ಶಾಂತವೇರಿ ಗೋಪಾಲಗೌಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಗೋಪಾಲ ಗೌಡ ಇಂದ ಪುನರ್ನಿರ್ದೇಶಿತ)

ಶಾಂತವೇರಿ ಗೋಪಾಲಗೌಡ ಎತ್ತರದ ನಿಲುವು; ದುಂಡು ಮುಖ; ಉದ್ದವಲ್ಲದ ಮುದ್ದಾದ ಮೂಗು; ಅಗಲವಾದ ಹಣೆ; ಕೂದಲು ಕಡಿಮೆಯಾದ ದೊಡ್ಡ ತಲೆ; ವಿಶಾಲವಾದ ಕೆಂಗಣ್ಣುಗಳು; ಕಂದು ಬಣ್ಣ; ಶುಭ್ರವಾದ ಬಿಳಿಯ ಖಾದಿ ಜುಬ್ಬ, ಅಚ್ಚುಕಟ್ಟಾಗಿ ಉಟ್ಟ ಕಚ್ಚೆಪಂಚೆ; ಗಂಭೀರ ಮುಖ ಮುದ್ರೆ; ಮಾತನಾಡಲು ಮೆಲ್ಲಗೆ ಎದ್ದು ನಿಂತರು; ಎಲ್ಲರ ಕಣ್ಣು,ಕಿವಿ ಅತ್ತ ತಿರುಗಿದವು! ಆನೆ ಹೆಜ್ಜೆ ಇಟ್ಟ ಹಾಗೆ ಖಚಿತವಾದ ಮಾತು; ಶ್ರೋತೃಗಳನ್ನು ಸೆರೆಹಿಡಿಯುವ ವಾದಸರಣಿ. ಅವರೇ ಶಾಂತವೇರಿ ಗೋಪಾಲಗೌಡರು. ವಿಧಾನಸಭಾಧಿವೇಶನದ ಸಂದರ್ಭಗಳಲ್ಲಿ ಕಂಡು ಬರುತ್ತಿದ್ದ ನಿತ್ಯಸ್ಮರಣೀಯ ದೃಶ್ಯವಿದು.

ಅಪೂರ್ವ ವ್ಯಕ್ತಿತ್ವ ರಾಷ್ಟ್ರ, ರಾಜ್ಯ, ಸಮಾಜ, ರಾಜಕೀಯ, ಆಡಳಿತ, ಸಾಹಿತ್ಯ, ಸಂಸ್ಕೃತಿ, ಕಲೆ, ಉದ್ಯಮ, ಅರ್ಥವ್ಯವಸ್ಥೆ – ಅದು ಯಾವುದೇ ವಿಚಾರವಿರಲಿ ಅದರ ಬಗ್ಗೆ ಖಚಿತ, ಸದೃಢ, ಸ್ಪಷ್ಟ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು ಗೋಪಾಲಗೌಡರ ಪ್ರವೃತ್ತಿಯಾಗಿತ್ತು. ಸತ್ಯವನ್ನು ಹೇಳುವುದರಲ್ಲಿ ಸಂಕೋಚವಿರಲಿಲ್ಲ; ಮಾತಿಗೆ ಮಂತ್ರ ಶಕ್ತಿಯನ್ನು ಕೊಡುವ ವ್ಯಕ್ತಿತ್ವದ ಹಿನ್ನೆಲೆ – ಅದಕ್ಕಾಗಿ ಅವರ ಮಾತಿಗೆ ತುಂಬ ಬೆಲೆ. ಅಧಿಕಾರಸ್ಥ ಸರ್ಕಾರ ತಲ್ಲಣಗೊಳ್ಳುವಂತಹ ಗರ್ಜನೆ; ವೈರಿಯೂ ಒಪ್ಪುವಂತಹ ವಿಚಾರಧಾರೆ.

ಉಗ್ರವಾದಿಯಾಗಿದ್ದ ಅವರಿಗೆ ಕೆಲವೊಂದು ಸಂದರ್ಭಗಳಲ್ಲಿ ಶೀಘ್ರಕೋಪ ಉಕ್ಕಿ ಬರುತ್ತಿತ್ತಾದರೂ ಅದು ಆಧಾರರಹಿತ ವಾಗಿರುತ್ತಿರಲಿಲ್ಲ. ವಿಶಿಷ್ಟ ಸನ್ನಿವೇಶಗಳನ್ನು ಉಂಟು ಮಾಡುವುದರಲ್ಲಿ, ಬಹಳ ಮಟ್ಟಿಗೆ ಪ್ರಥಮಸ್ಥಾನ ಪಡೆದಿದ್ದ ಗೋಪಾಲಗೌಡರು, ಅಂತಹ ಸನ್ನಿವೇಶಗಳಿಗೆ ಅರ್ಥಪೂರ್ಣ ಹಿನ್ನೆಲೆ ಇದೆ ಎಂಬುದನ್ನು ತೋರಿಸಿ ಕೊಡುತ್ತಿದ್ದರು.

ಕೇವಲ ಐವತ್ತು ವರ್ಷಗಳ ಅವಧಿಯಲ್ಲಿ ಪ್ರಚೋದಕ ಶಕ್ತಿಯಾಗಿ ರೂಪುಗೊಂಡ ಗೋಪಾಲ ಗೌಡರ ಬೆಳವಣಿಗೆಯ ಹಿನ್ನೆಲೆ ಮನಮುಟ್ಟುವಂತಹ ಘಟನೆಗಳಿಂದ ಕೂಡಿದೆ. ವಿದ್ಯಾಭ್ಯಾಸದ ಹಾದಿ ಅಡಚಣೆಗಳ ಆಗರವಾಗಿ ಪರಿಣಮಿಸಿತಾದರೂ ವಿಶಾಲವಾದ ಸಮಾಜ ಜೀವನ, ಸ್ವಾತಂತ್ರ್ಯ ಹೋರಾಟದ ಮೈನವಿರೇಳಿಸುವ ಸನ್ನಿವೇಶ, ರಾಜಕೀಯ ರಂಗದ ರಂಗುರಂಗಿನ ಘಟನೆಗಳು ಅವರ ವ್ಯಕ್ತಿತ್ವ ನಿರೂಪಣೆಗೆ ಪೋಷಣೆ ನೀಡಿದವು; ರಾಜಕೀಯ ಮುತ್ಸದ್ದಿಯನ್ನಾಗಿ ಕಡೆದು ನಿಲ್ಲಿಸಿದವು. ಶಾಂತವೇರಿ ಗೋಪಾಲಗೌಡರ ಬಾಲ್ಯ, ಬೆಳವಣಿಗೆ ಶಿಕ್ಷಣ – ಮೊದಲಾದ ಎಲ್ಲ ಹಂತಗಳೂ ಗಮನಿಸುವಂತಹ ಪ್ರಸಂಗಗಳು.

ಬಡತನದ ಕುಟುಂಬ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿ ನಲ್ಲಿರುವ ಆರಗದ ರೈತ ಕುಟುಂಬದಲ್ಲಿ ಶಾಂತವೇರಿ ಗೋಪಾಲಗೌಡರ ಜನನ. ೧೯೨೩ನೆಯ ಇಸವಿ ಮಾರ್ಚ್ ೧೪ ರಂದು ಕೊಲ್ಲೂರಯ್ಯ ಮತ್ತು ಶೇಷಮ್ಮನವರ ಮೂರನೆಯ ಮಗುವಾಗಿ ಜನಿಸಿದರು. ಅಣ್ಣ ಧರ್ಮಯ್ಯಗೌಡ; ಅಕ್ಕ ಸಿದ್ಧಮ್ಮ. ಇವರ ತಾತ ಲೋಕಣ್ಣಗೌಡರು ಅನುಕೂಲಸ್ಥರಾಗಿದ್ದರು. ಆದರೆ, ತಂದೆ ಕೊಲ್ಲೂರಯ್ಯನವರು ಬಡತನದ ಸುಳಿಯಲ್ಲಿ ಸಿಕ್ಕರು.

ಓದು- ಬರಹಗಳನ್ನು ಬಲ್ಲ ಕೊಲ್ಲೂರಯ್ಯ ನವರು ಅಂಚೆಪೇದೆಯಾಗಿ ಕೆಲಸಕ್ಕೆ ಸೇರಿದರು; ಕೇವಲ ಹನ್ನೊಂದು ರೂಪಾಯಿಯ ಸಂಬಳ. ಅಂಚೆ ವಿತರಣೆಗಾಗಿ ಅನೇಕ ಹಳ್ಳಿಗಳನ್ನು ತಿರುಗಬೇಕಾಗಿತ್ತು. ಕವಲೇದುರ್ಗ, ಕೊಳವಳ್ಳಿ, ಹೊಸಗದ್ದೆ, ನಿಲುವಾಸೆ ಮೊದಲಾದ ಹಳ್ಳಿಗಳಿಗೆ ಅವರ ಅಂಚೆ ಯಾತ್ರೆ.

ಬಡತನದ ಬದುಕು ಗೋಪಾಲಗೌಡರ ಪಾಲಿಗಿತ್ತಾದರೂ ದೈವದತ್ತವಾದ ಮಲೆನಾಡ ಪ್ರಕೃತಿ ಸಂಪತ್ತಿನ ಮಡಿಲಲ್ಲಿ ಬೆಳೆದ ಅವರ ಮೈ- ಮನಸ್ಸುಗಳ ಮೇಲೆ ಮಧುರ ಪ್ರಭಾವ ಮೂಡಿ ಬಂದಿತು.

ಗೋಪಾಲಗೌಡರ ಪ್ರಾಥಮಿಕ ವಿದ್ಯಾಭ್ಯಾಸ ಆರಗದಲ್ಲಿಯೇ ನಡೆಯಿತು. ಮುಂದಿನ ವಿದ್ಯಾಭ್ಯಾಸ ಕ್ಕಾಗಿ ಬೇರೆ ಊರಿಗೆ ಹೋಗಲು ಸಾಧ್ಯವಾಗಲಿಲ್ಲ. ಅಂಚೆಪೇದೆ ಕೆಲಸದ ಜೊತೆಗೆ ಸಣ್ಣ ವ್ಯವಸಾಯವನ್ನೂ ಇಟ್ಟುಕೊಂಡಿದ್ದ ಕೊಲ್ಲೂರಯ್ಯ ನವರಿಗೆ ನೆರವು ನೀಡುವುದು; ದನ ಮೇಯಿಸುವುದು; ಕಾಡು ಮೇಡುಗಳಲ್ಲಿ ತಿರುಗಾಡಿ ಸೊಪ್ಪು ಸದೆ ಹೊತ್ತು ತರುವುದು- ಇವೇ ಮೊದಲಾದ ಕಾಯಕಷ್ಟದ ಕೆಲಸಗಳಲ್ಲಿ ತೊಡಗಿದರು.

ಗೋಪಾಲಗೌಡರು ದನಕಾಯುವ ಕಾಯಕ ದಲ್ಲಿ ತೊಡಗಿದ್ದಾಗ ಒಂದು ದಿನ ಒಂದು ಘಟನೆ ನಡೆಯಿತೆಂದು ಪ್ರತೀತಿ. ಉತ್ತರ ಕರ್ನಾಟಕದ ಸ್ವಾಮಿಗಳೊಬ್ಬರು ದನ ಮೇಯಿಸುವ ಹುಡುಗನನ್ನು ಅಕಸ್ಮಾತ್ತಾಗಿ ನೋಡಿದರಂತೆ. ಆತನ ಕಡೆಗೆ ಆಕರ್ಷಣೆಯಾಯಿತಂತೆ! ಆತನನ್ನು ಮಾತನಾಡಿಸಿ, ಎಲ್ಲ ವಿಚಾರಗಳನ್ನೂ ತಿಳಿದುಕೊಂಡು, ಕಣ್ಣುಗಳ ಹೊಳಪನ್ನೂ ಹಸ್ತರೇಖೆಯನ್ನೂ ನೋಡಿ ‘ನೀನು ಹೆಚ್ಚಿನ ವಿದ್ಯಾಭ್ಯಾಸ ಮಾಡಬೇಕು’ ಎಂದು ತಿಳಿಸಿದರಂತೆ.

