಗಮಾನ್ಯ ಪದ್ಧತಿ ಕೊನೆಗೊಂಡಿತು. ಪಾಳೆಯಗಾರರಿಗೂ ಅವರ ಅನುಯಾಯಿಗಳಾದ ಸಾಮುರೈಗಳಿಗೂ, ಭೂಮಿಯಿಂದ ಬರುವ ಬತ್ತವೇ ಮುಖ್ಯವಾದ ಆದಾಯವಾಗಿತ್ತು. ಆ ಆದಾಯವನ್ನು ಈಗ ಸರ್ಕಾರ ತನ್ನ ವಶಮಾಡಿಕೊಂಡು, ಅವರು ಗಳಿಸುತ್ತಿದ್ದ ಉತ್ಪತ್ತಿಗೆ ಅನುಗುಣವಾಗಿ ಅವರಿಗೆ ಸಾಲಪತ್ರಗಳನ್ನು ಪರಿಹಾರವಾಗಿ ಕೊಟ್ಟಿತು. ಯೂರೋಪಿನ ವಿಜ್ಞಾನ, ತಂತ್ರಜ್ಞಾನ ಮತ್ತು ಕೈಗಾರಿಕಾ ಪದ್ಧತಿಯನ್ನು ಅಭ್ಯಾಸಮಾಡಲು ಸರ್ಕಾರ ಅನೇಕ ನಿಯೋಗಗಳನ್ನು ಕಳುಹಿಸಿಕೊಟ್ಟಿತು. ಸೇನೆಯಲ್ಲೂ ನೌಕಾಬಲದಲ್ಲೂ ಸೇವೆ ಕಡ್ಡಾಯವೆಂದು ಘೋಷಿಸಲಾಯಿತು. ಭೂಮಿಯ ಬೆಲೆಗೆ ಅನುಗುಣವಾಗಿ ಕಂದಾಯ ನಿಷ್ಕರ್ಷೆ, ರಾಷ್ಟ್ರಕ್ಕೆ ಒಂದೇ ನಾಣ್ಯಪದ್ಧತಿ, ರಸ್ತೆ, ರೈಲು, ಅಂಚೆ, ತಂತಿ, ಸಾರ್ವಜನಿಕ ಸೌಕರ್ಯಗಳ ಏರ್ಪಾಟು, ಎಲ್ಲರಿಗೂ ಕಡ್ಡಾಯ ಶಿಕ್ಷಣ ಮೊದಲಾದವು ಜಾರಿಗೆ ಬಂದುವು. ದೇಶದ ಸೈನ್ಯಬಲ ಹಾಗೂ ನೌಕಾಬಲಗಳನ್ನು ಹೆಚ್ಚಿಸಲು ಅನುಕೂಲವಾಗುವ ಭಾರಿ ಕೈಗಾರಿಕೆಗಳನ್ನು ಸ್ಥಾಪಿಸಲಾಯಿತು. ಇಂಥ ಕೈಗಾರಿಕೆಗಳಲ್ಲಿ ಕೆಲವನ್ನು ಸರ್ಕಾರವೂ ಸಹಾಯದ ಮೇಲೆ ಖಾಸಗಿ ಸಂಸ್ಥೆಗಳೂ ಸ್ಥಾಪಿಸಿದವು. ಕೇಂದ್ರ ಸರ್ಕಾರದ ಉನ್ನತ ಹುದ್ದೆಗಳು ಕೆಲವರ ಕೈಯಲ್ಲಿದ್ದುವು. ಉದಾಹರಣೆಗೆ ದಂಡನಾಯಕ ರಾಜಕುಮಾರ ಆರಿತೊಮೊ ಯಾಮಾಗಾಟಾ ಮೊದಲು ಯುದ್ಧಮಂತ್ರಿಯಾಗಿದ್ದು ಸೇನೆಯನ್ನು ವ್ಯವಸ್ಥೆಗೊಳಿಸಿ, ಅನಂತರ ಆಂತರಿಕ ವ್ಯವಹಾರ ಸಚಿವ ಹಾಗೂ ಪ್ರಧಾನ ಮಂತ್ರಿ (1889-1891; 1898) ಆದ. ಹಾಗೆಯೇ ರಾಜಕುಮಾರ ಹಿರೊಬುಮಿ ಇಟೊ ಮೊದಲು ಹಣಕಾಸು ಮತ್ತು ಮರಾಮತ್ ಶಾಖೆಗಳಲ್ಲಿದ್ದು, ಅನಂತರ ಸಂವಿಧಾನದ ರಚನೆಯಲ್ಲಿ ಭಾಗವಹಿಸಿ, 1886-1901ರ ಅವಧಿಯಲ್ಲಿ ನಾಲ್ಕು ಬಾರಿ ಪ್ರಧಾನಮಂತ್ರಿಯಾಗಿದ್ದ.

ಮೇಜಿ ಕಾಲದಲ್ಲಿ ಹೊಸ ಸಂವಿಧಾನವನ್ನು ಸಿದ್ಧಪಡಿಸಲಾಯಿತು. ಜರ್ಮನಿಯಲ್ಲಿ ಅಸ್ತಿತ್ವದಲ್ಲಿದ್ದ ಸಂವಿಧಾನ ಜಪಾನಿಗೆ ಮಾದರಿಯಾಗಿತ್ತು. 1889ರ ಫೆಬ್ರುವರಿ 11ರಂದು ಈ ಸಂವಿಧಾನವನ್ನು ಜಾರಿಗೆ ತರಲಾಯಿತು. ಈ ಸಂವಿಧಾನ 1947ರ ವರೆಗೂ ಅಸ್ತಿತ್ವದಲ್ಲಿತ್ತು. ಇದರ ಪ್ರಕಾರ, ಚಕ್ರವರ್ತಿಯೇ ನಿಜವಾದ ಸರ್ಕಾರ. ಸೇನಾ ಮುಖಂಡರ ನೀತಿಗೆ ಮಂತ್ರಿಮಂಡಲದಿಂದ ವಿರೋಧ ಬಂದಾಗ ಅವರು ನೇರವಾಗಿ ಚಕ್ರವರ್ತಿಯ ಬಳಿ ಹೋಗಲು ಅವಕಾಶವಿತ್ತು. ಸಂಸತ್ತಿನ ಕೆಳಮನೆಯಲ್ಲಿ ಹೆಚ್ಚಿನ ಜನಬೆಂಬಲ ಪಡೆದ ಪಕ್ಷದಿಂದಲೇ ಪ್ರಧಾನಿಯನ್ನು ಆರಿಸಬೇಕೆಂದು ಕೇಳುವ ಹಕ್ಕು ರಾಜಕೀಯ ಪಕ್ಷಗಳಿಗೆ ಇರಲಿಲ್ಲ. ಏಕೆಂದರೆ ಸಂಸತ್ತಿಗೆ ಈ ಸಂವಿಧಾನದ ಪ್ರಕಾರ ಬಜೆಟ್ಟಿಗೆ ಸಂಬಂಧಿಸಿದ ವಿಷಯಗಳಲ್ಲಿ ಅಧಿಕಾರವಿರಲಿಲ್ಲ. ವ್ಯಕ್ತಿಸ್ವಾತಂತ್ರ್ಯಕ್ಕೆ ಅನೇಕ ಪ್ರತಿಬಂಧಕಗಳಿದ್ದವು. ಹೀಗೆ ಮೇಲುನೋಟಕ್ಕೆ ಸಂಸದೀಯ ಸರ್ಕಾರ ರಚಿತವಾಗಿದ್ದರೂ, ಜಿನಾದ ಅಧಿಕಾರ ಕೆಲವೇ ಮಂದಿ ಪ್ರತಿಷ್ಠಿತರ ಹಾಗೂ ಸೇನಾಮುಖಂಡರ ಕೈಯಲ್ಲಿತ್ತು. ಆರ್ಥಿಕ ಕ್ಷೇತ್ರದಲ್ಲೂ ಕೆಲವೇ ಮಂದಿ ಪ್ರತಿಷ್ಠಿತರು ಪ್ರಭಾವಶಾಲಿಗಳಾಗಿದ್ದರು. ಜಪಾನಿನ ಹೆಚ್ಚು ಕಡಿಮೆ ಎಲ್ಲ ಕೈಗಾರಿಕೆಗಳೂ ಜೈಬಟ್ಸುಗಳೆಂಬ ಶ್ರೀಮಂತ ಕುಟುಂಬಗಳ ಸೊತ್ತುಗಳಾಗಿದ್ದವು.

ವಿಶ್ವದ ಪ್ರಬಲರಾಷ್ಟ್ರವಾಗಿ ಪ್ರಾಬಲ್ಯ : 1890-1900ರ ಅವಧಿಯಲ್ಲಿ ಜಪಾನ್ ಉಗ್ರರೀತಿಯ ಆಕ್ರಮಣಕಾರಿ ವಿದೇಶಾಂಗ ನೀತಿ ಅನುಸರಿಸಿತು. ಅಮೆರಿಕ, ಬ್ರಿಟನ್ ಮೊದಲಾದ ದೇಶಗಳು ಹೇರಿದ್ದ, ಜಪಾನಿನ ಹಿತಾಸಕ್ತಿಗೆ ಧಕ್ಕೆ ತರುವ ಕೌಲುಗಳನ್ನು ಅದು ಕೊನೆಗೊಳಿಸಿ, ಅಂತರರಾಷ್ಟ್ರೀಯ ವ್ಯವಹಾರದಲ್ಲಿ ಪಾಶ್ಚಾತ್ಯ ರಾಷ್ಟ್ರಗಳೊಡನೆ ಸಮಸಮವಾಗಿ ನಿಲ್ಲುವ ಆಸೆ ಜಪಾನಿಗೆ ಉಂಟಾಯಿತು. ಈ ಕೌಲುಗಳ ಪ್ರಕಾರ ಪಾಶ್ಚಾತ್ಯರಿಗೆ ಜಪಾನಿನಲ್ಲಿರುವ ಹಕ್ಕು ದೊರೆತಿದ್ದರೂ ಅವರು ಜಪಾನಿನ ಕಾನೂನುಗಳ ನಿಯಂತ್ರಣಕ್ಕೆ ಒಳಗಾಗಿರಲಿಲ್ಲ. ಜಪಾನ್ ಸರ್ಕಾರ 1880ರಲ್ಲಿ ದಂಡ ಸಂಹಿತೆಯನ್ನೂ (ಕ್ರಿಮಿನಲ್ ಕೋಡ್) 1890ರಲ್ಲಿ ದೀವಾನಿ ಸಂಹಿತೆಯನ್ನೂ (ಸಿವಿಲ್ ಕೋಡ್) ಜಾರಿಗೆ ತಂದಿತು. ವಿದೇಶೀಯರನ್ನು ಜಪಾನಿನ ನ್ಯಾಯಾಲಯಗಳ ವ್ಯಾಪ್ತಿಗೆ ಒಳಪಡಿಸುವ ವ್ಯವಸ್ಥೆ ಏರ್ಪಟ್ಟಿತು.

ಚೀನ ಮತ್ತು ರಷ್ಯಗಳೊಡನೆ ಯುದ್ಧ ನಡೆಸಿ ಗೆದ್ದು ಜಪಾನ್ ಪ್ರಬಲ ರಾಷ್ಟ್ರಗಳ ಪಂಕ್ತಿಗೆ ಸೇರಿಕೊಂಡಿತು. ಜಪಾನ್ ಮತ್ತು ಚೀನಗಳು ಕೊರಿಯ ದೇಶದಲ್ಲಿ ಪ್ರತಿಸ್ಪರ್ಧಿಗಳಾಗಿದ್ದು ಆ ದೇಶದ ಮೇಲೆ ತಂತಮ್ಮ ಹತೋಟಿ ಸ್ಥಾಪಿಸಲು ಯತ್ನಿಸಿದುವು. 1894-1895ರಲ್ಲಿ ನಡೆದ ಚೀನ-ಜಪಾನ್ ಯುದ್ಧಕ್ಕೆ ಕಾರಣವಾದ್ದು ಈ ಸ್ಪರ್ಧೆಯೇ. ಜಪಾನೀಯರು ಈ ಯುದ್ಧದಲ್ಲಿ ಜಯಶೀಲರಾದರು. ಕೊರಿಯದ ಮೇಲಿನ ಹತೋಟಿಯನ್ನು ಜಪಾನಿಗೆ ಚೀನ ಬಿಟ್ಟುಕೊಟ್ಟಿತಲ್ಲದೆ, ಫಾರ್ಮೊಸ ದ್ವೀಪವನ್ನೂ ಜಪಾನಿಗೆ ಒಪ್ಪಿಸಿತು. ದಕ್ಷಿಣ ಮಂಚೂರಿಯದಲ್ಲಿ ಜಪಾನಿಗೆ ಅನೇಕ ಸೌಲಭ್ಯಗಳು ದೊರೆತುವು. ಆದರೆ ಜಪಾನ್ ಈ ಹಕ್ಕುಗಳನ್ನೂ ಸೌಲಭ್ಯಗಳನ್ನೂ ಚೀನಕ್ಕೆ ಮರಳಿ ಒಪ್ಪಿಸುವಂತೆ ಪಾಶ್ಚಾತ್ಯ ರಾಷ್ಟ್ರಗಳು ಒತ್ತಾಯ ತಂದುವು. 1902ರಲ್ಲಿ ಜಪಾನ್ ಇಂಗ್ಲೆಂಡಿನೊಡನೆ ಮೈತ್ರಿಯ ಕೌಲು ಮಾಡಿಕೊಂಡಿತು.

ಮಂಚೂರಿಯ ಮತ್ತು ಕೊರಿಯಗಳಲ್ಲಿ ತನ್ನ ಪ್ರಭಾವ ಮತ್ತು ಹಿತಾಸಕ್ತಿಗಳನ್ನು ಬೆಳೆಸಿಕೊಳ್ಳಲು ಹವಣಿಸುತ್ತಿದ್ದ ರಷ್ಯವನ್ನು 1904ರಲ್ಲಿ ಕೆಣಕುವ ಮಟ್ಟಿಗೆ ಜಪಾನಿನ ಶಕ್ತಿ ಬೆಳೆದಿತ್ತು. 1904-1905ರಲ್ಲಿ ರಷ್ಯದೊಡನೆ ಯುದ್ಧಮಾಡಿ, ಆ ರಾಷ್ಟ್ರವನ್ನು ಜಪಾನ್ ಸೋಲಿಸಿತು. ಅಮೆರಿಕದ ಅಧ್ಯಕ್ಷ ತೀಯೊಡೋರ್ ರೂಸ್‍ವೆಲ್ಪನ ಮಧ್ಯಸ್ಥಿಕೆಯಿಂದ ಯುದ್ಧ ಕೊನೆಗೊಂಡಿತು. ರಷ್ಯದ ಮೇಲೆ ಗಳಿಸಿದ ಜಯದಿಂದ ಜಪಾನಿನ ಕೀರ್ತಿ ಹೆಚ್ಚಿತು. ಪೋರ್ಟ್‍ಸ್ಮತ್ ಕೌಲಿನ (1905) ಪ್ರಕಾರ ಕೊರಿಯದ ಮೇಲಿನ ತನ್ನ ಹಕ್ಕುಗಳನ್ನೆಲ್ಲ ರಷ್ಯ ಸಂಪೂರ್ಣವಾಗಿ ತ್ಯಜಿಸಿತು. ಅಲ್ಲದೆ ತನ್ನ ವಶದಲ್ಲಿದ್ದ ದಕ್ಷಿಣ ಮಂಚೂರಿಯ ರೈಲ್ವೆ ಹೆದ್ದಾರಿಯನ್ನು ಜಪಾನಿಗೆ ಕೊಟ್ಟಿತು. ಮಂಚೂರಿಯದ ಲೀಯಾವುಡಂಗ್ ಪರ್ಯಾಯದ್ವೀಪದ ಮೇಲಣ ಗುತ್ತಿಗೆ ಹಕ್ಕು ಮತ್ತು ಸಾಕಲೀನ್ ದ್ವೀಪದ ಭಾಗಗಳು ಜಪಾನಿನ ವಶವಾದುವು.

