ಕೋಣ ಈದೈತೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕೋಣ ಈದೈತೆ
ಕೋಣ ಈದೈತೆ
ನಿರ್ದೇಶನಜಯಶ್ರೀ ದೇವಿ
ನಿರ್ಮಾಪಕಜೆ ಕೆ ಭಾರವಿ
ಪಾತ್ರವರ್ಗಡಾ. ವಿಷ್ಣುವರ್ಧನ್, ಕುಮಾರ್ ಗೋವಿಂದ್, ಅಂಜಲಿ, ವನಿತಾ ವಾಸು ವಿನಯಾ ಪ್ರಸಾದ್, ಸಿ. ಆರ್. ಸಿಂಹ, ಟಿ. ಎಸ್. ಲೋಹಿತಾಶ್ವ, ಶಿವರಾಮ್
ಸಂಗೀತಹಂಸಲೇಖ
ಬಿಡುಗಡೆಯಾಗಿದ್ದು೧೯೯೫
ಹಿನ್ನೆಲೆ ಗಾಯನರಾಜೇಶ್ ಕೃಷ್ಣನ್, ಚಿತ್ರ, ಸಿ. ಅಶ್ವಥ್

ಕಥಾ ಸಾರಾಂಶ[ಬದಲಾಯಿಸಿ]

ಈ ಚಿತ್ರದಲ್ಲಿ ಒಂದು ವಿಶಿಷ್ಟ ಕತೆಯಿದೆ. ನಾಯಕ (ಕುಮಾರ್ ಗೋವಿಂದ್) ಕಾಲೇಜಿನಲ್ಲಿ ಓದುವ ವಿದ್ಯಾರ್ಥಿ. ಆತನನ್ನು ಪ್ರೀತಿಸುವ ಇಬ್ಬರು ನಾಯಕಿಯರು (ಅಂಜಲಿ ಮತ್ತು ವನಿತಾ ವಾಸು). ಆತನನ್ನು ಒಲಿಸಿಕೊಳ್ಳಲು ಇಬ್ಬರ ಸತತ ಪ್ರಯತ್ನ. ಕೊನೆಗೆ ಆತ ಸಿಗುವುದಿಲ್ಲ ಎಂದು ತಿಳಿದಾಗ ಅಂಜಲಿ ತನ್ನ ತಂದೆ (ಟಿ. ಎಸ್. ಲೋಹಿತಾಶ್ವ)ಯ ಬಳಿ ದೂರು ಒಯ್ಯುತ್ತಾಳೆ. ಅವರಿಬ್ಬರೂ ಬಾಬಾ (ಶಿವರಾಮ್)ನ ಸಲಹೆಯಂತೆ ಆತನ ಮೇಲೆ ನ್ಯಾಯಾಲಯದಲ್ಲಿ ಈತ ಅಂಜಲಿಯನ್ನು ಮದುವೆಯಾದ ಆದರೆ ಆತ ಗಂಡಸಲ್ಲವೆಂದು ಕೇಸ್ ದಾಖಲಿಸುತ್ತಾರೆ. ಈ ಕೇಸಿನ ವಾದ ವಿವಾದ ನಡೆಯುವಾಗಲೇ ವನಿತಾ ತನ್ನ ತಂದೆ (ಸಿ. ಆರ್. ಸಿಂಹ)ಯೊಡನೆ ಅದೇ ಬಾಬಾನ ಸಲಹೆಯಂತೆ ಈತ ತನ್ನ ಮೇಲೆ ಅತ್ಯಾಚಾರ ಎಸಗಿದ ಎಂದು ಕೇಸ್ ಜಡಿಯುತ್ತಾಳೆ.

