ಕೊಪ್ಪಳ

Wikipedia ಇಂದ

ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಕೊಪ್ಪಳ ಜಿಲ್ಲೆ 1-4-1998ರಂದು ಆರಂಭವಾದ ಕರ್ನಾಟಕ ರಾಜ್ಯದ ಹೊಸ ಜಿಲ್ಲೆಗಳಲ್ಲಿ ಒಂದಾಗಿದೆ. 7190 ಚ.ಕಿಮಿ ವಿಸ್ತೀರ್ಣ ಮತ್ತು 1877416 ಜನಸಂಖ್ಯೆ ( 2001ರ ಜನಗಣತಿ)ಕೊಪ್ಪಳ ಜಿಲ್ಲೆ ಹೊಂದಿರುತ್ತದೆ.ಗಂಗಾವತಿ, ಕೊಪ್ಪಳ,ಯಲಬುರ್ಗಾ ಮತ್ತು ಕುಷ್ಟಗಿ ಈ ಜಿಲ್ಲೆಯಲ್ಲಿರುವ ತಾಲೂಕುಗಳು. ಐತಿಹಾಸಿಕವಾಗಿ, ಸಾಂಸ್ಕ್ರತಿಕವಾಗಿ ಕೊಪ್ಪಳ ಪ್ರಸಿದ್ಧವಾಗಿದೆ.

ಪರಿವಿಡಿ

[ಬದಲಾಯಿಸಿ] ಉಲ್ಲೇಖ

ಕವಿರಾಜ ಮಾರ್ಗದಲ್ಲಿ "ವಿದಿತ ಮಹಾ ಕೋಪಣ ನಗರ" ವೆಂದು ಕೊಪ್ಪಳದ ಬಗ್ಗೆ ಉಲ್ಲೇಖವಿದೆ.


[ಬದಲಾಯಿಸಿ] ಪ್ರಾಮುಖ್ಯತೆ

ಅಶೋಕ ಚಕ್ರವರ್ತಿಯ ಶಿಲಾ ಶಾಸನಗಳು, ಶಿಲಾಯುಗದ ಜನರು ವಾಸಿಸುತ್ತಿದ್ದ ಗವಿಗಳು, ವಿಜಯನಗರ ಸಾಮ್ರಾಜ್ಯದ ಪ್ರಥಮ ರಾಜಧಾನಿ ಆನೆಗೊಂದಿ, ಫ್ರೆಂಚರ ಸಹಾಯ ಪಡೆದು ಟಿಪ್ಪು ಸುಲ್ತಾನ ನಿರ್ಮಿಸಿದ ಕೊಪ್ಪಳ ಕೋಟೆ, ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರುವ ಮರ್ದಾನ ದರ್ಗಾ, ಹಲವು ನೂರು ವರ್ಷಗಳಿಂದ ಕೋಮು ಸಾಮರಸ್ಯ, ಶಿಕ್ಷಣ ಮತ್ತು ಧರ್ಮ ಪ್ರಚಾರಕ್ಕಾಗಿ ಹೆಸರುವಾಸಿಯಾಗಿರುವ ಕೊಪ್ಪಳದ ಗವಿಮಠ, ಸುಪ್ರಸಿದ್ಧ ಕಿನ್ನಾಳ ಕಲೆ, ಇಟಗಿಯ ಮಹದೇವ ದೇವಸ್ಥಾನ ಹೀಗೆ ಹಲವಾರು ಕಾರಣಗಳಿಗಾಗಿ ಕೊಪ್ಪಳ ಜಿಲ್ಲೆ ಹೆಸರುವಾಸಿಯಾಗಿದೆ.

[ಬದಲಾಯಿಸಿ] ಇತಿಹಾಸ

ತುಂಗಭದ್ರಾ ನದಿಯ ತೀರದಲ್ಲಿರುವ ಆನೆಗೊಂದಿ ರಾಮಾಯಣ ಕಾಲದ ವಾಲಿ, ಸುಗ್ರೀವರಿದ್ದ ಕಿಷ್ಕಿಂಧೆಯ ಭಾಗವಾಗಿತ್ತೆಂದು ಹೇಳಲಾಗುತ್ತದೆ.ವಿಜಯನಗರದ ಸಾಮ್ರಾಜ್ಯದಲ್ಲಿ ಆನೆಗಳನ್ನು ಆನೆಗೊಂದಿಯಲ್ಲಿ ಇರಿಸಲಾಗುತ್ತಿದ್ದರಿಂದ ಈ ಸ್ಥಳಕ್ಕೆ ಆನೆಗೊಂದಿಯೆಂಬ ಹೆಸರು ಬಂದಿತೆಂದೂ ಹೇಳಲಾಗುತ್ತದೆ. 1565 ವರ್ಷದಲ್ಲಿ ರಕ್ಕಸ-ತಂಗಡಿ ಯುದ್ಧದಲ್ಲಿ ಸೋಲಾಗಿ ವಿಜಯನಗರ ಸಾಮ್ರಾಜ್ಯದ ಪತನದ ನಂತರ ಹಂಪಿ ಮತ್ತು ಆನೆಗೊಂದಿಯನ್ನು ವಿಜಯಿ ಮುಸ್ಲಿಂ ಯೋಧರು ಹಾಳುಗೆಡವಿದರು. 1776 ವರ್ಷದಲ್ಲಿ ಟಿಪ್ಪೂ ಸುಲ್ತಾನ್ ಸೇನೆ ಆನೆಗೊಂದಿಯನ್ನು ಹಾಳುಗೆಡವಿತು.