ಒಂದನೆಯ ಮಹಾಯುದ್ಧ ಮತ್ತು ಆನಂತರ[ಬದಲಾಯಿಸಿ]

ಒಂದನೆಯ ಮಹಾಯುದ್ಧದ ಆರಂಭದಲ್ಲೇ ಜಪಾನ್ ಜರ್ಮನಿಯ ವಿರುದ್ಧ ಘೋಷಿಸಿತು. ಜಪಾನೀಯರು ಯೂರೋಪಿನಲ್ಲಿ ಯುದ್ಧ ಮಾಡಲಿಲ್ಲ. ಆದರೆ ಚೀನದಲ್ಲಿ ಜರ್ಮನಿಗೆ ಸೇರಿದ್ದ ಚಿಂಗ್-ಡಾವ್ ಪಟ್ಟಣವನ್ನೂ ಷಾಂಟಂಗ್ ಪ್ರಾಂತ್ಯದಲ್ಲಿದ್ದ ಆಸ್ತಿಪಾಸ್ತಿಗಳನ್ನೂ ಪೆಸಿಫಿಕ್ ಸಾಗರದ ಕೆಲವು ಜರ್ಮನ್ ದ್ವೀಪಗಳನ್ನೂ ಜಪಾನ್ ವಶಕೊಂಡಿತು. 1915ರಲ್ಲಿ ಯೂರೋಪಿನಲ್ಲಿ ನಡೆಯುತ್ತಿದ್ದ ಹೋರಾಟವನ್ನೇ ಒಂದು ಅವಕಾಶವೆಂದು ಎಣಿಸಿ ಜಪಾನ್ ಚೀನದಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸಿಕೊಳ್ಳಲು ಹವಣಿಸಿ ಚೀನ ಸರ್ಕಾರಕ್ಕೆ ತನ್ನ 21 ಬೇಡಿಕೆಗಳನ್ನು ಸಲ್ಲಿಸಿತು. ಜಪಾನಿಗೆ ಚೀನದಲ್ಲಿ ಅನೇಕ ಆರ್ಥಿಕ ಸವಲತ್ತುಗಳು ದೊರೆತುವು. ರಾಷ್ಟ್ರಗಳ ಕೂಟದ (ಲೀಗ್ ಆಫ್ ನೇಷನ್ಸ್) ಪರವಾಗಿ ಮಾರ್ಷಲ್, ಕಾರೊಲೈನ್ ಮತ್ತು ಮ್ಯಾರೀಯಾನ ದ್ವೀಪಗಳಲ್ಲಿ ನಿಯೋಗಿಯಾಗಿ ಆಡಳಿತ ನಡೆಸುವ ಅಧಿಕಾರವನ್ನು ಜಪಾನಿಗೆ ನೀಡಲಾಯಿತು.

ಯುದ್ಧ ಮುಗಿದ ಮೇಲೆ ರಾಷ್ಟ್ರಗಳ ಕೂಟದ ಸದಸ್ಯರಾಷ್ಟ್ರವಾಗಿ ಜಪಾನ್ ಅನೇಕ ಶಾಂತಿಸಂಧಾನಗಳಿಗೆ ಬೆಂಬಲ ನೀಡಿತು. 1921-22ರಲ್ಲಿ ನಡೆದ ವಾಷಿಂಗ್‍ಟನ್ ಸಮ್ಮೇಳನದಲ್ಲಿ, ಅಮೆರಿಕ ಮತ್ತು ಬ್ರಿಟನ್‍ಗಳಿಗಿಂತ ಚಿಕ್ಕದಾದ ನೌಕಾಪಡೆ ಇಟ್ಟುಕೊಳ್ಳುವುದಾಗಿ ಒಪ್ಪಿಕೊಂಡಿತು. ಚೀನದ ಷಾಂಟಂಗ್ ಪ್ರಾಂತ್ಯದಿಂದ ನಿರ್ಗಮಿಸುವುದಾಗಿಯೂ ವಾಷಿಂಗ್‍ಟನ್ ಸಮ್ಮೇಳನದಲ್ಲಿ ಒಪ್ಪಿಕೊಂಡಿತು. ಒಂಬತ್ತು ರಾಷ್ಟ್ರಗಳ ಕೌಲಿಗೆ ಸಹಿ ಹಾಕಿತು. ಚೀನದ ಸ್ವಾತಂತ್ರ್ಯಕ್ಕೆ ಧಕ್ಕೆ ಬರದ ರೀತಿಯಲ್ಲಿ ತಾನು ನಡೆದುಕೊಳ್ಳುವುದಾಗಿ ಭರವಸೆಕೊಟ್ಟಿತು. ಇದರ ಜೊತೆಗೆ 1928ರಲ್ಲಿ ಕೆಲ್ಲಾಗ್-ಬ್ರಿಯಾಂಡ್ ಒಪ್ಪಂದಕ್ಕೂ 1930ರಲ್ಲಿ ಲಂಡನ್ ನೌಕಾ ಒಪ್ಪಂದಕ್ಕೂ ಸಹಿ ಹಾಕಿತು.

ಸೈನಿಕವಾದದ ಪ್ರಾಬಲ್ಯ[ಬದಲಾಯಿಸಿ]

1930ರ ವರೆಗೆ ಜಪಾನಿನ ಆಡಳಿತ ಉದಾರತತ್ತ್ವಗಳಲ್ಲಿ ನಂಬಿಕೆಯಿದ್ದ ಪ್ರಜಾಪ್ರಭುತ್ವವಾದಿ ನಾಯಕರ ಕೈಯಲ್ಲಿ ಇತ್ತು. 1930ರಲ್ಲಿ ಜಪಾನು ಲಂಡನ್ ನೌಕಾ ಒಪ್ಪಂದಕ್ಕೆ ಸಹಿ ಹಾಕಿದ್ದೇ ಈ ಉದಾರವಾದಿ ರಾಜಕೀಯ ಮುಖಂಡರ ಕಡೆಯ ವಿಜಯವಾಯಿತು. ಜಪಾನು ಈ ಒಪ್ಪಂದಕ್ಕೆ ಸಹಿ ಹಾಕಲೇಬೇಕೆಂದು ಪ್ರಧಾನಮಂತ್ರಿ ಹಾಮಾಗೂಚಿ (1870-1931) ಒತ್ತಾಯ ಮಾಡಿದಾಗ ಅವನು ಕೊಲೆಗೆ ಈಡಾದ. 1930ರಲ್ಲಿ ತಲೆದೋರಿದ ವಿಶ್ವ ಆರ್ಥಿಕ ಮುಗ್ಗಟ್ಟು ಜಪಾನಿನ ಆರ್ಥಿಕ ಕ್ಷೇತ್ರವನ್ನು ಅಲ್ಲೋಲಕಲ್ಲೋಲ ಮಾಡಿತು. ನಿರುದ್ಯೋಗ, ಬಡತನ, ಆಹಾರದ ಕೊರತೆ ತಲೆದೋರಿದುವು. ಚೀನದೊಡನೆ ಸ್ನೇಹದಿಂದ ಇರಬೇಕೆಂಬ ಸರ್ಕಾರದ ನೀತಿಯನ್ನು ಜಪಾನೀಯರು ವಿರೋಧಿಸತೊಡಗಿದರು. ಜಪಾನೀ ಸರಕುಗಳಿಗೆ ಮಾರುಕಟ್ಟೆಗಳನ್ನು ಪಡೆಯುವ ಸಲುವಾಗಿ ಜಪಾನ್ ತನ್ನ ಪ್ರಭಾವ ವಲಯವನ್ನು ವಿಸ್ತರಿಸಬೇಕೆಂಬುದು ಜೈಬಟ್ಸುಗಳ ಅಭಿಪ್ರಾಯವಾಗಿತ್ತು. ಜಪಾನಿನ ಸೇನಾ ಮುಖಂಡರು ಯಾವಾಗಲೂ ಚೀನದ ವಿರುದ್ಧ ಕಠಿಣ ನೀತಿಯನ್ನೇ ಪ್ರತಿಪಾದಿಸುತ್ತಿದ್ದರು. ಜಪಾನು ಏಷ್ಯದಲ್ಲಿ ವಿಶೇಷ ಆರ್ಥಿಕ ಸೌಲಭ್ಯಗಳನ್ನು ಹೊಂದಿರಬೇಕೆಂಬುದು ಅವರ ವಾದವಾಗಿತ್ತು. ತಮ್ಮ ಯೋಜನೆಯನ್ನು ಕಾರ್ಯರೂಪಕ್ಕೆ ತರಲು ಸೇನಾಮುಖಂಡರಿಗೆ ಅಪ್ಪಣೆಯೇನೂ ಬೇಕಿರಲಿಲ್ಲ. ಸಂಸತ್ತನ್ನಾಗಲಿ ಮಂತ್ರಿಮಂಡಲವನ್ನಾಗಲಿ ಕೇಳದೆ ಚಕ್ರವರ್ತಿಯ ಹೆಸರಿನಲ್ಲಿ ಅವರು ತಮ್ಮ ನೀತಿ ಅನುಸರಿಸಲು ಅವಕಾಶವಿತ್ತು. ಉಗ್ರರಾಷ್ಟ್ರಾಭಿಮಾನಿಗಳು ಒಂದಾಗಿ ರಹಸ್ಯ ಹಾಗೂ ವಿಶೇಷರೀತಿಯ ಸಂಘ, ಸಂಸ್ಥೆಗಳನ್ನು ಸ್ಥಾಪಿಸಿಕೊಂಡರು. ಜಪಾನೀಯರು ದೇವಾಂಶಸಂಭೂತರೆಂದೂ ಅವರು ವಿಶ್ವವನ್ನು ಅಳಬೇಕೆಂಬುದು ದೇವರ ಇಚ್ಛೆಯೆಂದೂ ಈ ಸಂಘಸಂಸ್ಥೆಗಳ ಸದಸ್ಯರು ನಂಬಿದ್ದರು.

ಚೀನದೊಡನೆ ಯುದ್ಧ[ಬದಲಾಯಿಸಿ]

1931ರಲ್ಲಿ ಚೀನೀಯರು ಮಂಚೂರಿಯದಲ್ಲಿ ತಮ್ಮ ಸರ್ಕಾರದ ಬಲವನ್ನು ಹೆಚ್ಚಿಸಿಕೊಂಡಾಗ ಜಪಾನಿನ ಸೇನಾಮುಖಂಡರಿಗೆ ದಿಗ್ರ್ಭಮೆಯಾಯಿತು. ತನ್ನ ರೈಲುಮಾರ್ಗಗಳನ್ನು ರಕ್ಷಿಸಲು ಅನುಕೂಲವಾಗುವಂತೆ ಮಂಚೂರಿಯದಲ್ಲಿ ಜಪಾನು ಸೈನ್ಯ ಇಟ್ಟುಕೊಳ್ಳಲು ಚೀನ ಸರ್ಕಾರ ಅನುಮತಿ ನೀಡಿತ್ತು. 1931ರ ಸೆಪ್ಟೆಂಬರ್ 18ರಂದು ಮುಕ್‍ಡೆನ್ ನಗರದ ಬಳಿ ನಡೆದ ಸಣ್ಣ ಘಟನೆಯನ್ನೇ ನೆವಮಾಡಿಕೊಂಡು ಜಪಾನಿನ ಸೇನೆ ಮಂಚೂರಿಯವನ್ನು ಆಕ್ರಮಿಸಿಕೊಂಡಿತು. ಸೇನೆ ಈ ಉಗ್ರಕ್ರಮವನ್ನು ಕೈಗೊಂಡ ಮೇಲೆ ಜಪಾನ್ ಸರ್ಕಾರಕ್ಕೆ ಈ ವಿಷಯ ತಿಳಿಯಿತು ಎನ್ನುವುದು ದಾಖಲೆಗಳಿಂದ ಸ್ಪಷ್ಟವಾಗಿದೆ. ರಾಷ್ಟ್ರಗಳ ಕೂಟ ಈ ಘಟನೆಯ ಬಗ್ಗೆ ವಿಚಾರಿಸಿ, ಜಪಾನಿನ ನೀತಿ ತಪ್ಪೆಂದು ಖಂಡಿಸಿತಾದರೂ ಯಾವ ಕ್ರಮವನ್ನು ತೆಗೆದುಕೊಳ್ಳಲೂ ಅದು ಅಶಕ್ತವಾಗಿತ್ತು. ಜಪಾನ್ 1933ರಲ್ಲಿ ರಾಷ್ಟ್ರಗಳ ಕೂಟದಿಂದ ಹೊರಬಂತು. ಮಂಚೂ ಮನೆತನದ ಕೊನೆಯ ಚಕ್ರವರ್ತಿ ಪೂ-ಯೀಯ ಕೈಗೊಂಬೆ ಸರ್ಕಾರವೊಂದನ್ನು ಮಂಚೂರಿಯದಲ್ಲಿ ಸ್ಥಾಪಿಸಿ ಅದನ್ನು ಮಾಂಚೂಕ್ವೋ ಎಂದು ಕರೆಯಿತು.

ಜಪಾನಿನಿಂದ ಮಂಚೂರಿಯದಲ್ಲಿ ಗಣಿಗಳೂ ಕೈಗಾರಿಕೆಗಳೂ ಸ್ಥಾಪಿತವಾದುವು. ಮಂಚೂರಿಯದಲ್ಲಿ ಸುಲಭವಾಗಿ ಗಳಿಸಿದ ವಿಜಯದಿಂದ ಸೇನಾಮುಖಂಡರು ಉತ್ತೇಜನಗೊಂಡರು. ಸೇನೆಯ ಉಗ್ರಪಂಥಿಯರು ಪ್ರಧಾನಮಂತ್ರಿ ಕಿಇನುಕೈಯನ್ನು (1855-1932) 1932ರಲ್ಲಿ ಕೊಲೆಮಾಡಿದರು. 1936ರಲ್ಲಿ ನಡೆದ ದಂಗೆಯಲ್ಲಿ ಅನೇಕ ಉದಾರವಾದಿ ರಾಜಕೀಯ ಮುಖಂಡರುಗಳ ಕೊಲೆ ಆಯಿತು. ಅಲ್ಲಿಂದಾಚೆಗೆ ಜಪಾನಿನ ವಿದೇಶಾಂಗ ನೀತಿಯ ಮೇಲೆ ಉಗ್ರವಾದಿಗಳ ಹಿಡಿತ ಭದ್ರವಾಯಿತು.

ಮಂಚೂರಿಯದ ಆಕ್ರಮಣದ ಅನಂತರ ಜಪಾನ್ ಉತ್ತರ ಚೀನದ ಭಾಗಗಳಿಗೆ ತನ್ನ ಪ್ರಭಾವವನ್ನು ವಿಸ್ತರಿಸಿತು. 1937ರ ಜುಲೈ 7ರಂದು ಪೀಕಿಂಗ್ ನಗರದ ಬಳಿ ಮಾರ್ಕೊ ಪೋಲೊ ಸೇತುವೆಯ ಬಳಿ ನಡೆದ ಸಣ್ಣ ಘಟನೆಯನ್ನೇ ನೆವಮಾಡಿಕೊಂಡು ಜಪಾನ್ ಉತ್ತರ ಚೀನದ ಮೇಲೆ ಹತೋಟಿ ಸ್ಥಾಪಿಸಿತು. 1938ರ ವೇಳೆಗೆ ದಕ್ಷಿಣ ಚೀನದ ಮುಖ್ಯ ನಗರವಾದ ಕ್ಯಾಂಟನ್ ಜಪಾನಿನ ವಶವಾಯಿತು.

