ಗೀತಾ ಕುಲಕರ್ಣಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗೀತಾ ಕುಲಕರ್ಣಿ
ಜನನಅಹಲ್ಯಾ ಆಳ್ವ
ಜುಲೈ ೪, ೧೯೨೭
ಮರಣಮೇ ೨೫, ೧೯೮೬
ವೃತ್ತಿಕತೆಗಾರ್ತಿ
ವಿಷಯಕನ್ನಡ ಸಾಹಿತ್ಯ

ಗೀತಾ ಕುಲಕರ್ಣಿ (ಜುಲೈ ೪, ೧೯೨೭ - ಮೇ ೨೫, ೧೯೮೬) ಕನ್ನಡದ ಮಹತ್ವದ ಕತೆಗಾರ್ತಿಯರಲ್ಲಿ ಒಬ್ಬರೆನಿಸಿದ್ದಾರೆ. ಧೈರ್ಯ, ನೇರ ಮಾತುಗಾರಿಕೆ, ಎಂತಹ ಸಂದರ್ಭದಲ್ಲೂ ಎದೆಗುಂದದೆ ನಿಭಾಯಿಸುವ ಛಾತಿಯ ಗುಣದ ಕತೆ-ಕಾದಂಬರಿ ಕಾರ್ತಿ ಎಂದೆನಿಸಿದ ಅವರು ಸಾಹಿತ್ಯ ಕ್ಷೇತ್ರದಲ್ಲಿ ಗೀತಕ್ಕ ಎಂದೇ ಪರಿಚಿತರಾಗಿದ್ದರು.

ಬಾಲ್ಯ[ಬದಲಾಯಿಸಿ]

ಗೀತಾ ಕುಲಕರ್ಣಿಯವರು ಮುಂಬಯಿಯಲ್ಲಿ ಜುಲೈ ೪, ೧೯೨೭ರಂದು ಜನಿಸಿದರು. ಇವರ ಮೊದಲಿನ ಹೆಸರು ಅಹಲ್ಯಾ ಆಳ್ವ. ಮಂಗಳೂರು ಸಮೀಪದ ಪಾವೂರು ಇವರ ಹುಟ್ಟೂರು. ತಂದೆ ಕೆ.ಟಿ.ಆಳ್ವಾ ಪ್ರಖ್ಯಾತ ವೈದ್ಯರಾಗಿದ್ದು, ಬಾಂಬೆ ಸರ್ಜಿಕಲ್ ಕಂಪನಿಯ ಸಂಸ್ಥಾಪಕ ರು. ತಾಯಿ ಕಮಲ ಆಶ್ವ. ನಾಲ್ಕು ವರ್ಷದ ಬಾಲ್ಯದಲ್ಲಿಯೇ ತಾಯಿಯನ್ನು ಕಳೆದುಕೊಂಡ ಅಹಲ್ಯಾ ಅವರ ಬಾಲ್ಯ ಮಂಗಳೂರು, ಪುತ್ತೂರು, ಉಡುಪಿ ಹೀಗೆ ತಿರುಗಾಟದಲ್ಲಿಯೇ ಕಳೆಯಿತು.

ಶಿಕ್ಷಣ[ಬದಲಾಯಿಸಿ]