[ಬದಲಾಯಿಸಿ] ಪ್ರೇಕ್ಷಣೀಯ ಸ್ಥಳಗಳು

ಇಂದಿನ ಆನೆಗೊಂದಿ, ಗಂಗಾವತಿ ತಾಲ್ಲೂಕಿನಲ್ಲಿದೆ. ಆನೆಗೊಂದಿಯಲ್ಲಿರುವ ಪ್ರೇಕ್ಷಣೀಯ ಸ್ಥಳಗಳೆಂದರೆ ಗಗನ ಅರೆಮನೆ, ಆನೆಗೊಂದಿ ಕೋಟೆ,ಪಂಪ ಸರೋವರ, 64 ಕಂಭಗಳಿರುವ ಕೃಷ್ಣದೇವರಾಯನ ಸಮಾಧಿ,ನವ ಬೃಂದಾವನ,ಮರದ ಮೇಲೆ ಮಾಡಿರುವ ಸೂಕ್ಷ್ಮ ಕೆತ್ತೆನೆಯಂತೆ, ಕಲ್ಲಿನ ಮೇಲೆ ಕೆತ್ತನೆ ಮಾಡಿರುವ ಗರ್ಭಗುಡಿಯಿರುವ ಶ್ರೀ ಗಣಪತಿ ದೇವಸ್ಥಾನ, ಶ್ರೀ ಗವಿ ರಂಗನಾಥ ದೇವಸ್ಥಾನ, ಶಿಲೆಯಲ್ಲಿ ಕೆತ್ತಿರುವ ಸಂಪೂರ್ಣ ರಾಮಾಯಣ ಮೊದಲಾದ ಅಪೂರ್ವ ಶಿಲ್ಪಕಲಾ ಕೆತ್ತನೆಯ ಬೀಡಾಗಿರುವ ಹುಚ್ಚಪ್ಪಯ್ಯನ ಮಠ ಮತ್ತು ಚಿಂತಾಮಣಿ ಶಿವನ ದೇವಸ್ಥಾನ.