ಎರಡನೆಯ ಮಹಾಯುದ್ಧದ ಕಡೆಗೆ[ಬದಲಾಯಿಸಿ]

ನಾಟ್ಸಿ ಜರ್ಮನಿ ಮತ್ತು ಫ್ಯಾಸಿಸ್ಟ್ ಇಟಲಿಗಳೊಡನೆ ಜಪಾನ್ ಸ್ನೇಹ ಬೆಳೆಸಿತು. 1936ರಲ್ಲಿ ಜರ್ಮನಿ ಮತ್ತು ಇಟಲಿ ದೇಶಗಳೊಡನೆ ಜಪಾನು ಕಮ್ಯುನಿಸ್ಟ್-ವಿರೋಧಿ ಒಪ್ಪಂದವನ್ನು ಮಾಡಿಕೊಂಡಿತು. 1939ರ ಆಗಸ್ಟ್‍ನಲ್ಲಿ ಜರ್ಮನಿ-ರಷ್ಯಗಳು ಒಪ್ಪಂದ ಮಾಡಿಕೊಂಡಾಗ ಜಪಾನಿಗೆ ಆಶ್ಚರ್ಯವಾಯಿತು. 1940ರಲ್ಲಿ ಜಪಾನೂ ರಷ್ಯದೊಡನೆ ಒಂದು ಒಪ್ಪಂದ ಮಾಡಿಕೊಂಡಿತು.

1939ರ ಸೆಪ್ಟಂಬರಿನಲ್ಲಿ ಎರಡನೆಯ ಮಹಾಯುದ್ಧ ಯೂರೋಪಿನಲ್ಲಿ ಪ್ರಾರಂಭವಾದಾಗ, ಉತ್ತರ ಚೀನದಲ್ಲಿ ಬ್ರಿಟನ್ ಹೊಂದಿದ್ದ ಎಲ್ಲ ಹಕ್ಕುಬಾಧ್ಯತೆಗಳನ್ನೂ ಬಿಟ್ಟುಕೊಡಬೇಕೆಂಬುದು ಜಪಾನಿನ ಒತ್ತಾಯ. 1940ರಲ್ಲಿ ಫ್ರಾನ್ಸ್ ಜರ್ಮನಿಯ ವಶವಾಯಿತು. ಫ್ರೆಂಚರ ವಸಾಹತಾಗಿದ್ದ ಇಂಡೋಚೀನ ಪರ್ಯಾಯದ್ವೀಪವನ್ನು ಜಪಾನ್ ಆಕ್ರಮಿಸಿಕೊಂಡಿತು. ಜಪಾನಿನ ಆಕ್ರಮಣ ಹೆಚ್ಚಿದಂತೆಲ್ಲ ಅಮೆರಿಕ-ಜಪಾನ್ ವಿರಸ ಬೆಳೆಯಲಾರಂಭಿಸಿತು. 1940ರಲ್ಲಿ ಅಮೆರಿಕ ಜಪಾನಿಗೆ ಸಾಗುತ್ತಿದ್ದ ಪೆಟ್ರೋಲ್ ಮತ್ತು ಕಬ್ಬಿಣದ ರಫ್ತಿನಲ್ಲಿ ಖೋತ ಮಾಡಿತು. 1941ರ ವೇಳೆಗೆ ಜಪಾನಿನಲ್ಲಿ ಯುದ್ಧಸಿದ್ಧತೆಗಳೆಲ್ಲ ಮುಗಿದಿದ್ದುವು. 1941ರ ಅಕ್ಟೋಬರ್ 17ರಂದು ಜಪಾನಿನಲ್ಲಿ ಕೊನೆಯ ಮಂತ್ರಿಮಂಡಲ ಅಧಿಕಾರ ಕಳೆದುಕೊಂಡಿತು. ದಂಡನಾಯಕ ಡಿಡೆಕಿ ಟೋಜೋ ಪ್ರಧಾನ ಮಂತ್ರಿಯಾದ. ಸೇನಾಮುಖಂಡರು ಜಪಾನ್ ಸರ್ಕಾರದ ಮೇಲೆ ತಮ್ಮ ಸಂಪೂರ್ಣ ಹತೋಟಿ ಸಾಧಿಸಿ, ಯುದ್ಧಕ್ಕೆ ಸಿದ್ಧರಾದರು.

ಎರಡನೆಯ ಮಹಾಯುದ್ಧ[ಬದಲಾಯಿಸಿ]

1941ರಲ್ಲಿ ಹವೈಯಿ ದ್ವೀಪದ ಪರ್ಲ್ ಹಾರ್ಬರಿನಲ್ಲಿ ತಂಗಿದ್ದ ಅಮೆರಿಕದ ಪೆಸಿಫಿಕ್ ನೌಕಾಪಡೆ ಜಪಾನಿನ ವಿಮಾನ ದಾಳಿಗೆ ಗುರಿಯಾಗಿ ಧ್ವಂಸವಾಯಿತು. ಬಿರುಗಾಳಿಯಂತೆ ಮುಂದುವರಿದು ಪೆಸಿಫಿಕ್ ಸಾಗರ ಮತ್ತು ಹಿಂದೂ ಸಾಗರ ದ್ವೀಪಗಳನ್ನೆಲ್ಲ ಜಪಾನ್ ವಶಪಡಿಸಿಕೊಂಡಿತು. ಮಲಯವನ್ನೂ ಬರ್ಮವನ್ನೂ ಆಕ್ರಮಿಸಿ ಭಾರತಕ್ಕೂ ಬೆದರಿಕೆ ಹಾಕಿತು. ಪಾಶ್ಚಾತ್ಯ ದೇಶಗಳಿಂದ ಚೀನಕ್ಕೆ ಸಾಗುತ್ತಿದ್ದ ಸರಬರಾಜನ್ನು ನಿಲ್ಲಿಸುವ ಉದ್ದೇಶದಿಂದ ಪ್ರಸಿದ್ಧ ಚೀನ ಮಾರ್ಗವನ್ನು ಜಪಾನ್ ಕಡಿದು ಹಾಕಿತು. ಇದರಿಂದ ಜಪಾನಿನ ಕೈಗಾರಿಕೆಗಳಿಗೆ ಸಾಕಷ್ಟು ಕಚ್ಚಾವಸ್ತುಗಳು ಒದಗಿಬಂದವು.

ಆದರೆ 1944ರಲ್ಲಿ ಜಪಾನಿನ ಭಾಗ್ಯ ಬದಲಾಯಿತು. ಜಪಾನಿನ ದೌರ್ಬಲ್ಯ ಪ್ರಕಟವಾಗತೊಡಗಿತು. 1944ರ ಜುಲೈ 18ರಂದು ಟೋಜೋನ ಮಂತ್ರಿಮಂಡಲ ಉರುಳಿತು. ಅಮೆರಿಕ ಪೆಸಿಫಿಕಿನ ಎಲ್ಲ ದ್ವೀಪಗಳನ್ನೂ ವಶಪಡಿಸಿಕೊಂಡಿತು. ಯುದ್ಧ ಜಪಾನಿನ ಬಾಗಿಲಿಗೇ ಬಂತು. ಅಮೆರಿಕನರು ಜಪಾನಿನ ಕೈಗಾರಿಕಾ ಕೇಂದ್ರಗಳ ಮೇಲೆಲ್ಲ ಕ್ರಮವಾಗಿ ಬಾಂಬು ದಾಳಿ ಮಾಡತೊಡಗಿದರು. 1945ರಲ್ಲಿ ಅಮೆರಿಕನ್ ಸೈನಿಕರು ಜಪಾನಿನಲ್ಲಿ ಬಂದಿಳಿದರು. ಹಿರೋಷೀಮ ಮತ್ತು ನಾಗಸಾಕೀ ನಗರಗಳ ಮೇಲೆ ಅಮೆರಿಕ ಎರಡು ಪರಮಾಣು ಬಾಂಬುಗಳನ್ನು ಹಾಕಿದಾಗ ಸುಮಾರು ಎರಡು ಲಕ್ಷ ಜಪಾನೀಯರು ಪ್ರಾಣಬಿಟ್ಟರು. ಆ ನಗರಗಳು ನೆಲಸಮವಾದುವು.

ಯುದ್ಧದಲ್ಲಿ ಸೋಲುಂಟಾಗಿದೆಯೆಂಬ ಅಂಶ ಈ ವೇಳೆಗೆ ಜಪಾನೀ ನಾಯಕರಿಗೆ ಮನವರಿಕೆಯಾಗಿತ್ತು. ಚೀನ ಮತ್ತು ಪೆಸಿಫಿಕ್ ಸಾಗರ ದ್ವೀಪಗಳಲ್ಲಿ ಜಪಾನೀಯರ ದೊಡ್ಡ ಸೇನೆಯಿತ್ತು. ಆದರೆ ಅವುಗಳೊಂದಿಗೆ ಸಂಪರ್ಕ ತಪ್ಪಿಹೋಯಿತು. ಜಪಾನಿನ ಬಳಿ ಯುದ್ಧನೌಕೆಗಳಾಗಲಿ, ಸಾಮಗ್ರಿಗಳಾಗಲಿ ಇರಲಿಲ್ಲ. 1945ರ ಆಗಸ್ಟ್ 14ರಂದು ಜಪಾನ್ ಸಂಪೂರ್ಣವಾಗಿ ಶರಣಾಗತವಾಗಲು ಒಪ್ಪಿತು. ಮರುದಿನ ಮಧ್ಯಾಹ್ನ ಚಕ್ರವರ್ತಿ ಹಿರೊಹಿಟೋ ಜಪಾನಿನ ಜನತೆಯನ್ನು ಉದ್ದೇಶಿಸಿ ರೇಡಿಯೋ ಭಾಷಣ ಮಾಡಿದರು. ಜಪಾನ್ ಯುದ್ಧ ಕೊನೆಗೊಳಿಸಲು ಒಪ್ಪಿರುವ ವಿಷಯವನ್ನು ತಿಳಿಸಿದರು. ಸೆಪ್ಟಂಬರ್ 2ರಂದು, ಯುದ್ಧನೌಕೆ ಮಿಸ್ಸೋರಿಯ ಮೇಲೆ, 1853ರಲ್ಲಿ ಪೆರಿ ಬೀಡುಬಿಟ್ಟಿದ್ದ ಟೋಕಿಯೋ ಕೊಲ್ಲಿಯ ಬಳಿಯಲ್ಲೇ, ಜಪಾನ್ ಶರಣಾಗತಿ ಪತ್ರಕ್ಕೆ ಸಹಿ ಹಾಕಿತು. ಏಷ್ಯದಲ್ಲಿ ಗೆದ್ದಿದ್ದ ಪ್ರದೇಶಗಳನ್ನೂ ಪೆಸಿಫಿಕ್ ಸಾಗರದಲ್ಲಿ ಆಕ್ರಮಿಸಿಕೊಂಡಿದ್ದ ದ್ವೀಪಗಳನ್ನೂ ಜಪಾನ್ ಬಿಟ್ಟುಕೊಟ್ಟಿತು. ಫಾರ್ಮೋಸ, ಕ್ಯುರೈಲ್ಸ್ ಮತ್ತು ದಕ್ಷಿಣ ಸಾಖಲಿನ್ ದ್ವೀಪಗಳನ್ನು ಜಪಾನ್ ಕಳೆದುಕೊಂಡಿತು.

ಮಿತ್ರರಾಷ್ಟ್ರಗಳ ಆಳ್ವಿಕೆ (1945-1952)[ಬದಲಾಯಿಸಿ]

ಅಮೆರಿಕದ ನೇತೃತ್ವದಲ್ಲಿ ಮಿತ್ರ ರಾಷ್ಟ್ರಗಳು 1945ರಿಂದ 1952ರ ವರೆಗೆ ಅಲ್ಲಿ ಆಳ್ವಿಕೆ ನಡೆಸಿದುವು. ದಂಡನಾಯಕ ಮೆಕಾರ್ಥರ್ ಈ ಆಡಳಿತದ ಮುಖ್ಯಾಧಿಕಾರಿಯಾಗಿದ್ದ. ಯುದ್ಧಾಪರಾಧಗಳ ವಿಚಾರಣೆ ನಡೆದು 28 ಪ್ರಧಾನ ಯುದ್ಧಕೈದಿಗಳಿಗೆ ಗಲ್ಲಿನ ಶಿಕ್ಷೆಯಾಯಿತು. 1946ರಲ್ಲಿ ಜಪಾನಿನಲ್ಲಿ ಸಾರ್ವತ್ರಿಕ ಚುನಾವಣೆಗಳು ನಡೆದುವು. ಆ ವರ್ಷವೇ ಜಪಾನಿನ ಹೊಸ ಸಂವಿಧಾನದ ರಚನೆಯಾಗಿ 1947ರ ಮೇ 3ರಂದು ಅದು ಅಧಿಕೃತವಾಗಿ ಜಾರಿಗೆ ಬಂತು. ಚಕ್ರವರ್ತಿಯಲ್ಲಿ ಕೇಂದ್ರೀಕೃತವಾಗಿದ್ದ ಕಾರ್ಯಾಂಗದ ಅಧಿಕಾರಗಳನ್ನು ತೆಗೆದುಹಾಕಲಾಯಿತು. ಸ್ತ್ರೀಯರಿಗೂ ಮತದಾನದ ಹಕ್ಕು ಲಭ್ಯವಾಯಿತು. ಸೇನೆ ಮತ್ತು ನೌಕೆಯನ್ನು ರದ್ದು ಮಾಡಿದ ಸಂವಿಧಾನದಲ್ಲಿ, ಯುದ್ಧವನ್ನು ರಾಜಕೀಯ ಅಸ್ತ್ರದಂತೆ ಜಪಾನ್ ಎಂದೆಂದಿಗೂ ಬಳಸುವುದಿಲ್ಲವೆಂದು ಘೋಷಿಸಲಾಯಿತು. ಅಮೆರಿಕದ ನೆರವಿನಿಂದ ಜಪಾನಿನ ಆರ್ಥಿಕ ಸ್ಥಿತಿ ಸುಧಾರಿಸುತ್ತ ನಡೆಯಿತು. ಭೂ ಸುಧಾರಣೆಗಳಾದುವು. ಉಳುವವರು ಭೂಮಿಯ ಒಡೆಯರಾದರು. ಕೈಗಾರಿಕಾ ಕ್ಷೇತ್ರದಲ್ಲಿ ಜೈಬಟ್ಸುವಿನ ಪ್ರಭಾವ ತಗ್ಗಿಸುವ ಏರ್ಪಾಡುಗಳಾದುವು. 1950ರ ಕೊರಿಯ ಯುದ್ಧ ಮತ್ತು ಅನಂತರ ಜಪಾನಿನ ಕೈಗಾರಿಕೆ ಬಹು ಬೇಗ ಹಿಂದಿನ ಸ್ಥಿತಿಗೆ ಬಂತು. ಆ ಕಾಲದಲ್ಲಿ ಜಪಾನಿನ ಪ್ರಧಾನಿಯಾಗಿದ್ದ ಷಿಗೆಯ ಯೋಷಿದಾ ಅಮೆರಿಕದೊಡನೆ ಹೊಂದಾಣಿಕೆಯ ನೀತಿ ಅನುಸರಿಸಿದರು. ಜಪಾನ್ ಪ್ರಜಾಪ್ರಭುತ್ವದ ಹಾದಿ ಹಿಡಿಯಿತು.