  • ಗೀತಾ ಕುಲಕರ್ಣಿ ಅವರು ಓದಿದ್ದು ಮಂಗಳೂರಿನ ಬೆಸೆಂಟ್‌ ನ್ಯಾಷನಲ್‌ ಹೈಸ್ಕೂಲು, ಉಡುಪಿಯ ಕ್ರಿಶ್ಚಿಯನ್‌ ಹೈಸ್ಕೂಲುಗಳಲ್ಲಿ ಎಸ್‌.ಎಸ್‌.ಎಲ್‌.ಸಿ.ವರೆಗೆ. ಶಿವರಾಮ ಕಾರಂತರ ಪುತ್ತೂರಿನ ಬಾಲಭವನದಲ್ಲಿ ಸುಮಾರು 8 ವರ್ಷಗಳ ಕಲಿಕೆ. ಶಾಲೆಯಲ್ಲಿ ಕಲಿತದ್ದಕ್ಕಿಂತ ಜೀವನದ ಪಾಠ ಶಾಲೆಯಲ್ಲಿ ಕಲಿತದ್ದೇ ಹೆಚ್ಚು. ಗೀತಾ ಕುಲಕರ್ಣಿಯವರ ಸಮಗ್ರ ಸಾಹಿತ್ಯ ಕುರಿತು ಪ್ರೊ. ಶಾಂತಾ ಇಮ್ರಾಪೂರ ಅವರ ಮಾರ್ಗದರ್ಶನದಲ್ಲಿ ಸರೋಜಿನಿ ಜಾಧವ್‌ ರವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಿಎಚ್‌.ಡಿ. ಪದವಿ ಪಡೆದಿದ್ದಾರೆ.
  • ಅಕ್ಕ ಲೀಲಾ, ಶಿವರಾಮಕಾರಂತರ ಪತ್ನಿ. ಕಾರಂತರ ಬಳಿ ಭಾವನೆಂಬ ಭಾವಕ್ಕಿಂತ ಗುರುವಿನ ಭಕ್ತಿ. ಆದರ್ಶವಾದಿಯಾಗಿದ್ದ ಶಿವರಾಮ ಕಾರಂತರ ಮಾರ್ಗದರ್ಶನದಲ್ಲಿ ನಡೆದ ಗೀತಾ ಅವರು ಪ್ರಗತಿಶೀಲ ಮನೋಭಾವದ 'ಶೇಷಗಿರಿ ಕುಲಕರ್ಣಿ' ಅವರನ್ನು ಅಂತರ್ಜಾತೀಯ ವಿವಾಹವಾದರು.

ಜೀವನ[ಬದಲಾಯಿಸಿ]

  • ಶೇಷಗಿರಿ ಕುಲಕರ್ಣಿಯವರು ಠಾಕೂರರ ಶಾಂತಿನಿಕೇತನದಲ್ಲಿ ಅಧ್ಯಯನ ಮಾಡಿ ಬಂದಿದ್ದ ಆದರ್ಶ ವ್ಯಕ್ತಿ, ಕವಿ, ಕಾದಂಬರಿಕಾರರಾಗಿ ನವೋದಯದ ಸಂದರ್ಭದಲ್ಲಿ ಮಹತ್ತರ ಪಾತ್ರ ವಹಿಸಿದವರು. ಧಾರವಾಡದ ಗೆಳೆಯರ ಗುಂಪಿನ ಸದಸ್ಯರಲ್ಲೊಬ್ಬರಾಗಿ ಇವರು ಬರೆದಿರುವ ಆತ್ಮಕಥೆ ‘ನಾನುಕಂಡ ಗೆಳೆಯರ ಗುಂಪು’ ಒಂದು ಅದ್ವಿತೀಯ ಆತ್ಮಕಥನ. ಕುಲಕರ್ಣಿಯವರನ್ನು ಮದುವೆಯಾದ ನಂತರ ಗೀತಾ ಅವರು ನೆಲೆ ನಿಂತದ್ದು ಧಾರವಾಡದಲ್ಲಿ.
  • ಧಾರವಾಡದ ರಜತಗಿರಿ ಬಡಾವಣೆಯಲ್ಲಿದ್ದ ‘ರಾಜಹಂಸ’ ಮನೆಯಲ್ಲಿ ರಾಣಿಯಂತೆ ಬದುಕಿದರು. ಸುಂದರವಾದ ಮನೆಯಲ್ಲಿ ಎಲ್ಲವೂ ಒಪ್ಪು- ಓರಣ. ಮೊದಲಭೇಟಿಯಲ್ಲಿಯೆ ಪರಿಚಿತರಿರಲಿ, ಅಪರಿಚಿತರಿರಲಿ ಬಹುಕಾಲದಿಂದ ಪರಿಚಿತರಂತೆ ವರ್ತಿಸುತ್ತಾ, ಗಡಿಬಿಡಿಮಾಡುತ್ತಾ, ಉಲ್ಲಾಸದಿಂದ ಎಲ್ಲರೊಡನೆ ಬೆರೆಯುತ್ತಾ ನೋಡಿದವರಿಗೆ ಕೊಂಚ ವಿಚಿತ್ರ ಎನ್ನಿಸಬಹುದಾದಷ್ಟು ಸಲಿಗೆಯಿಂದ ವಿಶ್ವಾಸದಿಂದ, ಅಂತಃಕರಣ ತುಂಬಿ ಆದರಿಸುವ ವಿಶಿಷ್ಟಗುಣದ ವ್ಯಕ್ತಿತ್ವ.

