ಗರುಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗರುಡ ದೇವತೆ
ಅಂಜಲಿ ಮುದ್ರನಲ್ಲಿ ಗರುಡ

ಗರುಡನು ಹಿಂದೂಧರ್ಮದಲ್ಲಿ ವಿಷ್ಣುವಿನ ವಾಹನವಾದ ದೇವತೆ. ಇವನು ವಿನತೆಯ ಮಗ.

ಮಹಾಭಾರತದಲ್ಲಿ ಗರುಡ[ಬದಲಾಯಿಸಿ]

ಭಾರತದಲ್ಲಿ ಗರುಡನಿಗೆ ಸಂಬಂಧಿಸಿದಂತೆ ಹಲವು ಪೌರಾಣಿಕ ಕಥೆಗಳಿವೆ. ಗರುಡ ಪಕ್ಷಿಗಳ ರಾಜ. ಗರುಡನ ಶಕ್ತಿ ಸಾಮರ್ಥ್ಯವನ್ನು ಮೆಚ್ಚಿದ ಮಹಾವಿಷ್ಣು ಅದನ್ನು ತನ್ನ ವಾಹನವನ್ನಾಗಿ ಮಾಡಿಕೊಂಡಿದ್ದಾನೆ. ಶಿಲ್ಪಕಲೆಯಲ್ಲಿ ಗರುಡನ ಆಕೃತಿ ಮನುಷ್ಯನಂತಿದ್ದು ಬಾಗಿದ ಕೊಕ್ಕು ಮತ್ತು ರೆಕ್ಕೆಗಳಿಂದ ಕೂಡಿರುತ್ತದೆ. ಇಂಥ ವಿಗ್ರಹಗಳನ್ನು ಹಲವು ವೈಷ್ಣವ ದೇವಾಲಯಗಳಲ್ಲಿ ಕಾಣಬಹುದು. ಗರುಡನಿಗೂ ನಾಗರಹಾವುಗಳಿಗೂ ಇರುವ ಬದ್ಧ ದ್ವೇಷಕ್ಕೆ ಸಂಬಂಧಿಸಿದ ಕಥೆಗಳೂ ಉಂಟು. ಗರುಡ ಮತ್ತು ಸೂರ್ಯನ ಸಾರಥಿಯಾದ ಅರುಣ ಎಂಬುವರು ಕಶ್ಯಪಮುನಿ ಮತ್ತು ವಿನತೆಯರ ಮಕ್ಕಳು. ಇವರ ಮಲತಾಯಿ ಕದ್ರು, ಸರ್ಪಗಳ ತಾಯಿ. ಕಾರಣಾಂತರದಿಂದ ವಿನತೆ ಕದ್ರುವಿನ ದಾಸಿಯಾಗಿರಬೇಕಾದ ಸಂದರ್ಭ ಒದಗಿತು. ನಾಗರಾಜನು ಗರುಡನ ಬೆನ್ನುಹತ್ತಿ ಸವಾರಿ ಮಾಡಲು ಪ್ರಾರಂಭಿಸಿದ. ಇದರಿಂದ ಗರುಡನಿಗೆ ತುಂಬಾ ಅವಮಾನವಾದಂತಾಯಿತು. ತಾಯಿಯ ದಾಸ್ಯವನ್ನು ತೊಡೆದುಹಾಕಲು ಮಾರ್ಗವೇನೆಂದು ವಿಚಾರಿಸಿದ. ಸ್ವರ್ಗಲೋಕದಿಂದ ಅಮೃತವನ್ನು ಕದ್ರುವಿಗೆ ತಂದು ಕೊಟ್ಟರೆ ತಾಯಿಯ ದಾಸ್ಯ ನಿವಾರಣೆಯಾಗುವುದು ಎಂದು ತಿಳಿದುಬಂತು. ಆಗ ಗರುಡ ಸ್ವರ್ಗಲೋಕಕ್ಕೆ ಹೋಗಿ ಅಲ್ಲಿ ಅಮೃತ ಕಲಶದ ರಕ್ಷಕರಾದ ಗಂಧರ್ವರನ್ನು ಕೊಂದು, ಘಟಸರ್ಪಗಳನ್ನು ಸಂಹರಿಸಿ, ಇಂದ್ರನೊಡನೆ ಹೋರಾಡಿ ಕೊನೆಗೆ ಅಮೃತ ಕುಂಭವನ್ನು ತಂದು ಮಲತಾಯಿಗೆ ಕೊಟ್ಟು ದಾಸ್ಯ ಸಂಕೋಲೆಯಿಂದ ತಾಯಿಯನ್ನು ಬಿಡಿಸಿದ. ಇವನ ಪರಾಕ್ರಮಕ್ಕೆ ಮೆಚ್ಚಿ ಇಂದ್ರ ಇವನಿಗೆ ಸರ್ಪಗಳು ಆಹಾರವಾಗಿರುವಂತೆ ವರವನ್ನಿತ್ತ. ವಿಷ್ಣು ಇವನ ಸಾಹಸ ಸಾಮರ್ಥ್ಯಗಳಿಗೆ ಮಾರುಹೋಗಿ ಇವನಿಗೆ ಸಂಪರ್ಣನೆಂದು ಬಿರುದು ಕೊಟ್ಟು ತನ್ನ ವಾಹನವನ್ನಾಗಿ ಮಾಡಿಕೊಂಡುದಲ್ಲದೇ ತನ್ನ ಧ್ವಜದಲ್ಲಿ ಲಾಂಛನವನ್ನಾಗಿರಿಸಿಕೊಂಡ.ಮಹಾಭಾರತಆದಿಪರ್ವದಲ್ಲಿ ಈ ಕತೆ ಬಹು ವಿಸ್ತಾರವಾಗಿ ಬಂದಿದೆ.

"https://kn.wikipedia.org/w/index.php?title=ಗರುಡ&oldid=1120228" ಇಂದ ಪಡೆಯಲ್ಪಟ್ಟಿದೆ