ಯುದ್ಧೋತ್ತರ ಪ್ರಗತಿ[ಬದಲಾಯಿಸಿ]

1951ರ ಸೆಪ್ಟೆಂಬರ್ 8ರಂದು ಅಮೆರಿಕದ ಸ್ಯಾನ್ ಫ್ರಾನ್ಸಿಸ್‍ಕೋ ನಗರದಲ್ಲಿ 48 ಮಿತ್ರರಾಷ್ಟ್ರಗಳ ಸಮ್ಮೇಳನ ನಡೆದು, ಜಪಾನ್ ಶಾಂತಿ ಕೌಲಿಗೆ ಸಹಿ ಹಾಕಿತು. ಇದು ಅಧಿಕೃತವಾಗಿ ಜಾರಿಗೆ ಬಂದದ್ದು 1952ರ ಏಪ್ರಿಲ್ 28ರಂದು. ಮಿತ್ರರಾಷ್ಟ್ರಗಳ ಆಡಳಿತ ಕೊನೆಗೊಂಡಿತು. ಜಪಾನ್ ಸಂಪೂರ್ಣವಾಗಿ ಸ್ವತಂತ್ರವಾಯಿತು. ಜಪಾನ್ ಅಮೆರಿಕದೊಡನೆ ಭದ್ರತಾ ಒಪ್ಪಂದವೊಂದನ್ನು ಮಾಡಿಕೊಂಡಿತು. 1952ರಲ್ಲಿ ಜಪಾನ್ ವಿಶ್ವಸಂಸ್ಥೆಯ ಸದಸ್ಯರಾಷ್ಟ್ರವಾಗಲು ಬಯಸಿ ವಿಫಲವಾಯಿತು. ಇದಕ್ಕೆ ಕಾರಣ ಸೋವಿಯೆತ್ ದೇಶದ ವಿರೋಧ. 1956ರಲ್ಲಿ ಸೋವಿಯೆತ್ ದೇಶ ಮತ್ತು ಜಪಾನ್‍ಗಳ ನಡುವೆ ಶಾಂತಿ ಒಪ್ಪಂದ ಆದ ಮೇಲೆ ಆ ವರ್ಷದ ಡಿಸೆಂಬರ್ ತಿಂಗಳಲ್ಲಿ ಜಪಾನ್ ವಿಶ್ವಸಂಸ್ಥೆಯ ಸದಸ್ಯತ್ವ ಪಡೆಯಿತು. 1955ರಲ್ಲಿ ಇಂಡೊನೇಷ್ಯದ ಬಾಂಡುಂಗ್‍ನಲ್ಲಿ ನಡೆದ ಆಫ್ರೊ-ಏಷ್ಯನ್ ಆಗ್ರ ಸಮ್ಮೇಳನದಲ್ಲಿ ಜಪಾನೂ ಭಾಗವಹಿಸಿತು. ಅಲ್ಲಿಂದೀಚೆಗೆ ಜಪಾನ್ ಎಲ್ಲ ಕ್ಷೇತ್ರಗಳಲ್ಲೂ ಮುಂದುವರಿದು ವಿಶ್ವದ ಶ್ರೀಮಂತ ರಾಷ್ಟ್ರಗಳಲ್ಲೊಂದಾಗಿದೆ.

ಆರ್ಥಿಕ ಅಭಿವೃದ್ಧಿ[ಬದಲಾಯಿಸಿ]

ಆಧುನಿಕ ಕೈಗಾರಿಕಾ ಪದ್ಧತಿಯನ್ನು ಯಶಸ್ವಿಯಾಗಿ ಆಚರಣೆಗೆ ತಂದ ಪ್ರಥಮ ಏಷ್ಯನ್ ರಾಷ್ಟ್ರವಿದು. ಸುಮಾರು ಒಂದು ಶತಮಾನದ ಹಿಂದೆ ಹೊರ ಜಗತ್ತಿನ ಸಂಪರ್ಕ ಸಹ ಇಲ್ಲದೆ ಪ್ರತ್ಯೇಕ ರಾಷ್ಟ್ರವೆನಿಸಿಕೊಂಡಿದ್ದ ಈ ದೇಶ ಇಂದು ಪ್ರಪಂಚದ ಅತ್ಯಂತ ಅಭ್ಯುದಯ ಹೊಂದಿದ ರಾಷ್ಟ್ರಗಳಲ್ಲಿ ಒಂದಾಗಿದೆ.

ಮಿತ ಭೂಪ್ರದೇಶ, ವಿರಳ ಪ್ರಕೃತಿಸಂಪತ್ತು, ಅಗಾಧ ಜನಸಂಖ್ಯೆ, ದ್ವಿತೀಯ ಮಹಾಯುದ್ಧದ ಆಘಾತ-ಇಷ್ಟೆಲ್ಲ ಪ್ರತಿಕೂಲಗಳನ್ನೆದುರಿಸಿಯೂ ಈ ಸಣ್ಣ ದೇಶ ಅಗಾಧ ಪ್ರಗತಿ ಸಾಧಿಸಿದೆ.

ಆಧುನಿಕ ಜಪಾನಿನ ಅಭಿವೃದ್ಧಿ 1868ರಲ್ಲಿ ಮೇಜಿ ಚಕ್ರವರ್ತಿ ಅಧಿಕಾರಕ್ಕೆ ಬಂದಂದಿನಿಂದ ಪ್ರಾರಂಭವಾಯಿತು. ಇದಕ್ಕೆ ಮುಂಚೆ 265 ವರ್ಷ ಟೋಕುಗಾವಾ ವಂಶದ ಷೋಗುನ್‍ಗಳು ಚಕ್ರವರ್ತಿಯನ್ನು ಬದಿಗೊತ್ತಿ ತಾವೇ ಆತನ ಹೆಸರಿನಲ್ಲಿ ರಾಜ್ಯಾಡಳಿತ ನಡೆಸುತ್ತಿದ್ದರು.

ಷೋಗುನ್ನರ ಆಳ್ವಿಕೆಯಲ್ಲಿ ಊಳಿಗಮಾನ್ಯ ಪದ್ಧತಿ ಇತ್ತು. ದೇಶದ ಮುಕ್ಕಾಲು ಪಾಲು ಜಮೀನು ಷೋಗುನ್ನರ ಸ್ವಂತ ಉಪಯೋಗಕ್ಕೆ ಮೀಸಲಾಗಿತ್ತು. ಉಳಿದುದನ್ನು ಅವರು ತಮ್ಮ ಅಧೀನರಾದ ಜಮೀನ್ದಾರರಲ್ಲಿ ಹಂಚಿದ್ದರು. ಇವರಲ್ಲದೆ ಯೋಧವರ್ಗ, ರೈತವರ್ಗ, ಬಹಿಷ್ಕøತರಂತೆ ಜೀವಿಸುತ್ತಿದ್ದವರ ದಲಿತವರ್ಗ ಇವೂ ಇದ್ದುವು.

ಪಟ್ಟಣಗಳಲ್ಲಿ ಸಣ್ಣ ಕೈಗಾರಿಕೆಗಳು ವೃತ್ತಿ ಸಂಘಗಳ ಹತೋಟಿಯಲ್ಲಿ ಅಭಿವೃದ್ಧಿ ಹೊಂದಿದ್ದುವು. ವೃತ್ತಿಸಂಘಗಳು ಸರ್ಕಾರದ ಮಾನ್ಯತೆ ಪಡೆದು, ಅದಕ್ಕೆ ತೆರಿಗೆ ಕೊಡುತ್ತಿದ್ದುವು. 19ನೆಯ ಶತಮಾನದ ವೇಳೆಗೆ ಗೃಹಕೈಗಾರಿಕಾ ಪದ್ಧತಿ ಬೆಳೆಯಲಾರಂಭಿಸಿತ್ತು. ಸಣ್ಣ ಕಾರ್ಖಾನೆಗಳು ಅಗಲೇ ತಲೆಯೆತ್ತುತ್ತಿದ್ದುವು. ಷೋಗುನ್ನರ ಕಾಲದಲ್ಲಿ ವಿದೇಶೀ ಸಂಪರ್ಕ ನಿಷೇಧಿಸಲ್ಪಟ್ಟಿತ್ತು. ಇದರಿಂದ ಜಪಾನು ಪಾಶ್ಚಾತ್ಯ ರಾಷ್ಟ್ರಗಳಲ್ಲಾಗುತ್ತಿದ್ದ ತಾಂತ್ರಿಕ ಮತ್ತು ವೈಜ್ಞಾನಿಕ ಪ್ರಗತಿಯ ಪ್ರಯೋಜನ ಕಳೆದುಕೊಂಡಿತು. ವಿದೇಶೀ ವ್ಯಾಪಾರಕ್ಕೂ ಅವಕಾಶವಿರಲಿಲ್ಲ.

19ನೆಯ ಶತಮಾನದ ದ್ವಿತೀಯಾರ್ಧದ ವೇಳೆಗೆ ಈ ಆರ್ಥಿಕ ವ್ಯವಸ್ಥೆ ಅಂತರಿಕ ಒತ್ತಡಗಳಿಂದ ಕುಸಿಯತೊಡಗಿತು. ಜನರು ಊಳಿಗಮಾನ್ಯ ವ್ಯವಸ್ಥೆಯ ಹಾಗೂ ವೃತ್ತಿಸಂಘಗಳ ನಿರ್ಬಂಧಗಳನ್ನು ಕಡೆಗಣಿಸಿ, ಪಟ್ಟಣಗಳಿಗೆ ಇತರ ಉದ್ಯೋಗಗಳನ್ನರಸಿ ಹೋಗತೊಡಗಿದರು. ಆ ವೇಳೆಗೆ ಪಾಶ್ಚಾತ್ಯರ ಒತ್ತಡಕ್ಕೆ ಮಣಿದು ಷೋಗುನ್ನರು ಅವರಿಗೆ ಕೆಲವು ವ್ಯಾಪಾರಿ ರಿಯಾಯಿತಿಗಳನ್ನು ಕೊಟ್ಟರು. ಇದರಿಂದ ಜನ ಕುಪಿತರಾದರು. ವಿರೋಧ ಪ್ರಬಲವಾಗುತ್ತಿದ್ದುದನ್ನು ಕಂಡ ಕೊನೆಯ ಷೋಗುನ್ ತಾನಾಗಿಯೇ ಅಧಿಕಾರ ತ್ಯಜಿಸಿದ.

1868ರಲ್ಲಿ ಮೇಜಿ ಚಕ್ರವರ್ತಿ ಅಧಿಕಾರಕ್ಕೆ ಬಂದ. ಇವನು ಆಧುನಿಕ ಜಪಾನಿನ ನಿರ್ಮಾಪಕ. ದಕ್ಷನೂ ಪ್ರಗತಿಪರನೂ ದೂರದೃಷ್ಟಿಯುಳ್ಳವನೂ ಆದ ಈತ ಜಪಾನಿನ ಪ್ರತ್ಯೇಕತಾ ನೀತಿಯನ್ನು ತೊರೆದು ಪಾಶ್ಚಾತ್ಯ ಸಂಪರ್ಕವನ್ನು ಪ್ರೋತ್ಸಾಹಿಸಿದ. ಊಳಿಗಮಾನ್ಯ ಪದ್ಧತಿಯನ್ನು ರದ್ದುಗೊಳಿಸಿದ. ನಿರಕ್ಷರತೆಯನ್ನು ನಿರ್ಮೂಲ ಮಾಡುವುದು ಮಾತ್ರವಲ್ಲದೆ ವೈಜ್ಞಾನಿಕ ಬೆಳವಣಿಗೆಗೆ ಸಹಾಯ ಮಾಡುವ ನೂತನ ವಿದ್ಯಾಭ್ಯಾಸ ಕ್ರಮವನ್ನು ಜಾರಿಗೆ ತಂದ. ಕೃಷಿ, ಕೈಗಾರಿಕೆ ಮತ್ತು ವ್ಯಾಪಾರಾಭಿವೃದ್ಧಿಗೆ ವಿಶೇಷ ಪ್ರೋತ್ಸಾಹ ಮತ್ತು ಸಹಾಯ ನೀಡಿದ. ಕೆಲವು ಹಣಕಾಸಿನ ಸುಧಾರಣೆಗಳನ್ನು ಆಚರಣೆಗೆ ತಂದು, ಸರ್ಕಾರದ ವರಮಾನ ಹೆಚ್ಚಿಸಿದ.

ಈ ಸುಧಾರಣೆಗಳಿಂದ ಆಧುನಿಕ ಜಪಾನಿನ ಅಭಿವೃದ್ಧಿಗೆ ಭದ್ರತಳಹದಿ ಹಾಕಿದಂತಾಯಿತು. ಇವುಗಳ ಯಶಸ್ಸಿಗೆ ಚಕ್ರವರ್ತಿಯ ಪ್ರಗತಿಪರನೀತಿ ಮಾತ್ರವಲ್ಲದೆ ಜಪಾನಿನ ಭೌಗೋಳಿಕ ಸನ್ನಿವೇಶ, ರಾಷ್ಟ್ರೀಯ ಏಕತೆ, ಭಾಷಾ ಏಕರೂಪತೆ, ಜಪಾನೀಯರ ಶಿಸ್ತು ಸಂಘಟನೆ, ಕರ್ತವ್ಯಪರತೆ, ರಾಷ್ಟ್ರಪೇಮ, ಚಕ್ರವರ್ತಿಯಲ್ಲಿ ಅವರಿಗಿದ್ದ ಅಪಾರಗೌರವ ಮುಂತಾದವೂ ಕಾರಣವಾದುವು. ಮೇಜಿ ಆಳ್ವಿಕೆಯಿಂದೀಚೆಗೆ ಜಪಾನು ಆರ್ಥಿಕವಾಗಿ ವಿಶೇಷ ಪ್ರಗತಿ ಸಾಧಿಸಿದೆ.

ಕೃಷಿ[ಬದಲಾಯಿಸಿ]

ಮೇಜಿ ಸರ್ಕಾರ ಕೃಷಿ ಅಭಿವೃದ್ಧಿಗೆ ಅನೇಕ ಕ್ರಮಗಳನ್ನು ಕೈಗೊಂಡಿತು. ಜಮೀನ್ದಾರರಿಂದ ಪಡೆದ ಜಮೀನುಗಳನ್ನು ಸಣ್ಣ ಹಿಡುವಳಿಗಳಾಗಿ ಮಾಡಿ, ಸಾಮಾನ್ಯ ರೈತರಿಗೆ ಹಂಚಿತು. ಋಣಪರಿಹಾರ ಮತ್ತು ಕೃಷಿಕಾರ್ಯಗಳಿಗೆ ಹಣ ಒದಗಿಸಲು ಸಹಕಾರ ಸಂಘಗಳ ಸ್ಥಾಪನೆಯನ್ನು ಪ್ರೋತ್ಸಾಹಿಸಿತು. ಗೇಣಿ ಶಾಸನಗಳ ಮೂಲಕ ಗೇಣಿದಾರರ ಹಿತರಕ್ಷಣೆ ಮಾಡಲು ಪ್ರಯತ್ನಿಸಿತು. ಜಮೀನು ಕೊಳ್ಳುವುದಕ್ಕೂ ಕೃಷಿ ಅಭಿವೃದ್ಧಿಪಡಿಸುವುದಕ್ಕೂ ಕೃಷಿ ಅಭಿವೃದ್ಧಿ ಬ್ಯಾಂಕುಗಳಿಂದಲೂ ನೇರವಾಗಿ ಸರ್ಕಾರದಿಂದಲೂ ದೀರ್ಘಾವಧಿ ಸಾಲಗಳು ದೊರಕುವಂತೆ ಮಾಡಿತು. ಮೇಜಿ ಸರ್ಕಾರದ ಈ ಕ್ರಮಗಳಿಂದ ರೈತರ ಸ್ಥಿತಿ ಉತ್ತಮಗೊಂಡಿತು.