  • ಗಂಗಾವತಿ ತಾಲೂಕಿನಲ್ಲಿ, ಗಂಗಾವತಿಯಿಂದ 13 ಮೈಲು ದೂರದಲ್ಲಿರುವ ಕನಕಗಿರಿಯನ್ನು ಮೊದಲು ಸ್ವರ್ಣಗಿರಿಯಂದು ಕರೆಯಲಾಗುತ್ತಿತು." ಕಾಲಿದ್ದವರು ಹಂಪಿ ನೋಡಬೇಕು, ಕಣ್ಣಿದ್ದವರು ಕನಕಗಿರಿ ನೋಡಬೇಕು" ಎಂಬ ನಾಣ್ಣುಡಿ ಇಲ್ಲಿ ಪ್ರಚಲಿತದಲ್ಲಿದೆ. ಶ್ರೀ ಕನಕಾಚಲಪತಿ ದೇವಸ್ಥಾನವು ವಿಜಯನಗರ ಕಾಲದ ವಾಸ್ತುಶಿಲ್ಪದ ಒಂದು ಉತ್ತಮ ಉದಾಹರಣೆಯಾಗಿದೆ.ಕನಕಗಿರಿಯ ಹೊರವಲಯದಲ್ಲಿ ರಾಜಾ ವೆಂಕಟಪ್ಪ ನಾಯಕ ನಿರ್ಮಿಸಿರುವ ರಾಜನ ಸ್ನಾನದ ಕೊಳವಿದೆ.
  • ಕುಷ್ಟಗಿ ತಾಲೂಕಿನಲ್ಲಿ ತಾವರಗೇರಾದಿಂದ 5 ಮೈಲಿ ದೂರದಲ್ಲಿರುವ ಊರು ಪುರ. ಇಲ್ಲಿ ಸುಪ್ರಸಿದ್ಧ ಸೋಮೇಶ್ವರ ದೇವಸ್ಥಾನದಲ್ಲಿ ಕೋಟಿ ಲಿಂಗಗಳಿದ್ದು, ಶ್ರಾವಣ ಮಾಸದಲ್ಲಿ ಜಾತ್ರೆ ನೆಡೆಯುತ್ತದೆ.
  • ಕುಕನೂರು, ಇದು ಪ್ರಸಿದ್ಧ ಗ್ರಾನೈಟ್ ಉದ್ಯಮ ಕೇಂದ್ರವಾಗಿದೆ. ಸ್ವಾತಂತ್ರ್ಯಪೂರ್ವದಿಂದ ನೆಡೆಯುತ್ತಿರುವ ಪ್ರಸಿದ್ಧ ವಿದ್ಯಾರಣ್ಯ ಗುರುಕುಲ ಶಾಲೆ ಈ ಊರಿನಲ್ಲಿದೆ. ಕರ್ನಾಟಕದಲ್ಲಿ ನೆಡೆದ ಹೈದ್ರಾಬಾದ್ ಪ್ರಾಂತ್ಯ ವಿಮೋಚನಾ ಹೋರಾಟದಲ್ಲಿ ಕುಕನೂರು ಪೋಲಿಸ್ ಠಾಣೆಯ ಮೇಲೆ ಅನ್ನದಾನಯ್ಯ ಪುರಾಣಿಕ ನೇತ್ರತ್ವದಲ್ಲಿ ಮುಂಡರಗಿ ಶಿಬಿರದ ಯುವಕರು, ಯಶಸ್ಡಿ ದಾಳಿ ನೆಡೆಸಿ ನಿಜಾಂ ಪೋಲಿಸರು ಮತ್ತು ರಜಾಕಾರರನ್ನು ಸೋಲಿಸಿದ ಘಟನೆ, ಹೈದರಾಬಾದು ಪ್ರಾಂತ್ಯ ವಿಮೋಚನಾ ಹೋರಾಟಕ್ಕೆ ಹೊಸ ತಿರುವನ್ನು ನೀಡಿತು. ಕುಕನೂರಿನಲ್ಲಿರುವ ಮಹಾಮಾಯಾ ದೇವಸ್ಥಾನವು, ಈ ಭಾಗದ ಜನರ ನಂಬಿಕೆಯಂತೆ ಕೊಲ್ಹಾಪುರದ ಮಹಾಲಕ್ಷ್ಮಿಯ ವಾಸಸ್ಥಾನವಾಗಿದೆ.
  • ಭಾಗ್ಯನಗರ, ಇದು ಕೊಪ್ಪಳ ನಗರದ ಭಾಗವಾಗಿದ್ದು, ಸೀರೆ ಮತ್ತು ಉಡುಪುಗಳ ನೇಯ್ಗೆಗೆ ಪ್ರಸಿದ್ಧವಾಗಿದೆ. ರಾಜ್ಯದಲ್ಲಿ, ಮಾನವರ ತಲೆಕೂದಲನ್ನು ತಿರುಪತಿ ಮೊದಲಾದ ಕಡೆಯಿಂದ ಸಂಗ್ರಹಿಸಿ, ವ್ಯಾಪಾರ ಮಾಡುವ ಕೇಂದ್ರವೆಂದೂ ಇದು ಪ್ರಸಿದ್ಧವಾಗಿದೆ.

[ಬದಲಾಯಿಸಿ] ಪ್ರಮುಖ ವ್ಯಕ್ತಿಗಳು

ಕಲ್ಲಿನಾಥ ಶಾಸ್ರೀ ಪುರಾಣಿಕ ಚೆನ್ನ ಕವಿಗಳು ಮರಿಶಾಂತವೀರ ಸ್ವಾಮಿಗಳು,ಗವಿಮಠ ಸಿದ್ದಯ್ಯ ಪುರಾಣಿಕ ಅನ್ನದಾನಯ್ಯ ಪುರಾಣಿಕ


ಬಾಗಲಕೋಟೆ | ಬೆಂಗಳೂರು ನಗರ ಜಿಲ್ಲೆ | ಬೆಂಗಳೂರು ಗ್ರಾಮಾಂತರ | ಬೆಳಗಾವಿ | ಬಳ್ಳಾರಿ | ಬೀದರ್ | ಬಿಜಾಪುರ | ಚಾಮರಾಜನಗರ | ಚಿಕ್ಕಮಗಳೂರು | ಚಿಕ್ಕಬಳ್ಳಾಪುರ | ಚಿತ್ರದುರ್ಗ | ದಕ್ಷಿಣ ಕನ್ನಡ | ದಾವಣಗೆರೆ | ಧಾರವಾಡ | ಗದಗ್ | ಗುಲ್ಬರ್ಗ | ಹಾಸನ | ಹಾವೇರಿ | ಕೊಡಗು | ಕೋಲಾರ | ಕೊಪ್ಪಳ | ಮಂಡ್ಯ | ಮೈಸೂರು | ರಾಯಚೂರು | ರಾಮನಗರ | ಶಿವಮೊಗ್ಗ | ತುಮಕೂರು | ಉಡುಪಿ | ಉತ್ತರ ಕನ್ನಡ
ವೈಯಕ್ತಿಕ ಉಪಕರಣಗಳು