ಸಾಹಿತ್ಯ ಲೋಕದಲ್ಲಿ[ಬದಲಾಯಿಸಿ]

  • ಧಾರವಾಡದಲ್ಲಿ ನೆಲೆನಿಂತ ನಂತರ ಶೇಷಗಿರಿರಾವ್‌ ಕುಲಕರ್ಣಿಯವರ ಮುಖಾಂತರ ಪರಿಚಿತರಾದವರೆಂದರೆ ದ.ಬಾ. ಕುಲಕರ್ಣಿ (ಪ್ರಬಂಧಕಾರರು-ಮನೋಹರ ಗ್ರಂಥಭಂಡಾರದ ಮಾಲೀಕರು). ಕತೆಗಾರ್ತಿ ಕೊಡಗಿನ ಗೌರಮ್ಮನವರು ತೀರಿಕೊಂಡಾಗ, ದ.ಬಾ. ಕುಲಕರ್ಣಿಯವರು ಬರೆದ ಹೃದಯಸ್ಪರ್ಶಿ ಲೇಖನ ‘ನಾ ಕಂಡ ಗೌರಮ್ಮ’ ಲೇಖನ ಓದಿ ಪ್ರಭಾವಿತರಾದರು. ದ.ಬಾ. ರವರು ಒಮ್ಮೆ, ಗೌರಮ್ಮನಂತೆ ನೀನೂ ಏಕೆ ಕಥೆ ಬರೆಯ ಬಾರದು ಎಂದು ಹೇಳಿದ ನಂತರವೇ ಇವರ ಬರವಣಿಗೆಗೆ ಒಂದು ರೀತಿಯ ಚಾಲನೆ ದೊರೆಯಿತು.
  • ಗೀತಾ ಅವರು ಬರೆದ ಮೊದಲ ಕಥೆ ‘ಅಂದು-ಇಂದು’ ದ.ಬಾ. ಕುಲಕರ್ಣಿಯವರು ಸಂಪಾದಿಸಿರುವ ‘ಆರತಿ’ ಎಂಬ ಕಥಾ ಸಂಗ್ರಹದಲ್ಲಿದೆ. ಸಣ್ಣ ಕತೆಗಳ ಮುಖಾಂತರ ಸಾಹಿತ್ಯ ರಚನೆಯನ್ನು ಪ್ರಾರಮಭಿಸಿದ ಗೀತಾ ಕುಲಕರ್ಣಿಯವರು ಹಲವಾರು ಕಾದಂಬರಿಗಳು, ಮಕ್ಕಳ ಸಾಹಿತ್ಯ, ವ್ಯಕ್ತಿಚಿತ್ರ, ಪ್ರವಾಸಸಾಹಿತ್ಯ, ವಿಡಂಬನೆ ಎಲ್ಲವೂ ಸೇರಿ ಸುಮಾರು 25 ಕ್ಕೂ ಹೆಚ್ಚು ಕೃತಿ ರಚಿಸಿದ್ದಾರೆ. ‘ಸುವರ್ಣೆಯ ಗ್ರೀನ್‌ ರೂಂ’ ಕತೆ ಪ್ರಕಟವಾದ ನಂತರ ಸಾಕಷ್ಟು ಹೆಸರು ತಂದುಕೊಟ್ಟಿದಾದರೂ ನ್ಯಾಯಾಲಯದ ಕಟ್ಟೆಯನ್ನು ಹತ್ತ ಬೇಕಾಯಿತು.
  • ಆದರೆ ಅವರು ಇದಕ್ಕೆ ಅಧೀರರಾಗಲ್ಲಿಲ್ಲ. ಕೆಚ್ಚು ಇನ್ನೂ ಹೆಚ್ಚಿತು. ಬೆಳಗ್ಗೆ ಕೋರ್ಟಿನ ಕಟಕಟೆಯಲ್ಲಿ ನಿಂತು ಸಂಜೆ ಸಭೆ ಸಮಾರಂಭಗಳಲ್ಲಿ ಸನ್ಮಾನಿತಳಾದಾಗ ಇಂತಹ ವೈರುಧ್ಯಗಳಿಂದ ಬದುಕಿನಲ್ಲಿ ಕಲಿತ ಪಾಠ ಅಪಾರ. ಮೃದುತ್ವವನ್ನು ಮರೆಮಾಡಿದ ಕಾಠಿಣ್ಯ, ಸಂಕೋಚವನ್ನು ಹೊಡೆದೋಡಿಸಿದ ನಿರ್ಭಿಡೆ, ಮಿಥ್ಯಕ್ಕೆ ಅಂಜಿ ಸತ್ಯಕ್ಕೆ ತಲೆಬಾಗುವ ಗುಣಗಳು ಮನೆಮಾಡಿಕೊಂಡು ವ್ಯಕ್ತಿತ್ವಕ್ಕೆ ಹೊಸರೂಪ ನೀಡಿದುವು.