ಆಗ ಆತ ಅಸಹಾಯಕತೆಯನ್ನು ತೋಡಿಕೊಂಡನಂತೆ. ಎಲ್ಲವನ್ನೂ ಕೇಳಿ ತಿಳಿದುಕೊಂಡ ಸ್ವಾಮಿಗಳು ಕೊಲ್ಲೂರಯ್ಯನವರ ಬಳಿಗೆ ಹೋಗಿ ‘ನಿಮ್ಮ ಮಗನಿಗೆ ಒಳ್ಳೆಯ ಭವಿಷ್ಯವಿದೆ. ವಿದ್ಯಾಭ್ಯಾಸವನ್ನು ನಿಲ್ಲಿಸಬೇಡಿ. ಹೇಗಾದರೂ ಮಾಡಿ ಓದಿಸಲೇಬೇಕು….’ ಎಂದು ಸಲಹೆ ಮಾಡಿ ಹೊರಟು ಹೋದರಂತೆ.

ಅಷ್ಟರಲ್ಲಿ, ಗೋಪಾಲಗೌಡರ ಅಣ್ಣ ಧರ್ಮಯ್ಯ ಗೌಡರು ಶಿಕಾರಿಪುರದಲ್ಲಿ ರೆವಿನ್ಯೂ ಇನ್‌ಸ್ಪೆಕ್ಟರಾದರು. ಹೀಗಾದದ್ದರಿಂದ ಗೋಪಾಲಗೌಡರ ವಿದ್ಯಾಭ್ಯಾಸ ಮುಂದುವರಿಯಲು ಸಹಾಯಕವಾಯಿತು. ಶಿಕಾರಿ ಪುರದಲ್ಲಿ ಲೋಯರ್ ಸೆಕೆಂಡರಿ ಪರೀಕ್ಷೆ ಮುಗಿಸಿದರು.

ಸ್ವಾತಂತ್ರ್ಯದ ಹೋರಾಟ, ಸೆರೆಮನೆ ಮುಂದೆ ಹೈಸ್ಕೂಲ್ ವಿದ್ಯಾಭ್ಯಾಸಕ್ಕೆ ತೀರ್ಥಹಳ್ಳಿಗೆ ತೆರಳಿದರು. ಹೈಸ್ಕೂಲಿನಲ್ಲಿ ತರುಣ ವಿದ್ಯಾರ್ಥಿಯಾಗಿದ್ದ ಗೋಪಾಲಗೌಡರು ತಮ್ಮ ಪ್ರಭಾವವನ್ನು ತೋರಿಸತೊಡಗಿದರು. ಎಳೆಯ ವಯಸ್ಸಿನಲ್ಲೇ ನಾಯಕ ಲಕ್ಷಣದ ಸೊಗಡು ಅವರಲ್ಲಿ ಹೊರಹೊಮ್ಮುತ್ತಿತ್ತು. ನಾಯಕ ಲಕ್ಷಣಗಳಿಗೆ ನೀರೆರೆಯಲೆಂಬಂತೆ, ೧೯೪೨ರ ಸ್ವಾತಂತ್ರ್ಯ ಹೋರಾಟದ ಮಹಾ ಚಳುವಳಿ ಪ್ರಾರಂಭವಾಯಿತು. ಗಾಂಧಿ, ನೆಹರು ಮೊದಲಾದ ಹಿರಿಯ ನಾಯಕರೆಲ್ಲರ ಬಂಧನವಾಯಿತು. ಗಾಂಧೀಜಿಯವರು ‘ಬ್ರಿಟಿಷರೇ, ಭಾರತವನ್ನು ಬಿಟ್ಟು ತೊಲಗಿ’ ಎಂಬ ಘೋಷಣೆಯನ್ನು ಮಾಡಿದ್ದರು.

ಇಡೀ ದೇಶವೇ ಈ ಘೋಷಣೆಯನ್ನು ಮಾರ್ದನಿಗೊಳಿಸಿತ್ತು. ಸ್ವಾತಂತ್ರ್ಯ ಪ್ರಿಯರಾಗಿದ್ದ ಭಾರತೀಯರು ಹೋರಾಟಕ್ಕೆ ಸಿದ್ಧರಾದರು ಶಾಲಾ ಕಾಲೇಜುಗಳು ಇದಕ್ಕೆ ಹೊರತಾಗಲಿಲ್ಲ. ದೇಶದ ಎಲ್ಲ ಕಡೆಯಂತೆ ತೀರ್ಥಹಳ್ಳಿಯ ಹೈಸ್ಕೂಲು ವಿದ್ಯಾರ್ಥಿಗಳು ಮೈಮುರಿದೆದ್ದರು. ಗೋಪಾಲಗೌಡರಲ್ಲಿ ಒಳಗೊಳಗೆ ಕುದಿಯುತ್ತಿದ್ದ ಸ್ವಾತಂತ್ರ್ಯ ಹೋರಾಟದ ಕಿಚ್ಚು ಧಿಗ್ಗನೆ ಎದ್ದು ನಿಂತಿತು. ವಿದ್ಯಾರ್ಥಿ ನಾಯಕರಲ್ಲಿ ಪ್ರಮುಖ ವ್ಯಕ್ತಿಯಾಗಿ ಮುಂಚೂಣಿಯಲ್ಲಿ ನಿಂತರು. ಅಂದಿನ ಉಲ್ಬಣಗೊಂಡ ಸನ್ನಿವೇಶವನ್ನು, ಅಲ್ಲಿ ಕನ್ನಡ ಪಂಡಿತರಾಗಿದ್ದ ಕಮಗೋಡು ನರಸಿಂಹಶಾಸ್ತ್ರಿಗಳವರು ಚೆನ್ನಾಗಿ ವಿವರಿಸುತ್ತಿರುತ್ತಾರೆ. ಶಾಸ್ತ್ರಿಗಳವರು ಶಿಸ್ತು, ನಿಷ್ಠೆ, ಸರಳ ಭಾವ, ಮಮತೆ, ಪ್ರೀತಿ ಬೋಧನಾ ಕ್ರಮದ ವೈಶಿಷ್ಟ್ಯ, ವಿಚಾರವಂತಿಕೆ ಮೊದಲಾದ ಶ್ರೇಷ್ಠ ಗುಣಗಳಿಗೆ ಹೆಸರಾಗಿದ್ದರು. ಎಲ್ಲರ ಪ್ರೀತಿ ವಿಶ್ವಾಸಗಳಿಗೆ ಪಾತ್ರರಾಗಿದ್ದರು. ವಿದ್ಯಾರ್ಥಿಗಳು ಅವರಲ್ಲಿ ತುಂಬ ಪ್ರೀತಿ ಗೌರವಗಳನ್ನು ಇಟ್ಟುಕೊಂಡಿದ್ದರು.

ಸ್ವಾತಂತ್ರ್ಯ ಚಳುವಳಿಯಲ್ಲಿ ಧುಮುಕಿದ ವಿದ್ಯಾರ್ಥಿಗಳು, ಅದರಲ್ಲೂ ಗೋಪಾಲಗೌಡ ರಂತಹವರು ಉಪಾಧ್ಯಾಯರ ಬಳಿಗೆ ಹೋಗಿ, ತರಗತಿಗಳಿಂದ ಹೊರಗೆ ಬರುವಂತೆ ಉಗ್ರವಾಗಿಯೇ ಒತ್ತಾಯಪಡಿಸಿದರು; ಚಳುವಳಿಯಲ್ಲಿ ಸೇರಿಕೊಳ್ಳ ಬೇಕೆಂದು ಕೇಳಿಕೊಂಡರು. ರಾಜೀನಾಮೆ ಕೊಡಬೇಕೆಂದು ಆಗ್ರಹಪಡಿಸಿದರು. ಎಲ್ಲರ ಪ್ರೀತಿಗೂ ಪಾತ್ರರಾಗಿದ್ದ ನರಸಿಂಹಶಾಸ್ತ್ರಿಗಳವರನ್ನೂ ಇದು ಬಿಡಲಿಲ್ಲ. ಅವರು ರಾಜೀನಾಮೆ ಕೊಡುವುದಿಲ್ಲವೆಂದು ಗೊತ್ತಾದಮೇಲೆ ಗೋಪಾಲಗೌಡರು ಅವರ ಬಳಿಗೆ ಹೋಗಿ ‘ಸಾರ್……. ಸ್ವಲ್ಪ ಇರಿ…………….ನೋಡಿ ಕೋತೀವಿ……’ಎಂದು ಕೋಪೋದ್ರೇಕದಿಂದ ಹೇಳಿ ಸರಕ್ಕನೆ ಹೊರಟು ಹೋದರು.

ಅಂದಿನ, ಆ ಉದ್ರೇಕಪೂರ್ಣ ಸನ್ನಿವೇಶ ಅಲ್ಲಿದ್ದ ಎಲ್ಲರ ಮನಸ್ಸಿನಲ್ಲಿಯೂ ಉಳಿದು ನಿಂತಿದೆ. ಚಳುವಳಿಯ ಬಿಸಿಯಿಂದಾಗಿ ಗೋಪಾಲ ಗೌಡರ ಬಂಧನವಾಯಿತು. ವಿಚಾರಣೆಗೊಳಗಾಗಿ, ಶಿವಮೊಗ್ಗ ಕಾರಾಗೃಹದಲ್ಲಿ ಆರು ತಿಂಗಳು ೧೯ ದಿನಗಳನ್ನು ಕಳೆದರು. ಆದರೆ, ಆಮೇಲೆ (ಟೆಲಿಗ್ರಾಫ್) ತಂತಿ ಕತ್ತರಿಸಿದ್ದಕ್ಕೆ ಸಂಬಂಧಿಸಿದ ಮೊಕದ್ದಮೆಯಲ್ಲಿ ಶಿಕ್ಷೆಗೊಳಗಾದರು. ಸೆಷನ್ಸ್ ನ್ಯಾಯಾಲಯಕ್ಕೆ ಅಪೀಲು ಮಾಡಿಕೊಂಡಿದ್ದರಿಂದ ಶಿಕ್ಷೆ ರದ್ದಾಯಿತು. ಈ ಹೋರಾಟದ ಮಧ್ಯೆ ೧೯೪೩-೪೪ರಲ್ಲಿ ಎಸ್.ಎಸ್. ಎಲ್.ಸಿ. ಮುಗಿಸಿದರು.

ಉಪಾಧ್ಯಾಯರು ಹೈಸ್ಕೂಲ್ ಶಿಕ್ಷಣವೇನೋ ಮುಗಿಯಿತು. ಆದರೆ, ಮುಂದೆ? ಮುಂದೆ ಓದಬೇಕೆ ಬಿಡಬೇಕೆ ಎಂಬ ಪ್ರಶ್ನೆ ಅವರನ್ನೂ, ಅವರ ಹಿರಿಯರನ್ನೂ ಕಾಡತೊಡಗಿತು. ಹಾಗೂ ಹೀಗೂ ಪ್ರಯತ್ನಮಾಡಿ ಶಿವಮೊಗ್ಗ ದಲ್ಲಿ ಇಂಟರ್‌ಮೀಡಿಯೆಟ್ ಕಾಲೇಜಿಗೆ ಸೇರಿದರು.

ಆದರೆ, ಹಣದ ಅಡಚಣೆಯಿಂದಾಗಿ ಅವರು ಶಿಕ್ಷಣವನ್ನು ನಿಲ್ಲಿಸಬೇಕಾಯಿತು. ಆ ಬಳಿಕ ೧೯೪೫-೪೬ರಲ್ಲಿ ಆರಗದ ಮಾಧ್ಯಮಿಕ ಶಾಲೆಯಲ್ಲಿ ಉಪಾಧ್ಯಾಯ ವೃತ್ತಿಯನ್ನು ಅವಲಂಬಿಸಿಕೊಂಡರು. 