ಆದರೆ ವಿಶ್ವ ಆರ್ಥಿಕ ಮುಗ್ಗಟ್ಟಿನ ಕಾಲದಲ್ಲಿ ರೈತರು ಮತ್ತೆ ಕಷ್ಟಕ್ಕೊಳಗಾದರು. ಆಗ ಸರ್ಕಾರ ತೆರಿಗೆಗಳನ್ನಿಳಿಸಿ, ಪರಿಹಾರ ಕಾಮಗಾರಿಗಳನ್ನು ಕೈಗೊಂಡಿತು. ಸಹಕಾರ ಸಂಘಗಳಿಗೆ ರೈತರಿಂದ ಬಾಕಿ ಇದ್ದ ಸಾಲಗಳಿಗೆ ಸರ್ಕಾರ ಹೊಣೆಯಾಯಿತು. ಕೃತಕಗೊಬ್ಬರದ ಕಾರ್ಖಾನೆಗಳ ಸ್ಥಾಪನೆ ಆಯಿತು. ಕೃಷಿ ವಿಶ್ವವಿದ್ಯಾಲಯಗಳು ಮತ್ತು ಪ್ರಾಯೋಗಿಕ ಕೃಷಿ ಕೇಂದ್ರಗಳು ಪ್ರಾರಂಭವಾದುವು. ದೇಶಾದ್ಯಂತ ಉಗ್ರಾಣಗಳನ್ನೂ ಮಳಿಗೆಗಳನ್ನೂ ಸ್ಥಾಪಿಸಿ ಬತ್ತದ ಬೆಲೆ ಸ್ಥಿರೀಕರಣ ನೀತಿಯನ್ನು ಆಚರಣೆಗೆ ತರಲಾಯಿತು. ಈ ಕಾರ್ಯಕ್ರಮಗಳಿಂದಲೂ ಯುದ್ಧಕಾಲದ ಬೆಲೆ ಏರಿಕೆಯಿಂದಲೂ ರೈತರ ಸ್ಥಿತಿ ಉತ್ತಮಗೊಂಡಿತು. ಆದರೂ ಗೇಣಿದಾರನ ಸ್ಥಿತಿ ಉತ್ತಮವಾಗಲಿಲ್ಲ.

ಎರಡನೆಯ ಮಹಾಯುದ್ಧದ ಅನಂತರ ಜಪಾನಿನಲ್ಲಿ ಏರ್ಪಟ್ಟ ಮಿತ್ರರಾಷ್ಟ್ರಗಳ ಆಡಳಿತ ಭೂಸುಧಾರಣಾ ಶಾಸನವನ್ನು ಜಾರಿಗೆ ತಂದು ಗೇಣಿಯ ಪ್ರಮಾಣವನ್ನು ನಿಗದಿಗೊಳಿಸಿತು. ಗೈರುಹಾಜರಿ ಜಮೀನ್ದಾರಿಯನ್ನು ರದ್ದುಗೊಳಿಸಿತು. ಸ್ಥಳೀಯ ಜಮೀನ್ದಾರರು 2.5 ಎಕರೆಗಳ ವರೆಗೆ ಗೇಣಿಗೆ ಕೊಟ್ಟು, ಮಿಕ್ಕ ಜಮೀನನ್ನು ಸರ್ಕಾರಕ್ಕೆ ಮಾರುವಂತೆ ಅಧಿನಿಯಮ ಜಾರಿಗೆ ಬಂತು. ಸ್ವಂತ ಬೇಸಾಯಗಾರರು ತಲಾ 7.5 ಎಕರೆಗಳಿಗೆ ಮೀರದಷ್ಟು ಜಮೀನನ್ನು ಇಟ್ಟುಕೊಳ್ಳಲು ಅನುಮತಿಯಿತ್ತು. ನೆಲವಿಲ್ಲದ ರೈತರು ಸರ್ಕಾರದಿಂದ ಜಮೀನನ್ನು ಕೊಂಡು 30 ವಾರ್ಷಿಕ ಕಂತುಗಳಲ್ಲಿ ತೀರಿಸುವ ಅವಕಾಶ ಪಡೆದರು.

ಈ ಸುಧಾರಣೆಗಳ ಫಲವಾಗಿ ಕೃಷಿ ಉತ್ಪಾದನೆ ಹೆಚ್ಚಿ, ಅದು ರಾಷ್ಟ್ರಾದಾಯದ ಶೇ. 16ರ ಮಟ್ಟಕ್ಕೆ ಬಂತು. ಅಲ್ಲಿಂದೀಚೆಗೆ ಜಪಾನಿನ ಬೇಸಾಯ ಮತ್ತಷ್ಟು ಪ್ರಗತಿ ಹೊಂದಿದ್ದರೂ ಆಹಾರ ಪದಾರ್ಥಗಳ ಆಮದು ನಿಂತಿಲ್ಲ. ಆದರೆ ಇದಕ್ಕೆ ಪ್ರತಿಯಾಗಿ ಕೈಗಾರಿಕಾ ವಸ್ತುಗಳನ್ನು ರಫ್ತು ಮಾಡುವ ಸಾಮಥ್ರ್ಯವಿರುವುದರಿಂದ ಆಹಾರ ಪದಾರ್ಥಗಳ ಆಮದು ಅಷ್ಟಾಗಿ ಹೊರೆಯೆನಿಸಿಲ್ಲ. ಮುಂದಿನ ದಶಕಗಳಲ್ಲಿ ಆಹಾರ ಧಾನ್ಯಗಳನ್ನು ತನಗೆ ಅನುಕೂಲವಾದ ದರದಲ್ಲಿ ಆಮದು ಮಾಡಿಕೊಳ್ಳಲು ಇರುವ ಸಾಧ್ಯತೆಗಳನ್ನು ಜಪಾನು ಈಗ ಪರಿಶೀಲಿಸುತ್ತಿದೆ. ಈ ಪರಿಶೀಲನೆಯ ಆಧಾರದ ಮೇಲೆ ತನ್ನ ಭವಿಷ್ಯ ಕೃಷಿ ನೀತಿಯನ್ನು ನಿರ್ಧರಿಸಲಿದೆ.

ಕೈಗಾರಿಕೆ[ಬದಲಾಯಿಸಿ]

ಪಾಶ್ಚಾತ್ಯ ಸಂಪರ್ಕ ಬೆಳೆದ ಅನಂತರ ಆಮದಾದ ಕೈಗಾರಿಕೆ ವಸ್ತುಗಳಿಂದ ಜಪಾನೀಯರು ಆಕರ್ಷಿತರಾದರು. ತಮ್ಮ ದೇಶವೂ ಆರ್ಥಿಕ ಮತ್ತು ರಕ್ಷಣಾದೃಷ್ಟಿಯಿಂದ ಬಲವಾಗಲು ಆಧುನಿಕ ಕೈಗಾರಿಕೆಗಳ ಸ್ಥಾಪನೆ ತಮ್ಮ ದೇಶದಲ್ಲೇ ಆಗಬೇಕೆಂದು ಅವರು ತೀರ್ಮಾನಿಸಿದರು. ಆದರೆ ದೇಶದಲ್ಲಿ ಆಗ ಖಾಸಗಿ ಬಂಡವಾಳ ಮತ್ತು ಉದ್ಯಮ ಸಾಹಸದ ಕೊರತೆಯಿತ್ತು ಆದ್ದರಿಂದ ಸರ್ಕಾರವೇ ಕೈಗಾರಿಕೆಗಳನ್ನು ಸ್ಥಾಪಿಸಿ, ಕ್ರಮೇಣ ಖಾಸಗಿಯವರು ಮುಂದೆ ಬಂದಾಗ ಅವರಿಗೆ ವರ್ಗಾವಣೆ ಮಾಡಲಾರಂಭಿಸಿತು. ವರ್ಗಾವಣೆಯ ಅನಂತರ ಆ ಕೈಗಾರಿಕೆಗಳಿಗೆ ಸರ್ಕಾರ ತನ್ನ ನೆರವನ್ನು ಮುಂದುವರಿಸಿತು. ರಾಷ್ಟ್ರಾಭಿವೃದ್ಧಿಗೆ ಅಗತ್ಯವೆನಿಸಿದ ಕೈಗಾರಿಕೆಗಳಿಗೆ ಸಹಾಯ ಮತ್ತು ಪ್ರೋತ್ಸಾಹ ಧನವೂ ಸಂರಕ್ಷಣೆಯೂ ಒದಗಿವೆ. ಕೈಗಾರಿಕೆಗಳಿಗೆ ಬಂಡವಾಳ ಒದಗಿಸಲು ಕೈಗಾರಿಕಾ ಬ್ಯಾಂಕುಗಳನ್ನು ಸ್ಥಾಪಿಸಿ, ಅವಶ್ಯವೆನಿಸಿದ ವಿದೇಶಿ ಬಂಡವಾಳ ಮತ್ತು ತಾಂತ್ರಿಕ ಸೌಲಭ್ಯವನ್ನು ದೊರಕಿಸಲು ಸರ್ಕಾರ ನೆರವಾಗಿದೆ. ಕೈಗಾರಿಕಾ ಸಂಶೋಧನೆಗೆ ವಿಶೇಷ ಹಣ ವೆಚ್ಚ ಮಾಡಿದೆ.

ಚೀನ, ರಷ್ಯಗಳೊಡನೆ ನಡೆದ ಯುದ್ಧಗಳೂ ಒಂದನೆಯ ಮಹಾಯುದ್ಧವೂ ಜಪಾನಿನ ಕೈಗಾರಿಕಾಭಿವೃದ್ಧಿಗೆ ವಿಶೇಷ ಅವಕಾಶ ನೀಡಿದವು. ಆದರೆ ಯುದ್ಧಾನಂತರ ಪಾಶ್ಚಾತ್ಯ ರಾಷ್ಟ್ರಗಳ ಪೈಪೋಟಿಯಿಂದ ಜಪಾನಿನ ಕೈಗಾರಿಕಾ ವಸ್ತುಗಳಿಗೆ ಬೇಡಿಕೆ ಇಳಿಯಿತು. 1923ರ ಭೂಕಂಪದಿಂದ ಕೈಗಾರಿಕಾಗಳಿಗೆ ಅಪಾರ ನಷ್ಟವುಂಟಾಯಿತು. 1929ರ ಆರ್ಥಿಕ ಮುಗ್ಗಟ್ಟಿನಿಂದ ಕೈಗಾರಿಕೆಗಳು ಕಷ್ಟಕ್ಕೀಡಾದುವು. ದೇಶದಲ್ಲಿ ನಿರುದ್ಯೋಗದ ಪ್ರಮಾಣ ಹೆಚ್ಚಿತು.

ಆಗ ಸರ್ಕಾರ ಕೈಗಾರಿಕೆಗಳನ್ನು ಪುನಶ್ಚೇತನಗೊಳಿಸಲು ಕೈಗೊಂಡ ಕ್ರಮಗಳೆಂದರೆ ಬೃಹತ್ ಕೈಗಾರಿಕೆಗಳ ಉತ್ಪನ್ನದ ನಿಯಂತ್ರಣ ಮತ್ತು ಬೆಲೆಗಳ ನಿಗದಿ. ಕೈಗಾರಿಕೆಗಳ ಆಧುನೀಕರಣವನ್ನು ಪ್ರೋತ್ಸಾಹಿಸಿ, ರಫ್ತು ಕೈಗಾರಿಕೆಗಳನ್ನು ಕೇಂದ್ರೀಯ ಹತೋಟಿಗೆ ಒಳಪಡಿಸಲಾಯಿತು. ರೇಷ್ಮೆ ಕೈಗಾರಿಕೆಗೆ ಸಹಾಯಧನ ನೀಡಿತು. ಅಗ್ಗದ ನೀತಿಗೆ ಅನುಗುಣವಾಗಿ ಯೆನ್‍ನ ಮೌಲ್ಯಛೇದನ ಮಾಡಿತು.

ಈ ಕಾರ್ಯಕ್ರಮಗಳಿಂದ ಜಪಾನಿನಲ್ಲಿ ಇತರ ದೇಶಗಳಿಗಿಂತಲೂ ಮುಂಚೆಯೇ ಕೈಗಾರಿಕೆಗಳು ಚೇತರಿಸಿಕೊಂಡುವು. ವಿಶ್ವಮಾರುಕಟ್ಟೆಯಲ್ಲಿ ಜಪಾನಿನ ಪೈಪೋಟಿ ತೀವ್ರಗೊಂಡಿತು. ಇದರಿಂದ ತೊಂದರೆಗೊಳಗಾದ ಬ್ರಿಟನ್ ಮುಂತಾದ ದೇಶಗಳು ಜಪಾನನ್ನು ಕಾರ್ಮಿಕ ಶೋಷಣೆ ಮತ್ತು ಆಯುಕ್ತ ವ್ಯಾಪಾರ ನಡವಳಿಕೆಯ ದೇಶವೆಂದು ದೂಷಿಸಿದುವು. ಜಪಾನಿನ ಕೈಗಾರಿಕೆಗಳ ಉತ್ತಮ ವ್ಯವಸ್ಥೆ, ಕಾರ್ಮಿಕರ ನಿಷ್ಠಾವಂತ ಸೇವೆ ಮತ್ತು ದೇಶಪ್ರೇಮ, ಸರ್ಕಾರದ ಸತತ ಸಹಾಯ ಮತ್ತು ಪ್ರೋತ್ಸಾಹ ಹಾಗೂ ಕೆಲವು ಸ್ಥಳೀಯ ಸೌಲಭ್ಯಗಳು-ಇವೂ ಜಪಾನಿನ ಕೈಗಾರಿಕೆಗಳ ಚೇತರಿಕೆಗೆ ಕಾರಣ.

ಜಪಾನಿನ ಉದ್ಯಮಗಳು ಜೈಬಟ್ಸು ಎಂಬ ಉದ್ಯಮಿ ಕುಟುಂಬಗಳ ಒಡೆತನಕ್ಕೆ ಒಳಪಟ್ಟಿದ್ದುವು. ಮಿತ್ಸುಯಿ, ಮಿತ್ಸುಬಿಷಿ, ಸುಮಿಟೋಮೊ, ಯಾಸುಡೊ ಎಂಬವು ಇವುಗಳಲ್ಲಿ ಮುಖ್ಯವಾದವು. ಇವು ಕೈಗಾರಿಕೆ ಮಾತ್ರವಲ್ಲದೆ ವಾಣಿಜ್ಯ, ಬ್ಯಾಂಕಿಂಗ್, ನೌಕೋದ್ಯಮ ಮುಂತಾದ ಇತರೆ ಕ್ಷೇತ್ರಗಳನ್ನೂ ಕೇಂದ್ರೀಕರಿಸಿ, ಅವುಗಳ ಏಕಸ್ವಾಮ್ಯ ಪಡೆದಿದ್ದುವು. ಇವುಗಳ ಪೈಪೋಟಿಯನ್ನೆದುರಿಸುವುದು ಇತರ ಸಂಸ್ಥೆಗಳಿಗೆ ಬಹಳ ಕಷ್ಟವಾಗಿತ್ತು. ಜಪಾನನ್ನು ಎರಡನೆಯ ಮಹಾಯುದ್ಧಕ್ಕೆ ಎಳೆಯಲು ಇವು ಮುಖ್ಯ ಕಾರಣ.