  • ಹೀಗೆ ಇವರು ಬರೆದ ಹಲವಾರು ಕಥೆಗಳು ತೇಲಿಹೋದ ಮೋಡ, ಮೌನಸಂಧಾನ, ಸುವರ್ಣೆಯ ಗ್ರೀನ್‌ ರೂಂ, ಚಿಪ್ಪಿನೊಳಗಿನ ಮುತ್ತು, ಪಾತಾಳ, ಕಾಡುಗುಲಾಬಿ, ಅಪ್ಪಗೆ ಬರೆಯಬೇಕು ಮುಂತಾದ ಸಂಕಲನಗಳಲ್ಲಿ ಸೇರಿವೆ. ಕಾದಂಬರಿ ‘ಕಂಬನಿ ಒರೆಸಿದ ಕೈ’ ಸುಧಾ ವಾರಪತ್ರಿಕೆಯಲ್ಲಿ, ‘ಗರ್ಭ’ ಕಾದಂಬರಿಯು ತರಂಗ ವಾರ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿ ಜನಪ್ರಿಯ ಕಾದಂಬರಿಗಳೆನಿಸಿಕೊಂಡವು. ಇತರ ಕಾದಂಬರಿಗಳೆಂದರೆ ಸ್ವಪ್ನಮಂದಿರ, ಶೋಭನ, ದೀಪಮಿಂಚಿತು, ಸಂಬಂಧ, ನೂಲಏಣಿ ಮುಂತಾದವುಗಳು.
  • ಒಂದು ವಿಡಂಬನಾ ಕೃತಿ ‘ಹುರಿಗಾಳು’ ಮತ್ತು ನಾಟಕ ಸಂಕಲನ ‘ಮೂರು ನಾಟಕಗಳು’ ಅಲ್ಲದೆ ಮಕ್ಕಳ ಸಾಹಿತ್ಯದಲ್ಲೂ ಗೀತಾ ಕುಲಕರ್ಣಿಯವರು ಸಾಕಷ್ಟು ಕೃಷಿ ಮಾಡಿದ್ದು ಹೂಮನೆ, ನೇಜಿಗುಬ್ಬಚ್ಚಿ, ಹಾರುವ ಕಂಬಳಿ, ಅರವತ್ನಾಲ್ಕು ವಿದ್ಯೆ, ಏಳು ಕನ್ನಿಕೆಯರು, ತುಳುಜಾನಪದ ಕಥೆಗಳು, ಇನ್ನಷ್ಟು ತುಳು ಜಾನಪದ ಕಥೆಗಳು ಮುಂತಾದವುಗಳು ಈ ನಿಟ್ಟಿನಲ್ಲಿ ಪ್ರಮುಖ ಪ್ರಕಟಣೆಗಳಾಗಿವೆ.
  • ಕಲ್ಲುಗಳು ಎಂಬ ನಾಟಕವು ‘ಪತ್ಥರ್’ ಎಂಬ ಹೆಸರಿನಿಂದ ಹಿಂದಿಗೆ ಅನುವಾದಗೊಂಡಿದೆ. ಚಿಪ್ಪಿನೊಳಗಿನ ಮುತ್ತು ‘ಸೀಂಪ್‌ ಕಾ ಮೋತಿ’ ಎಂಬ ಹೆಸರಿನಿಂದ ದೆಹಲಿಯ ದೂರದರ್ಶನದಲ್ಲಿ ಧಾರಾವಾಹಿಯಾಗಿ ಪ್ರಸಾರವಾಗಿದೆ. ಇವರು ರಚಿಸಿದ ವ್ಯಕ್ತಿಚಿತ್ರಗಳೆಂದರೆ ತಿಮ್ಮಪ್ಪನಾಯಕ, ಮಹರ್ಷಿ ಕರ್ವೆ, ಸರೋಜಿನಿನಾಯ್ಡು (ಅನುವಾದ) ಮತ್ತು ಆಣಿ ಮುತ್ತುಗಳು. ಮಲೇಷಿಯ ಪ್ರವಾಸಮಾಡಿ ಬಂದ ನಂತರ ಬರೆದ ಪ್ರವಾಸ ಕಥನ ‘ಹಚ್ಚ ಹಸಿರಿನ ಮಲೇಷಿಯಾ’.
  • ‘ಕಂಬನಿ ಒರೆಸಿದ ಕೈ‘ ಕಾದಂಬರಿಯು ಬಿ.ಎಸ್ಸಿ, ಬಿ.ಕಾಂ. ತರಗತಿಗಳಿಗೆ, ‘ಸಂಬಂಧ’ ಕಾದಂಬರಿಯು ಬಿ.ಎ. ತರಗತಿಗಳಿಗೆ, ‘ದೀಪ ಮಿಂಚಿತು’ ಕಾದಂಬರಿಯು ಪಿ.ಯು. ತರಗತಿಗಳಿಗೆ, ಮೌನಸಂಧಾನ ಕಥಾ ಸಂಕಲನವು ಬಿ.ಎ. ತರಗತಿಗಳಿಗೂ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪಠ್ಯಪುಸ್ತಕವಾಗಿ ಆಯ್ಕೆಯಾಗಿತ್ತು. ಸಾಹಿತ್ಯದ ಎಲ್ಲಾ ಪ್ರಕಾರಗಳಿಗೂ ಗೀತಾ ಆವರ ಕಾಣಿಕೆ ಸಂದಿದೆ.