ಅಲ್ಲಿ-ಉಪಾಧ್ಯಾಯರಾಗಿ ಸೇರಿಕೊಂಡ ಪ್ರಸಂಗ ತುಂಬಾ ಸ್ವಾರಸ್ಯಕರವಾಗಿದೆ.

ಶ್ರೀ ನಾಗಾನಂದರ ಪರಿಚಯ

ಆರಗದ ಮಾಧ್ಯಮಿಕ ಶಾಲೆಯಲ್ಲಿ ‘ಶ್ರೀನಾಗಾನಂದ’ ಎಂಬ ಹೆಸರಿನಲ್ಲಿ ಸಾಹಿತ್ಯ ರಚಿಸುತ್ತಿದ್ದ ಮಹನೀಯರೊಬ್ಬರು ಉಪಾಧ್ಯಾಯ ರಾಗಿದ್ದರು. ಉಪಾಧ್ಯಾಯ ವೃತ್ತಿಯ ಜೊತೆಗೆ ಅವರು ವೈದ್ಯಕೀಯವನ್ನೂ ನಡೆಸುತ್ತಿದ್ದರು. ಕಾಲೇಜು ಬಿಟ್ಟು ಬಂದ ಗೋಪಾಲಗೌಡರು ಅವರ ಬಳಿಗೆ ಹೋದರು. ಆ ವೇಳೆಗಾಗಲೇ ಗೋಪಾಲಗೌಡರಿಗೆ ತಲೆ ಸರಿಯಾಗಿಲ್ಲವೆಂಬ ಸುದ್ದಿ ಹಬ್ಬಿತ್ತು! ಆದರೆ ಶ್ರೀ ನಾಗಾನಂದರಿಗೆ ಹಾಗೇನೂ ಅನ್ನಿಸಲಿಲ್ಲ. ಅವರ ಸಂಗಡ ಗೌಡರು ಸರಿಯಾಗಿಯೇ ಮಾತನಾಡಿದರಂತೆ. ‘ನನಗೆ ಹುಚ್ಚೇನು ಸಾರ್, ನೀವೇ ಹೇಳಿ’ ಎಂದು ಗೌಡರು ಕೇಳಿದ ಪ್ರಶ್ನೆ ಈಗಲೂ ಅವರ ಕಿವಿಯಲ್ಲಿ ತುಂಬಿಕೊಂಡಿದೆಯಂತೆ. ಶ್ರೀಯುತರು ಗೋಪಾಲ ಗೌಡರ ಪ್ರತಿಭೆ, ಭಾಷೆಯ ಮೇಲಿನ ಹಿಡಿತ, ಸಾಹಿತ್ಯಾ ಭಿರುಚಿ ಮೊದಲಾದವುಗಳನ್ನು ಗುರುತಿಸಿದರು. ಅವರ ನಿಕಟ ಸಂಪರ್ಕವನ್ನು ಬೆಳೆಸಿಕೊಂಡರು. ಅವರಿಂದ ಇಂಗ್ಲಿಷ್ ಲೇಖನಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಿಸುತ್ತಿದ್ದರು. ತನಿ ಲೇಖನಗಳನ್ನು ಕೂಡ ಬರೆಸುತ್ತಿದ್ದರು. ಕೆಲವು ಪತ್ರಿಕೆಗಳಲ್ಲಿ ಪ್ರಕಟಿಸಿಯೂ ಆಯಿತು. ಗಾಢ ಸ್ನೇಹಸಂಪರ್ಕವಾದಮೇಲೆ, ಅಲ್ಲಿನ ಮಾಧ್ಯಮಿಕ ಶಾಲೆಯಲ್ಲಿ ಉಪಾಧ್ಯಾಯವೃತ್ತಿಯನ್ನು ಕೊಡಿಸಿದರು.

ಒಂದು ಘಟನೆ

ಗೋಪಾಲಗೌಡರ ಮಾನಸಿಕ ಸ್ಥಿತಿಯನ್ನು ಸಮೀಪವಾಗಿ ಗಮನಿಸುತ್ತಿದ್ದ ಶ್ರೀ ನಾಗಾನಂದರು ‘ಇವರಲ್ಲಿರುವ ಗಾಬರಿಗೆ ಏನೋ ಹಿನ್ನೆಲೆಯಿರಬೇಕು. ಎಂದು ಮನಸ್ಸಿನಲ್ಲಿಯೇ ಲೆಕ್ಕಹಾಕಿ ಒಂದು ದಿನ ಸರಸಸಲ್ಲಾಪದಲ್ಲಿದ್ದಾಗ ಪ್ರಾಸಂಗಿಕವಾಗಿ ಪ್ರಸ್ತಾಪಿಸಿ ದರಂತೆ. ಆಗ ಗೌಡರು ತಮ್ಮ ಅಧೀರತೆಗೆ ಅಧಿಕ ಎದೆಬಡಿತವೇ ಕಾರಣವೆಂದು ಹೇಳಿ ಅದು ಹೇಗೆ ಪ್ರಾರಂಭವಾಯಿತೆಂಬುದನ್ನು ವಿವರಿಸಿದರಂತೆ. ಆ ಪ್ರಸಂಗ ಹೀಗಿದೆ: ಒಂದು ದಿನ ಬಸ್ಸಿನಲ್ಲಿ ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಹೊರಟರು. ಬಸ್ಸಿನಲ್ಲಿ ಪ್ರಯಾಣಿಕರು ಕಿಕ್ಕಿರಿದು ತುಂಬಿಕೊಂಡಿದ್ದರು.

ಗೋಪಾಲಗೌಡರು ಕಂಡಕ್ಟರ್ ಸೀಟಿನಲ್ಲಿ ಕುಳಿತುಕೊಂಡಿದ್ದರು. 

ಬಸ್ಸು ಇಳಿಜಾರಿನಲ್ಲಿ ವೇಗವಾಗಿ ಚಲಿಸುತ್ತಿತ್ತು. ಹಾಗೆಯೇ ಪಕ್ಕದಲ್ಲಿ ನೋಡುತ್ತಿದ್ದ ಗೌಡರಿಗೆ, ಮುಂದಿನಚಕ್ರ ಸಡಿಲವಾಗಿ ಕ್ರಮೇಣ ಹೊರಗಡೆಗೆ ಸರಿಯುತ್ತಿದ್ದುದು ಕಂಡುಬಂದಿತು.

‘ಇನ್ನೇನು ಚಕ್ರ ಕಳಚಿಹೋಗುತ್ತದೆ; ಬಸ್ಸು ಪಲ್ಟಿ ಹೊಡೆಯುತ್ತದೆ; ಅನೇಕರು ಸತ್ತು ಹೋಗುತ್ತಾರೆ; ಅವರಲ್ಲಿ ನಾನೂ ಒಬ್ಬ…..!’ ಎಂದು ಗಾಬರಿಗೊಂಡ ಗೌಡರ ಎದೆ ಬಲವಾಗಿ ಬಡಿದುಕೊಳ್ಳ ತೊಡಗಿತು. 

ಕುಳಿತಿದ್ದ ಸೀಟನ್ನು ಬಲವಾಗಿ ತಬ್ಬಿಕೊಂಡರು. ಕಣ್ಣುಗಳಲ್ಲಿ ಬಿಳೀಗುಡ್ಡೆ ಮಾತ್ರ ಕಾಣಿಸುತ್ತಿತ್ತೆಂದು ಪ್ರಯಾಣಿಕರೊಬ್ಬರು ಆಮೇಲೆ ಹೇಳಿದರಂತೆ! ಕಂಡಕ್ಟರ್‌ನ ಮುಂಜಾಗ್ರತೆಯಿಂದಾಗಿ ಬಸ್ಸು ನಿಂತಿತು. ಆಮೇಲೆ ಸರಿಮಾಡಿಸಿಕೊಂಡು ಮುಂದೆ ಪ್ರಯಾಣ ಮಾಡಿತು. ಬಸ್ಸಿನ ಆ ಘಟನೆ ನಡೆದಮೇಲೆ, ಯಾವಾಗಲಾದರೂ ಉದ್ರೇಕದ ಪರಿಸ್ಥಿತಿ ಉಂಟಾದಾಗ ಗೌಡರ ಎದೆಯ ಬಡಿತ ಜಾಸ್ತಿ ಯಾಗುತ್ತಿತ್ತು. ಅಂತಹ ಸಂದರ್ಭಗಳಲ್ಲಿ ಏನೇನೋ ಮಾತನಾಡುವುದು ಕಂಡುಬರುತ್ತಿತ್ತು. ಇದಕ್ಕೆಲ್ಲ ವಿಪರೀತ ಎದೆಬಡಿತವೇ ಕಾರಣವಾಗಿತ್ತು! ಇದನ್ನು ಕಂಡವರು, ವಾಸ್ತವಾಂಶವನ್ನು ತಿಳಿಯದೇ ಬುದ್ಧಿ ಭ್ರಮಣೆ ಎಂದು ಮಾತನಾಡಿಕೊಂಡದ್ದುಂಟು. ಉದ್ರೇಕದ ಸನ್ನಿವೇಶಗಳು ಸಂಭವಿಸಿದಾಗ, ಹೇಗೆ ಹೇಗೋ ನಡೆದುಕೊಳ್ಳುವ ಸಾಧ್ಯತೆಯಿತ್ತೆಂಬುದು ಸಮೀಪವರ್ತಿಗಳಾಗಿದ್ದವರಿಗೆ ಮನವರಿಕೆಯಾದ ದ್ದುಂಟು.

ಮತ್ತೆ ವಿದ್ಯಾರ್ಥಿ

ಉಪಾಧ್ಯಾಯರಾಗಿದ್ದ ಗೋಪಾಲಗೌಡರಿಗೆ ಮುಂದೆ ಓದಬೇಕೆಂಬ ಆಸೆ ಬಲಗೊಳ್ಳತೊಡಗಿತು. ಆದರೆ ಅವರ ಮನೋಗತಿಯನ್ನು ಕಂಡ ಅವರ ಹಿರಿಯರಿಗೆ ಮುಂದೆ ಓದುವುದಕ್ಕೆ ಕಳುಹಿಸಲು ಅಷ್ಟಾಗಿ ಇಷ್ಟವಿರಲಿಲ್ಲ. ಹಣದ ಅಡಚಣೆಯು ಬಹಳವಾಗಿತ್ತು. ಆದರೆ, ಅವರ ನಿಕಟವರ್ತಿಗಳಾಗಿದ್ದ ‘ಶ್ರೀ ನಾಗಾನಂದರು’ ಸುತ್ತಮುತ್ತಲ ಗ್ರಾಮಗಳಲ್ಲಿ ಸಂಚಾರಮಾಡಿ ಅಭ್ಯಾಸಕ್ಕೆ ಅಗತ್ಯವಾದ ಹಣ ವನ್ನೊದಗಿಸಿಕೊಟ್ಟರು. ಹೀಗಾಗಿ ಶಿವಮೊಗ್ಗದಲ್ಲಿ ಮತ್ತೆ ಇಂಟರ್‌ಮೀಡಿಯೆಟ್ ತರಗತಿಗೆ ಸೇರಿ ಅಭ್ಯಾಸವನ್ನು ಮುಂದುವರಿಸಿದರು. ನೆರವು ನೀಡಿದ ಹತ್ತಾರು ಸದ್ಗೃಹಸ್ಥರನ್ನು ಸದಾ ನೆನೆಯುತ್ತಿದ್ದರು.