ಜಪಾನಿನ ಕೈಗಾರಿಕಾ ಕ್ಷೇತ್ರದಲ್ಲಿ ಸಣ್ಣ ಕೈಗಾರಿಕೆಗಳ ಪಾತ್ರ ಪ್ರಶಂಸನೀಯವಾದ್ದು. ಇವು ವಿದ್ಯುಚ್ಛಕ್ತಿ ಮತ್ತು ಸಣ್ಣ ಯಂತ್ರಗಳನ್ನು ಉಪಯೋಗಿಸಿ ಅತ್ಯಂತ ದಕ್ಷತೆಯಿಂದ ಕೆಲಸ ಮಾಡುತ್ತಿವೆ. ಸಣ್ಣ ಕೈಗಾರಿಕೆಗಳೂ ಬೃಹತ್ ಕೈಗಾರಿಕೆಗಳೂ ಪರಸ್ಪರ ಪೂರಕವಾಗಿ ಬೆಳೆಯಲು ಬೃಹತ್ ಕೈಗಾರಿಕೆಗಳಂತೆ ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೂ ಸರ್ಕಾರ ಎಲ್ಲ ಬಗೆಯ ಸಹಾಯ ನೀಡಿದೆ.

ಹೀಗೆ ಹೆಮ್ಮೆ ಪಡಬಹುದಾದ ಜಪಾನಿನ ಕೈಗಾರಿಕಾ ಪ್ರಗತಿ ದುರಭಿಮಾನಕ್ಕೆ ಎಡೆ ಕೊಟ್ಟಿತು. ಬೆಳೆಯುತ್ತಿದ್ದ ಆರ್ಥಿಕ ವ್ಯವಸ್ಥೆ ರಾಜ್ಯವಿಸ್ತರಣಾಕಾಂಕ್ಷೆಗೆ ಎಡೆಕೊಟ್ಟಿತು. ಅದು ಆಕ್ರಮಣಶೀಲವಾಯಿತು. ಹಗುರವಾದ ಮತ್ತು ಗ್ರಾಹಕ ವಸ್ತುಗಳಿಗೆ ಪ್ರತಿಯಾಗಿ ಭಾರವಾದ ಉತ್ಪಾದಕ ವಸ್ತುಗಳ ಮತ್ತು ಯುದ್ಧ ಸಲಕರಣೆಗಳ ತಯಾರಿಕೆಗೆ ಪ್ರಾಮುಖ್ಯ ಏರ್ಪಟ್ಟಿತು. ಉಕ್ಕು, ವಿಮಾನಗಳು, ಟ್ರಕ್ಕುಗಳು, ಯುದ್ಧನೌಕೆಗಳು ಮುಂತಾದವುಗಳ ಉತ್ಪಾದನೆ ಅತ್ಯುನ್ನತ ಮಟ್ಟಕ್ಕೇರಿತು.

ಎರಡನೆಯ ಮಹಾಯುದ್ಧದ ಕಾಲದಲ್ಲಿ ಜಪಾನಿನ ಕೈಗಾರಿಕೆಗಳು ಸರ್ಕಾರದ ಭದ್ರ ಹತೋಟಿಗೆ ಒಳಗಾದುವು. ಕಾರ್ಮಿಕರು ಸರ್ಕಾರದ ನಿರ್ದೇಶನದಂತೆ ಕೆಲಸ ಮಾಡುವಂತೆ ಒತ್ತಾಯ ಮಾಡಲಾಯಿತು. ಯುದ್ಧ ಮುಂದುವರಿದಂತೆ ಆರ್ಥಿಕ ವ್ಯವಸ್ಥೆಯ ಮೇಲೆ ಒತ್ತಡ ಹೆಚ್ಚಿತು. ಕೈಗಾರಿಕೆಗಳು ಬಾಂಬು ದಾಳಿಯಿಂದ ಬಹುಮಟ್ಟಿಗೆ ನಾಶವಾದುವು.

ಯುದ್ಧಾನಂತರ ಮಿತ್ರರಾಷ್ಟ್ರಗಳ ಆಡಳಿತ ಜೈಬಟ್ಸುಗಳನ್ನು ಒಡೆಯಲೇರ್ಪಡಿಸಿ, ಅವುಗಳ ಸಂಸ್ಥೆಗಳ ಷೇರುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಿಸಿತು. 10 ಭಾರಿ ಉದ್ಯಮಿ ಕುಟುಂಬಗಳು ಇನ್ನು 10 ವರ್ಷಗಳ ಕಾಲ ಕೈಗಾರಿಕಾ ಕ್ಷೇತ್ರಕ್ಕೆ ಪ್ರವೇಶಿಸಕೂಡದೆಂದು ನಿರ್ಬಂಧ ಹಾಕಿತು. ಅವುಗಳ ಮೇಲೆ ಅತ್ಯಧಿಕ ಮಟ್ಟದ ತೆರಿಗೆಗಳನ್ನು ಹಾಕಿತು. ಆರ್ಥಿಕ ವಿಕೇಂದ್ರೀಕರಣವೇ ಈ ನಿರ್ಬಂಧಗಳ ಉದ್ದೇಶವೆಂದು ಜನರಲ್ ಮೆಕಾರ್ಥರನ ಸರ್ಕಾರ ಹೇಳಿದರೂ, ಜಪಾನಿನ ಕೈಗಾರಿಕಾ ಪ್ರಾಬಲ್ಯವನ್ನಡಗಿಸಬೇಕೆಂಬುದೇ ಇದರ ಉದ್ದೇಶವೆಂದು ಜಪಾನೀಯರು ಭಾವಿಸಿದರು. ಈ ನಿರ್ಬಂಧಗಳಿಂದ ಉತ್ಪಾದನೆ ಇಳಿಯಿತು. ಇದರಿಂದ ಎಚ್ಚರಗೊಂಡ ಸರ್ಕಾರ, ಆಗ್ನೇಯ ಏಷ್ಯದಲ್ಲಿ ಕಮ್ಯೂನಿಸ್ಟ್ ಪ್ರಾಬಲ್ಯವನ್ನು ತಡೆಯಲು ಜಪಾನು ಬಲವಾದ ಕೈಗಾರಿಕಾ ರಾಷ್ಟ್ರವಾಗಿದ್ದರೆ ಒಳ್ಳೆಯದೆಂದು ಭಾವಿಸಿ, ಕೇವಲ 2 ವರ್ಷಗಳಲ್ಲೇ ತನ್ನ ಜೈಬಟ್ಸು ವಿರೋಧಿ ನೀತಿಯನ್ನು ಕೈಬಿಟ್ಟಿತು. ಅವುಗಳ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಿತು. ಜೈಬಟ್ಸು ಕಂಪೆನಿಗಳು ಶೀಘ್ರವೇ ಒಟ್ಟುಗೂಡಿ, ಮತ್ತೆ ತಮ್ಮ ಪ್ರಾಧಾನ್ಯವನ್ನು ಸ್ಥಾಪಿಸಿಕೊಂಡುವು.

ಕೊರಿಯ ಯುದ್ಧ ಜಪಾನಿನ ಕೈಗಾರಿಕಾ ವಿಸ್ತರಣೆಗೆ ಮತ್ತಷ್ಟು ಅವಕಾಶ ನೀಡಿತು. 1960ರ ವೇಳೆಗೆ ಪಶ್ಚಿಮ ಜರ್ಮನಿಯಂತೆ ಜಪಾನು ಕೂಡ ಮಹಾ ಕೈಗಾರಿಕಾ ರಾಷ್ಟ್ರವಾಗಿ ಪುನಃ ತಲೆಯೆತ್ತಿತು. ಜವಳಿ, ಕಾಗದ, ಉಕ್ಕು, ನೌಕೋದ್ಯಮ, ಮೋಟಾರು ತಯಾರಿಕೆ, ರೇಡಿಯೋ, ಟೆಲಿವಿಷನ್, ಪ್ಲಾಸ್ಟಿಕ್ಸ್, ಭಾರವಾದ ವಿದ್ಯುದ್ಯಂತ್ರಗಳು, ರಾಸಾಯನಿಕ ವಸ್ತುಗಳು, ಕೃತಕ ಗೊಬ್ಬರ ಮುಂತಾದ ಅನೇಕ ಕೈಗಾರಿಕೆಗಳು ಅದ್ಭುತ ಪ್ರಗತಿ ಸಾಧಿಸಿವೆ.

ಮುಂದಿನ ಕಾಲು ಶತಮಾನದ ಕೈಗಾರಿಕಾಭಿವೃದ್ಧಿಗೆ ಜಪಾನು ಈಗಾಗಲೇ ಸಜ್ಜಾಗುತ್ತಿದೆ. ವಿಶ್ವಾದ್ಯಂತ ಇಂಧನ ಮತ್ತು ಕಚ್ಚಾ ಪದಾರ್ಥಗಳ ಕೊರತೆ ಇರುವುದರಿಂದ, ಕಬ್ಬಿಣದ ಅದುರು ಮತ್ತು ಕಲ್ಲಿದ್ದಲಿನ ಆಮದಿಗಾಗಿ ಅನೇಕ ದೇಶಗಳೊಡನೆ ಅದು ದೀರ್ಘಾವಧಿ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದೆ. ಇನ್ನು ಕೆಲವು ಲೋಹಗಳು ಮತ್ತು ಖನಿಜಗಳನ್ನು ಪಡೆಯಲು ಕೆಲವು ವಿದೇಶೀ ಗಣಿ ಕಂಪನಿಗಳಲ್ಲಿ ಬಂಡವಾಳ ಹೂಡಿದೆ. ಇದೇ ಉದ್ದೇಶಕ್ಕಾಗಿಯೇ ಕೆಲವು ದೇಶಗಳಿಗೆ ಆರ್ಥಿಕ ನೆರವು ನೀಡಿದೆ. ಉತ್ಪಾದನ ಕ್ರಮಗಳನ್ನು ಉತ್ತಮಪಡಿಸಲು ಕೆಲವು ಐರೋಪ್ಯ ರಾಷ್ಟ್ರಗಳೊಡನೆ ತಾಂತ್ರಿಕ ಒಪ್ಪಂದಗಳನ್ನು ಮಾಡಿಕೊಂಡಿದೆ. ಜಪಾನ್ ಈಗಾಗಲೆ ಪೂರ್ಣೋದ್ಯೋಗ ಮಟ್ಟವನ್ನು ಮೀರಿದೆ. ಕಾರ್ಮಿಕರ ಅಭಾವ ಮತ್ತು ಅಧಿಕ ವೇತನ ಮಟ್ಟ ಅಲ್ಲಿಯ ಕೈಗಾರಿಕೆಗಳಿಗೆ ದೊಡ್ಡ ಸಮಸ್ಯೆ. ಇದನ್ನು ಪರಿಹರಿಸಲು ದಕ್ಷ ಹಾಗೂ ಅಗ್ಗದ ಕಾರ್ಮಿಕ ಬಲ ಅಧಿಕ ಪ್ರಮಾಣದಲ್ಲಿರುವ ಭಾರತದಂಥ ದೇಶಗಳ ಸಹವರ್ತಿಯಾಗಿ, ತನ್ನ ಕೆಲವು ಕೈಗಾರಿಕೆಗಳನ್ನು ಅಲ್ಲಿಗೆ ಸ್ಥಳಾಂತರಿಸಲೂ ಹೊಸ ಉದ್ಯಮಗಳನ್ನು ಸಂಯುಕ್ತ ಉದ್ಯಮಗಳಾಗಿ ಅಲ್ಲಿ ಸ್ಥಾಪಿಸಲೂ ಪ್ರಯತ್ನಿಸುತ್ತಿದೆ. ಇನ್ನು ಮುಂದೆ ಈವರೆಗಿನ ಸಾಂಪ್ರದಾಯಿಕ ಕೈಗಾರಿಕೆಗಳಿಗೆ ಪ್ರತಿಯಾಗಿ ಕಂಪ್ಯೂಟರುಗಳು, ಸಂಪರ್ಕ ಸಾಧನಗಳು, ಪೆಟ್ರೊ ರಾಸಾಯನಿಕ ಕೈಗಾರಿಕೆಗಳು ಮುಂತಾದ ಬಂಡವಾಳ ಪ್ರಧಾನವಾದ ಅತ್ಯಾಧುನಿಕ ಕೈಗಾರಿಕೆಗಳಿಗೆ ಜಪಾನು ಹೆಚ್ಚು ಗಮನ ಕೊಡುವ ನಿರೀಕ್ಷೆಯುಂಟು. ಕೈಗಾರಿಕೆಗಳು ದಕ್ಷಿಣದ ಕೆಲವೇ ಪಟ್ಟಣಗಳಲ್ಲಿ ಕೇಂದ್ರೀಕರಿಸುವುದನ್ನು ತಪ್ಪಿಸಲು, 1973-78ರ ಅವಧಿಯಲ್ಲಿ ಇನ್ನು ಕೆಲವು ಪ್ರದೇಶಗಳನ್ನು ಅಭಿವೃದ್ಧಿಪಡಿಸಿ, ಅಲ್ಲಿಗೆ ಹೋಗುವ ಕೈಗಾರಿಕೆಗಳಿಗೆ ಹಣಕಾಸಿನ ಪ್ರೋತ್ಸಾಹ ನೀಡುವುದಲ್ಲದೆ, ಹಾಗೆ ಹೋಗಲು ಹಿಂದೆಗೆಯುವ ಕೈಗಾರಿಕೆಗಳ ಮೇಲೆ ತೆರಿಗೆ ವಿಧಿಸಲು ಉದ್ದೇಶಿಸಿದೆ. ಇದರಿಂದ ಕೈಗಾರಿಕಾ ವಿಕೇಂದ್ರೀಕರಣವಾಗುವುದೆಂದು ನಿರೀಕ್ಷೆ.