ಆಗ ನಾಯಕನ ಸಹಾಯಕ್ಕೆ ಕುಡುಕ ವಕೀಲ ಅಡ್ವೋಕೇಟ್ ವಿಷ್ಣು (ಡಾ. ವಿಷ್ಣುವರ್ಧನ್) ಧಾವಿಸುತ್ತಾರೆ. ಯಾವುದೋ ವೈಯಕ್ತಿಕ ಕಾರಣಕ್ಕಾಗಿ ವಕೀಲಿಕೆ ತ್ಯಜಿಸಿದ್ದ ವಿಷ್ಣು ಮರಳಿ ಬರುತ್ತಿರುವ ವಿಷಯ ತಿಳಿದ ಉಳಿದ ವಕೀಲರು ಅವರಿಗೆ ಸಹಾಯಕರಾಗಿ ನಿಲ್ಲುತ್ತಾರೆ. ಕರ್ನಾಟಕ ರಾಜ್ಯದ 'ದಡ್ರಳ್ಳಿ'ಯೆಂಬಲ್ಲಿ ಕೋಣ ಈದೈತೆ ಎನ್ನುವ ವಿಷಯ ತೆಗೆದುಕೊಂಡು ವಿಷ್ಣು ವಾದ ಮಂಡಿಸುತ್ತಾ ಹೋಗುತ್ತಾರೆ. ವಿಚಿತ್ರವೆಂಬಂತೆ ನ್ಯಾಯಾಲಯವೂ ಇದೊಂದು ಮಹತ್ವದ ಪ್ರಕರಣವೆಂದು ವಿಚಾರಣೆ ನಡೆಸುತ್ತದೆ. ಇದಕ್ಕಾಗಿ ಅವರು ಕರ್ನಾಟಕ ಸರ್ಕಾರದ ಸಚಿವರು, ಕೋಣದ ಹೆರಿಗೆ ಮಾಡಿದ ಸೂಲಗಿತ್ತಿ (ಉಮಾಶ್ರೀ), ದಡ್ರಳ್ಳಿಯ ಪಶುವೈದ್ಯ (ರಮೇಶ್ ಭಟ್) ಮುಂತಾದವರ ಸಾಕ್ಷಿ ಪಡೆಯುತ್ತಾರೆ.

ಆದರೆ ಕೊನೆಗೆ ಎರಡೂ ನಾಯಕಿಯರ ತಂದೆಯರು (ಸ್ವತಃ ವಕೀಲರು) ಇದು ಅಸಾಧ್ಯ ಎಂದು ವಾದಿಸುತ್ತಾರೆ. ಆಗ ವಿಷ್ಣು ಒಬ್ಬ ಗಂಡಸಲ್ಲದವನು ಅತ್ಯಾಚಾರ ಮಾಡಲು ಸಾಧ್ಯವಾದರೆ ಕೋಣ ಈದೈತೆ ಎನ್ನುವುದೂ ನಿಜ ಎನ್ನುತ್ತಾರೆ. ಆಗ ಇಬ್ಬರೂ ನಾಯಕಿಯರಿಗೆ ತಮ್ಮ ತಪ್ಪಿನ ಅರಿವಾಗಿ ತಮ್ಮ ಕೇಸ್ ವಾಪಸ್ ಪಡೆಯುತ್ತಾರೆ. ನಿರಪರಾಧಿಯೊಬ್ಬನನ್ನು ಉಳಿಸಲು ಈ ನಾಟಕವನ್ನು ಆಡಬೇಕಾಯಿತು ಎಂದು ವಿಷ್ಣು ತಿಳಿಸಿದಾಗ ನ್ಯಾಯಾಲಯ ಯುವಕನನ್ನು ಬಿಡುಗಡೆ ಮಾಡಿ ವಿಷ್ಣು ಅವರನ್ನು ಪ್ರಶಂಸಿಸುತ್ತದೆ.

ವಿವಾದ[ಬದಲಾಯಿಸಿ]

ಈ ಚಿತ್ರ ತಯಾರಾದ ಬಳಿಕ ಸೆನ್ಸಾರ್ ಮಂಡಳಿಯ ಮುಂದೆ ಪ್ರಮಾಣಪತ್ರ ಪಡೆಯಲು ತೆರಳಿದಾಗ ಸೆನ್ಸಾರ್ ಈ ಚಿತ್ರದಲ್ಲಿ ನಮ್ಮ ದೇಶದ ನ್ಯಾಯಾಂಗ ವ್ಯವಸ್ಥೆಯನ್ನು ಲೇವಡಿ ಮಾಡಲಾಗಿದೆ ಎನ್ನುವ ಕಾರಣ ನೀಡಿ ಪ್ರಮಾಣಪತ್ರ ನೀಡಲು ನಿರಾಕರಿಸಿತು. ಕೊನೆಗೆ 20ಕ್ಕೂ ಹೆಚ್ಚು ಕಟ್‍ಗಳೊಂದಿಗೆ U ಪ್ರಮಾಣಪತ್ರ ನೀಡಲಾಯಿತು.

ಪ್ರಸಾರ[ಬದಲಾಯಿಸಿ]

೧ನೇಯ ಜೂನ್ ೨೦೧೪ ರಂದು ಕಸ್ತೂರಿ ವಾಹಿನಿಯಲ್ಲಿ ಮೊದಲ ಬಾರಿಗೆ ಈ ಚಿತ್ರ ಪ್ರಸಾರವಾಯಿತು. ಅದೇ ಕೊನೆಯ ಪ್ರಸಾರವೂ ಆಗಿದ್ದು ವಿಪರ್ಯಾಸದ ಸಂಗತಿ !!!!