ಆಗರದಲ್ಲಿ ಉಪಾಧ್ಯಾಯ ವೃತ್ತಿಯನ್ನು ಅವಲಂಬಿಸಿಕೊಂಡದ್ದು ಕೇವಲ ಒಂದು ವರ್ಷದಷ್ಟು ಕಾಲವಾದರೂ ಆ ಅವಧಿ, ಅವರ ಮುಂದಿನ ಸಾರ್ವಜನಿಕ ಜೀವನಕ್ಕೆ ಭದ್ರವಾದ ತಳಹದಿಯ ನ್ನೊದಗಿಸಿತು.

ಉಪಾಧ್ಯಾಯರಾಗಿದ್ದಾಗ ಸಹಜ ವಾಗಿಯೇ ಸಮಾಜಸೇವಾ ಮನೋವೃತ್ತಿ ಇದ್ದದ್ದರಿಂದ ವಯಸ್ಕರ ರಾತ್ರಿ ಶಾಲೆ ನಡೆಸುವುದು, ಖಾದಿ ನೂಲು ತೆಗೆಯುವುದು, ಹಳ್ಳಿಗರ ಸಮಸ್ಯೆಗಳನ್ನು ಪರಿಶೀಲಿಸಿ ಬಗೆಹರಿಸುವುದು, ಸ್ವಾತಂತ್ರ್ಯ ಹೋರಾಟದ ಬಗ್ಗೆ ಚಿಂತಿಸುವುದು, ಮಹಾಭಾರತ ಮೊದಲಾದ ಉದಾತ್ತ ಸಾಹಿತ್ಯ ಕೃತಿಗಳನ್ನು ಅಭ್ಯಾಸ ಮಾಡುವುದು, ಸಾಹಿತ್ಯ ಕೃತಿ ರಚನೆಮಾಡುವುದು, ಆಧುನಿಕ ಸಾಹಿತ್ಯ ಕೃತಿಗಳನ್ನು ಅವಲೋಕಿಸುವುದು, ಅವುಗಳನ್ನು ಜನರ ಮುಂದೆ ಓದಿ ಹೇಳುವುದು- ಇವೇ ಮೊದಲಾದ ಚಟುವಟಿಕೆಗಳಲ್ಲಿ ತೊಡಗಿದರು.

ಸಾಹಿತ್ಯಾಭ್ಯಾಸದ ಬಲದಿಂದಾಗಿ, ಮುಂದೆ ಒಳ್ಳೆಯ ವಾಗ್ಮಿಯಾಗಲು ಸಹಾಯಕ ವಾಯಿತು. ಭಾಷೆಯಲ್ಲಿ ಒಳ್ಳೆಯ ಜಿಗುಟು ಮೂಡಿಬಂದಿತು.

ಆರಗದಿಂದ ಶಿವಮೊಗ್ಗಕ್ಕೆ ಬಂದು, ಇಂಟರ್‌ಮೀಡಿಯೆಟ್ ತರಗತಿಗೆ ಸೇರಿದಾಗ ಒಕ್ಕಲಿಗರ ವಿದ್ಯಾರ್ಥಿ ನಿಲಯದ ವ್ಯವಸ್ಥಾಪಕರ ಹುದ್ದೆಯನ್ನು ಕೂಡ ವಹಿಸಿಕೊಂಡಿದ್ದರು. ವಿದ್ಯಾಭ್ಯಾಸವು ಸುಗಮ ವಾಗಿಯೇ ಸಾಗುತ್ತಿತ್ತು.

ಮತ್ತೆ ಹೋರಾಟಕ್ಕೆ

೧೯೪೭ರ ಸ್ವಾತಂತ್ರ್ಯ ಚಳವಳಿ ಬಿರುಸಾಗಿಯೇ ಪ್ರಾರಂಭವಾಯಿತು. ಭಾರತಕ್ಕೆ ಸ್ವಾತಂತ್ರ್ಯ ನೀಡುವುದಾಗಿ ಅಂದಿನ ಬ್ರಿಟಿಷ್ ಸರ್ಕಾರ ನಿರ್ಧರಿಸಿತ್ತಾದರೂ ದೇಶೀಯ ಸಂಸ್ಥಾನಗಳ ಸ್ಥಿತಿ ಡೋಲಾಯ ಮಾನವಾಗಿಯೇ ಇತ್ತು. ಆದ್ದರಿಂದ ದೇಶದ ಬೇರೆ ಬೇರೆ ಸಂಸ್ಥಾನಗಳಲ್ಲಿ ಚಳುವಳಿ ಮತ್ತು ಸತ್ಯಾಗ್ರಹ ಪ್ರಾರಂಭವಾದಂತೆಯೇ ಮೈಸೂರು ಸಂಸ್ಥಾನ ದಲ್ಲಿಯೂ ಪ್ರಾರಂಭವಾಯಿತು. ೧೯೪೨ರಲ್ಲಿ ಪ್ರಚಂಡ ಹೋರಾಟ ನಡೆಸಿದ ಶಿವಮೊಗ್ಗ ಜಿಲ್ಲೆ ೧೯೪೭ರಲ್ಲಿಯೂ ಹಿಂದೆ ಬೀಳಲಿಲ್ಲ. ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದಾಗಲೇ ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದ್ದ ಗೋಪಾಲಗೌಡರನ್ನು ೧೯೪೭ರ ಚಳುವಳಿಯು ಕೈಬೀಸಿ ಕರೆಯದೆ ಬಿಡಲಿಲ್ಲ. ಸತ್ಯಾಗ್ರಹ ಮತ್ತು ಚಳುವಳಿಗೆ ಹುಮ್ಮಸ್ಸಿನಿಂದ ಇಳಿದರು. ಶಿವಮೊಗ್ಗದಲ್ಲಿ ಭೂಗತವಾಗಿದ್ದುಕೊಂಡೇ ಚಳುವಳಿಗೆ ಚೇತನ ನೀಡುತ್ತಿದ್ದರು. ವಿವಿಧ ವೇಷಗಳಲ್ಲಿ ಕಾಣಿಸಿ ಕೊಂಡು ಪೊಲೀಸರಿಗೆ ಯಾಮಾರಿಸುತ್ತಿದ್ದರು. ಅವರನ್ನು ಹಿಡಿಯುವುದೇ ಕಷ್ಟವಾಯಿತು. ತೆರೆಮರೆಯಲ್ಲಿದ್ದುಕೊಂಡೇ ತೀವ್ರ ಹೋರಾಟಕ್ಕೆ ಅಣಿ ಮಾಡುತ್ತಿದ್ದರು. ಪ್ರಮುಖ ಸಂಘಟಕರಾದರು.

ಮಿಸ್ಟರ್ ಶಾಂತವೇರಿ ಶಾಂತವೇರಿ ಗೋಪಾಲಗೌಡ ಎಂಬುದು ಪರಿಚಿತ ಹೆಸರು. ಆದರೆ, ಅವರು ಬರೀ ‘ಶಾಂತವೇರಿ’ ಎಂದಾದುದು ಸ್ವಾರಸ್ಯಕರ ಸಂಗತಿ. ಶಿವಮೊಗ್ಗದಲ್ಲಿ ಆಗ ರಾಮಣ್ಣ ಶ್ರೇಷ್ಠಿ ಪಾರ್ಕು ಸ್ವಾತಂತ್ರ್ಯ ಹೋರಾಟದ ಕೇಂದ್ರಸ್ಥಾನವಾಗಿತ್ತು. ಅಲ್ಲಿ ನಿತ್ಯ ಭಾಷಣಗಳ ಸುರಿಮಳೆ; ಜನಜಾತ್ರೆ; ಎಲ್ಲರಲ್ಲಿಯೂ ಹುರುಪು; ಒಬ್ಬರಾದ ಮೇಲೆ ಒಬ್ಬರಂತೆ ಭಾಷಣ ಮಾಡಿ ಹೋಗುತ್ತಿದ್ದರು. ಯಾರು ಯಾರೆಂಬುದು ಗೊತ್ತೇ ಆಗುತ್ತಿರಲಿಲ್ಲ! ಪೊಲೀಸರಿಗೆ ‘ಚಳ್ಳೆ ಹಣ್ಣು’ ತಿನ್ನಿಸುತ್ತಿದ್ದರು. ಆಗ, ವಿದ್ಯಾರ್ಥಿ ನಿಲಯ ವನ್ನು ಬಿಟ್ಟು ದೊಡ್ಡಪೇಟೆಯ ಅಂಗಡಿಯೊಂದರ ಒಳಕೋಣೆಯಲ್ಲಿ ಗೋಪಾಲಗೌಡರು ಅಡಗಿ ಕೊಂಡಿದ್ದರು. ಅಲ್ಲಿಂದಲೇ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತಿದ್ದರು. ಒಂದೊಂದು ದಿನ ಒಂದೊಂದು ವೇಷ ಧರಿಸಿಕೊಂಡು ಬಂದು ಬೇರೆ ಬೇರೆ ಭಾಷೆಗಳಲ್ಲಿ ಭಾಷಣ ಮಾಡುತ್ತಿದ್ದರು.

ಒಂದು ದಿನ ಸ್ವಾರಸ್ಯಕರ ಘಟನೆ ನಡೆಯಿತು. ಪಟ್ಟಣದಲ್ಲೆಲ್ಲಾ ಡಂಗೂರ ಹಾಕಿ ‘ಈ ದಿನ ಹೈದರಾಬಾದಿನಿಂದ ಇಂಗ್ಲಿಷ್ ಭಾಷಾ ತಜ್ಞರಾದ  ಮಿಸ್ಟರ್ ಶಾಂತವೇರಿ ಎಂಬುವವರು ಬಂದು ಭಾಷಣ ಮಾಡಲಿದ್ದಾರೆ…..!’ ಎಂದು ಸಾರಲಾಗಿತ್ತು.

ಜನ ಕಿಕ್ಕಿರಿದು ಸೇರಿದ್ದರು. ಎಲ್ಲರ ದೃಷ್ಟಿ ವೇದಿಕೆಯ ಕಡೆ ತಿರುಗಿತ್ತು.