ಜಪಾನಿನಲ್ಲಿ ಕಾರ್ಮಿಕ ಸಂಘಟನೆ ಇತರ ಕೈಗಾರಿಕಾ ರಾಷ್ಟ್ರಗಳಷ್ಟು ಬಲಗೊಂಡಿಲ್ಲ. 1972ರಲ್ಲಿ ಜಪಾನಿನಲ್ಲಿ ಶÉೀ. 34ರಷ್ಟು ಕಾರ್ಮಿಕರು ಮಾತ್ರ ಸಂಘಟಿತರಾಗಿದ್ದರು. ಶೇ. 60ರಷ್ಟು ಕಾರ್ಮಿಕರು ಖಾಸಗಿ ಉದ್ಯಮಗಳಲ್ಲಿದ್ದರು. ಜಪಾನಿನಲ್ಲಿ ವೃತ್ತಿಗೊಂದು ಸಂಘ ಎಂಬ ನಿಯಮಕ್ಕೆ ಪ್ರತಿಯಾಗಿ ಸಂಸ್ಥೆಗೊಂದು ಸಂಘ ಎಂಬ ಪದ್ಧತಿ ಇದೆ. ನಾಲ್ಕು ರಾಷ್ಟ್ರೀಯ ಕಾರ್ಮಿಕ ಸಂಸ್ಥೆಗಳುಂಟು. ಸರ್ಕಾರಿ ಉದ್ಯಮಗಳಲ್ಲಿ ಮುಷ್ಕರಗಳು ಕಾನೂನುಬಾಹಿರ. ಜಪಾನೀ ಉದ್ಯಮಗಳಲ್ಲಿ ಈಗ ಇರುವ 42.3 ಗಂಟೆಯ ದುಡಿಮೆ ಅವಧಿಯನ್ನು ಮತ್ತಷ್ಟು ಇಳಿಸಿ, ವಾರಕ್ಕೆ 5 ದುಡಿಮೆಯ ದಿನಗಳು ಮಾತ್ರ ಇರುವಂತೆ ಮಾಡಲು ಒತ್ತಾಯ ಮಾಡಲಾಗುತ್ತಿದೆ. ವೇತನ ಮಟ್ಟ ಕಳೆದ 10 ವರ್ಷಗಳಲ್ಲಿ ಶೇ. 240ರಷ್ಟು ಹೆಚ್ಚಿದೆ. ಜೊತೆಗೆ ಉತ್ಪಾದನೆಯ ಮಟ್ಟವೂ ಹೆಚ್ಚಿರುವುದು ಗಮನಾರ್ಹ. ನಿರುದ್ಯೋಗ ಶೇ. 1.4ರಷ್ಟು ಮಾತ್ರ. ಕಾರ್ಮಿಕರ ನಿವೃತ್ತಿ ವಯೋಮಿತಿ 55 ವರ್ಷ. ಕಾರ್ಮಿಕರ ತೀವ್ರ ಅಭಾವವಿರುವುದರಿಂದ ಇದನ್ನು ಕ್ರಮಕ್ರಮವಾಗಿ 60 ವರ್ಷಗಳಿಗೆ ಹೆಚ್ಚಿಸುವ ಪ್ರಯತ್ನ ನಡೆಯುತ್ತಿದೆ. ಜಪಾನೀ ಕಾರ್ಮಿಕನ ಸರಾಸರಿ ತಿಂಗಳ ವೇತನ (ಬೋನಸ್ಸೂ ಸೇರಿ) 99,000 ಯೆನ್ ಅಥವಾ ರೂ. 2,828. ಸಾಮಾಜಿಕ ಭದ್ರತಾ ಕಾರ್ಯಕ್ರಮಗಳಿಗೆ ಈಗ ರಾಷ್ಟ್ರಾದಾಯದ ಶೇ. 5ರಷ್ಟನ್ನು ಉಪಯೋಗಿಸಲಾಗುತ್ತಿದೆ. 1978ರ ವೇಳೆಗೆ ಇದು ರಾಷ್ಟ್ರಾದಾಯದ ಶೇ. 7.3ರಷ್ಟಕ್ಕೆ ಹೆಚ್ಚುವ ನಿರೀಕ್ಷೆಯಿದೆ.

ವಿದೇಶೀ ವ್ಯಾಪಾರ[ಬದಲಾಯಿಸಿ]

ವಿದೇಶೀ ಸಂಪರ್ಕ ಪ್ರಾರಂಭವಾದ ತರುಣದಲ್ಲಿ ಜಪಾನು ಕೃಷಿವಸ್ತುಗಳನ್ನು ರಫ್ತು ಮಾಡಿ, ಕೈಗಾರಿಕಾ ಸಿದ್ಧವಸ್ತುಗಳನ್ನು ಆಮದು ಮಾಡಿಕೊಳ್ಳುತ್ತಿತ್ತು. ಕಾಲಕ್ರಮದಲ್ಲಿ ಜಪಾನಿನಲ್ಲೇ ಕೈಗಾರಿಕೆಗಳು ಪ್ರಾರಂಭವಾದಾಗ ಅದು ಕಚ್ಚಾಸಾಮಗ್ರಿಯನ್ನೂ ಬಂಡವಾಳ ವಸ್ತುಗಳನ್ನೂ ಆಮದು ಮಾಡಿಕೊಳ್ಳಬೇಕಾಯಿತು. ಜನಸಂಖ್ಯೆ ಹೆಚ್ಚಿದಂತೆ, ಆಹಾರ ಪದಾರ್ಥಗಳ ಆಮದೂ ಅಗತ್ಯವಾಯಿತು. ಇದಕ್ಕೆ ಪ್ರತಿಯಾಗಿ ಅನುಭೋಗ ವಸ್ತುಗಳು, ಕರಕುಶಲ ವಸುಗಳು, ರೇಷ್ಮೆ, ಪಿಂಗಾಣಿ ಸಾಮಾನುಗಳು ಮುಂತಾದವನ್ನು ರಫ್ತುಮಾಡತೊಡಗಿತು. ವ್ಯಾಪಾರ ನಡೆಯುತ್ತಿದ್ದದ್ದು ಬಹಳಮಟ್ಟಿಗೆ ಏಷ್ಯ ಮತ್ತು ಅಮೆರಿಕಗಳೊಡನೆ.

ಒಂದನೆಯ ಮಹಾಯುದ್ಧದ ಸಮಯದಲ್ಲಿ ಪಾಶ್ಚಾತ್ಯ ಪೈಪೋಟಿ ಇಲ್ಲದಿದ್ದುದರಿಂದ ಜಪಾನಿನ ವ್ಯಾಪಾರ ವಿಸ್ತರಿಸಿತು. ಆದರೆ ಯುದ್ಧಾನಂತರ ಪೈಪೋಟಿ ಪ್ರಾರಂಭವಾಯಿತು. 1923ರ ಭೂಕಂಪ ಮತ್ತು 1929ರ ಆರ್ಥಿಕ ಮುಗ್ಗಟ್ಟು ಜಪಾನಿನ ವ್ಯಾಪಾರಕ್ಕೆ ಧಕ್ಕೆಯುಂಟುಮಾಡಿದುವು. ಆದರೆ ಸರ್ಕಾರ ಕೈಗಾರಿಕೆಗಳ ಆಧುನೀಕರಣ ಮತ್ತು ಸರಕುಗಳ ರಫ್ತಿಗೆ ಪ್ರೋತ್ಸಾಹ ನೀಡಿದ್ದರಿಂದ, ಇತರ ರಾಷ್ಟ್ರಗಳಿಗಿಂತ ಮುಂಚೆಯೇ ಜಪಾನಿನ ವಿದೇಶೀ ವ್ಯಾಪಾರ ಚೇತರಿಸಿಕೊಂಡಿತು. ಹತ್ತಿ ಜವಳಿ ವ್ಯಾಪಾರದಲ್ಲಿ ಜಪಾನು ಬ್ರಿಟನ್ನಿಗೆ ಪ್ರಬಲ ಪ್ರತಿಸ್ಪರ್ಧಿಯಾಯಿತು. ಯುದ್ಧಕಾಲದಲ್ಲಿ ವಿದೇಶೀ ವ್ಯಾಪಾರ ಸಂಪೂರ್ಣವಾಗಿ ಸರ್ಕಾರದ ಹತೋಟಿಗೆ ಒಳಗಾಯಿತು.

ಯುದ್ಧಾನಂತರ 2 ವರ್ಷ ವಿದೇಶೀ ವ್ಯಾಪಾರದ ಮೇಲೆ ಸರ್ಕಾರದ ನಿರ್ಬಂಧವಿತ್ತು. ಆ ಬಳಿಕ ನಿರ್ಬಂಧಗಳನ್ನು ತೆಗೆದು ಮೊದಲಿನಂತೆ ಖಾಸಗಿಯವರಿಗೇ ಬಿಡಲಾಯಿತು. ಅಮೆರಿಕ ಯುದ್ಧ ಪರಿಹಾರವನ್ನು ಕೇಳುವುದಕ್ಕೆ ಪ್ರತಿಯಾಗಿ ತಾನೇ 200 ಕೋಟಿ ಡಾಲರ್ ನೆರವನ್ನು ಬಹುಮಟ್ಟಿಗೆ ಧಾನ್ಯರೂಪದಲ್ಲಿ ನೀಡಿತು. ಕಚ್ಚಾಸಾಮಗ್ರಿಯ ಆಮದಿಗೂ ಅಧಿಕ ಪ್ರಮಾಣದಲ್ಲಿ ಧನಸಹಾಯ ಮಾಡಿತು. ಜಪಾನಿನಲ್ಲಿದ್ದ ಅಮೆರಿಕದ ಪಡೆಗಳಿಗೆ ಬೇಕಿದ್ದ ಸಾಮಗ್ರಿಗಳನ್ನು ಜಪಾನಿನಲ್ಲೇ ಕೊಳ್ಳಲಾಯಿತು. ಇದಕ್ಕಾಗಿ 1952ರಿಂದ 1956ರ ವರೆಗೆ ಜಪಾನಿಗೆ 340 ಕೋಟಿ ಡಾಲರ್ ಕೊಡಲಾಯಿತು.

ಈ ಸಹಾಯಕ ಕ್ರಮಗಳಿಂದ ಜಪಾನು ವಿದೇಶಿ ವ್ಯಾಪಾರದಲ್ಲಿ ತನ್ನ ಯುದ್ಧಪೂರ್ವದ ಸ್ಥಾನ ಗಳಿಸಿತು. ಯುದ್ಧಕಾಲದಲ್ಲಿ ತೆರವು ಮಾಡಿದ್ದ ಏಷ್ಯನ್ ಮತ್ತು ಆಫ್ರಿಕನ್ ಮಾರುಕಟ್ಟೆಗಳಿಗೆ ಪುನಃ ಯಶಸ್ವಿಯಾಗಿ ಪ್ರವೇಶಿಸಿತು. ಅಮೆರಿಕವನ್ನು ಅತಿಯಾಗಿ ಅವಲಂಬಿಸದೆ ಇತರ ದೇಶಗಳೊಡನೆಯೂ ವ್ಯಾಪಾರಸಂಬಂಧವನ್ನು ಕುದುರಿಸಿಕೊಳ್ಳಲು ಉಪಕ್ರಮಿಸಿತು. ಈ ಪ್ರಯತ್ನದ ಫಲವಾಗಿ ಜಪಾನಿನ ವಿದೇಶೀ ವ್ಯಾಪಾರ ಅಭಿವೃದ್ಧಿ ಹೊಂದಿತು. 1972ರಲ್ಲಿ ಅದರ ರಫ್ತು 2,475.8 ಕೋಟಿ ಡಾಲರ್, ಆಮದು 1,620.6 ಕೋಟಿ ಡಾಲರ್; ವ್ಯಾಪಾರ ಹೆಚ್ಚಳ 855,2 ಕೋಟಿ ಡಾಲರ್.

ಈ ಹೆಚ್ಚಳದ ಪ್ರವೃತ್ತಿ ಹಲವು ವರ್ಷಗಳಿಂದಲೂ ಮುಂದುವರಿಯುತ್ತಿದ್ದುದರಿಂದ ಜಪಾನಿನೊಡನೆ ವಿಶೇಷ ವ್ಯಾಪಾರಸಂಬಂಧ ಹೊಂದಿದ್ದ ಅಮೆರಿಕ ಬಿಕ್ಕಟ್ಟನ್ನೆದುರಿಸಬೇಕಾಯಿತು. ಈ ಬಿಕ್ಕಟ್ಟಿನ ಪರಿಹಾರಕ್ಕಾಗಿ ಜಪಾನು ಯೆನ್ ಮೌಲ್ಯವನ್ನು ಅಧಿಕಗೊಳಿಸಿ, ಆ ಮೂಲಕ ಆಮದನ್ನು ಹೆಚ್ಚಿಸಿ, ರಫ್ತನ್ನು ಕಡಿಮೆ ಮಾಡಲು ಪ್ರಯತ್ನಿಸಿದೆ. ಇಷ್ಟರಿಂದಲೇ ವ್ಯಾಪಾರ ಸಮಸ್ಯೆ ಬಗೆಹರಿಯದೆಂದರಿತು ಮುಂದಿನ 5 ವರ್ಷಗಳಲ್ಲಿ ರಫ್ತು ಪ್ರಚೋದನೆಗೆ ಬದಲು ಜಪಾನಿನ ಜನಜೀವನವನ್ನು ಉತ್ತಮಪಡಿಸುವ ಕಾರ್ಯಕ್ರಮಕ್ಕೆ ಹೆಚ್ಚು ಗಮನ ಕೊಡಲು ನಿರ್ಧರಿಸಿದೆ. ಈ ಅಭಿವೃದ್ಧಿ ಯೋಜನೆಗೆ ತನ್ನ ರಾಷ್ಟ್ರದಾಯದ ಶೇ. 12.6ರಷ್ಟನ್ನು ಉಪಯೋಗಿಸಲು ಉದ್ದೇಶಿಸಿದೆ. ವಿಶ್ವಬ್ಯಾಂಕು, ಅಂತರರಾಷ್ಟ್ರೀಯ ಹಣ ನಿಧಿ ಮತ್ತು ಏಷ್ಯದ ಅಭಿವೃದ್ಧಿ ಬ್ಯಾಂಕಿನ ಮೂಲಕ ಹಿಂದುಳಿದ ರಾಷ್ಟ್ರಗಳ ಅಭಿವೃದ್ಧಿಗೂ ನೆರವಾಗುತ್ತಿದೆ. ಆದರೆ 1973ರಲ್ಲಿ ಸಂಭವಿಸಿದ ತೈಲ ಬಿಕ್ಕಟ್ಟಿನಿಂದಾಗಿ ಮತ್ತು ಅಂತರರಾಷ್ಟ್ರೀಯ ಹಣವ್ಯವಸ್ಥೆಯ ಅಸ್ಥಿರತೆಯಿಂದಾಗಿ ಜಪಾನಿನ ಆರ್ಥಿಕತೆಯ ಮೇಲೂ ತೀವ್ರ ಪರಿಣಾಮಗಳುಂಟಾಗಿವೆ.

ಸಾರಿಗೆ[ಬದಲಾಯಿಸಿ]

ರಸ್ತೆಸಾರಿಗೆ[ಬದಲಾಯಿಸಿ]

ಮೇಜಿ ಅಧಿಕಾರ ಬರುವ ವೇಳೆಗೆ ರಕ್ಷಣೆಗೆ ಅಗತ್ಯವಾದ ಕೆಲವು ಹೆದ್ದಾರಿಗಳು ಮಾತ್ರ ಇದ್ದುವು. ಆದ್ದರಿಂದ ಮೇಜಿ ಆಳ್ವಿಕೆಯಲ್ಲಿ ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿಗಳು, ಜಿಲ್ಲಾ ಹಾಗೂ ಸ್ಥಳೀಯ ರಸ್ತೆಗಳು ಎಂದು ವಿಂಗಡಿಸಿ, ಹೆದ್ದಾರಿಗಳ ನಿರ್ಮಾಣಕ್ಕಾಗಿ ಸಾರ್ವಜನಿಕ ಸಾಲ ಎತ್ತಲಾಯಿತು. 1950ರ ವೇಳೆಗೆ 6 ಲಕ್ಷ ಮೈ. ರಸ್ತೆಗಳಿದ್ದರೂ ಅವುಗಳಲ್ಲಿ 15,000 ಮೈ. ಮಾತ್ರ ಹೆದ್ದಾರಿಗಳಾಗಿದ್ದುವು. ಸಮುದ್ರಸಾಮೀಪ್ಯವಿರುವುದರಿಂದ ಜಪಾನಿನಲ್ಲಿ ರಸ್ತೆಗಳ ಅಭಿವೃದ್ಧಿಗೆ ಸಾರ್ವಜನಿಕ ಒತ್ತಾಯ ಅಷ್ಟಾಗಿ ಇಲ್ಲ. ಆದರೂ ಮೋಟಾರು ಕೈಗಾರಿಕೆ ಅದ್ಭುತ ಪ್ರಗತಿ ಸಾಧಿಸಿದೆ. ವಾಣಿಜ್ಯ ವಾಹನಗಳನ್ನು ತಯಾರಿಸುವ ದೇಶಗಳಲ್ಲಿ ಜಪಾನಿನದು ಪ್ರಥಮ ಸ್ಥಾನ. ಅವು ಬಹು ಮಟ್ಟಿಗೆ ರಫ್ತಾಗುತ್ತವೆ.

ರೈಲು ಸಾರಿಗೆ[ಬದಲಾಯಿಸಿ]

1869ರಲ್ಲಿ ಜಪಾನ್ ಸರ್ಕಾರ ಕ್ಷಾಮ ನಿವಾರಣೆಗೆಂದು ರೈಲು ನಿರ್ಮಾಣ ಕಾರ್ಯ ಪ್ರಾರಂಭಿಸಿತು. ಇದಕ್ಕಾಗಿ ಇಂಗ್ಲೆಂಡಿನಲ್ಲಿ ಹತ್ತು ಲಕ್ಷ ಪೌಂಡ್ ಸಾಲವೆತ್ತಿ, ಅಲ್ಲಿಂದಲೇ ರೈಲ್ವೆ ಸಲಕರಣೆಗಳು ಮತ್ತು ತಾಂತ್ರಿಕ ಸಿಬ್ಬಂದಿಯನ್ನು ಪಡೆಯಲಾಯಿತು. 1872ರಲ್ಲಿ ಟೋಕಿಯೋ ವiತ್ತು ಯೋಕಹಾಮಾ ನಡುವೆ ಪ್ರಥಮ ರೈಲುಮಾರ್ಗ ನಿರ್ಮಿಸಲಾಯಿತು. 1880ರ ವೇಳೆಗೆ ಖಾಸಗಿ ಕಂಪೆನಿಗಳೂ ರೈಲುಮಾರ್ಗ ನಿರ್ಮಾಣ ಕಾರ್ಯದಲ್ಲಿ ಆಸಕ್ತಿ ವಹಿಸಿದುವು. ಕಂಪೆನಿಗಳು ಹೆಚ್ಚಿದಂತೆ ಅವುಗಳಲ್ಲಿ ಪರಸ್ಪರ ಹೊಂದಾವಣೆ ಕಷ್ಟವಾಯಿತು. ಅನೇಕ ಅನಗತ್ಯ ರೈಲುಮಾರ್ಗಗಳು ನಿರ್ಮಾಣವಾದುವು. ನಷ್ಟ ಉಂಟಾಯಿತು. ಆದ್ದರಿಂದ 1906ರಲ್ಲಿ ಪ್ರಮುಖ ರೈಲುಮಾರ್ಗಗಳನ್ನು ಸರ್ಕಾರವೇ ವಹಿಸಿಕೊಂಡು, ಉಪಮಾರ್ಗಗಳನ್ನು ಮಾತ್ರ ಖಾಸಗಿಯವರಿಗೆ ಬಿಟ್ಟಿತು. ಎರಡನೆಯ ಮಹಾಯುದ್ಧಕ್ಕೆ ಮುಂಚೆ ಜಪಾನಿನಲ್ಲಿ 17,000 ಮೈ. ರೈಲುಮಾರ್ಗಗಳು ಸರ್ಕಾರಕ್ಕೂ 7,000 ಮೈ. ಖಾಸಗಿ ಒಡೆತನಗಳಿಗೂ ಸೇರಿದ್ದುವು. ರೈಲುಗಳ ವಿದ್ಯುದೀಕರಣ ಪ್ರಾರಂಭವಾಗಿತ್ತು. ರೈಲ್ವೆಗಳ ಪುನವ್ರ್ಯವಸ್ಥೆ ಮತ್ತು ಆಧುನೀಕರಣಕ್ಕೆ ಗಮನ ಕೊಡಲಾದ್ದು ಯುದ್ಧದ ಅನಂತರ. ಕೈಗಾರಿಕಾ ವಿಕೇಂದ್ರೀಕರಣಕ್ಕೆ ಸಹಾಯವಾಗುವಂತೆ 1973-78ರ ಅವಧಿಯಲ್ಲಿ ತೀವ್ರ ವೇಗದ ರೈಲುಗಳ ಸಂಚಾರವನ್ನು ಈಗಿರುವ 440 ಮೈ. ಗಳಿಂದ 5,600 ಮೈ.ಗಳಿಗೆ ವಿಸ್ತರಿಸಲಾಗುವುದು. ಜಪಾನಿನಲ್ಲಿ ಸರಕಿಗಿಂತಲೂ ಪ್ರಯಾಣಿಕರಿಂದಲೇ ರೈಲುಗಳಿಗೆ ಹೆಚ್ಚು ವರಮಾನ ಬರುತ್ತದೆ. ಸರಕು ವಿಶೇಷವಾಗಿ ಕರಾವಳಿ ನೌಕಾಸಾರಿಗೆಯ ಮೂಲಕ ಸಾಗುತ್ತದೆ.

ಹಡಗು ಸಾರಿಗೆ[ಬದಲಾಯಿಸಿ]

ಷೋಗನ್ನರ ಆಳ್ವಿಕೆಯ ಕೊನೆಯ ವೇಳೆಗೇ ದೊಡ್ಡ ಹಡಗುಗಳ ನಿರ್ಮಾಣ ಜಪಾನಿನಲ್ಲಿ ಪ್ರಾರಂಭವಾಗಿತ್ತು. ಆದರೆ ಅವು ಸಾಕಷ್ಟು ಸಂಖ್ಯೆಯಲ್ಲಿರಲಿಲ್ಲ. ಆದ್ದರಿಂದ ಮೇಜಿ ಸರ್ಕಾರ ಮೊದಲು ಹೊರ ದೇಶಗಳಿಂದ ಆಧುನಿಕ ಹಡಗುಗಳನ್ನು ಕೊಂಡು, ಬಳಿಕ ಅವುಗಳ ನಿರ್ಮಾಣಕ್ಕೆ ಗಮನ ಕೊಟ್ಟಿತು. ಕೊಂಡ ಹಡಗುಗಳನ್ನು ಕ್ರಮೇಣ ಖಾಸಗಿಯವರಿಗೆ ಮಾರಿತು. ಹಡಗು ಕಟ್ಟುವ ಕಂಪನಿಗಳಿಗೆ ಸರ್ಕಾರ ಧಾರಾಳವಾಗಿ ಧನಸಹಾಯ ಮಾಡಿತು. 1914ರ ವೇಳೆಗೆ ಜಪಾನಿನಲ್ಲಿ 300 ನೌಕಾನಿರ್ಮಾಣ ಕೇಂದ್ರಗಳಿದ್ದುವು. ನೌಕಾ ಕ್ಷೇತ್ರದಲ್ಲಿ ಜಪಾನು ಪ್ರಪಂಚದಲ್ಲಿ 3ನೆಯ ಸ್ಥಾನ ಪಡೆದಿತ್ತು.

ಆರ್ಥಿಕ ಮುಗ್ಗಟ್ಟಿನ ಕಾಲದಲ್ಲಿ ಜಪಾನು ತನ್ನ ಹಳೆಯ ಹಡಗುಗಳನ್ನು ಒಡೆದು ಹೊಸವನ್ನು ನಿರ್ಮಿಸುವ ಬೃಹತ್ ಕಾರ್ಯಕ್ರಮ ಕೈಗೊಂಡಿತು. ಇದಕ್ಕಾಗಿ ಖಾಸಗಿ ಕಂಪನಿಗಳಿಗೆ ಸರ್ಕಾರ ಧನಸಹಾಯ ನೀಡಿತು. 1939ರ ವೇಳೆಗೆ ಜಪಾನಿನ ಹಡಗು ಬಲ 56 ಲಕ್ಷ ಟನ್.

ಆದರೆ ಯುದ್ಧದಲ್ಲಿ ಜಪಾನಿನ ಬಹುಪಾಲು ಹಡಗುಗಳೂ ಅನೇಕ ನೌಕಾ ನಿರ್ಮಾಣ ಕೇಂದ್ರಗಳೂ ನಾಶವಾದುವು. ಯುದ್ಧ ಮುಗಿದಾಗ ಜಪಾನಿನ ಹಡಗು ಬಲ 14 ಲಕ್ಷ ಟನ್. ಅವುಗಳಲ್ಲಿ ಹಲವು ಸಮುದ್ರಯಾನಕ್ಕೆ ಯೋಗ್ಯವಾಗಿರಲಿಲ್ಲ. ಆದರೆ ಯುದ್ಧಾನಂತರ ಹಡಗುಗಳ ದುರಸ್ತಿ ಮತ್ತು ನಿರ್ಮಾಣಕ್ಕೆ ಗಮನ ಕೊಟ್ಟದ್ದರಿಂದ 1969ರ ವೇಳೆಗೆ 86 ಲಕ್ಷ ಟನ್ ಹಡಗುಬಲವಿತ್ತು. ಪ್ರಪಂಚದ ಹೊಸ ಹಡಗು ನಿರ್ಮಾಣ ಕಾರ್ಯದ ಶೇ. 48ರಷ್ಟು ಜಪಾನಿನಲ್ಲಿ ನಡೆಯುತ್ತಿತ್ತು.

ವಾಯು ಸಾರಿಗೆ[ಬದಲಾಯಿಸಿ]

ಜಪಾನಿನಲ್ಲಿ ನಾಗರಿಕ ವಾಯುಯಾನಕ್ಕಾಗಿ 1929ರ ಅನಂತರ ಕೆಲವು ಖಾಸಗಿ ಕಂಪನಿಗಳು ತಲೆಯೆತ್ತಿದುವು. ಬಳಿಕ ಅವು ಒಟ್ಟುಗೂಡಿದುವು. ಜಪಾನ್ ಏರ್‍ವೇಸ್ ಕಂಪನಿ ಸ್ಥಾಪಿತವಾಯಿತು. ಯುದ್ಧಕಾಲದಲ್ಲಿ ನಾಗರಿಕ ವಾಯುಪಡೆಯೂ ಸೇನೆಯ ವಶದಲ್ಲಿತ್ತು. ಯುದ್ಧಾನಂತರವೂ 1951ರ ವರೆಗೆ ನಾಗರಿಕ ವಾಯುಯಾನವನ್ನು ನಿಲ್ಲಿಸಲಾಗಿತ್ತು. 1951ರಿಂದ ಅಂತರ್ದೇಶೀಯ ಮತ್ತು 1954ರಿಂದ ಅಂತರರಾಷ್ಟ್ರೀಯ ವಾಯುಯಾನ ಇದೆ.

ಬ್ಯಾಂಕು ವ್ಯವಸ್ಥೆ ಮತ್ತು ಹಣಕಾಸು[ಬದಲಾಯಿಸಿ]

ಜಪಾನಿನಲ್ಲಿ ಬ್ಯಾಂಕುಗಳನ್ನು ಅಮೆರಿಕ ಮತ್ತು ಐರೋಪ್ಯ ಮಾದರಿಯಲ್ಲಿ ಸ್ಥಾಪಿಸಿದ್ದರೂ ಅವನ್ನು ಸ್ಥಳೀಯ ಪರಿಸ್ಥಿತಿಗೆ ಹೊಂದಿಸಿಕೊಂಡಿದೆ. 1882ರಲ್ಲಿ ಬೆಲ್ಜಿಯಮ್‍ನ ಕೇಂದ್ರ ಬ್ಯಾಂಕಿನ ಮಾದರಿಯಲ್ಲಿ ಬ್ಯಾಂಕ್ ಆಫ್ ಜಪಾನ್ ಎಂಬ ಕೇಂದ್ರ ಬ್ಯಾಂಕನ್ನು ಸ್ಥಾಪಿಸಲಾಯಿತು. ಇದು ಸರ್ಕಾರ ಮತ್ತು ಖಾಸಗಿ ಬಂಡವಾಳ ಪಡೆದಿದ್ದ ಕೂಡು ಬಂಡವಾಳ ಸಂಸ್ಥೆಯಾಗಿತ್ತು. ಇದಕ್ಕೆ ಮುಂಚೆ ವಾಣಿಜ್ಯ ಬ್ಯಾಂಕುಗಳೇ ನೋಟು ಚಲಾವಣೆಯನ್ನೂ ಮಾಡುತ್ತಿದ್ದುವು. ಆದರೆ ಬ್ಯಾಂಕ್ ಆಫ್ ಜಪಾನ್ ಸ್ಥಾಪನೆಯಾದ ಅನಂತರ ಅದಕ್ಕೆ ನೋಟು ಚಲಾವಣೆಯ ಏಕಸ್ವಾಮ್ಯ ಮತ್ತು ಇತರ ಕೇಂದ್ರ ಬ್ಯಾಂಕಿಂಗ್ ಕಾರ್ಯಭಾರಗಳನ್ನು ವಹಿಸಲಾಯಿತು. 1885ರಲ್ಲಿ ಚಿನ್ನ ಮತ್ತು ನಿರ್ದಿಷ್ಟ ಪ್ರತಿಭೂತಿಗಳ ಆಧಾರವುಳ್ಳ ಪರಿವರ್ತನೀಯ ನೋಟು ಪದ್ಧತಿಯನ್ನು ಜಾರಿಗೆ ತರಲಾಯಿತು. ಕೆಲವು ಮಾರ್ಪಾಟುಗಳ ಅನಂತರ 1950ರಲ್ಲಿ ಒಟ್ಟು ನೋಟುಗಳ ಪರಿಮಾಣವನ್ನು ಸರ್ಕಾರ ಗೊತ್ತುಪಡಿಸಿತು. ಅದನ್ನು ಮೀರಿದಾಗ ಹೆಚ್ಚಿನ ನೋಟುಗಳ ಮೇಲೆ ತೆರಿಗೆ ವಿಧಿಸುವ ಪದ್ಧತಿಯನ್ನು ಆಚರಣೆಗೆ ತರಲಾಯಿತು. ಹಣದ ಉಬ್ಬರವನ್ನು ತಡೆಯುವುದು ಇದರ ಉದ್ದೇಶ. ಜಪಾನಿನ ವಾಣಿಜ್ಯ ಬ್ಯಾಂಕುಗಳು ಐರೋಪ್ಯ ಬ್ಯಾಂಕುಗಳಂತೆ ಮಿಶ್ರ ಬ್ಯಾಂಕಿಂಗ್ ಪದ್ಧತಿಯನ್ನನುಸರಿಸಿವೆ. ಇದರಿಂದ ನಾನಾ ಕ್ಷೇತ್ರಗಳ ಅಭಿವೃದ್ಧಿಗೆ ಬ್ಯಾಂಕುಗಳು ವಿಶೇಷ ಸಹಾಯಕವಾಗಿವೆ. (ಕೆ.ಎನ್.ಎಂ.)

ಮೂಲಗಳು[ಬದಲಾಯಿಸಿ]

  1. ೧.೦ ೧.೧ ೧.೨ ೧.೩ "Japan". International Monetary Fund. Retrieved 2008-10-09.
  2. CIA World Factbook Archived 2014-06-25 ವೇಬ್ಯಾಕ್ ಮೆಷಿನ್ ನಲ್ಲಿ.[Gini rankings]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:

[[ವರ್ಗ:ಜಪಾನ್|*]

"https://kn.wikipedia.org/w/index.php?title=ಜಪಾನ್&oldid=1161402" ಇಂದ ಪಡೆಯಲ್ಪಟ್ಟಿದೆ