ಕ್ರಿಯಾಶೀಲ ವ್ಯಕ್ತಿತ್ವ[ಬದಲಾಯಿಸಿ]

ಸಾರ್ವಜನಿಕ ಕ್ಷೇತ್ರದಲ್ಲಿಯೂ ಕ್ರಿಯಾಶೀಲರಾಗಿದ್ದ ಗೀತಾ ಕುಲಕರ್ಣಿಯವರು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷೆಯಾಗಿ, ರಾಜ್ಯ ಸಾಹಿತ್ಯ ಅಕಾಡಮಿ ಸದಸ್ಯರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಗ್ರಂಥಾಲಯದ ಸಗಟು ಪುಸ್ತಕ ಖರೀದಿ ಸಮಿತಿಯ ಸದಸ್ಯರಾಗಿ, ಕೇಂದ್ರಸಾಹಿತ್ಯ ಅಕಾಡಮಿ ಕನ್ನಡ ಸಲಹಾ ಸಮಿತಿ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.

ಕೃತಿಗಳು[ಬದಲಾಯಿಸಿ]

ಕಾದಂಬರಿ[ಬದಲಾಯಿಸಿ]

  1. ಕಂಬನಿ ಒರೆಸಿದ ಕೈ
  2. ನೂಲ ಏಣಿ
  3. ಸ್ವಪ್ನ ಮಂದಿರ
  4. ದೀಪ ಮಿಂಚಿತು
  5. ಸಂಬಂಧ
  6. ಶೋಭನಾ

ಕಥಾ ಸಂಕಲನ[ಬದಲಾಯಿಸಿ]

  1. ಸುವರ್ಣೆಯ ಗ್ರೀನ್ ರೂಮ್
  2. ತೇಲಿ ಹೋದ ಮೋಡ
  3. ಚಿಪ್ಪಿನೊಳಗಿದ್ದ ಮುತ್ತು
  4. ಪಾತಾಳ
  5. ತೇಲಿ ಹೋದ ಮೋಡ
  6. ತುಳು ಜಾನಪದ ಕಥೆಗಳು
  7. ಇನ್ನಷ್ಟು ತುಳು ಜಾನಪದ ಕಥೆಗಳು

ನಾಟಕ[ಬದಲಾಯಿಸಿ]