ಸಂಜೆ ೬-೨೦ರ ವೇಳೆಗೆ ಸರಿಯಾಗಿ ಸೂಟು ಬೂಟು- ಕನ್ನಡಕ ಧರಿಸಿ ಟೈ ಕಟ್ಟಿಕೊಂಡು ಓರೆ ಬೈತಲೆ ತೆಗೆದು, (ಗೌಡರು ಕೂದಲನ್ನು ಹಿಂದಕ್ಕೆ ಬಾಚುವುದು ಪದ್ಧತಿಯಾಗಿತ್ತು) ಠೀವಿಯಿಂದ ವೇದಿಕೆ ಹತ್ತಿ ನಿಂತರು ಮಿಸ್ಟರ್ ಶಾಂತವೇರಿ. ‘ಈಗ ಮಿಸ್ಟರ್ ಶಾಂತವೇರಿ ಯವರು ಇಂಗ್ಲಿಷಿನಲ್ಲಿ ಭಾಷಣ ಮಾಡಲಿದ್ದಾರೆ’ ಎಂದು ಕಾಂಗ್ರೆಸ್ ಸಮಿತಿಯವರು ಪ್ರಕಟಿಸಿದ ಕೂಡಲೆ ಎಲ್ಲ ಜನರ ಗಮನ ಅತ್ತ ಹರಿಯಿತು. ಪೊಲೀಸ್ ಸಿಬ್ಬಂದಿಯವರು ವೇದಿಕೆಯ ಸುತ್ತ ಸಜ್ಜಾಗಿ ಕೂತರು. ಭಾಷಣವಾದ ಕೂಡಲೆ ‘ಮಿಸ್ಟರ್ ಶಾಂತವೇರಿ’ ಯವರನ್ನು ಬಂಧಿಸಬೇಕೆಂಬುದು ಪೊಲೀಸರ ಹವಣಿಕೆಯಾಗಿತ್ತೆಂದು ಕಾಣುತ್ತದೆ. ಇಂಗ್ಲಿಷ್‌ನಲ್ಲಿ ನಿರರ್ಗಳವಾಗಿ ಭಾಷಣ ಮಾಡಿದರು. ‘ನಾನು ಈಗತಾನೇ ಹೈದರಾಬಾದಿನಿಂದ ಬಂದಿದ್ದೇನೆ. ನನ್ನ ಹೆಸರು ಶಾಂತವೇರಿ. ಹೈದರಾಬಾದಿನ ಇಸ್ಲಾಮಿಯಾ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕನಾಗಿದ್ದೇನೆ. ನಾನು, ನಿಮಗೆ ಜ್ವಲಂತ ಸಮಸ್ಯೆಗೆ ಸಂಬಂಧಿಸಿದ ಸಂದೇಶವೊಂದನ್ನು ಕೊಡಲು ಬಂದಿದ್ದೇನೆ. ನಮ್ಮ ಮಮತೆಯ ಮಾತೃಭೂಮಿಯನ್ನು ಬ್ರಿಟಿಷ್ ಸರ್ಕಾರ ಆಳುತ್ತಿರುವ ರೀತಿಯನ್ನು ಕಂಡು ನನಗೆ ಜಿಗುಪ್ಸೆ ಯಾಗಿದೆ. ಆದ್ದರಿಂದ ನಾನು ಸರ್ಕಾರಿ ಹುದ್ದೆಗೆ ರಾಜೀನಾಮೆ ಇತ್ತಿದ್ದೇನೆ. ಈಗ ರಾಷ್ಟ್ರೀಯ ಕಾಂಗ್ರೆಸ್ಸಿಗೆ ಸೇರಿದ್ದೇನೆ. ಬ್ರಿಟಿಷ್ ಸಾಮ್ರಾಜ್ಯಶಾಹಿಗೆ ಧಿಕ್ಕಾರ; ಬ್ರಿಟಿಷರೆ, ಭಾರತವನ್ನು ಬಿಟ್ಟು ತೊಲಗಿ……’ಎಂದು ಘೋಷಿಸಿದ ಮೇಲೆ ಮಿಸ್ಟರ್ ಶಾಂತವೇರಿಯವರು ತುಂಬಾ ಸೆಖೆಯಾಗುತ್ತದೆ ಎಂದು ಹೇಳಿ ಕೋಟನ್ನು ಕಳಚಿಟ್ಟರು. ಇದ್ದಕ್ಕಿದ್ದಂತೆ ಕೆಮ್ಮು ಜಾಸ್ತಿಯಾದಂತಾಗಿ ಹಿಂದಕ್ಕೆ ಸರಿದು ನಿಂತರು! ಆಗ ಕಾರ್ಯಕರ್ತರು ‘ಮಿಸ್ಟರ್ ಶಾಂತವೇರಿಯವರು ಪ್ರಯಾಣದಿಂದಾಗಿ ಬಳಲಿದ್ದಾರೆ. ಸ್ವಲ್ಪ ವಿಶ್ರಾಂತಿ ಬೇಕಾಗಿದೆ, ಮಹಾಜನರು ಕೆಲವು ನಿಮಿಷಗಳ ಕಾಲ, ಶಾಂತರೀತಿಯಿಂದಿರಬೇಕಾಗಿ ಪ್ರಾರ್ಥಿಸುತ್ತೇವೆ’ ಎಂದು ಕೇಳಿಕೊಂಡರು! ಹಾಗೆ ಕೇಳಿ ಕೊಳ್ಳುತ್ತಿರುವಾಗಲೇ ‘ಮಿಸ್ಟರ್ ಶಾಂತವೇರಿ’ಯವರು ಮೆಲ್ಲಗೆ ವೇದಿಕೆಯನ್ನಿಳಿದು ಬಟ್ಟೆಬರೆಯನ್ನು ಕಂಕುಳಲ್ಲಿ ತುರುಕಿಕೊಂಡು ಜನಸಮೂಹದಲ್ಲಿ ಮಾಯವಾದರು! ಅವರಿಗಾಗಿಯೇ ಹೊಂಚುಹಾಕಿಕೊಂಡಿದ್ದ ಪೊಲೀಸರು ಅನಂತರ ಬೇರೆ ಸೂಟುದಾರಿ ಯೊಬ್ಬರನ್ನು ಹಿಡಿದು ಪೊಲೀಸ್ ಸ್ಟೇಷನ್‌ಗೆ ಕರೆದೊಯ್ದರು. ಅಲ್ಲಿ ತನಿಖೆ ಮಾಡಲಾಗಿ, ಆತ ‘ಮಿಸ್ಟರ್ ಶಾಂತವೇರಿ’ ಅಲ್ಲವೆಂದೂ ಶಿವಮೊಗ್ಗದ ಟೀ ಏಜೆಂಟ್ ಎಂದೂ ಗೊತ್ತಾಯಿತು. ಆಗ ಪೊಲಿಸರು ಪೆಚ್ಚಾದರು. ಅಷ್ಟರಲ್ಲಿ ‘ಮಿಸ್ಟರ್ ಶಾಂತವೇರಿ’ ಆಗಿದ್ದ ಗೋಪಾಲಗೌಡರು ಭೂಗತ ರಾಗಿದ್ದರು. ಅಂದಿನಿಂದ ಗೋಪಾಲಗೌಡರಿಗೆ ‘ಶಾಂತವೇರಿ’ ಎಂಬ ಹೆಸರು ಪ್ರಸಿದ್ಧವಾಯಿತು.

ಸಮಾಜವಾದಕ್ಕೆ

ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನೂ, ಕೆಚ್ಚನ್ನೂ ತುಂಬಿಕೊಂಡಿದ್ದ ಶಾಂತವೇರಿ ಗೋಪಾಲಗೌಡರನ್ನು ಮೈಸೂರು ರಾಜ್ಯದಲ್ಲಿ ಪ್ರಜಾಪ್ರಭುತ್ವ ಅಸ್ತಿತ್ವಕ್ಕೆ ಬಂದ ಮೇಲೆ ರಾಜಕೀಯ ರಂಗ ಕೈಬೀಸಿ ಕರೆಯಿತು. ಅದರಿಂದ ಅವರು ಆಕರ್ಷಿತರಾದರು. ೧೯೪೭ರ ಸ್ವತಂತ್ರ ಭಾರತ ಚುರುಕಾದ ರಾಜಕೀಯ ಚಟುವಟಿಕೆಗಳನ್ನು ಕಂಡುಕೊಂಡಿತು. ಎಲ್ಲ ಪಕ್ಷಗಳವರೂ ಚುರುಕಾದಂತೆ ಸಮಾಜವಾದಿಗಳು ಸಹ ತೀವ್ರ ಚಟುವಟಿಕೆಯಲ್ಲಿ ತೊಡಗಿದರು. (ಸಮಾಜವಾದಿಗಳು ದೇಶದ ಸಂಪತ್ತೆಲ್ಲ ಸಮಾಜಕ್ಕೆ ಸೇರಿದ್ದು; ಮುಖ್ಯ ಉತ್ಪಾದನೆಗಳನ್ನು ಮಾಡುವ ಉದ್ಯಮಗಳು ಸರ್ಕಾರದ ಕೈಯಲ್ಲಿರಬೇಕು. ಅವುಗಳ ಪ್ರಯೋಜನ, ಲಾಭ ಇಡೀ ಸಮಾಜಕ್ಕೆ ದೊರಕಬೇಕು ಎಂದು ಪ್ರತಿಪಾದಿಸುತ್ತಾರೆ).

ಜಯಪ್ರಕಾಶ ನಾರಾಯಣ್, ಡಾಕ್ಟರ್ ರಾಮಮನೋಹರ ಲೋಹಿಯಾ ಮೊದಲಾದವರು ಸಮಾಜವಾದದ ಹಿರಿಯ ನಾಯಕರು. ಅವರು ದೇಶದಾದ್ಯಂತ ಸಂಚಾರ ಮಾಡಿದರು; ಕರ್ನಾಟಕಕ್ಕೂ ಬಂದರು. ಸಮಾಜ ಪ್ರಜ್ಞೆಯ ತರುಣ ಸಮೂಹವನ್ನು ತಮ್ಮ ವಿಚಾರಧಾರೆಯತ್ತ ಸೆಳೆದರು. ಹಾಗೆ ಸೆಳೆಯಲ್ಪಟ್ಟವರಲ್ಲಿ ಗೋಪಾಲಗೌಡರೂ ಒಬ್ಬರು. ಆ ವೇಳೆಗಾಗಲೇ ರಾಜ್ಯದ ಅನೇಕ ಗಣ್ಯ ರಾಜಕೀಯ ಮುಖಂಡರ ಸಂಪರ್ಕವನ್ನು ಬೆಳೆಸಿಕೊಂಡು ಅವರು ಸಂಪೂರ್ಣ ವಾಗಿ ರಾಜಕೀಯ ರಂಗಕ್ಕೆ ಧುಮುಕಿದರು.

ರೈತರು ದೀನದಲಿತರಿಗಾಗಿ

ಸಮಾಜವಾದದ ಸೆಳೆತಕ್ಕೆ ಸಿಕ್ಕಿ ಶಾಂತವೇರಿ ಯವರು ಸಹಜವಾಗಿಯೇ ರೈತರ, ದೀನದಲಿತರ ಸ್ಥಿತಿ ಗತಿಯ ಕಡೆಗೆ ಗಮನ ಹರಿಸಿದರು. ತೀರ್ಥಹಳ್ಳಿ ಮತ್ತು ಸಾಗರ ಪ್ರದೇಶದ ರೈತರ ಸಂಘಟನೆಯಲ್ಲಿ ತೊಡಗಿದುದು ಆಗಲೇ. ಆ ವೇಳೆಗಾಗಲೇ ತೀರ್ಥಹಳ್ಳಿಯಲ್ಲಿ ಮಲೆನಾಡು ಗೇಣಿದಾರರ ಸಂಘವು, ಸಾಗರದಲ್ಲಿ ರೈತ ಸಂಘವು ಅಸ್ತಿತ್ವಕ್ಕೆ ಬಂದಿದ್ದವು. ಸಮಾಜವಾದಿ ಪಕ್ಷದ ‘ಹಿಂದ್ ಕಿಸಾನ್ ಪಂಚಾಯಿತಿ’ ಯಲ್ಲಿ ಈ ಸಂಘಗಳನ್ನು ವಿಲೀನಗೊಳಿಸಿ ೧೯೪೮ರಲ್ಲಿ ತೀರ್ಥಹಳ್ಳಿಯಲ್ಲಿ ದೊಡ್ಡ ರೈತ ಸಮ್ಮೇಳನವನ್ನೇ ನಡೆಸಿದರು. ತಮ್ಮ ಸಂಘಟನಾಚಾತುರ್ಯವನ್ನು ತೋರಿಸಿಕೊಟ್ಟರು. ಅಂದಿನ ಆ ಸಮ್ಮೇಳನಕ್ಕೆ ಅಖಿಲ ಭಾರತ ಶ್ರೇಣಿಯಲ್ಲಿದ್ದ ಕಮಲಾದೇವಿ ಚಟ್ಟೋಪಾಧ್ಯಾಯ, ರಮಾನಂದನ ಮಿಶ್ರ ಮೊದಲಾದ ಹಿರಿಯರನ್ನು ಆಹ್ವಾನಿಸಿದ್ದರು. ಅಂದಿನಿಂದ ಗೋಪಾಲಗೌಡರ ಹೆಸರು ಅಖಿಲ ಭಾರತ ಮಟ್ಟದ ಸಮಾಜವಾದಿ ನಾಯಕರಿಗೆ ಪರಿಚಯವಾಯಿತು; ಅವರ ಜತೆ ನಿಕಟ ಸಂಪರ್ಕ ಬೆಳೆಯಿತು. ಡಾಕ್ಟರ್ ರಾಮಮನೋಹರ ಲೋಹಿಯಾ ಅವರ ಪ್ರಭಾವಕ್ಕೊಳಗಾದ ಅವರು ಹೊಸ ಹುರುಪನ್ನೇ ತಳೆದರು; ಪ್ರಖರವಾದ ವ್ಯಕ್ತಿತ್ವವನ್ನು ರೂಪಿಸಿಕೊಂಡರು. ಹಿಂದಿಯಲ್ಲಿ ಸೊಗಸಾಗಿ ಭಾಷಣ ಮಾಡುತ್ತಿದ್ದ ಗೋಪಾಲಗೌಡರು ಉತ್ತರ ಭಾರತದಲ್ಲಿಯೂ ಪ್ರಸಿದ್ಧಿ ಪಡೆದಿದ್ದರೆಂಬುದು ಗಮನಿಸಬೇಕಾದ ಅಂಶ. ಕಾಗೋಡು ಸತ್ಯಾಗ್ರಹ ರೈತ ಸಂಘಟನೆಯಲ್ಲಿ ಹೆಚ್ಚು ಒಲವು ತೋರಿಸಿದ ಗೌಡರು, ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಪ್ರಮುಖ ಘಟನೆಯಾಗಿ ರೂಪುಗೊಂಡ, ಕಾಗೋಡು ರೈತ ಸತ್ಯಾಗ್ರಹವನ್ನು ನಡೆಸಿದರು. ಕಾಗೋಡು ಶಿವಮೊಗ್ಗ ಜಿಲ್ಲೆಯ ಸಣ್ಣ ಹಳ್ಳಿ. ಅಲ್ಲಿ ರೈತರು ಜಮೀನ್ದಾರರ ಅನ್ಯಾಯಗಳನ್ನು ಪ್ರತಿಭಟಿಸಿದರು. ಜಮೀನ್ದಾರರಿಗಾಗಿ ದುಡಿದು ಅದರ ಲಾಭವನ್ನೆಲ್ಲ ಅವರಿಗೊಪ್ಪಿಸಿ ಅವರ ದಯೆಯಿಂದ ರೈತರು ಬಾಳುವಂತಾಗಿತ್ತು. ಧಾನ್ಯ ಒಪ್ಪಿಸುವಾಗ ಬಳಸುವ ಅಳತೆ ಕೂಡ, ನ್ಯಾಯವೋ ಅಲ್ಲವೋ, ಜಮೀನ್ದಾರರು ಹೇಳಿದಂತೆ ಆಗಬೇಕಾಗಿತ್ತು. ಎಷ್ಟೋ ಮಂದಿ ಜೀತದಾಳುಗಳಾಗಿದ್ದರು. ಗಂಡಸರು ಮೊಣಕಾಲಿನಿಂದ ಮೇಲೆ ಪಂಚೆ ಉಡಬೇಕು. ಹೆಂಗಸರು ಸೀರೆಯನ್ನು ಕಾಲಿನತನಕ ಉಡಕೂಡದು. ಇಂತಹ ನಿರ್ಬಂಧಗಳು. ರೈತರು ತಿರುಗಿಬಿದ್ದರು. ಅದು ಗೋಪಾಲಗೌಡರ ಸತ್ವಪರೀಕ್ಷೆಯ ಘಟನೆಯಾಯಿತು. ಜಮೀನ್ದಾರರು ರೈತರನ್ನು ಗೇಣಿಯಿಂದ ತೆಗೆದು ಹಾಕಿದರು. ಸಮಾಜವಾದಿ ಪಕ್ಷದವರ ನಾಯಕತ್ವದಲ್ಲಿ ರೈತರು ಗುಂಪುಗುಂಪಾಗಿ ಗದ್ದೆಗಿಳಿದರು. ಪೊಲೀಸರು ತಡೆದು ದಸ್ತಗಿರಿ ಮಾಡಿದರು. ಸತ್ಯಾಗ್ರಹದಲ್ಲಿ ಗೌಡರು ‘ಸೈ’ ಎನಿಸಿಕೊಂಡರು. ೧೯೫೧ರಲ್ಲಿ ನಡೆದ ಆ ಸತ್ಯಾಗ್ರಹಕ್ಕೆ ಡಾಕ್ಟರ್ ಲೋಹಿಯಾ ಅವರೂ ಬಂದಿದ್ದರು. ಸತ್ಯಾಗ್ರಹ ನಡೆಸಿ ಕಾರಾಗೃಹ ಸೇರಿದರು. ಹೆಸರಾಂತ ಕಾಗೋಡು ಸತ್ಯಾಗ್ರಹದ ಸಂದರ್ಭದಲ್ಲಿ ಅನೇಕಮಂದಿ ಪ್ರಭಾವೀ ತರುಣರು ಸಮಾಜವಾದದತ್ತ ತಿರುಗಿದರು. ಮುಂದೆ ಪ್ರಮುಖ ವ್ಯಕ್ತಿಗಳಾಗಿ ರೂಪುಗೊಂಡರು. ಕಾಗೋಡು ಸತ್ಯಾಗ್ರಹವನ್ನು ಯಶಸ್ವಿಯಾಗಿ ನಡೆಸಿದ ಗೋಪಾಲಗೌಡರು ‘ಹಿಂದ್ ಕಿಸಾನ್ ಪಂಚಾಯತಿ’ಯ ಕರ್ನಾಟಕ ಶಾಖೆಯ ಅಧ್ಯಕ್ಷರಾಗಿ ನಿಯೋಜಿತರಾದರು. ವಿಧಾನಸಭೆಯಲ್ಲಿ ೧೯೫೨ರ ವೇಳೆಗೆ ಜನಪ್ರಿಯ ತರುಣ ನಾಯಕರಾಗಿ ಬೆಳೆದ ಗೋಪಾಲಗೌಡರು ಪ್ರಥಮ ಮಹಾಚುನಾವಣೆಯಲ್ಲಿ ಗೆದ್ದು ಮೈಸೂರು ವಿಧಾನಸಭೆಯ ಸದಸ್ಯರಾದರು. ಒಂದಲ್ಲ ಒಂದು ಚಟುವಟಿಕೆಯಲ್ಲಿ ತೊಡಗಿ ಸದಾ ಸುದ್ದಿ ಯಲ್ಲಿರುತ್ತಿದ್ದರು. ಸತ್ಯ ಪ್ರತಿಪಾದನೆಯಲ್ಲಿ ಎತ್ತಿದ ಕೈ! ಅನ್ಯಾಯವನ್ನು ಸಹಿಸುವ ಜಾಯಮಾನ ಅವರದಲ್ಲ. ವಿಧಾನಸಭೆಯಲ್ಲಿ ನಿಷ್ಠುರವಾದಿಗಳ ಅಗ್ರ ಪಂಕ್ತಿಯಲ್ಲಿದ್ದರು. ಗೋಪಾಲಗೌಡರು ವಿಧಾನಸಭೆಯಲ್ಲಿ ಅನೇಕ ಮಹತ್ವದ ನಿರ್ಣಯಗಳ ಪ್ರತಿಪಾದಕರಾಗಿದ್ದರು. ಗಂಡಭೇರುಂಡ ಹಿಂದಿನ ಮೈಸೂರು ರಾಜಮನೆತನದ ಲಾಂಛನ. ರಾಜತ್ವವನ್ನು ಗೋಪಾಲಗೌಡರು ವಿರೋಧಿಸುತ್ತಿದ್ದರು. ಅಠಾರ ಕಛೇರಿ ಮೇಲಿನ ಗಂಡಭೇರುಂಡ ಧ್ವಜವನ್ನು ಕೆಳಗಿಳಿಸುವ ನಿರ್ಣಯ ತಂದರು. ಕರ್ನಾಟಕ ಏಕೀಕರಣಕ್ಕೆ ಬೆಂಬಲ ನೀಡುವ, ಕೋಲಾರದ ಚಿನ್ನದ ಗಣಿಯನ್ನು ರಾಷ್ಟ್ರೀಕರಣ ಮಾಡುವ, ರಸ್ತೆ ಸಾರಿಗೆಯನ್ನು ರಾಷ್ಟ್ರೀಕರಣ ಮಾಡುವ ಇವೇ ಮೊದಲಾದ ನಿರ್ಣಯಗಳ ಪ್ರತಿಪಾದಕರಾದರು. ಭೂಸುಧಾರಣೆಗೆ ನಾಂದಿಯಾದ ಗೇಣಿ ಶಾಸನ ಮತ್ತು ಇನಾಂ ರದ್ದತಿ ಶಾಸನಗಳ ಬಗೆಗೆ ಜನಮನವನ್ನು ಸೆಳೆಯುವುದರಲ್ಲಿ ಯಶಸ್ವಿಯಾದರು.


ಅಖಂಡ ಕರ್ನಾಟಕಕ್ಕಾಗಿ

ಗೋಪಾಲಗೌಡರು ಕಟ್ಟಾ ಕರ್ನಾಟಕ ವಾದಿಗಳು. ಹರಿದು ಹಂಚಿಹೋಗಿದ್ದ ಕನ್ನಡನಾಡು ಒಂದುಗೂಡಬೇಕೆಂಬುದು ಅವರ ಉತ್ಕಟೇಚ್ಛೆ ಯಾಗಿತ್ತು.