  1. ಕಿಟಕಿ ತೆರೆಯಿತು
  2. ಕಲ್ಲುಗಳು

ಶಿಶು ಸಾಹಿತ್ಯ[ಬದಲಾಯಿಸಿ]

  1. ಏಳು ಕನ್ನಿಕೆಯರು
  2. ಹಾರುವ ಕಂಬಳಿ
  3. ಅರವತ್ತ ನಾಲ್ಕು ವಿದ್ಯೆ
  4. ನೇಜಿ ಗುಬ್ಬಚ್ಚಿ (ಕಾದಂಬರಿ)
  5. ಹೂಮನೆ (ಕಾದಂಬರಿ)

ನಗೆ ಬರಹ[ಬದಲಾಯಿಸಿ]

  • ಹುರಿಗಾಳು

ಜೀವನ ಚರಿತ್ರೆ[ಬದಲಾಯಿಸಿ]

  1. ತಿಮ್ಮಪ್ಪ ನಾಯಕ
  2. ಸರೋಜಿನಿ ನಾಯ್ಡು
  3. ಮಹರ್ಷಿ ಕರ್ವೆ

ಅನುವಾದ[ಬದಲಾಯಿಸಿ]

  • ಪತ್ಥರ್

ಪ್ರವಾಸ ಸಾಹಿತ್ಯ[ಬದಲಾಯಿಸಿ]

  • ಹಚ್ಹ್ಚ ಹಸುರಿನ ಮಲೇಷಿಯಾ

ಗೌರವ, ಪುರಸ್ಕಾರ[ಬದಲಾಯಿಸಿ]

  1. ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷೆಯಾಗಿ,
  2. ರಾಜ್ಯ ಸಾಹಿತ್ಯ ಅಕಾಡಮಿ ಸದಸ್ಯರಾಗಿ,
  3. ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸಮಿತಿ ಸದಸ್ಯರಾಗಿ,
  4. ಗ್ರಂಥಾಲಯದ ಸಗಟು ಪುಸ್ತಕ ಖರೀದಿ ಸಮಿತಿಯ ಸದಸ್ಯರಾಗಿ,
  5. ಕೇಂದ್ರಸಾಹಿತ್ಯ ಅಕಾಡಮಿ ಕನ್ನಡ ಸಲಹಾ ಸಮಿತಿ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
  6. ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ೧೯೭೬

ವಿದಾಯ[ಬದಲಾಯಿಸಿ]

೧೯೭೬ರಲ್ಲಿ ರಾಜ್ಯ ಸಾಹಿತ್ಯ ಅಕಾಡಮಿಯ ಪ್ರಶಸ್ತಿಯನ್ನು ಬಹು ಮಹತ್ವದ ಹಿರಿಯ ಸಾಹಿತಿಗಳಾದ ಕುವೆಂಪು ಹಾಗೂ ಮಾಸ್ತಿಯವರೊಡನೆ ಪಡೆದದ್ದೇ ನನ್ನ ಬದುಕಿನ ಭಾಗ್ಯ ಎಂದು ಸಂಭ್ರಮಿಸಿದ್ದರು. ಕಾರಂತರಿಂದ ನೃತ್ಯ, ಅಭಿನಯ, ಸಂಗೀತಗಳಲ್ಲಿ ಪರಿಣತಿ ಪಡೆದಂತೆ ಅಡಿಗೆ, ಅಲಂಕರಣ, ತೋಟಗಾರಿಕೆಯಲ್ಲಿಯೂ ಸಮಾನ ಆಸಕ್ತರಾಗಿದ್ದ ನೇರಮಾತಿನ, ದಿಟ್ಟಸ್ವಭಾವದ, ಅನಿಸಿದ್ದನ್ನು ನಿಸ್ಸಂಕೋಚವಾಗಿ ತಿಳಿಸುವ ಸ್ವಭಾವದ ಗೀತಾಕುಲಕರ್ಣಿಯವರು ಸಾಹಿತ್ಯ ಲೋಕದಿಂದ ಕಣ್ಮರೆಯಾದದ್ದು ೧೯೮೬ರ ಮೇ ೨೫ರಂದು.

ಮಾಹಿತಿ ಕೃಪೆ[ಬದಲಾಯಿಸಿ]

ಕಣಜ