ಇದರ ಸಾಧನೆಯಲ್ಲಿ ತೊಡಗಿದ್ದ ಹಿರಿಯರಿಗೆ ಪರಿಪೂರ್ಣ ಬೆಂಬಲ ನೀಡಿದರು. ಏಕೀಕರಣಕ್ಕೆ ಸಂಬಂಧಿಸಿದ ಯಾವುದೇ ಸಭೆ ಸಮ್ಮೇಳನಗಳಲ್ಲಿ ಮುಂಚೂಣಿಯಾಗಿ ನಿಲ್ಲುವುದು ಅವರ ಸ್ವಭಾವ. ಏಕೀಕರಣದ ಪರ ಮತ್ತು ವಿರೋಧಿ ಬಣಗಳ ನಡುವೆ ಕೊಂಡಿಯಂತೆ ಕೆಲಸ ಮಾಡಿದವ ರವರು. ಏಕೀಕರಣವಾಗದ ಹೊರತು, ಕನ್ನಡಿಗರ ಹಾಗೂ ಕನ್ನಡದ ಉದ್ಧಾರ ಸಾಧ್ಯವಿಲ್ಲ ಎಂಬುದು ಅವರ ಖಚಿತ ಅಭಿಪ್ರಾಯವಾಗಿತ್ತು. ರಾಜ್ಯ ಪುನರ್ ವಿಂಗಡಣೆಯ ನಿರ್ಧಾರಕ್ಕಾಗಿ ಭಾರತ ಸರ್ಕಾರ ನೇಮಿಸಿದ ಫಜಲ್ ಅಲಿ ಆಯೋಗವು ಕರ್ನಾಟಕಕ್ಕೆ ಭೇಟಿ ಇತ್ತಾಗ, ಕನ್ನಡಿಗರ ಪರ ವಾದವನ್ನು ಮಂಡಿಸಿದ ಪ್ರಮುಖರಲ್ಲಿ ಅವರೂ ಒಬ್ಬರು. ಗೋಪಾಲಗೌಡರು ಶಾಸಕರಾಗಿದ್ದಾಗಲೇ, ೧೯೫೬ರ ನವೆಂಬರ್ ಒಂದರಂದು ಕರ್ನಾಟಕ ಏಕೀಕರಣವಾಯಿತು. ೧೯೫೭ರ ಮಹಾಚುನಾವಣೆಯಲ್ಲಿ ಗೋಪಾಲಗೌಡರು ಸೋತರು. ಆದರೆ, ರಾಜಕೀಯ ವಾಗಿ ಹಿಂದೆ ಬೀಳಲಿಲ್ಲ. ಕರ್ನಾಟಕದಲ್ಲಿ ರಾಮಮನೋಹರ ಲೋಹಿಯಾ ಸಮಾಜವಾದಿ ಪಕ್ಷವನ್ನು ಸಂಘಟಿಸುವುದರಲ್ಲಿ ನಿರತರಾದರು. ಆ ಮೂಲಕ ಸಮಾಜದ ಸಂಕಷ್ಟಗಳನ್ನು ಸರ್ಕಾರದ ಗಮನಕ್ಕೆ ತರುವುದರಲ್ಲಿ ತೊಡಗಿದರು. ಜನತೆಯ ಆಶೋತ್ತರಗಳ ಈಡೇರಿಕೆಗಾಗಿ ಆಗಾಗ ಚಳುವಳಿ, ಸತ್ಯಾಗ್ರಹಗಳನ್ನು ನಡೆಸಿದರು. ಸೆರೆಮನೆವಾಸಗಳನ್ನು ಅನುಭವಿಸಿದರು. ಮತ್ತೆ ೧೯೬೨ರ ಮಹಾಚುನಾವಣೆಯಲ್ಲಿ ವಿಜಯ ಸಾಧಿಸಿ, ಹೆಚ್ಚು ಪುಷ್ಟಿಯುತರಾಗಿ ವಿಧಾನಸಭೆಯನ್ನು ಪ್ರವೇಶಿಸಿದರು. ಅಂದಿನಿಂದ ೧೯೭೨ ರ ವರೆಗೆ ವಿಧಾನಸಭಾ ಸದಸ್ಯರಾಗಿದ್ದು, ಒಂದು ಬಗೆಯ ಇತಿಹಾಸವನ್ನೇ ನಿರ್ಮಿಸಿದರು. ೧೯೭೨ರಲ್ಲಿ ಆರೋಗ್ಯ ಇಳಿಮುಖವಾಗುವವರೆಗೆ ರಾಜಕೀಯ ರಂಗದ ಮೂಲಕ ಸಮಾಜ ಸೇವೆಯನ್ನು ನಿಷ್ಠೆಯಿಂದ ಮಾಡಿದರು. ೧೯೭೨ರಲ್ಲಿ ತಮ್ಮ ಸ್ಪರ್ಧಾಕ್ಷೇತ್ರವನ್ನು (ತೀರ್ಥಹಳ್ಳಿ) ಕೋಣಂದೂರು ಲಿಂಗಪ್ಪನವರಿಗೆ ಬಿಟ್ಟುಕೊಟ್ಟು ಆಶೀರ್ವಾದ ಮಾಡಿದರು. ಕುಟುಂಬ ಜೀವನ ಗೋಪಾಲಗೌಡರ ಮದುವೆಯಾದುದು ೧೯೬೪ರಲ್ಲಿ. ಧಾರವಾಡದ ಪ್ರಸಿದ್ಧ ವಕೀಲರೂ ಸಮಾಜಸೇವಕರೂ ವಿಚಾರವಾದಿಗಳೂ ಆದ ದೇವನಗೌಡ ಲಿಂಗನಗೌಡ ಪಾಟೀಲರ ಮಗಳು ಸೋನಕ್ಕ ಇವರ ಮಡದಿಯಾದರು. ಗೋಪಾಲಗೌಡ ದಂಪತಿಗಳಿಗೆ ಇಬ್ಬರೇ ಮಕ್ಕಳು. ಮಗಳು ಇಳಾಗೀತ ೧೯೬೭ರ ಮಾರ್ಚ್ ತಿಂಗಳಲ್ಲಿ ಹುಟ್ಟಿದಳು; ಒಂದು ವರ್ಷ ಒಂದು ತಿಂಗಳ ನಂತರ, ಅಂದರೆ ೧೯೬೮ರ ಏಪ್ರಿಲ್‌ನಲ್ಲಿ ಅವರ ಮಗ ರಾಮಮನೋಹರ ಜನಿಸಿದ. ಬೆಂಗಳೂರು ನಗರದ ಹೆಣ್ಣುಮಕ್ಕಳ ಪ್ರೌಢಶಾಲೆಯಲ್ಲಿ ಉಪಾಧ್ಯಾಯನಿಯಾಗಿದ್ದ ಶ್ರೀಮತಿ ಸೋನಕ್ಕ ಅವರು ಶಿಕ್ಷಣ ಇಲಾಖೆಯಲ್ಲಿ ಅಧಿಕಾರಿಗಳಾಗಿದ್ದಾರೆ. ಗೋಪಾಲಗೌಡರು ತಮ್ಮ ಮಗಳಿಗೆ ‘ಇಳಾಗೀತ’ ಎಂದು ಹೆಸರಿಟ್ಟ ಪ್ರಸಂಗ ಬಹಳ ಮನೋಜ್ಞವಾಗಿದೆ. ಡಾಕ್ಟರ್ ವಿ.ಕೃ ಗೋಕಾಕ್ ಅವರ ‘ಇಳಾಗೀತ’ ಕಾವ್ಯವನ್ನು ಓದಿ, ಮೋಹಿತರಾಗಿದ್ದರಿಂದ ತಮ್ಮ ಮಗಳಿಗೆ ಅದೇ ಹೆಸರನ್ನಿಟ್ಟರಂತೆ. ಆಧುನಿಕ ಸಾಹಿತ್ಯ ಬೆಳವಣಿಗೆಯನ್ನು ಗೌಡರು ಎಷ್ಟೊಂದು ಗಾಢವಾಗಿ ಅವಲೋಕಿಸುತ್ತಿದ್ದರೆಂಬುದಕ್ಕೆ ಈ ಪ್ರಸಂಗ ಸಾಕ್ಷಿಯಾಗಿದೆ. ಗೋಪಾಲಗೌಡರು ದಾಂಪತ್ಯ ಜೀವನಕ್ಕೆ ಕಾಲಿಟ್ಟರಾದರೂ, ರಾಜಕೀಯ ಮತ್ತು ಸಾಮಾಜಿಕ ಕರ್ತವ್ಯಗಳ ಕರೆಯನ್ನು ಕಡೆಗಣಿಸಲು ಸಾಧ್ಯವಾಗಲಿಲ್ಲ. ದಾಂಪತ್ಯ ಜೀವನದ ಮೂರುನಾಲ್ಕು ವರ್ಷಗಳ ನಂತರ, ರಾಜಕೀಯ ಹಾಗೂ ಸಾಮಾಜಿಕ ಕಾರ್ಯ ಚಟುವಟಿಕೆಗಳಿಗೇ ಹೆಚ್ಚು ಕಾಲವನ್ನು ಗೌಡರು ಮೀಸಲಿರಿಸಿದ್ದರು. ಆರೋಗ್ಯದ ಕಡೆ ಹೆಚ್ಚು ಗಮನ ಕೊಡಲಿಲ್ಲ. ಅದು ಕೆಡುತ್ತಾ ಬಂದಿತು. ಎಂಟು ವರ್ಷ ಗಳ ದಾಂಪತ್ಯ ಜೀವನ ನಡೆಸಿ, ರಾಷ್ಟ್ರಾಭಿವೃದ್ಧಿಯ ಚಿಂತನೆಯಲ್ಲಿಯೇ ೧೯೭೨ರಲ್ಲಿ ತೀರಿಕೊಂಡರು. ಸಮಾಜದ ಚಿಂತನೆಯೇ ಉಸಿರು ಗೋಪಾಲಗೌಡರಿಗೆ ಸಮಗ್ರ ಸಮಾಜದ ಚಿಂತನೆಯೇ ಜೀವನದ ಉಸಿರಾಗಿತ್ತು. ಸಣ್ಣಪುಟ್ಟ ವಿಚಾರಗಳಿಗೆ ತಲೆಕೆಡಿಸಿಕೊಂಡವರಲ್ಲ. ಸಾಹಿತ್ಯ, ಸಂಸ್ಕೃತಿ, ಸಮಾಜ, ರಾಜಕೀಯ ಮೊದಲಾದ ಎಲ್ಲ ಕ್ಷೇತ್ರಗಳ ಸರ್ವತೋಮುಖ ಅಭಿವೃದ್ಧಿಗಾಗಿ ಸದಾ ಜಾಗೃತಮನಸ್ಕರಾಗಿದ್ದ ಗೌಡರು, ದೀನದಲಿತರ ಬಗ್ಗೆ, ನಿರುದ್ಯೋಗಿಗಳ ಬಗ್ಗೆ, ಮಾನವ ಧರ್ಮದ ಜಾಗೃತಿಯ ಬಗ್ಗೆ ಹೃದಯ ತುಂಬಿದ ಕಾಳಜಿಯನ್ನು ಹೊಂದಿದ್ದರು. ಒಮ್ಮೆ ವಿಧಾನಸಭೆಯಲ್ಲಿ ಮಾತನಾಡುತ್ತ ‘ನನ್ನ ದೃಷ್ಟಿ ಸಾಮಾನ್ಯವಾಗಿ ರಾಜಕೀಯ ದೃಷ್ಟಿ. ಸಮಾಜದಲ್ಲಿ ಹೆಚ್ಚಾಗಿ ಆರ್ಥಿಕ ಸಮಾನತೆ ಉಂಟಾಗಬೇಕು. ಸಮಾನತೆ ಇರಬೇಕು, ಸ್ವಾತಂತ್ರ್ಯ ಇರಬೇಕು ಎಂಬುದನ್ನೇ ಪ್ರಾಮುಖ್ಯವಾಗಿ ನೋಡುವವನು’ ಎಂದರು. ಮತ್ತೊಮ್ಮೆ ನಿಮ್ನವರ್ಗ ದವರನ್ನು ಕುರಿತು ಮಾತನಾಡುತ್ತ, ‘ಈ ಜನಾಂಗ ಶತಶತಮಾನಗ ಳಿಂದಲೂ ಕೆಳಗೆ ಒತ್ತಲ್ಪಟ್ಟಿದೆ. ನೂರಾರು ವರ್ಷಗಳಿಂದ ಈ ಜನಾಂಗ, ಇತರ ಜನಾಂಗಗಳವರ ಅಭಿವೃದ್ಧಿಗೆ ಕೊಟ್ಟಿರುವ ಸಾಲವನ್ನು ತೀರಿಸಲು ನಾವೆಲ್ಲರೂ ತೆರಬೇಕಾದ ಋಣ ಬಹಳವಾಗಿದೆ’ ಎಂದರು. ವ್ಯಕ್ತಿತ್ವ , ಸೇವೆ ಗೋಪಾಲಗೌಡರು ಕೆಲವೊಮ್ಮೆ ಸಿಟ್ಟು ಸೆಡವು ಗಳಿಂದ ಆವೃತ್ತರಾಗಿ, ಮೈಮರೆತು ನಡೆದುಕೊಳ್ಳುವಂತೆ ಕಂಡುಬಂದರೂ (ದೇಹದ ಸ್ಥಿತಿಯಿಂದಾಗಿ ಹಾಗಾಗು ತ್ತಿತ್ತೆಂಬುದು ಕೆಲವು ಆಪ್ತೇಷ್ಟರ ಅನಿಸಿಕೆ) ಅವರ ನಿಷ್ಠಾಪೂರ್ಣ ಸೇವೆಯ ಮುಂದೆ ಅಂತಹ ಕ್ಷಣಿಕ ಸಂದರ್ಭಗಳು ನಿಲ್ಲುತ್ತಿರಲಿಲ್ಲ. ಅವರು ಅನೇಕ ವಿಚಾರಗಳಲ್ಲಿ ಅನುಕರಣೀಯ ಶಾಸಕರಾಗಿ, ವಿಧಾನಸಭೆಯ ಕರ್ತವ್ಯ ನಿರೂಪಣೆಯ ಮಹತ್ವವನ್ನು ತೋರಿಸಿಕೊಟ್ಟರು. ಅಧಿಕಾರಕ್ಕಾಗಿ ಎಂದೂ ಆಸೆಪಡದ ಗೌಡರು ಪ್ರಾಮಾಣಿಕವಾದ ಜೀವನಕ್ಕಾಗಿ ಅಪೇಕ್ಷೆಪಟ್ಟವರು. ಆತ್ಮಾಭಿಮಾನ ಅವರ ಆಸ್ತಿಯಾಗಿತ್ತು, ವ್ಯಕ್ತಿಜೀವನಕ್ಕೂ ಇದನ್ನೇ ಅಳತೆಗೋಲಾಗಿಸುವ ಆತುರ ಅವರದಾಗಿತ್ತು. ಗೋಪಾಲಗೌಡರು ಹುಟ್ಟು ಧೀಮಂತ ರಾದ್ದರಿಂದ, ಯಾವ ಕ್ಷೇತ್ರದಲ್ಲಿ ಕಾಲಿಟ್ಟರೂ ಎತ್ತರಕ್ಕೆ ಬೆಳೆವ ಶಕ್ತಿಯುಳ್ಳವರಾಗಿದ್ದರು.ಅವರು ಸಾಹಿತ್ಯಕ್ಷೇತ್ರದಲ್ಲಿ ಪೂರ್ಣಪ್ರವೇಶ ಮಾಡಿದ್ದರೆ ದೊಡ್ಡ ಕೊಡುಗೆಯನ್ನೇ ನೀಡುತ್ತಿದ್ದರೆಂಬುದರಲ್ಲಿ ಅನುಮಾನವಿಲ್ಲ. ಅವರ ಮೊದ ಮೊದಲ ಬರಹಗಳೂ ಅನಂತರದ ಭಾಷಣಗಳ ಭಾಷಾವೈಭವ ಈ ಅಭಿಪ್ರಾಯಕ್ಕೆ ಸಾಕ್ಷಿ ಯನ್ನೊದಗಿಸುತ್ತವೆ. ಅವರು ಕೆಲವು ಒಳ್ಳೆಯ ಕವನಗಳನ್ನು ರಚಿಸಿದ್ದರೆಂಬುದು ಕೆಲವರಿಗಾದರೂ ತಿಳಿದಿರುವ ಅಂಶ. ಚಲನಚಿತ್ರವೂ ಸಾಹಿತ್ಯದಷ್ಟೇ ಮಹತ್ವದ್ದೆಂದು ಭಾವಿಸಿಕೊಂಡಿದ್ದ ಗೌಡರು ಇದು ಸಮಾಜಕ್ಕೆ ಒಳ್ಳೆಯ ಮಾಧ್ಯಮ ವನ್ನೊದಗಿಸುತ್ತದೆಂದು ವಾದಿಸುತ್ತಿದ್ದರಲ್ಲದೆ, ಅನಂತಮೂರ್ತಿಯವರ ಸಂಸ್ಕಾರ ದಂತಹ ಕೃತಿಯನ್ನು ಚಿತ್ರೀಕರಿಸುವುದರಲ್ಲಿ ಕಾರಣಕರ್ತ ರಾಗಿ ತಮ್ಮ ನಿಲುವಿಗೆ ಸಾಕ್ಷಿಯನ್ನೊದಗಿಸಿದ್ದಾರೆ. ಗೋಪಾಲಗೌಡರ ಬಗ್ಗೆ ಇಷ್ಟೆಲ್ಲ ಹೇಳಿದ ಮೇಲೆ ಅವರು ಕ್ರಾಂತಿಕಾರ ಮನೋಧರ್ಮವನ್ನು ಹೊಂದಿದ್ದರೆಂಬುದು ಸ್ಪಷ್ಟವಾದಂತಾಯಿತು. ಅವರು ವಿಧಾನ ಸಭಾಧಿವೇಶನದಲ್ಲಿ ಮಾಡುತ್ತಿದ್ದ ಭಾಷಣಗಳು ಅನೇಕ ವಿಚಾರ ಕ್ರಾಂತಿಯನ್ನು ಒಳಗೊಂಡಿರುತ್ತಿದ್ದವು. ಧರ್ಮದ ವಿಚಾರದಲ್ಲಿಯೂ ಅವರಿಗೆ ಸ್ಪಷ್ಟವಾದ ಕಲ್ಪನೆ ಇತ್ತು. ಧರ್ಮಾಚರಣೆಯು ನೀತಿ ಬಾಹಿರವಾಗಿ ಇರಬಾರದೆಂಬುದು ಅವರ ಖಚಿತವಾದ ಅಭಿಪ್ರಾಯವಾಗಿತ್ತು. ಧರ್ಮಾಚರಣೆಯು ಪ್ರತಿನಿತ್ಯದ ಆಚರಣೆಯಲ್ಲಿ ಎಂದು ವಿಚಾರಶೂನ್ಯವಾಗುತ್ತದೆಯೋ ಅಂದು ಅದು ಗೊಡ್ಡು ಆಚಾರವಾಗುತ್ತದೆ ಎಂಬುದು ಅವರ ಅಭಿಪ್ರಾಯವಾಗಿತ್ತು. ವಿಚಾರಶೂನ್ಯವಾದಾಗ ಅದು ಮೂಢನಂಬಿಕೆಯಾಗಿ ಪರಿಣಮಿಸುತ್ತದೆಂದೂ, ತಿರುಳಿಲ್ಲದಂತಾಗುತ್ತದೆಂದೂ ವಿಚಾರರಹಿತವಾದ ಆಚಾರ ಸಲ್ಲದೆಂದೂ ಸ್ಪಷ್ಟವಾಗಿ ಹೇಳುತ್ತಿದ್ದರು. ಧರ್ಮಾಚರಣೆ ಎಂಬುದು ವೈಯಕ್ತಿಕ ವಿಚಾರವಾದರೂ ಅದು ನೀತಿಯ ನೆಲೆಗಟ್ಟಿನ ಮೇಲೆ ಸಾರ್ವತ್ರಿಕ ಆಚರಣೆಯಾಗಿ ಬರಬೇಕಾದುದು ಅಗತ್ಯವೆಂದು ಹೇಳುತ್ತಿದ್ದರು. ಕ್ರಾಂತಿ ಎಂಬುದರ ಬಗ್ಗೆ ಅವರದೇ ಆದ ಸ್ಪಷ್ಟ ಕಲ್ಪನೆ ಇತ್ತು. ‘ಕ್ರಾಂತಿ’ ಎಂಬ ಮಾತನ್ನು ಕೇಳಿದ ಕೂಡಲೇ, ರಕ್ತದ ನೆನಪು ಬರುವುದು ಸಹಜವಾದರೂ, ರಕ್ತಪಾತವಿಲ್ಲದೆಯೇ ಕ್ರಾಂತಿಯನ್ನು ನಡೆಸಬಹುದು ಎಂಬ ಮಾತನ್ನು ಅವರು ಆಗಾಗ ಹೇಳುತ್ತಿದ್ದುದುಂಟು. ಸಮಾಜವಾದಕ್ಕೆ ಬದ್ಧರಾಗಿದ್ದ ಅವರು ‘ಮಾನಸಿಕ ಕ್ರಾಂತಿಯಾಗಿ ಪರಸ್ಪರ ವಿಚಾರ ವಿಮರ್ಶೆಯಿಂದ ಪರಿಣಾಮಕಾರಿ ಬದಲಾವಣೆಗಳಾಗಬೇಕು’ ಎಂದು ಹೇಳುತ್ತಿದ್ದರು. ಎಲ್ಲ ಕಾಲದಲ್ಲೂ, ಎಲ್ಲ ದೇಶದಲ್ಲೂ, ಬದಲಾವಣೆಗಳು ಕಂಡು ಬಂದಿವೆಯೆಂದೂ, ಇಂತಹ ಬದಲಾವಣೆಗಳನ್ನು ತಡೆಹಿಡಿದು ಎದುರಿಸಿದಾಗ ಮಾತ್ರ ಘರ್ಷಣೆಯಾಗುತ್ತದೆಂದೂ ಅದು ರಕ್ತಕ್ರಾಂತಿಗೆ ಅವಕಾಶ ಮಾಡಿಕೊಡುತ್ತದೆಂದೂ ಅವರು ಅಭಿಪ್ರಾಯಪಡುತ್ತಿದ್ದರು. ಸಹಜವಾಗಿ ಬರುವ ಪರಿವರ್ತನೆಗೆ ಅಡ್ಡಿ ಮಾಡುವುದು ಸೂಕ್ತವಲ್ಲ ವೆಂಬುದು ಅವರ ಸ್ಪಷ್ಟ ಅನಿಸಿಕೆಯಾಗಿತ್ತು. ದೀನರು ದಲಿತರು ಮತ್ತು ನಿಮ್ನವರ್ಗದವರು ಎಂಬ ವಿಚಾರದಲ್ಲಿ ಅವರಿಗೆ ಸ್ಪಷ್ಟವಾದ ಕಲ್ಪನೆ ಇತ್ತು. ದಲಿತರೂ, ದೀನರೂ ನಿಮ್ನ ವರ್ಗದವರಾಗಿರಬೇಕಾಗಿಲ್ಲವೆಂದೂ, ನಿಮ್ನವರ್ಗದವರೆಲ್ಲ ದಲಿತರೂ ದೀನರೂ ಅಲ್ಲವೆಂದೂ ವಾದಿಸುತ್ತಿದ್ದರು. ದಲಿತ ಮತ್ತು ದೀನರನ್ನು ಎಲ್ಲ ವರ್ಗಗಳಲ್ಲಿಯೂ ಗುರುತಿಸಬೇಕೆಂಬುದು ಅವರ ಸ್ಪಷ್ಟ ಅಭಿಪ್ರಾಯವಾಗಿತ್ತು. ಆದರೆ ನಿಮ್ನವರ್ಗಗಳವರಲ್ಲಿ ದಲಿತರು ಅಧಿಕವಾಗಿದ್ದಾರೆಂಬುದನ್ನು ಗಮನಿಸಿದ ಗೋಪಾಲಗೌಡರು, ಅವರಿಗಾಗಿ ಮೀಸಲಿರಿಸುವಂತೆ ರಾಜ್ಯಾಂಗದಲ್ಲಿ ಅವಕಾಶ ಕಲ್ಪಿಸಿರುವುದನ್ನು ಸಮರ್ಥಿಸುತ್ತಿದ್ದರು. ನಿಮ್ನ ದಲಿತ ಹಾಗೂ ದೀನ ಜನಾಂಗದ ಉದ್ಧಾರವಾದರೆ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಯಿತೆಂದು ಹೇಳಲು ಸಾಧ್ಯವೆಂಬುದು ಅವರ ವಾದವಾಗಿತ್ತು. ಸರ್ವತೋಮುಖ ಪ್ರತಿಭೆಯನ್ನು ಪಡೆದಿದ್ದ ಶಾಂತವೇರಿ ಗೋಪಾಲಗೌಡರು ಕರ್ನಾಟಕದ ರಾಜಕೀಯ ಕ್ಷೇತ್ರದಲ್ಲಿ ಒಬ್ಬ ಮುತ್ಸದ್ದಿಯಾಗಿ ಬೆಳಗಿ, ಬಯಲಾಗಿ ಹೋಗಿದ್ದಾರೆ. ಆಶೋತ್ತರಗಳನ್ನು ಹೊತ್ತ ತರುಣ ಜನಾಂಗಕ್ಕೆ ಅನೇಕ ಆದರ್ಶಗಳನ್ನು ಬಿಟ್ಟು ಹೋಗಿದ್ದಾರೆ.

ಲೇಖಕರು: ಹಿ. ಮ. ನಾಗಯ್ಯ ಪ್ರಕಾಶಕರು: ರಾಷ್ಟ್ರೋತ್ಥಾನ ಸಾಹಿತ್ಯ ಮುಖ್ಯ ಸಂಪಾದಕರು: ಎಲ್. ಎಸ್. ಶೇಷಗಿರಿ ರಾವ್